Sunday, April 11, 2021

ಕರ್ಣನ್ (ತಮಿಳು, 2021)

 


ಕರ್ಣನ್ (ತಮಿಳು, 2021)

ಮಾರಿ ಸೆಲ್ವರಾಜ್ ಅನ್ನುವ ನಿರ್ದೇಶಕನ "ಪರಿಯೇರುಮ್ ಪೆರುಮಾಳ್" ಸಿನಿಮಾವನ್ನು ಈ ಹಿಂದೆ ನೋಡಿದ್ದೆವು. ಮತ್ತೊಮ್ಮೆ ಅದೇ ನಿರ್ದೇಶಕ ತನ್ನ ಸಿನಿಮಾಗಳ ವ್ಯಾಪ್ತಿ ಮನರಂಜನೆಯಿಂದಾಚೆಗೂ ಬಹು ವಿಸ್ತಾರವಾದದ್ದು ಅನ್ನುವ ಸಂದೇಶವನ್ನು "ಕರ್ಣನ್" ಸಿನಿಮಾದ ಮೂಲಕ ಸ್ಪಷ್ಟಪಡಿಸುತ್ತಾರೆ.

ಸಿನಿಮಾದ ಮಧ್ಯೆ ಕಥೆಗೆ ಪೂರಕವಾದಂತಹ ರೂಪಕಗಳನ್ನು ತೋರಿಸಿ ಕೇವಲ ಸಿನಿಮಾ ಪಂಡಿತರಿಂದಷ್ಟೇ ಅವುಗಳನ್ನು ಗುರುತಿಸಲ್ಪಡುವುದು ಮಾರಿ ಸೆಲ್ವರಾಜ್'ಗೆ ಬೇಕಿಲ್ಲ. ಆತನಿಗೆ ತನ್ನ ರೂಪಕಗಳು ಸಾಮಾನ್ಯ ಪ್ರೇಕ್ಷಕನಿಗೂ ಅರ್ಥವಾಗಬೇಕು. ಹಾಗಾದಾಗಲಷ್ಟೇ ಜನಸಾಮಾನ್ಯರ ಮಧ್ಯದಲ್ಲೊಂದು ವಿಚಾರವನ್ನು ಹುಟ್ಟಿಹಾಕಲು ಸಾಧ್ಯ ಎಂಬ ಸ್ಪಷ್ಟತೆಯಿದೆ. "ಪರಿಯೇರುಮ್ ಪೆರುಮಾಳ್" ಸಿನಿಮಾದಲ್ಲಿ ಹಗೆ ಸಾಧಿಸಲು ನಾಯಕನ ಪ್ರೀತಿಯ ಕಪ್ಪು ಬಣ್ಣದ ನಾಯಿಯೊಂದನ್ನು ರೈಲಿನ ಹಳಿಗಳಿಗೆ ಕಟ್ಟಿ ಹಾಕಿ ಬಲಿ ತೆಗೆದುಕೊಳ್ಳುವಾಗ ಪ್ರೇಕ್ಷಕನಿಗೆ ಅಲ್ಲಿ ನಾಯಿಯಷ್ಟೇ ಕಾಣುವುದಿಲ್ಲ. ಆ ಕಪ್ಪು ನಾಯಿ ಒಂದು ಸಮುದಾಯವನ್ನೇ ಪ್ರತಿನಿಧಿಸುತ್ತದೆ.

