Monday, November 11, 2019

ಅಸುರನ್....ASURAN (2019)








"ಅಸುರನ್" ಸಿನಿಮಾ ಬಗ್ಗೆ ಎಲ್ಲ ಬರುದ್ ಬಿಸಾಕವ್ರೆ. ನಮಗೆ ಬರೆಯೋಕೆ ಏನು ಉಳಿಸಿಲ್ಲ.


Brilliant Screenplay. ಒಂದು ಮಸ್ತ್ ಸಿನಿಮಾ ನೋಡಿದ ಹಾಗಾಯಿತು. ನನ್ನ ಪಾಲಿನ ಸಿನಿಮಾ ಅನುಭವ ಕೂಡ ಹೀಗೆಯೇ ಇರಬೇಕು. ನಿರ್ದೇಶಕ ಸಿನಿಮಾ ತೋರಿಸುತ್ತಲೇ ನನಗರಿವಿಲ್ಲದಂತೆ ತನ್ನ ಸಂದೇಶ ಹೇಳಬೇಕು. ಇಲ್ಲದಿದ್ದರೆ ನಾನ್ಯಾಕೆ ಆ ಸಿನಿಮಾ ನೋಡಲಿ. ಅದನ್ನು ಪತ್ರಿಕೆಯ ಲೇಖನವೋ, ಸಾಕ್ಷ್ಯಚಿತ್ರವೋ ಮಾಡಬಲ್ಲುದು!


ಅಮೇಜಾನ್ ಪ್ರೈಮ್'ಗೆ ಒಂದು ವರ್ಷದ subscription fee ಕೊಟ್ಟಿದ್ದಕ್ಕೂ ಸಾರ್ಥಕ ಆಗೋಯ್ತು.


ಹೋದ ವಾರ "ಜಲ್ಲಿಕಟ್ಟು", ಈ ವಾರ "ಅಸುರನ್"....ಎರಡೂ ಸಿಕ್ಕಾಪಟ್ಟೆ ಇಷ್ಟ ಆದವು.


ನೋಡಿರದಿದ್ದರೆ ಖಂಡಿತ ನೋಡಿ. ಕೆಲವು ದೃಶ್ಯಗಳಲ್ಲಿ ಹಿಂಸೆ ಜಾಸ್ತಿಯಿರುವುದರಿಂದ ಪುಟ್ಟ ಮಕ್ಕಳಿಲ್ಲದಾಗ ನೋಡುವುದೊಳ್ಳೆಯದು.


----------------


ಮೊದಲಿಗೆ ಒಂದು ಸಿನಿಮಾ ಆಗಿಯೇ ಅಸುರನ್ ನಮ್ಮನ್ನು ಹಿಡಿದು ಕೂರಿಸಿಕೊಳ್ಳುತ್ತೆ. ಜಾತಿ ಸಮಸ್ಯೆ ಅನ್ನುವುದನ್ನು ನೇರವಾಗಿ ಹೇಳದೇ ನೂರಾರು ಜಮೀನಿರುವ ಜಮೀನ್ದಾರರ, ಮತ್ತು ಒಂದೆರಡು ಎಕರೆ ಜಮೀನಿನಲ್ಲೇ ವ್ಯವಸಾಯ ಮಾಡಿ ಜೀವನ ಸಾಗಿಸುವವರ ಮಧ್ಯದ ಸಂಘರ್ಷದ ರೀತಿಯಲ್ಲೇ ಚಿತ್ರೀಕರಿಸಲಾಗಿದೆ. ಉದಾ: ನಾಯಿ ಸತ್ತಾಗಲಿನ ದೃಶ್ಯ, ವಿದ್ಯುತ್ ಬೇಲಿ ಹಾಕಿರುವುದನ್ನು ಪ್ರಶ್ನಿಸುವಾಗಿನ ದೃಶ್ಯ, ಅಕ್ರಮವಾಗಿ ಇನ್ನೊಬ್ಬರ ಬಾವಿಯಿಂದ ನೀರು ಎಳೆಯುವಾಗ ನಡೆಯುವ ಜಗಳ...

