Friday, July 17, 2020

ಲಾ (LAW)...... ( Kannada Movie, 2020)

ಲಾ (LAW) ( Kannada Movie, 2020, courtroom drama, Amazon Prime)

Law 2020 Kannada Movie Review -Silly Execution Burries A Decent ...

ಸರ್. ಗ್ಯಾಂಗ್‍ರೇಪ್ ಆಗಿದೆ...
ಹೌದಾ....ಯಾರು ಯಾರು ಗ್ಯಾಂಗ್‍ರೇಪ್ ಮಾಡಿದ್ದು?
ಗ್ಯಾಂಗ್‍ರೇಪ್ ಎಲ್ಲಾಯ್ತು?
ಗ್ಯಾಂಗ್‍ರೇಪ್ ಆಗೋಕಿಂತ ಮುಂಚೆ ಆ ಹುಡುಗಿ ಅಲ್ಲೇನ್ ಮಾಡ್ತಿದ್ಲು?
ನಿಂದೇ ಏನಮ್ಮ....ಗ್ಯಾಂಗ್‍ರೇಪ್ ಕೇಸು?
ಗ್ಯಾಂಗ್‍ರೇಪ್ ಆದ ಹುಡುಗಿ ಆ ದಿನ ಮೆಡಿಕಲ್ ಟೆಸ್ಟಿಗೆ ಬರದೆ ಮರುದಿನ ಬರುತ್ತಾಳೆ....
ಈ ಥರದ ಗ್ಯಾಂಗ್‍ರೇಪ್‍ಗಳಿಗೆ ಅಂತ್ಯ ಹಾಡಬೇಕು

--------------------------------
ಅಲ್...ಲಾ!
ನಾ ಯಾವ್ ಸಿನಿಮಾ ನೋಡಿದೆ ಈಗ?
ಕಾಮಿಡಿ ಸಿನಿಮಾನ? ಗಂಭೀರವಾದ ಮೆಸೇಜ್ ಕೊಡುವ ಸಿನಿಮಾನ?

ಯಾರಾದರೂ ನನಗೆ "ಈ ಸಿನಿಮಾ ಹೆಂಗೈತ್ ಲಾ?" ಅಂತ ಕೇಳಿದರೆ
ನಾ ಹೇಳೋದೊಂದೇ "ಚೆನ್ನಾಗಿಲ್..ಲಾ"
-------------------------------

ಈ ಥರ ಹೇಳಿದರೆ ಆ ಸಿನಿಮಾ ಮಾಡಿದವರಿಗೆ ಬೇಸರವಾಗಬಹುದು. ಆದರೆ ಹೀಗೆ ಬರೆಯಲೇಬೇಕು. ನಿಜವಾಗಿ ಮೆಸೇಜು ಕೊಡುವ ಸಿನಿಮಾವನ್ನು ಮಾಡುವ ಮೊದಲು ಚೆನ್ನಾಗಿ ಹೋಮ್‍ವರ್ಕ್ ಮಾಡಿ ನಂತರ ಬನ್ನಿ. ಇಲ್ಲದಿದ್ದರೆ ಈ ಥರದ ಸೂಕ್ಷ್ಮಗಳನ್ನೇ ಅರಿಯದೆ ಬಂದು ಪ್ರೇಕ್ಷಕರಿಗ್ಯಾಕೆ ತೊಂದರೆ ಕೊಡುತ್ತೀರಿ?

ಯಾವ ಕಾಲದಲ್ಲಿದ್ದೀವಿ ನಾವು ಅನ್ನುವ ಹಾಗಿದೆ ಈ ಸಿನಿಮಾದ ಕಥೆಯನ್ನು ಹೇಳಿರುವ ರೀತಿ. ಸಾಮೂಹಿಕ ಅತ್ಯಾಚಾರದ ಕರಾಳ ಮುಖವನ್ನು ನಮಗೆ ದರ್ಶನ ಮಾಡಿಸಿ ಅದರ ಬಗ್ಗೆ ಕೋಪವೊಂದನ್ನು ಸೃಷ್ಟಿಸಿ, ಅದಕ್ಕೆ ಕಾರಣರಾದವರ ಮೇಲೆ ಮರಣದಂಡನೆಯಾಗುವಂತೆ ಮಾಡಿ ಪ್ರೇಕ್ಷಕನಿಗೆ ನಿಟ್ಟುಸಿರೊಂದಿಗೆ ಸಿನಿಮಾ ಕೊನೆಯಾಗಬೇಕಿತ್ತು.