ಈ ಸಿನಿಮಾದಲ್ಲೂ ಅಷ್ಟೇ. ಪೊಲೀಸ್ ಸ್ಟೇಷನ್ನಿನೊಳಗೆ ಚಿಟ್ಟೆಯೊಂದು ಹಾರುವಾಗಿನ ಹರ್ಷವನ್ನು, ತಕ್ಷಣವೇ ಆ ಮುಗ್ಧರು ಪೊಲೀಸರ ಲಾಠಿಯೇಟಿಗೆ ಚೀರಾಡುವಾಗ ಅದೇ ಚಿಟ್ಟೆ ಮೂಲೆಯಲ್ಲಿ ರೆಕ್ಕೆ ಬಡಿಯುತ್ತಲೇ ಒದ್ದಾಡುವುದನ್ನು ಅರ್ಥೈಸಿಕೊಳ್ಳಲು ನಾವು ಏನೇನನ್ನೋ ಕಲಿತಿರಬೇಕಿಲ್ಲ. ಕುದುರೆಯಷ್ಟು ವೇಗವಿಲ್ಲದಿದ್ದರೂ ಅದರಂತೆ ಕತ್ತೆಯೂ ಓಡಬಲ್ಲುದು. ಆ ಸಾಮರ್ಥ್ಯವಿದ್ದರೂ ಹದ್ದು ಮೀರಬಾರದೆಂಬ ಕಾರಣಕ್ಕೆ ಕತ್ತೆಯ ಕಾಲುಗಳಿಗೆ ಹಗ್ಗ ಬಿಗಿಯಲಾಗಿದೆ. ಆ ಹಗ್ಗ ಬಿಚ್ಚಿದ ತಕ್ಷಣ ಅದು ಕುದುರೆಯಂತೆ ಓಡುತ್ತದೆ. ಇದು ಭೌತಿಕ ವಿಷಯಗಳಿಗಷ್ಟೇ ಸೀಮಿತವಾಗಬೇಕಿಲ್ಲ. ನಮ್ಮ ಮನಸ್ಸಿನ ಕಾಲುಗಳಿಗೂ ನಾವೇ ಹಗ್ಗ ಬಿಗಿದುಕೊಂಡಿದ್ದೇವೆ. ಬದಲಾವಣೆ ಬೇಕೆಂದರೆ ಮೊದಲು ನಾವೇ ಮೊದಲು ಆ ಹಗ್ಗವನ್ನು ಕಿತ್ತೊಗೆಯಬೇಕು.

ನಾವೂ ಅದೆಷ್ಟೋ ಸಮಸ್ಯೆಗಳನ್ನು "ಅದೇ ನಮ್ಮ ಹಕ್ಕು" ಅಂತ ಸ್ವೀಕರಿಸಿಬಿಟ್ಟಿದ್ದೇವೆ. ಅವುಗಳಿಗೆ ಪರಿಹಾರವಿದೆ ಎಂಬುದರ ಅರಿವೂ ನಮಗಿಲ್ಲ. ಅವುಗಳಿಂದ ಹೊರಬರುವ ಬಗೆಯಾದರೂ ಹೇಗೆ? ಸಿನಿಮಾದಲ್ಲಿ ಕರ್ಣನ್ ಅನ್ನುವ ನಾಯಕ ಮುಂದೆ ಬರುತ್ತಾನೆ. ಅಂತಹ ಪ್ರತಿ ವಾತಾವರಣದಲ್ಲಿ ಕರ್ಣನ್ ಹುಟ್ಟಿಕೊಳ್ಳಲು ಸಾಧ್ಯವೇ? ಆ ಸಣ್ಣ ಕಿಡಿಯನ್ನು ಹುಟ್ಟುಹಾಕುವ ಪ್ರಯತ್ನವನ್ನು ಕರ್ಣನ್ ಮಾಡುತ್ತದೆ. ಇದು ತಮಿಳುನಾಡಿನ ಕೊಡಿಯಾಂಗುಲಂ ನೈಜ ಕಥೆಯನ್ನೇ ಆಧರಿಸಿ ತಯಾರಿಸಿದ ಸಿನಿಮಾ. ಆ ಹಿನ್ನೆಲೆಯನ್ನುಅರ್ಥ ಮಾಡಿಕೊಂಡು ಸಿನಿಮಾ ನೋಡಿದರೆ ನಿಜಕ್ಕೂ ಖುಶಿಯಾಗುತ್ತದೆ.

-------------------------------
ಕೊಡಿಯಾಂಗುಲಂ ಘಟನೆಯ ಬಗೆಗಿನ ಒಂದು ಪುಟ್ಟ ಬರಹ ಓದಿ.

