Monday, September 26, 2022

ಗುರುಶಿಷ್ಯರು (2022, Kannada)



ಅಲ್ಲೊಬ್ಬ ಎದುರಿನ ಪಾಳಯದಾತ ತನ್ನ ಹುಡುಗರಿಗೆ ಹೇಳುತ್ತಿರುತ್ತಾನೆ.

"ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು. ಸೋಲಿಸುವ ದಾರಿ ಹುಡುಕಿ"

ಇತ್ತಲಿನ ಪಾಳಯದ ಗುರು ತನ್ನ ಹುಡುಗರಿಗೆ ಹೇಳುತ್ತಿರುತ್ತಾನೆ

"ಗೆಲ್ಲುವ ದಾರಿ ಹುಡುಕಿ"

ಎರಡೂ ಒಂದೇ ಅನ್ನಿಸಿದರೂ ಒಂದೇ ಅಲ್ಲ! ಈ ಸಿನಿಮಾ ಕೂಡ ಅಷ್ಟೇ. ಉಳಿದ ಸಿನಿಮಾಗಳನ್ನು ಸೋಲಿಸಲು ಬಂದಿರುವ ಚಿತ್ರವಲ್ಲ. ಬದಲಿಗೆ ತಾನು ಯಾಕೆ ವಿಭಿನ್ನ, ವಿಶಿಷ್ಟವೆಂದು ತೋರಿಸಿ ಗೆಲ್ಲಲು ಬಂದಿರುವ ಸಿನಿಮಾ!

ಇನ್ನೊಂದು ಡೈಲಾಗಿದೆ. "ಅವಕಾಶ ಸಿಗದಿದ್ದರೆ ಅದು ಸೋಲಲ್ಲ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಅದು ನಿಜವಾದ ಸೋಲು" ಅಂತ! ಈ ಸಿನಿಮಾ ಕೂಡ ಅಷ್ಟೇ... ಅವಕಾಶ ಸಿಕ್ಕಾಗಲೆಲ್ಲ ನೋಡುಗರ ಎದೆಯಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಮಾಡುತ್ತದೆ. "ಕೆಳಗೆ ಬಿದ್ದ ಎದುರಾಳಿಯನ್ನು ಸೋಲಿಸುವುದು ಕ್ರೀಡಾ ಮನೋಭಾವವಲ್ಲ" ಎಂದು ಅತ್ತ ಎದುರು ತಂಡದಿಂದಲೂ ಚಪ್ಪಾಳೆ ಬೀಳುತ್ತದೆ. ಇತ್ತ ಪ್ರೇಕ್ಷಕನ ಕೈ ಕೂಡ ಚಪ್ಪಾಳೆ ತಟ್ಟುತ್ತದೆ. ಹೀಗೆ ಎಲ್ಲೂ ಋಣಾತ್ಮಕ ಚಿಂತನೆಗಳಿಗೆ ಅವಕಾಶವನ್ನೇ ಕೊಡುವುದಿಲ್ಲ. ಬೀಳುವ ಸಮಯ ಬಂದಾಗಲೂ ತನ್ನದೇ ಸಾಮರ್ಥ್ಯದಿಂದ ಎದ್ದು ನಿಲ್ಲುತ್ತದೆ. ಬೇಸರದಲ್ಲಿ ಕುಳಿತ ಪ್ರೇಕ್ಷಕನು ಮುಷ್ಟಿ ಬಿಗಿ ಹಿಡಿದು "ಕಮಾನ್" ಎಂದು ಎದ್ದು ನಿಲ್ಲುತ್ತಾನೆ.

