Friday, December 20, 2019

Truth And Justice (2019)- Estonian Movie



Truth and Justice (2019)

ಸದ್ಯಕ್ಕೆ ಈ ವರ್ಷದ ಆಸ್ಕರ್ ಪ್ರಶಸ್ತಿಗೆ " Best Foreign Language Film " ವಿಭಾಗದಲ್ಲಿ ಆಯ್ಕೆಗೊಂಡಿರುವ ಈಸ್ಟೋನಿಯ ದೇಶದ ಚಿತ್ರ.  ಈಸ್ಟೋನಿಯಾ ಭಾಷೆಯಲ್ಲಿಯೇ ಸಿನಿಮಾ ಇದೆ. ಸಂಭಾಷಣೆ ಅರ್ಥೈಸಿಕೊಳ್ಳಲು ಸಬ್ ಟೈಟಲ್'ನ ಸಹಾಯ ಬೇಕು.

ಹತ್ತೊಂಭತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ನಡೆವ ಕಥೆಯನ್ನು ಹೊಂದಿರುವ ಈ ಸಿನಿಮಾ ಕಾದಂಬರಿ ಆಧಾರಿತ. ಐದು ಕಾದಂಬರಿಗಳಿರುವ ಈ   "Truth and Justice" ಸರಣಿಯನ್ನು ಬರೆದವರು A.H.Tammsaare, 1926 ರಲ್ಲಿ. ಈ ಸಿನಿಮಾ ಆ ಸರಣಿಯ ಮೊದಲನೆಯ ಕಾದಂಬರಿಯನ್ನು ಆಧರಿಸಿದೆ.

ಈಸ್ಟೋನಿಯಾ ದೇಶದಲ್ಲಿ ವರ್ಷಕ್ಕೆ ನಿರ್ಮಾಣವಾಗುವುದೇ ಐದಾರು ಸಿನಿಮಾಗಳು. ಅವುಗಳಲ್ಲೇ ಇಂಥದ್ದೊಂದು ಸಿನಿಮಾ ತಯಾರಾಗಿ ಅದು ಆಸ್ಕರ್'ವರೆಗೆ ಬಂದು ನಿಂತಿರುವುದು ಅದು ನಿಜಕ್ಕೂ ಅಚ್ಚರಿಯ ಸಾಧನೆ.

ಕಡಿಮೆ ಬೆಲೆಯಲ್ಲಿ ಜೌಗು ನೆಲದ ಜಮೀನೊಂದನ್ನು ಕೊಂಡು ಅಲ್ಲಿ ನೆಲೆಸಲು ಪತ್ನಿಯ ಜೊತೆ ಬರುವ ನಾಯಕ, ಅದರಲ್ಲಿ ಬೇಸಾಯ ಶುರುಮಾಡಿ ಒಳ್ಳೆಯ ಫಸಲನ್ನು ತೆಗೆಯಲು ಹೆಣಗುವುದು....
ಮುಂದೆ ತನ್ನ ಆಸ್ತಿಗೆ ಹಕ್ಕುದಾರನಾಗಲು ಗಂಡು ಮಗನೇ ಬೇಕೆನ್ನುವುದು
ಕಿರುಕುಳ ಕೊಡುವ ಪಕ್ಕದ ಜಮೀನಿನವ....

ಹೀಗೆ ಅನೇಕ ಎಳೆಗಳು ಒಟ್ಟೊಟ್ಟಿಗೆ ಸಾಗುತ್ತಲೇ ಮೂಲಕಥೆಯನ್ನು ಹೇಳುತ್ತ ಅಲ್ಲಿಯ ಜೀವನವನ್ನು ಮತ್ತು ಆ ಕಾಲಘಟ್ಟದ ಅವರ ಸಂಸ್ಕೃತಿಯನ್ನು ನಮಗೆ ಕಟ್ಟಿಕೊಡುತ್ತವೆ. ಕಥೆಯ ಬಗ್ಗೆ ಜಾಸ್ತಿ ಹೇಳುವುದು ಬೇಡ.