ಆ ಘಟನೆಯಾದ ನಂತರ ಅಲ್ಲಿಗೆ ಭೇಟಿ ನೀಡಿದ ಪೊಲೀಸ್ ಮಹಾನಿರ್ದೇಶಕರಾದ ವಿ.ವೈಕುಂಠ ಅನ್ನುವವರೊಡನೆ ನಡೆದ ಸಂದರ್ಶನದಲ್ಲಿ ಅವರು ಹೇಳಿದ ಮಾತುಗಳು ಇಂತಿವೆ:

"ಅಂದು ಕೊಡಿಯಾಂಗುಲಂ ಗ್ರಾಮಕ್ಕೆ ಭೇಟಿ ನೀಡಿದಾಗ ನಾ ನೋಡಿದ್ದು ಹೃದಯ ವಿದ್ರಾವಕವಾಗಿತ್ತು. ಯಾರೋ ಗ್ರಾಮಸ್ಥರು ತಮ್ಮ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತಿದಾಳಿ ನಡೆಸಲು ಎಂಬ ನೆಪದಲ್ಲಿ ಪೊಲೀಸರು ಅಲ್ಲಿಗೆ ಹೋಗಿದ್ದರು. ವರದಿಯ ಪ್ರಕಾರ ಆ ವಲಯದ ಮೇಲ್ಜಾತಿಯೊಬ್ಬನ ಕೊಲೆಯ ವಿಷಯದಲ್ಲಿ ಆರೋಪಿಯನ್ನು ಬಂಧಿಸಲು ಅಲ್ಲಿಗೆ ಹೋಗಲಾಗಿತ್ತು. ಬುದ್ಧಿಹೀನರಾಗಿ ಹಿಂಸೆಗಿಳಿದ ಪೊಲೀಸರು ಹೆಂಗಸರು, ವೃದ್ಧರು, ಮಕ್ಕಳೆನ್ನದೆ ಅವರ ಮೇಲೆರಗಿದ್ದರು. ಮನೆಗಳೊಳಗೆ ನುಗ್ಗಿ ದಾಂಧಲೆ ಮಾಡಿದರು. ಇಟ್ಟಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದರು. ಟಿವಿಗಳನ್ನು ಒಡೆದು ಹಾಕಿದರು. ಅಕ್ಕಿ ಚೀಲಗಳನ್ನು ಹರಿದು ಹಾಕಿ ರಸ್ತೆಗೆ ಸುರಿದರು. ಇನ್ನೂ ಅಮಾನವೀಯ ಅಂದರೆ ಜನರು ಕುಡಿಯುವ ನೀರಿಗಾಗಿ ಅವಲಂಬಿಸಿದ್ದ ಬಾವಿಗೆ ಡೀಸೆಲ್ ಸುರಿದರು. ಬೀರುಗಳಲ್ಲಿದ್ದ ಬಟ್ಟೆಗಳನ್ನು ಹೊರ ಚೆಲ್ಲಿದರು. ಕೈಗೆ ಸಿಕ್ಕ ವಿದ್ಯಾರ್ಥಿಗಳ ಯೂನಿವರ್ಸಿಟಿ ಡಿಗ್ರೀ ಸರ್ಟಿಫಿಕೇಟುಗಳನ್ನು ಅವರ ಕಣ್ಣೆದುರೇ ಹರಿದು ಬಿಸಾಡಿದರು. ನಾ ಅಲ್ಲಿಗೆ ಹೋದಾಗ ಅಲ್ಲಿನ ಜನರು ಅತ್ತು ಗೋಳಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ನಾ ನಡುಗಿ ಹೋದೆ. ನನ್ನ ಮೂವತ್ತು ವರ್ಷಗಳ ಪೊಲೀಸ್ ಜೀವನದಲ್ಲಿ ನನ್ನ ಇಲ್ಲಾಖೆಯ ಪೊಲೀಸರಿಂದಲೇ ನಡೆದ ಇಂಥ ಅಮಾನವೀಯ ಕೃತ್ಯವನ್ನು ಎಂದೂ ಕಂಡಿರಲಿಲ್ಲ. ಪ್ರತಿ ಗ್ರಾಮಸ್ಥನೂ ತಾನಾಗಿಯೇ ನಿಂತು ಅಲ್ಲಿ ನಡೆದ ಪೊಲೀಸ್ ದೌರ್ಜನ್ಯವನ್ನು ಹೇಳಿದಾಗ ನನಗೆ ನಂಬದೇ ವಿಧಿಯಿರಲಿಲ್ಲ. ಆದರೂ ನಾನು ನಡೆದ ಸತ್ಯವನ್ನು ಮನವರಿಕೆ ಮಾಡಿಕೊಳ್ಳಬೇಕಿತ್ತು. ಹಾಗಾಗಿ ಸಂಬಂಧಪಟ್ಟ ಪೊಲೀಸ್ ಅಧೀಕ್ಷಕರನ್ನು (superintendent of police) ಪಕ್ಕಕ್ಕೆ ಕರೆದುಕೊಂಡು ಹೋಗಿ ಅದೇ ಗ್ರಾಮದ ಮರವೊಂದರ ನೆರಳಲ್ಲಿ ನಿಜವಾಗಿ ನಡೆದ ವಿಷಯವೇನೆಂದು ಕೇಳಿದೆ. ಪೊಲೀಸ್ ಉಪನಿರ್ದೇಶಕರ ಸಮ್ಮುಖದಲ್ಲಿಯೇ S.P. ಯವರು ಹಾಗೆ ನಡೆದದ್ದು ಸತ್ಯ ಎಂದು ಎಲ್ಲವನ್ನೂ ಒಪ್ಪಿಕೊಂಡರು"

