Friday, January 10, 2020

Kolaigaran (2019)....Tamil movie









ಕೊಲೈಗಾರನ್ (2019) [ತಮಿಳು Murder Mystery, Thriller]

ಅರ್ಜುನ್ ಸರ್ಜಾ, ವಿಜಯ್ ಆಂಟನಿ ನಟಿಸಿದ ಚಿತ್ರ.

ಫ್ಲಾಟ್ ಒಂದರಲ್ಲಿ ಅಮ್ಮ-ಮಗಳು ವಾಸವಿದ್ದಾರೆ. ಅದೇ ಎದುರಿನ ಫ್ಲಾಟ್'ನಲ್ಲಿ ಪ್ರಭಾಕರನ್ ವಾಸವಿದ್ದಾನೆ. ಆತ ಯಾರೊಂದಿಗೂ ಹೆಚ್ಚು ಮಾತನಾಡಲಾರ.


ಅದೊಂದು ದಿನ ಅದೇ ಊರಿನ ನಿರ್ಜನ ಪ್ರದೇಶವೊಂದರಲ್ಲಿ ಶವವೊಂದು ದೊರಕುತ್ತದೆ. ನೋಡಲಾಗಿ ಅದರ ಮುಖವನ್ನು ಗುರುತು ಹಿಡಿಯಲಾಗದಂತೆ ಜಜ್ಜಿ ನಂತರ ಸುಟ್ಟುಹಾಕಲಾಗಿರುತ್ತದೆ.

ಆ ಕೇಸನ್ನು ಕೈಗೆತ್ತಿಕೊಳ್ಳುವ ಡಿಸಿಪಿ ಕಾರ್ತಿಕೇಯನ್ ಬಹುಬೇಗನೆ ಆ ಶವ ಯಾರದೆಂದು ಕಂಡುಹಿಡಿಯುತ್ತಾರೆ. ಜೊತೆಗೆ ಕೊಲೆಯ ಹಿನ್ನೆಲೆಯನ್ನು ಕಂಡುಹಿಡಿಯುತ್ತಾರೆ. ಆದರೆ ಕೊಲೆ ಹೇಗಾಗಿರಬಹುದು ಅನ್ನುವ ಚಿತ್ರಣ ಸರಿಯಾಗಿ ದೊರಕುವುದಿಲ್ಲ. ಅದೊಂದು ದಿನ ಕೊಲೆಗಾರನೇ ಬಂದು ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾನೆ.

ಇದೇ ನಮಗೆ ಕ್ಲೈಮ್ಯಾಕ್ಸ್ ಅನ್ನಿಸುತ್ತದೆ. ಆದರೆ ಕಥೆ ಅಲ್ಲಿಗೆ ಮುಗಿಯುವುದಿಲ್ಲ. ಕೊಲೆ ಹೇಗಾಗಿರಬಹುದು, ನಿಜವಾಗಿ ಯಾರು ಮಾಡಿದರು, ಏಕೆ ಮಾಡಿದರು ಅನ್ನುವ ವಿಷಯವೇ ಪ್ರೇಕ್ಷಕನನ್ನು ಕೊನೆಯವರೆಗೂ ಹಿಡಿದು ಕೂರಿಸುತ್ತದೆ. ಸಿನಿಮಾ ಮುಗಿದ ಮೇಲಷ್ಟೇ ನಾವು ಒಂದನ್ನೊಂದು ಜೋಡಿಸಿ ಅರ್ಥೈಸಿಕೊಳ್ಳಲು ಸಾಧ್ಯವಾಗುವುದು. ಕೊಲೆಗಾರ ಯಾರೆಂದು ಹೇಳಿ ಕೊಲೆಯ ರೀತಿಯನ್ನು ಕಡೆಯವರೆಗೂ ಹೇಳದಿರುವುದು ಈ ಸಿನಿಮಾದಲ್ಲಿ ಹೊಸತು.

ಡಿಟೆಕ್ಟಿವ್ ಥ್ರಿಲ್ಲರ್ ಸಿನಿಮಾಗಳನ್ನು ನೋಡುವವರಿಗೆ ಈ ಸಿನಿಮಾ ಖುಶಿ ಕೊಡಬಲ್ಲುದು. ಕಥೆಯ ಸಂಕೀರ್ಣತೆ, ರಹಸ್ಯವನ್ನು ಕೊನೆಯವರೆಗೂ ಬಿಟ್ಟುಕೊಡದ ರೀತಿ "ದುರುವಂಗಳ್ ಪದಿನಾರು" ಸಿನಿಮಾವನ್ನು ನೆನಪಿಸುತ್ತದೆ.

ಜಪಾನೀ ಚಿತ್ರ "ಸಸ್ಪೆಕ್ಟ್ ಎಕ್ಸ್"ವನ್ನು ಆಧರಿಸಿಯೇ ಈ ಚಿತ್ರವನ್ನು ರಿಮೇಕ್ ಮಾಡಲಾಗಿದೆ. ಆದರೆ ಕಥೆಯನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ.

" ಸಸ್ಪೆಕ್ಟ್ ಎಕ್ಸ್" ನೋಡಿರದಿದ್ದರೆ ಈ ಸಿನಿಮಾವನ್ನು ಧಾರಾಳವಾಗಿ ನೋಡಿ,
ಒಮ್ಮೆ ನೋಡಲು ಅಡ್ಡಿಯಿಲ್ಲ.

-Santhosh Kumar LM
10-Jan-2020

Tuesday, January 7, 2020

The Plan...Kannada Movie





The Plan (Kannada Thriller)-2015

ಕನ್ನಡದಲ್ಲಿ ಥ್ರಿಲ್ಲರ್ ಸಿನಿಮಾಗಳು ಬರುವುದೇ ಕಡಿಮೆಯೇನೋ ಅನ್ನಿಸಿಬಿಡುತ್ತದೆ. ಅಥವ ಇಲ್ಲಿಯ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲವೇ ಅಂತ ಪ್ರಶ್ನೆ ಕೇಳಿಕೊಂಡರೆ ರಂಗಿತರಂಗದಂತಹ ಅನೇಕ ಸಿನಿಮಾಗಳು ಕಣ್ಣೆದುರಿಗೆ ಬಂದು "ಹಾಗೇನಿಲ್ಲ" ಅಂತ ಉತ್ತರ ಕೊಡುತ್ತವೆ.

ಮೊನ್ನೆ ಸಹೋದ್ಯೋಗಿಯೊಬ್ಬರು ಈ ಸಿನಿಮಾವನ್ನು ನೋಡಿ ಎಂದು ಹೇಳಿದರು. ಹುಡುಕಿದರೆ Netflix ನಲ್ಲೇ ಇದೆ. ಏನೋ ಸುಮಾರಾಗಿರಬೇಕು ಅಂತ ನೋಡಲು ಕುಳಿತವನಿಗೆ ಸಿಕ್ಕಿದ್ದಂತೂ ಅಚ್ಚರಿಯೇ!

ಇಡೀ ಸಿನಿಮಾ ಕುತೂಹಲದಿಂದ ಒಂದು ಕ್ಷಣವೂ ಕಣ್ಮಿಟುಕಿಸದಂತೆ ನೋಡಿಸಿಕೊಳ್ಳುತ್ತೆ. ಒಂದೇ ಹಾಡು. ಚಿತ್ರಕಥೆಯ ಶೈಲಿಯೂ ಅಷ್ಟೇ, ಬೇರಾವುದೋ ಭಾಷೆಯ ಸಿನಿಮಾದಲ್ಲೂ ನೋಡಿದ್ದೇವೆ ಅನ್ನಿಸಿದರೂ ಕನ್ನಡಕ್ಕಿನ್ನೂ ಹೊಸತು.

ಗಂಭೀರ ಕೊಲೆಯ ಆರೋಪದಲ್ಲಿ ಹದಿನೈದು ದಿನಗಳ ಮಟ್ಟಿಗೆ ಜೈಲೊಂದಕ್ಕೆ ಬರುವ ವಿಚಾರಣಾಧೀನ ಖೈದಿಗಳು ತಾವು ಪ್ರಕರಣದಿಂದ ತಪ್ಪಿಸಿಕೊಳ್ಳಲು ಯಾವುದೇ ದಾರಿಯಿಲ್ಲ ಎಂಬ ಸತ್ಯ ಅರಿವಾದಾಗ ಆ ಜೈಲಿನಿಂದ ತಪ್ಪಿಸಿಕೊಳ್ಳುವುದೊಂದೇ ದಾರಿ ಎಂಬ ನಿರ್ಧಾರಕ್ಕೆ ಬರುತ್ತಾರೆ. ಅವರಿಗೆ ಪರೋಕ್ಷವಾಗಿ ಸಹಾಯ ಮಾಡುವಾತ ಅದೇ ದಿನ ಜೈಲರ್ ಆಗಿ ಬರುವ ಹೊಸ ಅಧಿಕಾರಿ (ಅನಂತ್ ನಾಗ್).

ಎಲ್ಲೂ ಬೋರೆನಿಸುವುದಿಲ್ಲ. ಮೂರು ಜನ ಹುಡುಗರೂ ಹೊಸಬರೇ. ಆದರೆ ಇಲ್ಲಿ ಅನಂತ್ ನಾಗ್, ರಮೇಶ್ ಭಟ್, ಪ್ರಮೋದ್ ಶೆಟ್ಟಿ, ಬಿಟ್ಟರೆ ಎಲ್ಲರೂ ಹೊಸಬರೇ. ಆದರೆ ಕಥೆ-ಚಿತ್ರಕಥೆಯೇ ಇಲ್ಲಿ ನಾಯಕ. ಈ ಸಿನಿಮಾ ಸೂಪರ್ ಹಿಟ್ ಆಗಬೇಕಿತ್ತು ಅನ್ನಿಸದೇ ಇರಲಾರದು.

ಇಂತಹ ಸಿನಿಮಾಗಳು ಕನ್ನಡದಲ್ಲಿ ಬರುತ್ತಿರಬೇಕು. ಇಂತಹ ಸಿನಿಮಾ ಬಂದರೆ, ಇದೇ ಬಗೆಯ ಮನರಂಜನೆ ಸಿಗುತ್ತದೆ ಎಂಬ ಖಾತ್ರಿ ಸಿಕ್ಕರೆ ಅದೆಷ್ಟೇ ಹೊಸಬರ ಚಿತ್ರವಾದರೂ ಥಿಯೇಟರಿಗೆ ಹೋಗುವುದಕ್ಕೆ ಹಿಂಜರಿಯಲಾರೆ.

ನೋಡಿರದಿದ್ದರೆ ಒಮ್ಮೆ ನೋಡಿ. (Netflix ನಲ್ಲಿದೆ)

-Santhosh Kumar LM
06-Jan-2020

Friday, January 3, 2020

One Cut Of The Dead (2017)...Japanese movie








One Cut Of The Dead (2017)

2017ರಲ್ಲಿ ಬಿಡುಗಡೆಯಾದ ಜಪಾನೀ ಭಾಷೆಯ ಚಿತ್ರ. ಬಹುಶಃ ಈ ಸಿನಿಮಾ ಮಾಡುವಾಗ ಸ್ವತಃ ಅದರ ನಿರ್ಮಾತೃಗಳಿಗೂ ಅದು ಇಷ್ಟು ಜನಪ್ರಿಯವಾಗುತ್ತದೆ ಅಂತ ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲವೆಂದು ಕಾಣುತ್ತದೆ. ಏಕೆಂದರೆ ಈ ಸಿನಿಮಾ ಬಿಡುಗಡೆ ಮಾಡಿದ್ದೇ ಒಂದು ಥಿಯೇಟರಿನಲ್ಲಿ. ಅದೂ ಆರು ದಿನಗಳ ಪ್ರದರ್ಶನದ ಒಪ್ಪಂದದ ಮೇರೆಗೆ!

ನೋಡಿ. ಹೊಸ ಆಲೋಚನೆ, ಕೆಲಸದ ಗುಣಮಟ್ಟವಷ್ಟೇ ಅನೇಕ ಸಲ ಮುಖ್ಯವಾಗುತ್ತದೆ. ಅದಕ್ಕೆ ಹಾಕಿದ ಹಣವಲ್ಲ. ಇಪ್ಪತ್ತು ಲಕ್ಷ ರೂಪಾಯಿಗಿಂತಲೂ ಕಡಿಮೆ ಬಜೆಟ್ಟಿನ ಚಿತ್ರವೊಂದು ಜಪಾನೊಂದರಲ್ಲೇ ಇನ್ನೂರು ಕೋಟಿ ದುಡ್ಡು ಮಾಡಿತು. ಅದರ ಮೌಲ್ಯ ತಿಳಿದ ಪ್ರಸಿದ್ಧ ಹಂಚಿಕೆದಾರರೊಬ್ಬರು ವಿದೇಶಗಳಲ್ಲೂ ಬಿಡುಗಡೆ ಮಾಡಿದ್ದರಿಂದ ಅಲ್ಲೂ ಇನ್ನೂರು ಕೋಟಿಗಿಂತಲೂ ಹೆಚ್ಚು ಸಂಪಾದಿಸಿತು.

ಇಪ್ಪತ್ತು ಲಕ್ಷವೆಲ್ಲಿ? ನಾಲ್ಕುನೂರು ಕೋಟಿಯೆಲ್ಲಿ?! ಇದಕ್ಕೆ ಕಾರಣ ಸಿನಿಮಾದ ಹೊಸತು ಎನಿಸುವ ಕಥೆಯೊಂದನ್ನು ಕೊಟ್ಟಿದ್ದು ಅಷ್ಟೇ!!

ಇದೊಂದು Zombie Horror ಚಿತ್ರ...."ಅಂತ ಅಂದುಕೊಳ್ಳಿ" ಅಂತಲೇ ಇಲ್ಲಿ ಹೇಳುತ್ತೇನೆ. ಏಕೆಂದರೆ ಸಿನಿಮಾದೊಳಗೆ ನಾವೇ ನಂಬಲಾಗದ ಅನೇಕ ಆಶ್ಚರ್ಯಕರ ಸಂಗತಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಎಲ್ಲವನ್ನು ನೋಡುವ ಮುನ್ನವೇ ಹೇಳಿದರೆ ಇಲ್ಲಿ ನಿಮ್ಮ ಕುತೂಹಲವನ್ನು ಕೊಂದಂತಾಗಬಹುದು.

ಒಂದು Zombie ಚಿತ್ರವನ್ನು ಚಿತ್ರೀಕರಿಸಲು ಹಳತಾದ ಬಂಗಲೆಯೊಳಕ್ಕೆ ತಂಡವೊಂದು ಬರುತ್ತದೆ. ಆ ಬಂಗಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯಾವುದೋ ಪ್ರಯೋಗಗಳಿಗೆ ಬಳಸಿಕೊಳ್ಳಲಾಗಿತ್ತು ಅನ್ನುವುದು ಗೊತ್ತಾಗುತ್ತದೆ. ಚಿತ್ರೀಕರಣ ಶುರುವಾಗುತ್ತದೆ. Zombie ಪಾತ್ರಧಾರಿ ಎದುರಿಗೆ ಬಂದಾಗ ಭಯಪಡುವ ದೃಶ್ಯ ನಿರ್ದೇಶಕನಿಗೆ ತೃಪ್ತಿ ಕೊಡುವುದಿಲ್ಲ. ಕೋಪಿಸಿಕೊಂಡವನೇ ಎಲ್ಲರ ಮೇಲೆ ಕೂಗಾಡಿ ಹೊರಗೆ ಹೋಗುತ್ತಾನೆ. ನಟಿ ಬೇಸರದಲ್ಲಿದ್ದರೆ ಎಲ್ಲರೂ ನಿರ್ದೇಶಕ ಮರಳಿ ಬರಲಿ ಎಂದು ಕಾಯುತ್ತಿರುತ್ತಾರೆ. ಇದ್ದಕ್ಕಿದ್ದ ಹಾಗೆ ರಕ್ತಸಿಕ್ತವಾದ ನಿಜವಾದ Zombieಯೇ ಅಲ್ಲಿ ಪ್ರತ್ಯಕ್ಷವಾಗುತ್ತದೆ. ಅಲ್ಲಿ ಕುಳಿತಿದ್ದವರೆಲ್ಲ ಓಡಲು ಶುರುವಿಟ್ಟುಕೊಂಡರೆ ಅದು ಹಿಂಬಾಲಿಸುತ್ತದೆ. ಅದನ್ನು ಎದುರಿಸುವಾಗ ಮತ್ತೊಂದು....!! ಎದೆ ಢವಢವ ಶುರುವಿಟ್ಟುಕೊಂಡರೆ......

ಹೀಗೆ ಆರಂಭವಾಗುವ ಸಿನಿಮಾ ಎಲ್ಲೆಲ್ಲೋ ಸಾಗುತ್ತದೆ. ಇದ್ದಕ್ಕಿದ್ದಂತೆ ಮಧ್ಯದಲ್ಲಿಯೇ ಸಿನಿಮಾ ಮುಗಿದ ಫೀಲ್.... ಎಂಡ್ ಕ್ರೆಡಿಟ್ಸ್ ಶುರುವಾಗುತ್ತದೆ.

ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಅಲ್ಲೇ ಇನ್ನೊಂದು ಕಥೆ! ಎಲ್ಲವೂ ಅಯೋಮಯ. ಪ್ರೇಕ್ಷಕ ತಲೆಕೆಡಿಸಿಕೊಳ್ಳುತ್ತಾನೆ ಅನ್ನುವಷ್ಟರಲ್ಲಿ ನಿರಾಳ!

ಅದರ ಬಗ್ಗೆ ಹೆಚ್ಚಿಗೆ ಇಲ್ಲಿ ಹೇಳಬಾರದು. ಸಿನಿಮಾ ನೋಡಿ.

Zombie ಸಿನಿಮಾಗಳನ್ನು ನೋಡುವವರಿಗೆ ಎಲ್ಲ ಸಿನಿಮಾಗಳಂತೆ ಇದು ಸಾಮಾನ್ಯ ಅನ್ನಿಸಿದರೂ ಒಂದು ಘಟ್ಟ ಮುಗಿದ ನಂತರ ಬೇರೆಯದೆ ಅನ್ನಿಸಿಕೊಂಡು ಮನರಂಜನೆ ನೀಡುವುದು ಖಂಡಿತ. ನೋಡಿರದಿದ್ದರೆ ನೋಡಿ. ಮೊದಲ ನಲವತ್ತೈದು ನಿಮಿಷಗಳನ್ನು ಒಂದೇ ಶಾಟ್'ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ! ಸಿನಿಮಾ ಮುಗಿದ ಮೇಲೆ ಅದರ ಚಿತ್ರೀಕರಣದ ಬಗ್ಗೆಯೂ ಖಂಡಿತ ತಲೆಕೆಡಿಸಿಕೊಳ್ಳುತ್ತೀರಿ!


ಭಾಷೆ ಯಾವುದಾದರೂ ಸರಿ ಅನ್ನುವ, ಹೊಸತನ್ನು ಬಯಸುವ ಸಿನಿಪ್ರಿಯರು ಈ ಸಿನಿಮಾ ನೋಡಬಹುದು. ಸಿನಿರಂಗದಲ್ಲೇ ಕೆಲಸ ಮಾಡುವವರು ಈ ಸಿನಿಮಾ ನೋಡಿದರೆ ಹೊಸಪ್ರಯತ್ನಗಳ ಬಗ್ಗೆ ನಂಬಿಕೆಯನ್ನು ಜೀವಂತವಾಗಿರಿಸಿಕೊಳ್ಳಬಹುದು.

-Santhosh Kumar LM

03-Jan-2020

ಅವನೇ ಶ್ರೀಮನ್ನಾರಾಯಣ (2019)







ಅವನೇ ಶ್ರೀಮನ್ನಾರಾಯಣ (2019)

ಈ ಸಿನಿಮಾವನ್ನು ನೀವಿನ್ನೂ ನೋಡಿರದಿದ್ದರೆ ಈ ಬರಹವನ್ನು ಮುಂದೆ ಓದಬೇಡಿ. ಸಿನಿಮಾ ನೋಡಿ ಬನ್ನಿ. ಖಂಡಿತವಾಗಿಯೂ ಇದು ಒಮ್ಮೆ ನೋಡಲೇಬಹುದಾದ ಸಿನಿಮಾ.

ಸಿನಿಮಾ ನೀವೀಗಾಗಲೇ ನೋಡಿದ್ದು ನಿಮಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರೆ ನಾನು ಬರೆದಿರುವ ‌ಕೆಲವು ವಿಷಯಗಳು ನಿಮಗೆ ಅಸಮಾಧಾನ ತರಬಹುದು. ಕ್ಷಮೆಯಿರಲಿ.

The proof of the pudding is in the eating ಅನ್ನುವ ಮಾತೊಂದಿದೆ. ಅದರರ್ಥ ಯಾವುದೇ ವಿಚಾರ ಅರ್ಥವಾಗಬೇಕೆಂದರೆ ಅದನ್ನು ಸ್ವತಃ ಅನುಭವಿಸಿದಾಗಲಷ್ಟೇ ಅಂತ. ಹೀಗಾಗಿ ಗೆಳೆಯರು ಬಗೆಬಗೆಯ ಅಭಿಪ್ರಾಯ ಹೇಳಿದರೂ "ಅವನೇ ಶ್ರೀಮನ್ನಾರಾಯಣ" ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡುವ ನಿರ್ಧಾರ ಮಾಡಿದೆ. ಏಕೆಂದರೆ ಈ ಸಿನಿಮಾವನ್ನು ಈಗ ನೋಡದೇ ನಂತರ ಅಮೇಜಾನ್ ಪ್ರೈಮ್‌ನಲ್ಲೋ ಅಥವಾ ನೆಟ್‌ಫ್ಲಿಕ್ಸ್‌ನಲ್ಲೋ ನೋಡುವ ಸಿನಿಮಾವಲ್ಲ. ಕೋಟಿ ಕೋಟಿ ಸುರಿದು, ಹಗಲು ರಾತ್ರಿಯೆನ್ನದೇ ವರ್ಷಾನುಗಟ್ಟಲೆ ಸಮಯ-ಬುದ್ಧಿ ವ್ಯಯಿಸಿದ ಸಿನಿಮಾವನ್ನು ನೋಡುವ ರೀತಿಯೂ ಅದಲ್ಲ. ಅದಿರಲಿ. ನನಗನ್ನಿಸಿದಂತೆ ಇದು great ಸಿನಿಮಾ ಅಲ್ಲ. ಹಾಗಂದ ಕ್ಷಣ ಇದು ಕೆಟ್ಟ ಸಿನಿಮಾ ಅಂತ ಧ್ವನಿಸುವ ಅಪಾಯವಿದೆ. ಹಾಗಾಗಿ ಕೊಂಚ ವಿವರವಾಗಿ ಬರೆಯುವ ಪ್ರಯತ್ನ ಮಾಡಿದ್ದೇನೆ‌. ಕೆಲ ವಿಷಯಗಳಲ್ಲಿ ಹೆಚ್ಚು ಆಸ್ಥೆ ವಹಿಸಿದ್ದರೆ KGFರೀತಿಯೇ ಇನ್ನೂ ಹೆಚ್ಚು ಸದ್ದು ಮಾಡುವ ಎಲ್ಲ ಸಾಧ್ಯತೆಯಿತ್ತು.

ನಿಂಬೆಹಣ್ಣನ್ನು ಡೆಲ್ಲಿಯಿಂದ ತರಿಸಿದೆ. ಕಡ್ಲೆಕಾಯಿ ಉತ್ತರಪ್ರದೇಶದ್ದು. ಎಣ್ಣೆ ಮಧ್ಯಪ್ರದೇಶದ್ದು. ಉಪ್ಪು ಕನ್ಯಾಕುಮಾರಿದು. ಕಡ್ಲೆಬೇಳೆ ತಿರುವನಂತಪುರದ್ದು. ಹಸಿಮೆಣಸಿನಕಾಯಿ ಕಾಶ್ಮೀರದ್ದು. ಸಾಸಿವೆ ಬಂಗಾಳದ್ದು.......ಇತ್ಯಾದಿ

ಹೀಗೆ ಯಾವ ಯಾವ ಪದಾರ್ಥಗಳನ್ನು ಎಲ್ಲೆಲ್ಲಿಂದ ಎಷ್ಟೆಷ್ಟು ಕಷ್ಟಪಟ್ಟು ತರಿಸಿದೆವು ಅಂತ ಯಾರಾದರೂ ಹೇಳುತ್ತಾರೆ ಅಂದುಕೊಳ್ಳೋಣ. ಅವೆಲ್ಲವೂ ಮುಖ್ಯವಾಗುತ್ತವಾ? ಇಲ್ಲ. ಚಿತ್ರಾನ್ನ ಮಾಡಿ ತಟ್ಟೆಯಲ್ಲಿ ಕೊಟ್ಟಾಗ ಅದರ ಮೊದಲ ತುತ್ತನ್ನು ತೆಗೆದು ಬಾಯಿಗಿಟ್ಟು ಆಸ್ವಾದಿಸುತ್ತೇವಲ್ಲ. ಆ ಕ್ಷಣದಲ್ಲಿ ಅದನ್ನು ತಿನ್ನುತ್ತಿರುವವನಿಗೆ ಅದರ ರುಚಿ ಹೇಗಿತ್ತು ಅನ್ನುವುದಷ್ಟೇ ಅಲ್ಲಿ ಮುಖ್ಯವಾಗುತ್ತದೆ.

ಈ ಸಿನಿಮಾದಲ್ಲಿ ಆಗಿದ್ದು ಅದೇ‌. ಸಿನಿಮಾ ಮುಗಿದು ಹೊರಬರುವಾಗ ಏನೋ ಮಿಸ್ ಆಯ್ತಲ್ಲ ಅಂತ ಅನ್ನಿಸುವುದು ಸಹಜ. ಆ ನಿಟ್ಟಿನಲ್ಲಿ ಅದಕ್ಕೆ ಕಾರಣಗಳೇನಿರಬಹುದು ಅನ್ನುವುದನ್ನು ಯೋಚಿಸಲು ಪ್ರಯತ್ನಪಟ್ಟಿದ್ದೇನೆ ಅಷ್ಟೇ. ಇದು "ಅವನೇ ಶ್ರೀಮನ್ನಾರಾಯಣ" ಸಿನಿಮಾದ ವಿಮರ್ಶೆಯಲ್ಲ. ಇದು ನನ್ನ ಅಭಿಪ್ರಾಯ ಅಷ್ಟೇ. ಹತ್ತನೇ ತರಗತಿಯಲ್ಲಿ ಫೇಲಾದವನನ್ನು, ಡಿಗ್ರಿಯಲ್ಲಿ ಫೇಲಾದವನನ್ನು, ಎಂಬಿಎ ಮಾಡಲು ಪರೀಕ್ಷೆ ಬರೆದು ಕಮ್ಮಿ ಮಾರ್ಕ್ಸ್ ತೆಗೆದುಕೊಂಡವರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರೂ ಒಂದೇ ಎಂದು ಹೇಳಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ "ಅವನೇ,,,ಶ್ರೀ" ಸಿನಿಮಾವನ್ನು ಕೂಡ ಉಳಿದ ಸಿನಿಮಾಗಳಿಗೆ ಹೇಳುವಂತೆ ಒಂದೇ ವಾಕ್ಯದಲ್ಲಿ ಹೇಗಿದೆ ಎಂದು ಹೇಳಲು ಅಸಾಧ್ಯ. ಮೊನ್ನೆ ಈ ಸಿನಿಮಾದ ಪ್ರೀಮಿಯರ್ ಶೋ ನೋಡಿ ಬಂದ ಅನೇಕರಿಗೆ ಹೇಗಿದೆ ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರವೂ ಹೀಗೆಯೇ ಇತ್ತು. ಆಗಲೇ ಹೀಗಿರಬಹುದಾ ಅನಿಸಿತ್ತು.

ಕಾರಣ ನಮಗೆಲ್ಲರಿಗೂ ಗೊತ್ತಿದೆ. "ಅವನೇ ಶ್ರೀ.." ಎರಡು ತಿಂಗಳಲ್ಲಿ ಸ್ಕ್ರಿಪ್ಟ್ ಮುಗಿಸಿ, ನಲವತ್ತು ದಿನಗಳಲ್ಲಿ ಚಿತ್ರೀಕರಣ ಮಾಡಿ, ಒಂದು ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ, ತರಾತುರಿಯಲ್ಲಿ ಬಂದ ಸಿನಿಮಾವಲ್ಲ. ಸಿನಿಮಾ ತಂಡದ ಮೂರುವರ್ಷಗಳ ಕಠಿಣ ಶ್ರಮ ನಮಗೆ ತೆರೆಯಲ್ಲಿ ಎದ್ದು ಕಾಣುತ್ತದೆ. ಅಮರಾವತಿಯೆಂಬ ಕಾಲ್ಪನಿಕ ನಗರ, ಅಲ್ಲಿ ನಡೆಯುವ ಕಥೆ, ಪಾತ್ರಧಾರಿಗಳ ನಟನೆ, ಉಡುಗೆ ಎಲ್ಲಕ್ಕೂ ಹಾಕಿದ ಶ್ರಮ ನಿಜಕ್ಕೂ ಎದ್ದು ಕಾಣುತ್ತದೆ. Presentation ವಿಚಾರಕ್ಕೆ ಬಂದರೆ ಈ ಸಿನಿಮಾ ಖಂಡಿತವಾಗಿಯೂ ಎತ್ತರದಲ್ಲಿ ನಿಲ್ಲುತ್ತದೆ.

ಹಾಗಂತ ಸಿನಿಮಾ ಒಂದು ಪ್ರಾಡಕ್ಟ್ ಆಗಿ ಇಷ್ಟವಾಗಲೇಬೇಕೇ? ಇಲ್ಲದೆಯೂ ಇರಬಹುದು. ಅದಕ್ಕೆ ಕಾರಣವೂ ಇರುತ್ತದೆ. ನಮಗೆ ಬೆಸ್ಟ್ ಅನ್ನಿಸುವ ಕಥೆ ಇನ್ನೊಬ್ಬನಿಗೆ ಸಾಧಾರಣ ಅನ್ನಿಸಬಹುದು. ಮೇಕಿಂಗ್ ಎಷ್ಟು ಚಂದವೇ ಇದ್ದರೂ ಕಥೆಯೂ ಅದಕ್ಕೆ ಜೀವಾಳವೇ. ಅದನ್ನು ಎಲ್ಲಿಯೂ ಅಲ್ಲಗೆಳೆಯುವಂತಿಲ್ಲ. ವೈಯಕ್ತಿಕವಾಗಿ ನನಗೆ ಕೊರತೆ ಅನ್ನಿಸಿದ್ದು ಕಥೆಯೇ. "ಅವನೇ ಶ್ರೀ.." ಸಿದ್ಧ ಮಾಡಿಕೊಂಡ ದೊಡ್ಡ ವೇದಿಕೆಗೆ ಅಯ್ದುಕೊಂಡ ಕಥೆ ತಕ್ಕುದಾಗಲಿಲ್ಲ. ಪರಿಪೂರ್ಣ ಅನಿಸಿಕೊಳ್ಳಲು ಮತ್ತು ಸಿನಿಮೀಯ ಅನುಭವ ನೀಡಲು ಆಯ್ದುಕೊಂಡ ಮತ್ತು ನಿರ್ಲಕ್ಷಿಸಿದ ವಿಷಯಗಳೇ ಕಥೆಯ ಪ್ರಮುಖ ಹಂತಗಳಲ್ಲಿ ಪ್ರೇಕ್ಷಕನಿಗೆ ರೋಮಾಂಚಕ ಅನುಭವಗಳನ್ನು ನೀಡಲು ವಿಫಲವಾದವು. ಯಾವುದೇ Genreನ ಕಮರ್ಷಿಯಲ್ ಸಿನಿಮಾಗಳಾಗಲಿ, ಅಲ್ಲಲ್ಲಿ ಆ ಬಗೆಯ ಅಂಶಗಳು ಇರಲೇಬೇಕು. ಅದು ನಾಯಕನ ಎಂಟ್ರಿ ದೃಶ್ಯದ ಮುನ್ನ ನಾವು ಪ್ರೇಕ್ಷಕನಿಗೆ ಕಟ್ಟಿಕೊಡುವ ಹಿನ್ನೆಲೆಯಿರಬಹುದು. ಅಥವಾ ನಿಧಿ ಸಿಕ್ಕಾಗಿನ ದೃಶ್ಯವಿರಬಹುದು, ಅಥವ ಅನಿರೀಕ್ಷಿತ ಸಂದರ್ಭದಲ್ಲಿ ದಿಢೀರ್ ಸಂಭವಿಸುವ ಘಟನೆಯಾಗಬಹುದು. "ಉಳಿದವರು ಕಂಡಂತೆ" ಸಿನಿಮಾದ (ರಿಶಬ್ ಶೆಟ್ಟಿ-ತಾರ) ಅಮ್ಮ-ಮಗ ಅನೇಕ ವರ್ಷಗಳ ನಂತರ ಮುಖಾಮುಖಿಯಾಗುವ ದೃಶ್ಯ, KGFನ ಮಣ್ಣಲ್ಲಿ ಬಿದ್ದ ಬ್ರೆಡ್‌ಅನ್ನು ನಾಯಕ ಕಾರು ನಿಲ್ಲಿಸಿ ಆ ತಾಯಿಗೆ ಎತ್ತಿಕೊಡುವ ಈ ಬಗೆಯ ದೃಶ್ಯಗಳನ್ನು ಮರೆಯಲು ಸಾಧ್ಯವೇ?