ಆದರೆ ನೋಡುವಾಗ ನಮಗೆ ತಕ್ಷಣಕ್ಕೆ ಮನದಟ್ಟಾಗುವುದು ಸಿನಿಮಾ ತಂಡದ ಶ್ರಮ. ಇಡೀ ಸಿನಿಮಾದ ಕಥೆ ಅನೇಕ ದಶಕಗಳನ್ನು, ಮತ್ತು ಬೇರೆ ಬೇರೆ ಋತುಗಳನ್ನು ಕಾಣುತ್ತದೆ. ಪ್ರತೀ ಋತುವಿನಲ್ಲೂ ವ್ಯವಸಾಯದ ಬೇರೆ ಬೇರೆ ಕೆಲಸಗಳನ್ನು, ಹಾಗೆ ಬೇರೆ ಬೇರೆ ಕಾಲಘಟ್ಟದಲ್ಲಿಯ ಕಥೆಯನ್ನು ಆ ಪಾತ್ರಗಳ ಬೇರೆ ಬೇರೆ ವಯಸ್ಸಿನ ವೇಷದೊಂದಿಗೆ ತಯಾರು ಮಾಡಿ ಅವರಿಂದ ನಟನೆ ತೆಗೆಯುವುದಿದೆಯಲ್ಲ. ಅದು ದುಸ್ಸಾಹಸವೆನಿಸುತ್ತದೆ. ಪಾತ್ರಗಳಿರಲಿ. ಒಂದೇ ನೆಲದಲ್ಲಿ ಮಳೆ, ಬಿಸಿಲು, ಹಿಮ ಹೀಗೆ ಬೇರೆ ಬೇರೆ ಹವಾಮಾನವಿದ್ದಾಗಲೂ ಅದನ್ನು ಕಥೆಗೆ ತಕ್ಕಂತೆ ಬೆಳೆಯನ್ನು, ಕೆಸರನ್ನು, ಫಸಲನ್ನು ತಯಾರು ಮಾಡಿ ದೃಶ್ಯ ಕಟ್ಟುವುದಿದೆಯಲ್ಲ ಆ ಶ್ರಮ ಸಿನಿಮಾ ನೋಡುವಾಗಲೇ ನಮಗೆ ಗೊತ್ತಾಗುತ್ತದೆ.

ಸಿನಿಮಾ ಎರಡೂ ಮುಕ್ಕಾಲು ಗಂಟೆಯಿದೆ. ಅದ್ಭುತ ಹಿನ್ನೆಲೆ ಸಂಗೀತದೊಂದಿಗೆ ಅಲ್ಲಲ್ಲಿ  ನಿಶಬ್ಧವಿದೆ. ಕೆಲವು ದೃಶ್ಯಗಳಲ್ಲಿ ತೀವ್ರತೆಯಿದೆ. ಅವೆಲ್ಲವನ್ನು ಸಿನಿಮಾ ನೋಡಿಯೇ ಅರ್ಥೈಸಿಕೊಳ್ಳಬೇಕು, ಅನುಭವಿಸಬೇಕು.

ಪ್ರಪಂಚದ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವ ಅಭ್ಯಾಸವಿದ್ದರೆ ನೋಡಿ. ನಿಮಗೆ ಖಂಡಿತ ಇಷ್ಟವಾಗಬಹುದು.

-Santhosh Kumar LM
20-Dec-2019

Wednesday, December 18, 2019

ಗಂಟುಮೂಟೆ (2019)









ಗಂಟುಮೂಟೆ (2019)

ಹೆಣ್ಣುಮಗಳೊಬ್ಬಳು ಯಾರಿಗೂ ಹೇಳದ ಹೊಟ್ಟೆಯೊಳಗಿನ ಗುಟ್ಟೊಂದನ್ನು ಮುಂದೊಮ್ಮೆ ಅತ್ಮೀಯನೊಬ್ಬನಿಗೆ ಹೇಳಿದಂತೆ ಕಥೆ ಹೆಣೆಯಲಾಗಿದೆ. ಎಲ್ಲ ಸಿನಿಮಾ-ಕಥೆಗಳಲ್ಲಿ "ಅದು ನಮಗೆ ಕೊಡುವ ಸಂದೇಶವೇನು?" ಅಂತ ಕೇಳುವ ಅವಶ್ಯಕತೆಯಿಲ್ಲ. ಕೆಲವು‌ ಕಥೆಗಳನ್ನು ಕಟ್ಟುವಾಗ ಅದರ ಬಗ್ಗೆ ಯೋಚಿಸಿರುವುದೂ ಇಲ್ಲ. It's fair!

