Tuesday, March 19, 2019

Tamil Movie: ಓನಾಯುಮ್ ಆಟ್ಟುಕ್ಕುಟ್ಟಿಯುಮ್







ಕೆಲವು ಸಿನಿಮಾಗಳನ್ನು ನೋಡಿದ ಮೇಲೆ ಇಷ್ಟು ಚೆನ್ನಾಗಿದೆಯಲ್ಲ. ಏಕೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ತಂದುಕೊಡಲಿಲ್ಲ ಅನ್ನುವ ಪ್ರಶ್ನೆ ತಲೆಯಲ್ಲಿ ಕೊರೆಯಲು ಶುರುವಾಗುತ್ತದೆ. ಎಷ್ಟು ಯೋಚಿಸಿದರೂ ಅದಕ್ಕೆ ಸಮಂಜಸವಾದ ಉತ್ತರ ದೊರಕುವುದಿಲ್ಲ.


ಇತ್ತೀಚೆಗೆ ನೋಡಿದ ಆ ರೀತಿಯ ಸಿನಿಮಾ "ಓನಾಯುಮ್ ಆಟ್ಟುಕ್ಕುಟ್ಟಿಯುಮ್" (ತೋಳವೂ, ಕುರಿಮರಿಯೂ) . ಮಿಸ್ಕಿನ್ ನಿರ್ದೇಶಿಸಿ, ನಿರ್ಮಾಣ ಮಾಡಿ, ನಟಿಸಿದ ಸಿನಿಮಾ. ಮಿಸ್ಕಿನ್ ಸಿನಿಮಾಗಳೆಂದರೆ ಹೇಳಲೇಬೇಕಿಲ್ಲ. ಕಥೆಯಲ್ಲೇ ಒಂದು ವೇಗವಿರುತ್ತದೆ. ಮುಂದೇನು ಅಂತ ಪ್ರತೀ ದೃಶ್ಯದಲ್ಲೇ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತ ಸಾಗುತ್ತದೆ. ಈ ಸಿನಿಮಾದಲ್ಲೂ ಆ ಬಗೆಯ ವಿಭಿನ್ನ ನಿರೂಪಣೆಯಿದೆ.


ನಸುಕಿನ ಜಾವದಲ್ಲಿ ಗುಂಡೇಟು ತಿಂದವನೊಬ್ಬ ರಸ್ತೆಯ ಬದಿಯಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿರುತಾನೆ. ರಕ್ತ ಹರಿದಿರುತ್ತದೆ. ಹತ್ತಿರಕ್ಕೆ ಬಂದು ನೋಡುವ ಅನೇಕ ವಾಹನ ಸವಾರರು ಹತ್ತಿರ ಬಂದು ನೋಡಿ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಮುಂದೆ ನಡೆಯುತ್ತಾರೆ. ಅದೇ ದಾರಿಯಲ್ಲಿ ಬೈಕಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ಮೆಡಿಕಲ್ ವಿದ್ಯಾರ್ಥಿ ಚಂದ್ರು ಇದನ್ನು ನೋಡಿ ಹತ್ತಿರ ಬಂದು ಆ ವ್ಯಕ್ತಿಯ ನಾಡಿಬಡಿತ ನೋಡುತ್ತಾನೆ. ಇನ್ನೂ ಆತ ಬದುಕಿದ್ದಾನೆ. ರಸ್ತೆಯಲ್ಲಿ ಬರುವ ಅನೇಕ ವಾಹನಗಳಿಂದ ಸಹಾಯ ಕೇಳಿದರೂ ಯಾರೂ ಕೈಜೋಡಿಸುವುದಿಲ್ಲ.