ಸಿನಿಮಾದ ಕಾಲಾವಧಿ ಮೂರು ಗಂಟೆಗೂ ಹೆಚ್ಚು, ಇದು ಖಂಡಿತವಾಗಿಯೂ ಜಾಸ್ತಿಯೇ. ಆದರೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ ಅನ್ನುವಷ್ಟರ ಮಟ್ಟಿಗೆ ಸಿನಿಮಾದ ನಿರೂಪಣೆಯ ಬಗ್ಗೆ ನನ್ನ ಮೆಚ್ಚುಗೆಯಿದೆ. ರಕ್ಷಿತ್ ಶೆಟ್ಟಿಯವರಿಗೆ ತನ್ನ Strength & Weakness ಬಗ್ಗೆ ಅರಿವಿದೆ. ಮತ್ತು ತನ್ನ ಯಾವ ಮ್ಯಾನರಿಸಂ ಪ್ರೇಕ್ಷಕನಿಗೆ ಇಷ್ಟವಾಗಬಹುದೆಂದು ಗೊತ್ತಿದೆ. ಹಾಗಾಗಿ ಅದನ್ನೇ ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ. ಅದು ಸರಿಯಾಗಿ ಕೆಲಸಮಾಡಿದೆ ಕೂಡಾ. "Hands-up" ಹಾಡು ಬಿಟ್ಟರೆ ಉಳಿದವು ಮನಸ್ಸಿಗೆ ನಾಟಲಿಲ್ಲ. ಆದರೆ ಸಿನಿಮಾ ಪೂರ್ತಿ ಅಮರಾವತಿಯ ಕಾಲ್ಪನಿಕ ಲೋಕದಲ್ಲಿ ತೇಲಿಸಿದ್ದು ಮಾತ್ರ ಚಿತ್ರದುದ್ದಕ್ಕೂ ತೇಲಿ ಬರುವ ಹಿನ್ನೆಲೆ ಸಂಗೀತ. ಪ್ರತೀ ಚಿತ್ರದಲ್ಲಿ ಉತ್ತಮ್ಮ ಹಿನ್ನೆಲೆ ಸಂಗೀತವನ್ನು ಆಸ್ವಾದಿಸುತ್ತ ಇದೀಗ ನಮ್ಮ expectation ಕೂಡ ಹಾಗೆಯೇ ಬೆಳೆಯುತ್ತಿದೆ ಅನ್ನುವುದಕ್ಕೆ ಈಗ ನಮಗೆ ಸಿಗುತ್ತಿರುವ ಹಿನ್ನೆಲೆ ಸಂಗೀತದ ಗುಣಮಟ್ಟವೇ ಸಾಕ್ಷಿ.

ಅಮರಾವತಿಯ ಕೋಟೆಯನ್ನು, ಕೋಟೆಯೊಳಗಿನ ನಾಯಕನನ್ನು, ಹೊಡೆದಾಟದ ದೃಶ್ಯಗಳನ್ನು ಅದ್ಭುತವಾಗಿ ತೋರಿಸಿರುವ ಕ್ಯಾಮೆರಾ ಕೆಲಸ ಶ್ಲಾಘನೀಯ. ಅಮರಾವತಿಯ ಪ್ರಪಂಚವನ್ನೇ ಕಟ್ಟಿಕೊಟ್ಟ ಕಲಾನಿರ್ದೇಶನದ ವಿಭಾಗಕ್ಕೂ ಕ್ರೆಡಿಟ್ ಸಲ್ಲಬೇಕು. ಕಡೆಯ ಹೊಡೆದಾಟದ ದೃಶ್ಯದಲ್ಲಿ ಸಿಗುವ ನೈಜತೆ, ಥ್ರಿಲ್ ಮೊದಲ ಬಾರ್'ನೊಳಗಿನ ಹೊಡೆದಾಟದ ದೃಶ್ಯದಲ್ಲಿ ಸಿಗಲಿಲ್ಲ. ಇಂಥ ದೃಶ್ಯಗಳಲ್ಲಿ ಲೋಪವನ್ನೆಲ್ಲ ಮುಚ್ಚಿಹಾಕಿದ್ದು ಮಾತ್ರ ರಕ್ಷಿತ್-ಅಚ್ಯುತ್ ಜೋಡಿಯ ನಕ್ಕುನಗಿಸುವ ತಿಳಿಹಾಸ್ಯ.

ಮತ್ತದೇ ಬರವಣಿಗೆಯ ವಿಭಾಗಕ್ಕೆ ಬಂದರೆ ನಾಟಕ ತಂಡ, ಅವರ ಹಿನ್ನೆಲೆ, ನಿಧಿಯ ರಹಸ್ಯ, ಸಮುದ್ರಮಂಥನದ ನಾಟಕ, ನಿಧಿಯನ್ನು ಪತ್ತೆ ಹಚ್ಚುವಿಕೆ ಇವೆಲ್ಲವೂ ಒಗಟಿನ ರೀತಿಯಲ್ಲೇ ಇದ್ದರೂ ಅವನ್ನು ಬಿಡಿಸಿದಾಗಲೂ ಏನೋ ಹೊಸದು ಅನ್ನಿಸಿಕೊಳ್ಳಲಿಲ್ಲ. ಆ ಭಾಗವೂ ರಸಾನುಭವ ಕೊಡುವಲ್ಲಿ ವಿಫಲವಾಯಿತು.

ಇವೆಲ್ಲದರ ಮಧ್ಯೆ ನಾವೂ ಸಿನಿಮಾದ ಹೀರೋಗಳೇ ಅನಿಸಿಕೊಂಡವರು ಮಾತ್ರ ಖಳನಟರಾದ ಬಾಲಾಜಿ ಮನೋಹರ್ ಮತ್ತು ಪ್ರಮೋದ್ ಶೆಟ್ಟಿ. ಕನ್ನಡ ಚಿತ್ರರಂಗ ಇವರನ್ನು ಹೀಗೆಯೇ ಹೆಚ್ಚು ಅವಕಾಶ ನೀಡಿ ಬಳಸಿಕೊಳ್ಳುವಂತಾಗಲಿ.

ಯಾವುದೇ ಕನ್ನಡ ಸಿನಿಮಾದ ಬಗ್ಗೆ ಕನ್ನಡ ಪ್ರೇಕ್ಷಕರಾಗಿ ದ್ವೇಷ ನಮಗೇಕಿರಬೇಕು? ನಮ್ಮ ಕನ್ನಡ ಸಿನಿಮಾ...ಅದರ ಬಗ್ಗೆ ನಮ್ಮ expectation ಹೆಚ್ಚಿರಬೇಕು. ಅದಕ್ಕೆ ತಕ್ಕುದಾದ ಸಿನಿಮಾಗಳನ್ನು ಚಿತ್ರರಂಗದವರು ಮಾಡಬೇಕು. ಮತ್ತು ಆ ಸಿನಿಮಾಗಳು ಜಗತ್ತನ್ನು ಮುಟ್ಟಬೇಕು. ಎಲ್ಲ ಕಡೆ ನಮ್ಮ ಎದೆತಟ್ಟಿಕೊಳ್ಳುತ್ತ "ನಮ್ಮ ಸಿನಿಮಾ ನೋಡಿ" ಅಂತ ಹೇಳಬೇಕೆನ್ನುವುದು ದೂರದಾಸೆ. ಆ ಬಗೆಯ ಅನಿಸಿಕೆಯನ್ನು ಅತ್ತ ಕಡೆ ಗುರಿಯಿಟ್ಟವರಿಗಷ್ಟೇ ಹೇಳಲು ಸಾಧ್ಯವಲ್ಲವೇ? ಹಾಗಾಗಿಯೇ ಈ ಅಭಿಪ್ರಾಯ "ಅವನೇ ಶ್ರೀ.." ತಂಡಕ್ಕೆ.

ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಸಂಪಾದಿಸಲಿ. ಮತ್ತೆ ಇದೇ ಚಿತ್ರತಂಡ ಇನ್ನೂ ದೊಡ್ಡ ಸಾಹಸಗಳಿಗೆ ಕೈಹಾಕಲಿ ಎಂಬ ಹಾರೈಕೆಯೊಂದಿಗೆ.....

-Santhosh Kumar LM
30-Dec-2019

Friday, December 20, 2019

Truth And Justice (2019)- Estonian Movie



Truth and Justice (2019)

ಸದ್ಯಕ್ಕೆ ಈ ವರ್ಷದ ಆಸ್ಕರ್ ಪ್ರಶಸ್ತಿಗೆ " Best Foreign Language Film " ವಿಭಾಗದಲ್ಲಿ ಆಯ್ಕೆಗೊಂಡಿರುವ ಈಸ್ಟೋನಿಯ ದೇಶದ ಚಿತ್ರ.  ಈಸ್ಟೋನಿಯಾ ಭಾಷೆಯಲ್ಲಿಯೇ ಸಿನಿಮಾ ಇದೆ. ಸಂಭಾಷಣೆ ಅರ್ಥೈಸಿಕೊಳ್ಳಲು ಸಬ್ ಟೈಟಲ್'ನ ಸಹಾಯ ಬೇಕು.

ಹತ್ತೊಂಭತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ನಡೆವ ಕಥೆಯನ್ನು ಹೊಂದಿರುವ ಈ ಸಿನಿಮಾ ಕಾದಂಬರಿ ಆಧಾರಿತ. ಐದು ಕಾದಂಬರಿಗಳಿರುವ ಈ   "Truth and Justice" ಸರಣಿಯನ್ನು ಬರೆದವರು A.H.Tammsaare, 1926 ರಲ್ಲಿ. ಈ ಸಿನಿಮಾ ಆ ಸರಣಿಯ ಮೊದಲನೆಯ ಕಾದಂಬರಿಯನ್ನು ಆಧರಿಸಿದೆ.

ಈಸ್ಟೋನಿಯಾ ದೇಶದಲ್ಲಿ ವರ್ಷಕ್ಕೆ ನಿರ್ಮಾಣವಾಗುವುದೇ ಐದಾರು ಸಿನಿಮಾಗಳು. ಅವುಗಳಲ್ಲೇ ಇಂಥದ್ದೊಂದು ಸಿನಿಮಾ ತಯಾರಾಗಿ ಅದು ಆಸ್ಕರ್'ವರೆಗೆ ಬಂದು ನಿಂತಿರುವುದು ಅದು ನಿಜಕ್ಕೂ ಅಚ್ಚರಿಯ ಸಾಧನೆ.

ಕಡಿಮೆ ಬೆಲೆಯಲ್ಲಿ ಜೌಗು ನೆಲದ ಜಮೀನೊಂದನ್ನು ಕೊಂಡು ಅಲ್ಲಿ ನೆಲೆಸಲು ಪತ್ನಿಯ ಜೊತೆ ಬರುವ ನಾಯಕ, ಅದರಲ್ಲಿ ಬೇಸಾಯ ಶುರುಮಾಡಿ ಒಳ್ಳೆಯ ಫಸಲನ್ನು ತೆಗೆಯಲು ಹೆಣಗುವುದು....
ಮುಂದೆ ತನ್ನ ಆಸ್ತಿಗೆ ಹಕ್ಕುದಾರನಾಗಲು ಗಂಡು ಮಗನೇ ಬೇಕೆನ್ನುವುದು
ಕಿರುಕುಳ ಕೊಡುವ ಪಕ್ಕದ ಜಮೀನಿನವ....

ಹೀಗೆ ಅನೇಕ ಎಳೆಗಳು ಒಟ್ಟೊಟ್ಟಿಗೆ ಸಾಗುತ್ತಲೇ ಮೂಲಕಥೆಯನ್ನು ಹೇಳುತ್ತ ಅಲ್ಲಿಯ ಜೀವನವನ್ನು ಮತ್ತು ಆ ಕಾಲಘಟ್ಟದ ಅವರ ಸಂಸ್ಕೃತಿಯನ್ನು ನಮಗೆ ಕಟ್ಟಿಕೊಡುತ್ತವೆ. ಕಥೆಯ ಬಗ್ಗೆ ಜಾಸ್ತಿ ಹೇಳುವುದು ಬೇಡ.

ಆದರೆ ನೋಡುವಾಗ ನಮಗೆ ತಕ್ಷಣಕ್ಕೆ ಮನದಟ್ಟಾಗುವುದು ಸಿನಿಮಾ ತಂಡದ ಶ್ರಮ. ಇಡೀ ಸಿನಿಮಾದ ಕಥೆ ಅನೇಕ ದಶಕಗಳನ್ನು, ಮತ್ತು ಬೇರೆ ಬೇರೆ ಋತುಗಳನ್ನು ಕಾಣುತ್ತದೆ. ಪ್ರತೀ ಋತುವಿನಲ್ಲೂ ವ್ಯವಸಾಯದ ಬೇರೆ ಬೇರೆ ಕೆಲಸಗಳನ್ನು, ಹಾಗೆ ಬೇರೆ ಬೇರೆ ಕಾಲಘಟ್ಟದಲ್ಲಿಯ ಕಥೆಯನ್ನು ಆ ಪಾತ್ರಗಳ ಬೇರೆ ಬೇರೆ ವಯಸ್ಸಿನ ವೇಷದೊಂದಿಗೆ ತಯಾರು ಮಾಡಿ ಅವರಿಂದ ನಟನೆ ತೆಗೆಯುವುದಿದೆಯಲ್ಲ. ಅದು ದುಸ್ಸಾಹಸವೆನಿಸುತ್ತದೆ. ಪಾತ್ರಗಳಿರಲಿ. ಒಂದೇ ನೆಲದಲ್ಲಿ ಮಳೆ, ಬಿಸಿಲು, ಹಿಮ ಹೀಗೆ ಬೇರೆ ಬೇರೆ ಹವಾಮಾನವಿದ್ದಾಗಲೂ ಅದನ್ನು ಕಥೆಗೆ ತಕ್ಕಂತೆ ಬೆಳೆಯನ್ನು, ಕೆಸರನ್ನು, ಫಸಲನ್ನು ತಯಾರು ಮಾಡಿ ದೃಶ್ಯ ಕಟ್ಟುವುದಿದೆಯಲ್ಲ ಆ ಶ್ರಮ ಸಿನಿಮಾ ನೋಡುವಾಗಲೇ ನಮಗೆ ಗೊತ್ತಾಗುತ್ತದೆ.

ಸಿನಿಮಾ ಎರಡೂ ಮುಕ್ಕಾಲು ಗಂಟೆಯಿದೆ. ಅದ್ಭುತ ಹಿನ್ನೆಲೆ ಸಂಗೀತದೊಂದಿಗೆ ಅಲ್ಲಲ್ಲಿ  ನಿಶಬ್ಧವಿದೆ. ಕೆಲವು ದೃಶ್ಯಗಳಲ್ಲಿ ತೀವ್ರತೆಯಿದೆ. ಅವೆಲ್ಲವನ್ನು ಸಿನಿಮಾ ನೋಡಿಯೇ ಅರ್ಥೈಸಿಕೊಳ್ಳಬೇಕು, ಅನುಭವಿಸಬೇಕು.

ಪ್ರಪಂಚದ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವ ಅಭ್ಯಾಸವಿದ್ದರೆ ನೋಡಿ. ನಿಮಗೆ ಖಂಡಿತ ಇಷ್ಟವಾಗಬಹುದು.

-Santhosh Kumar LM
20-Dec-2019

Wednesday, December 18, 2019

ಗಂಟುಮೂಟೆ (2019)









ಗಂಟುಮೂಟೆ (2019)

ಹೆಣ್ಣುಮಗಳೊಬ್ಬಳು ಯಾರಿಗೂ ಹೇಳದ ಹೊಟ್ಟೆಯೊಳಗಿನ ಗುಟ್ಟೊಂದನ್ನು ಮುಂದೊಮ್ಮೆ ಅತ್ಮೀಯನೊಬ್ಬನಿಗೆ ಹೇಳಿದಂತೆ ಕಥೆ ಹೆಣೆಯಲಾಗಿದೆ. ಎಲ್ಲ ಸಿನಿಮಾ-ಕಥೆಗಳಲ್ಲಿ "ಅದು ನಮಗೆ ಕೊಡುವ ಸಂದೇಶವೇನು?" ಅಂತ ಕೇಳುವ ಅವಶ್ಯಕತೆಯಿಲ್ಲ. ಕೆಲವು‌ ಕಥೆಗಳನ್ನು ಕಟ್ಟುವಾಗ ಅದರ ಬಗ್ಗೆ ಯೋಚಿಸಿರುವುದೂ ಇಲ್ಲ. It's fair!

ಸಮಸ್ಯೆಯಾಗುವುದು ಸಿನಿಮಾವೊಂದು ಸಾಮಾನ್ಯ ಮನರಂಜನೆಯನ್ನಾದರೂ ಕೊಡದೆ ಹೋದಾಗ! ಆದರೆ ಗಂಟುಮೂಟೆ ಸಿನಿಮಾ ಆ ಬಗೆಯ ದ್ರೋಹವನ್ನೇನೂ ಮಾಡುವುದಿಲ್ಲ. ಮೊದಲನೆಯ ದೃಶ್ಯದಿಂದಲೇ ನಮ್ಮನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ಅದು ಚಿತ್ರದ ಯಶಸ್ಸೇ!


ಕಥೆಯಲ್ಲಿ ಹೊಸತೇನಿಲ್ಲ. ಹದಿಹರೆಯದ ವಯಸ್ಸಿನ ಆಕರ್ಷಣೆ, ಪ್ರೇಮ, ತೊಳಲಾಟ, ಯಾವುದು ಸರಿ-ತಪ್ಪು ತಿಳಿಯದ ದ್ವಂದ್ವ, ಕಡೆಗೆ ಅದರಿಂದ ಉಂಟಾಗುವ ಪರಿಣಾಮಗಳು ಇವುಗಳ ಬಗ್ಗೆ ಅನೇಕ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಈ ಸಿನಿಮಾ ಅದೇ ಕಥೆಯನ್ನು ಹೇಳುವುದರಲ್ಲಿ ಹೊಸತೆನಿಸುತ್ತದೆ. ಏನಾಗಬಹುದು ಎಂದು ನಾವು ಊಹಿಸಬಲ್ಲೆವಾದರೂ ಆ ಹುಡುಗಿಯ ಮೂಲಕವೇ ಕಥೆ ಹೇಳಿಸಿರುವುದು ವಿಭಿನ್ನ ಅನುಭವ ನೀಡುತ್ತದೆ. ಬಹುಶಃ ಇದೇ ಸಿನಿಮಾವನ್ನು ಪುರುಷರೊಬ್ಬರು ನಿರ್ದೇಶಿಸಿದ್ದರೆ ಕಥೆಗೆ ಬೇರೆಯದೇ ಬಗೆಯ ಧಾಟಿ ಇರುತ್ತಿತ್ತು ಅನಿಸುವುದು ಸಹಜ. ಏಕೆಂದರೆ ಹಸಿಬಿಸಿ ದೃಶ್ಯಗಳನ್ನು ಕೇವಲ ಚುಂಬನಕ್ಕೆ ಸೀಮಿತವಾಗಿಸಿ ಅವನ್ನೂ ಸಹ ಸಹ್ಯವಾಗುವಂತೆಯೇ ಚಿತ್ರಿಕರಿಸಲಾಗಿದೆ. ನನಗೆ ಇಷ್ಟವಾದದ್ದು ಹಾಡುಗಳ ಮೂಲಕ ಹೇಳಬಹುದಾದ ಸಂದರ್ಭಗಳಲ್ಲಿ ಕವಿತೆಯ ಸಾಲುಗಳನ್ನು ಬಳಸಿರುವುದು ವಿಭಿನ್ನ ಪ್ರಯತ್ನ‌, ಚೆನ್ನಾಗಿ appeal ಆಗುತ್ತದೆ.

ಪ್ರಶ್ನೆಯೇ ಇಲ್ಲ. ತೇಜು ಬೆಳವಾಡಿಯದು ಕಾಡುವ ಅಭಿನಯ. ಆದರೆ ಅವರೊಟ್ಟಿಗೆ ಮಧು ಪಾತ್ರ ಮಾಡಿದ ನಿಶ್ಚಿತ್ ಸಹ ತುಂಬಾ ಇಷ್ಟವಾದರು. ಅವರ ಬಗ್ಗೆ ಹೆಚ್ಚು ಸುದ್ದಿ ಬರದಿದ್ದುದು ನನಗೆ ಅಚ್ಚರಿಯೇ!! ಮೊದಲನೇ ಬಾರಿ ರಿಸಲ್ಟ್ ಬಂದಾಗ ಈಕೆ ಕ್ಲಾಸಿಗೆ ಮೊದಲನೆಯವಳಾಗಿ ಪಾಸಾಗಿ ಆತ ಫೇಲಾಗಿ ಅತ್ತ ನಿಂತು ಸಿಗರೇಟು ಸೇದುತ್ತಿರುವಾಗ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆ, gradually ಅವನ ಮನಸ್ಸಿಗಾಗಿರುವ ನೋವನ್ನು ಹೇಳುವಿಕೆ ಇಷ್ಟವಾಯಿತು.

smoking ದೃಶ್ಯಗಳು, ಚುಂಬನದ ದೃಶ್ಯಗಳನ್ನು ಕಡಿಮೆ ಬಳಸಿಕೊಳ್ಳಬಹುದಿತ್ತು. ಪ್ರತೀ ದೃಶ್ಯದಲ್ಲಿ Smoking ಮಾಡುವಾಗಲಂತೂ ಆತನ ಗೆಳತಿಯರು ಬೇಡವೆನ್ನದೆ ಏನೂ ಆಗೇ ಇಲ್ಲ ಅನ್ನುವ ಥರ ಡೈಲಾಗ್ ಹೇಳಿದ್ದು accept ಮಾಡಿಕೊಳ್ಳಲಾಗಿಲ್ಲ. (ಬಹುಶಃ ಇದೇ ದೃಶ್ಯಗಳ ಬಗ್ಗೆ ಕೆಲ ಗೆಳೆಯರು ಅಸಹನೆ ತೋರಿರಬಹುದಾ? ಗೊತ್ತಿಲ್ಲ) . ಮಧು ಸಾವಿನ, ನಂತರದ ದೃಶ್ಯಗಳಲ್ಲಿ ಇನ್ನಷ್ಟು ತೀವ್ರತೆ ಇದ್ದಿದ್ದರೆ ಸಿನಿಮಾ ಇನ್ನೂ ಚೆನ್ನಾಗಿ ತಲುಪುತ್ತಿತ್ತು ಅನಿಸಿತು. ಪ್ರ್ಯಾಕ್ಟಿಕಲ್ ಆಗಿ ಯೋಚಿಸುವ ಗಣಿತದ ಮೇಷ್ಟ್ರಿನ ಪಾತ್ರವನ್ನು ಇನ್ನೂ ಹೆಚ್ಚು ಬಳಸಿಕೊಳ್ಳಬಹುದಿತ್ತು.

ಸಿನಿಮಾ ಥಿಯೇಟರ್‌ನಲ್ಲಿ ಗಾಂಧೀಕ್ಲಾಸಿನಲ್ಲಿ ಕುಳಿತು ಆಕೆ‌ ಸಿನಿಮಾ ನೋಡುವಾಗ ಒಬ್ಬಾತನ ಅಸಭ್ಯ ನಡವಳಿಕೆ ತೋರಿದಾಗ, ಆಕೆ ಬಾಲ್ಕನಿಗೆ ಬಂದು ಸಿನಿಮಾ ಕುಳಿತು ನೋಡುವುದು ಗಾಂಧೀಕ್ಲಾಸಿನ ಜನರ ಬಗೆಗೆ ಬೇರೆಯದೇ generalized comment ಹೇಳುತ್ತದೆ. ಅದು ಉದ್ದೇಶಪೂರ್ವಕ ಅಲ್ಲದಿರಬಹುದು. ಆದರೆ ಅಷ್ಟು ತಕ್ಷಣಕ್ಕೆ ಅನಿಸದಿದ್ದರೂ ಕೆಲ ಪ್ರೇಕ್ಷಕರು ಸೂಕ್ಷ್ಮವಾಗಿ ಇಂಥವುಗಳನ್ನು ಗಮನಿಸುತ್ತಾರೆ ಅನ್ನುವುದನ್ನು ನಿರ್ದೇಶಕರು ಮರೆಯಬಾರದು.

"ಗಂಟುಮೂಟೆ", ಖಂಡಿತ ಒಮ್ಮೆ ನೊಡಬಹುದಾದ ಸಿನಿಮಾ. ನನಗಿಷ್ಟವಾಯಿತು.

-Santhosh Kumar LM
17-Dec-2019

Tuesday, December 3, 2019

A Write up On two Tamil movies









ನನಗೆ ಮನರಂಜನೆಗೋಸ್ಕರವೇ ಅಂತ ತೆಗೆದ ಸಿನಿಮಾ ಬೇಡ. ವಿಭಿನ್ನವಾಗಿರುವ ಸಿನಿಮಾ ಬೇಕು ಅಂತ ಕೇಳುವ 'ವಿಭಿನ್ನತೆಯನ್ನು ಇಷ್ಟಪಡುವ ಸಿನಿಮಾ ಪ್ರೇಕ್ಷಕ' ನೀವಾಗಿದ್ದರೆ ಎರಡು ತಮಿಳು ಸಿನಿಮಾಗಳನ್ನು ಹೇಳುತ್ತೇನೆ. ನೀವು ನೋಡಲೇಬೇಕು. ಇವೆರಡೂ ಸಿನಿಮಾಗಳಲ್ಲಿ ಸಾಮ್ಯತೆಯಿದೆ. ಮನರಂಜನೆ ಕೇಳುತ್ತೀರೋ? ಅಷ್ಟು ಸಿಗಲಾರದು. ಆದರೆ ವಿಭಿನ್ನ ಕಥಾನಿರೂಪಣೆ ಈ ಎರಡು ಸಿನಿಮಾಗಳಲ್ಲೂ ಸಿಗುತ್ತದೆ.

1. ಕರ್ಮ (2015)
2. ಒತ್ತ ಸೆರಪ್ಪು size-7 (2019)

ಪಾರ್ಥಿಬನ್ ನಟಿಸಿದ ಇತ್ತೀಚೆಗಷ್ಟೇ ಬಿಡುಗಡೆಯಾದ ಒತ್ತ ಸೆರಪ್ಪು ಸಿನಿಮಾ ಎಲ್ಲೆಡೆ ಸಿನಿಪ್ರಿಯರ ಪ್ರಶಂಸೆಗೆ ಕಾರಣವಾಗಿದೆ. ಆದರೆ ಇದೇ ಬಗೆಯ ವಿಚಾರವಿದ್ದ ಸಿನಿಮಾ "ಕರ್ಮ" 2015 ರಲ್ಲಿಯೇ ಬಿಡುಗಡೆಯಾಗಿತ್ತು(ಥಿಯೇಟರಿನಲ್ಲಲ್ಲ, ಬೇರೆ ಮಾಧ್ಯಮಗಳ ಮೂಲಕ). ಆಗ ಆ ಸಿನಿಮಾಗೆ ಅಷ್ಟು ಜನಪ್ರಿಯತೆ ಸಿಗಲಿಲ್ಲ.

ಎರಡೂ ಸಿನಿಮಾಗಳಲ್ಲಿ ಇರುವ ವಿಶೇಷವೆಂದರೆ ಈ ಸಿನಿಮಾಗಳಲ್ಲಿ ಇರುವುದು ಒಂದೇ ಪಾತ್ರ. ನಾಯಕ ಪಾತ್ರವೇ ಹೆಚ್ಚು-ಕಡಿಮೆ ಎರಡು ಘಂಟೆಗಳ ಕಾಲ ನಮ್ಮನ್ನು ಹಿಡಿದು ಕೂರಿಸುತ್ತದೆ.

ಕರ್ಮ ಸಿನಿಮಾದಲ್ಲಿ ಪೊಲೀಸನೊಬ್ಬ (ತನ್ನ ಹೆಂಡತಿಯನ್ನು ಕಳೆದುಕೊಂಡ) ವ್ಯಕ್ತಿಯೊಬ್ಬನನ್ನು ವಿಚಾರಣೆ ಮಾಡುವುದು. ಇವರಿಬ್ಬರ ಸಂಭಾಷಣೆಯೇ ಕಥೆ. ಅದರಲ್ಲಿ ಗಮನಿಸಬೇಕಾದ್ದೆಂದರೆ ಪೊಲೀಸ್ ಮತ್ತು ಆ ವ್ಯಕ್ತಿ ಇಬ್ಬರ ಪಾತ್ರ ನಿರ್ವಹಿಸಿದ್ದೂ R Arvind ಒಬ್ಬನೇ! ಸಿನಿಮಾ ನೋಡಿದ ಮೇಲೆ ಆ ಎರಡೂ ಪಾತ್ರಗಳ ಪಾತ್ರಧಾರಿ ಒಬ್ಬನೇ ಎಂದರೆ ನೀವು ನಂಬಲಾರಿರಿ. ಪತ್ತೇದಾರಿ ಕಥೆಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟವಾಗುತ್ತದೆ.

