Saturday, September 11, 2021

ಮೇರ್ಕು ತೊಡರ್ಚಿ ಮಲೈ




ಮೇರ್ಕು ತೊಡರ್ಚಿ ಮಲೈ
( spoiler alert: ಸಿನಿಮಾ ಈಗಾಗಲೇ ನೋಡಿದವರಿಗಾಗಿ.....ಮತ್ತು ನೋಡುವ ಯಾವುದೇ ಪ್ಲಾನ್ ಇಲ್ಲದವರಿಗಾಗಿ)

ಕೆಲವು ಸಿನಿಮಾಗಳು ಹಾಗೆಯೇ. ಯಾವುದೋ ಒಂದು ವಿಷಯದ ಟ್ರ್ಯಾಕಿನಲ್ಲಿ ಸಾಗುತ್ತಿರುತ್ತವೆ. ಇನ್ನೇನು ಸಿನಿಮಾ ಮುಗಿಯುವ ಸಮಯ ಬಂತು ಅಂದಾಗ ಥೇಟ್ ಸಾಂಬಾರಿಗೆ ಹಾಕುವ ಒಗ್ಗರಣೆಯಂತೆ "ಅದೊಂದು" ವಿಶೇಷವಾದ ದೃಶ್ಯದೊಂದಿಗೆ ಮುಗಿದುಬಿಡುತ್ತವೆ. "ಹಾಳಾದ ಸಿನಿಮಾ" ಅಂತ ವೀಕ್ಷಕನೂ ಬೈದುಕೊಳ್ಳುತ್ತಾನೆ. ಏಕೆಂದರೆ ಸಿನಿಮಾ ಮುಗಿದು ಕೆಲ ದಿನಗಳಾದರೂ ಆ ಒಂದು ದೃಶ್ಯ ಮನಸ್ಸಿನೊಳಗೆ ಗಿರಕಿ ಹೊಡೆಯುತ್ತಲೇ ಇರುತ್ತದೆ. ಆ ಒಂದು ದೃಶ್ಯ ಸಿನಿಮಾದ ಕಥೆಯನ್ನು ಬರೆಯುವಾಗಲೇ ಬರೆದದ್ದೋ ಅಥವಾ ಇನ್ಯಾವಾಗಲೋ ಸಿನಿಮಾದ ಅಂತ್ಯ ಕೊಂಚ ಜಾಸ್ತಿ ಪರಿಣಾಮ ಬೀರಬೇಕೆಂದು ನಿರ್ದೇಶಕ ಮಾಡುವುದೋ ಗೊತ್ತಾಗುವುದೇ ಇಲ್ಲ.

ಮೇರ್ಕು ತೊಡರ್ಚಿ ಮಲೈ..... ಈ ಸಿನಿಮಾದ ಕಥೆಯ ಎಳೆಯೇ ಜಮೀನಿಲ್ಲದ ಶ್ರಮಿಕನೊಬ್ಬ ಜಮೀನನ್ನು ಖರೀದಿಸಲು ಹಂಬಲಿಸಿ ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡುವುದು.

ಅದು ಪಶ್ಚಿಮ ಘಟ್ಟಗಳು ಮತ್ತು ಬಯಲು ಸೀಮೆ ಸೇರುವ ಜಾಗ. ಘಟ್ಟಗಳನ್ನು ಹತ್ತಲು ಸುಲಭದ ರಸ್ತೆಗಳು ಇಲ್ಲದ ಕಾರಣ, ಮೇಲಿನ ಎಸ್ಟೇಟಿಗೆ ಮತ್ತು ಕೆಳಗಿನ ಊರುಗಳಿಗಿರುವ ಸಂಪರ್ಕವೆಂದರೆ ಕಾಲ್ನಡಿಗೆಯಲ್ಲೇ ಹತ್ತಿಳಿದು ಸಾಮಾನುಗಳನ್ನು ತಲುಪಿಸುವ ಆ ಊರಿನ ಶ್ರಮಿಕ ಯುವಕರು. ರಂಗಸ್ವಾಮಿ ಕೂಡ ಅವರಲ್ಲೊಬ್ಬ. ಪ್ರತಿದಿನ ಬೆಟ್ಟ ಹತ್ತಿ ಅತ್ತಲಿಂದ ಏಲಕ್ಕಿಯ ಮೂಟೆಗಳನ್ನು ಹೊತ್ತು ಇಳಿದು ಅದರಿಂದ ಬಂದ ಕೂಲಿಯಿಂದಲೇ ಜೀವನ ಸಾಗಿಸುವುದು ರಂಗಸ್ವಾಮಿ ಸೇರಿದಂತೆ ಅಲ್ಲಿನ ಬಹುತೇಕರ ಜೀವನೋಪಾಯ.