ನೀವು ಇದೊಂದು ಲವ್ ಸ್ಟೋರಿ ಅಂದುಕೊಂಡರೆ ಅದು ಅದೇ! ಅಥವಾ, ಕ್ರೀಡೆಯ ಬಗ್ಗೆ ಅಂದುಕೊಂಡರೆ ಅದೂ ಹೌದು! ಮಕ್ಕಳ ಸಿನಿಮಾ ಅಂದುಕೊಂಡರೆ ಅದೂ ಹೌದು! ಗುರು-ಶಿಷ್ಯರ ಸಂಬಂಧದ ಕಥೆ ಎಂದುಕೊಂಡರೆ ಅದೂ ಹೌದು. ಸ್ಪೂರ್ತಿ ತುಂಬುವ ಸಿನಿಮಾ ಅಂದುಕೊಂಡರೆ ಅದೂ ಹೌದು. ಮತ್ಯಾವುದು ಅಂತ ಕೇಳಿದರೆ ಇದೆಲ್ಲವೂ ಹೌದು. ಕಥೆಗಾರ ಈ ಎಲ್ಲ ಫ್ಲೇವರ್'ಗಳನ್ನು ತನ್ನ ಸಿನಿಮಾದಲ್ಲಿ ತರಲು ಕಷ್ಟಪಟ್ಟಿದ್ದಾನೆ.

ಹಾಸ್ಯನಟ ಎಂಬ ಬಿರುದು ಗಳಿಸುವಷ್ಟೇ ಕಷ್ಟ ಅದರಿಂದ ಬಿಡಿಸಿಕೊಂಡು ಹೊರಬರುವುದು. ಶರಣ್ ಈ ಸಿನಿಮಾದಲ್ಲಿ ಪಾತ್ರಕ್ಕೆ ಬೇಕಾದ್ದನ್ನಷ್ಟೇ ಮಾಡಿ, ತನ್ನೆಲ್ಲ ಹಾವಭಾವಗಳನ್ನು ಮೀರಿ ಕಲಾವಿದರಾಗಿ ಕಾಣಿಸಿಕೊಳ್ಳುತ್ತಾರೆ. ಮುಂದೆ ಅವರು ಯಾವುದೇ ಪಾತ್ರಕ್ಕೆ ತಕ್ಕ ಹಾಗೆ ಹೊಂದಿಕೊಳ್ಳಲಿ ಅನ್ನುವುದು ನನ್ನ ಆಶಯ. ನಿಶ್ವಿಕಾಗೆ ಬರೀ ಹೀರೋ ಹಿಂದೆ ಸುತ್ತುವುದಷ್ಟೇ ಕೆಲಸವಲ್ಲ. ದತ್ತಣ್ಣ ಅವರದು ಗುರುವಿನ ಪಾತ್ರದಲ್ಲಿ ಮನಸ್ಸಿಗೆ ಹತ್ತಿರವಾಗುವ ನಟನೆ. ಅಪೂರ್ವ ಕಾಸರವಳ್ಳಿ, ಸುರೇಶ್ ಹೆಬ್ಳೀಕರ್, ಮಹಾಂತೇಶ್ ಹೀರೇಮಠ್ ಅವರುಗಳ ಪಾತ್ರ, ನಟನೆ ಎರಡೂ ಸೂಪರ್.

ಇವರೆಲ್ಲರ ಕೆಲಸಕ್ಕಿಂತ ನೋಡುವವರಿಗೇ ಸುಸ್ತು ಮಾಡುವುದು ಮಾತ್ರ ಆ ಹುಡುಗರದ್ದು. ಈ ಸಿನಿಮಾದಲ್ಲಿ ಅದೇನು ನಟಿಸಿದ್ದಾರೋ ಅದು ಒತ್ತಟ್ಟಿಗಿರಲಿ. ಆದರೆ ಖೋಖೋ ಆಟ ಆಡಲು ಬಿಟ್ಟರೆ ಗ್ಯಾರಂಟಿ ಒಂದು ಮಟ್ಟಕ್ಕೆ ಅದ್ಭುತವಾಗಿ ಆಡಬಲ್ಲರು. ಅಷ್ಟು ಸಶಕ್ತವಾಗಿ ಅವರಿಗೆ ತಾಲೀಮು ನೀಡಲಾಗಿದೆ. ಅದೆಷ್ಟು ಬಿದ್ದರೋ? ಅದೆಷ್ಟು ಬೆವರು ಸುರಿಸಿದರೋ? ಅದೆಷ್ಟು ಮೈಕೈ ಗಾಯ ಮಾಡಿಕೊಂಡರೋ? ಈ ಸಿನಿಮಾದ ಪಯಣ ಅಷ್ಟೊಂದು ಸುಲಭದ್ದಾಗಿರಲಿಲ್ಲ ಎಂದು ಸಿನಿಮಾ ನೋಡುವಾಗಲೇ ಊಹಿಸಬಹುದು. ಈ ಸಿನಿಮಾಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ ಅವರೆಲ್ಲರ ಸಿನಿ ಭವಿಷ್ಯಕ್ಕೆ ಶುಭ ಕೋರೋಣ.