ಒತ್ತ ಸೆರಪ್ಪು ಸಿನಿಮಾದಲ್ಲಿ ಠಾಣೆಯೊಳಗೆ ವಿಚಾರಣಾಧೀನ ಖೈದಿಯೊಬ್ಬನನ್ನು ಕೂರಿಸಿಕೊಂಡು ಆತ ಮಾಡಿದ ಅಪರಾಧಗಳ modus of operandi ಬಗ್ಗೆ ತಿಳಿದುಕೊಳ್ಳುವಾಗ ಬಯಲಾಗುವ ಸತ್ಯಗಳು, ಮತ್ತು ಆ ಮೂಲಕ ನಮಗೆ ಹೇಳುವ ಕಥೆ. ಇಲ್ಲಿ ಕ್ಯಾಮೆರಾ ಕೇವಲ ಖೈದಿಯ ಮುಖದೆಡೆಗಿರುತ್ತದೆ. ಉಳಿದ ಪಾತ್ರಗಳ ಸಂಭಾಷಣೆಗಳಷ್ಟೇ ನಮಗೆ ಕೇಳುತ್ತವೆ. ಖೈದಿಯ ಪಾತ್ರದಲ್ಲಿ ಪಾರ್ಥಿಬನ್ ಇಡೀ ಸಿನಿಮಾವನ್ನು ತನ್ನ ಹೆಗಲ ಮೇಲೆ ಹೊತ್ತು ನಡೆಸುತ್ತಾರೆ. ಕರ್ಮ ಸಿನಿಮಾದಂತೆ ಇಲ್ಲಿ ಕೇವಲ ಸಂಭಾಷಣೆಯಿಲ್ಲ, ಪಾರ್ಥಿಬನ್'ನ ಅದ್ಭುತ ಏಕಪಾತ್ರಾಭಿನಯವಿದೆ. ಯಾವುದೋ ಮಾನಸಿಕ ಖಾಯಿಲೆಯಿರುವ ವ್ಯಕ್ತಿಯಾಗಿ ಪ್ರತೀ ದೃಶ್ಯವನ್ನು ಹೇಳುವಾಗ ಆತ ಸಂಭಾಷಣೆ ಹೇಳುವ ರೀತಿ, ಆಂಗಿಕ ಅಭಿನಯ, ಧ್ವನಿಯ ಏರಿಳಿತ ಎಲ್ಲದರಲ್ಲೂ ಚಪ್ಪಾಳೆ ಗಿಟ್ಟಿಸುತ್ತಾರೆ. ಎರಡು ಘಂಟೆಗಳ ಕಾಲ ಒಬ್ಬನೇ ವ್ಯಕ್ತಿ ಪ್ರೇಕ್ಷಕನನ್ನು ಹಿಡಿದಿಡುವುದು ಸುಮ್ಮನೆ ಮಾತಲ್ಲ. Sound Designing, ಕತ್ತಲೆಯ ಕೋಣೆಯೊಳಗೆ ತೆಗೆದಿರುವುದರಿಂದ ನಿಜಕ್ಕೂ ಸವಾಲೇ. ಯಾವುದಾದರೊಂದು ವಿಭಾಗದಲ್ಲಿ ಈ ಸಿನಿಮಾ ಕೂಡ ಪ್ರಶಸ್ತಿ ಗಳಿಸುವುದನ್ನು ನಾವು ಎದುರು ನೋಡಬಹುದು.

ಬರೀ ಸಂಭಾಷಣೆಯೇ ಈ ಎರಡೂ ಸಿನಿಮಾಗಳ ಜೀವಾಳವಾದ್ದರಿಂದ, ಸಂಭಾಷಣೆ ಇಷ್ಟಪಡದ ಹೆಚ್ಚುಹೆಚ್ಚು ಬೇರೆ ಬೇರೆ ದೃಶ್ಯಗಳಿರಬೇಕು ಅಂತ ಆಶಿಸುವವರಿಗೇ ಇವೆರಡು ಸಿನಿಮಾಗಳು ಬೇಸರ ಮೂಡಿಸಬಲ್ಲವು.

ಆದರೆ ಈಗಾಗಲೇ ಹೇಳಿದಂತೆ ವಿಭಿನ್ನ ಸಿನಿಮಾಗಳನ್ನು ಇಷ್ಟಪಡುವವರಿಗೆ ಇವೆರಡೂ ನೋಡಬೇಕಾದ ಸಿನಿಮಾಗಳೇ..

-Santhosh Kumar LM
03-Dec-2019

Monday, December 2, 2019

ಕಾಳಿದಾಸ ಕನ್ನಡ ಮೇಷ್ಟ್ರು (2019)

ಬಿಡುಗಡೆಯಾದ ವಾರದ ನಂತರವೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕನ್ನಡ ಚಿತ್ರ. ನಿನ್ನೆ GT world mallನಲ್ಲಿ ಸಂಜೆಯ ಪ್ರದರ್ಶನ ಹೆಚ್ಚು-ಕಡಿಮೆ houseful ಆಗಿತ್ತು.

ಸಂದೇಶವೊಂದನ್ನು ಸಮಾಜಕ್ಕೆ ದಾಟಿಸಲೆಂದೇ ಮಾಡಿರುವ ಚೆಂದದ ಚಿತ್ರ. ಹಾಗಂತ ಇದಕ್ಕೆ ಜಗ್ಗೇಶ್ ಏಕೆ ಅನ್ನಿಸಬಹುದು. ಮೊದಲರ್ಧದಲ್ಲಿ ಕಥೆಯ ಭಾಗವಾಗಿಯೇ ಹಾಸ್ಯ ಬಳಕೆಯಾಗಿದೆ. ಆದ್ದರಿಂದ ಸಿನಿಮಾ ಅರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ. ಹಾಸ್ಯವೂ ಅಷ್ಟೇ, ಎಲ್ಲೂ ತುರುಕಲಾಗಿದೆ ಅನ್ನಿಸುವುದಿಲ್ಲ. ಜಗ್ಗೇಶ್‌ನ ಮ್ಯಾನರಿಸಂ ಸಿಕ್ಕಾಪಟ್ಟೆ ನಗು ತರಿಸುತ್ತದೆ.

ದ್ವಿತೀಯಾರ್ಧದಲ್ಲಿ ಕಥೆ ಬೇರೊಂದು ತಿರುವು ಪಡೆದು ಇದ್ದಕ್ಕಿದ್ದಂತೆ ಗಂಭೀರವಾಗುತ್ತದೆ. ಇಲ್ಲಿ ನನಗಿಷ್ಟವಾದದ್ದು ನಿರ್ದೇಶಕನ ಸಂದೇಶ ಹೇಳುತ್ತಿರುವ clarityಯ ಬಗ್ಗೆ. ಎಷ್ಟೋ ಸಲ ಖಾಸಗಿ ಶಾಲೆಗಳನ್ನು ವಿರೋಧಿಸುವುದೇ ಅನೇಕ ಸಿನಿಮಾಗಳ ಉದ್ದೇಶವಾಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ಸಮಾನ ಶಿಕ್ಷಣ, ಉಚಿತ ಶಿಕ್ಷಣ, ಖಾಸಗಿ ಶಾಲೆಗಳ ಕಡಿವಾಣ, ಸರ್ಕಾರಿ ಶಾಲೆಗಳ ಪುನರುಜ್ಜೀವನಗೊಳಿಸುವಿಕೆ, ಮಾತೃಭಾಷಾ ಶಿಕ್ಷಣ, ಮುಂದಿನ ಜೀವನಕ್ಕೆ ಬೇಕಾದ ಕೌಶಲ್ಯ ನೀಡುವ ಶಿಕ್ಷಣ, ಮಕ್ಕಳಿಗೆ ಶಾಲೆಯೆನ್ನುವುದು ಹೊರೆಯಾಗದಂತೆ ಮಾಡುವಿಕೆ, ಡೊನೇಶನ್ ಹಾವಳಿಗೆ ಕಡಿವಾಣ,.... ಅನೇಕ ವಿಷಯಗಳ ಬಗ್ಗೆ ಹೇಳುತ್ತಾರೆ. ಹೇಳುವ ರೀತಿಯಲ್ಲಿ ಯಶಸ್ವಿಯಾಗುತ್ತಾರೆ ಕೂಡ. ಮಕ್ಕಳನ್ನು ಮಾರ್ಕ್ಸ್ ತರುವ ಯಂತ್ರಗಳಂತೆ ಕಾಣುವ ತಂದೆ ತಾಯಿಗಳಿಗಂತೂ ಈ ಸಿನಿಮಾ‌ ನೋಡುವಾಗ ತಮ್ಮನ್ನು ತಾವು ಅವಲೋಕಿಸಿಕೊಳ್ಳುವಂತೆ ಮಾಡುತ್ತದೆ.

ಜಗ್ಗೇಶ್ ಕೈಯಲ್ಲಿ ಡಬ್ಬಲ್ ಮೀನಿಂಗ್ ಡೈಲಾಗುಗಳನ್ನು ಹೇಳಿಸದೇ ಹೊಟ್ಟೆ ಹುಣ್ಣಾಗುವಂತೆ ನಕ್ಕುನಗಿಸುವುದು ನಿಜಕ್ಕೂ ಸವಾಲು. ಆ ಸವಾಲಿನಲ್ಲಿ ನಿರ್ದೇಶಕ ಗೆದ್ದಿದ್ದಾರೆ.

ದ್ವಿತೀಯಾರ್ಧದಲ್ಲಿ ಹಾಸ್ಯ ಕಡಿಮೆಯಾಯಿತು ಅನ್ನುವ ದೃಷ್ಟಿಯಿಂದ ಕೆಲವು ಹಾಸ್ಯ ದೃಶ್ಯಗಳನ್ನು ಕಥೆಯ ಮಧ್ಯೆ ತುರುಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನನಗೆ ಕಿರಿಕಿರಿಯಾಗಿದ್ದು ಗಂಭೀರವಾದ ಸನ್ನಿವೇಶದಲ್ಲಿ ಬರುವ ತಬಲ ನಾಣಿಯ ಹಾಸ್ಯದ ದೃಶ್ಯಗಳು. ಅವಿಲ್ಲದಿದ್ದರೂ ಸಿನಿಮಾಗೆ ಕೊರತೆಯಾಗುತ್ತಿರಲಿಲ್ಲ.

ಸಿನಿಮಾ logical solution ಅಂತ ಏನನ್ನೂ ಇಲ್ಲಿ ಕೊಡುವುದಿಲ್ಲ. ಆದರೆ ಸದ್ಯದ ಸಮಸ್ಯೆ ಹೇಳುತ್ತ, ಮುಂದೆ ಹೀಗಾದರೆ ಎಷ್ಟು ಚೆಂದ ಅನ್ನುವ ಕಲ್ಪನೆ ಕೊಟ್ಟು ಮುಕ್ತಾಯವಾಗುತ್ತದೆ. ಅದನ್ನು ಹೇಗೆ ಸಾಧಿಸಬೇಕೆನ್ನುವುದು ನಮ್ಮ ಆಲೋಚನೆಗೆ ಬಿಟ್ಟಿದ್ದು.

ಏನೇ ಇರಲಿ. ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಥೆಯನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನವೇ ಬೆನ್ನು ತಟ್ಟುವಂಥದ್ದು. ನಟ ಜಗ್ಗೇಶ್, ನಿರ್ದೇಶಕ ಕವಿರಾಜ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು.

ಖಂಡಿತವಾಗಿ ಬೋರ್ ಹೊಡೆಸದ ಸಿನಿಮಾ. ನೋಡಿರದಿದ್ದರೆ ಒಮ್ಮೆ ನೋಡಿ.

-Santhoshkumar LM
02-Dec-2019

Monday, November 11, 2019

Malayalam Movie....... ಜಲ್ಲಿಕಟ್ಟು (2019)








ಜಲ್ಲಿಕಟ್ಟು (2019) review

ನಾನು ನೋಡಿದ್ದು ಕೆಲವೇ ಕೆಲವು ಮಲಯಾಳಂ ಸಿನಿಮಾಗಳು. ಅವುಗಳಲ್ಲಿ ಇದೂ ಒಂದು! ನೋಡಿದ ತಕ್ಷಣ ಮಲಯಾಳಂ ಸಿನಿಮಾಗಳೆಡೆಗಿನ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿತು.

ಆತ ಒಬ್ಬ ಮಾಂಸದ ವ್ಯಾಪಾರಿ. ದಿನವೂ ಬೆಳಕು ಹರಿಯುವ ಮುನ್ನವೇ ಒಂದು ಎಮ್ಮೆಯನ್ನು ಕಡಿದು ಮಾಂಸವನ್ನು ಮಾರುತ್ತಾನೆ. ಆತ ಕೊಡುವ ಮಾಂಸಕ್ಕಾಗಿಯೇ ದಿನವೂ ನೂರಾರು ಜನ ಕಾಯುತ್ತಾರೆ.

ಅದೊಂದು ದಿನ ಆತ ಕಡಿಯಬೇಕೆಂದಿದ್ದ ಎಮ್ಮೆ ಕೆರಳಿ ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಓಡುತ್ತದೆ. ಅಷ್ಟೇ ಅಲ್ಲ. ಅದ್ಯಾವ ಪರಿ ವ್ಯಗ್ರವಾಗಿ ಓಡುತ್ತದೆಂದರೆ ಎದುರಿಗೆ ಸಿಕ್ಕ ಸಿಕ್ಕ ಜನರನ್ನು, ವಸ್ತುಗಳನ್ನು, ಗಿಡಗಳನ್ನು ನೋಡದೇ ಧ್ವಂಸ ಮಾಡುತ್ತ ಸಾಗುತ್ತದೆ.

ಇದನ್ನು ಹಿಡಿಯಬೇಕೆಂದು ಇಡೀ ಊರಿಗೆ ಊರೇ ಆಯುಧಗಳನ್ನು ಹಿಡಿದು ಎಮ್ಮೆ ಅಡಗಿರಬಹುದಾದ ಕಾಡಿನಂತಿರುವ ಆ ಜಾಗದಲ್ಲಿ ನುಗ್ಗುತ್ತಾರೆ!

ಮುಂದೇನು ಅನ್ನುವುದೇ ಸಿನಿಮಾದ ಕಥೆ.

ಇಲ್ಲಿ ಹೇಳುವಾಗ ಕಥೆ ಇಷ್ಟೇನಾ ಅನ್ನಿಸುತ್ತದೆಯಾದರೂ ಸಿನಿಮಾ ನೋಡುವವರ ಪಾಲಿಗೆ ಆ ಕಥೆ ಹೇಳುವ ವಿಷಯಗಳು ಸಾವಿರಾರು!

ನಾಗರೀಕತೆ ಅನ್ನುವುದು ಪ್ರಾಣಿ ಮನುಷ್ಯನ ಪಾಲಿಗೆ ಒಟ್ಟಿಗೆ ಶುರುವಾಯಿತಾದರೂ, ಮನುಷ್ಯ ಮಾತ್ರ ನಾನು ಮಾತ್ರ ಇಲ್ಲಿ ನೆಲೆಯೂರಬೇಕು, ಬೇರೆಯದೆಲ್ಲ ತನ್ನ ಭೋಗಕ್ಕೆ ಅನ್ನುವ ವಿಷಯವಾಗಿರಬಹುದು.

ಎಮ್ಮೆ ಹಿಡಿಯುವ ವಿಷಯಕ್ಕೂ, ಶಿಲಾಯುಗದ ಮನುಷ್ಯನ ಬೇಟೆಯಾಡುವ ಪ್ರವೃತ್ತಿಗೂ ತಳುಕು ಹಾಕುತ್ತ ....ಕಡೆಗೆ ಆ ಎಮ್ಮೆಯನ್ನು ಕಟ್ಟಿ ಹಾಕುವುದು ಕೇವಲ ತನ್ನ ಆಹಾರದ ಅಗತ್ಯಕ್ಕಾಗಿ ಅಲ್ಲ. ಅದು ತನ್ನ ಅಹಂ ಅನ್ನು ಇತರರಿಗೆ ತೋರ್ಪಡಿಸಲು ಅನ್ನುವ ವಿಷಯವಾಗಿರಬಹುದು. ಎಲ್ಲವನ್ನು ದೃಷ್ಟಾಂತಗಳಲ್ಲಿಯೇ ಹೇಳಲಾಗಿದೆ. ಇನ್ನೂ ಹೇಳಬೇಕೆಂದರೆ ಅಲ್ಲಿ ಬರುವ ಕೆಲವರು ಎಮ್ಮೆಯನ್ನು ಹಿಡಿಯಲು ಬಂದಿರುವುದಿಲ್ಲ‌. ಅವರ ಉದ್ದೇಶವೇ ಬೇರೆಯಿರುತ್ತದೆ.

ಈ ಸಿನಿಮಾವನ್ನು ನೀವು ಮನರಂಜನೆಗಾಗಿ ನೋಡಬಹುದು. ಸಿನಿಮಾ ಮಾಧ್ಯಮವನ್ನು ಅಭ್ಯಸಿಸಲು ನೋಡಬಹುದು. ಆದರೆ ಎಲ್ಲೂ ಇದು ಒಂದು ವರ್ಗಕ್ಕೆ ಮಾತ್ರ ಅಂತ ಸೀಮಿತಗೊಳಿಸಿಲ್ಲ.

ನಾನು ಇತ್ತೀಚೆಗೆ ನೋಡಿದ ಸಿನಿಮಾಗಳಲ್ಲೆಲ್ಲ, ಅಂದುಕೊಂಡದ್ದನ್ನು ಕಾವ್ಯಾತ್ಮಕವಾಗಿ ತೆಗೆದ best climax ಈ ಸಿನಿಮಾದಲ್ಲಿದೆ ಅಂತ ಖಂಡಿತ ಹೇಳಬಲ್ಲೆ. ಈಗಲೂ ಆ ದೃಶ್ಯ ತೆಗೆಯುವ ಮುನ್ನ ನಿರ್ದೇಶಕನಿಗಿರಬೇಕಾದ clarityಯ ಬಗ್ಗೆ imagine ಮಾಡಿಕೊಂಡರೂ ವ್ಹಾವ್ ಅನ್ನಿಸದೇ ಸುಮ್ಮನಿರಲಾಗದು.

ಸಿನಿಮಾ ಮುಗಿದ ಮೇಲೆ ಇಡೀ ಚಿತ್ರವನ್ನೊಮ್ಮೆ ನೆನಪಿಸಿಕೊಂಡರೆ ಏಕೆ ಈ ಸಿನಿಮಾಗೆ "ಜಲ್ಲಿಕಟ್ಟು" ಎಂಬ ಹೆಸರಿದೆ ಅನ್ನುವುದು ಅರಿವಾಗುತ್ತದೆ. ಅಲ್ಲೂ ಮನುಷ್ಯನ-ಪಶುವಿನ ನಡುವಿನ ಪಂದ್ಯ. ಅದು ಆಹಾರಕ್ಕಾಗಿಯಷ್ಟೇ ಅಲ್ಲ. ಅಲ್ಲಿ ಸಾವಿರಾರು ರಾಜಕೀಯಗಳಿವೆ. ಮದವೇರಿದ ಪಶುವನ್ನು ಮಟ್ಟ ಹಾಕಿ ಊರವರ ಮುಂದೆ ಮೀಸೆ ತಿರುವಿಕೊಳ್ಳಲು ಕಾಯುತ್ತಿರುವ ಸುಳ್ಳೇ ಪುರುಷತ್ವಗಳು ಎಲ್ಲೆಲ್ಲೂ ಇವೆ. ಆದರೆ ಆ ಪಂದ್ಯಕ್ಕೆ ಸಿಗುವ ಕ್ರೀಡಾಂಗಣ ಮಾತ್ರ ಈ ಸಿನಿಮಾದಷ್ಟು ದೊಡ್ಡದು. ಅದಕ್ಕೆ ಎಲ್ಲೆಯಿಲ್ಲ!

ನಿಜವಾಗಿ ಈ ಸಿನಿಮಾದ ಛಾಯಾಗ್ರಾಹಕನೇ ನಿಜವಾದ ಹೀರೋ. ಚಿತ್ರದ ಬಹುಪಾಲು ದೃಶ್ಯಗಳು ಕತ್ತಲೆಯಲ್ಲೇ ನಡೆಯುತ್ತವೆ. ನೂರಾರು ಜನಗಳು ಹಿಡಿದ ಪಂಜು, ಬ್ಯಾಟರಿ, ಪೆಟ್ರೋಮಾಸ್ ಲೈಟ್ನಂತಹ ಬೆಳಕಿನಲ್ಲೇ ನಡೆಯುವ ರೋಚಕ
ದೃಶ್ಯಗಳನ್ನು ನೈಜವಾಗಿ ಚಿತ್ರೀಕರಿಸಲಾಗಿದೆ.

ಹಿನ್ನೆಲೆ ಸಂಗೀತವೂ ವಿಭಿನ್ನವೇ. ಕೇಳುತ್ತಿದ್ದರೆ ಶಿಲಾಯುಗದಲ್ಲಿ ಬೇಟೆಯಾಡಲು ಹೊರಡುವ ಜನಗಳು ಕೂಗುವ ಶಬ್ದದಂತೆ ಭಾಸವಾಗುತ್ತದೆ. ಅದನ್ನು ಕೇಳುವಾಗ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಬೇಕಿತ್ತು ಅನಿಸಿದ್ದು ಸುಳ್ಳಲ್ಲ.

ಹಾಡುಗಳಿಗೆ ಜೋತು ಬೀಳದೆ, ಅನವಶ್ಯಕ ಸಂಭಾಷಣೆಗೆ ಜೋತು ಬೀಳದೆ ಕೇವಲ ತನ್ನ ಕಥೆಯ ಮೇಲೆ, ನಿರೂಪಣಾ ಶೈಲಿಯ ಮೇಲೆ ನಂಬಿಕೆಯಿಟ್ಟು ಕೇವಲ 90ನಿಮಿಷಗಳ ಸಿನಿಮಾದಲ್ಲಿ ನೂರಾರು ವಿಷಯಗಳನ್ನು ಯಶಸ್ವಿಯಾಗಿ ಈ ಸಿನಿಮಾದ ಮೂಲಕ ಹೇಳಿದ ನಿರ್ದೇಶಕ Lio Jose ಗೆ ಒಂದು ಶಹಬ್ಬಾಸ್ ಹೇಳಲೇಬೇಕು.

ಒಂದಂತೂ ಹೇಳಬಲ್ಲೆ. ಅನೇಕ ನಿರ್ದೇಶಕರಿಗೆ ಈ ಸಿನಿಮಾ ಸ್ಫೂರ್ತಿಯಾಗಬಲ್ಲದು! ಸಿದ್ಧಸೂತ್ರಗಳಿಗೆ ಜೋತು ಬೀಳದೆ ತನ್ನದೇ ಅಂತ ಹೇಳಿಕೊಳ್ಳುವಷ್ಟು ಸಿನಿಮಾ ಮಾಡುವ ಸ್ವಾತಂತ್ರ್ಯ ಎಲ್ಲ ನಿರ್ದೇಶಕರಿಗೂ ಸಿಗಲಿ ಅನ್ನುವುದು ನನ್ನ ಆಶಯ.

ಹೇಳಲು ಅನೇಕ ವಿಷಯಗಳಿವೆ. ಆದರೆ ನೀವು ಸಿನಿಮಾ ನೋಡಲಿ ಎಂಬ ಕಾರಣದಿಂದ ಇಷ್ಟಕ್ಕೆ ನಿಲ್ಲಿಸುತ್ತಿದ್ದೇನೆ. ಈ ಸಿನಿಮಾ ನೋಡಿ. ಅಮೇಜಾನ್ ಪ್ರೈಮ್‌ನಲ್ಲಿದೆ. 90 ನಿಮಿಷಗಳಷ್ಟೇ. ವಿಭಿನ್ನ ಸಿನಿಮಾವೊಂದನ್ನು ನೋಡಿದೆ ಅಂತ ನಿಮಗನ್ನಿಸದಿದ್ದರೆ ಕೇಳಿ.

-Santhosh Kumar LM
05-Nov-2019

ಅಸುರನ್....ASURAN (2019)








"ಅಸುರನ್" ಸಿನಿಮಾ ಬಗ್ಗೆ ಎಲ್ಲ ಬರುದ್ ಬಿಸಾಕವ್ರೆ. ನಮಗೆ ಬರೆಯೋಕೆ ಏನು ಉಳಿಸಿಲ್ಲ.


Brilliant Screenplay. ಒಂದು ಮಸ್ತ್ ಸಿನಿಮಾ ನೋಡಿದ ಹಾಗಾಯಿತು. ನನ್ನ ಪಾಲಿನ ಸಿನಿಮಾ ಅನುಭವ ಕೂಡ ಹೀಗೆಯೇ ಇರಬೇಕು. ನಿರ್ದೇಶಕ ಸಿನಿಮಾ ತೋರಿಸುತ್ತಲೇ ನನಗರಿವಿಲ್ಲದಂತೆ ತನ್ನ ಸಂದೇಶ ಹೇಳಬೇಕು. ಇಲ್ಲದಿದ್ದರೆ ನಾನ್ಯಾಕೆ ಆ ಸಿನಿಮಾ ನೋಡಲಿ. ಅದನ್ನು ಪತ್ರಿಕೆಯ ಲೇಖನವೋ, ಸಾಕ್ಷ್ಯಚಿತ್ರವೋ ಮಾಡಬಲ್ಲುದು!


ಅಮೇಜಾನ್ ಪ್ರೈಮ್'ಗೆ ಒಂದು ವರ್ಷದ subscription fee ಕೊಟ್ಟಿದ್ದಕ್ಕೂ ಸಾರ್ಥಕ ಆಗೋಯ್ತು.


ಹೋದ ವಾರ "ಜಲ್ಲಿಕಟ್ಟು", ಈ ವಾರ "ಅಸುರನ್"....ಎರಡೂ ಸಿಕ್ಕಾಪಟ್ಟೆ ಇಷ್ಟ ಆದವು.


ನೋಡಿರದಿದ್ದರೆ ಖಂಡಿತ ನೋಡಿ. ಕೆಲವು ದೃಶ್ಯಗಳಲ್ಲಿ ಹಿಂಸೆ ಜಾಸ್ತಿಯಿರುವುದರಿಂದ ಪುಟ್ಟ ಮಕ್ಕಳಿಲ್ಲದಾಗ ನೋಡುವುದೊಳ್ಳೆಯದು.


----------------


ಮೊದಲಿಗೆ ಒಂದು ಸಿನಿಮಾ ಆಗಿಯೇ ಅಸುರನ್ ನಮ್ಮನ್ನು ಹಿಡಿದು ಕೂರಿಸಿಕೊಳ್ಳುತ್ತೆ. ಜಾತಿ ಸಮಸ್ಯೆ ಅನ್ನುವುದನ್ನು ನೇರವಾಗಿ ಹೇಳದೇ ನೂರಾರು ಜಮೀನಿರುವ ಜಮೀನ್ದಾರರ, ಮತ್ತು ಒಂದೆರಡು ಎಕರೆ ಜಮೀನಿನಲ್ಲೇ ವ್ಯವಸಾಯ ಮಾಡಿ ಜೀವನ ಸಾಗಿಸುವವರ ಮಧ್ಯದ ಸಂಘರ್ಷದ ರೀತಿಯಲ್ಲೇ ಚಿತ್ರೀಕರಿಸಲಾಗಿದೆ. ಉದಾ: ನಾಯಿ ಸತ್ತಾಗಲಿನ ದೃಶ್ಯ, ವಿದ್ಯುತ್ ಬೇಲಿ ಹಾಕಿರುವುದನ್ನು ಪ್ರಶ್ನಿಸುವಾಗಿನ ದೃಶ್ಯ, ಅಕ್ರಮವಾಗಿ ಇನ್ನೊಬ್ಬರ ಬಾವಿಯಿಂದ ನೀರು ಎಳೆಯುವಾಗ ನಡೆಯುವ ಜಗಳ...

ಧನುಷ್ ಇಲ್ಲಿ ನಟಿಸಿರುವುದು ಶಿವಸಾಮಿಯ ಪಾತ್ರ. ಶಿವಸಾಮಿ ಮತ್ತು ಅವನ ಬಳಗ ವಾಸಿಸುವ ಊರಿನಿಂದ ಬೇರೆಯದೆ ಕಡೆ ಇರುವ ಗುಡಿಸಲುಗಳು, ಶಿವಸಾಮಿ ಮಗನಿಗಾಗಿ ಊರವರ ಕಾಲಿಗೆರಗುವುದು, "ನಮ್ಮೆದುರು ಚಪ್ಪಲಿ ಹಾಕಿ ನಡೆಯುವೆಯಾ?" ಅನ್ನೋ ಥರದ ಅನೇಕ ದೃಶ್ಯಗಳಲ್ಲಿ ಆತ ಹೇಳುತ್ತಿರುವುದು ಜಾತಿಸಮಸ್ಯೆಯ ಬಗ್ಗೆ ಅನ್ನುವುದು ಅರ್ಥವಾಗದೆ ಇರುವುದಿಲ್ಲ.


ಎಲ್ಲಕ್ಕಿಂತ ಹೆಚ್ಚಾಗಿ ಈ ಥರದ ಚಿತ್ರದಲ್ಲೂ ಪ್ರೇಕ್ಷಕನಿಗೆ ಸಂದೇಶ ಹೇಳುತ್ತಲೇ ರೋಚಕ ಚಿತ್ರಕಥೆ ಹೆಣೆದ ರೀತಿ ಸಿನಿಮಾ ಮಾಧ್ಯಮವನ್ನು ನಿರ್ದೇಶಕರು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅನ್ನುವುದನ್ನು ತೋರಿಸುತ್ತದೆ.


ಧನುಷ್ ಮೂರು ಮಕ್ಕಳ ತಂದೆಯಂಥ ಪಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದೇ ಆಶ್ಚರ್ಯವೆನಿಸುತ್ತದೆ. ಪ್ರತೀ ಪಾತ್ರಗಳ ಭಾವತೀವ್ರತೆಯ ಬಗ್ಗೆಯೂ ತುಂಬಾ ಸ್ಪಷ್ಟತೆ ಇದೆ. ದೊಡ್ಡಮಗನಿಗೆ ಬಿಸಿರಕ್ತ, ಕೋಪ. ಚಿಕ್ಕಮಗನಿಗೆ ರೋಷ, ಆದರೆ ಅಪ್ಪನ ಬಗ್ಗೆ ಅಸಮಾಧಾನ, ಚಿಕ್ಕ ಮಗಳಿಗೆ ಅಮಾಯಕತೆ, ಹೆಂಡತಿಯ ಕೋಪ/ಅಸಹನೆ.... ಇವೆಲ್ಲ ಪಾತ್ರಗಳಿಗೂ ಒಳ್ಳೆಯ ಸ್ಕೋಪ್ ಇದ್ದಾಗ್ಯೂ ನಮಗೆ ಇಷ್ಟವಾಗುವ ಪಾತ್ರ ಧನುಷ್. ಬಹುಶಃ ಬೇರೆ ನಟರಾಗಿದ್ದರೆ ಇಂತಹ ಪಾತ್ರಗಳಿಗೆ ಒಪ್ಪುತ್ತಿದ್ದರಾ? ಗೊತ್ತಿಲ್ಲ. ಧನುಷ್'ಗೆ ಈ ಸಿನಿಮಾದಿಂದಾಗಿ ಇನ್ನೊಂದು ಪ್ರಶಸ್ತಿ ಕಾಯುತ್ತಿದೆಯೇ..... ಸಿಗಲಿ. ಒಳ್ಳೆಯದು.


ಮುಕ್ಕಾಲು ಘಂಟೆ ಸಿನಿಮಾ ನೋಡಿದ ಮೇಲೆ ಉಳಿದ ಭಾಗವನ್ನು ನಾಳೆ ನೋಡೋಣವೆಂದು ಸುಮ್ಮನಾದರೂ, ನೋಡದೆ ಇರಲಾಗಲಿಲ್ಲ. ಒಂದೇ ಗುಕ್ಕಿನಲ್ಲಿ ನೋಡುವ ತನಕ ಬಿಡಲಿಲ್ಲ. ಅಷ್ಟು ಚೆನ್ನಾಗಿದೆ ಸಿನಿಮಾ... ನೇಟಿವಿಟಿ ಅನ್ನುವುದನ್ನು ಸಿನಿಮಾಗೆ ಹೇಗೆ ಅಳವಡಿಸಿಕೊಳ್ಳುತ್ತಾರೆ ಅನ್ನುವುದಕ್ಕೆ ಇದೊಂದು ಸಿನಿಮಾ ಮತ್ತೊಂದು ಉದಾಹರಣೆ.