ಸಮಸ್ಯೆಯಾಗುವುದು ಸಿನಿಮಾವೊಂದು ಸಾಮಾನ್ಯ ಮನರಂಜನೆಯನ್ನಾದರೂ ಕೊಡದೆ ಹೋದಾಗ! ಆದರೆ ಗಂಟುಮೂಟೆ ಸಿನಿಮಾ ಆ ಬಗೆಯ ದ್ರೋಹವನ್ನೇನೂ ಮಾಡುವುದಿಲ್ಲ. ಮೊದಲನೆಯ ದೃಶ್ಯದಿಂದಲೇ ನಮ್ಮನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತದೆ. ಅಷ್ಟರ ಮಟ್ಟಿಗೆ ಅದು ಚಿತ್ರದ ಯಶಸ್ಸೇ!


ಕಥೆಯಲ್ಲಿ ಹೊಸತೇನಿಲ್ಲ. ಹದಿಹರೆಯದ ವಯಸ್ಸಿನ ಆಕರ್ಷಣೆ, ಪ್ರೇಮ, ತೊಳಲಾಟ, ಯಾವುದು ಸರಿ-ತಪ್ಪು ತಿಳಿಯದ ದ್ವಂದ್ವ, ಕಡೆಗೆ ಅದರಿಂದ ಉಂಟಾಗುವ ಪರಿಣಾಮಗಳು ಇವುಗಳ ಬಗ್ಗೆ ಅನೇಕ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಈ ಸಿನಿಮಾ ಅದೇ ಕಥೆಯನ್ನು ಹೇಳುವುದರಲ್ಲಿ ಹೊಸತೆನಿಸುತ್ತದೆ. ಏನಾಗಬಹುದು ಎಂದು ನಾವು ಊಹಿಸಬಲ್ಲೆವಾದರೂ ಆ ಹುಡುಗಿಯ ಮೂಲಕವೇ ಕಥೆ ಹೇಳಿಸಿರುವುದು ವಿಭಿನ್ನ ಅನುಭವ ನೀಡುತ್ತದೆ. ಬಹುಶಃ ಇದೇ ಸಿನಿಮಾವನ್ನು ಪುರುಷರೊಬ್ಬರು ನಿರ್ದೇಶಿಸಿದ್ದರೆ ಕಥೆಗೆ ಬೇರೆಯದೇ ಬಗೆಯ ಧಾಟಿ ಇರುತ್ತಿತ್ತು ಅನಿಸುವುದು ಸಹಜ. ಏಕೆಂದರೆ ಹಸಿಬಿಸಿ ದೃಶ್ಯಗಳನ್ನು ಕೇವಲ ಚುಂಬನಕ್ಕೆ ಸೀಮಿತವಾಗಿಸಿ ಅವನ್ನೂ ಸಹ ಸಹ್ಯವಾಗುವಂತೆಯೇ ಚಿತ್ರಿಕರಿಸಲಾಗಿದೆ. ನನಗೆ ಇಷ್ಟವಾದದ್ದು ಹಾಡುಗಳ ಮೂಲಕ ಹೇಳಬಹುದಾದ ಸಂದರ್ಭಗಳಲ್ಲಿ ಕವಿತೆಯ ಸಾಲುಗಳನ್ನು ಬಳಸಿರುವುದು ವಿಭಿನ್ನ ಪ್ರಯತ್ನ‌, ಚೆನ್ನಾಗಿ appeal ಆಗುತ್ತದೆ.