-------------------------------

ಅಸುರನ್, ಪರಿಯೇರುಮ್ ಪೆರುಮಾಳ್ ಸಿನಿಮಾಗಳನ್ನು ಈ ಸಿನಿಮಾದೊಂದಿಗೆ ಹೋಲಿಸುವ ಅಗತ್ಯವಿಲ್ಲ. ಏಕೆಂದರೆ ಈ ಎರಡೂ ಸಿನಿಮಾಗಳನ್ನು ನೋಡುವಾಗಿನ ಮನಸ್ಥಿತಿ ಸಂಪೂರ್ಣ ಭಿನ್ನವಾಗಿರುತ್ತದೆ. ಒಂದಷ್ಟು ಕಥೆ ಹೇಳುವ ಬಗೆಗಿನ ಋಣಾತ್ಮಕ ವಿಷಯಗಳನ್ನು ಇಲ್ಲಿ ಚರ್ಚಿಸಬಹುದು. ಆದರೆ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಿಸಿದ ಸಿನಿಮಾವಾದ್ದರಿಂದ ಅವೆಲ್ಲವೂ ಗೌಣವಾಗುತ್ತವೆ.

ಈ ಸಿನಿಮಾದಲ್ಲಿ ತೋರಿಸುವ ಸಮಸ್ಯೆ ಈಗಿಲ್ಲ ಅಂತ ಒಬ್ಬರ ವಿಮರ್ಶೆ ನೋಡಿ ನಗು ಬಂತು. ಇವತ್ತಿಗೂ ನಮ್ಮ ರಾಜ್ಯದ ಕೆಲವು ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನುವಂತೆ ಅಲ್ಲಿನ ಜನ ಇನ್ನಷ್ಟು ಸಮಸ್ಯೆಗಳ ನಡುವೆ ಬದುಕಿದ್ದಾರೆ. ಸಮಸ್ಯೆಯ ಆಳ ಅರ್ಥವಾಗುವುದು ಅದರೊಳಗಿದ್ದವರಿಗೆ ಅಥವ ಅದನ್ನು ಕಣ್ಣಾರೆ ಕಂಡವರಿಗಷ್ಟೇ.