ಆದರೆ ಶುರುವಿನಿಂದಲೇ "ಬುಟ್ಬುಡ್ರೋ" ಅಂತ ಪ್ರೇಕ್ಷಕನೇ ಸಿನಿಮಾದ ನಿರ್ದೇಶಕನಿಗೆ ಹೇಳಬೇಕೆನಿಸುತ್ತದೆ.
--------------------
ಅಲ್ಲಾ ಗುರೂ... ಮಂಡ್ಯ ರಮೇಶ್ ಅವರನ್ನು ಹಾಕಿಕೊಂಡ ತಕ್ಷಣ ಅವರಿಗೆ ಹಾಸ್ಯದ ದೃಶ್ಯವನ್ನೇ ಕೊಡಬೇಕಾ? ರಂಗಕಲಾವಿದರಾದ ಮಂಡ್ಯ ರಮೇಶ್‍ಗೆ ಗಂಭೀರ ಪಾತ್ರವನ್ನು ಕೊಟ್ಟರೂ ಅದನ್ನು ಅಚ್ಚುಕಟ್ಟಾಗಿ ಮಾಡಬಲ್ಲರು. ಅಂಥ ಸನ್ನಿವೇಶದಲ್ಲಿ ಹಾಸ್ಯ ಬೇಕಿತ್ತಾ ಅನ್ನುವುದು ಮೊದಲನೆಯ ಅಸಹನೆಗೆ ಸಾಕ್ಷಿ. ಅದು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯೊಬ್ಬಳಿಗೆ ಪೊಲೀಸ್ ಇಲಾಖೆ ತೋರುವ ಉಡಾಫೆಯ ರೀತಿ ಅಂತ ಸಮಜಾಯಿಷಿ ನೀಡಬಹುದು. ಆದರೆ ಅದನ್ನು ಹೇಳಲು ಹತ್ತಾರು ಮಾರ್ಗಗಳಿವೆ. ಅಲ್ಲಿ ಹಾಸ್ಯದ ಥರದ ಡೈಲಾಗುಗಳು ಬೇಕಿತ್ತಾ? ಅಲ್ಲಿಗೇ ಅದು ಕೊನೆಗೊಳ್ಳುವುದಿಲ್ಲ. ಮಾತಿಗೊಮ್ಮೆ ರೇಪ್, ಗ್ಯಾಂಗ್‍ರೇಪ್ ಅನ್ನುವ ಪದಗಳನ್ನು ಸಂಭಾಷಣೆ ಬರೆದವರೇ ಅತ್ಯಾಚಾರಗೊಳಿಸಿದ್ದಾರೆ ಅನ್ನಬಹುದು. ಅಷ್ಟರಮಟ್ಟಿಗೆ ಆ ಪದಗಳನ್ನು ವಿವೇಕವಿಲ್ಲದೆ ಬಳಸಲಾಗಿದೆ.

ಬಹುತೇಕ ದೃಶ್ಯಗಳಲ್ಲಿ ನಾಯಕಿಯ ನೋವು ನಮಗರ್ಥವಾಗುವುದೇ ಇಲ್ಲ. ಯಾಕೆಂದರೆ ಅಲ್ಲಿ ಆ ಭಾವ ವ್ಯಕ್ತವಾಗುವುದೇ ಇಲ್ಲ. ಅವಿನಾಶ್ ಒಬ್ಬ ಅಪ್ಪನಾಗಿ ಈ ಥರ ನಡೆದುಕೊಳ್ಳುತ್ತಾರಾ?ಅಂತ ಅನ್ನಿಸದೆ ಇರದು. ಅದಕ್ಕೆ ಕಾರಣವನ್ನು ನಂತರ ಕೊಟ್ಟರೂ ಅದು convince ಮಾಡುವುದಿಲ್ಲ.