ಈ ಸಿನಿಮಾದುದ್ದಕ್ಕೂ ಸಿಕ್ಕಾಪಟ್ಟೆ ಭಾವಗಳ ಏರಿಳಿತಗಳಿವೆ. ಜೊತೆಗೆ ಶರಣ್ ಎಂಬ ಹೈ-ಎನರ್ಜಿ ಹಾಸ್ಯನಟನ ಉಪಸ್ಥಿತಿಯಿದೆ. ಹಾಗಾಗಿ ಅತ್ತ ನಗಿಸಬೇಕು, ಇತ್ತ ಉತ್ಸಾಹ ತುಂಬಬೇಕು. ಇನ್ನೊಂದು ದಿಕ್ಕಿನಿಂದ ಸವಾಲೆಸೆಯಬೇಕು. ಅಂತಹ ಮಾತು ಕಟ್ಟುವ ಕಠಿಣ ಸವಾಲನ್ನು ಸ್ವೀಕರಿಸಿ ಗೆದ್ದಿದ್ದಾರೆ ಸಂಭಾಷಣೆಕಾರ ಮಾಸ್ತಿ. ಕೆಲ ಕಡೆ ಮನಸ್ಸು ಹಗುರಾಗುವಷ್ಟು ನಗು ತರಿಸುವ ಸಾಲುಗಳಿದ್ದರೆ, ಸಿನಿಮಾದ ಬಹುತೇಕ ಕಡೆ ಚಪ್ಪಾಳೆ ತಟ್ಟಿಸಿಕೊಳ್ಳುವ, ಗೆಲ್ಲುವ, ಬದುಕುವ, ಕಷ್ಟ ಎದುರಿಸುವ, ಪ್ರೇರಣೆ ನೀಡುವ ಮಾತುಗಳಿವೆ. ಕೆಲ ಡೈಲಾಗುಗಳನ್ನು ನೀವು ಜನರ ಮಧ್ಯೆಯೇ ಕೂತು ಎಂಜಾಯ್ ಮಾಡಬೇಕು. ಬಹು ಮುಖ್ಯವಾಗಿ ಕಥೆಯ ಜೊತೆಯಲ್ಲೇ ಹಾಸ್ಯ ಬಂದಿದೆಯೇ ಹೊರತು, ಅದಕ್ಕಾಗಿಯೇ ಸಂದರ್ಭಗಳನ್ನು ಸೃಷ್ಟಿಸಿಲ್ಲ.

ಸಿನಿಮಾ ಬಿಡುಗಡೆಯಾಗುವ ಮೊದಲೇ ಗೆದ್ದಿದ್ದದ್ದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಬಿಡುಗಡೆಯಾಗಿದ್ದು ಮೂರು ಹಾಡುಗಳು ನಾಲಿಗೆಯ ಮೇಲೆ ಹರಿದಾಡುವಷ್ಟು ಎಲ್ಲ ಕಡೆ ಕೇಳಿ ಬರುತ್ತಿದ್ದವು. ಆಗಲೇ ಈ ಸಿನಿಮಾದ ಪ್ರಚಾರ ಅರ್ಧ ಮುಗಿದಂತಿತ್ತು. ಸಿನಿಮಾ ನೋಡುವಾಗ ಕೆಲವು ಹೈವೋಲ್ಟೇಜ್ ದೃಶ್ಯಗಳಲ್ಲಿ ಅವರ ಹಿನ್ನೆಲೆ ಸಂಗೀತ ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ.