ಬೇರೆ ಸಿನಿಮಾಗಳಂತೆ ಇಲ್ಲಿ ದೃಶ್ಯಗಳು ರಪ್ಪನೆ ಬಂದು ಮುಗಿದು ಹೋಗುವುದಿಲ್ಲ. ಮಾರಿ ಸೆಲ್ವರಾಜ್ ಸಿನಿಮಾ ಮಾದರಿಯೇ ಇದು ಅನ್ನುವಷ್ಟರ ಮಟ್ಟಿಗೆ ವಿವರವಾಗಿ, ಸಾವಧಾನವಾಗಿ ಕಥೆ ಹೇಳುವ ಶೈಲಿಯನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಬಹುಶಃ ಗೌತಮ್ ಮೆನನ್, ಸೆಲ್ವರಾಘವನ್, ವೆಟ್ರಿಮಾರನ್, ಪ ರಂಜಿತ್, ಮಿಸ್ಕಿನ್, ಮಣಿರತ್ನಂ ಇತ್ಯಾದಿ ನಿರ್ದೇಶಕರಂತೆಯೇ ಇನ್ನೊಂದೆರಡು ಸಿನಿಮಾಗಳ ಬಳಿಕ ಅವರ ಹೆಸರಿಲ್ಲದಿದ್ದರೂ ಸಿನಿಮಾದ ನಿರ್ದೇಶಕ ಇವರೇ ಅಂತ ಗುರುತಿಸುವಷ್ಟರ ಮಟ್ಟಿಗೆ ಅವರ ಶೈಲಿ ನಮಗೆ ಕರಗತವಾಗುತ್ತಿದೆ. ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಪಾತ್ರಧಾರಿಗಳ ನಟನೆ ಎಲ್ಲವೂ ಹೊಂದಿಕೊಂಡಿವೆ. ವಿಭಿನ್ನ ಸಿನಿಮಾಗಳನ್ನು ಇಷ್ಟಪಡುವವರು ಮಿಸ್ ಮಾಡದೇ ನೋಡಬೇಕಾದ ಸಿನಿಮಾ ಇದು. ನೋಡಿದ ಮೇಲೂ ಅದರ ಬಗ್ಗೆ ಯೋಚಿಸುವಂತೆ ಮಾಡುತ್ತದೆ.

-ಸಂತೋಷ್ ಕುಮಾರ್ ಎಲ್.ಎಂ.

#santhuLm
11-Apr-2021

Wednesday, April 7, 2021

ಮಂಡೇಲಾ (ತಮಿಳು, ೨೦೨೧)



ಮಂಡೇಲಾ (ತಮಿಳು, ೨೦೨೧)





ಸಿನಿಮಾ ಅನ್ನೋದು ಸಂದೇಶವೊಂದನ್ನು ಕೊಡಲೇಬೇಕಾ? ಕೊಡುತ್ತೇವೆ ಅಂದುಕೊಂಡು ಬರುವ ಸಿನಿಮಾಗಳು ಬಹುತೇಕ ಅದರತ್ತ ಮಾತ್ರ ಗಮನ ಹರಿಸಿ ಮಾಮೂಲಿ ಸಿನಿಮಾ ಕೊಡಬಹುದಾದ ಅನುಭವದಿಂದ ನಮ್ಮನ್ನು ವಂಚಿತರನ್ನಾಗಿ ಮಾಡುತ್ತವೆ. ಸಿನಿಮಾ ಸಿನಿಮಾವಾಗಿಯೂ ಗೆಲ್ಲಬೇಕು. ಜೊತೆಗೆ ಅದು ಕೊಡಮಾಡುವ ಸಂದೇಶವೂ ಪರಿಣಾಮಕಾರಿಯಾಗಿರಬೇಕು.


ಇಷ್ಟೆಲ್ಲ ಹೇಳಿದ ಮೇಲೆ ನಾನೊಂದು ಗಂಭೀರ ಸಿನಿಮಾದ ಬಗ್ಗೆ ಮಾತನಾಡುತ್ತೇನೆ ಅಂದುಕೊಂಡರೆ ಅದು ತಪ್ಪು. 2016ರಲ್ಲಿ ಜೋಕರ್ ಅನ್ನುವ ಸಾಮಾಜಿಕ ಸಂದೇಶವನ್ನು ಸಾರುವ ತಮಿಳು ಸಿನಿಮಾವೊಂದು ಬಿಡುಗಡೆಯಾಗಿ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ "ಮಂಡೇಲಾ" ಅನ್ನುವ ಇನ್ನೊಂದು ಚಿತ್ರ ಅದಕ್ಕಿಂತಲೂ ಚೆನ್ನಾಗಿ ಮೂಡಿ ಬಂದಿದೆ.


ಇಡೀ ಚಿತ್ರದ ಹೈಲೈಟ್ ಅದರ ಕಥೆಯಷ್ಟೇ. ಒಂದು ಗ್ರಾಮಪಂಚಾಯಿತಿ ಚುನಾವಣೆಯ ಪುಟ್ಟ ಎಳೆಯೊಂದನ್ನು ಇಟ್ಟುಕೊಂಡೇ ಇಡೀ ಸಿನಿಮಾದ ಎಲ್ಲ ದೃಶ್ಯಗಳನ್ನು ಹೆಣೆಯಲಾಗಿದೆ. ಎಲ್ಲಿಯೂ ಯಾವುದೇ ವಿಷಯ ಹೆಚ್ಚು-ಕಡಿಮೆ ಅನ್ನಿಸುವುದಿಲ್ಲ. ಸಿನಿಮಾದ ಕಥಾನಾಯಕ ಒಬ್ಬ ಕ್ಷೌರಿಕ. ಆ ಪಾತ್ರದಲ್ಲಿ 'ಯೋಗಿ ಬಾಬು" ಅನ್ನುವ ಹಾಸ್ಯ ನಟ ಎಲ್ಲರೂ ನಾಚುವಂತೆ ಅಭಿನಯಿಸಿದ್ದಾರೆ.