ರಂಗಸ್ವಾಮಿಗೆ ಪುಟ್ಟ ಜಮೀನನ್ನು ಕೊಂಡು ಕೃಷಿಕನಾಗಬೇಕೆನ್ನುವ ಮಹದಾಸೆ. ಹಾಗಾಗಿ ಪುಟ್ಟ ಪುಟ್ಟ ಉಳಿತಾಯ ಮಾಡುತ್ತಿರುತ್ತಾನೆ. ಕಷ್ಟಪಟ್ಟದ್ದಕ್ಕೆ ಉತ್ತರವೆಂಬಂತೆ, ಜೊತೆಗೆ ಇನ್ನೊಬ್ಬ ಸಹೃದಯರ ಸಹಾಯದಿಂದ ಆ ಪುಟ್ಟ ಜಮೀನಿಗೆ ಒಡೆಯನಾಗುತ್ತಾನೆ. ಅವನ ಕುಟುಂಬದಲ್ಲಿ ಅದೇ ಮೊದಲ ಬಾರಿಗೆ ಸಂತೋಷ ಮನೆಮಾಡುತ್ತದೆ. ಜಮೀನಿನಲ್ಲಿ ಕೃಷಿ ಮಾಡಿ ಬಂದ ಹಣವನ್ನು ಸ್ವಲ್ಪ ಸ್ವಲ್ಪ ಕೊಟ್ಟು ಸಾಲ ತೀರಿಸುತ್ತಾನೆ. ಎಲ್ಲವೂ ಚೆನ್ನಾಗಿದೆ ಅಂದುಕೊಂಡಿರುವಾಗ ಅದೊಂದು ದಿನ ಮಳೆ ಬಂದು ಬೆಳೆಯನ್ನೆಲ್ಲ ಕೊಚ್ಚಿಕೊಂಡು ಹೋಗುತ್ತದೆ. ಅದೇ ಸಮಯದಲ್ಲಿ ಅಲ್ಲಿ ನಡೆಯುವ ರಾಜಕೀಯ ವಿದ್ಯಮಾನಗಳಿಂದ ಜೈಲು ಸೇರುತ್ತಾನೆ. ಜೈಲುವಾಸ ಮುಗಿಸಿ ಮತ್ತೆ ಮನೆ ಸೇರುವ ವೇಳೆಗೆ ಐದಾರು ವರ್ಷಗಳಿಂದ ಕೃಷಿಗಾಗಿ ತೆಗೆದುಕೊಂಡಿದ್ದ ಬೀಜ, ಗೊಬ್ಬರ, ಕೀಟನಾಶಕ ಇತ್ಯಾದಿಗಳ ಸಾಲ ಕೈ ಮೀರಿ ಹೋಗಿರುತ್ತದೆ.

ಅದೊಂದು ದಿನ ಸಾಲ ಕೊಟ್ಟಿದ್ದ ಆ ಅಂಗಡಿಯ ಮಾಲಿಕ ಇವನನ್ನು ಬರ ಹೇಳುತ್ತಾನೆ. ಲೆಕ್ಕ ನೋಡಿದರೆ ಈತನ ಸಾಲ ಜಮೀನಿನ ಬೆಲೆಗಿಂತ ಜಾಸ್ತಿಯಾಗಿರುತ್ತದೆ. ಹಾಗಾಗಿ ಈತನ ಜಮೀನಿನ ಪತ್ರಗಳಿಗೆ ಸಹಿ ಮಾಡಿಸಿಕೊಂಡು ವಾಪಸ್ಸು ಕಳುಹಿಸುತ್ತಾನೆ. ಆದರೆ ಕಳುಹಿಸುವ ಮುನ್ನ ಈತನ ಸ್ಥಿತಿಗೆ ಮರುಕಪಟ್ಟು ಆತನಿಗೊಂದು ಕೆಲಸ ಕೊಡಿಸುತ್ತಾನೆ.

-----

ಸಿನಿಮಾ ಮುಗಿಯುತ್ತದಾ?

ಇಲ್ಲ..... ರಂಗಸ್ವಾಮಿ ಮನೆಗೆ ಬರುತ್ತಾನೆ. ಮರುದಿನ ಬೆಳಿಗ್ಗೆ ಆ ಹೊಸ ಕೆಲಸದ ಮೊದಲ ದಿನ. ಇಲ್ಲಿಯೂ ನಿರ್ದೇಶಕ ಏನೂ ಗುಟ್ಟು ಬಿಟ್ಟುಕೊಡುವುದಿಲ್ಲ. ಹೊಸ ಕೆಲಸಕ್ಕೆಂದು ಕೊಟ್ಟ ನೀಲಿ ಬಣ್ಣದ ಯೂನಿಫಾರಂ ಅನ್ನು ತೊಟ್ಟು ಮನೆಯಿಂದ ಹೊರಬರುತ್ತಾನೆ. ಅಲ್ಲಿಗೆ ಆಗಲೇ ತುಂಬಿ ಕಿಕ್ಕಿರಿದಿದ್ದ ಟಾಟಾ ಸುಮೋ ಬರುತ್ತದೆ. ಇದ್ದ ಸ್ವಲ್ಪ ಜಾಗದಲ್ಲೇ ಈತನೂ ಅನುಸರಿಸಿಕೊಂಡು ಕೂರುತ್ತಾನೆ. ಆ ವಾಹನ ಆ ಮಾಲಿಕನಿಗೆ ಸೇರಿದ್ದು. ಟಾಟಾ ಸುಮೋ ಇವನನ್ನು ಅದೊಂದು ಜಾಗದಲ್ಲಿ ಇಳಿಸಿ ಹೊರಟುಹೋಗುತ್ತದೆ.

