Sunday, December 5, 2021

ಮಾನಾಡು...(2021, Tamil)

 


"ಮಾನಾಡು"
ನೋಡಿದ ಮೇಲೊಮ್ಮೆ
"ಮಾ(ತ)ನಾಡು"!

ಒಬ್ಬ ಯಶಸ್ವೀ ಸಿನಿಮಾ ನಾಯಕನೊಬ್ಬ ತನ್ನ ೧೦೦ನೇ ಸಿನಿಮಾ ಎಂದೆಂದಿಗೂ ವಿಶೇಷವಾಗಿ ಇರಬೇಕೆಂದು ಅಪೇಕ್ಷಿಸುತ್ತಾನೆ. ಹಾಗಾಗಿಯೇ ಆ ಸಿನಿಮಾದ ಕಥೆ ಎಲ್ಲವೂ ಉಳಿದ ಸಿನಿಮಾಗಳಿಗಿಂತಲೂ ವಿಭಿನ್ನವಾಗಿರುತ್ತದೆ. ಈ ಸಿನಿಮಾ ಶತಾಯಗತಾಯ ಗೆಲ್ಲಲ್ಲೇಬೇಕೆಂಬ ಸಹಜ ಬಯಕೆಯಿರುತ್ತದೆ.

ಅದೇ ವಿಷಯವನ್ನು ಬೇರೆ ವಿಭಾಗಗಳಿಗೆ ಹೋಲಿಸಿದರೆ ಅಲ್ಲಿ ನೂರರ ಸಂಭ್ರಮ ಕೇವಲ ಸಂಖ್ಯೆಯಷ್ಟೇ. ಏಕೆಂದರೆ ಅವರಿಗೆ ಆ ವಿಭಿನ್ನವಾದುದನ್ನು ಆಯ್ದುಕೊಳ್ಳುವ ಆಯ್ಕೆ ಇರುತ್ತದಾ ಅನ್ನುವುದೇ ಅನುಮಾನ. ಆದರೆ ಈ ಅವಕಾಶ ಸಿಕ್ಕರೆ, ಅವರ ಕೌಶಲ್ಯತೆಯನ್ನು ತೋರಿಸಬಲ್ಲ ಸರಿಯಾದ ಸಿನಿಮಾ ಸಿಕ್ಕರೆ ಅದು ಸಿನಿಮಾಪ್ರೇಮಿಗಳಿಗೆ ಹಬ್ಬ!

"ಮಾನಾಡು"...ಪ್ರವೀಣ್ ಕೆ.ಎಲ್ ಎಂಬ ಖ್ಯಾತ ಸಂಕಲನಕಾರನೊಬ್ಬನ ನೂರನೇ ಸಿನಿಮಾ! ಒಂದು ವಾರದ ಹಿಂದೆ ಬಿಡುಗಡೆಯಾಗಿ ವಿಶ್ವದಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರುವ ತಮಿಳು ಸೈನ್ಸ್, ಫಿಕ್ಷನ್, ಆಕ್ಷನ್- ಥ್ರಿಲ್ಲರ್ ಸಿನಿಮಾ. ಸಿಲಂಬರಸನ್ (ಸಿಂಬು) ಮತ್ತು ಎಸ್ಜ಼ೆ ಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಕಥೆಯನ್ನು ಟೈಮ್ ಲೂಪ್ ಪರಿಕಲ್ಪನೆಯ ಮೇಲೆ ಹೆಣೆಯಲಾಗಿದೆ.