ಪ್ರಶ್ನೆಯೇ ಇಲ್ಲ. ತೇಜು ಬೆಳವಾಡಿಯದು ಕಾಡುವ ಅಭಿನಯ. ಆದರೆ ಅವರೊಟ್ಟಿಗೆ ಮಧು ಪಾತ್ರ ಮಾಡಿದ ನಿಶ್ಚಿತ್ ಸಹ ತುಂಬಾ ಇಷ್ಟವಾದರು. ಅವರ ಬಗ್ಗೆ ಹೆಚ್ಚು ಸುದ್ದಿ ಬರದಿದ್ದುದು ನನಗೆ ಅಚ್ಚರಿಯೇ!! ಮೊದಲನೇ ಬಾರಿ ರಿಸಲ್ಟ್ ಬಂದಾಗ ಈಕೆ ಕ್ಲಾಸಿಗೆ ಮೊದಲನೆಯವಳಾಗಿ ಪಾಸಾಗಿ ಆತ ಫೇಲಾಗಿ ಅತ್ತ ನಿಂತು ಸಿಗರೇಟು ಸೇದುತ್ತಿರುವಾಗ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆ, gradually ಅವನ ಮನಸ್ಸಿಗಾಗಿರುವ ನೋವನ್ನು ಹೇಳುವಿಕೆ ಇಷ್ಟವಾಯಿತು.

smoking ದೃಶ್ಯಗಳು, ಚುಂಬನದ ದೃಶ್ಯಗಳನ್ನು ಕಡಿಮೆ ಬಳಸಿಕೊಳ್ಳಬಹುದಿತ್ತು. ಪ್ರತೀ ದೃಶ್ಯದಲ್ಲಿ Smoking ಮಾಡುವಾಗಲಂತೂ ಆತನ ಗೆಳತಿಯರು ಬೇಡವೆನ್ನದೆ ಏನೂ ಆಗೇ ಇಲ್ಲ ಅನ್ನುವ ಥರ ಡೈಲಾಗ್ ಹೇಳಿದ್ದು accept ಮಾಡಿಕೊಳ್ಳಲಾಗಿಲ್ಲ. (ಬಹುಶಃ ಇದೇ ದೃಶ್ಯಗಳ ಬಗ್ಗೆ ಕೆಲ ಗೆಳೆಯರು ಅಸಹನೆ ತೋರಿರಬಹುದಾ? ಗೊತ್ತಿಲ್ಲ) . ಮಧು ಸಾವಿನ, ನಂತರದ ದೃಶ್ಯಗಳಲ್ಲಿ ಇನ್ನಷ್ಟು ತೀವ್ರತೆ ಇದ್ದಿದ್ದರೆ ಸಿನಿಮಾ ಇನ್ನೂ ಚೆನ್ನಾಗಿ ತಲುಪುತ್ತಿತ್ತು ಅನಿಸಿತು. ಪ್ರ್ಯಾಕ್ಟಿಕಲ್ ಆಗಿ ಯೋಚಿಸುವ ಗಣಿತದ ಮೇಷ್ಟ್ರಿನ ಪಾತ್ರವನ್ನು ಇನ್ನೂ ಹೆಚ್ಚು ಬಳಸಿಕೊಳ್ಳಬಹುದಿತ್ತು.

ಸಿನಿಮಾ ಥಿಯೇಟರ್‌ನಲ್ಲಿ ಗಾಂಧೀಕ್ಲಾಸಿನಲ್ಲಿ ಕುಳಿತು ಆಕೆ‌ ಸಿನಿಮಾ ನೋಡುವಾಗ ಒಬ್ಬಾತನ ಅಸಭ್ಯ ನಡವಳಿಕೆ ತೋರಿದಾಗ, ಆಕೆ ಬಾಲ್ಕನಿಗೆ ಬಂದು ಸಿನಿಮಾ ಕುಳಿತು ನೋಡುವುದು ಗಾಂಧೀಕ್ಲಾಸಿನ ಜನರ ಬಗೆಗೆ ಬೇರೆಯದೇ generalized comment ಹೇಳುತ್ತದೆ. ಅದು ಉದ್ದೇಶಪೂರ್ವಕ ಅಲ್ಲದಿರಬಹುದು. ಆದರೆ ಅಷ್ಟು ತಕ್ಷಣಕ್ಕೆ ಅನಿಸದಿದ್ದರೂ ಕೆಲ ಪ್ರೇಕ್ಷಕರು ಸೂಕ್ಷ್ಮವಾಗಿ ಇಂಥವುಗಳನ್ನು ಗಮನಿಸುತ್ತಾರೆ ಅನ್ನುವುದನ್ನು ನಿರ್ದೇಶಕರು ಮರೆಯಬಾರದು.