ವೈಯಕ್ತಿಕವಾಗಿ ನನಗೆ ಈ ಸಿನಿಮಾ ಕ್ರೌರ್ಯ ಅನಿಸಲಿಲ್ಲ. ಧನುಷ್ ಭರ್ಜಿ ಎತ್ತಿ ಚುಚ್ಚುವಾಗ ಯಾವುದು ನಮಗೆ ಕ್ರೌರ್ಯ ಅನಿಸುತ್ತದೆಯೋ........


ಅದೇ ಕ್ರೌರ್ಯ....


ಅವನ ಮಗನನ್ನು ಮರಕ್ಕೆ ನೇತುಹಾಕಿ ಪ್ರಾಣಿಯನ್ನು ಕೊಲ್ಲುವಂತೆ (ಅದೇ ಉಪಮೆಯೂ ಇರಬೇಕು) ಕೊಲ್ಲುತ್ತಾರಲ್ಲ ಚಪ್ಪಲಿ ಹಾಕಿ ತಲೆಯೆತ್ತಿ ನಡೆದಳು ಅಂದ ಮಾತ್ರಕ್ಕೆ ಹುಡುಗಿಯೊಬ್ಬಳಿಗೆ ಅವಮಾನ ಮಾಡುತ್ತಾರಲ್ಲ. ತಮಗೆ ಅವಮಾನ ಮಾಡಿದ ಅಂದ ಕಾರಣಕ್ಕೆ ಗುಡಿಸಲಿಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡುತ್ತಾರಲ್ಲ.


ಆಗಲೂ ನಮಗೆ ಅನ್ನಿಸಲೇಬೇಕು. ಯಾರೇನೇ ಅಂದರೂ ಶಾಂತಮೂರ್ತಿಯಾಗಿ ನಿಲ್ಲುವ ಶಿವಸಾಮಿ ಕೂಡ ಆಯುಧ ಹಿಡಿದು ನಿಲ್ಲುವುದು, ತನ್ನ ಕುಟುಂಬದೆದುರಿಗೆ ಸಾವು ಕಾಲು ಕೆರೆದು ನಿಂತಿದೆ ಅಂದಾಗಲೇ! ಇಷ್ಟೆಲ್ಲ ಆಗಿಯೂ ಶಿವಸಾಮಿ ಕಡೆಯ ದೃಶ್ಯದಲ್ಲಿ ಹೇಳುವುದೂ ಅದೇ. ಹಿಂಸೆ ಪರಿಹಾರವಲ್ಲ. ಅಕ್ಷರವಷ್ಟೇ ನಮ್ಮನ್ನೆಲ್ಲ ಕಾಪಾಡಬಲ್ಲುದು ಅಂತ.


Santhosh Kumar LM
11-Nov-2019

Monday, September 30, 2019

English movie : ಆಲ್ಫಾ

ಆಲ್ಫಾ....ALPHA (2018)

ಇಂಗ್ಲೀಷ್ ಭಾಷೆಯ ಚಿತ್ರ ಅಂತಲೇ ಹೇಳುತ್ತದಾದರೂ ಇದರಲ್ಲಿ ಮಾತನಾಡುವುದೆಲ್ಲ ಒಂದು ಬುಡಕಟ್ಟು ಜನಾಂಗದ ಭಾಷೆ. ಇದನ್ನು ಅರ್ಥ ಮಾಡಿಕೊಳ್ಳಲು ಸಬ್-ಟೈಟಲ್'ನ ಸಹಾಯ ಪಡೆಯಲೇಬೇಕು.


ಸಾವಿರಾರು ವರ್ಷಗಳ ಹಿಂದೆ ಬುಡಕಟ್ಟು ಜನಾಂಗದ ಗುಂಪೊಂದು ತಾನು ವಾಸವಿದ್ದ ಜಾಗದಿಂದ ಬಹಳ ದೂರಕ್ಕೆ ಬೇಟೆಗೆಂದು ಪ್ರಯಾಣ ಶುರು ಮಾಡುತ್ತದೆ. ಮುಂದೆ ಬರುವ ಚಳಿಗಾಲದಲ್ಲಿ ಅಲ್ಲಿ ಒಂದು ಹೆಜ್ಜೆ ಎತ್ತಿಡಲೂ ಸಹ ಸಾಧ್ಯವಿಲ್ಲ. ಹಾಗಾಗಿ ಪ್ರತೀ ವರ್ಷ ಆ ಚಳಿಗಾಲ ಶುರುವಾಗುವ ಮೊದಲೇ ಬಹಳ ದೂರಕ್ಕೆ ಹೋಗಿ ಕಾಡುಕೋಣಗಳನ್ನು ಬೇಟೆಯಾಡಿ, ಆಹಾರವನ್ನು ಶೇಖರಿಸಿಡುವುದನ್ನು ಆ ಜನಾಂಗ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದೆ.


ಆ ಗುಂಪಿಗೆ ನಾಯಕ ತಾವ್. ಈ ಬಾರಿ ಹೊರಡುವಾಗ ತನ್ನ ಮಗ ಕೆಡಾನನ್ನು ಕೂಡ ಜೊತೆ ಬರಲು ಹೇಳುತ್ತಾನೆ. ಅವನ ಹೆಂಡತಿ ಮಗನಿಗೆ ಇನ್ನೂ ಧೈರ್ಯವಿಲ್ಲವೆಂದು, ಇನ್ನೂ ಬೇಟೆಯಾಡುವ ಸಾಮರ್ಥ್ಯ ಹೊಂದಿಲ್ಲವೆಂದು ಅವನನ್ನು ಕರೆದುಕೊಂಡು ಹೋಗದಿರಲು ಬೇಡಿಕೊಳ್ಳುತ್ತಾಳೆ. ಆದರೆ ಅವಳಿಗೆ ಧೈರ್ಯ ತುಂಬುವ ತಾವ್ ಈಗಿನಿಂದಲೇ ಮಗನಿಗೆ ನಾಯಕತ್ವವನ್ನು ಕಲಿಸಬೇಕು. ಅದಕ್ಕೆ ಇದೇ ಸೂಕ್ತ ಸಮಯ ಎಂದು ಹೊರಡುತ್ತಾನೆ.


ಕೆಡಾಗೆ ಭಯ, ಮೃದು ಸ್ವಭಾವದ ಹುಡುಗ. ಹಿಂಸೆ ಅನ್ನುವುದೆಲ್ಲ ಆಗದು. ಅವನ ಅಪ್ಪ ಒಂದು ಕಾಡುಹಂದಿಯನ್ನು ಗಾಯಗೊಳಿಸಿ ಅದನ್ನು ಕೊಲ್ಲು ಎಂದಾಗಲೂ ಹಿಂದೆ ಮುಂದೆ ನೋಡುತ್ತಾನೆ. ಒಳಗೊಳಗೆ ಮಗನಿಗೆ ಧೈರ್ಯ ತುಂಬುತ್ತಿರುತ್ತಾನೆ. ಅದೊಂದು ರಾತ್ರಿ ಬಿಡಾರ ಹೂಡಿ ಎಲ್ಲರೂ ಒಟ್ಟಿಗೆ ಕುಳಿತಾಗಲೇ ಮಿಂಚಿನವೇಗದಲ್ಲಿ ಇವರ ಮೇಲೆರಗುವ ಸಿಂಹವೊಂದು ಇವನ ಜೊತೆಯಲ್ಲಿದ್ದ ಇನ್ನೊಬ್ಬ ಹುಡುಗನನ್ನು ಹೊತ್ತೊಯ್ಯುತ್ತದೆ. ಅಸಹಾಯಕರಾಗಿ ನೋಡುವ ಎಲ್ಲರ ಮಧ್ಯೆ ಕೆಡಾಗೆ ಇನ್ನೂ ಭಯ ಹೆಚ್ಚಾಗುತ್ತದೆ.


ಇದೀಗ ನೂರಾರು ಮೈಲಿ ದೂರ ಕ್ರಮಿಸಿದ ಮೇಲೆ ಕಾಡೆಮ್ಮೆಗಳ ಹಿಂಡು ಮೇಯುವ ಜಾಗ ತಲುಪುತ್ತಾರೆ. ಅಲ್ಲಿ ಮುಂದೆ ನಡೆಯುವುದು ಮೈನವಿರೇಳಿಸುವ ಕಾಡೆಮ್ಮೆಗಳ ಬೇಟೆಯ ದೃಶ್ಯ. ಇನ್ನೇನು ಎಲ್ಲ ಸುಸೂತ್ರ ಅನಿಸಿಕೊಳ್ಳುವಾಗ ಕಾಡುಕೋಣವೊಂದು ಮರಳಿ ಬಂದು ಕೆಡಾನನ್ನು ಎಲ್ಲರೆದುರೇ ಪ್ರಪಾತಕ್ಕೆ ಒಗೆಯುತ್ತದೆ. ತಾವ್ ಹಿಂದೆಯೇ ನೆಗೆಯಲು ನಿಲ್ಲುತ್ತಾನಾದರೂ ಎಲ್ಲರೂ ಅವನನ್ನು ನಿಯಂತ್ರಿಸಿ ನಿನ್ನ ಮಗ ತೀರಿಕೊಂಡ ಎಂದು ಮನದಟ್ಟು ಮಾಡುತ್ತಾರೆ. ನಂತರ ಅಲ್ಲೇ ಕಲ್ಲುಗಳ ಗುಡ್ಡೆಯನ್ನು ನಿರ್ಮಿಸಿ ಮಗನ ಆತ್ಮಕ್ಕೆ ಶಾಂತಿಕೋರಿ, ನಂತರ ಆಹಾರವನ್ನು ಸಂಗ್ರಹಿಸಿ ಒಲ್ಲದ ಮನಸ್ಸಿನಿಂದಲೇ ಮನೆಯತ್ತ ಹೆಜ್ಜೆ ಹಾಕುತ್ತಾರೆ.


-------------


ಇತ್ತ ಪ್ರಪಾತಕ್ಕೆ ಬಿದ್ದ ಕೆಡಾ ಪೂರ್ತಿ ಕೆಳಗೆ ಬೀಳದೆ ಮಧ್ಯದಲ್ಲಿಯೇ ಕಾಲು ಮುರಿದುಕೊಂಡು ಬಿದ್ದು ಪ್ರಜ್ಞೆ ತಪ್ಪಿರುತ್ತಾನೆ. ರಣಹದ್ದೊಂದು ಶವವೆಂದು ತಿಳಿದು ಕುಕ್ಕಲು ಬಂದಾಗಲೇ ಈತನಿಗೆ ಎಚ್ಚರವಾಗಿ ಅದನ್ನು ಓಡಿಸುವುದು. ಮುಂದೆ ಭೀಕರ ಮಳೆ ಶುರುವಾಗಿ ಪ್ರವಾಹ ಶುರುವಾಗುತ್ತದೆ. ಇಳಿಯುವ ಪ್ರಯತ್ನ ಮಾಡುತ್ತಾನಾದರೂ ಕೈಜಾರಿ ಪ್ರವಾಹದೊಳಕ್ಕೆ ಬೀಳುತ್ತಾನೆ. ಎಚ್ಚರವಾದಾಗ ಇನ್ನೆಲ್ಲೋ ಬಂದು ಸೇರಿರುತ್ತಾನೆ.


ಒಮ್ಮೆಲೇ ಭಯವಾಗುವ ಕೆಡಾಗೆ ಮೇಲೆ ಬಂದು ನೋಡಿದರೆ ಅಪ್ಪ ಮತ್ತು ತನ್ನ ಬಳಗ, ತನ್ನನ್ನು ಸತ್ತನೆಂದು ತಿಳಿದು ವಾಪಸ್ಸಾಗಿರುವುದು ತಿಳಿಯುತ್ತದೆ. ಆಗಲೇ ತೋಳಗಳ ಹಿಂಡೊಂದು ಈತನ ಬೆನ್ನಟ್ಟುತ್ತದೆ. ಈತ ಹತ್ತಿರದಲ್ಲೇ ಇದ್ದ ಮರವೊಂದರ ಆಶ್ರಯ ಪಡೆಯುತ್ತಾನೆ. ಆ ಕಾದಾಟದಲ್ಲಿ ಒಂದು ತೋಳವನ್ನು ಗಾಯಗೊಳಿಸಿ ಕೆಳಗೆ ಬೀಳಿಸುತ್ತಾನೆ. ಬೆಳಗಿನ ಹೊತ್ತಿಗೆ ಎಲ್ಲ ತೋಳಗಳೂ ಹೊರಟು ಹೋಗಿರುತ್ತವೆ.......ಗಾಯಗೊಂಡ ತೋಳವನ್ನು ಬಿಟ್ಟು!


ಕೆಳಗಿಳಿದು ಅದನ್ನು ಸಾಯಿಸುವ ಮನಸ್ಸು ಮಾಡುತ್ತಾನಾದರೂ ಕಡೆಗೆ ಅದರ ಗಾಯ ನೋಡಿ, ಭಯದಿಂದಲೇ ಅದಕ್ಕೆ ಮದ್ದು ಹಚ್ಚಿ ಸುಶ್ರೂಷೆ ಮಾಡುತ್ತಾನೆ. ಜೊತೆಗೆ ಅಲ್ಲಿ ಸಿಕ್ಕ ನೀರು ಮತ್ತು ಆಹಾರವನ್ನು ಅದಕ್ಕೂ ನೀಡಿ ಉಪಚರಿಸುತ್ತಾನೆ. ಸದ್ಯ ಇಬ್ಬರೂ ಅವರ ಅಪ್ಪ-ಅಮ್ಮನಿಂದ ದೂರವಿದ್ದಾರೆ. ಈ ಅಂಶದಿಂದಲೇ ಈ ಸಂದರ್ಭದಲ್ಲಿ ಗೊತ್ತಿಲ್ಲದ ಹಾಗೆ ಆ ತೋಳಕ್ಕೂ ಕೆಡಾಗೂ ಗೊತ್ತಿಲ್ಲದ ಸ್ನೇಹವೇರ್ಪಡುತ್ತದೆ.


ಮುಂದೆ ಮನೆಯ ದುರ್ಗಮ ದಾರಿ ಹಿಡಿದು ಹೊರಡುವ ಕೆಡಾಗೆ ಆ ತೋಳವೇ ಜೊತೆಯಾಗುತ್ತದೆ. ಆತ ಮತ್ತೆ ಮನೆ ಸೇರುತ್ತಾನೆಯೇ? ಆ ಮುಂದಿನ ಪಯಣವೇ "Apha" ಸಿನಿಮಾದ ಕಥೆ.


--------------


ಅನಿವಾರ್ಯ ಪರಿಸ್ಥಿತಿಯಲ್ಲಿ ಮನುಷ್ಯನ-ಮೃಗದ ಮಧ್ಯದಲ್ಲೊಂದು ಸಂಬಂಧವೇರ್ಪಡುವ ಇದೇ ಬಗೆಯ ಕಥೆಯುಳ್ಳ "Life Of Pi" ಸಿನಿಮಾ ನೋಡಿದವರಿಗೆ ಇದು ಅದೇ ಬಗೆಯದು ಅನ್ನಿಸಬಹುದು. ಆದರೆ ಎಲ್ಲೂ ಬೋರ್ ಹೊಡೆಸದೆ ನೋಡಿಸಿಕೊಳ್ಳುವ ಸಿನಿಮಾ. ಅಮೇಜಾನ್ ಪ್ರೈಮ್'ನಲ್ಲಿದೆ ಒಮ್ಮೆ ನೋಡಿ.


ಸಂತೋಷ್ ಕುಮಾರ್ ಎಲ್. ಎಂ.
30-Sep-2019

Wednesday, September 25, 2019

Tamil movie : ಮನುಸಂಗಡ

ಮನುಸಂಗಡ (Manusangada)
(ಮನುಷ್ಯರೇ ಕಣ್ರೋ...(ನಾವೂ))....
ತಮಿಳು ಸಿನಿಮಾ (2018)
------------------------------

ಕೊಳಪ್ಪನ್ ಇದೀಗ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಅದೊಂದು ಮಧ್ಯರಾತ್ರಿ ಊರಿನಿಂದ ತಂದೆ ತೀರಿಕೊಂಡ ಸುದ್ದಿ ಬರುತ್ತದೆ. ತಕ್ಷಣವೇ ಬಸ್ಸಿನಲ್ಲಿ ಹೊರಟು ತನ್ನ ಹಳ್ಳಿಗೆ ಬರುತ್ತಾನೆ.

ಒಂದೆಡೆ ಅಪ್ಪನನ್ನು ಕಳೆದುಕೊಂಡ ದುಃಖ ಮನಸ್ಸನ್ನು ಆವರಿಸಿದ್ದರೆ ಇನ್ನೊಂದು ಕಡೆ ಆತಂಕ. ಅದಕ್ಕೆ ಕಾರಣ, ಆ ಹಳ್ಳಿಯಲ್ಲಿ ಕಾಲಾನುಕಾಲದಿಂದ ಜಾತಿ ಕಲಹವಿದೆ. ಕೊಳಪ್ಪನ್ ದಲಿತ ಸಮುದಾಯಕ್ಕೆ ಸೇರಿದವನು.
ಆ ಹಳ್ಳಿಯಲ್ಲಿ ಶವವನ್ನು ಹೊತ್ತು ಹೋಗಲು ಇರುವುದೊಂದೇ ಸಾಮಾನ್ಯ ದಾರಿ. ಅಲ್ಲಿ ಮೇಲ್ಜಾತಿಯವರ ಮನೆಗಳಿವೆ. ಇನ್ನೊಂದು ದಾರಿಯನ್ನು ದಾರಿ ಅಂತ ಕರೆಯಲೇ ಸಾಧ್ಯವಿಲ್ಲ. ಕಲ್ಲು ಮುಳ್ಳುಗಳೇ ತುಂಬಿವೆ. ಸಾಮಾನ್ಯ ದಾರಿಯಲ್ಲಿ ಶವ ಹೊತ್ತು ಹೋಗಲು ಮೇಲ್ಜಾತಿಯವರು ಬಿಡುವುದಿಲ್ಲ. ಹಿಂದೆಯೂ ಅನೇಕ ಬಾರಿ ಇದೇ ವಿಷಯಗಳಿಗೆ ಹೊಡೆದಾಟವಾಗಿ ಆ ಕ್ಷೇತ್ರದ ಶಾಸಕರೆಲ್ಲ ಬರುತ್ತಾರಾದರೂ ಅವರ ಸಂಧಾನವೆಲ್ಲ "ಇದೊಂದು ಬಾರಿ ಆ ಇನ್ನೊಂದು ದಾರಿಯಲ್ಲಿಯೇ ಹೋಗಿಬಿಡಿ" ಅನ್ನುವ ಹೇಳಿಕೆಗಳಲ್ಲೇ ಮುಗಿಯುತ್ತವೆ.

"ಸಾಯುವವರೆಗೂ ಅವರ ಮನೆಗಳಲ್ಲೇ ಜೀತ ಮಾಡಿದ ನಮ್ಮಪ್ಪ, ಆತ ತೀರಿಕೊಂಡ ತಕ್ಷಣ ಅವನ ಶವವೂ ಸಾಗಬಾರದ ಹಾಗೆ ಹೇಗೆ ಅನಿಷ್ಟವಾಗಿ ಹೋದ" ಅಂತ ಕೊಳಪ್ಪ ತನಗೇ ಪ್ರಶ್ನೆ ಹಾಕಿಕೊಳ್ಳುತ್ತಾನೆ. ಹೀಗಾಗಿ ಈ ಬಾರಿ ಕೊಳಪ್ಪನ್ ಮತ್ತು ಅವನ ಗೆಳೆಯರು ಶವಯಾತ್ರೆ ಸಾಮಾನ್ಯ ದಾರಿಯಲ್ಲಿಯೇ ಸಾಗಬೇಕು ಅನ್ನುವ ಮನಸ್ಸು ಮಾಡುತ್ತಾರೆ. ಪೊಲೀಸರು ಮತ್ತು ಆ ಊರಿನ RDO ಸಹಾಯ ಕೇಳುತ್ತಾರಾದರೂ ಯಾವುದೇ ಸಹಾಯವಾಗುವುದಿಲ್ಲ.  ಹೀಗಾಗಿ ಅದೇ ಊರಿನ ದಲಿತ ನಾಯಕನೊಬ್ಬ ಸೂಕ್ತ ಕಾನೂನಿನ ಸಹಾಯ ಪಡೆಯಲು ಸಹಕಾರ ನೀಡುತ್ತಾನೆ.

ಅತ್ತ ಮನೆಯ ಮುಂದೆ ಶವವಿಟ್ಟಿದ್ದರೂ ಇತ್ತ ಉಚ್ಛ ನ್ಯಾಯಾಲಯದಲ್ಲಿ writ ಅರ್ಜಿ ಸಲ್ಲಿಸಿ ತಕ್ಷಣವೇ ಆದೇಶ ಪಡೆಯುತ್ತಾರೆ. ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರುಗಳಿಗೂ, RDO ಗಳಿಗೂ, ಸ್ವತಃ ತಾವೇ ನಿಂತು ಕೊಳಪ್ಪನ್ ತಂದೆಯ ಶವಯಾತ್ರೆ ಸಾಮಾನ್ಯ ದಾರಿಯಲ್ಲಿಯೇ ನಡೆದು,  ಸಂಸ್ಕಾರವಾಗುವಂತೆ ಸೂಕ್ತ ರಕ್ಷಣೆ ಕೊಟ್ಟು ನೋಡಿಕೊಳ್ಳಬೇಕು ಅಂತ ಹೇಳಿರುತ್ತದೆ. ಕೊಳಪ್ಪನ್ ಮುಖದಲ್ಲಿ ಸಂತೋಷ ಕಾಣುತ್ತದೆ.

ಕೊಳಪ್ಪನ್ ಅಂದುಕೊಂಡಂತೆಯೇ ಶವಯಾತ್ರೆ, ಶವಸಂಸ್ಕಾರ ನಡೆಯುತ್ತದೆಯೇ? ನ್ಯಾಯಾಲಯದ ಆದೇಶ ಏನಾಯಿತು? ಅನ್ನುವುದೇ ಮುಂದಿನ ಕಥೆ.

2016ರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿಯೇ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಇಡೀ ಸಿನಿಮಾ ನಮ್ಮನ್ನು ವಿಷಾದದಲ್ಲಿಯೇ ಕರೆದೊಯ್ಯುತ್ತದೆ. ಮನೆಯ ಮುಂದೆಯೇ ಮೂರು ದಿನ ಇಟ್ಟ ಶವ, ಅಲ್ಲಿಯ ವಾತಾವರಣ ಎಲ್ಲವನ್ನು ಎಷ್ಟು ನೈಜವಾಗಿ ಚಿತ್ರಿಸಲಾಗಿದೆಯೆಂದರೆ ನಮ್ಮ ಮುಂದೆಯೇ ನಡೆಯುತ್ತಿದೆಯೇನೋ ಅನ್ನುವ ಭಾವ ಮೂಡುತ್ತದೆ. ಉದ್ದೇಶಪೂರ್ವಕವಾಗಿ ಸಿನಿಮಾದ ಗತಿಯನ್ನು ನಿಧಾನ ಮಾಡಿರುವುದು ಆ ಮೂರ್ನಾಲ್ಕು ದಿನ ಶವವಿಟ್ಟು ಕಾಯುವ ಸನ್ನಿವೇಶಗಳ ಕರಾಳತೆಯನ್ನು ಹಾಗೆಯೇ ಪ್ರೇಕ್ಷಕನಿಗೆ ತೋರಿಸಲು ಅನ್ನಿಸುತ್ತದೆ. ಕಡೆಯ ದೃಶ್ಯವಂತೂ ನಿಮ್ಮ ಕರುಳು ಹಿಂಡುವುದು ಗ್ಯಾರಂಟಿ.

90 ನಿಮಿಷಗಳ ಈ ಸಿನಿಮಾ ಯಾವುದೇ ಪರಿಹಾರವನ್ನು ಹೇಳುವುದಿಲ್ಲ. ಆದರೆ ಮನಸ್ಸಿನಲ್ಲಿ ಪ್ರಶ್ನೆಯನ್ನಂತೂ ಹುಟ್ಟುಹಾಕುತ್ತದೆ. ಕಾನೂನು ತುಳಿತಕ್ಕೊಳಗಾದವರ ಪರವಾಗಿದ್ದರೂ ಅದನ್ನು ಕಾರ್ಯಗತಗೊಳಿಸುವವರು ಮೇಲ್ವರ್ಗದವರ ಪರವಾಗಿದ್ದಾಗ ಏನಾಗಬಹುದು ಎಂಬುದರ ಚಿತ್ರಣವೇ "ಮನಸಂಗಡ".

ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದು ಮೆಚ್ಚುಗೆ ಗಳಿಸಿದ ಈ ಚಿತ್ರದ ನಿರ್ದೇಶಕ ಅಮ್ಷನ್ ಕುಮಾರ್.

ನೋಡಬೇಕೆನ್ನುವವರು... Netflix ನಲ್ಲಿದೆ ನೋಡಿ.

ಸಂತೋಷ್ ಕುಮಾರ್ ಎಲ್.ಎಂ
25-Sep-2019

Thursday, March 21, 2019

Tamil movie : ಕುಟ್ರಮೇ ದಂಡನೈ



ಅನವಶ್ಯಕ ಹೀರೋಯಿಸಮ್ಮು, ಸಿನಿಮಾದ ಕಥೆಗೆ ಬೇಕಿಲ್ಲದ ನಾಯಕಿಯನ್ನು ಒಲಿಸಿಕೊಳ್ಳುವ ದೃಶ್ಯಗಳು, ಬೇಡದ ಪಾತ್ರಗಳು.ಹಾಡುಗಳು. ಫೈಟುಗಳು. ಎಲ್ಲದರಿಂದ ಚಿಕ್ಕದಿರಬೇಕಿದ್ದ ಸಿನಿಮಾ ಎರಡೂವರೆ ಗಂಟೆಯಾಗಿ ಸಿಕ್ಕಾಪಟ್ಟೆ Lengthy ಅನಿಸುತ್ತಿದೆಯಾ? ಈ ಬಗೆಯ ಬೋರಿಂಗ್ ಅಂಶಗಳಿಲ್ಲದ ಕುತೂಹಲಭರಿತ ಕಥೆಯಿರುವ ಪುಟ್ಟ, ಆದರೆ ಸಂಪೂರ್ಣ ತೃಪ್ತಿ ಕೊಡುವ ಸಿನಿಮಾವೊಂದು ಬೇಕಿದೆಯೇ?

ಹಾಗಿದ್ದರೆ ನೀವು ನೋಡಲೇಬೇಕಾದ ಸಿನಿಮಾ......ತಮಿಳಿನ "ಕುಟ್ರಮೇ ದಂಡನೈ" (ಅಪರಾಧವೇ ಶಿಕ್ಷೆ).

ಸಿನಿಮಾದ ಮುಖ್ಯ ಪಾತ್ರ ರವಿ. ಆತ ಪುಟ್ಟ ಏಜೆನ್ಸಿಯೊಂದರಲ್ಲಿ ಸಣ್ಣ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾನೆ. ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದವರ ಮನೆಗಳಿಗೆ ಹೋಗಿ ಅವರಿಂದ ಹಣವನ್ನು ಪಡೆದುಬರುವುದು ಆತನ ಕೆಲಸ. ಆತ ಅನಾಥ. ಈಗಿರುವ ದೊಡ್ಡ ಸಮಸ್ಯೆಯೆಂದರೆ ಆತನಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ. ಆತ ಟನ್ನಲ್ ವಿಷನ್ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಸಾಮಾನ್ಯರಿಗೆ ಕಾಣುವಂತೆ ಆತನಿಗೆ ಪೂರ್ತಿ ದೃಷ್ಟಿ ಇಲ್ಲ. ಏನನ್ನು ನೋಡಿದರೂ ಅದರ ಮಧ್ಯಭಾಗವಷ್ಟೇ ಬಾಗಿಲ ಕೀಲಿಕೈ ಕಿಂಡಿಯಲ್ಲಿ ನೋಡಿದರೆ ಎಷ್ಟು ಕಾಣುತ್ತದೋ, ಅಷ್ಟು ಕಾಣುತ್ತಿದೆ. ಬರುಬರುತ್ತ ಆ ಕಿಂಡಿಯೂ ಚಿಕ್ಕದಾಗುತ್ತಿದೆ. ಆಸ್ಪತ್ರೆಯಲ್ಲಿ ತೋರಿಸಿದಾಗ ಅವರು "ಇದು ಗಂಭೀರ ಸಮಸ್ಯೆ, ಇದು ಇನ್ನೂ ಜಾಸ್ತಿಯಾಗುತ್ತ ಹೋಗಿ ಕೆಲವೇ ವರ್ಷಗಳಲ್ಲಿ ನೀವು ಸಂಪೂರ್ಣ ಕುರುಡಾಗಬಹುದು. ಹಾಗಾಗುವ ಮುನ್ನವೇ ಕಣ್ಣಿನ ಕಸಿ ಮಾಡಿಸಿಕೊಳ್ಳಿ" ಅಂತ ಸಲಹೆ ನೀಡುತ್ತಾರೆ. ಮೊದಲೇ ಬಡವ. ಅವನಿಗೆ ಅಷ್ಟು ಲಕ್ಷಾಂತರ ಹಣ ಎಲ್ಲಿಂದ ಬರಬೇಕು.

ಒಂದು ದಿನ ಮನೆಗೆ ಬಂದಾಗ ಆತ ವಾಸವಿರುವ ಕಟ್ಟಡದ ಇನ್ನೊಂದು ಮನೆಯಲ್ಲಿ ಒಬ್ಬಾಕೆಯ ಕೊಲೆಯಾಗಿರುತ್ತದೆ. ಅಲ್ಲಿಂದ ಒಬ್ಬ ವ್ಯಕ್ತಿ ಬರುವುದನ್ನು ಈತ ನೋಡಿಬಿಡುತ್ತಾನೆ. ಆತ ನೋಡಿದ್ದನ್ನು ಎಲ್ಲಿಯೂ ಹೇಳದಂತೆ ಸುಮ್ಮನಿರಲು ಅವನಿಗೆ ಅತ್ತಲಿನ ವ್ಯಕ್ತಿ ಆಫರ್ ಮಾಡುವ ದುಡ್ಡೂ ಲಕ್ಷ ಲಕ್ಷ......

ಮುಂದೇನಾಗಬಹುದು ಊಹಿಸಿಕೊಳ್ಳಿ! ಇದು ಆರಂಭವಷ್ಟೇ. ಕಥೆ ಇನ್ನೂ ಏನೇನೋ ಇದೆ.... ....ಸಿನಿಮಾದ ಒಂದೊಂದು ದೃಶ್ಯವೂ ಮುಖ್ಯ. ಕಡೆಯ ದೃಶ್ಯದವರೆಗೂ ಮಿಸ್ ಮಾಡಿಕೊಳ್ಳಬಾರದ ಅನೇಕ ಪ್ರಮುಖ ವಿಷಯಗಳಿವೆ. ನೀವು ಸಿನಿಮಾ ನೋಡಲು ಶುರುಮಾಡಿದರೆ ಕಡೆಯವರೆಗೂ ಅತ್ತಿತ್ತ ಅಲುಗಾಡುವುದಿಲ್ಲ. ಅಷ್ಟು ಥ್ರಿಲ್ಲಿಂಗ್ ಆಗಿದೆ. ಸಿನಿಮಾ ಮುಗಿದ ಮೇಲೂ ಮತ್ತೆ ಅದರ ಬಗ್ಗೆ ಯೋಚಿಸುತ್ತೇವೆ. ಕಥೆಯನ್ನು ಹಾಗೆ ಹೆಣೆಯಲಾಗಿದೆ.