ಧನುಷ್ ಇಲ್ಲಿ ನಟಿಸಿರುವುದು ಶಿವಸಾಮಿಯ ಪಾತ್ರ. ಶಿವಸಾಮಿ ಮತ್ತು ಅವನ ಬಳಗ ವಾಸಿಸುವ ಊರಿನಿಂದ ಬೇರೆಯದೆ ಕಡೆ ಇರುವ ಗುಡಿಸಲುಗಳು, ಶಿವಸಾಮಿ ಮಗನಿಗಾಗಿ ಊರವರ ಕಾಲಿಗೆರಗುವುದು, "ನಮ್ಮೆದುರು ಚಪ್ಪಲಿ ಹಾಕಿ ನಡೆಯುವೆಯಾ?" ಅನ್ನೋ ಥರದ ಅನೇಕ ದೃಶ್ಯಗಳಲ್ಲಿ ಆತ ಹೇಳುತ್ತಿರುವುದು ಜಾತಿಸಮಸ್ಯೆಯ ಬಗ್ಗೆ ಅನ್ನುವುದು ಅರ್ಥವಾಗದೆ ಇರುವುದಿಲ್ಲ.


ಎಲ್ಲಕ್ಕಿಂತ ಹೆಚ್ಚಾಗಿ ಈ ಥರದ ಚಿತ್ರದಲ್ಲೂ ಪ್ರೇಕ್ಷಕನಿಗೆ ಸಂದೇಶ ಹೇಳುತ್ತಲೇ ರೋಚಕ ಚಿತ್ರಕಥೆ ಹೆಣೆದ ರೀತಿ ಸಿನಿಮಾ ಮಾಧ್ಯಮವನ್ನು ನಿರ್ದೇಶಕರು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅನ್ನುವುದನ್ನು ತೋರಿಸುತ್ತದೆ.


ಧನುಷ್ ಮೂರು ಮಕ್ಕಳ ತಂದೆಯಂಥ ಪಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದೇ ಆಶ್ಚರ್ಯವೆನಿಸುತ್ತದೆ. ಪ್ರತೀ ಪಾತ್ರಗಳ ಭಾವತೀವ್ರತೆಯ ಬಗ್ಗೆಯೂ ತುಂಬಾ ಸ್ಪಷ್ಟತೆ ಇದೆ. ದೊಡ್ಡಮಗನಿಗೆ ಬಿಸಿರಕ್ತ, ಕೋಪ. ಚಿಕ್ಕಮಗನಿಗೆ ರೋಷ, ಆದರೆ ಅಪ್ಪನ ಬಗ್ಗೆ ಅಸಮಾಧಾನ, ಚಿಕ್ಕ ಮಗಳಿಗೆ ಅಮಾಯಕತೆ, ಹೆಂಡತಿಯ ಕೋಪ/ಅಸಹನೆ.... ಇವೆಲ್ಲ ಪಾತ್ರಗಳಿಗೂ ಒಳ್ಳೆಯ ಸ್ಕೋಪ್ ಇದ್ದಾಗ್ಯೂ ನಮಗೆ ಇಷ್ಟವಾಗುವ ಪಾತ್ರ ಧನುಷ್. ಬಹುಶಃ ಬೇರೆ ನಟರಾಗಿದ್ದರೆ ಇಂತಹ ಪಾತ್ರಗಳಿಗೆ ಒಪ್ಪುತ್ತಿದ್ದರಾ? ಗೊತ್ತಿಲ್ಲ. ಧನುಷ್'ಗೆ ಈ ಸಿನಿಮಾದಿಂದಾಗಿ ಇನ್ನೊಂದು ಪ್ರಶಸ್ತಿ ಕಾಯುತ್ತಿದೆಯೇ..... ಸಿಗಲಿ. ಒಳ್ಳೆಯದು.