"ಗಂಟುಮೂಟೆ", ಖಂಡಿತ ಒಮ್ಮೆ ನೊಡಬಹುದಾದ ಸಿನಿಮಾ. ನನಗಿಷ್ಟವಾಯಿತು.

-Santhosh Kumar LM
17-Dec-2019

Tuesday, December 3, 2019

A Write up On two Tamil movies









ನನಗೆ ಮನರಂಜನೆಗೋಸ್ಕರವೇ ಅಂತ ತೆಗೆದ ಸಿನಿಮಾ ಬೇಡ. ವಿಭಿನ್ನವಾಗಿರುವ ಸಿನಿಮಾ ಬೇಕು ಅಂತ ಕೇಳುವ 'ವಿಭಿನ್ನತೆಯನ್ನು ಇಷ್ಟಪಡುವ ಸಿನಿಮಾ ಪ್ರೇಕ್ಷಕ' ನೀವಾಗಿದ್ದರೆ ಎರಡು ತಮಿಳು ಸಿನಿಮಾಗಳನ್ನು ಹೇಳುತ್ತೇನೆ. ನೀವು ನೋಡಲೇಬೇಕು. ಇವೆರಡೂ ಸಿನಿಮಾಗಳಲ್ಲಿ ಸಾಮ್ಯತೆಯಿದೆ. ಮನರಂಜನೆ ಕೇಳುತ್ತೀರೋ? ಅಷ್ಟು ಸಿಗಲಾರದು. ಆದರೆ ವಿಭಿನ್ನ ಕಥಾನಿರೂಪಣೆ ಈ ಎರಡು ಸಿನಿಮಾಗಳಲ್ಲೂ ಸಿಗುತ್ತದೆ.

1. ಕರ್ಮ (2015)
2. ಒತ್ತ ಸೆರಪ್ಪು size-7 (2019)

ಪಾರ್ಥಿಬನ್ ನಟಿಸಿದ ಇತ್ತೀಚೆಗಷ್ಟೇ ಬಿಡುಗಡೆಯಾದ ಒತ್ತ ಸೆರಪ್ಪು ಸಿನಿಮಾ ಎಲ್ಲೆಡೆ ಸಿನಿಪ್ರಿಯರ ಪ್ರಶಂಸೆಗೆ ಕಾರಣವಾಗಿದೆ. ಆದರೆ ಇದೇ ಬಗೆಯ ವಿಚಾರವಿದ್ದ ಸಿನಿಮಾ "ಕರ್ಮ" 2015 ರಲ್ಲಿಯೇ ಬಿಡುಗಡೆಯಾಗಿತ್ತು(ಥಿಯೇಟರಿನಲ್ಲಲ್ಲ, ಬೇರೆ ಮಾಧ್ಯಮಗಳ ಮೂಲಕ). ಆಗ ಆ ಸಿನಿಮಾಗೆ ಅಷ್ಟು ಜನಪ್ರಿಯತೆ ಸಿಗಲಿಲ್ಲ.

ಎರಡೂ ಸಿನಿಮಾಗಳಲ್ಲಿ ಇರುವ ವಿಶೇಷವೆಂದರೆ ಈ ಸಿನಿಮಾಗಳಲ್ಲಿ ಇರುವುದು ಒಂದೇ ಪಾತ್ರ. ನಾಯಕ ಪಾತ್ರವೇ ಹೆಚ್ಚು-ಕಡಿಮೆ ಎರಡು ಘಂಟೆಗಳ ಕಾಲ ನಮ್ಮನ್ನು ಹಿಡಿದು ಕೂರಿಸುತ್ತದೆ.