ಈತ ನಡೆಯುತ್ತ ಹೋಗಿ ಆ ಜಾಗದ ಮಧ್ಯದಲ್ಲಿ ಹಾಕಿದ್ದ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ. ಇನ್ನು ಮುಂದೆ ಆ ಜಾಗವನ್ನು ಕಾಯುವುದೇ ಕೆಲಸ. ನಿಧಾನಕ್ಕೆ ಡ್ರೋನ್ ವ್ಯೂ ಮೇಲೆ-ಮೇಲೆ ಸಾಗುತ್ತದೆ. ಆಗ ನಮಗೆ ಗೊತ್ತಾಗುವುದು ಆ ಜಾಗ ಅವನ ಜಮೀನೇ!! ಆದರೆ ಒಂದೊಮ್ಮೆ ಹಸಿರಿನಿಂದ ಕಂಗೊಳಿಸುತ್ತಿದ್ದ ಆ ಜಾಗ ಈಗ ಬರಿಯ ಮೈದಾನವಾಗಿರುತ್ತದೆ. ಇನ್ನೂ ಮೇಲೆ ಮೇಲೆ ಹೋದಂತೆ ಬರಿ ಇವನ ಜಾಗವಷ್ಟೇ ಅಲ್ಲ. ಅಕ್ಕ ಪಕ್ಕದ ನೂರಾರು ಎಕರೆ ಜಮೀನುಗಳೂ ಬರೀ ಮೈದಾನವಾಗಿರುತ್ತವೆ. ಅಲ್ಲಿ ಯಾವುದೇ ಬೆಳೆ ಬೆಳೆದಿರುವುದಿಲ್ಲ ಅಂತ ಗೊತ್ತಾಗುತ್ತದೆ. ಏಕೆಂದರೆ ಕೊಂಡವನು ಕೃಷಿಕನಲ್ಲ!

ಇನ್ನೂ ಮೇಲೆ ಮೇಲೆ ಹೋದಂತೆ ಇವನ ಜಮೀನು ಸೇರಿದಂತೆ ಆ ಎಲ್ಲ ಜಮೀನುಗಳಲ್ಲಿ ವಿಂಡ್‍ಮಿಲ್ ತಿರುಗುತ್ತಿರುವುದು ಕಾಣಿಸುತ್ತದೆ. ಹಿಂದೆ ಇದೇ ಜಾಗದಲ್ಲಿ ಈತ ನಡೆದು ಬೆಟ್ಟ ಹತ್ತುವಾಗ ಅಲ್ಲಿದ್ದ ಕಾಡು, ಹಸಿರೆಲ್ಲ ನಿರ್ನಾಮವಾಗಿ ಇಂದು ಅಭಿವೃದ್ಧಿಯ ಹೆಸರಲ್ಲಿ ಬರಿದಾಗಿರುತ್ತವೆ. ಜೀವನವೆಲ್ಲ ತುಂಡು ಜಮೀನು ಹೊಂದಬೇಕು, ಹಿಡುವಳಿದಾರನಾಗಬೇಕು, ಕೃಷಿ ಮಾಡಬೇಕು, ನಾಲ್ಕು ಕಾಸು ಸಂಪಾದಿಸಬೇಕು ಎಂದು ಬೆವರ ಬಸಿದಿದ್ದ ರಂಗಸ್ವಾಮಿ.... ಇಂದು ಹಸಿರೇ ಕಾಣದ ತನ್ನದೇ ಜಮೀನಿನಲ್ಲಿ ಸೆಕ್ಯುರಿಟಿ ಕೆಲಸ ಮಾಡುವ ಆ ದೃಶ್ಯ ಪ್ರೇಕ್ಷಕನ ಕರುಳ ಹಿಂಡುತ್ತದೆ.

ಇಲ್ಲಿ ಇಷ್ಟೆಲ್ಲ ವಿವರಿಸಿದೆನಲ್ಲ. ಆದರೆ ನಿರ್ದೇಶಕ ಇಷ್ಟೆಲ್ಲವನ್ನೂ ಅದೊಂದು ಡ್ರೋನ್ ಶಾಟ್'ನಲ್ಲಿ ಹೇಳಿಬಿಡುತ್ತಾನೆ. ಅಲ್ಲಿ ರಂಗಸ್ವಾಮಿ ಅಳುವುದಿಲ್ಲ, ಸಾಲು ಸಾಲು ಡೈಲಾಗು ಹೊಡೆಯುವುದಿಲ್ಲ...ಆದರೆ ಅಸಹಾಯಕನಾಗಿ ಕೂರುವ ಆತನ ಸ್ಥಿತಿಯೇ ಎಲ್ಲವನ್ನೂ ಹೇಳಿಬಿಡುತ್ತದೆ.

ದೃಶ್ಯಕಲೆ ನಿಜಕ್ಕೂ ಪರಿಣಾಮಕಾರಿ. ಆದರೆ ಅದನ್ನು ನಿರ್ದೇಶಕ ತನ್ನ ಕಥೆ ಹೇಳಲು ಹೇಗೆ ಬಳಸಿಕೊಳ್ಳಬಲ್ಲಅನ್ನುವುದರ ಮೇಲೆ ಎಲ್ಲವು ನಿರ್ಧರಿತವಾಗುತ್ತದೆ.