ಟೈಮ್ ಲೂಪ್ ಕಾನ್ಸೆಪ್ಟ್ ಇದೀಗ ಎಲ್ಲರಿಗೂ ತಿಳಿದಿರುವ ವಿಚಾರ. ಈ ಕಾನ್ಸೆಪ್ಟಿನ ಆಧಾರದ ಮೇಲೆ ಇಲ್ಲಿಯವರೆಗೆ ಅನೇಕ ಸಿನಿಮಾಗಳು ಬಂದಿವೆ. ಆದರೆ ಈ ಸಿನಿಮಾ ತಮಿಳು ಸಿನಿಮಾರಂಗದ ಮಟ್ಟಿಗೆ ಅತ್ಯುತ್ತಮ ಟೈಮ್ ಲೂಪ್ ಸಿನಿಮಾ ಎಂದು ಹೇಳಬಹುದು. ಅದಕ್ಕೆ ಕಾರಣ ಒಂದು ಡ್ರಾಮಾ ಪ್ರಕಾರದ ಕಥೆಯನ್ನು ಥ್ರಿಲ್ಲರ್ ಕಥೆಯನ್ನಾಗಿಸಿ ಅದನ್ನು ಟೈಮ್ ಲೂಪ್ ಕಾನ್ಸೆಪ್ಟಿಗೆ ಜೋಡಿಸುವುದಿದೆಯಲ್ಲ. ಅದು ನಿಜಕ್ಕೂ ಸವಾಲಿನ ಕೆಲಸವೇ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರೇಕ್ಷಕ ಕಥೆ ಅರ್ಥವಾಗದೆ ಸೀಟಿನಲ್ಲೇ ಆಕಳಿಸುವ ಸಾಧ್ಯತೆಯೇ ಹೆಚ್ಚು. ಹೊರಬಂದ ಮೇಲೆ ಸಿನಿಮಾ ವಿಶ್ಲೇಷಕರ ವಿವರಣೆಯಿಂದಷ್ಟೇ ಸಿನಿಮಾ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಆದರೆ "ಮಾನಾಡು" ಸಿನಿಮಾ ಇವೆಲ್ಲವನ್ನು ಹುಸಿಗೊಳಿಸಿ ಒಂದು ಕಡೆ ಟೈಮ್ ಲೂಪ್ ಕಾನ್ಸೆಪ್ಟ್ ಅನ್ನು ಸಾಮಾನ್ಯ ಪ್ರೇಕ್ಷಕನಿಗೂ ಅರ್ಥವಾಗುವಂತೆ ಹೇಳುತ್ತ, ಸಿನಿಮಾದ ಮುಖ್ಯ ಕಥೆಯನ್ನು ಸ್ವಾರಸ್ಯವಾಗಿ ಹೇಳುವುದರಲ್ಲಿ ಯಶಸ್ವಿಯಾಗಿದೆ. ಕಥೆಯ ವಿಚಾರದಲ್ಲೂ ನಿರ್ದೇಶಕರು ಭಯಪಟ್ಟಿಲ್ಲ. ರಾಜಕೀಯ ಲಾಭಗಳಿಗಾಗಿ ಕೋಮು ಗಲಭೆಯನ್ನು ಹುಟ್ಟುಹಾಕುವ ಕಥೆಯನ್ನು ಎಲ್ಲೂ ಆಚೀಚೆ ಹೋಗದಂತೆ ಕುತೂಹಲಕಾರಿಯಾಗಿ ಹೇಳುತ್ತಾರೆ.

ಟೈಮ್ ಲೂಪ್ ಕಾನ್ಸೆಪ್ಟಿಗೆ ಬರುವುದಾದರೂ ಅದು ಅರ್ಥವಾಗದಿದ್ದರೆ ಇಷ್ಟು ಹೊತ್ತಿಗೆ ಸಿನಿಮಾ ತೋಪೆದ್ದು ಹೋಗುತ್ತಿತ್ತು. ಇಂದು ಆ ಕಾನ್ಸೆಪ್ಟ್ ಅನ್ನು ಅರ್ಥೈಸಿಕೊಳ್ಳುತ್ತಲೇ ಇಡೀ ಕಥೆಯನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುವಂತೆ ದೃಶ್ಯಗಳನ್ನು ತೋರಿಸಿರುವುದು ಸಿನಿಮಾದ ಎಡಿಟರ್ ಪ್ರವೀಣ್ ಕೆ,ಎಲ್.

ಮೊದಲನೆಯ ಲೂಪಿನಿಂದಲೂ ನಮಗೆ ಅರ್ಥವಾಗುವಂತೆ ಹೇಳುತ್ತಲೇ ಮತ್ತೆ ಮತ್ತೆ ಸಿನಿಮಾ ಮುಂದಿನ ಲೂಪಿಗೆ ಹೋದಂತೆ ನಮಗೆ ಕಾಣುವ ಹಾಗೆ ಒಂದೇ ಅಳತೆಯಲ್ಲಿ ಆ ವಿವರಿಸುವಿಕೆಯನ್ನು ತೆಳುವಾಗಿಸುತ್ತ ಹೋಗುತ್ತಾರೆ. ಹೀಗೆ ನಡೆಯುತ್ತ ಒಂದು ಹಂತದಲ್ಲಿ ಟೈಮ್ ಲೂಪಿನ ದೃಶ್ಯಗಳನ್ನೇ ಅದೃಶ್ಯ ಮಾಡಿಬಿಡುತ್ತಾದೆ. ಅಷ್ಟು ಹೊತ್ತಿಗಾಗಲೇ ಸಾಮಾನ್ಯ ಪ್ರೇಕ್ಷಕನಿಗೂ ಆ ಕಾನ್ಸೆಪ್ಟ್ ಅರ್ಥವಾಗಿರುತ್ತದೆ. ಆ ಘಟ್ಟದಲ್ಲಿ ನಾಯಕ ಸತ್ತರೂ, ಮುಂದಿನ ದೃಶ್ಯದಲ್ಲಿ ಆತ ಎದ್ದು ನಿಂತು ಹೋರಾಡುವುದು ಟೈಮ್ ಲೂಪ್'ನ ಸಹಾಯದಿಂದ ಅಂತ ನಮಗೆ ಸುಲಭವಾಗಿ ಅರ್ಥವಾಗುತ್ತದೆ. ಹಾಗಾಗಿ ಈ ಸಿನಿಮಾದ ನಿಜವಾದ ಹೀರೋ ಅದರ ಸಂಕಲನಕಾರ ಪ್ರವೀಣ್ ಕೆ.ಎಲ್.