ಅದೊಂದು ದೃಶ್ಯವಿದೆ. "ನಮ್ಮನ್ನು ಊರವರು ಹೊರಗಿಟ್ಟರೂ, ಆ ಊರಿಗಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧ" ಅನ್ನುವ ಡೈಲಾಗು ನನಗೆ ಅದೆಷ್ಟು "ವ್ಹಾವ್" ಅನ್ನಿಸಿತು ಅಂದರೆ, ಸಿನಿಮಾವನ್ನೇನಾದರೂ ಒಂದೆರಡು ನಿಮಿಷ ನಿಲ್ಲಿಸುವ ಅವಕಾಶವಿದ್ದರೆ ನಿಲ್ಲಿಸಿ, ಮನಸಾರೆ ಚಪ್ಪಾಳೆ ಹೊಡೆದು ನಂತರ ಮುಂದುವರೆಸುತ್ತಿದ್ದೆ. ಅದು ನಿರ್ದೇಶಕ ಜಡೇಶ್ ಹಂಪಿ ಅವರ ಕೈಚಳಕವೋ, ಅಥವಾ ಮಾಸ್ತಿಯವರ ಕೈಚಳಕವೋ... ಆದರೆ ನಿಮ್ಮೆಲ್ಲ ಸಿನಿಮಾಗಳಲ್ಲಿ ಅವಕಾಶ ಸಿಕ್ಕುವಾಗೆಲ್ಲ ಹೀಗೆ ಕೆಲ ವಿಚಾರಗಳನ್ನು ಹೇಳುವ ಸಂವೇದನೆ ನಿಮ್ಮಲ್ಲಿ ಸದಾ ಜಾಗೃತವಾಗಿರಲಿ ಎಂದು ಆಶಿಸುತ್ತೇನೆ.

ಈ ಸಿನಿಮಾವನ್ನು ಕೆಲ ಬಾಲಿವುಡ್ ಸಿನಿಮಾಗಳಿಗೆ ಹೋಲಿಸಲು ಮನಸ್ಸಾಗದು. ಬಹುಶಃ ಅದು ಈ ಸಿನಿಮಾಗೆ ಮಾಡುವ ಅವಮಾನವಾಗಬಹುದು. ಜನಪ್ರಿಯ ಅನ್ನಿಸಿಕೊಂಡ ಬಾಸ್ಕೆಟ್'ಬಾಲ್, ಫುಟ್ಬಾಲ್, ಕ್ರಿಕೆಟ್ ಆಟಗಳ ಮಧ್ಯೆ ನಮ್ಮವೇ ಅನ್ನಿಸಿಕೊಂಡ ಖೋಖೋ ರೀತಿಯ ಆಟಗಳು ನೇಪಥ್ಯಕ್ಕೆ ಸರಿದಿದ್ದರ ಬಗ್ಗೆ, ಅದನ್ನು ಆಡಿ ಚಾಂಪಿಯನ್ ಆದವರು ನಂತರ ಏನೂ ಇಲ್ಲ ಅನ್ನುವಂತಾಗಿದ್ದರ ಬಗ್ಗೆ ಸಿನಿಮಾ ವಿಷಾದ ವ್ಯಕ್ತಪಡಿಸುತ್ತದೆ. ಈ ಮೂಲಕ ದೇಸೀ ಕ್ರೀಡೆಗಳ ಬಗ್ಗೆ, ಆ ಆಟಗಾರರ ಬಗ್ಗೆ ನಮ್ಮೆಲ್ಲರ ಹಾಗೂ ಸಂಬಂಧಪಟ್ಟವರ ಗಮನ ಸೆಳೆಯುವಂತೆ ಈ ಸಿನಿಮಾ ಮಾಡಬಲ್ಲದು.

