Thursday, December 31, 2020

ಪಾವ ಕದೈಗಳ್ (ತಮಿಳು, 2020)








ಪಾವ ಕದೈಗಳ್ (ತಮಿಳು, 2020)

ನಾಲ್ಕು ಪುಟ್ಟ ಕಥೆಗಳನ್ನು ಹೊಂದಿರುವ ಈ ಸಿನಿಮಾ ನೆಟ್‍ಫ್ಲಿಕ್ಸ್'ನಲ್ಲಿದೆ. ಸೂಕ್ಷ್ಮ ವಿಷಯಗಳನ್ನು ಮನೋಜ್ಞವಾಗಿ ಹೇಳಲಾಗಿದೆ. ಎರಡನೆಯ ಕಥೆಯನ್ನು ಬಿಟ್ಟರೆ ಉಳಿದ ಮೂರೂ ಕಥೆಗಳು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ. ಒಂದು ಕಥೆ ಮುಗಿದ ಕೂಡಲೆ ಒಂದು ವಿರಾಮ ತೆಗೆದುಕೊಂಡು ಆ ಕಥೆಯ ಬಗ್ಗೆ ಯೋಚಿಸುವಂತೆ ಮಾಡುತ್ತವೆ. ಪ್ರತೀ ಕಥೆಯು ಮೂವತ್ತೈದು ನಿಮಿಷಗಳ ಆಸುಪಾಸಿನಲ್ಲಿವೆಯದರೂ ಬಹುಬೇಗನೆ ನಮಗೆ connect ಆಗುತ್ತವೆ. ಮತ್ತು ಮುಗಿಯುವುದರೊಳಗೆ ತಮ್ಮ ಕೆಲಸವನ್ನು ಮುಗಿಸಿರುತ್ತವೆ.

ಗೌತಮ್ ಮೆನನ್ ನಿರ್ದೇಶನದ ಜೊತೆಗೆ ಅವರ ಅಭಿನಯವೂ ಇಲ್ಲಿದೆ. ಮೂರು ಮಕ್ಕಳ ತಂದೆಯ ಪಾತ್ರವೊಂದರಲ್ಲಿ ತುಂಬಾ ಸಹಜವಾಗಿ ಕಾಣಿಸುತ್ತಾರೆ. ಅವರ ಎಂದಿನ ಸಿನಿಮಾಗಳಂತೆ ಇಲ್ಲೂ ಬಹುಮುಖ್ಯ ವಿಷಯವೊಂದನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ. ನಿಜಕ್ಕೂ ದೃಶ್ಯ ಮಾಧ್ಯಮದಲ್ಲೂ ಈ ಬಗೆಯ ವಿಚಾರಗಳನ್ನು ಸಶಕ್ತವಾಗಿ ಮಾತನಾಡಬಹುದೇ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಸಿಕ್ಕಿತು. ಬಹುಶಃ ದೌರ್ಜನ್ಯದ ಕಥೆಗಳಲ್ಲಿ ತಂದೆಯ ಮಗ್ಗುಲಿಂದ ಘಟನೆಯನ್ನು ನೋಡಿದ್ದು ಇದೇ ಮೊದಲು ಅನ್ನಿಸುತ್ತದೆ. ಕಥೆ ಹೇಳಿಬಿಡಲೇ ಎನಿಸುತ್ತದೆ. ಚಿಕ್ಕ ಕಥೆಯ ಎಳೆಯನ್ನೂ ಹೇಳಿ ನಿಮ್ಮ ರಸಾನುಭೂತಿ ಹಾಳುಗೆಡವಲು ನಾ ಸಿದ್ಧನಿಲ್ಲ. ಸಿನಿಮಾ ನೋಡಿ.

ಸುಧಾ ಕೊಂಗರ ಕೂಡ ಈಗಾಗಲೇ ಹೆಸರು ಮಾಡಿದ ನಿರ್ದೇಶಕರಿಗಿಂತ ತಾನೇನು ಕಡಿಮೆಯಿಲ್ಲ ಅನ್ನುವ ಮಟ್ಟಿಗೆ ಜಿದ್ದಿಗೆ ಬಿದ್ದು ಮೊದಲ ಕಥೆಯಲ್ಲೇ ಚಪ್ಪಾಳೆ ಗಿಟ್ಟಿಸುತ್ತಾರೆ. ಕಾಳಿದಾಸ್ ಜಯರಾಮ್ ಅನ್ನುವ ನಟನೊಬ್ಬ ನಿಮಿಷದಲ್ಲೇ ಕಣ್ಣೀರು ತರಿಸುತ್ತಾನೆ. ಒಂದೇ ಪುಟ್ಟ ಕಥೆಯೊಳಗೆ ಜಾತಿ, ಧರ್ಮ, ಪ್ರೀತಿ, ಸಲಿಂಗ ಪ್ರೇಮ, ಅದನ್ನು ಕೆಟ್ಟದಾಗಿ ಕಾಣುವ ಪ್ರಪಂಚ, ನಿರಾಕರಣೆ ಎಲ್ಲವನ್ನೂ ತೋರಿಸಿ ಅಲ್ಲಿಯೂ ನಮ್ಮನ್ನು ಯೋಚನೆಗೆ ಹಚ್ಚಿದ್ದು ನನಗೆ ಸಿಕ್ಕಾಪಟ್ಟೆ ಇಷ್ಟವಾಯಿತು. ಕಡೆಯ ಕಥೆಯಲ್ಲಿ ಮನುಷ್ಯನೊಳಗಿನ ಜಾತಿ ಪ್ರೇಮದಿಂದಾಗಿ ಹುಟ್ಟುವ ತಣ್ಣಗಿನ ಕ್ರೌರ್ಯವನ್ನು ಎಂದಿನಂತೆ ಚಿತ್ರಿಸಿರುವುದು ನಿರ್ದೇಶಕ ವೆಟ್ರಿಮಾರನ್.