ಕಡೆಗೆ ತಾನೇ ತನ್ನ ಬೈಕಿನಲ್ಲಿ ಹಿಂದೆ ಕೂರಿಸಿಕೊಂಡು ಬ್ಯಾಲೆನ್ಸ್ ಮಾಡುತ್ತ ಹತ್ತಿರದ ಆಸ್ಪತ್ರೆಗೆ ಬರುತ್ತಾನೆ. ಆಸ್ಪತ್ರೆಯ ಸಿಬ್ಬಂದಿ ಯಾರೂ ನೆರವಿಗೆ ಬರುವುದಿಲ್ಲ. ಡ್ಯೂಟಿಯಲ್ಲಿದ್ದ ಡಾಕ್ಟರೂ ಸಹ ತಾನು ಆಪರೇಶನ್ ಒಂದರಲ್ಲಿ ನಿರತನಾಗಿರುವುದಾಗಿ ಹೇಳುತ್ತಾನೆ. ಚಂದ್ರುಗೆ ಕೋಪ ಬಂದು ಅವರಿದ್ದ ಕೊಠಡಿಗೇ ನುಗುತ್ತಾನೆ. ಅಲ್ಲಿ ಡಾಕ್ಟರು ಯಾರೊಂದಿಗೋ ಫೋನ್ ಸಂಭಾಷಣೆಯಲ್ಲಿರುತ್ತಾನೆ. ಚಂದ್ರು ಬೇಡಿಕೊಂಡರೂ, ಬೆದರಿಸಿದರೂ ಇವನಿಗೆ ಬೈದು ಕಳಿಸುತ್ತಾರೆಯೇ ಹೊರತು ಪ್ರಥಮ ಚಿಕಿತ್ಸೆಯನ್ನೂ ಕೊಡುವುದಿಲ್ಲ. ಇದು ಪೊಲೀಸು ಕೇಸು. ಮೊದಲು ಪೊಲೀಸರ ಅನುಮತಿ ಪಡೆದು ಬಾ ಅಂತ ಬೈದು ಕಳಿಸುತ್ತಾರೆ.


ಚಂದ್ರು ಮತ್ತೆ ಆ ವ್ಯಕ್ತಿಯನ್ನು ಕೂರಿಸಿಕೊಂಡು ಹತ್ತಿರದ ಪೊಲೀಸಿನವರ ಬಳಿ ಹೋದರೆ ಇವನ ಮೇಲೆಯೇ ಅನುಮಾನ ತೋರಿಸುತ್ತ ನಿರ್ಲಕ್ಷಿಸುತ್ತಾರೆ. ಅಷ್ಟೇ ಅಲ್ಲ, ಅತ್ತ ಚಂದ್ರು ಒಬ್ಬ ಪೊಲೀಸಿನವನ ಜೊತೆ ಮಾತನಾಡುವಾಗ, ಇತ್ತ ಇನ್ನೊಬ್ಬ ಪೊಲೀಸು ಆ ವ್ಯಕ್ತಿಯ ವಾಚು ಬಿಚ್ಚಿಕೊಳ್ಳುತ್ತಾನೆ. ಜೊತೆಗೆ ಎಸ್ಪಿ ರೌಂಡ್ಸಿನಿಂದ ಮರಳಿ ಬರುವವರೆಗೆ ಕಾಯಬೇಕು ಅಂತ ಸುಮ್ಮನೆ ಕೂರುತ್ತಾರೆ.


ಚಂದ್ರು ಇನ್ನು ತಡ ಮಾಡಿದರೆ ಆ ವ್ಯಕ್ತಿ ಜೀವ ಹೋಗುತ್ತದೆ ಎಂಬ ಅರಿವಾಗುತ್ತದೆ. ಚಂದ್ರು ಮೊದಲೇ ಮೆಡಿಕಲ್ ವಿದ್ಯಾರ್ಥಿ. ಹಾಗಾಗಿ ಬೇಕಾದ ಔಷಧಿ-ಪರಿಕರಗಳನ್ನು ಆಸ್ಪತ್ರೆಯೊಂದರಲ್ಲಿ ಕೊಂಡು ಆ ವ್ಯಕ್ತಿಯನ್ನು ತನ್ನ ಮನೆಗೇ ಕರೆತರುತ್ತಾನೆ. ಅಣ್ಣ-ಅತ್ತಿಗೆಗೆ ಗೊತ್ತಾಗದಂತೆ ಮೇಲಿನ ತನ್ನ ರೂಮಿಗೆ ಹೊತ್ತು ಹೋಗುತ್ತಾನೆ. ಈ ಮಧ್ಯೆ ತನ್ನ ಗೆಳೆಯರಿಗೆ, ಪ್ರೊಫ಼ೆಸರಿಗೆ ಕರೆ ಮಾಡುತ್ತಲೇ ಇರುತ್ತಾನೆ. ರಾತ್ರಿಯಾದ್ದರಿಂದ ಯಾರೂ ಕರೆ ಸ್ವೀಕರಿಸುವುದಿಲ್ಲ. ಪ್ರೊಫ಼ೆಸರ್ ಒಂದು ಹೊತ್ತಿನಲ್ಲಿ ಕರೆ ಸ್ವೀಕರಿಸುತ್ತಾನೆ. ಚಂದ್ರು ಸದ್ಯದ ಪರಿಸ್ಥಿತಿಯನ್ನು ವಿವರಿಸಿದಾಗ ಪ್ರೊಫ಼ೆಸರ್ ಯದ್ವಾತದ್ವಾ ಬೈಯುತ್ತಾನೆ. "ನೀನು ಮಾಡುತ್ತಿರುವುದು ಅಪರಾಧ. ಪೊಲೀಸಿನವರಿಗೆ ಮಾಹಿತಿ ನೀಡದೆ ಗುಂಡು ಬಿದ್ದಿರುವ ವ್ಯಕ್ತಿಗೆ ಚಿಕಿತ್ಸೆ ಕೊಡುತ್ತಿರುವುದು ಮಹಾಪರಾಧ. ನಿನ್ನ ಗುರುವಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ" ಎಂದು ಹೇಳಿ ಕರೆ ಕಟ್ ಮಾಡುತ್ತಾರೆ.