ನಿರ್ದೇಶಕ: ಲೆನಿನ್ ಭಾರತಿ
ಸಿನಿಮಾ: ಮೇರ್ಕು ತೊಡರ್ಚಿ ಮಲೈ(2016)

-Santhosh Kumar LM
11-Sep-2021

Sunday, July 18, 2021

Don't F**K with Cats: Hunting An Internet Killer (Netflix Documentary Series)

 

Don't F**K with Cats: Hunting An Internet Killer (Netflix Documentary Series)

ಮೂರ್ನಾಲ್ಕು ವರ್ಷಗಳ ಹಿಂದೆ ಇಂಟರ್ನೆಟ್ಟಿನಲ್ಲಿ ವೀಡಿಯೋ ಒಂದು ವೈರಲ್ ಆಗಿತ್ತು, ನೆನಪಿದೆಯೇ? ಮಗನೊಬ್ಬ ಹೆತ್ತಮ್ಮನಿಗೆ ಪೊರಕೆಯಿಂದ ಥಳಿಸುತ್ತಿದ್ದ. ಆತನ ಸಹೋದರಿ ಅವನಿಗೆ ಗೊತ್ತಿಲ್ಲದಂತೆ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಳು. ಕೇವಲ ಸಿಗರೇಟು ಸೇದುವುದಕ್ಕೆ ಮತ್ತು ಇನ್ನಿತರ ವಿಷಯಗಳ ಬಗ್ಗೆ ಆತನಿಗೆ ಬುದ್ಧಿವಾದ ಹೇಳಿದ್ದಕ್ಕೆ ಆತ ಕೋಪಗೊಂಡು ಅಮ್ಮನಿಗೆ ಬೈಯುತ್ತ ಥಳಿಸುತ್ತಿದ್ದ.

ಆ ವೀಡಿಯೋ ನೋಡಿ ಬೈದುಕೊಂಡವರೆಷ್ಟೋ ಜನ? ಅದನ್ನು ನೋಡಿದಾಗ ನನಗೆ ಅದೆಷ್ಟು ಕೋಪ ಬಂದಿತ್ತೆಂದರೆ ಆತ ಎದುರಿಗೆ ಸಿಕ್ಕಿದ್ದರೆ ಅದೇನು ಮಾಡುತ್ತಿದ್ದೆನೋ? ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗೆಯ ವೀಡಿಯೋಗಳು ಬಂದಾಗ ನಮ್ಮ ಸಹನೆಯ ಕಟ್ಟೆಯೊಡೆಯುವುದು ಸಾಮಾನ್ಯ. ನಮ್ಮ ಮನಸ್ಸಿನ ಮೇಲೆ ಅವುಗಳು ಬೀರುವ ಪರಿಣಾಮ ಬೇರೆ ಬೇರೆ ರೀತಿಯದ್ದಾಗಿರುತ್ತದೆ.

2010ರ ಆಸುಪಾಸಿನಲ್ಲಿ ಇಂಟರ್ನೆಟ್ಟಿನಲ್ಲಿ ಫೇಕ್ ಪ್ರೊಫೈಲಿನ ಅಕೌಂಟಿನಲ್ಲಿ ವೀಡಿಯೋವೊಂದು ಕಾಣಿಸಿಕೊಳ್ಳುತ್ತದೆ. ಅಪರಿಚಿತ ವ್ಯಕ್ತಿಯೊಬ್ಬ ಎರಡು ಪುಟ್ಟ ಬೆಕ್ಕಿನ ಮರಿಗಳನ್ನು ವ್ಯಾಕ್ಯೂಮ್ ಕವರೊಂದಕ್ಕೆ ಹಾಕಿ ಉಸಿರುಗಟ್ಟಿ ಸಾಯಿಸುತ್ತಾನೆ. ಇಂಥ ಕ್ರೂರ ಮನಸ್ಥಿತಿಯ ದೃಶ್ಯವೊಂದು ಬಂದ ತಕ್ಷಣ ವೈರಲ್ ಆಗುತ್ತದೆ. ನೋಡಿದವರ ರಕ್ತ ಕುದಿಯುತ್ತದೆ. ಪ್ರಾಣಿಪ್ರಿಯರು ಇಂಥ ಕ್ರೂರಿಗೆ ಮರಣದಂಡನೆ ಸಿಗಬೇಕು ಅಂತ ಶಾಪ ಹಾಕುತ್ತಾರೆ. ಆ ಪುಟ್ಟ ಬೆಕ್ಕಿನ ಮರಿಗಳನ್ನು ನೋಡಿದರೆ ಕೈಗಳಲ್ಲಿ ಹಿಡಿದು ಮೈ ಸವರಿ ಮುತ್ತು ಕೊಡಬೇಕು ಅನ್ನುವಷ್ಟರ ಮಟ್ಟಿಗೆ ಮುದ್ದಾಗಿರುತ್ತವೆ. ಆದರೆ ಅಂಥ ಮೂಕ ಪ್ರಾಣಿಗಳನ್ನು ಉಸಿರುಗಟ್ಟಿಸಿ ಕೊಂದು ಅದರಿಂದ ಖುಶಿಪಡುವ ವಿಕೃತ ಮನಸ್ಥಿತಿಯವರು ನಮ್ಮ ಮಧ್ಯದಲ್ಲಿ ಇದ್ದಾರೆಯೇ ಅನ್ನುವುದೇ ನೋಡಿದವರಿಗೆ ನಂಬಲಸಾಧ್ಯವಾಗಿರುತ್ತದೆ.