ಒಟ್ಟಿನಲ್ಲಿ ಮೂರು ಕಥೆಗಳ ತೂಕದಿಂದಾಗಿ ಇಡೀ ಸಿನಿಮಾ ಇಷ್ಟವಾಯಿತು. ನೋಡಿರದಿದ್ದರೆ ನೋಡಿ. ನಿಮ್ಮೊಳಗೆ ಮೂಡುವ ಪ್ರಶ್ನೆಗಳನ್ನು ಪರಾಮರ್ಶಿಸಿ!

-Santhoshkumar LM
31-Dec-2020


Saturday, December 19, 2020

ಒಂದು ಶಿಕಾರಿಯ ಕಥೆ....(Kannada, 2020)

 



ಒಂದು ಶಿಕಾರಿಯ ಕಥೆ

Brilliant storyline! ಈ ಸಿನಿಮಾಗೆ "ಅರಿಷಡ್ವರ್ಗ" ಅಂತಲೂ ಹೆಸರಿಡಬಹುದಿತ್ತು. ಅಷ್ಟು ಮನುಷ್ಯನ ಅಂತರಂಗದ ತೊಳಲಾಟದ ಅನೇಕ ವಿಷಯಗಳನ್ನು ಸಮರ್ಥವಾಗಿ ಕಥೆಯನ್ನಾಗಿಸಿದ ಸಿನಿಮಾ. ಕೆಲವು ತಿರುವುಗಳನ್ನು ಊಹಿಸಬಹುದಾದರೂ ಒಂದು ಒಳ್ಳೆಯ ಸಿನಿಮಾಗೆ ಬೇಕಾಗುವಷ್ಟು ತಿರುವುಗಳನ್ನು ನಿರ್ದಿಷ್ಟ ಅಂತರದಲ್ಲಿ ಇಡಲಾಗಿದೆ. ಯಕ್ಷಗಾನವನ್ನು ಕಥೆಯ ಪ್ರಮುಖ ಭಾಗಕ್ಕೆ ಅಳವಡಿಸಿಕೊಂಡಿರುವುದು ಮೆಚ್ಚಬೇಕಾದ ವಿಷಯ. ನಮ್ಮ ನೆಲದ ಸಂಸ್ಕೃತಿಯ ವಿಷಯಗಳನ್ನು ಹೀಗೆ ಸಿನಿಮಾಗಳಲ್ಲಿ ಬಳಸಿಕೊಳ್ಳುವುದಕ್ಕಿಂದ ಹೆಚ್ಚಿನ ಖುಶಿ ಇನ್ನೇನಿದೆ? ಹಿಂಸೆ, ಅಹಿಂಸೆ, ಕೋಪ, ವೈಮನಸ್ಸು, ದುರಾಸೆ, ಮೋಹ, ನ್ಯಾಯ, ಅನ್ಯಾಯ, ನಂಬಿಕೆ, ಮೋಸ, ಪ್ರೀತಿ ಹೀಗೆ ಅದೆಷ್ಟು ವಿಷಯಗಳನ್ನು ವಿಭಿನ್ನ ಪಾತ್ರಗಳ ಮನಸ್ಥಿತಿಯಿಂದ ಹೇಳಲಾಗಿದೆ ಅನ್ನುವುದು ಈ ಸಿನಿಮಾದಲ್ಲಿ ಇಷ್ಟವಾದ ಅಂಶ. ಹಿನ್ನೆಲೆ ಸಂಗೀತವಂತೂ ಬೇರೆ ಬೇರೆ ಸಂದರ್ಭಕ್ಕೆ ಅನುಗುಣವಾಗಿ ಸಿನಿಮಾದುದ್ದಕ್ಕೂ ಖುಶಿ ಕೊಡುತ್ತದೆ. ಶಿಕಾರಿಯ ದೃಶ್ಯಗಳು, ಹರ್ಷನ ಒಂಟಿತನದ ದೃಶ್ಯಗಳು ಛಾಯಾಗ್ರಾಹಕನಿಗೆ ಸವಾಲೊಡ್ಡಿ ಒಳ್ಳೆಯ ಕೆಲಸ ತೆಗೆಸಿವೆ. ಉದಾಹರಣೆಗೆ ಉಮಾ ಒಲೆಯ ಮುಂದೆ ಕುಳಿತ ದೃಶ್ಯ, ಹರ್ಷ ಒಂಟಿಯಾಗಿ ಮಲಗಿದ್ದಾಗ ನೆರಳಲ್ಲಿ ತೋರಿಸುವ ಯಕ್ಷಗಾನದ ದೃಶ್ಯ, ಹುಲಿವೇಷಧಾರಿ ತೆಪ್ಪವನ್ನು ನಡೆಸುವ ದೃಶ್ಯ, ಹರ್ಷ ಚಿತ್ರಗಳನ್ನು ಗೋಡೆಯಲ್ಲಿ ಮೂಡಿಸುವಾಗಿನ ದೃಶ್ಯ ಎಲ್ಲವೂ ಮನಸ್ಸಿಗೆ ಮುದ ಕೊಡುತ್ತವೆ. ಪಾತ್ರಧಾರಿಗಳು ಸಹ ಉತ್ತಮ ಅಭಿನಯದಿಂದ ನಮ್ಮ ಮನಸ್ಸೆಳೆಯುತ್ತಾರೆ. ಒಬ್ಬರಿಗಿಂತ ಇನ್ನೊಬ್ಬರು ಅನ್ನುವಂತೆ ಎಲ್ಲ ಪಾತ್ರಗಳಿಗೂ ಇಲ್ಲಿ ತೂಕವಿದೆ. ಒಟ್ಟಾರೆ ಸಿನಿಮಾ ಒಂದು ಕಾದಂಬರಿ ಓದಿದಂತೆ ಭಾಸವಾಗುತ್ತದೆ.