ಕಥೆ ಹೇಳಿರುವ ರೀತಿಯೂ ಅಷ್ಟೇ... ಮೊದಲಿಂದಲೇ ಅಚ್ಯುತ್‍ಕುಮಾರ್ ದೃಶ್ಯಗಳನ್ನು ಇದ್ದಕ್ಕಿದ್ದಂತೆ ತೋರಿಸುವುದರಿಂದ ಇಲ್ಲೇನೋ ಬೇರೆಯದೇ ಇದೆ ಅನ್ನುವುದು ಗೊತ್ತಾಗುವುದಕ್ಕೆ ಹೆಚ್ಚು ಸಮಯ ಹಿಡಿಸುವುದಿಲ್ಲ. ಹಾಗಾಗಿ ಕಥಾಹಂದರವನ್ನು ಹೆಚ್ಚುಕಡಿಮೆ ಮೊದಲ ಅರ್ಧಘಂಟೆಯಲ್ಲೇ ಊಹಿಸಬಹುದು. ಕಥೆಯಲ್ಲಿ ಹೊಸದೇನೂ ಇಲ್ಲ. ಹಳೆಯದನ್ನು ಹೊಸದಾಗಿಯೂ ಹೇಳಿಲ್ಲ. ಇತ್ತೀಚೆಗೆ ಅಮೇಜಾನ್ ಪ್ರೈಮ್‍ನಲ್ಲೇ ಪ್ರೀಮಿಯರ್ ಆದ "ಪೊನ್‍ಮಗಳ್ ವಂದಾಳ್" ಸಿನಿಮಾದಲ್ಲೂ ನಾಯಕಿಯೇ ತನಗೆ ಅನ್ಯಾಯವಾಗಿದೆ ಅಂತ ನ್ಯಾಯಾಲಯದಲ್ಲಿ ವಾದ ಮಾಡುವುದು ಈ ಸಿನಿಮಾದಲ್ಲೂ ಪುನರಾವರ್ತನೆಯಾಗಿದೆ. ಇವೆರಡೂ ಸಿನಿಮಾಗಳನ್ನು ಒಂದಾದ ಮೇಲೆೊಂದರಂತೆ ಇದೇ platform ನಲ್ಲಿ ನೋಡಿದ್ದು ಇನ್ನಷ್ಟು ಅಸಹನೆಗೆ ಕಾರಣವಾಯಿತು. ಕೃಷ್ಣ ಹೆಬ್ಬಾಳೆ, ರಾಜೇಶ್ ನಟರಂಗ ಇವರಿಬ್ಬರ ಪಾತ್ರ ಪೋಷಣೆಯಷ್ಟೇ ಸಿನಿಮಾದಲ್ಲಿ ಚೆನ್ನಾಗಿದೆ.

ತನ್ನ ಮಗ ಅತ್ಯಾಚಾರದ ಕೇಸ್'ನಲ್ಲಿ ಸಿಕ್ಕಿಹಾಕಿಕೊಂಡಿರುವಾಗ ಅವನನ್ನು ಹೇಗೆ ಬಿಡಿಸುವುದು ಅಂತ "ಆಕೆ" ವಕೀಲರೊಂದಿಗೆ ಚರ್ಚಿಸುವಾಗಲೂ ಅವಳು ಬಾಳೆಹಣ್ಣು ಸಿಪ್ಪೆ ಸುಲಿದು ತಿನ್ನುತ್ತಿರುತ್ತಾಳೆ. ಇನ್ನೊಂದು ದೃಶ್ಯದಲ್ಲಿ ಚಿಪ್ಸ್ ತಿನ್ನುತ್ತ ತನ್ನ ಕೋಪ ಹೊರಹಾಕುತ್ತಾಳೆ. ಈ ವಿಷಯ ಚಿಕ್ಕದಿರಬಹುದು. ಆದರೆ ಸಿನಿಮಾ ಇಷ್ಟವಾಗದಿರಲು ಸಹ ಬಗೆಯ ಚಿಕ್ಕ ವಿಷಯಗಳೂ ಕಾರಣವಾಗುತ್ತವೆ. ತೆಲುಗು ಸಿನಿಮಾಗಳಲ್ಲಿ ತೋರಿಸುವ ಖಳನಾಯಕಿಯರನ್ನು ನೋಡಿ ಈ ಥರ ಮಾಡಿದ್ರಾ? ಗೊತ್ತಿಲ್ಲ.

ಆ ನ್ಯಾಯಾಲಯದಲ್ಲಾದರೂ ಕೊಂಚ ಗಂಭೀರತೆಯಿದೆಯೇ? ಒಂದು ಕಡೆ ಸಂತ್ರಸ್ತೆ ತನ್ನ ದುಃಖವನ್ನು ಅದುಮಿಟ್ಟಿಕೊಂಡು ವಾದ ಮಾಡುವಾಡುತ್ತಿರುತ್ತಾಳೆ. ಇದರ ಮಧ್ಯೆ ಮುಖ್ಯಮಂತ್ರಿ ಚಂದ್ರು ನ್ಯಾಯಾಧೀಶರಾಗಿಯೂ ಅವರಿಂದಲೂ ಗಂಭೀರ ದೃಶ್ಯದ ಮಧ್ಯೆ ಸಿಲ್ಲಿ ಜೋಕ್ ಹೇಳಿಸುವ ಪ್ರಯತ್ನ ಮಾಡುತ್ತಾರೆ. ಸ್ವತಃ ವಕೀಲರೇ ಘನವೆತ್ತ ನ್ಯಾಯಾಧೀಶರ ಮೇಲೆ "ಹುಡುಗೀರನ್ನ ನೋಡಿದ್ರೆ ನೀವು ಕರಗಿಹೋಗಿ ಅವರು ಹೇಳುವ ಕಥೆಗಳನ್ನು ನಂಬಿಬಿಡ್ತೀರ" ಅನ್ನುವ ಥರದ ಆರೋಪ ಮಾಡ್ತಾರೆ. ಇವೆಲ್ಲ ನಡೆಯುತ್ತವಾ? ಯಾರಾದರೂ ಕೋರ್ಟು-ಕಾನೂನು ತಿಳಿದವರು ಇದನ್ನು ನೋಡಿದರೆ "ಖಂಡಿತ ಕೋರ್ಟ್‍ರೂಮು ಹಿಂಗಿರಲ್...ಲಾ" ಅನ್ನುವುದು ಗ್ಯಾರಂಟಿ.