ಎಲ್ಲರೂ ಮನಸ್ಸಿನಲ್ಲಿಯೇ ಬೈದು, ಶಾಪ ಹಾಕಿ ಸುಮ್ಮನಾದರೆ ಅಷ್ಟು ಹೊತ್ತಿಗಾಗಲೇ ಇಂಟರ್ನೆಟ್ಟನ್ನು ಅರೆದು ಕುಡಿದ ಕೆಲವು ಇಂಟರ್ನೆಟ್ ಜೀಕ್‍ಗಳು ಇನ್ನೊಂದು ಹೆಜ್ಜೆ ಮುಂದಿಡುತ್ತಾರೆ. ಆ ವಿಕೃತ ಮನುಷ್ಯನನ್ನು ಹಿಡಿದು ಬುದ್ಧಿ ಕಲಿಸಲೇಬೇಕೆಂದು ಮನಸ್ಸು ಮಾಡುತ್ತಾರೆ. ಈ ವೀಡಿಯೋ ನೋಡಿ ತಾಳ್ಮೆಗೆಟ್ಟ ನಂಬಿಕಸ್ಥ ಜನರೆಲ್ಲ ಫೇಸ್ಬುಕ್ಕಿನಲ್ಲಿ ಒಂದು ಗ್ರೂಪ್ ಮಾಡಿಕೊಂಡು ತಮಗೆ ತಿಳಿದ ಮಟ್ಟಿಗೆ ಆ ಕ್ರೂರಿಯನ್ನು ಹುಡುಕಲು ಶುರುಮಾಡುತ್ತಾರೆ. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ವೀಡಿಯೋದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಆತನ ಮುಖ ಬಿಟ್ಟರೆ, ಆತ ಎಲ್ಲಿಯವನು? ಅವನ ಹೆಸರೇನು? ಎಲ್ಲಿ ಆ ವೀಡಿಯೋ ತೆಗೆದದ್ದು? ಅದು ಇತ್ತೀಚಿನದಾ, ಹಳೆಯ ವೀಡಿಯೋನಾ? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ. ಪೊಲೀಸರಿಗೆ ದೂರು ಕೊಡಲು ಅವನ ವಿವರಗಳಿಲ್ಲ. ಹಾಗಾಗಿ ಇವರೇ ಸಾಧ್ಯವಾದಷ್ಟು ವಿವರ ಕಲೆ ಹಾಕಬೇಕೆಂದು ಪ್ರಯತ್ನಿಸುತ್ತಾರೆ.

ಅಷ್ಟು ಹೊತ್ತಿಗಾಗಲೇ ಮತ್ತೊಂದು ವೀಡಿಯೋ ಬಿಡುಗಡೆಯಾಗುತ್ತದೆ.....ಆ ವೀಡಿಯೋದಲ್ಲಿ ಸಹ ಒಂದು ಬೆಕ್ಕಿನಮರಿಯನ್ನು.........
------------------

ಕಥೆ ಹೀಗೆ ಸಾಗುತ್ತದೆ. ಬಿಡುಗಡೆಯಾಗುವ ವೀಡಿಯೋದಲ್ಲಿ ಸಿಗುವ ಬೇರೆಲ್ಲರೂ ಇಗ್ನೋರ್ ಮಾಡಬಹುದಾದ ಪುಟ್ಟ ವಿವರಗಳನ್ನೂ ಸಹ ಇವರು ದಾಖಲಿಸಿಕೊಳ್ಳುತ್ತ ಆತನ ಬೆನ್ನು ಹತ್ತುತ್ತಾರೆ. ಗಮನಿಸಿ. ಇಲ್ಲಿ ಹುಡುಕಾಟ ಅಪರಾಧಿ-ಪೋಲಿಸ್ ಮಧ್ಯದ್ದಲ್ಲ. ಅಪರಾಧಿ-ಜನಸಾಮಾನ್ಯರ ಮಧ್ಯದ್ದು. ಅಪರಾಧಿ ಇವರಂದುಕೊಂಡಷ್ಟೇ ಹಿಂಸಾತ್ಮಕ ಮನಸ್ಥಿತಿಯವನಲ್ಲ, ಅದಕ್ಕಿಂತಲೂ ಜಾಸ್ತಿ.

ಇವರು ಇವರಿಗೆ ತಿಳಿದ ಇಂಟರ್ನೆಟ್ಟಿನ ದಾರಿಗಳ ಮೂಲಕ ಅವನನ್ನು ಹುಡುಕುತ್ತಿದ್ದರೆ, ಆತ ಅವನಿಗೆ ತಿಳಿದ ರೀತಿಯಲ್ಲಿ ಇವರನ್ನು ದಾರಿ ತಪ್ಪಿಸುತ್ತಿರುತ್ತಾನೆ. ಅದು ಏನಾಗುತ್ತದೆ ಅನ್ನುವುದೇ ಕಥೆ.