ಐದು ನಿಮಿಷ ಏನೋ ಅರಿವಾದವರಂತೆ ಪ್ರೊಫ಼ೆಸರ್ ತಾನಾಗಿಯೇ ಕರೆ ಮಾಡಿ ಆ ವ್ಯಕ್ತಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ಫೋನಿನಲ್ಲೇ ಹೇಳುತ್ತಾರೆ. ಚಂದ್ರು ತನ್ನ ರೂಮಿನಲ್ಲೇ ಇರುವ ಸೌಲಭ್ಯದಲ್ಲಿ ಒಂದೂವರೆ ಘಂಟೆಗಳ ಕಾಲ ಆ ವ್ಯಕ್ತಿಗೆ ಆಪರೇಶನ್ ಮಾಡಿ ಬುಲೆಟ್ ಹೊರತೆಗೆಯುತ್ತಾನೆ.


ಬೆಳಿಗ್ಗೆ ಚಂದ್ರುಗೆ ಎಚ್ಚರವಾಗುವ ಹೊತ್ತಿಗೆ ಅವನ ರೂಮು ಎಲ್ಲ ಖಾಲಿಯಾಗಿರುತ್ತದೆ. ಆ ವ್ಯಕ್ತಿಯೂ ಮಾಯ. ಅಲ್ಲಿಂದ ಶುರು ಸರ್ಕಸ್. ಪೊಲೀಸಿನವರು ಚಂದ್ರು , ಮತ್ತು ಅವನ ಅಣ್ಣ-ಅತ್ತಿಗೆಯನ್ನು ಬಂಧಿಸಿ ಕರೆದೊಯ್ಯುತ್ತಾರೆ.


ಆಗ ಗೊತ್ತಾಗುವ ವಿಷಯವೆಂದರೆ ಚಂದ್ರು ಚಿಕಿತ್ಸೆ ಕೊಟ್ಟು ಪ್ರಾಣವುಳಿಸಿದ ವ್ಯಕ್ತಿ, ಪೊಲೀಸ್ ಇಲಾಖೆಗೆ ಬೇಕಾದ Most-Wanted-criminal "WOLF". ಹದಿನಾಲ್ಕು ಕೊಲೆ ಕೇಸಿನಲ್ಲಿ ಪ್ರಮುಖ ಆರೋಪಿಯಾದ ಆತ ಎಷ್ಟೋ ವರ್ಷಗಳಿಂದ ಪೊಲೀಸಿನವರಿಂದ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಮೇಲಿಂದಲೂ ಅವನನ್ನು ಎನ್-ಕೌಂಟರ್ ಮಾಡುವ ಆದೇಶ ಬಂದಿರುತ್ತದೆ. ಹಿಂದಿನ ರಾತ್ರಿಯಷ್ಟೇ ಪೊಲೀಸರ ಗುಂಡೇಟು ತಿಂದು ತಪ್ಪಿಸಿಕೊಂಡಿರುತ್ತಾನೆ. ಅಲ್ಲಿಂದ ಮುಂದೆ ಆತನನ್ನು ಕಾಪಾಡುವುದು ಚಂದ್ರು!


ಚಂದ್ರು ತಾನು ನಿರಪರಾಧಿ ಅಂತ ಹೇಳಿದರೂ, ಪೊಲೀಸರು ಆವನ ಮುಖಾಂತರವೇ ಆ ಅಪರಾಧಿಯನ್ನು ಕೊಲೆ ಮಾಡಲು ನಿರ್ಧರಿಸುತ್ತಾರೆ! ಇಲ್ಲದಿದ್ದರೆ ನೀನು ಜೀವನಪೂರ್ತಿ ಜೈಲಿನಲ್ಲೇ ಕೊಳೆಯಬೇಕು ಎಂದು ಬೆದರಿಸುತ್ತಾರೆ.