ಅದಕ್ಕೆ ಹೇಳಿದ್ದು. ಸಿನಿಮಾ ನಿರ್ದೇಶಕನಿಗೆ ತಾನು ಮಾಡುತ್ತಿರುವ ಸಿನಿಮಾದ Genre ಯಾವುದು ಅನ್ನುವ ಸ್ಪಷ್ಟತೆ ಇಲ್ಲ ಅಂತ. ಎಲ್ಲವೂ ಇರಲಿ ಅಂತ ಹಾಸ್ಯವನ್ನು ಎಲ್ಲೆಂದರಲ್ಲಿ ತುರುಕುವ ಬದಲು,ಕೊಂಚ ರಿಸ್ಕ್ ಅನ್ನಿಸಿದರೂ ಸರಿಯೇ. ಗಂಭೀರ ಕಥೆಯುಳ್ಳ ಸಿನಿಮಾಗಳನ್ನು ಗಂಭೀರವಾಗಿಯೇ ಮಾಡಿ ಒಂದು ವರ್ಗದ ಪ್ರೇಕ್ಷಕರನ್ನಾದರೂ ತೃಪ್ತಿಪಡಿಸುವ ನಿರ್ದೇಶಕರು ಬೇಕು. ಯುವ ಸಿನಿಮಾ ನಿರ್ದೇಶಕರುಗಳು ಈ ಸಿನಿಮಾವನ್ನು ನೋಡಿ ತಾವು ಯಾವ ಬಗೆಯ ತಪ್ಪುಗಳನ್ನು ಮಾಡಬಾರದೆಂದು ಅರ್ಥೈಸಿಕೊಳ್ಳುವುದು ಒಳ್ಳೆಯದು.

ಇಂಥ ಸಿನಿಮಾಗೆ ಇಷ್ಟೆಲ್ಲ ಬರೆಯುವುದು ಬೇಕಿರಲಿಲ್ಲ. ಆದರೆ ಇದು ದೊಡ್ಡ ಬ್ಯಾನರಿನ ಸಿನಿಮಾ. ನಮ್ಮ ನಿರೀಕ್ಷೆ ಸಹಜವಾಗಿ ಹೆಚ್ಚಿರುತ್ತದೆ. ಕೃಷ್ಣ ಹೆಬ್ಬಾಳೆ, ಅಚ್ಯುತ್‍ಕುಮಾರ್, ರಾಜೇಶ್ ನಟರಂಗ, ಅವಿನಾಶ್, ಸುಧಾರಾಣಿ, ಮುಖ್ಯಮಂತ್ರಿ ಚಂದ್ರು ಎಷ್ಟು ಒಳ್ಳೊಳ್ಳೆಯ ಕಲಾವಿದರನ್ನು ಒಳಗೊಂಡೂ ಅಚ್ಚುಕಟ್ಟಾದ ಸಿನಿಮಾವನ್ನು ನಮಗೆ ಕೊಡಲು ಸಾಧ್ಯವಾಗದೆ ಹೋದರೆ ಅದಕ್ಕೆ ನಿರ್ದೇಶಕರು ಜವಾಬ್ದಾರಿ ಹೊರಲೇಬೇಕು.

ಪುನೀತ್ ರಾಜ್‍ಕುಮಾರ್ ಅವರ ಬ್ಯಾನರಿನಿಂದ ಒಳ್ಳೆಯ ಸಿನಿಮಾಗಳು ಬರಲಿ. ಕಥೆಯ ಬಗ್ಗೆ, ಚಿತ್ರಕರ್ಮಿಗಳ ಬಗ್ಗೆ ಹೆಚ್ಚು ನಿಗಾವಹಿಸಿ ಒಳ್ಳೆಯ ಚಿತ್ರಗಳನ್ನು ಪ್ರೇಕ್ಷಕರಿಗೆ ಕೊಡಲಿ ಅನ್ನುವುದಷ್ಟೇ ಆಶಯ.

Santhosh Kumar LM
17-Jul-2020