ಸಿನಿಮಾದ ಕ್ಯಾಮೆರಾ ಕೆಲಸ ಹೇಗಿದೆಯೆಂದರೆ ಸಿನಿಮಾ ಮುಗಿದ ಮೇಲೂ. ಪ್ರತಿಯೊಬ್ಬರೂ ಅತ್ತಿತ್ತ ನೋಡಿ ನನಗೂ ಎಲ್ಲವೂ ಕಾಣಿಸುತ್ತಿದೆಯೇ ಅಥವಾ "ಟನಲ್ ವಿಷನ್" ಸಮಸ್ಯೆ ನನಗೂ ಇದೆಯಾ ಅಂತ ಒಮ್ಮೆಯಾದರೂ ಯೋಚಿಸುತ್ತೇವೆ. ಸಿನಿಮಾ ನಮ್ಮನ್ನು ಆವರಿಸಿಕೊಳ್ಳುವುದೆಂದರೆ ಹೀಗೆಯೇ. ಆತನ ಕಣ್ಣಿನ ಸಮಸ್ಯೆಯಿಂದ ಲಿಫ್ಟ್'ನಲ್ಲಿ ಎದುರಾಗುವ ಪಕ್ಕದ ಮನೆಯಾಕೆಯ ಜೊತೆಗಿನ ಮಿಸ್-ಕಮ್ಯೂನಿಕೇಶನ್, ಆತ ಬೈಕು ಓಡಿಸುವಾಗಿನ ಸಮಸ್ಯೆ, ಪೊಲೀಸು ಎದುರು ಬಂದಾಗ ಅಕ್ಕಪಕ್ಕದವರು ಕಾಣದಿರುವುದು ಎಲ್ಲ ಸೂಕ್ಷ್ಮಗಳನ್ನು ತೋರಿಸಿರುವ ರೀತಿ ನಮಗೇ ಆ ಸಮಸ್ಯೆಯಿದೆಯೇನೋ ಅನ್ನಿಸುವಷ್ಟು ಆ ಸಿನಿಮಾದೊಳಗೆ ಹೋಗಿಬಿಡುತ್ತೇವೆ.

ಸಿನಿಮಾ ಇರುವುದೇ ತೊಂಭತ್ತು ನಿಮಿಷ! "ಕಾಕ ಮುಟ್ಟೈ" ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಗೆದ್ದ ನಿರ್ದೇಶಕ ಮಣಿಕಂಡನ್ ಈ ಚಿತ್ರದ ನಿರ್ದೇಶಕರು. ಅನವಶ್ಯಕ ಎನಿಸುವ ಸಂಭಾಷಣೆಗಳಾಗಲೀ, ಒಂದು ದೃಶ್ಯವಾಗಲಿ ಎಲ್ಲೂ ಇಲ್ಲ. ಹಾಡು ಇಲ್ಲ. ಆದರೆ ಕ್ಷಣಕ್ಷಣಕ್ಕೂ ಕುತೂಹಲ ಮಿಶ್ರಿತ ಭಯವನ್ನು ತನ್ನ ಹಿನ್ನೆಲೆ ಸಂಗೀತದಲ್ಲೇ ಹೇಳುವ ಇಳಯರಾಜ ಅವರ ಕೈಚಳಕವಿದೆ! ಕಲಾವಿದರೆಲ್ಲರೂ ತಮ್ಮ ಪಾತ್ರದೊಳಗೆ ಜೀವಿಸಿದ್ದಾರೆ. ಒಬ್ಬಳು ಕಾಲ್ ಸೆಂಟರಿನ ಉದ್ಯೋಗಿ, ಬೈಕಿನಲ್ಲಿ ಕಲೆಕ್ಷನ್ನಿಗೆಂದು ಹೋಗುವ ಕಣ್ಣಿನ ಸಮಸ್ಯೆಯ ಹುಡುಗ, ಕಡಿಮೆ ಸಂಬಳ ದುಡಿದು ತರುವ ಕುಟುಂಬಗಳಿರುವ ಕಟ್ಟಡ ಎಲ್ಲದರ ಆಯ್ಕೆಗೆ ನಿರ್ದೇಶಕನಿಗೆ ಹ್ಯಾಟ್ಸಾಫ್ ಹೇಳಲೇಬೇಕು.

ಸಿನಿಮಾ ನೋಡಿ......ಇಷ್ಟವಾಗದಿದ್ದರೆ ಕೇಳಿ!


(ತಮಿಳು ಅರ್ಥವಾಗುವವರು ಯೂಟ್ಯೂಬ್ ನಲ್ಲಿ ಈ ಸಿನಿಮಾ ನೋಡಬಹುದು. ಸಬ್-ಟೈಟಲ್ ಇಲ್ಲ. https://www.youtube.com/watch?v=eDczdDF9-Gk)

ಸಂತೋಷ್ ಕುಮಾರ್ ಎಲ್.ಎಂ
21-Mar-2019

Tuesday, March 19, 2019

Tamil Movie: ಓನಾಯುಮ್ ಆಟ್ಟುಕ್ಕುಟ್ಟಿಯುಮ್







ಕೆಲವು ಸಿನಿಮಾಗಳನ್ನು ನೋಡಿದ ಮೇಲೆ ಇಷ್ಟು ಚೆನ್ನಾಗಿದೆಯಲ್ಲ. ಏಕೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ತಂದುಕೊಡಲಿಲ್ಲ ಅನ್ನುವ ಪ್ರಶ್ನೆ ತಲೆಯಲ್ಲಿ ಕೊರೆಯಲು ಶುರುವಾಗುತ್ತದೆ. ಎಷ್ಟು ಯೋಚಿಸಿದರೂ ಅದಕ್ಕೆ ಸಮಂಜಸವಾದ ಉತ್ತರ ದೊರಕುವುದಿಲ್ಲ.


ಇತ್ತೀಚೆಗೆ ನೋಡಿದ ಆ ರೀತಿಯ ಸಿನಿಮಾ "ಓನಾಯುಮ್ ಆಟ್ಟುಕ್ಕುಟ್ಟಿಯುಮ್" (ತೋಳವೂ, ಕುರಿಮರಿಯೂ) . ಮಿಸ್ಕಿನ್ ನಿರ್ದೇಶಿಸಿ, ನಿರ್ಮಾಣ ಮಾಡಿ, ನಟಿಸಿದ ಸಿನಿಮಾ. ಮಿಸ್ಕಿನ್ ಸಿನಿಮಾಗಳೆಂದರೆ ಹೇಳಲೇಬೇಕಿಲ್ಲ. ಕಥೆಯಲ್ಲೇ ಒಂದು ವೇಗವಿರುತ್ತದೆ. ಮುಂದೇನು ಅಂತ ಪ್ರತೀ ದೃಶ್ಯದಲ್ಲೇ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತ ಸಾಗುತ್ತದೆ. ಈ ಸಿನಿಮಾದಲ್ಲೂ ಆ ಬಗೆಯ ವಿಭಿನ್ನ ನಿರೂಪಣೆಯಿದೆ.


ನಸುಕಿನ ಜಾವದಲ್ಲಿ ಗುಂಡೇಟು ತಿಂದವನೊಬ್ಬ ರಸ್ತೆಯ ಬದಿಯಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿರುತಾನೆ. ರಕ್ತ ಹರಿದಿರುತ್ತದೆ. ಹತ್ತಿರಕ್ಕೆ ಬಂದು ನೋಡುವ ಅನೇಕ ವಾಹನ ಸವಾರರು ಹತ್ತಿರ ಬಂದು ನೋಡಿ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಮುಂದೆ ನಡೆಯುತ್ತಾರೆ. ಅದೇ ದಾರಿಯಲ್ಲಿ ಬೈಕಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ಮೆಡಿಕಲ್ ವಿದ್ಯಾರ್ಥಿ ಚಂದ್ರು ಇದನ್ನು ನೋಡಿ ಹತ್ತಿರ ಬಂದು ಆ ವ್ಯಕ್ತಿಯ ನಾಡಿಬಡಿತ ನೋಡುತ್ತಾನೆ. ಇನ್ನೂ ಆತ ಬದುಕಿದ್ದಾನೆ. ರಸ್ತೆಯಲ್ಲಿ ಬರುವ ಅನೇಕ ವಾಹನಗಳಿಂದ ಸಹಾಯ ಕೇಳಿದರೂ ಯಾರೂ ಕೈಜೋಡಿಸುವುದಿಲ್ಲ.


ಕಡೆಗೆ ತಾನೇ ತನ್ನ ಬೈಕಿನಲ್ಲಿ ಹಿಂದೆ ಕೂರಿಸಿಕೊಂಡು ಬ್ಯಾಲೆನ್ಸ್ ಮಾಡುತ್ತ ಹತ್ತಿರದ ಆಸ್ಪತ್ರೆಗೆ ಬರುತ್ತಾನೆ. ಆಸ್ಪತ್ರೆಯ ಸಿಬ್ಬಂದಿ ಯಾರೂ ನೆರವಿಗೆ ಬರುವುದಿಲ್ಲ. ಡ್ಯೂಟಿಯಲ್ಲಿದ್ದ ಡಾಕ್ಟರೂ ಸಹ ತಾನು ಆಪರೇಶನ್ ಒಂದರಲ್ಲಿ ನಿರತನಾಗಿರುವುದಾಗಿ ಹೇಳುತ್ತಾನೆ. ಚಂದ್ರುಗೆ ಕೋಪ ಬಂದು ಅವರಿದ್ದ ಕೊಠಡಿಗೇ ನುಗುತ್ತಾನೆ. ಅಲ್ಲಿ ಡಾಕ್ಟರು ಯಾರೊಂದಿಗೋ ಫೋನ್ ಸಂಭಾಷಣೆಯಲ್ಲಿರುತ್ತಾನೆ. ಚಂದ್ರು ಬೇಡಿಕೊಂಡರೂ, ಬೆದರಿಸಿದರೂ ಇವನಿಗೆ ಬೈದು ಕಳಿಸುತ್ತಾರೆಯೇ ಹೊರತು ಪ್ರಥಮ ಚಿಕಿತ್ಸೆಯನ್ನೂ ಕೊಡುವುದಿಲ್ಲ. ಇದು ಪೊಲೀಸು ಕೇಸು. ಮೊದಲು ಪೊಲೀಸರ ಅನುಮತಿ ಪಡೆದು ಬಾ ಅಂತ ಬೈದು ಕಳಿಸುತ್ತಾರೆ.


ಚಂದ್ರು ಮತ್ತೆ ಆ ವ್ಯಕ್ತಿಯನ್ನು ಕೂರಿಸಿಕೊಂಡು ಹತ್ತಿರದ ಪೊಲೀಸಿನವರ ಬಳಿ ಹೋದರೆ ಇವನ ಮೇಲೆಯೇ ಅನುಮಾನ ತೋರಿಸುತ್ತ ನಿರ್ಲಕ್ಷಿಸುತ್ತಾರೆ. ಅಷ್ಟೇ ಅಲ್ಲ, ಅತ್ತ ಚಂದ್ರು ಒಬ್ಬ ಪೊಲೀಸಿನವನ ಜೊತೆ ಮಾತನಾಡುವಾಗ, ಇತ್ತ ಇನ್ನೊಬ್ಬ ಪೊಲೀಸು ಆ ವ್ಯಕ್ತಿಯ ವಾಚು ಬಿಚ್ಚಿಕೊಳ್ಳುತ್ತಾನೆ. ಜೊತೆಗೆ ಎಸ್ಪಿ ರೌಂಡ್ಸಿನಿಂದ ಮರಳಿ ಬರುವವರೆಗೆ ಕಾಯಬೇಕು ಅಂತ ಸುಮ್ಮನೆ ಕೂರುತ್ತಾರೆ.


ಚಂದ್ರು ಇನ್ನು ತಡ ಮಾಡಿದರೆ ಆ ವ್ಯಕ್ತಿ ಜೀವ ಹೋಗುತ್ತದೆ ಎಂಬ ಅರಿವಾಗುತ್ತದೆ. ಚಂದ್ರು ಮೊದಲೇ ಮೆಡಿಕಲ್ ವಿದ್ಯಾರ್ಥಿ. ಹಾಗಾಗಿ ಬೇಕಾದ ಔಷಧಿ-ಪರಿಕರಗಳನ್ನು ಆಸ್ಪತ್ರೆಯೊಂದರಲ್ಲಿ ಕೊಂಡು ಆ ವ್ಯಕ್ತಿಯನ್ನು ತನ್ನ ಮನೆಗೇ ಕರೆತರುತ್ತಾನೆ. ಅಣ್ಣ-ಅತ್ತಿಗೆಗೆ ಗೊತ್ತಾಗದಂತೆ ಮೇಲಿನ ತನ್ನ ರೂಮಿಗೆ ಹೊತ್ತು ಹೋಗುತ್ತಾನೆ. ಈ ಮಧ್ಯೆ ತನ್ನ ಗೆಳೆಯರಿಗೆ, ಪ್ರೊಫ಼ೆಸರಿಗೆ ಕರೆ ಮಾಡುತ್ತಲೇ ಇರುತ್ತಾನೆ. ರಾತ್ರಿಯಾದ್ದರಿಂದ ಯಾರೂ ಕರೆ ಸ್ವೀಕರಿಸುವುದಿಲ್ಲ. ಪ್ರೊಫ಼ೆಸರ್ ಒಂದು ಹೊತ್ತಿನಲ್ಲಿ ಕರೆ ಸ್ವೀಕರಿಸುತ್ತಾನೆ. ಚಂದ್ರು ಸದ್ಯದ ಪರಿಸ್ಥಿತಿಯನ್ನು ವಿವರಿಸಿದಾಗ ಪ್ರೊಫ಼ೆಸರ್ ಯದ್ವಾತದ್ವಾ ಬೈಯುತ್ತಾನೆ. "ನೀನು ಮಾಡುತ್ತಿರುವುದು ಅಪರಾಧ. ಪೊಲೀಸಿನವರಿಗೆ ಮಾಹಿತಿ ನೀಡದೆ ಗುಂಡು ಬಿದ್ದಿರುವ ವ್ಯಕ್ತಿಗೆ ಚಿಕಿತ್ಸೆ ಕೊಡುತ್ತಿರುವುದು ಮಹಾಪರಾಧ. ನಿನ್ನ ಗುರುವಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ" ಎಂದು ಹೇಳಿ ಕರೆ ಕಟ್ ಮಾಡುತ್ತಾರೆ.


ಐದು ನಿಮಿಷ ಏನೋ ಅರಿವಾದವರಂತೆ ಪ್ರೊಫ಼ೆಸರ್ ತಾನಾಗಿಯೇ ಕರೆ ಮಾಡಿ ಆ ವ್ಯಕ್ತಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ಫೋನಿನಲ್ಲೇ ಹೇಳುತ್ತಾರೆ. ಚಂದ್ರು ತನ್ನ ರೂಮಿನಲ್ಲೇ ಇರುವ ಸೌಲಭ್ಯದಲ್ಲಿ ಒಂದೂವರೆ ಘಂಟೆಗಳ ಕಾಲ ಆ ವ್ಯಕ್ತಿಗೆ ಆಪರೇಶನ್ ಮಾಡಿ ಬುಲೆಟ್ ಹೊರತೆಗೆಯುತ್ತಾನೆ.


ಬೆಳಿಗ್ಗೆ ಚಂದ್ರುಗೆ ಎಚ್ಚರವಾಗುವ ಹೊತ್ತಿಗೆ ಅವನ ರೂಮು ಎಲ್ಲ ಖಾಲಿಯಾಗಿರುತ್ತದೆ. ಆ ವ್ಯಕ್ತಿಯೂ ಮಾಯ. ಅಲ್ಲಿಂದ ಶುರು ಸರ್ಕಸ್. ಪೊಲೀಸಿನವರು ಚಂದ್ರು , ಮತ್ತು ಅವನ ಅಣ್ಣ-ಅತ್ತಿಗೆಯನ್ನು ಬಂಧಿಸಿ ಕರೆದೊಯ್ಯುತ್ತಾರೆ.


ಆಗ ಗೊತ್ತಾಗುವ ವಿಷಯವೆಂದರೆ ಚಂದ್ರು ಚಿಕಿತ್ಸೆ ಕೊಟ್ಟು ಪ್ರಾಣವುಳಿಸಿದ ವ್ಯಕ್ತಿ, ಪೊಲೀಸ್ ಇಲಾಖೆಗೆ ಬೇಕಾದ Most-Wanted-criminal "WOLF". ಹದಿನಾಲ್ಕು ಕೊಲೆ ಕೇಸಿನಲ್ಲಿ ಪ್ರಮುಖ ಆರೋಪಿಯಾದ ಆತ ಎಷ್ಟೋ ವರ್ಷಗಳಿಂದ ಪೊಲೀಸಿನವರಿಂದ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಮೇಲಿಂದಲೂ ಅವನನ್ನು ಎನ್-ಕೌಂಟರ್ ಮಾಡುವ ಆದೇಶ ಬಂದಿರುತ್ತದೆ. ಹಿಂದಿನ ರಾತ್ರಿಯಷ್ಟೇ ಪೊಲೀಸರ ಗುಂಡೇಟು ತಿಂದು ತಪ್ಪಿಸಿಕೊಂಡಿರುತ್ತಾನೆ. ಅಲ್ಲಿಂದ ಮುಂದೆ ಆತನನ್ನು ಕಾಪಾಡುವುದು ಚಂದ್ರು!


ಚಂದ್ರು ತಾನು ನಿರಪರಾಧಿ ಅಂತ ಹೇಳಿದರೂ, ಪೊಲೀಸರು ಆವನ ಮುಖಾಂತರವೇ ಆ ಅಪರಾಧಿಯನ್ನು ಕೊಲೆ ಮಾಡಲು ನಿರ್ಧರಿಸುತ್ತಾರೆ! ಇಲ್ಲದಿದ್ದರೆ ನೀನು ಜೀವನಪೂರ್ತಿ ಜೈಲಿನಲ್ಲೇ ಕೊಳೆಯಬೇಕು ಎಂದು ಬೆದರಿಸುತ್ತಾರೆ.


ಮೆಡಿಕಲ್ ಸ್ಟೂಡೆಂಟ್ ಆದ ಚಂದ್ರುವಿನ ಕೆಲಸ ಮನುಷ್ಯರನ್ನು ಸಾವಿನಿಂದ ಕಾಪಾಡುವುದು ಅಷ್ಟೇ. ಆದರೆ ಕಾಪಾಡಲು ಹೋಗಿ ಅವನಿಂದ ಸಿಕ್ಕಿಹಾಕಿಕೊಂಡಿದ್ದಕ್ಕಾಗಿ ಅವನ ಮೇಲೆ ಚಂದ್ರುವಿಗೆ ಕೋಪವಿದೆ. ಆದ್ದರಿಂದ ಆತ ಈ ಕೊಲೆ ಮಾಡಲು ಒಪ್ಪಿಕೊಳ್ಳುತ್ತಾನೆಯೇ? ಈ ಕಥೆಯಲ್ಲಿ ಆತ ತೋಳವೋ? ಕುರಿಮರಿಯೋ? Wolf ಒಳ್ಳೆಯವನೋ ಕೆಟ್ಟವನೋ?


ಈ ಮೇಲೆ ಹೇಳಿದ್ದು ಸಿನಿಮಾದ ಆರಂಭದ ಕೆಲ ದೃಶ್ಯಗಳಷ್ಟೇ. ಮುಂದೆ ಸಿನಿಮಾ ಹೇಗೆ ಸಾಗುತ್ತದೆ ಅಂತ ಸಿನಿಮಾ ನೋಡಿಯೇ ತಿಳಿಯಬೇಕು. ಒಂದು ದೃಶ್ಯದಲ್ಲಂತೂ Wolf ಪಾತ್ರ ಮಾಡಿದ ಮಿಸ್ಕಿನ್ ಇಡೀ ಚಿತ್ರದ ಸಾರವನ್ನು ಪುಟ್ಟ ಕಥೆಯಲ್ಲಿ ಹೇಳಿಬಿಡುತ್ತಾರೆ. ಸಿನಿಮಾದ ಪಾತ್ರಗಳ ಹಿನ್ನೆಲೆಯನ್ನು ಆ ಕಥೆಯಿಂದಲೇ ಅರ್ಥೈಸಿಕೊಳ್ಳಬೇಕು. ಅಷ್ಟು ವಿಭಿನ್ನವಾಗಿದೆ ನಿರೂಪಣೆ.


ಸಿನಿಮಾದಲ್ಲಿ ಹಾಡುಗಳಿಲ್ಲ! ಹೀರೋಯಿನ್ ಇಲ್ಲ! ಆದರೆ ಹಿನ್ನೆಲೆ ಸಂಗೀತವಂತೂ "ಇದ್ಯಾರಪ್ಪ ಇಷ್ಟು ಚೆನ್ನಾಗಿ ಮಾಡಿದ್ದಾರೆ" ಅಂತ ನೋಡೋಣವೆನಿಸುತ್ತದೆ. ನೋಡಿದರೆ ಅದು "ಇಳಯರಾಜ"! ಮುಂದೆ ಹೇಳಬೇಕಿಲ್ಲ.


Once Again ಸಿನಿಮಾ ಮುಗಿದ ಮೇಲೆ, ಇದ್ಯಾಕೆ ಅಷ್ಟು ಯಶಸ್ವಿಯಾಗಲಿಲ್ಲ ಅನ್ನುವ ಪ್ರಶ್ನೆ ನಮ್ಮನ್ನು ಕಾಡತೊಡಗುತ್ತದೆ. ಈ ಸಿನಿಮಾ 2013ರಲ್ಲಿ ಬಿಡುಗಡೆಯಾಗಿದ್ದು. ವಿಭಿನ್ನ ಸಿನಿಮಾಗಳನ್ನು ನೋಡಬೇಕೆನಿಸುವವ್ರಿಗೆ ಇದೊಂದು ಉತ್ತಮ ಆಯ್ಕೆ. ನೋಡಬೇಕೆನಿಸಿದರೆ ಯೂಟ್ಯೂಬಿನಲ್ಲಿದೆ. ನೋಡಿ.


#santhuLm
24-Feb-2019

Timil Movie: ಪರಿಯೇರುಮ್ ಪೆರುಮಾಳ್





ರಜನೀಕಾಂತ್ ಅಭಿನಯದ ಕಬಾಲಿ ಚಿತ್ರ ಬಿಡುಗಡೆಯಾದಾಗ ನಾನು ಮಲೇಷ್ಯಾದಲ್ಲಿದ್ದೆ. ಇಲ್ಲಿಗಿಂತ ಒಂದು ದಿನ ಮೊದಲೇ ಅಲ್ಲಿ ಬಿಡುಗಡೆಯಾಗಿತ್ತು. ಅದ್ಯಾವ ಪರಿ ಜನ ಆ ಸಿನಿಮಾ ನೋಡಲು ಮುಗಿಬಿದ್ದಿದ್ದರು ಅಂತೀರಿ. ಆ ಕಥೆಯೂ ಮಲೇಷ್ಯಾ ತಮಿಳಿಯನ್ನರ ಮೇಲೆ ನಡೆಯುವ ದೌರ್ಜನ್ಯವನ್ನು ಹೇಳುತ್ತದಲ್ಲ. ಆದರೆ ನನಗೆ ರಜನೀಕಾಂತ್ ಸಿನಿಮಾ ನೋಡಿದ ಹಾಗಾಗಲಿಲ್ಲ. ಕಾರಣ ರಜನೀಕಾಂತ್ ಇದ್ದರೂ ನಿರ್ದೇಶಕ ತಾನಂದುಕೊಂಡದ್ದನ್ನು ದೃಶ್ಯರೂಪದಲ್ಲಿ ತೋರಿಸಲು ಸೋತಿದ್ದ.

ಆದರೆ ಅದೇ ನಿರ್ದೇಶಕ, ತನ್ನ ಮುಂದಿನ ಸಿನಿಮಾ ಕಾಲಾದಲ್ಲಿ ಈ ತಪ್ಪನ್ನು ಮಾಡಲಿಲ್ಲ. ರಜನೀಕಾಂತ್ ಸಿನಿಮಾದೊಳಗೆ ತಾನು ಹೇಳಬೇಕಾದ್ದನ್ನು ಹೇಳಿದ್ದ. ಆದರೆ ಇನ್ನೂ ಬೇರೆ ರೀತಿಯಲ್ಲಿ ಹೇಳಬಹುದು ಅಂತ ನನಗನ್ನಿಸಿತ್ತು. ಆ ಸಿನಿಮಾದಲ್ಲಿ ಬರುವ ಅನೇಕ ವಿಷಯಗಳು ಸಿನಿಮಾ ಭಾಷೆಯನ್ನು ಅರಿತಿರುವ ಮಂದಿಗಷ್ಟೇ ಅರ್ಥವಾಗಲು ಸಾಧ್ಯ ಅನ್ನಿಸಿತ್ತು.

ಹೇಳಬೇಕು ಅಂತ ಅನ್ನಿಸಿದ್ದನ್ನು ಸಿನಿಮಾದೊಳಗೆ ಕಷ್ಟಪಟ್ಟು ತುರುಕಲಾಗುವುದಿಲ್ಲ. ಹಾಗೆ ಮಾಡಿದರೂ ಒಟ್ಟಾರೆ ಸಿನಿಮಾ ನೋಡುವಾಗ ತನ್ನ ಮೂಲ ಉದ್ದೇಶವನ್ನೇ ಮರೆತಿರುತ್ತದೆ. ಹಾಗಾದಾಗಲೇ ಪ್ರೇಕ್ಷಕ ನಿರಾಸೆಗೊಂಡು "ಇವನೇನೋ ಬೇಕು ಅಂತ ಈ ಥರ ಸಿನಿಮಾ ತೆಗೆದಿದ್ದಾನೆ" ಅಂತ ಬೈಕೊಂಡು ಹೋಗುತ್ತಾನೆ. ಆದರೆ ಅದೇ ಪ.ರಂಜಿತ್ ನಿರ್ಮಾಣದಲ್ಲಿ ಬಂದ "ಪರಿಯೇರುಮ್ ಪೆರುಮಾಳ್" ಸಿನಿಮಾದಲ್ಲಿ ನಾನಂದುಕೊಂಡ ನಿರೀಕ್ಷೆಗಳಿಗೆಲ್ಲ ಉತ್ತರ ಸಿಕ್ಕಿತು. ಕಡೆಯವರೆಗೂ ನಮ್ಮನ್ನು ಹಿಡಿದಿಟ್ಟುಕೊಳ್ಳುವ ಕಥೆ. ಮಾರಿ ಸೆಲ್ವರಾಜ್ ನಿರ್ದೇಶನದ್ದು. ಜಾತಿಸಮಸ್ಯೆಯ ಬಗ್ಗೆ ಹೇಳುತ್ತ ಇನ್ನೇನೋ ಆಗಬಹುದಿದ್ದ ಸಿನಿಮಾವನ್ನು ಕಮರ್ಶಿಯಲ್ ಅನ್ನುವ ರೀತಿಯಲ್ಲೇ ಹೇಳುವಲ್ಲಿ ಸಫಲರಾಗುತ್ತಾರೆ. ಅವರ ಉದ್ದೇಶ ವಾಸ್ತವಕ್ಕೆ ಕನ್ನಡಿ ಹಿಡಿಯುವುದಷ್ಟೇ. ಮುಂದೇನಾಗಬೇಕು ಅನ್ನುವ ಪರಿಹಾರವಲ್ಲ. ಕುರುಡನಂತಿರುವ ಸಮಾಜಕ್ಕೆ ಕಡೇಪಕ್ಷ ಹೀಗಾದರೂ ತೋರಿಸಿದರೆ, ಅದರಿಂದ ಮನುಷ್ಯತ್ವದ ಕಿಡಿಯೊಂದು ಹೊತ್ತಿಕೊಂಡು ಆ ಸಮಸ್ಯೆಯ ಪರಿಹಾರದತ್ತ ಮನಸ್ಸು ಮಾಡಿದರೆ ಅದಕ್ಕಿಂತ ಬೆಳವಣಿಗೆ ಇನ್ನೊಂದಿಲ್ಲ. ಇಂಥ ಸಿನಿಮಾಗಳು ಬರಬೇಕು. ಮತ್ತು ಹೀಗೆಯೇ ಇರಬೇಕು.

ಕಥೆಯಲ್ಲಿ ಅನಾವಶ್ಯಕ ಸಂಭಾಷಣೆಗಳಿಲ್ಲ. ಸಂಭಾಷಣೆಯನ್ನೂ ಕೋಪವನ್ನೂ ಕೇವಲ ದೃಶ್ಯದಲ್ಲಿ ತೋರಿಸುವುದಷ್ಟೆ ಇಲ್ಲಿಯ ನಿರ್ದೇಶಕನ ಗುರಿ. ಅದರಲ್ಲಿ ಆತ ಗೆಲ್ಲುತ್ತಾನೆ ಕೂಡ. ನಾಯಕನ ಪ್ರೀತಿಯ ನಾಯಿಯನ್ನು ಕೊಂದಾಗಲೂ ಆತ ಮಾತಿನಲ್ಲಿ ಬೈಯುತ್ತ ಕೂರುವುದಿಲ್ಲ.ಆದರೆ ಅಲ್ಲೊಂದು ಅಗ್ನಿಪರ್ವತ ಕೋಪವನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತದೆ. ಸಿನಿಮಾ ನೋಡಲು ಕೂತ ಈ ಮೊದಲ ದೃಶ್ಯದಲ್ಲೇ ಇಡೀ ಚಿತ್ರ ನೋಡಲು ಬೇಕಾದ ಮನಸ್ಥಿತಿಯನ್ನು ಅಲ್ಲಿ ಸೃಷ್ಟಿಸಲಾಗುತ್ತದೆ. ಆತನನ್ನು ಕಾಲೇಜಿನಲ್ಲಿ ಇಂಗ್ಲೀಷಿನಲ್ಲಿ ಹೇಳುವ ನೋಟ್ಸನ್ನು ಬರೆದುಕೊಳ್ಳುತ್ತಿಲ್ಲ ಅಂತ ಕೋಪದಲ್ಲಿ ಹೊರಗೆ ಕಳಿಸುವಾಗಲೂ, ಆತ ಅವಮಾನದಲ್ಲೂ ಕೆಟ್ಟದಾಗಿ ಕೂಗಾಡುವುದಿಲ್ಲ. ಬದಲಿಗೆ ಬೇರೆಯವರ ನೋಟ್ಸನ್ನೂ ಒಮ್ಮೆ ಪರೀಕ್ಷಿಸಿ ಅಂತ ಅವಲತ್ತುಕೊಳ್ಳುತ್ತಾನೆ. ಆತನ ಉದ್ದೇಶ ಸತ್ಯವನ್ನು ತೋರಿಸುವುದಷ್ಟೇ ಹೊರತು ಆ ಉಪನ್ಯಾಸಕರ ಮೇಲೆ ಕೂಗಾಡುವುದಲ್ಲ. ಸಿನಿಮಾದ ಮುಖ್ಯ ದೃಶ್ಯವೊಂದರಲ್ಲಿ ಆತ ಏಕೆ ಮಾತನಾಡಲು ಹಿಂಜರಿಯುತ್ತೇನೆ(ವೆ) ಅಂತ ಹೇಳುತ್ತಾನೆ. ಪ್ರೇಕ್ಷಕ ಅದು ಕೇವಲ ಆ ದೃಶ್ಯಕ್ಕಷ್ಟೇ ಹೇಳುವ ಸಂಭಾಷಣೆಯಲ್ಲ ಅಂತ ಅರ್ಥೈಸಿಕೊಳ್ಳುವಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿದೆ.