ಕ್ಷಮಿಸಿ ಇದು ಕಥೆಯಲ್ಲ, ನಿಜವಾಗಿ ನಡೆದದ್ದು. ಡಾಕ್ಯುಮೆಂಟರಿ ಆದರೂ ಸಿನಿಮಾ ನೋಡಿದಷ್ಟೇ ಕುತೂಹಲಕಾರಿಯಾಗಿದೆ. ವಿವರಗಳನ್ನು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ರೀತಿಯಲ್ಲಿಯೇ ಕೊಂಚಕೊಂಚವೇ ಅನಾವರಣಗೊಳಿಸುತ್ತ ಸಾಗುತ್ತಾರೆ. ಕೆನಡಾದಲ್ಲಿ 2012 ರಲ್ಲಿ ಲೂಕಾ ಮ್ಯಾಗ್ನೋಟ್ಟಾ ಅನ್ನುವ ಅಪರಾಧಿಯ ಸುತ್ತ ನಡೆದ ನೈಜ ಘಟನೆಗಳನ್ನೇ ಈ ಮೂರು ಕಂತುಗಳ ಡಾಕ್ಯುಮೆಂಟರಿ ಸರಣಿಯನ್ನಾಗಿ ಮಾಡಲಾಗಿದೆ. ಇಂಟರ್ನೆಟ್ ಪ್ರಪಂಚದಲ್ಲಿ ಈಗಾಗಲೇ ಅನುಭವವಿರುವವರಿಗೆ ಇದು ಸಕ್ಕತ್ ಮಜಾ ಕೊಡುತ್ತದೆ. ಅಪರಾಧಿಗಳನ್ನು ಹುಡುಕಿ ಹೊರಟಾಗ ಪುಟ್ಟ ಪುಟ್ಟ ವಿವರಗಳು ಅದೆಷ್ಟು ಮುಖ್ಯವಾಗಿರುತ್ತವೆ ಅನ್ನುವುದು ಈ ಸರಣಿ ನೋಡುವಾಗ ಅರಿವಾಗುತ್ತದೆ.

ಹಾಂ..... 2019ರಲ್ಲಿ Netflixನಲ್ಲಿ ಜನರು ಅತೀ ಹೆಚ್ಚು ವೀಕ್ಷಿಸಿದ ಐದು ಡಾಕ್ಯುಮೆಂಟರಿಗಳಲ್ಲಿ ಇದೂ ಒಂದು ಎಂಬ ಹೆಗ್ಗಳಿಕೆ ಪಡೆದಿದೆ.

Netflix ನಲ್ಲಿದೆ. ಅಸಕ್ತಿಯಿದ್ದರೆ ಮರೆಯದೆ ನೋಡಿ!

-Santhosh Kumar LM
18-Jul-2021

Thursday, May 13, 2021

Inspector ವಿಕ್ರಂ (2021, Kannada)





ಇತ್ತೀಚೆಗಿನ ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ಸಿನಿಮಾದೊಳಗೆ ಕಾಣಿಸಿಕೊಳ್ಳುತ್ತಿರುವ ರೀತಿ ಇಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಮಾಸ್ ಸಿನಿಮಾಗಳಿಗೆ ಹೇಳಿ ಮಾಡಿಸಿದ ರೀತಿ ಪ್ರಜ್ವಲ್ ಬೆಳೆಯುತ್ತಿದ್ದಾರೆ ಅನ್ನುವುದರಲ್ಲಿ ಸಂದೇಹವಿಲ್ಲ. ಕಳೆದ ವರ್ಷ ಬಂದಿದ್ದ "ಜಂಟಲ್‍ಮ್ಯಾನ್" ಸಿನಿಮಾದಲ್ಲೂ ಇಷ್ಟವಾಗಿದ್ದರು.


"Inspector ವಿಕ್ರಂ" ಸಿನಿಮಾದಲ್ಲಿ ಇಡೀ ಸಿನಿಮಾ ಹಾಸ್ಯ ಮತ್ತು Action Sequenceಗಳಿಂದ ತುಂಬಿಕೊಂಡಿತ್ತು. ಆದರೆ ಹಾಸ್ಯವಿರುವಾಗ ಕಥೆ ಮುಂದಕ್ಕೆ ಹೋಗುವುದೇ ಇಲ್ಲ. ಮತ್ತು ಉಳಿದ ಜಾಗದಲ್ಲಿ ಕಥೆ ಹೇಳಲು ಪ್ರಯತ್ನಿಸಲಾಗಿದೆ. ನನ್ನ ಅನಿಸಿಕೆಯ ಪ್ರಕಾರ ಸಿನಿಮಾದ ಆರಂಭದಲ್ಲೇ ಖಳನಾಯಕನನ್ನು ತೋರಿಸುವ ಬದಲು ಕಡೆಯಲ್ಲಿ ತೋರಿಸಿ, ಅದರಂತೆ ಕಥೆಯನ್ನು ಬದಲಾಯಿಸಿಕೊಂಡಿದ್ದರೆ, ಸಸ್ಪೆನ್ಸ್ ಥ್ರಿಲ್ಲರ್ ಕಥಾಶೈಲಿಯಲ್ಲಿ ಸಿನಿಮಾ ಇನ್ನೂ Crisp ಆಗುತ್ತಿತ್ತೇನೋ! ಮೊದಲೇ ನಮಗೆ ಖಳನಾಯಕ ಯಾರು ಅಂತ ಗೊತ್ತಾಗುವುದರಿಂದ ಮತ್ತು ಮಧ್ಯೆ ಬರುವ ಹಾಸ್ಯದ ದೃಶ್ಯಗಳು ಮೂಲ ಎಳೆಯ ಗಂಭೀರತೆಯನ್ನು ಹಾಳುಮಾಡುವುದರಿಂದ ಒಟ್ಟಾರೆಯಾಗಿ ಏನೋ ಮಿಸ್ ಆಗಿದೆ ಅನ್ನಿಸಿತು. ಹೊಡೆದಾಟದ ದೃಶ್ಯಗಳು, ಹಿನ್ನೆಲೆ ಸಂಗೀತ, ಸಂಭಾಷಣೆ ಚೆನ್ನಾಗಿದ್ದವು!