ಸಿಲಂಬರಸನ್ (ಸಿಂಬು) ಅವರಿಗೆ ಇಂಥದೊಂದು ಗೆಲುವು ಬೇಕಿತ್ತು. ಅವರ ಕಮ್ ಬ್ಯಾಕ್ ಇಲ್ಲಿ ತುಂಬಾ ಗಟ್ಟಿಯಾಗಿದೆ. ತಾನಿನ್ನೂ ಮುಗಿದಿಲ್ಲ, ತಾನಿನ್ನೂ ಮಾಡಬೇಕಿರುವುದು ಬಹಳಷ್ಟಿದೆ ಅಂತ ತಮ್ಮ ಪಾತ್ರ ನಿರ್ವಹಣೆಯಲ್ಲಿ ಹೇಳಿಬಿಡುತ್ತಾರೆ. ಆದರೆ ತೆರೆಯ ಮೇಲೆ ಕಾಣಿಸಿಕೊಂಡಾಗಲೆಲ್ಲ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಮಾತ್ರ ಸಿನಿಮಾದ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ, ನಿರ್ದೇಶಕ "ಎಸ್. ಜೆ. ಸೂರ್ಯ". ಅವರ ಡೈಲಾಗ್ ಡೆಲಿವರಿ ಹೇಳುವ ಆವರ ಆತ್ಮವಿಶ್ವಾಸ ನಿಜಕ್ಕೂ ಮೆಚ್ಚುವಂಥದ್ದು.

ಮೊದಲಾರ್ಧ ಒಬ್ಬ ನಟನ ಟೈಮ್ ಲೂಪ್ ಕಥೆಯಿಂದ ಶುರುವಾದರೆ ಉಳಿದರ್ಧ ಇನ್ನೊಬ್ಬನ ಟೈಮ್ ಲೂಪ್ ಸೇರಿಕೊಳ್ಳುವುದರ ಜೊತೆ ಇನ್ನಷ್ಟು ಜಟಿಲವಾಗುತ್ತದೆ. ಆದರೆ ಒಟ್ಟಾರೆ ಕಥೆ ಅರ್ಥ ಮಾಡಿಸಲು ಬರೆದಿರುವ ರೀತಿಗೆ ನಿರ್ದೇಶಕ ವೆಂಕಟ್ ಪ್ರಭು ಅವರನ್ನು ಅಭಿನಂದಿಸಲೇಬೇಕು.

ಒಂದೆಡೆ ನಾಯಕರಿಬ್ಬರ ಅಭಿನಯ, ಇನ್ನೊಂದೆಡೆ ಟೈಮ್-ಲೂಪ್, ಮತ್ತೊಂದೆಡೆ ಯುವನ್ ಶಂಕರ್ ರಾಜಾ ಅವರ ಹಿನ್ನೆಲೆ ಸಂಗೀತ ಎಲ್ಲವೂ ಸೇರಿ "ಮಾನಾಡು" ಸಿನಿಮಾ ನೋಡುವ ಅನುಭವವನ್ನು ಸಿಕ್ಕಾಪಟ್ಟೆ ಚಂದಗೊಳಿಸುತ್ತವೆ.

ಸಿನಿಮಾ ಈಗಾಗಲೇ ಗೆದ್ದು ಕೋಟಿಕೋಟಿ ಬಾಚಿಕೊಳ್ಳುತ್ತಿದೆ. ಇಂಥ ಪ್ರಯತ್ನಗಳು ಗೆಲ್ಲಬೇಕು.

-Santhosh Kumar LM
05-Dec-2021