ಚಿತ್ರದಲ್ಲಿ ಬರೀ ಕಾಲೇಜು ಜೀವನವನ್ನಷ್ಟೇ ತೋರಿಸದೆ, ಅಲ್ಲಲ್ಲಿ ಊರಿನಲ್ಲಿ ನಡೆಯುವ ಜಾತಿಜಗಳಗಳ ಹತ್ಯೆಗಳ ವಿವಿಧ ಮುಖಗಳನ್ನು ಮಧ್ಯೆ ಮಧ್ಯೆ ತೋರಿಸುತ್ತ ತಾನು ಹೇಳುವ ವಿಷಯದ ತೀವ್ರತೆಯನ್ನು ಹೆಚ್ಚುಮಾಡುತ್ತಾರೆ. ಚಿತ್ರದ ಅನೇಕ ದೃಶ್ಯಗಳನ್ನು ಅದು ಹೇಳುವ ಸಂದೇಶಗಳನ್ನು ಒಂದೊಂದಾಗಿ ಚರ್ಚಿಸಬಹುದು. ಆದರೆ ಇವೆಲ್ಲ ಅಂಶಗಳಿದ್ದೂ ಒಟ್ಟಾರೆಯಾಗಿಯೂ ಇದು ಸಂಪೂರ್ಣ ಸಿನಿಮಾದಂತೆ ಭಾಸವಾಗುತ್ತದೆ.

ಕಬಾಲಿಯಲ್ಲಿ ನಾಯಕ ಹಾಕಿಕೊಳ್ಳುವ ಬಟ್ಟೆಯ ಬಗ್ಗೆಯೂ ಸಾಂಕೇತಿಕವಾಗಿ ತೋರಿಸಿದ್ದೇವೆ ಅಂತ ನಿರ್ದೇಶಕ ಹೇಳಿದ್ದರು. ಹಾಗೆ ಹೇಳಿದ್ದರೂ ನಮಗೆ ಮನಸ್ಸಿಗೆ ಅವು ಅಷ್ಟೊಂದು ತಾಕುವುದಿಲ್ಲ. ಆದರೆ ಇಲ್ಲಿ ಹಾಗೆ ತೋರಿಸುವ ಕಡೆಯ ದೃಶ್ಯದ ಎರಡು ಲೋಟಗಳ ರೂಪಕಗಳು, ಪೆರುಮಾಳ್ ರೈಲಿನ ಹಳಿಯ ಮೇಲೆ ಬಿದ್ದಿದ್ದಾಗ ಅವನ ನಾಯಿ ಕರುಪ್ಪಿಯಂತೆ ಬರುವ ರೂಪಕಗಳು, ತಾನು ಮುಂದಿನ ಬೆಂಚಿಗಾಗಿ ಆ ಹುಡುಗರ ಮಧ್ಯೆ ಜಗಳ ನಡೆದಾಗ ಪೆರುಮಾಳ್ "ಯಾಕೆ, ನಾವು ಮುಂದೆ ಬರಬಾರದೇ?" ಅಂತ ಕೇಳುವಾಗ ಆತ ಬೆಂಚಿನ ಬಗ್ಗೆ ಹೇಳುತ್ತಿಲ್ಲ ಅನ್ನುವಂತಹ ವಿಷಯಗಳು, ......ಸಾಮಾನ್ಯ ಪ್ರೇಕ್ಷಕನಾಗಿಯೇ ಅರ್ಥೈಸಿಕೊಳ್ಳಬಹುದು.

ಪುಟ್ಟ ಹಳ್ಳಿಯಿಂದ ಸಮುದಾಯವೊಂದರಿಂದ ಓದಲು ಬರುವ ಹುಡುಗನನ್ನು ಅವನ ಸುತ್ತಲಿನ ಘಟನೆಗಳು, ಸಮಾಜ ಹೇಗೆಲ್ಲ ಕಾಡುತ್ತವೆ ಅನ್ನುವುದನ್ನು ಗೋಳು ಅನ್ನುವ ಹಾಗೆ ತೋರಿಸದೆ, ಲಘು ಹಾಸ್ಯದಿಂದಲೇ ತೋರಿಸಲಾಗಿದೆ. ಆದರೆ ಎಲ್ಲಿಯೂ ಆ ಸಮಸ್ಯೆಗಳು ಅವಾಸ್ತವಿಕ ಅನ್ನಿಸುವುದಿಲ್ಲ. ಡಾಕ್ಯುಮೆಂಟರಿ ಅನ್ನುವಂತಹ ವಿಷಯವನ್ನು ಸಿನಿಮಾ ಆಗಿ ಮಾರ್ಪಡಿಸಲು ಈ ಬಗೆಯ ದೃಶ್ಯಗಳು ಅವಶ್ಯಕ. ಜತೆಗೆ ಸಿನಿಮಾ ನೋಡುವಾಗ ಇದ್ಯಾವುದೋ ದೇಶದ ಸಿನಿಮಾದ ಹಾಗೆ ಅನ್ನಿಸುವುದಿಲ್ಲ. ನಮ್ಮ ಬೀದಿಯಲ್ಲೇ ನಡೆಯುತ್ತಿದೆ ಅನ್ನಿಸುತ್ತದೆ. ಅದಕ್ಕೆ ಕಾರಣ ನಿರ್ದೇಶಕ ತನ್ನದೇ ಸುತ್ತಲಿನ ವಾತಾವರಣವನ್ನು ಕಟ್ಟಿಕೊಡುವ ರೀತಿ. ಈ ಸಿನಿಮಾದಲ್ಲಿ ಬರುವ ಆ ಖಳ, ನಾಯಕನ ತಂದೆ, ನಾಯಕಿ, ಅವರ ಮೆಚ್ಚಿನ ಉಪನ್ಯಾಸಕರು, ಪ್ರಿನ್ಸಿಪಾಲರು, ಪ್ರೀತಿಯ ನಾಯಿ ಕರುಪ್ಪಿ......ಎಲ್ಲರ ಪಾತ್ರಗಳು ಮನಸ್ಸಿನಲ್ಲಿ ಉಳಿಯುತ್ತವೆ. ಮತ್ತು ಅವುಗಳನ್ನು ಚಿತ್ರಿಸಿರುವ ರೀತಿಯೂ ವಿಭಿನ್ನ.

ಮುಕ್ತಾಯಕ್ಕೂ ಮುನ್ನ ನಾಯಕ ಹುಡುಗಿಯ ತಂದೆಗೆ ಹೇಳುತ್ತಾನೆ " ನೀವು ನೀವಾಗಿಯೇ ಇರುವವರೆಗೂ, ನಾನು ಯಾವಾಗಲೂ ನಾನಾಗಿಯೇ ಇರಬೇಕು ಅಂತ ಎದುರು ನೋಡುವವರೆಗೂ ಇಲ್ಲಿ ಯಾವುದೂ ಬದಲಾಗದು" ಅಂತ ಹೇಳುತ್ತಾನೆ. ಅದೊಂದು ಡೈಲಾಗ್ ಹಾಗೆಯೇ ಮನಸ್ಸಿನಲ್ಲಿ ಉಳಿಯುತ್ತದೆ.

-----------------------

ಸಿನಿಮಾ ನೋಡುವಾಗ "ವ್ಹಾ" ಅನ್ನಿಸಿದ ಸೂಪರ್ ಸೀನ್:

ಪೆರುಮಾಳ್ ಲಾ ಕಾಲೇಜಿಗೆ ಅಡ್ಮಿಷನ್'ಗೆಂದು ತನ್ನ ತಾಯಿಯೊಂದಿಗೆ ಹಳ್ಳಿಯಿಂದ ನಗರಕ್ಕೆ ಬರುತ್ತಾನೆ. ಆತ ಮುಗ್ಧ.

"ಗುಡ್, ಈ ಕಾಲೇಜಿನಲ್ಲಿ ಸೀಟು ಸಿಗೋದೆ ಕಷ್ಟ. ಎಷ್ಟು ಜನ ಕಷ್ಟಪಡುತ್ತಾರೆ?! ನಿನಗೆ ಸೀಟು ಸಿಕ್ಕಿದೆ" ಅಂತ ಸಂತೋಷದ ವಿಷಯವನ್ನು ಹೇಳುವ ಪ್ರಿನ್ಸಿಪಾಲರು "ಓದಿದ ಮೇಲೆ ಏನಾಗಬೇಕು ಅಂದುಕೊಂಡಿದ್ದೀಯ?" ಅಂತ ಕೇಳ್ತಾರೆ.

ಆಗ ಅವನು ತಡವರಿಸದೆ "ಡಾಕ್ಟರ್" ಅನ್ನುತ್ತಾನೆ.

ಪ್ರಿನ್ಸಿಪಾಲ್'ಗೆ ಶಾಕ್! ಒಳಗೊಳಗೆ ಅವನ ಪೆದ್ದುತನದ ಬಗ್ಗೆ ನಗುತ್ತ "ಸರಿ ಹೊರಡಿ" ಅನ್ನುತಾರೆ. ಅವರ ತಾಯಿ ಆ ಕೊಠಡಿಯಿಂದ ಹೊರಗೆ ಹೋದ ಮೇಲೆ ಅವನನ್ನು ಮತ್ತೆ ಒಳಗೆ ಕರೆದು, "ಲೇ, ನೀನು ಸೇರಿಕೊಳ್ಳುತ್ತ ಇರೋದು ಲಾ ಕಾಲೇಜು. ಇಲ್ಲಿ ಓದಿಯಾದ ಮೇಲೆ ಲಾಯರ್ ಆಗೋದು. ಡಾಕ್ಟರಲ್ಲ" ಅನ್ನುತ್ತ ಹೇಳುತ್ತಾರೆ.

ಮಧ್ಯೆಯೇ ಅವರ ಮಾತನ್ನು ತಡೆದ ಪೆರುಮಾಳ್,
" ಸರ್, ನಾನು ಹೇಳಿದ್ದು ಬರೀ ಡಾಕ್ಟರ್ ಅಲ್ಲ.
ಡಾಕ್ಟರ್ ಬಿ.ಆರ್. ಅಂಬೇಡ್ಕರ್" ಅನ್ನುತ್ತಾನೆ!!
------------------------------
ಇದೊಂದು ಗೋಳಿನ ಸಿನಿಮಾ ಅಲ್ಲ. ಆದರೆ ಖಂಡಿತ ನಮ್ಮ ಕಣ್ತೆರೆಸುವ ಸಿನಿಮಾ. ನೋಡುವಾಗ ಅನ್ನಿಸಿದ್ದನ್ನು ಬಿಡಿಬಿಡಿಯಾಗಿ ಹೇಳಿದ್ದೇನೆ.. ಮಿಸ್ ಮಾಡದೇ ನೋಡಿ.

Amazon Prime ನಲ್ಲಿದೆ
------------------------------

ಸಂತೋಷ್ ಕುಮಾರ್ ಎಲ್.ಎಂ.
01-Mar-2019

Tamil Cinema:ಜೋಕರ್








ಅನೇಕ ಸಲ ಈ ಸಿನಿಮಾ ಸಿಕ್ಕಾಪಟ್ಟೆ ಗಂಭೀರ ಕಥೆಯುಳ್ಳದ್ದು ಅಂತ ಹೋಗುತ್ತೇವೆ. ನೋಡಿದರೆ ಸಿಲ್ಲಿ ಸಿಲ್ಲಿ ಅನಿಸುವಷ್ಟು ಕಾಮಿಡಿಯಾಗಿರುತ್ತದೆ. ಕೆಲವು ಸಿನಿಮಾಗಳ ಹೆಸರನ್ನು ನೋಡಿ ಇದು ತಿಳಿಹಾಸ್ಯವಿರಬಹುದಾದ ಸಿನಿಮಾ ಅಂದುಕೊಳ್ಳುತ್ತೇವೆ. ಆದರೆ ಆ ಸಿನಿಮಾ ನಗಿಸುತ್ತಲೇ ಗಂಭೀರವಾದ ವಿಷಯವೊಂದನ್ನು ಹೇಳುತ್ತಿರುತ್ತದೆ. ತಮಿಳಿನ "ಜೋಕರ್" ಈ ಎರಡನೇ ಧಾಟಿಯ ಸಿನಿಮಾ.


ಶಂಕರ್ ಸಿನಿಮಾ 'ಅನ್ನಿಯನ್' ಅನ್ನು ನೀವು ನೋಡಿರಬಹುದು. ಅಲ್ಲಿ ಸಮಾಜದಲ್ಲಿ ನಡೆಯುವ ಚಿಕ್ಕಪುಟ್ಟ ಭ್ರಷ್ಟಾಚಾರಗಳೇ ನಾಯಕನ ಮನಸ್ಸಿಗೆ ನಾಟಿ ಆ ಸಣ್ಣ ಅಪರಾಧಗಳನ್ನು ಮಾಡಿದವರನ್ನೇ ಅಟ್ಟಾಡಿಸಿಕೊಂಡು ಹೊಡೆಯುತ್ತಾನೆ. ಎದುರಾಳಿ ಅದ್ಯಾವ ಪ್ರಭಾವೀ ಶಕ್ತಿಶಾಲಿ ವ್ಯಕ್ತಿಯಾಗಿರಲಿ. ಸೂಪರ್-ಹೀರೋನಂತೆ ಎಲ್ಲಿಂದಲೋ ಬಂದು ದಾಳಿಮಾಡಿ ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ. ನಿರ್ದೇಶಕ ಶಂಕರ್'ಗೆ ಸತ್ಯಾಗ್ರಹ ಮಾಡಿಸುವುದರಲ್ಲಿ ಆಸಕ್ತಿಯಿಲ್ಲ. ಅಷ್ಟು ವ್ಯವಧಾನವೂ ಇಲ್ಲ. ಅವನಿಗೆ ಬೇಕಾಗಿರುವುದು ಈ ಕ್ಷಣದ ಪರಿಹಾರ. ಅದಕ್ಕೆ ಆತ ಹೀರೋನ ಕೈಗೆ ಯಾವ ಆಯುಧವನ್ನಾದರೂ ಕೊಡಬಲ್ಲ.


ಆದರೆ ಜೋಕರ್ ಸಿನಿಮಾದ ಹೀರೋ ಆ ಬಗೆಯ ಸೂಪರ್ ಹೀರೋ ಅಲ್ಲ. ಆತ ಒಬ್ಬ ಸಾಮಾನ್ಯ ಮನುಷ್ಯ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ಮನುಷ್ಯನೇ ಸೂಪರ್ ಹೀರೋ ಎಂಬ ಸತ್ಯವನ್ನು ಅರಿತುಕೊಂಡವ. ತಾನೇ ಈ ವ್ಯವಸ್ಥೆಯ ಆಧಾರಸ್ಥಂಭವೆಂಬಂತೆ ಪ್ರತಿಯೊಂದನ್ನು ಹಿಂಜರಿಕೆಯಿಲ್ಲದೆಯೇ ಪ್ರಶ್ನಿಸಬಲ್ಲವ. ಅನ್ಯಾಯವಾದಲ್ಲಿ ಕಾನೂನಾತ್ಮಕವಾಗಿಯೇ ಅದಕ್ಕೊಂದು ಪರಿಹಾರ ಹುಡುಕಬಲ್ಲೆ ಅಂತ ಹೊರಡುವವ. ಕಿತ್ತುಹೋದ ರಾಜಕೀಯ ವ್ಯವಸ್ಥೆಯಲ್ಲಿ ಏನೂ ಆಗದಿದ್ದಾಗ ಜನರ ಕಣ್ತೆರೆಸಲು ಮತ್ತು ಜನಪ್ರತಿನಿಧಿಗಳ ನಿದ್ರೆಗೆಡಿಸಲು ಗಾಂಧೀತತ್ವವನ್ನು ಬಳಸಬಹುದು ಎಂಬ ವಿಶ್ವಾಸವುಳ್ಳವ. ಒಟ್ಟಿನಲ್ಲಿ ಏನಾದರೂ ತಪ್ಪು ಎಂದು ಕಂಡುಬಂದಲ್ಲಿ ಹಿಂದೆಮುಂದೆ ನೋಡದೇ ಮುನ್ನುಗ್ಗುವವ.


ಇವನ್ನೆಲ್ಲ ಒಬ್ಬಾತ ಮಾಸ್ ಹೀರೋ ಆಗಿ ಮಾಡುತ್ತಾನೆ ಎಂದು ಊಹಿಸಿದರೆ ತಪ್ಪಾಗುತ್ತದೆ. ಒಬ್ಬಾತ ತಾನು ಈ ದೇಶದ ರಾಷ್ಟ್ರಪತಿ ಎಂದು ತನ್ನನ್ನು ತಾನು ಘೋಷಿಸಿಕೊಂಡು ಅದರಂತೆಯೇ ಹಾವಭಾವ ತೋರಿಸುತ್ತ ಛತ್ರಿಯಿರುವ ಟಿವಿಎಸ್ ಮೊಪೆಡ್ ಮೇಲೆ ಕೂತು ಗಾಂಭೀರ್ಯದಿಂದ ಹೊರಡುವಾಗ ನಕ್ಕು ಸಾಕಾಗುತ್ತೇವೆ. ಆ ಸಿನಿಮಾದೊಳಗೂ ಅವನ ಪರಿಪಾಟಲನ್ನು ನೋಡಿ ನಗುವವರೇ! ಆದರೆ ಒಂದೊಂದು ದೃಶ್ಯ ಮುಗಿದಂತೆ ಆ ಹಾವಭಾವದ ಹಿಂದಿನ ಗಂಭೀರತೆ ಅರ್ಥವಾಗತೊಡಗುತ್ತದೆ. ನಂತರ ಆ ವ್ಯಕ್ತಿಯ ಹಿನ್ನೆಲೆ ಗೊತ್ತಾದಾಗ ಮನಸ್ಸು ಆರ್ದ್ರವಾಗುತ್ತದೆ. ನಾವು ಊಹಿಸುವಂತೆಯೇ ನಗ್ನ ಸಮಾಜದ ಮಧ್ಯೆ ನಿಂತ ಬಟ್ಟೆ ತೊಟ್ಟವ ಎಲ್ಲರೆದುರು ತನ್ನನ್ನು ಸಮರ್ಥಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲೂ ತನ್ನ ನಿಲುವನ್ನು ಬದಲಾಯಿಸಿಕೊಳ್ಳುವುದಿಲ್ಲ. ಕಡೆಗೆ ಆ ನಗ್ನ ಸಮಾಜ ಅವನನ್ನು ನೆಲಕ್ಕೆ ನೂಕಿ ಅವನ ಕಳೇಬರದ ಮೇಲೆ ನಡೆಯುತ್ತದೆ.


ಸಿನಿಮಾದ ಅಂತ್ಯದಲ್ಲಿ ನೋಡುಗ ದೊರೆಗಳು ಮುಖ ಒರೆಸಿಕೊಳ್ಳುವಂತೆ ವಸ್ತುವಿಷಯವನ್ನು ಹೇಳಲಾಗುತ್ತದೆ. ಸಿನಿಮಾದಿಂದ ಎದ್ದು ಬರುವಾಗ ನೋಡುಗ ಇನ್ನು ಮುಂದೆ ಸಮಾಜದ ಸಮಸ್ಯೆಯ ಬಗ್ಗೆ ಯಾರಾದರೂ ಸೊಲ್ಲೆತ್ತಿದರೆ ಅವರನ್ನು ಜೋಕರ್'ನಂತೆ ನೋಡುವುದಿಲ್ಲ ಅಂತ ಪ್ರತಿಜ್ಞೆ ಮಾಡುತ್ತಾನೆ. ಅದು ಈ ಸಿನಿಮಾವನ್ನು ಸಮರ್ಥವಾಗಿ ಹೇಳಿರುವ ರೀತಿ. ಪ್ರಶ್ನೆ ಮಾಡುವವರನ್ನು ಜೋಕರ್'ನನ್ನಾಗಿ ಮಾಡುವ ಕೆಟ್ಟ ಬೆಳವಣಿಗೆಗಳನ್ನು ಈ ಸಿನಿಮಾ ಸಂಪೂರ್ಣವಾಗಿ ಬೆತ್ತಲು ಮಾಡುತ್ತದೆ. ಸಿನಿಮಾದ ಕೊನೆಯಲ್ಲೇ ಆ ಸಿನಿಮಾದ ಶೀರ್ಷಿಕೆ ಅರ್ಥವಾಗುವುದು ಕೂಡ.


ಈ ಸಿನಿಮಾದಲ್ಲಿ ನನಗಿಷ್ಟವಾಗಿದ್ದು ಯಾವುದೇ ಅಜೆಂಡಾ ಅಂತ ಇಟ್ಟುಕೊಂಡು ಮಾಡಿದ ಸಿನಿಮಾವಲ್ಲ. ಕೆಲವು ನಿರ್ದೇಶಕರ ಕಥೆ ಹೇಳುವಿಕೆಯಲ್ಲೇ ಅವರು ಯಾವ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾನೆ ಅಂತ ಹೇಳಬಹುದು. ಆದರೆ ಇಲ್ಲಿಯ ನಿರ್ದೇಶಕ ಕೇವಲ ಬಡವರ ಪರ, ನಿರ್ಗತಿಕರ ಪರ, ಪ್ರಜಾಪ್ರಭುತ್ವದ ಸರ್ವಶಕ್ತ ಮತದಾರ ಪ್ರಭುವಿನ ಪರ, ಅನ್ಯಾಯದ ವಿರುದ್ಧವಾಗಿ ಮಾತನಾಡುತ್ತನೆಯೇ ಹೊರತು ಅದಕ್ಕೆ ಯಾವ ಪಕ್ಷದವರು ಕಾರಣ ಅಂತ ಹೇಳುವುದರಲ್ಲಿ ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಅವ ಹೇಳುವ ಸಮಸ್ಯೆಗಳೂ ದಶಕಗಳಿಂದಲೇ ನಮ್ಮ ಮಧ್ಯೆ ಹೊಕ್ಕಿವೆ. ಪರಿಹರಿಸದಿದ್ದರೆ ಮುಂದೆಯೂ ಇರುತ್ತವೆ. ಈ ಬಗೆಯ ಸಿನಿಮಾಗಳು ಇನ್ನೂ ಮೂವತ್ತು ವರ್ಷಗಳ ನಂತರ ನೋಡಿದ ಮೇಲೂ ಪ್ರಶ್ನೆ ಮಾಡುವ ಮನೋಭಾವವನ್ನು ಜನಸಾಮಾನ್ಯರಲ್ಲಿ ತುಂಬಬೇಕು.


ಸಿನಿಮಾದಲ್ಲಿ ಕಥೆ, ಅದನ್ನು ಹೇಳಿರುವ ರೀತಿ, ಸಂಗೀತ, ನಿರ್ದೇಶನ, ಕಲಾವಿದರು, ಸಂಭಾಷಣೆ, ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ. ಆರ್ಟ್ ಸಿನಿಮಾ ನೋಡಬೇಕು ಅನ್ನುವವರಿಗೂ, ಕಥೆಯಿರುವ ಸಿನಿಮಾ ನೋಡಬೇಕು ಅಂದುಕೊಳ್ಳುವವರಿಗೂ, ವಿಭಿನ್ನ ಸಿನಿಮಾದ ತುಡಿತದಲ್ಲಿರುವವರಿಗೂ ಇದು ಖಂಡಿತ ನೋಡಲೇಬೇಕಾದ ಸಿನಿಮಾ. ಈ ಸಿನಿಮಾದ ಬಗ್ಗೆ ಇರುವ ರೇಟಿಂಗ್ ಅನ್ನು ನೋಡಿದರೇ ಇದರ ತೂಕವನ್ನು ಅಳೆಯಬಹುದು. ಕೆಲವೆಡೆ ಎಳೆದಂತೆ ಅನ್ನಿಸಿದರೂ ಮುಗಿದ ಮೇಲೆ ಅನೇಕ ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವ ಸಿನಿಮಾ.


ಸಾಧ್ಯವಾದರೆ ಒಮ್ಮೆ ನೋಡಿ.

ಸಂತೋಷ್ ಕುಮಾರ್ ಎಲ್.ಎಂ
19-Mar-2019

Sunday, October 28, 2018

Tamil Movie: 96







ಹಾಗಂದರೇನು? ಬಹುಶಃ ನೋಡಿದ ಪ್ರೇಕ್ಷಕರಲ್ಲಿ ಪ್ರತಿಶತ ಎಷ್ಟು ಜನ "ಸಕ್ಕತ್ ಸಿನಿಮಾ" ಅನ್ನಬಹುದು ಅಂತ ಅದನ್ನೇ ಸಿನಿಮಾ ಹೆಸರಾಗಿಟ್ಟಿದ್ದಾರಾ? ಗೊತ್ತಿಲ್ಲ. ಆದರೆ ನೋಡಿದ ಮೇಲೆ ಹಾಗನ್ನಿಸಿದರೆ ಅದು ನಮ್ಮ ತಪ್ಪಲ್ಲ.
--------------------

ಈ ಸಿನಿಮಾ ಯಾರು ನೋಡಲೇಬಾರದು?
ತಮಿಳು ಅರ್ಥ ಆಗದೇ ಇರೋರು. Subtitle ಓದಿಕೊಂಡು ನೋಡುವ ಸಿನಿಮಾ ಇದಲ್ಲ. ಯಾರಿಗಾದರೂ ಈ ಸಿನಿಮಾ ಇಷ್ಟ ಆಗಿಲ್ಲ ಅಂದ್ರೆ, ತಮಿಳು ಅರ್ಥ ಆಗಿರಲ್ಲ. ಅಥವಾ ನಿಮಗೆ ನಿಮ್ಮ ಶಾಲಾ ದಿನಗಳಲ್ಲಿ ಯಾರನ್ನೂ ಇಷ್ಟಪಟ್ಟಿಲ್ಲ 🤣 (Just kidding)

------------------------

ಈ ವಿಜಯ್ ಸೇತುಪತಿ ಹೇಗೆ ಬೇರೆ ಬೇರೆ Genreನ ಸಿನಿಮಾಗಳನ್ನು ಆಯ್ದುಕೊಳ್ಳುತ್ತಾನೋ ಗೊತ್ತಿಲ್ಲ. ಯಾವುದೋ thriller ಸಿನಿಮಾ ಮಾಡುತ್ತಾನೆ. ನೋಡಿದಾಗ 'ಮಸ್ತ್' ಅನ್ನಿಸಿ 'ಇವನಿಗೆ ಇದೇ ಸರಿ' ಅನ್ನಿಸುತ್ತೆ. ಇನ್ಯಾವುದೋ ಲವ್ ಸ್ಟೋರಿಯಲ್ಲಿದ್ದರೆ ಇದರಲ್ಲೂ ಚೆನ್ನಾಗಿ ಮಾಡಿದ್ದಾನೆ ಅನ್ನಿಸಿಬಿಡುತ್ತೆ. ಆ ಬಗೆಯ versatile actor ಆತ.

ನೋಡೋಕೆ ಇವನ್ನೊಬ್ಬ ಹೀರೋನಾ ಅನ್ನಿಸಬೇಕು. ಆದರೆ ಸಿನಿಮಾ ನೋಡಿದ ಮೇಲೆ ಇವನೇ ನಿಜಕ್ಕೂ ಹೀರೋ ಅನ್ನಿಸುವ ನಟರೇ ತಮಿಳಿನಲ್ಲಿ ಬೇಗ ಜನರಿಗೆ ಇಷ್ಟ ಆಗೋದು. ಅಂತಹ ನಟರ ಸಾಲಿನಲ್ಲಿ ವಿಜಯ್ ಸೇತುಪತಿ ಯಾವಾಗಲೋ ಸೇರಿಯಾಗಿದೆ.

------------------------

ಆಟೋಗ್ರಾಫ್ ಸಿನಿಮಾ ಬಂದಾಗ ಇಂತಹ ಬಾಲ್ಯವನ್ನು ನೆನಪಿಸಿಕೊಳ್ಳುವ ಸಿನಿಮಾ ಇನ್ನು ಮುಂದೆ ಬರುವುದಿಲ್ಲ ಅಂತ ಅನಿಸಿತ್ತು ತಾನೆ? ಅದಕ್ಕೆ ಉತ್ತರವೆಂಬಂತೆ ಇದೀಗ '96' ಇದೆ. ಇದು ಮೂರ್ನಾಲ್ಕು ಸಾಲುಗಳಲ್ಲಿ ಹೇಳಿಕೊಳ್ಳಬಹುದಾದ ಕಥೆ ಇರುವ ಸಿನಿಮಾ ಅಲ್ಲ. ಆದರೆ ನೋಡುವಾಗ ಎಂಥವರನ್ನೂ ಅವರ ಶಾಲೆಯ ದಿನಗಳಿಗೆ ಕೊಂಡೊಯ್ಯಬಲ್ಲುದು. ಅದರಲ್ಲೂ one-sided ಪ್ರೀತಿಯಲ್ಲಿ ಅವಳ ನೆನಪನ್ನು ಎದೆಯೊಳಗೆ ಜತನವಾಗಿರಿಸಿಕೊಂಡು ಕಾಪಿಡುವ ಹೆಚ್ಚು ಮಾತನಾಡದ ಹುಡುಗರಿಗೆ ಇದು ತಮ್ಮದೇ ಕಥೆಯೆನಿಸಿದರೆ ಅದು ಅವರ ತಪ್ಪಲ್ಲ! ಯಾವುದೇ ಬಿಲ್ಡಪ್ ತೆಗೆದುಕೊಳ್ಳದೇ ಎಂಟ್ರಿ ಕೊಡುವ ವಿಜಯ್ ಸೇತುಪತಿ ಮತ್ತು ತ್ರಿಶಾ ಖಂಡಿತ ಮನಸೆಳೆಯುತ್ತಾರೆ. ಮೊದಲರ್ಧದಲ್ಲಂತೂ ವಿಜಯ್ ಸೇತುಪತಿಗೆ ಸಂಭಾಷಣೆಯೇ ಇಲ್ಲ. ತನ್ನ ಹುಡುಗಿ ಎದುರಿಗಿದ್ದಾಗ ಮಾತನಾಡಲು ಹಿಂಜರಿಯುವ ಹುಡುಗನಾಗಿ ಅಭಿನಯಿಸುವ ವಿಜಯ್ ಬರೀ ಅಭಿನಯದಲ್ಲಷ್ಟೇ ನಮ್ಮನ್ನು ಗೆಲ್ಲಬೇಕು. ಅದರಲ್ಲಿ ಅವರು ಯಶಸ್ಸು ಗಳಿಸುತ್ತಾರೆ ಸಹ. ತ್ರಿಶಾರಿಂದ ಈ ಬಗೆಯ ನಟನೆಯೂ ಸಾಧ್ಯ ಅನಿಸುವಷ್ಟು ಅವರನ್ನು ತೊಡಗಿಸಿಕೊಂಡಿರುವ ಸಿನಿಮಾ.

ಹಿನ್ನೆಲೆ ಸಂಗೀತವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆಯೆಂದರೆ ಅದು ಎಲ್ಲಿ-ಎಷ್ಟಿರಬೇಕೋ ಅಷ್ಟೇ ಇದೆ. ಹಲವು ಕಡೆ ಸಂಭಾಷಣೆಯಲ್ಲಿ ಆ ಜೋಡಿಯ ಮಾತು ಮತ್ತು ಉಸಿರಾಟವಷ್ಟೇ ನಮಗೆ ಕೇಳಿಸುತ್ತದೆ. ಸಂಭಾಷಣೆಯ ಮಧ್ಯೆ ಇರುವ ಮೌನವೂ ಕೂಡ ನಮ್ಮನ್ನು ಆ ಸನ್ನಿವೇಶಕ್ಕೆ ಕೊಂಡೊಯ್ಯುತ್ತದೆ. ಒಂದಷ್ಟು ದೃಶ್ಯಗಳನ್ನು ಇಲ್ಲಿ ಹೇಳಬೇಕೆನಿಸಿದರೂ ಇನ್ನೂ ಸಿನಿಮಾ ನೋಡದವರ ಕುತೂಹಲವನ್ನು ಹಾಳುಮಾಡಬಹುದೆಂಬ ಕಾರಣದಿಂದ ಹೇಳುತ್ತಿಲ್ಲ.