ಒಂದು ಚಂದದ ಸಿನಿಮಾ ಮುಗಿದ ಬಳಿಕವೂ ನಿಮಗೆ ಅದರ ಹೀರೋ ಯಾರು ಅಂತ ಹೇಳಲು ಕಷ್ಟವಾದರೆ ಅದಕ್ಕೆ ಕಾರಣ ಆ ಸಿನಿಮಾದ ಎಲ್ಲರೂ ಕೇವಲ ಪಾಲುದಾರರಾಗಿ ಕೆಲಸ ಮಾಡಿದ್ದಾರೆ ಅಂತರ್ಥ. ಗುರುಶಿಷ್ಯರು ಅದಕ್ಕೊಂದು ಉತ್ತಮ ಉದಾಹರಣೆ.

ಕ್ರೀಡೆಯ ಬಗೆಗಿನ ಸಿನಿಮಾ ಅಂದುಕೊಂಡರೂ ಇದು ನಾವಂದುಕೊಂಡಷ್ಟು ಸುಲಭವಲ್ಲ. ಆ ಕ್ರೀಡೆಯ ಬಗ್ಗೆ ನಿರ್ದೇಶಕ ಮತ್ತು ಆತನ ತಂಡ ಒಳ್ಳೆಯ ರೀಸರ್ಚ್ ಮಾಡಿರಬೇಕು. ಆ ಆಟದ ಒಳ-ಹೊರಗನ್ನು ಅಭ್ಯಯಿಸಿರಬೇಕು. ಸಿನಿಮಾದುದ್ದಕ್ಕೂ ಅನೇಕ ಪಂದ್ಯಗಳು ನಡೆಯುವುದರಿಂದ ಪ್ರತೀ ಪಂದ್ಯಕ್ಕೂ ಅವವೇ ದೃಶ್ಯಗಳನ್ನು ಹಾಕಲಾಗದು. ಪ್ರತೀ ಪಂದ್ಯವನ್ನೂ ಬೇರೆ ಬೇರೆ ರೀತಿಯ ಸನ್ನಿವೇಶಗಳ ಮೂಲಕ ರೋಚಕವಾಗಿಡಬೇಕು. ಈ ದೃಶ್ಯಗಳನ್ನು ಮನಸ್ಸಿಗೆ ನಾಟುವಂತೆ ಚಿತ್ರೀಕರಿಸಲಾಗಿದೆ. ಮಾಮೂಲಿ ಸಿನಿಮಾಗಳ ಚಿತ್ರೀಕರಣಕ್ಕೂ ಕ್ರೀಡೆಗಳ ಬಗೆಗಿನ ಸಿನಿಮಾಗಳ ಚಿತ್ರೀಕರಣಕ್ಕೂ ವ್ಯತ್ಯಾಸವಿದೆ. ಈ ಸಿನಿಮಾದಲ್ಲಿ ಬರುವ ಖೋಖೋ ಆಟಗಳು ನಿಮ್ಮನ್ನು ಮೈಮರೆಸಿದವು ಅಂದರೆ ಕ್ಯಾಮೆರಾ ಹಿಂದೆ ನಿಂತ ಅರೂರ್ ಸುಧಾಕರ್ ಶೆಟ್ಟಿ ಅವರಿಗೆ ಒಂದು ಶಹಬ್ಬಾಷ್ ಹೇಳಲೇಬೇಕು.