ಕರ್ಮ ಸಿನಿಮಾದಲ್ಲಿ ಪೊಲೀಸನೊಬ್ಬ (ತನ್ನ ಹೆಂಡತಿಯನ್ನು ಕಳೆದುಕೊಂಡ) ವ್ಯಕ್ತಿಯೊಬ್ಬನನ್ನು ವಿಚಾರಣೆ ಮಾಡುವುದು. ಇವರಿಬ್ಬರ ಸಂಭಾಷಣೆಯೇ ಕಥೆ. ಅದರಲ್ಲಿ ಗಮನಿಸಬೇಕಾದ್ದೆಂದರೆ ಪೊಲೀಸ್ ಮತ್ತು ಆ ವ್ಯಕ್ತಿ ಇಬ್ಬರ ಪಾತ್ರ ನಿರ್ವಹಿಸಿದ್ದೂ R Arvind ಒಬ್ಬನೇ! ಸಿನಿಮಾ ನೋಡಿದ ಮೇಲೆ ಆ ಎರಡೂ ಪಾತ್ರಗಳ ಪಾತ್ರಧಾರಿ ಒಬ್ಬನೇ ಎಂದರೆ ನೀವು ನಂಬಲಾರಿರಿ. ಪತ್ತೇದಾರಿ ಕಥೆಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟವಾಗುತ್ತದೆ.

ಒತ್ತ ಸೆರಪ್ಪು ಸಿನಿಮಾದಲ್ಲಿ ಠಾಣೆಯೊಳಗೆ ವಿಚಾರಣಾಧೀನ ಖೈದಿಯೊಬ್ಬನನ್ನು ಕೂರಿಸಿಕೊಂಡು ಆತ ಮಾಡಿದ ಅಪರಾಧಗಳ modus of operandi ಬಗ್ಗೆ ತಿಳಿದುಕೊಳ್ಳುವಾಗ ಬಯಲಾಗುವ ಸತ್ಯಗಳು, ಮತ್ತು ಆ ಮೂಲಕ ನಮಗೆ ಹೇಳುವ ಕಥೆ. ಇಲ್ಲಿ ಕ್ಯಾಮೆರಾ ಕೇವಲ ಖೈದಿಯ ಮುಖದೆಡೆಗಿರುತ್ತದೆ. ಉಳಿದ ಪಾತ್ರಗಳ ಸಂಭಾಷಣೆಗಳಷ್ಟೇ ನಮಗೆ ಕೇಳುತ್ತವೆ. ಖೈದಿಯ ಪಾತ್ರದಲ್ಲಿ ಪಾರ್ಥಿಬನ್ ಇಡೀ ಸಿನಿಮಾವನ್ನು ತನ್ನ ಹೆಗಲ ಮೇಲೆ ಹೊತ್ತು ನಡೆಸುತ್ತಾರೆ. ಕರ್ಮ ಸಿನಿಮಾದಂತೆ ಇಲ್ಲಿ ಕೇವಲ ಸಂಭಾಷಣೆಯಿಲ್ಲ, ಪಾರ್ಥಿಬನ್'ನ ಅದ್ಭುತ ಏಕಪಾತ್ರಾಭಿನಯವಿದೆ. ಯಾವುದೋ ಮಾನಸಿಕ ಖಾಯಿಲೆಯಿರುವ ವ್ಯಕ್ತಿಯಾಗಿ ಪ್ರತೀ ದೃಶ್ಯವನ್ನು ಹೇಳುವಾಗ ಆತ ಸಂಭಾಷಣೆ ಹೇಳುವ ರೀತಿ, ಆಂಗಿಕ ಅಭಿನಯ, ಧ್ವನಿಯ ಏರಿಳಿತ ಎಲ್ಲದರಲ್ಲೂ ಚಪ್ಪಾಳೆ ಗಿಟ್ಟಿಸುತ್ತಾರೆ. ಎರಡು ಘಂಟೆಗಳ ಕಾಲ ಒಬ್ಬನೇ ವ್ಯಕ್ತಿ ಪ್ರೇಕ್ಷಕನನ್ನು ಹಿಡಿದಿಡುವುದು ಸುಮ್ಮನೆ ಮಾತಲ್ಲ. Sound Designing, ಕತ್ತಲೆಯ ಕೋಣೆಯೊಳಗೆ ತೆಗೆದಿರುವುದರಿಂದ ನಿಜಕ್ಕೂ ಸವಾಲೇ. ಯಾವುದಾದರೊಂದು ವಿಭಾಗದಲ್ಲಿ ಈ ಸಿನಿಮಾ ಕೂಡ ಪ್ರಶಸ್ತಿ ಗಳಿಸುವುದನ್ನು ನಾವು ಎದುರು ನೋಡಬಹುದು.