ಭಾವನಾ ತುಂಬಾ ಚುರುಕಾಗಿ ನಟಿಸಿದ್ದಾರೆ. ಬೇರೆ ಭಾಷೆಯವರೆಂದು ಹೇಳಲು ಕಷ್ಟ. ಡಿ'ಬಾಸ್ ದರ್ಶನ್ ರವರ Cameo appearance ಸಹಜವಾಗಿ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ತುಂಬಾ ಇಷ್ಟವಾಗಿದ್ದು ಖಳನಾಯಕನ ಪಾತ್ರದಲ್ಲಿ ಬಂದ ರಘು ಮುಖರ್ಜಿ (Raghu Mukherjee) ತಮ್ಮ ಧ್ವನಿ ಮತ್ತು ಗಂಭೀರ ಲುಕ್‍ನಲ್ಲಿ ಸಕತ್ತಾಗಿ ಕಾಣುತ್ತಾರೆ. ಅವರು ಪಾತ್ರ ನಿರ್ವಹಿಸಿದ ರೀತಿ ಸಿನಿಮಾಗೊಂದು ಪ್ಲಸ್ ಪಾಯಿಂಟ್. ಖಂಡಿತ ನಮ್ಮ ಚಿತ್ರರಂಗ ಅವರಿಗೆ ಒಳ್ಳೆಯ ಪಾತ್ರಗಳನ್ನು ಕೊಟ್ಟು ಬಳಸಿಕೊಳ್ಳಲಿ.


-Santhosh Kumar LM
13-May-2021

Sunday, April 11, 2021

ಕರ್ಣನ್ (ತಮಿಳು, 2021)

 


ಕರ್ಣನ್ (ತಮಿಳು, 2021)

ಮಾರಿ ಸೆಲ್ವರಾಜ್ ಅನ್ನುವ ನಿರ್ದೇಶಕನ "ಪರಿಯೇರುಮ್ ಪೆರುಮಾಳ್" ಸಿನಿಮಾವನ್ನು ಈ ಹಿಂದೆ ನೋಡಿದ್ದೆವು. ಮತ್ತೊಮ್ಮೆ ಅದೇ ನಿರ್ದೇಶಕ ತನ್ನ ಸಿನಿಮಾಗಳ ವ್ಯಾಪ್ತಿ ಮನರಂಜನೆಯಿಂದಾಚೆಗೂ ಬಹು ವಿಸ್ತಾರವಾದದ್ದು ಅನ್ನುವ ಸಂದೇಶವನ್ನು "ಕರ್ಣನ್" ಸಿನಿಮಾದ ಮೂಲಕ ಸ್ಪಷ್ಟಪಡಿಸುತ್ತಾರೆ.

ಸಿನಿಮಾದ ಮಧ್ಯೆ ಕಥೆಗೆ ಪೂರಕವಾದಂತಹ ರೂಪಕಗಳನ್ನು ತೋರಿಸಿ ಕೇವಲ ಸಿನಿಮಾ ಪಂಡಿತರಿಂದಷ್ಟೇ ಅವುಗಳನ್ನು ಗುರುತಿಸಲ್ಪಡುವುದು ಮಾರಿ ಸೆಲ್ವರಾಜ್'ಗೆ ಬೇಕಿಲ್ಲ. ಆತನಿಗೆ ತನ್ನ ರೂಪಕಗಳು ಸಾಮಾನ್ಯ ಪ್ರೇಕ್ಷಕನಿಗೂ ಅರ್ಥವಾಗಬೇಕು. ಹಾಗಾದಾಗಲಷ್ಟೇ ಜನಸಾಮಾನ್ಯರ ಮಧ್ಯದಲ್ಲೊಂದು ವಿಚಾರವನ್ನು ಹುಟ್ಟಿಹಾಕಲು ಸಾಧ್ಯ ಎಂಬ ಸ್ಪಷ್ಟತೆಯಿದೆ. "ಪರಿಯೇರುಮ್ ಪೆರುಮಾಳ್" ಸಿನಿಮಾದಲ್ಲಿ ಹಗೆ ಸಾಧಿಸಲು ನಾಯಕನ ಪ್ರೀತಿಯ ಕಪ್ಪು ಬಣ್ಣದ ನಾಯಿಯೊಂದನ್ನು ರೈಲಿನ ಹಳಿಗಳಿಗೆ ಕಟ್ಟಿ ಹಾಕಿ ಬಲಿ ತೆಗೆದುಕೊಳ್ಳುವಾಗ ಪ್ರೇಕ್ಷಕನಿಗೆ ಅಲ್ಲಿ ನಾಯಿಯಷ್ಟೇ ಕಾಣುವುದಿಲ್ಲ. ಆ ಕಪ್ಪು ನಾಯಿ ಒಂದು ಸಮುದಾಯವನ್ನೇ ಪ್ರತಿನಿಧಿಸುತ್ತದೆ.