ಹೆಚ್ಚು-ಕಡಿಮೆ ಎರಡೂ-ಮುಕ್ಕಾಲು ತಾಸಿನ ಸಿನಿಮಾ ಒಂದು ಕ್ಷಣ ಕೂಡ ಬೇಸರವಾಗದಂತೆ ನೋಡಿಸಿಕೊಳ್ಳುತ್ತದೆ ಅಂದರೆ ಅದಕ್ಕಿಂತ ಬೇರೇನೂ ಹೇಳುವುದು ಬೇಕಿಲ್ಲ. ಸಿನಿಮಾದ ಕಥೆ ಹೇಳುತ್ತಲೇ ಅನೇಕ ವಿಚಾರಗಳನ್ನು ಹೇಳಲು ಪ್ರಯತ್ನಿಸುವ ಜಡೇಶ್ ಕೆ ಹಂಪಿ ಅವರ ಬಗ್ಗೆ ನನಗೆ ಅಪಾರ ಮೆಚ್ಚುಗೆ. ಇವರು ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ನಮಗೆ ಕೊಡಬಲ್ಲರು ಎಂಬ ಭರವಸೆ ಮೂಡಿಸುತ್ತಾರೆ. ಈ ನಿರ್ದೇಶಕನ ಬಗ್ಗೆ "ಜಂಟಲ್ ಮ್ಯಾನ್" ಸಿನಿಮಾದಿಂದ ಹುಟ್ಟಿಕೊಂಡ ನಂಬಿಕೆ ಈ ಸಿನಿಮಾದಲ್ಲೂ ಮುಂದುವರೆದು ಮುಂದಿನ ದಿನಗಳಲ್ಲಿ ಇವರ ಸಿನಿಮಾಗಳಿಗೆ ಖಂಡಿತವಾಗಿ ಪ್ರೇಕ್ಷಕರು ಕಾಯಬಲ್ಲರು.

ಒಳ್ಳೆಯ ನಿರ್ದೇಶಕನನ್ನು, ಒಳ್ಳೆಯ ಪಾತ್ರವರ್ಗವನ್ನು, ಒಳ್ಳೆಯ ಕಥೆಯನ್ನು ಆಯ್ದುಕೊಂಡು ಇಂಥದ್ದೊಂದು ಒಳ್ಳೆಯ ಸಿನಿಮಾವನ್ನು ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ನೀಡಿದ ತರುಣ್ ಸುಧೀರ್ ಅವರಿಗೆ ಅಭಿನಂದನೆಗಳು... ಇನ್ನು ಮುಂದೆಯೂ ಅವರ ನಿರ್ಮಾಣದಲ್ಲಿ ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕ ಕಾಣುವಂತಾಗಲಿ.

-Santhosh Kumar LM
26-Sep-2022



Wednesday, September 21, 2022

ವೆಂದು ತಣಿಂದದು ಕಾಡು (Tamil, 2022)




ಹಳ್ಳಿಯಲ್ಲಿ ಓದಿಕೊಂಡ ಹುಡುಗನೊಬ್ಬ ಕೆಲಸ ಸಿಗದೆ ಏನು ಬೇಕಾದರೂ ಮಾಡಬಲ್ಲೆ ಅನ್ನುವ ಸ್ಥಿತಿಯಲ್ಲಿದ್ದಾಗ ಅಲ್ಲಿಯೂ ಅವನನ್ನು ಉಳಿಯಗೊಡದಂಥ ಪರಿಸ್ಥಿತಿ ಎದುರಾಗುತ್ತದೆ. ಆಗ ಆತನ ತಾಯಿ ಆತನನ್ನು ಆ ಊರಿಂದಲೇ ಬಹುದೂರ ಹೋಗುವಂತೆ ದಾರಿಯೊಂದನ್ನು ಹುಡುಕುತ್ತಾಳೆ. ಆತ ಮುಂದೇನಾಗುತ್ತಾನೆ ಅನ್ನುವ ರೋಚಕ ಕಥೆಯೇ "ವೆಂದು ತಣಿಂದದು ಕಾಡು"