ಬರೀ ಸಂಭಾಷಣೆಯೇ ಈ ಎರಡೂ ಸಿನಿಮಾಗಳ ಜೀವಾಳವಾದ್ದರಿಂದ, ಸಂಭಾಷಣೆ ಇಷ್ಟಪಡದ ಹೆಚ್ಚುಹೆಚ್ಚು ಬೇರೆ ಬೇರೆ ದೃಶ್ಯಗಳಿರಬೇಕು ಅಂತ ಆಶಿಸುವವರಿಗೇ ಇವೆರಡು ಸಿನಿಮಾಗಳು ಬೇಸರ ಮೂಡಿಸಬಲ್ಲವು.

ಆದರೆ ಈಗಾಗಲೇ ಹೇಳಿದಂತೆ ವಿಭಿನ್ನ ಸಿನಿಮಾಗಳನ್ನು ಇಷ್ಟಪಡುವವರಿಗೆ ಇವೆರಡೂ ನೋಡಬೇಕಾದ ಸಿನಿಮಾಗಳೇ..

-Santhosh Kumar LM
03-Dec-2019

Monday, December 2, 2019

ಕಾಳಿದಾಸ ಕನ್ನಡ ಮೇಷ್ಟ್ರು (2019)

ಬಿಡುಗಡೆಯಾದ ವಾರದ ನಂತರವೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕನ್ನಡ ಚಿತ್ರ. ನಿನ್ನೆ GT world mallನಲ್ಲಿ ಸಂಜೆಯ ಪ್ರದರ್ಶನ ಹೆಚ್ಚು-ಕಡಿಮೆ houseful ಆಗಿತ್ತು.

ಸಂದೇಶವೊಂದನ್ನು ಸಮಾಜಕ್ಕೆ ದಾಟಿಸಲೆಂದೇ ಮಾಡಿರುವ ಚೆಂದದ ಚಿತ್ರ. ಹಾಗಂತ ಇದಕ್ಕೆ ಜಗ್ಗೇಶ್ ಏಕೆ ಅನ್ನಿಸಬಹುದು. ಮೊದಲರ್ಧದಲ್ಲಿ ಕಥೆಯ ಭಾಗವಾಗಿಯೇ ಹಾಸ್ಯ ಬಳಕೆಯಾಗಿದೆ. ಆದ್ದರಿಂದ ಸಿನಿಮಾ ಅರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ. ಹಾಸ್ಯವೂ ಅಷ್ಟೇ, ಎಲ್ಲೂ ತುರುಕಲಾಗಿದೆ ಅನ್ನಿಸುವುದಿಲ್ಲ. ಜಗ್ಗೇಶ್‌ನ ಮ್ಯಾನರಿಸಂ ಸಿಕ್ಕಾಪಟ್ಟೆ ನಗು ತರಿಸುತ್ತದೆ.

ದ್ವಿತೀಯಾರ್ಧದಲ್ಲಿ ಕಥೆ ಬೇರೊಂದು ತಿರುವು ಪಡೆದು ಇದ್ದಕ್ಕಿದ್ದಂತೆ ಗಂಭೀರವಾಗುತ್ತದೆ. ಇಲ್ಲಿ ನನಗಿಷ್ಟವಾದದ್ದು ನಿರ್ದೇಶಕನ ಸಂದೇಶ ಹೇಳುತ್ತಿರುವ clarityಯ ಬಗ್ಗೆ. ಎಷ್ಟೋ ಸಲ ಖಾಸಗಿ ಶಾಲೆಗಳನ್ನು ವಿರೋಧಿಸುವುದೇ ಅನೇಕ ಸಿನಿಮಾಗಳ ಉದ್ದೇಶವಾಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ಸಮಾನ ಶಿಕ್ಷಣ, ಉಚಿತ ಶಿಕ್ಷಣ, ಖಾಸಗಿ ಶಾಲೆಗಳ ಕಡಿವಾಣ, ಸರ್ಕಾರಿ ಶಾಲೆಗಳ ಪುನರುಜ್ಜೀವನಗೊಳಿಸುವಿಕೆ, ಮಾತೃಭಾಷಾ ಶಿಕ್ಷಣ, ಮುಂದಿನ ಜೀವನಕ್ಕೆ ಬೇಕಾದ ಕೌಶಲ್ಯ ನೀಡುವ ಶಿಕ್ಷಣ, ಮಕ್ಕಳಿಗೆ ಶಾಲೆಯೆನ್ನುವುದು ಹೊರೆಯಾಗದಂತೆ ಮಾಡುವಿಕೆ, ಡೊನೇಶನ್ ಹಾವಳಿಗೆ ಕಡಿವಾಣ,.... ಅನೇಕ ವಿಷಯಗಳ ಬಗ್ಗೆ ಹೇಳುತ್ತಾರೆ. ಹೇಳುವ ರೀತಿಯಲ್ಲಿ ಯಶಸ್ವಿಯಾಗುತ್ತಾರೆ ಕೂಡ. ಮಕ್ಕಳನ್ನು ಮಾರ್ಕ್ಸ್ ತರುವ ಯಂತ್ರಗಳಂತೆ ಕಾಣುವ ತಂದೆ ತಾಯಿಗಳಿಗಂತೂ ಈ ಸಿನಿಮಾ‌ ನೋಡುವಾಗ ತಮ್ಮನ್ನು ತಾವು ಅವಲೋಕಿಸಿಕೊಳ್ಳುವಂತೆ ಮಾಡುತ್ತದೆ.