ಈ ಮೊದಲೇ ಹೇಳಿದಂತೆ ಸಂಭಾಷಣೆಯನ್ನು ಗ್ರಹಿಸಲಾಗದವರಿಗೆ, ಈ ಸಿನಿಮಾ ಮೊದಲ ದೃಶ್ಯದಿಂದಲೇ ನಮ್ಮನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಎರಡೂಮುಕ್ಕಾಲು ಘಂಟೆಯ ಸಿನಿಮಾ ನಿಧಾನಗತಿ ಎನಿಸಿದರೆ ಅದು ಸರಿಯೇ. ಇದು ಕಥೆಗಿಂತ ಆ ಕಥೆಯನ್ನು ಹೇಳುವಾಗಿನ ಪ್ರತೀ ಸಾಲಿಗೆ ಬೇಕಾದ ಭಾವ, ಮತ್ತು ಅದು ನಮ್ಮಲ್ಲಿ ಉಂಟುಮಾಡುವ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡೇ ಕಥೆಗೆ ಈ ವೇಗ ನೀಡಿದ್ದಾರೆ. ಮೊದಲಾರ್ಧದಲ್ಲಿ ಬರುವ ಉಳಿದ ನಟರು ತಮಗೆ ಸಿಕ್ಕ ಅವಕಾಶದಲ್ಲಿ ನಮ್ಮನ್ನು ಮೋಡಿ ಮಾಡುತ್ತಾರೆ.

ಇಂಗ್ಲೀಷಿನ "Before Sunrise" ಥರದ್ದೇ ಕಥೆ ಮತ್ತು ಚಿತ್ರಕ್ಥೆ ಇಲ್ಲಿಯೂ ಇದೆ ಎಂದು ಗೆಳೆಯರು ಹೇಳಿದ್ದಾರೆ. ನಾ ಕೆಲವು ವರ್ಷಗಳ ಹಿಂದೆ ಆ ಸಿನಿಮಾವನ್ನು ನೋಡಲು ಪ್ರಯತ್ನಪಟ್ಟೆನಾದರೂ ಅರ್ಧಕ್ಕಿಂತ ಹೆಚ್ಚು ಮುಂದುವರೆಯಲಾಗಲಿಲ್ಲ. ಇಲ್ಲಿ ಹೇಳಿದ ಕಾರಣವೇ ಅಲ್ಲಿಯೂ ನನಗೆ ಸಮಸ್ಯೆಯಾಗಿತ್ತು. (ಅದೇ, ಇಂಗ್ಲೀಷ್ ಸಂಭಾಷಣೆಯನ್ನು ಅರ್ಥ ಮಾಡಿಕೊಳ್ಳುವ ಪ್ರಾಬ್ಲಮ್ಮು ಸ್ವಾಮಿ 😂)

ಉಳಿದಂತೆ ಏನೋ ಆಗಿಬಿಡಬಹುದು ಅನ್ನುವ ನಾವು expect ಮಾಡಬಹುದಾದ ಕೆಲವು ಮಾಮೂಲಿ ಸಿನಿಮಾದ ಅಂಶಗಳನ್ನು ಕಡೆಯವರೆಗೂ ಹೇಳದಲೇ ಹಾಗೇ ಉಳಿಸಿ "ಇದು ಸಿನಿಮಾ ಅಲ್ಲ, ಕೊಂಚ ವಾಸ್ತವಕ್ಕೂ ಬನ್ನಿ" ಅನಿಸುವ ಭಾವವನ್ನು ಉಳಿಸಿಹೋಗುವ ನಿರ್ದೇಶಕರ ತಂತ್ರ ಥಿಯೇಟರಿನಿಂದ ಹೊರಬಂದಮೇಲೂ ನಮ್ಮನ್ನು ಕಾಡದೇ ಇರಲಾರದು!

-Santhosh Kumar LM

#santhuLm
28-Oct-2018

Thursday, September 29, 2016

UNSTOPPABLE ಚಿತ್ರ





ಒಮ್ಮೆ ಊಹಿಸಿಕೊಳ್ಳಿ. ನೀವು ಬೈಸಿಕಲ್ಲನ್ನು ತುಳಿಯುತ್ತ ಮುಂದೆ ಸಾಗುತ್ತಿರುವಿರಿ. ಮುಂದೆ ಕೊಂಚ ಇಳಿಜಾರಿನ ಪ್ರದೇಶ. ನೀವು ಪೆಡಲ್ಲನ್ನು ತುಳಿಯುವ ಅವಶ್ಯಕತೆಯೇ ಇಲ್ಲವೆಂಬಂತೆ ಇಳಿಜಾರಿನಲ್ಲಿ ಬೈಸಿಕಲ್ಲಿನ ವೇಗ ಹೆಚ್ಚುತ್ತದೆ. ಅತ್ತಲಿಂದ ಗಾಳಿ ಭರ್ರನೆ ಬೀಸುವುದಕ್ಕೂ ನಿಮ್ಮ ಸೈಕಲ್ಲು ಬಿಟ್ಟ ಬಾಣದಂತೆ ಮುನ್ನುಗ್ಗುವುದಕ್ಕೂ ಗಾಳಿಯಲ್ಲಿ ಹಾರಿದ ಅನುಭವ. ಸೈಕಲ್ಲು ವೇಗ ಹೆಚ್ಚಿಸಿಕೊಂಡು ಸಾಗಿದಂತೆ, ಹಾಗೆಯೇ ಕೊಂಚ ಮುಂದೆ ಇದ್ದಕ್ಕಿದ್ದಂತೆ ಯಾರೋ ರಸ್ತೆಯ ವಾಹನಗಳನ್ನು ಗಮನಿಸದೆ ರಸ್ತೆಯನ್ನು ದಾಟುತ್ತಿದ್ದಾರೆ. ಸೈಕಲ್ಲಿನ ವೇಗ ತಗ್ಗಿಸದಿದ್ದರೆ ಅವರಿಗೆ ತಗುಲುವುದು ಗ್ಯಾರಂಟಿ. ಹಾಗೆಂದುಕೊಂಡು ಮುಂದಿನ ಮತ್ತು ಹಿಂದಿನ ಎರಡೂ ಬ್ರೇಕುಗಳನ್ನು ಒಟ್ಟಿಗೆ ಹಿಡಿಯುತ್ತೀರಿ. ಎದೆ ಧಸಕ್ಕೆನ್ನುತ್ತದೆ. ಬ್ರೇಕುಗಳು ಕೆಲಸ ಮಾಡುತ್ತಿಲ್ಲ. ಈಗ ಉಳಿದಿರುವುದು ಹೆಚ್ಚೆಂದರೆ ಮೂರು ಸೆಕೆಂಡುಗಳು. ಬೇಗೊಂದು ನಿರ್ಧಾರಕ್ಕೆ ಬರದಿದ್ದರೆ ಬೈಸಿಕಲ್ಲು ಗುದ್ದಿ ಪಾದಾಚಾರಿಗೂ ಗಾಯ, ಬಿದ್ದು ನಿಮಗೂ ಗಾಯ. ಸೈಕಲ್ಲನ್ನು ಕೊಂಚ ಎಡಕ್ಕೆ ತಿರುಗಿಸೋಣವೇ? ಅಸಾಧ್ಯ, ಅಲ್ಲಿ ಆಳವಾದ ನೀರಿನ ಹೊಂಡವಿದೆ. ಗಾಯವಿರಲಿ, ಜೀವವೇ ಹೋದರೂ ಹೋದೀತು. ಹೋಗಲಿ, ಸೈಕಲ್ಲನ್ನು ಬಲಕ್ಕೆ ತಿರುಗಿಸೋಣವೇ? ದೇವರೇ.... ಲಾರಿಯೊಂದು ಧೂಳೆಬ್ಬಿಸಿಕೊಂಡು ಯಮನಂತೆ ಬರುತ್ತಿದೆ. ಉಳಿಯುವುದೊಂದೇ ದಾರಿ, ಬಿದ್ದರೆ ಬಿದ್ದು ಗಾಯವಾದರೂ ಸರಿಯೇ, ಇಲ್ಲಿಂದಲೇ ಹ್ಯಾಂಡಲ್ ಬಿಟ್ಟು ಸೈಕಲ್ಲಿನಿಂದ ಹಾರಿದರೆ ಪಾದಾಚಾರಿಗೆ ಏನಾಗುವುದಿಲ್ಲ, ತನಗೆ ಕೊಂಚ ಗಾಯಗಳಾಗಬಹುದು. ಸೈಕಲ್ಲು ಮುರಿಯಬಹುದು. ಸದ್ಯಕ್ಕಿರುವ ಆಯ್ಕೆಗಳಲ್ಲಿ ಕೊಂಚ ಇದೇ ಸರಿ ಅನ್ನಿಸುತ್ತದೆ!


ಹುಫ಼್ಫ಼್ಫ಼್..... ಗಮನಿಸಿ, ಇಷ್ಟೆಲ್ಲ ಯೋಚನಾಲಹರಿ, ತರ್ಕ, ನಿರ್ಧಾರ ಎಲ್ಲವೂ ಆ ಅನಿರೀಕ್ಷಿತವಾಗಿ ಬರುವ ಆ ಮೂರು ಸೆಕೆಂಡುಗಳಲ್ಲೇ ಆಗಬೇಕು. ಎಂಥಹ ಒತ್ತಡದ ಪರಿಸ್ಥಿತಿಯಲ್ಲವೇ? ಒಬ್ಬ ಮನುಷ್ಯನ ಕಾಮನ್ ಸೆನ್ಸು, ತರ್ಕ ಎಲ್ಲವೂ ಒರೆಗೆ ಹಚ್ಚುವುದು ಇಂತಹ ಸಂದರ್ಭಗಳಲ್ಲಿಯೇ!

ನನ್ನಂತಹ ಮನಸ್ಥಿತಿಯವರು ನೀವಾಗಿದ್ದರೆ ಪ್ರತೀ ಹಂತದಲ್ಲೂ, ಪ್ರತೀ ಪ್ರಯಾಣಗಳಲ್ಲೂ ಈ ಬಗ್ಗೆ ಊಹಿಸಿಕೊಳ್ಳುತ್ತಲೇ ಇರುತ್ತೀರಿ. ಬೇರೆಯವರು ಬೈದ ಮೇಲೂ!! :) ಅದಿರಲಿ. ಇಂಥ ಪರಿಸ್ಥಿತಿಗಳನ್ನು ಊಹಿಸಿಕೊಳ್ಳುವಾಗ ನಿಮಗೆ ಮುಂದಾಗಬಹುದಾದ ಪರಿಣಾಮಗಳ ಕೊಂಚ ಅಂದಾಜು ಇದ್ದೇ ಇರುತ್ತದೆ. ಇದೀಗ ಇದೇ ಪರಿಸ್ಥಿತಿಯನ್ನು ನೀವು ಬೈಕಿನಲ್ಲಿ ಹೋಗುವಾಗ, ಕಾರು ಓಡಿಸುವಾಗ ಎಂದು ಬದಲಾಯಿಸಿಕೊಳ್ಳುತ್ತ ಊಹಿಸಿಕೊಳ್ಳಿ. ಒಮ್ಮೆ ಮೈ ಝುಮ್ಮೆನ್ನುತ್ತದೆ. ಕಾರಿನಲ್ಲಿ ಸಮತೋಲನ ತಪ್ಪುವ ಭಯ ಅಷ್ಟಿಲ್ಲವಾದ್ದರಿಂದ ಇಂತಹ ಸಂಕಷ್ಟಗಳು ಎದುರಾದಾಗ ಒಳಗಿರುವವರಿಗಿಂತ ಹೊರಗೆ ಸಿಕ್ಕಿಹಾಕಿಕೊಳ್ಳುವವರಿಗೇ ಹೆಚ್ಚು ಅಪಾಯ. ಆದರೆ ಚಾಲಕ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಲ್ಲ ಎಂಬುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಹಾಗಾಗಿಯೇ ಈಗಲೂ ಕಾರುಗಳು,ಬಸ್ಸು-ಲಾರಿಗಳು ಬ್ರೇಕ್ ವಿಫಲವಾದಾಗ ಆಗುವ-ತಪ್ಪುವ ಅನಾಹುತಗಳ ಬಗ್ಗೆ ನಾವು ಸುದ್ದಿಗಳಲ್ಲಿ ನೋಡುತ್ತಲೇ ಇರುತ್ತೇವೆ.

ಈಗ ಇನ್ನೂ ಕೊಂಚ ಹೆಚ್ಚಾಗಿಯೇ ಊಹಿಸಿಕೊಳ್ಳೋಣ, ಸಾಗುತ್ತಿರುವ ರೈಲೊಂದರ ಬ್ರೇಕ್ ಇಲ್ಲ. ಅಯ್ಯೋ, ಸುಮ್ನಿರು ಗುರೂ, ತಲೆಗೆ ಹುಳ ಬಿಡ್ಬೇಡ ಅನ್ನಬೇಡಿ. ಹೌದು. ಈ ಕಥೆಯನ್ನೊಮ್ಮೆ ಕೇಳಿ: ಶಕ್ತಿಶಾಲಿ ಎಂಜಿನ್ನುಗಳಿಂದ ಎಳೆಯಲ್ಪಡುವ ಆ ಗೂಡ್ಸ್ ರೈಲುಗಾಡಿ ನಿಲ್ದಾಣ ಬಿಟ್ಟು ಹೊರಡುತ್ತದೆ. ಶುರುವಿನಲ್ಲಿ ಗಂಟೆಗೆ ಸುಮಾರು ಎಂಟು ಮೈಲಿ ವೇಗದಲ್ಲಿ ಹೊರಡಲ್ಪಡುವ ರೈಲಿನ ಚಾಲಕನಿಗೆ ಕಣ್ಣಳತೆಯಲ್ಲಿ ಕಾಣುವ ಹಳಿಯ ಸ್ವಿಚ್ ಸರಿಯಿಲ್ಲದಿದ್ದುದು ಗಮನಕ್ಕೆ ಬರುತ್ತದೆ. ಕೆಳಗೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಂದಿಗೆ ಮಾತನಾಡುತ್ತ ತಾನೇ ರೈಲಿನಿಂದಿಳಿದು ಓಡಿ ಹೋಗಿ ಸ್ವಿಚ್ ಸರಿಪಡಿಸುತ್ತಾನೆ. ಇದೀಗ ಮತ್ತೆ ಬಂದು ನಿಧಾನಕ್ಕೆ ಸಾಗುತ್ತಿರುವ ರೈಲಿನೊಳಕ್ಕೆ ಹತ್ತುವುದು ಅವನ ಅಂದಾಜು. ಆದರೆ ಅಷ್ಟರಲ್ಲಾಗಲೇ ವೇಗ ಕೊಂಚ ಹೆಚ್ಚಿರುವುದರಿಂದ ಓಡಿ ಹೋಗಿ ಏಣಿ ಹಿಡಿದು ರೈಲಿನ ಒಳಹೋಗಲು ಸಾಧ್ಯವಾಗುವುದಿಲ್ಲ. ಹೇಗಾದರೂ ಮಾಡಿ ಹತ್ತಲೇಬೇಕೆಂದು ಹಟತೊಟ್ಟು ಓಡಿ ಏಣಿ ಹಿಡಿದರೂ ಒಂದಷ್ಟು ದೂರದವರೆಗೆ ಎಳೆದು ಬೀಸಲ್ಪಡುತ್ತಾನೆ. ಸದ್ಯಕ್ಕೆ ಆ ರೈಲು ಕೋಸ್ಟಿಂಗ್ ಮೋಡ್ ನಲ್ಲಿರುವುದರಿಂದ ವೇಗ ವೃದ್ಧಿಯಾಗುವುದಿಲ್ಲ. ಹಾಗಾಗಿ ಅದನ್ನು ನಿರಾಯಾಸವಾಗಿ ಹಿಡಿಯಬಹುದು ಎಂಬುದು ಇವನ ಲೆಕ್ಕಾಚಾರವಾಗಿರುತ್ತದೆ. ತಕ್ಷಣವೇ ತನ್ನ ಮೇಲಧಿಕಾರಿಗೆ ವಿಷಯ ತಿಳಿಸಿ ಪುಟ್ಟ ಟ್ರಕ್ಕೊಂದರಲ್ಲಿ ರೈಲಿನ ಪಕ್ಕವೇ ಚಲಿಸುತ್ತ ಒಳಗೆ ನುಸುಳಲು ಯತ್ನಿಸಲಾಗುತ್ತದೆ. ಊಹುಂ...ಪ್ರಯತ್ನ ವ್ಯರ್ಥ. ರೈಲು ಕೋಸ್ಟಿಂಗ್-ನಲ್ಲಿರದೇ ಫ಼ುಲ್-ಪವರ್ ನಲ್ಲಿ ಯಾವುದೇ ನಿಯಂತ್ರಣವಿಲ್ಲದೇ ವೇಗ ಹೆಚ್ಚಿಸಿಕೊಳ್ಳುತ್ತ ಸಾಗುತ್ತದೆ.

ತಕ್ಷಣವೇ ಎಲ್ಲ ಪೊಲೀಸ್ ಹಾಗೂ ಇನ್ನಿತರೆ ಸುರಕ್ಷತಾ ವಿಭಾಗಗಳಿಗೆ ವಿಷಯ ತಿಳಿಸಿ ಆ ಮಾರ್ಗದಲ್ಲಿ ಬರುವ ಎಲ್ಲ ಗ್ರೇಡ್ ಕ್ರಾಸಿಂಗುಗಳಲ್ಲಿ ಜನ-ವಾಹನಗಳು ಹಳಿದಾಟದಂತೆ ಕಟ್ಟೆಚ್ಚರವಹಿಸಲು ತಿಳಿಸಲಾಗುತ್ತದೆ. ಈಗ ಗಾಯದ ಮೇಲೆ ಮತ್ತೊಂದು ಬರೆ. ಸುರಕ್ಷತಾ ವಿಭಾಗದ ಮೇಲಧಿಕಾರಿ ಬಂದಾಗ ಆತನಿಗೆ ತಿಳಿಯುವ ಇನ್ನೊಂದು ವಿಚಾರವೆಂದರೆ, ಆ ಗೂಡ್ಸ್ ರೈಲಿನ ಎಂಟು ಕ್ಯಾರಿಯರು(ಬೋಗಿ))ಗಳಲ್ಲಿ ತುಂಬಿರುವುದು ಅಪಾಯಕಾರಿ ದ್ರವರೂಪದ ಫೆನಾಲ್. ಅಂದರೆ ಈ ರೈಲು ತನ್ನ ವೇಗಹೆಚ್ಚಿಸಿಕೊಳ್ಳುತ್ತ ಸಾಗಿ ಜನವಸತಿಯಿರುವ ಪ್ರದೇಶಗಳಲ್ಲಿ ಹಳಿತಪ್ಪಿ ಬಿದ್ದರೆ ಅದೊಂದು ಭೀಕರ ದುರಂತಕ್ಕೆ ನಾಂದಿಯಾಗಬಹುದು. ಪರಿಸ್ಥಿತಿ ಅರ್ಥೈಸಿಕೊಳ್ಳುವ ಆ ಮೇಲಧಿಕಾರಿ ಈ ರೈಲನ್ನು ಅಪಾಯಕಾರಿ ಕ್ಷಿಪಣಿಗೆ ಹೋಲಿಸಿ ಉದ್ಗರಿಸುತ್ತಾನೆ. ಎಲ್ಲ ಇಲಾಖೆಗಳಿಗೆ ಈ ವಿಷಯ ತಿಳಿದು ಈ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸಲು ಶುರು ಮಾಡುತ್ತವೆ.

ಮೊದಲಿಗೆ ಮತ್ತೊಂದು ಎಂಜಿನ್ನಿನಲ್ಲಿ ಕುಳಿತು ಗೂಡ್ಸ್ ರೈಲಿನ ದಿಕ್ಕಿನಲ್ಲೇ ಸಾಗುತ್ತ, ಬೇರೊಂದು ಮಾರ್ಗದಿಂದ ಈ ರೈಲಿನ ಮುಂದೆ ಬಂದು ನಂತರ ಬ್ರೇಕ್ ಹಾಕಿ ವೇಗ ತಗ್ಗಿಸಿ ನಂತರ ನಿಯಂತ್ರಿಸುವುದು. ಅದೇ ಸಮಯದಲ್ಲಿ ಹೆಲಿಕಾಪ್ಟರಿನಲ್ಲಿ ಮೇಲಿಂದ ಚಾಲಕನೊಬ್ಬನನ್ನು ರೈಲಿನೊಳಕ್ಕೆ ಇಳಿಸುವ ಉಪಾಯ ಮಾಡಲಾಗುತ್ತದೆ, ಆದರೆ ಗೂಡ್ಸ್ ರೈಲು ಸಾಗುವ ವೇಗದಲ್ಲಿ ಮುಂದೆ ವೇಗ ತಗ್ಗಿಸಲೆಂದು ತಂದಿದ್ದ ಎಂಜಿನ್ ಕೂಡ ಸಿಡಿದು ಚಿಂದಿಯಾಗಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದ ಹಿರಿಯ ಉದ್ಯೋಗಿ ಈ ದುರ್ಘಟನೆಯಲ್ಲಿ ಅಸುನೀಗುತ್ತಾರೆ. ಇನ್ನು ಮುಂದೆ ರೈಲು ಸಾಗುತ್ತಿರುವ ಹಾದಿಯಲ್ಲಿ Stanton Curve ಎಂದು ಕರೆಯಲ್ಪಡುವ ತೀವ್ರ ತಿರುವಿದೆ. ಅಲ್ಲಿ ಸಾಗುವ ರೈಲುಗಳು ವೇಗವನ್ನು ತಗ್ಗಿಸಲೇಬೇಕು. ಇಲ್ಲದಿದ್ದರೆ ರೈಲುಗಳು ಹಳಿತಪ್ಪುವುದು ಗ್ಯಾರಂಟಿ. ಇನ್ನು ಈ ಅಪಾಯಕಾರಿ ರೈಲು ಇದೇ ವೇಗದಲ್ಲಿ ಸಾಗಿ ಆ ಜಾಗದಲ್ಲಿ ಹಳಿತಪ್ಪಿದರೆ ಜನಗಳ ಮಾರಣಹೋಮವೇ ನಡೆದೀತು. ರೈಲು ಅಲ್ಲಿ ತಲುಪುವುದರೊಳಗೆ ಏನಾದರೊಂದು ಮಾಡಲೇಬೇಕು.

ಇದೀಗ ಗೂಡ್ಸ್ ರೈಲು ಚಲಿಸುತ್ತಿರುವ ಹಾದಿಯಲ್ಲೇ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವ ಎರಡು ಪಾತ್ರಗಳಿವೆ. ಒಬ್ಬ ಇಂದಷ್ಟೇ ರೈಲ್ವೇ ಇಲಾಖೆಗೆ ಕೆಲಸಕ್ಕೆ ಸೇರಿಕೊಂಡಿರುವಾತ. ಇನ್ನೊಬ್ಬ ಇವನಿಗೆ ಕೆಲಸ ಹೇಳಿಕೊಡುವ, ಮತ್ತು ಇನ್ನೊಂದೆರಡು ವಾರಗಳಲ್ಲೇ ಸೇವೆಯಿಂದ ನಿವೃತ್ತನಾಗುತ್ತಿರುವ ಹಿರಿಯ ಉದ್ಯೋಗಿ. ಇಬ್ಬರಿಗೂ ತಮ್ಮದೇ ಆದ ಕೌಟುಂಬಿಕ ಸಮಸ್ಯೆಗಳಿವೆ. ಮೊದಲಿಗೆ ಒಬ್ಬರಿಗೊಬ್ಬರಿಗೆ ಕಿರಿಕಿರಿಯುಂಟುಮಾಡುತ್ತ ಸಾಗುವ ಪಾತ್ರಗಳು ಕಡೆಗೆ ಇದ್ದಕ್ಕಿದ್ದಂತೆ ಒಂದಾಗಿ ಈ ಕಥೆಯಲ್ಲಿ ಮುಖ್ಯವೆನಿಸಿಕೊಳ್ಳುತ್ತವೆ. ಮುಂದೆ ಈ ರೈಲು ನಿಲ್ಲುತ್ತದೆಯೇ? ಇನ್ನಷ್ಟು ಜನರನ್ನು ಬಲಿ ತೆಗೆದುಕೊಳ್ಳಲಿದೆಯೇ? ಅದನ್ನು ನಿಲ್ಲಿಸುವುದು ಹೇಗೆ? "ಹೊಸ ಡಾಕ್ಟರಿಗಿಂತ ಹಳೆ ಕಾಂಪೌಂಡರೇ ಮೇಲು" ಅನ್ನುವ ಗಾದೆ ಈ ಚಿತ್ರದಲ್ಲಿ ಹೇಗೆ ನೆನಪಿಗೆ ಬರುತ್ತದೆ? ಇವೆಲ್ಲಕ್ಕೂ ನೀವು 2010ರಲ್ಲಿ ಬಿಡುಗಡೆಯಾದ ಈ "UNSTOPPABLE" ಇಂಗ್ಲೀಷ್ ಸಿನಿಮಾವನ್ನು ನೋಡಲೇಬೇಕು.

ಕಥೆ ಎಷ್ಟು ರೋಚಕವಾಗಿದೆಯಲ್ಲವೇ? ನನಗೆ ಇಷ್ಟವಾಗಿದ್ದು ಈ ಕಥೆಯ ವಿಭಿನ್ನತೆ. ಕಥೆ ಬರೆದವರಾರು ಎಂಬುದನ್ನು ಹುಡುಕಾಡಿದಾಗ ನನಗೆ ಸಿಕ್ಕ ಮಾಹಿತಿಯೆಂದರೆ, ಈ ಚಿತ್ರಕಥೆ ನೈಜ ಘಟನೆಯೊಂದರ ಆಧಾರದ ಮೇಲೆ ಬರೆದದ್ದು. 2001ರಲ್ಲಿ ಅಮೇರಿಕಾದ ಓಹಿಯೋ ರಾಜ್ಯದಲ್ಲಿ ಚಾಲಕನಿಲ್ಲದೆ ಅಪಾಯಕಾರಿ ರಾಸಾಯನಿಕಗಳನ್ನು ತುಂಬಿದ್ದ ರೈಲೊಂದು ಘಂಟೆಗೆ 82 km ವೇಗದಲ್ಲಿ ಚಲಿಸಿತ್ತು. ಸುಮಾರು ಎರಡು ಘಂಟೆಗಳ ಕಾಲ ಚಲಿಸಿದ್ದ ರೈಲನ್ನು ಕಡೆಗೆ ಒಬ್ಬ ಹಿರಿಯ ಮತ್ತು ಕಿರಿಯ ಉದ್ಯೋಗಿಗಳ ಸಹಾಯದಿಂದ ನಿಲ್ಲಿಸಲಾಗಿತ್ತು. ಇದೇ ಘಟನೆಯನ್ನು ಆಧಾರವಾಗಿಟ್ಟುಕೊಂಡು "UNSTOPPABLE" ಸಿನಿಮಾವನ್ನು ತಯಾರಿಸಲಾಗಿದೆ. ಸಿನಿಮಾ ನೋಡುವಾಗ ನಮ್ಮ ಯೋಚನಾ ಲಹರಿಯೂ ಆ ವೇಗದ ರೈಲಿನ ಜೊತೆಯಲ್ಲೇ ಸಾಗುತ್ತದೆ. ಈ ಸಿನಿಮಾ ನೋಡಿಯಾದ ಮೇಲೆ ನನಗನ್ನಿಸಿದ್ದು ಹೇಗೆ ತಾನೇ ಈ ಘಟನೆಯನ್ನು ಸಿನಿಮಾ ಮಾಡಲು ಮನಸ್ಸು ಮಾಡಿರಬಹುದು ಎಂದು.

ವಿಭಿನ್ನ ಕಥೆಗಳನ್ನು ಇಷ್ಟಪಡುವವರು ಈ ಚಿತ್ರವನ್ನು ನೋಡಲೇಬೇಕು!

ಚಿತ್ರ: Unstoppable
ನಿರ್ದೇಶಕ: Tony Scott
ತಾರಾಗಣ: Denzel Washington,Chris Pine, Rosario Dawson, Lew Temple, Ethan Suplee, Kevin Dunn,

-------------------------------------------------

-ಸಂತೋಷ್ ಕುಮಾರ್ ಎಲ್.ಎಂ.

Saturday, April 16, 2016

GONE GIRL ಚಿತ್ರ




ಸಿನಿಮಾ ನೋಡಿ ಬಂದ ನಂತರ ಯಾರಾದರೂ ಆ ಕಥೆ ಹೇಳು ಅಂತ ಕೇಳಿದ್ರೆ ನಾವು ಶುರು ಮಾಡುತ್ತಿದ್ದ ರೀತಿಯನ್ನು ಒಮ್ಮೆ ನೆನಪಿಸಿಕೊಳ್ಳಿ! "ಹೀರೋಯಿನ್ನು ರೋಡಲ್ಲಿ ಹೋಗ್ತಿರ್ತಾಳೆ. ಆಗ ಬರ್ತಾನೆ ಭಯಂಕರ ವಿಲನ್ನು. ಬುಲೆಟ್ಟಲ್ಲಿ ಕೂತ್ಕೊಂಡು ಅವಳ ಪಕ್ಕ ಬಂದು ಅವಳನ್ನು ರೇಗಿಸಿದಾಗ ಅವಳು ಕಪಾಳಕ್ಕೆ ಹೊಡೀತಾಳೆ. ಆಗ ವಿಲನ್ನಿಗೆ ಕೋಪ ಬಂದು ಅವಳ ಸೀರೆಯ ಸೆರಗಿಗೆ ಕೈಹಾಕ್ತಾನೆ. ಆಗ ಅವಳು ಕಿರುಚ್ಕೊಳ್ತಾಳೆ. ಆಗ ಎಂಟ್ರಿ ಕೊಡ್ತಾನೆ ನೋಡು ನಮ್ಮ ಹೀರೋ. ವಿಲನ್ನಿಗೆ ಯದ್ವಾ ತದ್ವಾ ಹೊಡ್ದು ಅವಳನ್ನು ಕಾಪಾಡ್ತಾನೆ. ಆಗಲೇ ಅವರಿಬ್ಬರ ಮಧ್ಯೆ ಪ್ರೀತಿ ಶುರುವಾಗುತ್ತೆ".