ಗ್ಯಾಂಗ್‍ಸ್ಟರ್ ಸಿನಿಮಾಗಳ ಕಥೆಯ ಫಾರ್ಮ್ಯಾಟ್ ಎಲ್ಲ ಒಂದು ರೀತಿಯಲ್ಲಿ ಒಂದೇ ರೀತಿಯದ್ದಾಗಿರುತ್ತದೆ. ಆದರೆ ಆ ಕಥೆಯನ್ನು ಹೆಣೆದು ತೋರಿಸುವ ರೀತಿ ಹೇಗೆ ಅನ್ನುವುದರ ಮೇಲೆ ಆ ಸಿನಿಮಾ ಹೇಗಿದೆ ಅನ್ನುವುದು ನಿರ್ಧಾರವಾಗುತ್ತದೆ. ಆ ದೃಷ್ಟಿಯಲ್ಲಿ ನೋಡಿದರೆ "ವೆಂದು ತಣಿಂದದು ಕಾಡು" ಜಿ.ವಿ.ಮೆನನ್ ಅವರ ಸಿನಿಮಾ. ಸಾವಧಾನವಾಗಿ ಸಾಗುತ್ತಲೇ ಎಲ್ಲ ದೃಶ್ಯಗಳನ್ನು ಮನೋಜ್ಞವಾಗಿ ಕಟ್ಟಿಕೊಡುವುದು ಅವರ ಕಥೆ ಹೇಳುವ ರೀತಿ. ಇಲ್ಲಿ ಎಲ್ಲ ಕಡೆ ಅದಕ್ಕೆ ಅವಕಾಶವಿಲ್ಲ. ಕೆಲವು ಕಡೆ ಅದು ಓಡಬೇಕು. ಕೆಲವು ಕಡೆ ಉಸಿರೆಳೆದುಕೊಳ್ಳಬೇಕು. ಹಾಗಾಗಿಯೇ ಎಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲ ತಮ್ಮ ಕೈಚಳಕ ತೋರಿಸಿಬಿಡುತ್ತಾರೆ.

ಮುಂಬೈಯ ಮನೆಮಾಳಿಗೆಯೊಂದರಲ್ಲೇ ಮೂವತ್ತೈದು ಜನ ಮಲಗಿಕೊಳ್ಳುವ ಆ ದೃಶ್ಯಗಳು ನೈಜವಾಗಿ ಮೂಡಿಬಂದಿವೆ. ಮುಂಬೈ ನಗರದ ಧಾವಂತ, ಅಲ್ಲಿಯ ಜನಜೀವನ, ಅಲ್ಲಿಯ ಭೂಗತ ಜಗತ್ತು, ಹೊರರಾಜ್ಯಗಳಿಂದ ಹೋಗುವ ನಿರೋದ್ಯೋಗಿ ಯುವಕರನ್ನು ತನ್ನ ಜಾಲದಲ್ಲಿ ಬಂಧಿಸಿಬಿಡುವಿಕೆ, ಅಲ್ಲಿಯೂ ಇರಲಾರದೆ ಇತ್ತ ಊರಿಗೆ ವಾಪಸ್ಸು ಬರಲಾರದ ಅಸಹಾಯಕತೆ-ಒಂಟಿತನ ಎಲ್ಲವನ್ನೂ ಸಿನಿಮಾದಲ್ಲಿ ಮನಸ್ಸಿಗೆ ನಾಟುವಂತೆ ತೋರಿಸಲಾಗಿದೆ. ಅತ್ತ ಭೂಗತ ಜಗತ್ತನ್ನು ತೋರಿಸುವಾಗಲೂ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಿ ಮನರಂಜನೆಯನ್ನು ಬಡಿಸುವುದನ್ನು ಮರೆತಿಲ್ಲ. ಎಲ್ಲಿಯೂ ಬೋರ್ ಹೊಡೆಸದಂತೆ ಚಿತ್ರಕಥೆ ಹೆಣೆಯಲಾಗಿದೆ. ಹೊಡೆದಾಟದ ದೃಶ್ಯಗಳಲ್ಲಿ, ಮಧ್ಯೆ ಅಲ್ಲಲ್ಲಿ ಬರುವ ಪ್ರೀತಿಯ ಕಥೆ, ಹಾಡುಗಳು ಹೀಗೆ ಅನೇಕ ಕಡೆ ಲಾಂಗ್-ಟೇಕ್ ಬಳಸಲಾಗಿದೆ. ಒಂದು ಹಾಡಿನಲ್ಲಂತೂ ಅಷ್ಟೂ ಹೊತ್ತಿನ ಸಾಹಿತ್ಯವನ್ನು ಕಲಾವಿದರು ಹೇಗೆ ನೆನಪಿಟ್ಟುಕೊಂಡು ನಟಿಸಿದರು ಅನ್ನುವಷ್ಟು ಸುದೀರ್ಘವಾದ ಶಾಟ್ ಇದೆ.