ಮೆಡಿಕಲ್ ಸ್ಟೂಡೆಂಟ್ ಆದ ಚಂದ್ರುವಿನ ಕೆಲಸ ಮನುಷ್ಯರನ್ನು ಸಾವಿನಿಂದ ಕಾಪಾಡುವುದು ಅಷ್ಟೇ. ಆದರೆ ಕಾಪಾಡಲು ಹೋಗಿ ಅವನಿಂದ ಸಿಕ್ಕಿಹಾಕಿಕೊಂಡಿದ್ದಕ್ಕಾಗಿ ಅವನ ಮೇಲೆ ಚಂದ್ರುವಿಗೆ ಕೋಪವಿದೆ. ಆದ್ದರಿಂದ ಆತ ಈ ಕೊಲೆ ಮಾಡಲು ಒಪ್ಪಿಕೊಳ್ಳುತ್ತಾನೆಯೇ? ಈ ಕಥೆಯಲ್ಲಿ ಆತ ತೋಳವೋ? ಕುರಿಮರಿಯೋ? Wolf ಒಳ್ಳೆಯವನೋ ಕೆಟ್ಟವನೋ?


ಈ ಮೇಲೆ ಹೇಳಿದ್ದು ಸಿನಿಮಾದ ಆರಂಭದ ಕೆಲ ದೃಶ್ಯಗಳಷ್ಟೇ. ಮುಂದೆ ಸಿನಿಮಾ ಹೇಗೆ ಸಾಗುತ್ತದೆ ಅಂತ ಸಿನಿಮಾ ನೋಡಿಯೇ ತಿಳಿಯಬೇಕು. ಒಂದು ದೃಶ್ಯದಲ್ಲಂತೂ Wolf ಪಾತ್ರ ಮಾಡಿದ ಮಿಸ್ಕಿನ್ ಇಡೀ ಚಿತ್ರದ ಸಾರವನ್ನು ಪುಟ್ಟ ಕಥೆಯಲ್ಲಿ ಹೇಳಿಬಿಡುತ್ತಾರೆ. ಸಿನಿಮಾದ ಪಾತ್ರಗಳ ಹಿನ್ನೆಲೆಯನ್ನು ಆ ಕಥೆಯಿಂದಲೇ ಅರ್ಥೈಸಿಕೊಳ್ಳಬೇಕು. ಅಷ್ಟು ವಿಭಿನ್ನವಾಗಿದೆ ನಿರೂಪಣೆ.


ಸಿನಿಮಾದಲ್ಲಿ ಹಾಡುಗಳಿಲ್ಲ! ಹೀರೋಯಿನ್ ಇಲ್ಲ! ಆದರೆ ಹಿನ್ನೆಲೆ ಸಂಗೀತವಂತೂ "ಇದ್ಯಾರಪ್ಪ ಇಷ್ಟು ಚೆನ್ನಾಗಿ ಮಾಡಿದ್ದಾರೆ" ಅಂತ ನೋಡೋಣವೆನಿಸುತ್ತದೆ. ನೋಡಿದರೆ ಅದು "ಇಳಯರಾಜ"! ಮುಂದೆ ಹೇಳಬೇಕಿಲ್ಲ.


Once Again ಸಿನಿಮಾ ಮುಗಿದ ಮೇಲೆ, ಇದ್ಯಾಕೆ ಅಷ್ಟು ಯಶಸ್ವಿಯಾಗಲಿಲ್ಲ ಅನ್ನುವ ಪ್ರಶ್ನೆ ನಮ್ಮನ್ನು ಕಾಡತೊಡಗುತ್ತದೆ. ಈ ಸಿನಿಮಾ 2013ರಲ್ಲಿ ಬಿಡುಗಡೆಯಾಗಿದ್ದು. ವಿಭಿನ್ನ ಸಿನಿಮಾಗಳನ್ನು ನೋಡಬೇಕೆನಿಸುವವ್ರಿಗೆ ಇದೊಂದು ಉತ್ತಮ ಆಯ್ಕೆ. ನೋಡಬೇಕೆನಿಸಿದರೆ ಯೂಟ್ಯೂಬಿನಲ್ಲಿದೆ. ನೋಡಿ.


#santhuLm
24-Feb-2019

No comments:

Post a Comment

Please post your comments here.