ಇಲ್ಲಿ ನೋಡಿ ಹೀರೋ, ಹೀರೋಯಿನ್ನು, ವಿಲನ್ನು ಇವರ ಪಾತ್ರಗಳಿಗೆ ಒಂದು ಚೌಕಟ್ಟು ಇದೆ. ಹೀರೋಯಿನ್ನು ವಿಲನ್ನಿಗೆ ಹೊಡಿಯೋದು ಕಮ್ಮಿ. ಹೀರೋ ಮಾಡೋದೆಲ್ಲ ಒಳ್ಳೇದೇ. ವಿಲನ್ನು ಅಪ್ಪಿತಪ್ಪಿಯೂ ಒಂದೂ ಒಳ್ಳೆ ಕೆಲಸ ಮಾಡ್ಬಾರ್ದು..... ಹೀಗೆ ಸಾಗುತ್ತೆ ಪಾತ್ರಗಳಿಗೆ ನಾವು ಹಾಕುವ ನಿರ್ಬಂಧಗಳು. ಆದರೆ ನಿಜವಾದ ಸವಾಲು ಅಂದ್ರೆ ಸಿನಿಮಾ ನೋಡುವಾಗ ಯಾವುದೇ ಪಾತ್ರವನ್ನು ಇದು ಒಳ್ಳೇದು/ಕೆಟ್ಟದ್ದು ಅಂತ ಹೇಳದೇ ಅವುಗಳ ಮನುಷ್ಯ ಸಹಜ ಗುಣಗಳನ್ನು ಹೇಳುವುದು. ಉದಾಹರಣೆಗೆ, "ದುನಿಯಾ" ಸಿನಿಮಾದ ರಂಗಾಯಣ ರಘುರವರ ಪಾತ್ರವನ್ನೇ ಅವಲೋಕಿಸಿ. ತಕ್ಷಣಕ್ಕೆ ಅದರ ಗುಣ ಒಳ್ಳೆಯದೋ ಕೆಟ್ಟದ್ದೋ ಅಂತ ಹೇಳುವುದು ಸುಲಭದ ಮಾತಲ್ಲ. ಇಂತಹ ಪಾತ್ರಗಳು ಸಿನಿಮಾ ಮುಗಿದ ಮೇಲೂ ಮತ್ತೆ ಮತ್ತೆ ಅದೇ ಪ್ರಶ್ನೆ ಹಾಕಿ ನಮ್ಮನ್ನು ಕಾಡುತ್ತವೆ.

ಈ ಪೀಠಿಕೆಗೆ ನಾಂದಿ ಹಾಡಲು ಕಾರಣವಾದ ಚಿತ್ರ "Gone Girl". ಯಾವ ಪಾತ್ರಗಳ ಗುಣಗಳನ್ನೂ ಒಳ್ಳೆಯವೆಂದೋ ಕೆಟ್ಟವೆಂದೋ ಹೇಳದೇ ಅದರ ಅವಲೋಕನವನ್ನು ಕೇವಲ ಪ್ರೇಕ್ಷಕನಿಗೆ ಬಿಡುವ ತಂತ್ರ ಈ ಸಿನಿಮಾದಲ್ಲಿ ಬಹಳ ಇಷ್ಟವಾಯಿತು. ಈ ಚಿತ್ರದ ಎಲ್ಲ ಪಾತ್ರಗಳು ಹಾಗೆಯೇ ರಚನೆಯಾಗಿವೆ. ಇದೊಂದೇ ಈ ಚಿತ್ರದ ವಿಶೇಷವಲ್ಲ. ಮೊದಲಿಗೆ ಈ ಸಿನಿಮಾದ ಕಥೆಯ ಕೊಂಚವೇ ಕೊಂಚ ಸಾರಂಶವನ್ನು(ಪೂರ್ತಿಯಲ್ಲ) ಹೇಳುತ್ತೇನೆ ಕೇಳಿ.
-------------------------
ಅಂದು ನಿಕ್ ಮತ್ತು ಎಮಿ ದಂಪತಿಗಳ ಐದನೇ ವಿವಾಹ ವಾರ್ಷಿಕೋತ್ಸವ. ಬೆಳಗ್ಗೆ ತನ್ನ ಸಹೋದರಿಯನ್ನು ಭೇಟಿ ಮಾಡಿ ಮನೆಗೆ ಮರಳುವ ನಿಕ್'ಗೆ ತನ್ನ ಹೆಂಡತಿ ಎಮಿ ಮನೆಯಿಂದ ಕಾಣೆಯಾಗಿರುವುದು ತಿಳಿಯುತ್ತದೆ. ತಕ್ಷಣವೇ ಆತ ಪೊಲೀಸರಿಗೆ ಮಾಹಿತಿ ನೀಡಿ ಬರಹೇಳುತ್ತಾನೆ. ಕಾಣೆಯಾದ ಎಮಿಯ ತಂದೆ-ತಾಯಿ ಪ್ರಸಿದ್ಧ ಲೇಖಕರು. ತಮ್ಮ ಮಗಳು ಎಮಿ ಮಗುವಾಗಿದ್ದಾಗ ಅವಳನ್ನೇ ಪ್ರೇರಣೆಯಾಗಿಟ್ಟುಕೊಂಡು ಅವರು ಬರೆದ "Amazing Amy" ಮಕ್ಕಳ ಕಥೆಗಳು ಪ್ರಖ್ಯಾತಿಯಾಗಿವೆ. ಹಾಗಾಗಿ ಎಮಿ ಕೂಡ ಸಮಾಜದಲ್ಲಿ ಎಲ್ಲರಿಗೂ ಚಿರಪರಿಚಿತಳೇ. ಹಾಗಾಗಿ ಆಕೆ ಕಾಣೆಯಾದ ವಿಚಾರ ಮಾಧ್ಯಮಗಳಲ್ಲಿ ತಕ್ಷಣವೇ ರಾಷ್ಟ್ರೀಯ ಪ್ರಮುಖ ಸುದ್ದಿಯಾಗಿ ಬಿತ್ತರವಾಗುತ್ತದೆ. ಇತ್ತ ಪೊಲೀಸರು ಈ ಕೇಸನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದರೆ ಅತ್ತ ಮಾಧ್ಯಮ ಪ್ರತಿನಿಧಿಗಳು ಹಿಂಡುಹಿಂಡಾಗಿ ಮನೆಮುಂದೆ ಬೀಡು ಬಿಟ್ಟು ಇವರ ಪ್ರತೀ ಚಲನವಲನಗಳನ್ನು ನೇರಪ್ರಸಾರದಲ್ಲಿ ಬಿತ್ತರಿಸುತ್ತಿರುತ್ತವೆ.

ಈ ಕೇಸನ್ನು ಕೈಗೆತ್ತಿಕೊಳ್ಳುವ ಪೊಲೀಸ್ ಡಿಟೆಕ್ಟಿವ್ ಬೋನಿಗೆ ಪರಿಶೀಲಿಸುವಾಗ ಅನೇಕ ಸುಳಿವುಗಳು ಸಿಗುತ್ತದೆ. ಅಲ್ಲಿ ಯಾರೋ ತೊಳೆದಿದ್ದರೂ ದೊರಕುವ ಅರ್ಧಂಬರ್ಧ ರಕ್ತದ ಕಲೆಗಳು ಎಮಿಯದೆಂದು ಗೊತ್ತಾಗುವ ಜೊತೆಗೆ ಆಕೆ ಕೊಲೆಯಾಗಿರಬಹುದೆಂದು ಸಂದೇಹಿಸಲಾಗುತ್ತದೆ. ಎಮಿಯ ಗಂಡ ನಿಕ್'ನನ್ನು ವಿಚಾರಣೆ ಮಾಡುವ ವೇಳೆ ಅವಳ ಬಗೆಗಿನ ಯಾವುದೇ ಸರಳ ಪ್ರಶ್ನೆಗಳಿಗೂ ಉತ್ತರ ಕೊಡಲು ವಿಫಲನಾಗುತ್ತಾನೆ. ಉದಾ: ಅವಳ ಗೆಳತಿಯರು ಯಾರು? ಅವಳ ರಕ್ತದ ಗುಂಪೇನು? ಅನ್ನುವಂತಹ ಸಾಮಾನ್ಯ ಪ್ರಶ್ನೆಗಳಿಗೂ ಅವನ ಬಳಿ ಉತ್ತರವಿಲ್ಲ. ಇನ್ನು ಮುಂದೆ ಹೋಗಿ ಬೋನಿ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಹುಡುಕಿದಾಗ, 2007 ಇಸವಿಯಲ್ಲಿನ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನ್ಯೂಯಾರ್ಕಿನಿಂದ ನಿಕ್'ನ ತವರೂರಿಗೆ ವಾಸ್ತವ್ಯ ಬದಲಿಸಿದ್ದರು ಮತ್ತು ಇದೀಗಲೂ ಕ್ರೆಡಿಟ್ ಕಾರ್ಡಿನಲ್ಲಿ ಬಹಳಷ್ಟು ಸಾಲವಿದೆ ಎಂಬುದು ತಿಳಿಯುತ್ತದೆ.

ಈ ಮಧ್ಯೆ ನಮಗೆ Flashbackನಲ್ಲಿ ಅವರಿಬ್ಬರೂ ಪರಿಚಯವಾದ ಬಗೆಗೆ, ನಂತರ ಮದುವೆಯಾದ ಬಗ್ಗೆ, ಕೊಂಚ ದಿನ ಅವರಿಬ್ಬರೂ ಚೆನ್ನಾಗಿಯೇ ಸಂಸಾರ ಮಾಡಿದ ಬಗ್ಗೆ ದೃಶ್ಯಗಳನ್ನು ತೋರಿಸಲಾಗುತ್ತದೆ. ನಂತರ ಅವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವುದು ಆಕೆ ಬರೆಯುವ ಡೈರಿಯ ದಾಖಲೆಗಳಿಂದ ಗೊತ್ತಾಗುತ್ತದೆ. ಈ ಮಧ್ಯೆ ಡಿಟೆಕ್ಟಿವ್ ಬೋನಿಗೆ ಎಮಿಯು ಕೆಲ ತಿಂಗಳ ಹಿಂದೆ ತನ್ನ ಸ್ವಯಂರಕ್ಷಣೆಗೆ ಪಿಸ್ತೂಲೊಂದನ್ನು ಕೊಳ್ಳಲು ಪ್ರಯತ್ನಿಸಿದ್ದಳು ಎಂಬ ಮಾಹಿತಿಯೂ ಸಿಗುತ್ತದೆ. ನಂತರದ ದೃಶ್ಯಗಳಲ್ಲಿ ನಿಕ್ ತನ್ನ ಹಳೆಯ ಪ್ರೇಯಸಿಯೊಂದಿಗೆ ಇನ್ನೂ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ನಿಕ್'ನ ಸಹೋದರಿಗೆ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬೀಳುವುದರೊಂದಿಗೆ, ನಿಕ್ ತನ್ನ ಪತ್ನಿಯನ್ನು ಕೊಲೆ ಮಾಡಿ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾನೆ ಎಂಬುದು ಮಾಧ್ಯಮಗಳಲ್ಲೂ ಪ್ರಸಾರವಾಗುತ್ತದೆ.
---------------------

ಓಹ್! ತುಂಬ ಕುತೂಹಲಕಾರಿಯಾಗಿದೆ ಅಲ್ಲವೇ?! ಇದೀಗ ನಿಕ್'ನಿಂದ ಸತ್ಯವನ್ನು ಹೊರಗೆಳೆಯುವುದಷ್ಟೇ ಸಿನಿಮಾದ ಉದ್ದೇಶವೆಂದರೆ ಇದೂ ಒಂದು ಮಾಮೂಲಿ ಕ್ರೈಂ ಸಿನಿಮಾ ಅಷ್ಟೇ! ಕ್ಷಮಿಸಿ, ಕಥೆ ಹಾಗಿಲ್ಲ!!
---------------------

ಎಮಿಯು ನಿಕ್'ನನ್ನು ಮದುವೆಯಾಗುವ ಮುನ್ನ ಆಕೆಗೂ ಇಬ್ಬರೊಂದಿಗೆ ಸಂಬಂಧ ಮುರಿದು ಬಿದ್ದಿರುತ್ತದೆ.
ಆ ಎರಡೂ ಸಂಬಂಧಗಳಲ್ಲಿನ ಇಬ್ಬರೂ ಹುಡುಗರು ಆಕೆಯ ಮೇಲೆ ದೈಹಿಕ ಹಲ್ಲೆ ಮಾಡಿದ, ಅತ್ಯಾಚಾರ ಮಾಡಿದಂತಹ ಕೇಸುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರಲ್ಲಿ ಒಬ್ಬನನ್ನು ಭೇಟಿ ಮಾಡುವ ನಿಕ್'ಗೆ ಆತ ನಿರಪರಾಧಿ ಎಂದು ಗೊತ್ತಾಗುವುದರೊಂದಿಗೆ ಕಥೆ ಮತ್ತೆ ದಿಕ್ಕು ಬದಲಿಸುತ್ತದೆ.

ನಿಕ್'ನ ಅನೈತಿಕ ಸಂಬಂಧ ತಿಳಿದ ದಿನದಿಂದ ಮನನೊಂದ ಎಮಿ, ಅವನಿಗೆ ಜೀವನದ ಅತೀ ದೊಡ್ಡ ಪಾಠ ಕಲಿಸುವ ದೃಷ್ಟಿಯಿಂದ ಅನೇಕ ತಿಂಗಳುಗಳಿಂದ ಯೋಜನೆ ರೂಪಿಸಿರುತ್ತಾಳೆ. ಮೊದಲು ತಾನು ನಾಪತ್ತೆಯಾಗಬೇಕು. ನಂತರ ಎಲ್ಲರಿಗೂ ತಾನು ಕೊಲೆಯಾಗಿದ್ದೇನೆನ್ನುವ ಅನುಮಾನ ಬರಬೇಕು. ಎಲ್ಲರಿಗೂ ತಾನು ನಿಕ್ ಮೇಲೆಯೇ ಸಂದೇಹ ಬರುವಂತೆ ಮಾಡಿ ಅವನನ್ನು ಜೈಲಿಗೆ ಕಳುಹಿಸಿ ಬದುಕಿನಲ್ಲೇ ದೊಡ್ಡ ಪಾಠ ಕಲಿಸಬೇಕು ಎಂಬ ಯೋಜನೆ ಹಾಕಿಕೊಂಡು ಅದರಂತೆಯೇ ಪ್ರತಿಯೊಂದನ್ನು ರೂಪಿಸುತ್ತಾಳೆ. ತನ್ನ ರಕ್ತವನ್ನು ಅಲ್ಲಲ್ಲಿ ಚೆಲ್ಲಿ, ಹಾಗೆಯೇ ತಾನು ಕೊಲೆಯಾಗುವ ಮುನ್ನ ಗರ್ಭಿಣಿ ಎಂಬಂತೆ ತೋರಿಸುವ ಕಳ್ಳ ರಿಪೋರ್ಟ್, ಅವನಿಗೆ ಗೊತ್ತಾಗದಂತೆ ಕ್ರೆಡಿಟ್ ಕಾರ್ಡಿನಲ್ಲಿ ಅನೇಕ ವಸ್ತುಗಳ ಖರೀದಿ. ಹೀಗೆ ಹತ್ತು ಹಲವು ದಾಖಲೆಗಳನ್ನು ಸೃಷ್ಟಿಸಿ ತಮ್ಮ ವಾರ್ಷಿಕೋತ್ಸವದ ದಿನವೇ ನಾಪತ್ತೆಯಾಗುವಂತೆ ನಾಟಕವಾಡುತ್ತಾಳೆ
---------------------

ಕ್ಷಮಿಸಿ, ಮತ್ತೆ ಕಥೆ ನಾವಂದುಕೊಂಡಂತೆ ನಡೆಯುವುದಿಲ್ಲ. ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತ ಸಾಗುವ ಕಥೆ ಪ್ರೇಕ್ಷಕನಿಗೆ ಎಲ್ಲಿಯೂ ಸುಳಿವು ಕೊಡದಂತೆ ಸಾಗುತ್ತದೆ. ಸುಳಿವು ಸಿಕ್ಕಿತು ಎನ್ನುವಷ್ಟರಲ್ಲಿ ಅದು ತಪ್ಪುಗ್ರಹಿಕೆ ಎಂಬಂತೆ ಮತ್ತಾವುದೋ ದಾರಿ ಹಿಡಿಯುತ್ತದೆ. ಕಡೆಯ ಕ್ಷಣದವರೆಗೂ ಹೀಗೆಯೇ ಸಾಗುವ ಸಿನಿಮಾ ತಾರ್ಕಿಕ ಅಂತ್ಯವನ್ನೇನೋ ಕಾಣುತ್ತದೆ. ಆದರೆ ಮುಗಿದ ನಂತರ ಮತ್ತೆ ನಮ್ಮ ಮನಸ್ಸಿನೊಳಗೆ ಯಾರು ಮಾಡಿದ್ದು ಸರಿ, ಯಾರು ಮಾಡಿದ್ದು ತಪ್ಪು ಅನ್ನುವ ಪ್ರಶ್ನೆಗಳನ್ನು ಹಾಕಿ ಮತ್ತೆ ಒಂದೊಂದೇ ದೃಶ್ಯವನ್ನು ಮೆಲುಕು ಹಾಕುತ್ತ ಇದಕ್ಕೆ ಕಾರಣವೇನಿರಬಹುದು ಅನ್ನುವುದನ್ನು ಅವಲೋಕಿಸುವಂತೆ ಮಾಡುತ್ತದೆ. ಇದು ಕಥೆಯ ಮತ್ತು ಪಾತ್ರಗಳನ್ನು ಕಟ್ಟಿದ ಬಗೆಗಿರುವ ತಾಕತ್ತು. ಹೈಪ್ರೊಫೈಲ್ ಕೇಸುಗಳಲ್ಲಿ ಮಾಧ್ಯಮಗಳು ಜನಗಳ ಭಾವನೆಯೊಂದಿಗೆ ಹೇಗೆ ಆಟವಾಡುತ್ತವೆ ಎನ್ನುವುದನ್ನು ಈ ಚಿತ್ರದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.

ಚಿತ್ರ ಎರಡೂವರೆ ಘಂಟೆ ಓಡಿದರೂ ಎಲ್ಲೂ ಬೇಸರವಾಗುವುದಿಲ್ಲ ಎಂದರೆ ಇದರ ಕಥೆಯನ್ನು ಮತ್ತು ನಿರ್ಮಾತೃಗಳನ್ನು ಶ್ಲಾಘಿಸಲೇಬೇಕು. ಈ "Gone Girl" ಚಿತ್ರದ ನಿರ್ದೇಶಕ ಡೇವಿಡ್ ಫಿಂಚರ್. ಬಹುತೇಕ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಈ ಚಿತ್ರದ ಮೂಲ 2012ರಲ್ಲಿ ಬಿಡುಗಡೆಯಾಗಿ 85 ಲಕ್ಷ ಪ್ರತಿ ಮಾರಾಟವಾದ ಇದೇ ಹೆಸರಿನ ಜನಪ್ರಿಯ ಕಾದಂಬರಿ "Gone Girl". ಕಾದಂಬರಿಯನ್ನು ಬರೆದ gillian flynn ರವರೇ ಈ ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆದಿದ್ದಾರೆ. Ben Affleck ನಿಕ್ ಪಾತ್ರದಲ್ಲಿ ಮತ್ತು Rosamund Pike ಎಮಿ ಪಾತ್ರದಲ್ಲಿ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ.

ಇದೊಂದು ಸೈಕೋಪಾತ್ ಚಿತ್ರವಾ? ಕ್ರೈ ಥ್ರಿಲ್ಲರ್? ಫ್ಯಾಮಿಲಿ ಡ್ರಾಮಾ? ಗೊತ್ತಿಲ್ಲ! ಚಿತ್ರವನ್ನೊಮ್ಮೆ ನೋಡಿ ನೀವೇ ಹೇಳಿ! :)


-ಸಂತೋಷ್ ಕುಮಾರ್ ಎಲ್.ಎಂ.

Tuesday, April 5, 2016

SAVING PRIVATE RYAN ಚಿತ್ರ



ಅಮೇರಿಕಾ ಸೈನ್ಯವು ಜರ್ಮನಿ ಆಕ್ರಮಿತ ಒಮಾಹಾ ಸಮುದ್ರತೀರದ ಮೇಲೆ ದಾಳಿ ಮಾಡಿ ತನ್ನ ನೆಲೆಯೂರಿದ್ದು ಎರಡನೇ ಮಹಾಯುದ್ಧದ ಪ್ರಮುಖ ಘಟನೆಗಳಲ್ಲೊಂದು. ಸಮುದ್ರದ ಕಡೆಯಿಂದ ದಾಳಿ ಮಾಡುವ ಅಮೇರಿಕಾ ಸೈನ್ಯಕ್ಕೆ ಎದುರು ನಿಲ್ಲುವುದು ಎತ್ತರದ ಪ್ರದೇಶಗಳಲ್ಲಿ ಕುಳಿತು ಗುಂಡು ಹಾರಿಸಿ ಪ್ರಾಣ ತೆಗೆಯುವ ಜರ್ಮನಿ ಸೈನಿಕ ಪಾಳಯ. ಈ ಕಾಳಗದಲ್ಲಿ ಬಲಿಯಾದದ್ದು ಸಾವಿರಾರು ಸೈನಿಕರು. ಕಡೆಗೂ ನೆಲೆಯೂರುವಲ್ಲಿ ಅಮೇರಿಕಾ ಸೇನೆ ಯಶಸ್ವಿಯಾಗುತ್ತದೆ. ಇದು ನಡೆದದ್ದು 1944 ಜೂನ್ 6 ರಂದು.

ರಿಯಾನ್ ಕುಟುಂಬದ ತಾಯಿಗೆ ಒಂದೇ ದಿನ ಮೂರು ಟೆಲಿಗ್ರಾಮ್'ಗಳು ಬರುತ್ತವೆ. ಅವಳ ಮೂರು ಜನ ಪುತ್ರರು ಒಮಾಹಾ ದಾಳಿಯ ಸಂದರ್ಭದಲ್ಲಿ ವೀರಮರಣವನ್ನಪ್ಪಿರುತ್ತಾರೆ. ಅವಳಿಗಿರುವುದೇ ನಾಲ್ಕು ಮಕ್ಕಳು. ಇದೀಗ ಮೂವರು ಇಲ್ಲವಾಗಿದ್ದಾರೆ. ಉಳಿದ ಕಿರಿಯವ ಜೇಮ್ಸ್ ಫ್ರಾನ್ಸಿಸ್ ರಿಯಾನ್. ಅವನೂ ಸೇನೆಯಲ್ಲಿ ಪ್ಯಾರಾಟ್ರೂಪರ್ ಆಗಿದ್ದಾನೆ. (ಪ್ಯಾರಾಟ್ರೂಪ್: ಯುದ್ಧದ ಸಂದರ್ಭಗಳಲ್ಲಿ ಕೆಲವು ನೆಲೆಗಳನ್ನು ವಶಪಡಿಸಿಕೊಳ್ಳಲು ಪ್ಯಾರಾಶೂಟ್'ಗಳ ಮೂಲಕ ದಾಳಿ ಮಾಡಲು ಇರುವ ಪಡೆಗಳು). ಆತನೂ ಒಮಾಹಾ ಬೀಚಿನಿಂದ ನೂರು ಮೈಲಿ ದೂರದಲ್ಲಿರುವ ಓರ್ಮ್ಯಾಂಡಿ ಪ್ರದೇಶದಲ್ಲಿ ಇಳಿದ ನಂತರ ಕಾಣೆಯಾಗಿದ್ದಾನೆ.

ಈ ಸಂದರ್ಭದಲ್ಲಿ ಸೇನೆಯ ಜನರಲ್ ಜಾರ್ಜ್ ಮಾರ್ಷಲ್ ಅಮೇರಿಕಾದ ಅಧ್ಯಕ್ಷ ಅಬ್ರಹಾಮ್ ಲಿಂಕನ್ ಬರೆದಿದ್ದ ಬಿಕ್ಸ್ಬೀ ಪತ್ರವನ್ನು ಓದುತ್ತಾರೆ.

ಈ ಬಿಕ್ಸ್ಬೀ ಪತ್ರಕ್ಕೊಂದು ಹಿನ್ನೆಲೆಯಿದೆ. ಅಮೇರಿಕಾ ಸೇನೆಗೆ ಕಳುಹಿಸಿದ ತಾಯಿಯೊಬ್ಬಳ ಐದೂ ಜನ ಪುತ್ರರು ವೀರಮರಣವನ್ನಪ್ಪಿದ ಮನಕಲಕುವ ಸುದ್ದಿ ತಿಳಿದಾಗ ನೊಂದುಕೊಳ್ಳುವ ಅಮೇರಿಕಾದ ಅಧ್ಯಕ್ಷ ಅಬ್ರಹಾಂ ಲಿಂಕನ್, ಆ ತಾಯಿ ಲಿಡಿಯಾ ಬಿಕ್ಸ್ಬೀಗೆ ಸಾಂತ್ವನದ ಪತ್ರ ಬರೆಯುತ್ತಾರೆ. ಇದು ಇತಿಹಾಸದಲ್ಲಿ ಬಿಕ್ಸ್ಬೀ ಪತ್ರ ಎಂದೇ ಜನಜನಿತವಾಗಿದ ಜೊತೆಗೆ ಅಬ್ರಹಾಂ ಲಿಂಕನ್ ರವರ ಅತ್ಯುತ್ತಮ ಬರಹ ಎಂದೂ ದಾಖಲಿಸಲ್ಪಟ್ಟಿದೆ. ಆ ಪತ್ರದಲ್ಲೇನಿತ್ತು? ಓದಿ:

Executive Mansion,
Washington, Nov. 21, 1864.

Dear Madam,

I have been shown in the files of the War Department a statement of the Adjutant General of Massachusetts that you are the mother of five sons who have died gloriously on the field of battle. I feel how weak and fruitless must be any word of mine which should attempt to beguile you from the grief of a loss so overwhelming. But I cannot refrain from tendering you the consolation that may be found in the thanks of the Republic they died to save. I pray that our Heavenly Father may assuage the anguish of your bereavement, and leave you only the cherished memory of the loved and lost, and the solemn pride that must be yours to have laid so costly a sacrifice upon the altar of freedom.


Yours, very sincerely and respectfully,
A. Lincoln

)


ಈಗಾಗಲೇ ಮೂರು ಮಕ್ಕಳನ್ನು ಕಳೆದುಕೊಂಡಿರುವ ತಾಯಿಗೆ ಕಡೆಯ ಕುಡಿಯೂ ಇಲ್ಲವಾಗುವುದು ಬೇಡ. ಹಾಗಾಗಿ ಅವನನ್ನು ಸೇನೆಯಿಂದ ವಾಪಸ್ಸು ಕರೆಯಿಸಿ ಮನೆಗೆ ಕಳುಹಿಸುವುದು ಒಳ್ಳೆಯದೆಂಬ ಆಲೋಚನೆ ಬರುತ್ತದೆ. ಬಿಕ್ಸ್ಬೀ ಪತ್ರವನ್ನೋದಿದ ಜನರಲ್ ಕೂಡಲೇ ಜೇಮ್ಸ್ ಫ್ರಾನ್ಸಿಸ್ ರಿಯಾನ್ ನನ್ನು ಕೂಡಲೇ ಪತ್ತೆ ಹಚ್ಚಿ ಅವರ ಮನೆಗೆ ಕಳುಹಿಸುವಂತೆ ಆದೇಶಿಸುತ್ತಾನೆ. ಒಮಾಹಾ ದಾಳಿಯ ಟ್ರೂಪಿನ ಮುಖ್ಯಸ್ಥನಾಗಿದ್ದ ಜಾನ್ ಹೆಚ್ ಮಿಲ್ಲರ್ ಗೇ ಈ ಕೆಲಸದ ಜವಾಬ್ದಾರಿ ವಹಿಸಲಾಗುತ್ತದೆ. ರಿಯಾನ್'ನ ಹೆಸರು ಬಿಟ್ಟರೆ ಬೇರಾವುದೇ ವಿಷಯ ಗೊತ್ತಿಲ್ಲ, ಆತ ಎಲ್ಲಿ ಇಳಿದ, ಹೇಗೆ ಕಾಣೆಯಾದ ಯಾವ ವಿಷಯವೂ ಗೊತ್ತಿಲ್ಲ. ಇವರೀಗ ಹೋಗಬೇಕಾದ ಜಾಗಗಳು ಯುದ್ಧದ ಕಾವಿಳಿಯದೆ ವಿಷಮ ಸ್ಥಿತಿಯಲ್ಲೇ ಇವೆ. ಹೀಗೆ ಹೆಚ್ಚು ವಿವರಗಳಿಲ್ಲದೇ ಅಪಾಯಕಾರಿ ಸ್ಥಳಗಳಲ್ಲಿ ರಿಯಾನ್'ಗಾಗಿ ಹುಡುಕುತ್ತ ಹೊರಡುವ ಮಿಲ್ಲರ್'ನ ಪಯಣ ರೋಚಕ.

ಮಿಲ್ಲರ್ ತಂಡ ಕಡೆಗೂ ರಿಯಾನ್ನನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತದೆಯೇ?ತನ್ನ ಎಲ್ಲ ಸಹೋದರರ ಮರಣ ವಾರ್ತೆಯನ್ನು ಕೇಳಿದರೆ ರಿಯಾನ್ ಹೇಗೆ ಪ್ರತಿಕ್ರಿಯಿಸಬಹುದು? ಆ ವಿವರಗಳಿಗಾಗಿ ಚಿತ್ರ "ಸೇವಿಂಗ್ ಪ್ರೈವೇಟ್ ರಿಯಾನ್" ಚಿತ್ರವನ್ನು ನೋಡಲೇಬೇಕು.

ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರದ ನಿರ್ದೇಶಕ ಹಾಲಿವುಡ್ ಚಿತ್ರರಂಗದ ಮೇರುಪ್ರತಿಭೆ ಸ್ಟೀವನ್ ಸ್ಪಿಲ್ಬರ್ಗ್. 1998 ರಲ್ಲಿ ಬಿಡುಗಡೆಯಾದ ಈ ಚಿತ್ರ ಬೇರೆ ಬೇರೆ ವಿಭಾಗಗಳಲ್ಲಿ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಯುದ್ಧದ ಕರಾಳತೆಯನ್ನು ಇದ್ದಂತೆಯೇ ಕಟ್ಟಿಕೊಡುವ ಈ ಚಿತ್ರ ನೋಡುಗರೆದೆಯನ್ನು ಝಿಲ್ಲೆನಿಸುತ್ತದೆ. ಇತಿಹಾಸದ ಘಟನೆಗಳು ತನ್ನ ಕಥೆಯೊಳಗೆ ಬರುತ್ತವೆಯೆಂದರೆ, ಸ್ಪಿಲ್ಬರ್ಗ್ ಆ ಘಟನೆಗಳ ವಿವರಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸುತ್ತಾರೆ. ಇನ್ನು ಪಾತ್ರಗಳಿಗೆ ಜೀವ ತುಂಬಲು ಟಾಮ್ ಹ್ಯಾಂಕ್ಸ್,ಎಡ್ವರ್ಡ್ ಬರ್ನ್ಸ್, ಮ್ಯಾಟ್ ಡ್ಯಾಮನ್, ವಿನ್ ಡೀಸಲ್ ಸೇರಿದಂತೆ ಅನೇಕ ನಟರ ದಂಡೇ ಈ ಚಿತ್ರದಲ್ಲಿದೆ.

ಬರೀ ಸಿನಿಮಾ ನೋಡುವುದಷ್ಟೇ ಅಲ್ಲ. ನಂತರ ಆ ಚಿತ್ರ ನಮ್ಮನ್ನು ಕಾಡುತ್ತ ಹೋದಂತೆ ಅದರ ವಿವರಗಳನ್ನು ಹುಡುಕುತ್ತ ಹೋದರೆ ಅನೇಕ ವಿಷಯಗಳು ಬಿಚ್ಚಿಕೊಳ್ಳುತ್ತ ಹೋಗಿ ನಿರ್ದೇಶಕ ತನ್ನ ಕೃತಿಗೆ ಆ ಆಕಾರ ಕೊಡಲು ಎಷ್ಟು ಶ್ರಮ ಹಾಕಿರಬಹುದು ಎಂಬ ಅಂದಾಜು ಸಿಗುತ್ತದೆ.

"Saving Private Ryan" ಜೀವನದಲ್ಲಿ 
ಒಮ್ಮೆ ನೋಡಲೇಬೇಕಾದ ಚಿತ್ರ!

-Santhosh Kumar LM