ಮುಕ್ಕಾಲು ಘಂಟೆ ಸಿನಿಮಾ ನೋಡಿದ ಮೇಲೆ ಉಳಿದ ಭಾಗವನ್ನು ನಾಳೆ ನೋಡೋಣವೆಂದು ಸುಮ್ಮನಾದರೂ, ನೋಡದೆ ಇರಲಾಗಲಿಲ್ಲ. ಒಂದೇ ಗುಕ್ಕಿನಲ್ಲಿ ನೋಡುವ ತನಕ ಬಿಡಲಿಲ್ಲ. ಅಷ್ಟು ಚೆನ್ನಾಗಿದೆ ಸಿನಿಮಾ... ನೇಟಿವಿಟಿ ಅನ್ನುವುದನ್ನು ಸಿನಿಮಾಗೆ ಹೇಗೆ ಅಳವಡಿಸಿಕೊಳ್ಳುತ್ತಾರೆ ಅನ್ನುವುದಕ್ಕೆ ಇದೊಂದು ಸಿನಿಮಾ ಮತ್ತೊಂದು ಉದಾಹರಣೆ.


ವೈಯಕ್ತಿಕವಾಗಿ ನನಗೆ ಈ ಸಿನಿಮಾ ಕ್ರೌರ್ಯ ಅನಿಸಲಿಲ್ಲ. ಧನುಷ್ ಭರ್ಜಿ ಎತ್ತಿ ಚುಚ್ಚುವಾಗ ಯಾವುದು ನಮಗೆ ಕ್ರೌರ್ಯ ಅನಿಸುತ್ತದೆಯೋ........


ಅದೇ ಕ್ರೌರ್ಯ....


ಅವನ ಮಗನನ್ನು ಮರಕ್ಕೆ ನೇತುಹಾಕಿ ಪ್ರಾಣಿಯನ್ನು ಕೊಲ್ಲುವಂತೆ (ಅದೇ ಉಪಮೆಯೂ ಇರಬೇಕು) ಕೊಲ್ಲುತ್ತಾರಲ್ಲ ಚಪ್ಪಲಿ ಹಾಕಿ ತಲೆಯೆತ್ತಿ ನಡೆದಳು ಅಂದ ಮಾತ್ರಕ್ಕೆ ಹುಡುಗಿಯೊಬ್ಬಳಿಗೆ ಅವಮಾನ ಮಾಡುತ್ತಾರಲ್ಲ. ತಮಗೆ ಅವಮಾನ ಮಾಡಿದ ಅಂದ ಕಾರಣಕ್ಕೆ ಗುಡಿಸಲಿಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡುತ್ತಾರಲ್ಲ.


ಆಗಲೂ ನಮಗೆ ಅನ್ನಿಸಲೇಬೇಕು. ಯಾರೇನೇ ಅಂದರೂ ಶಾಂತಮೂರ್ತಿಯಾಗಿ ನಿಲ್ಲುವ ಶಿವಸಾಮಿ ಕೂಡ ಆಯುಧ ಹಿಡಿದು ನಿಲ್ಲುವುದು, ತನ್ನ ಕುಟುಂಬದೆದುರಿಗೆ ಸಾವು ಕಾಲು ಕೆರೆದು ನಿಂತಿದೆ ಅಂದಾಗಲೇ! ಇಷ್ಟೆಲ್ಲ ಆಗಿಯೂ ಶಿವಸಾಮಿ ಕಡೆಯ ದೃಶ್ಯದಲ್ಲಿ ಹೇಳುವುದೂ ಅದೇ. ಹಿಂಸೆ ಪರಿಹಾರವಲ್ಲ. ಅಕ್ಷರವಷ್ಟೇ ನಮ್ಮನ್ನೆಲ್ಲ ಕಾಪಾಡಬಲ್ಲುದು ಅಂತ.


Santhosh Kumar LM
11-Nov-2019

No comments:

Post a Comment

Please post your comments here.