ಆರಂಭದಿಂದಲೂ ಗಂಭೀರವಾಗಿ ಸಾಗುವ ಸಿನಿಮಾದ ಮಧ್ಯೆ ಇದ್ದಕ್ಕಿದ್ದಂತೆ ಬರುವ "ಹೇ ಮಲ್ಲಿ ಪೂ ವಚ್ಚಿ ವಚ್ಚಿ ವಾಡುದೆ" (ಮಲ್ಲಿಗೇ ಹೂ ಮುಡಿದು ಮುಡಿದು ಬಾಡುತಿದೆ) ಹಾಡು ಸಿನಿಮಾ ನೋಡುತ್ತಿದ್ದವರನ್ನು ಎದ್ದುನಿಂತು ಕುಣಿಯುವಂತೆ ಮಾಡುತ್ತದೆ. ಎಆರ್ ರೆಹಮಾನ್ ಅವರ ಸಂಗೀತ ಇದಕ್ಕೆ ಮುಖ್ಯ ಕಾರಣ. ಸಿನಿಮಾದುದ್ದಕ್ಕೂ ಅವರ ಹಿನ್ನೆಲೆ ಸಂಗೀತವೂ ಕಡಿಮೆಯೇನಿಲ್ಲ.
ಈ ಸಿನಿಮಾದ ನಾಯಕನಟ ಸಿಂಬು aka ಸಿಲಂಬರಸನ್ ಅವರಿಗೆ ಈ ಸಿನಿಮಾದಲ್ಲಿ ಯಾವುದೇ ರೀತಿಯ ಬಿಲ್ಡಪ್ ಇಲ್ಲ. ಅವರ ಲುಕ್ ಕೂಡ ಸಾಮಾನ್ಯ ಹುಡುಗನೊಬ್ಬನಂತೆಯೇ ಇದೆ. ಆದರೆ ಈ ಪಾತ್ರಕ್ಕಾಗಿ ಮಾಡಿರುವ ಅವರ ಶ್ರಮ ಎದ್ದು ಕಾಣುತ್ತದೆ. "ಮಾನಾಡು" ಸಿನಿಮಾದ ಯಶಸ್ಸಿನ ನಂತರ ಮತ್ತೆ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದು ಖುಶಿಯ ವಿಚಾರ. ಇದು ಈ ಸಿನಿಮಾದ ಮೊದಲ ಭಾಗವಷ್ಟೇ. ಮುಂದಿನ ಭಾಗದ ನಿರ್ಮಾಣ ಪ್ರಗತಿಯಲ್ಲಿದೆ.

ಸಿನಿಮಾದ ಅಂತ್ಯದಲ್ಲಿ ಮುಂದಿನ ಭಾಗಕ್ಕೆ ಪೂರಕವಾಗುವಂತೆ ಕೆಲವಷ್ಟು ದೃಶ್ಯಗಳಿವೆ. ಅವನ್ನು ಧಾವಂತದಲ್ಲಿ ಮುಗಿಸಿ ತುರುಕಿದಂತೆ ಕಾಣುವುದರಿಂದ ಸಿನಿಮಾ ಅಲ್ಲಿಗೇ ಮುಗಿದಿರಬೇಕಿತ್ತು ಅನ್ನಿಸುತ್ತದೆ. ಇಲ್ಲದಿದ್ದರೆ ಇಡೀ ಸಿನಿಮಾ ಒಂದೇ ರೀತಿಯ ಫೀಲ್ ಕೊಡುತ್ತಿತ್ತು. ಆದರೂ ಎರಡನೆಯ ಭಾಗಕ್ಕೆ ಕಾಯುವಂತೆ ಮಾಡುತ್ತದೆ.

-Santhosh Kumar LM
21-Sep-2022