ಒಂದೇ ಚಿತ್ರದಲ್ಲಿ ವೋಟು ರಾಜಕಾರಣ, ಮತದಾನದ ಬಗೆಗಿನ ಅರಿವು, ಒಂದು ಮತದ ಮೌಲ್ಯ, ಪಕ್ಷಗಳ ಓಲೈಸುವಿಕೆ, ಭ್ರಷ್ಟಾಚಾರ, ಜಾತೀಯತೆ, ದೇಶದ ನಾಗರಿಕನೊಬ್ಬನಿಗಿರುವ ಅಧಿಕಾರ ಇತ್ಯಾದಿ ವಿಷಯಗಳನ್ನು ಕೊಂಚವೂ ಬೇಸರವಾಗದಂತೆ ಮನಮುಟ್ಟುವ ಹಾಗೆ ಹೇಳಿದ್ದಾರೆ. ಆದರೆ ಇವೆಲ್ಲ ವಿಷಯಗಳನ್ನು ನಮಗೆ ಬೋಧಿಸಿದಂತೆ ಎಲ್ಲಿಯೂ ಅನ್ನಿಸುವುದಿಲ್ಲ. ಏಕೆಂದರೆ ಕಥೆಯಲ್ಲಿಯೂ ಈ ವಿಷಯಗಳನ್ನು ನೇರವಾಗಿ ಚರ್ಚಿಸುವುದಿಲ್ಲ. ಆದರೆ ನೋಡುಗನ ಮನಸ್ಸಿನಲ್ಲಿ ಮಾತ್ರ ಈ ವಿಷಯಗಳು ಮನದಟ್ಟಾಗುತ್ತ ಸಾಗುತ್ತದೆ.


ಒಂದು ದೃಶ್ಯದಲ್ಲಿ ಅಂಚೆ ಕಛೇರಿಯಲ್ಲಿ ಖಾತೆಯೊಂದನ್ನು ತೆರೆಯೋಣ ಅಂತ ಹೋಗುವ ನಾಯಕನಿಗೆ ಅದಕ್ಕೆ ಆಧಾರ್ ಕಾರ್ಡ್ ಕಡ್ಡಾಯ ಅಂತ ಅರಿವಾಗುತ್ತದೆ. ನಾಯಕನ ಜೊತೆಗಿದ್ದ ಹುಡುಗ ಕೇಳುತ್ತಾನೆ. "ಆಧಾರ್ ಯಾಕೆ ಬೇಕು" ಅಂತ. ಅದಕ್ಕೆ "ಇಲ್ಲದಿದ್ದರೆ ಇವನು ನಮ್ಮ ದೇಶದವನೇ ಅಂತ ಹೇಳೋದು ಹೇಗೆ?" ಅಂತ ಪ್ರತಿಕ್ರಿಯೆ ಬರುತ್ತೆ. ತಕ್ಷಣವೇ ಆ ಹುಡುಗ "ನೋಡಿದ್ರೆ ಗೊತ್ತಾಗಲ್ವಾ ಮೇಡಂ. ಈ ನನ್ಮಗನ ಮೂತಿ ಇನ್ನೇನು ಫಾರಿನ್ನೋನ ಥರಾ ಕಾಣುತ್ತಾ?" ಅಂತ. ಈ ಸಂಭಾಷಣೆಯನ್ನು ಸಿನಿಮಾದೊಳಗೆ ಹಾಸ್ಯದ ರೀತಿ ಹೇಳುವುದಿಲ್ಲ. ಗಂಭೀರವಾಗಿಯೇ ಇರುತ್ತದೆ. ಆದರೆ ನೋಡುವ ನಮಗೆ ಮಾತ್ರ ಫಕ್ಕನೆ ನಗು ತರಿಸುತ್ತದೆ. ಸಿನಿಮಾ ಮುಂದುವರಿಯುತ್ತದೆ. ಇದೇ ರೀತಿ ಸಿನಿಮಾ ಪೂರ್ತಿ ನಗಿಸುವ, ಕಣ್ಣೊದ್ದೆ ಮಾಡುವ, ಚಿಂತನೆಗೆ ದೂಡುವ ಅನೇಕ ದೃಶ್ಯಗಳಿವೆ. ಕೊಂಚವೂ ವಿಷಯಗಳು ಮೂಲ ಎಳೆಯನ್ನು ಬಿಟ್ಟು ಅತ್ತಿತ್ತ ಕದಲುವುದಿಲ್ಲ.