ಜಗ್ಗೇಶ್ ಕೈಯಲ್ಲಿ ಡಬ್ಬಲ್ ಮೀನಿಂಗ್ ಡೈಲಾಗುಗಳನ್ನು ಹೇಳಿಸದೇ ಹೊಟ್ಟೆ ಹುಣ್ಣಾಗುವಂತೆ ನಕ್ಕುನಗಿಸುವುದು ನಿಜಕ್ಕೂ ಸವಾಲು. ಆ ಸವಾಲಿನಲ್ಲಿ ನಿರ್ದೇಶಕ ಗೆದ್ದಿದ್ದಾರೆ.

ದ್ವಿತೀಯಾರ್ಧದಲ್ಲಿ ಹಾಸ್ಯ ಕಡಿಮೆಯಾಯಿತು ಅನ್ನುವ ದೃಷ್ಟಿಯಿಂದ ಕೆಲವು ಹಾಸ್ಯ ದೃಶ್ಯಗಳನ್ನು ಕಥೆಯ ಮಧ್ಯೆ ತುರುಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನನಗೆ ಕಿರಿಕಿರಿಯಾಗಿದ್ದು ಗಂಭೀರವಾದ ಸನ್ನಿವೇಶದಲ್ಲಿ ಬರುವ ತಬಲ ನಾಣಿಯ ಹಾಸ್ಯದ ದೃಶ್ಯಗಳು. ಅವಿಲ್ಲದಿದ್ದರೂ ಸಿನಿಮಾಗೆ ಕೊರತೆಯಾಗುತ್ತಿರಲಿಲ್ಲ.

ಸಿನಿಮಾ logical solution ಅಂತ ಏನನ್ನೂ ಇಲ್ಲಿ ಕೊಡುವುದಿಲ್ಲ. ಆದರೆ ಸದ್ಯದ ಸಮಸ್ಯೆ ಹೇಳುತ್ತ, ಮುಂದೆ ಹೀಗಾದರೆ ಎಷ್ಟು ಚೆಂದ ಅನ್ನುವ ಕಲ್ಪನೆ ಕೊಟ್ಟು ಮುಕ್ತಾಯವಾಗುತ್ತದೆ. ಅದನ್ನು ಹೇಗೆ ಸಾಧಿಸಬೇಕೆನ್ನುವುದು ನಮ್ಮ ಆಲೋಚನೆಗೆ ಬಿಟ್ಟಿದ್ದು.

ಏನೇ ಇರಲಿ. ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಥೆಯನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನವೇ ಬೆನ್ನು ತಟ್ಟುವಂಥದ್ದು. ನಟ ಜಗ್ಗೇಶ್, ನಿರ್ದೇಶಕ ಕವಿರಾಜ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು.

ಖಂಡಿತವಾಗಿ ಬೋರ್ ಹೊಡೆಸದ ಸಿನಿಮಾ. ನೋಡಿರದಿದ್ದರೆ ಒಮ್ಮೆ ನೋಡಿ.

-Santhoshkumar LM
02-Dec-2019