ಸಿನಿಮಾದ ನಿರೂಪಣೆಯಲ್ಲಿ ಕೊಂಚ ವೇಗವಿರಬೇಕಿತ್ತು. ಕೆಲವು ಸನ್ನಿವೇಶಗಳನ್ನು Cinematic Libertyಯನ್ನು ಬಳಸಿಕೊಂಡೇ ಇನ್ನಷ್ಟು ಬಿಗಿಯಾಗಿ, ಮನಮುಟ್ಟುವಂತೆ ಹೇಳಬಹುದಿತ್ತು. ಸಂಭಾಷಣೆಯಲ್ಲಿ ಎಲ್ಲ ಪಾತ್ರಗಳ ಮಾತುಗಳಿಗೆ ಆ ಭಾಗದ ಸೊಗಡಿದೆಯಾದರೂ ಮೋಹನನ ಪಾತ್ರಕ್ಕೆ ಮಾತ್ರ ಅದರಿಂದ ಹೊರತಾಗಿದ್ದುದು ಕೊಂಚ ಇರಿಸು-ಮುರಿಸಾಗಲು ಕಾರಣವಾಯಿತು. ಹಾಡುಗಳಿವೆಯಾದರೂ ಮನಸ್ಸಿಗೆ ಅಷ್ಟು ನಾಟುವುದಿಲ್ಲ. ಸಚಿನ್ ಸಾಹಿತ್ಯದ ಜವಾಬ್ದಾರಿಯನ್ನು ಬೇರೆಯವರಿಗೆ ಒಪ್ಪಿಸಬೇಕಿತ್ತು. ಹಾಡುಗಳಿಗೆ ಇನ್ನಷ್ಟು ಒತ್ತು ನೀಡಿ ಅವೇ ಸಿನಿಮಾಗೆ ಇನ್ನಷ್ಟು ತೂಕ ನೀಡಿದ್ದರೆ, ಈ ಸಿನಿಮಾ ಇನ್ನೊಂದು ಅತ್ಯುತ್ತಮ ಚಿತ್ರ ಆಗುತ್ತಿದ್ದುದರಲ್ಲಿ ಅನುಮಾನವಿಲ್ಲ ಅನ್ನಿಸಿತು. ಅದಿರಲಿ.

ಕನ್ನಡಕ್ಕೆ ಒಳ್ಳೆಯ ಸಿನಿಮಾ ನೀಡಬಲ್ಲ ಹೆಸರಾಂತ ನಿರ್ದೇಶಕರಾಗುವ ಎಲ್ಲ ಲಕ್ಷಣಗಳೂ, ಪ್ರತಿಭೆಯೂ ಸಚಿನ್ ಶೆಟ್ಟಿ ಅವರಲ್ಲಿವೆ. ಆ ನಂಬಿಕೆ ಈ ಸಿನಿಮಾ ನೋಡುವಾಗ ಪ್ರೇಕ್ಷಕನಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಶುಭವಾಗಲಿ!

ಇನ್ನೂ ನೋಡಿರದಿದ್ದರೆ ಅಮೇಝಾನ್ ಪ್ರೈಮ್'ನಲ್ಲಿದೆ. ನೋಡಿ!

-Santhoshkumar LM