ನಾಯಕ ಯೋಗಿ ಬಾಬು ಮೂಲತಃ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಒಬ್ಬ ಹಾಸ್ಯ ನಟ. ಅವರೇನು ಸಿಕ್ಸ್ ಪ್ಯಾಕ್ ಮಾಡಿಲ್ಲ. ನೋಡಲು ಇತರ ಹೀರೋಗಳಂತಿಲ್ಲ. ಅಂಥ ನಟನನ್ನು ಸಿನಿಮಾ ಮುಗಿಯುವ ಹೊತ್ತಿಗೆ ಮನಸ್ಸು ಹೀರೋ ಅಂತ ಒಪ್ಪಿಕೊಳ್ಳುವ ಹಾಗೆ ಮಾಡುತ್ತದಲ್ಲ. ಅದು ನಿಜವಾದ ಸಿನಿಮಾ ಕಥೆಯ ತಾಕತ್ತು. ಅವರನ್ನು ಈ ಸಿನಿಮಾ ಮತ್ತೊಂದು ಮಜಲಿಗೆ ಕರೆದೊಯ್ಯುತ್ತದೆ ಅನ್ನುವುದರಲ್ಲಿ ಸಂದೇಹವಿಲ್ಲ. ಯೋಗಿಬಾಬು ಇರುವ ಹಾಗೆಯೇ ಅವರನ್ನು ಸಿನಿಮಾಗೆ ಸೂಕ್ತವಾಗಿ ಬಳಸಿಕೊಳ್ಳಲಾಗಿದೆ. ಸಿನಿಮಾದಲ್ಲಿರುವ ಮುಕ್ಕಾಲು ಭಾಗ ಪಾತ್ರಧಾರಿಗಳ ಅರಿಚಯವಿಲ್ಲ. ಆದರೆ ಸಿನಿಮಾ ನೋಡುವಾಗ ಎಲ್ಲೂ ಯಾರೂ ಅಪರಿಚಿತವೆನಿಸುವುದೇ ಇಲ್ಲ.


ಬಹುಶಃ ನಾಯಕರಿಗಾಗಿ ಕಥೆ ಬರೆಯುವ ಬದಲು ಕಥೆ ಬರೆದು ಸೂಕ್ತವಾದ ನಟರನ್ನು ಆಯ್ದುಕೊಂಡರೆ ಈ ಬಗೆಯ ಸಿನಿಮಾಗಳು ಹೊರಮೂಡುತ್ತವೆ ಅಂತ ಖಡಾಖಂಡಿತವಾಗಿ ಹೇಳಬಹುದು. ಸಿನಿಮಾ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುವವರು ಈ ಬಗೆಯ ಸಿನಿಮಾಗಳನ್ನು ಹೆಚ್ಚು ಹೆಚ್ಚು ನೋಡಬೇಕು. ಕಾಕತಾಳಿಯವೇನೋ ಎಂಬಂತೆ ತಮಿಳುನಾಡಿನ ವಿಧಾನಸಭಾ ಚುನಾವಣೆ ನಡೆಯುವ ಸಮಯದಲ್ಲೇ ಈ ಸಿನಿಮಾ ಬಿಡುಗಡೆಯಾಗಿದೆ. ನೆಟ್'ಫ್ಲಿಕ್ಸ್ ನಲ್ಲಿದೆ. ಮರೆಯದೆ ನೋಡಿ.


-Santhosh Kumar LM
07-Apr-2021