ಈ ಸಿನಿಮಾದಲ್ಲೂ ಅಷ್ಟೇ. ಪೊಲೀಸ್ ಸ್ಟೇಷನ್ನಿನೊಳಗೆ ಚಿಟ್ಟೆಯೊಂದು ಹಾರುವಾಗಿನ ಹರ್ಷವನ್ನು, ತಕ್ಷಣವೇ ಆ ಮುಗ್ಧರು ಪೊಲೀಸರ ಲಾಠಿಯೇಟಿಗೆ ಚೀರಾಡುವಾಗ ಅದೇ ಚಿಟ್ಟೆ ಮೂಲೆಯಲ್ಲಿ ರೆಕ್ಕೆ ಬಡಿಯುತ್ತಲೇ ಒದ್ದಾಡುವುದನ್ನು ಅರ್ಥೈಸಿಕೊಳ್ಳಲು ನಾವು ಏನೇನನ್ನೋ ಕಲಿತಿರಬೇಕಿಲ್ಲ. ಕುದುರೆಯಷ್ಟು ವೇಗವಿಲ್ಲದಿದ್ದರೂ ಅದರಂತೆ ಕತ್ತೆಯೂ ಓಡಬಲ್ಲುದು. ಆ ಸಾಮರ್ಥ್ಯವಿದ್ದರೂ ಹದ್ದು ಮೀರಬಾರದೆಂಬ ಕಾರಣಕ್ಕೆ ಕತ್ತೆಯ ಕಾಲುಗಳಿಗೆ ಹಗ್ಗ ಬಿಗಿಯಲಾಗಿದೆ. ಆ ಹಗ್ಗ ಬಿಚ್ಚಿದ ತಕ್ಷಣ ಅದು ಕುದುರೆಯಂತೆ ಓಡುತ್ತದೆ. ಇದು ಭೌತಿಕ ವಿಷಯಗಳಿಗಷ್ಟೇ ಸೀಮಿತವಾಗಬೇಕಿಲ್ಲ. ನಮ್ಮ ಮನಸ್ಸಿನ ಕಾಲುಗಳಿಗೂ ನಾವೇ ಹಗ್ಗ ಬಿಗಿದುಕೊಂಡಿದ್ದೇವೆ. ಬದಲಾವಣೆ ಬೇಕೆಂದರೆ ಮೊದಲು ನಾವೇ ಮೊದಲು ಆ ಹಗ್ಗವನ್ನು ಕಿತ್ತೊಗೆಯಬೇಕು.

ನಾವೂ ಅದೆಷ್ಟೋ ಸಮಸ್ಯೆಗಳನ್ನು "ಅದೇ ನಮ್ಮ ಹಕ್ಕು" ಅಂತ ಸ್ವೀಕರಿಸಿಬಿಟ್ಟಿದ್ದೇವೆ. ಅವುಗಳಿಗೆ ಪರಿಹಾರವಿದೆ ಎಂಬುದರ ಅರಿವೂ ನಮಗಿಲ್ಲ. ಅವುಗಳಿಂದ ಹೊರಬರುವ ಬಗೆಯಾದರೂ ಹೇಗೆ? ಸಿನಿಮಾದಲ್ಲಿ ಕರ್ಣನ್ ಅನ್ನುವ ನಾಯಕ ಮುಂದೆ ಬರುತ್ತಾನೆ. ಅಂತಹ ಪ್ರತಿ ವಾತಾವರಣದಲ್ಲಿ ಕರ್ಣನ್ ಹುಟ್ಟಿಕೊಳ್ಳಲು ಸಾಧ್ಯವೇ? ಆ ಸಣ್ಣ ಕಿಡಿಯನ್ನು ಹುಟ್ಟುಹಾಕುವ ಪ್ರಯತ್ನವನ್ನು ಕರ್ಣನ್ ಮಾಡುತ್ತದೆ. ಇದು ತಮಿಳುನಾಡಿನ ಕೊಡಿಯಾಂಗುಲಂ ನೈಜ ಕಥೆಯನ್ನೇ ಆಧರಿಸಿ ತಯಾರಿಸಿದ ಸಿನಿಮಾ. ಆ ಹಿನ್ನೆಲೆಯನ್ನುಅರ್ಥ ಮಾಡಿಕೊಂಡು ಸಿನಿಮಾ ನೋಡಿದರೆ ನಿಜಕ್ಕೂ ಖುಶಿಯಾಗುತ್ತದೆ.

-------------------------------
ಕೊಡಿಯಾಂಗುಲಂ ಘಟನೆಯ ಬಗೆಗಿನ ಒಂದು ಪುಟ್ಟ ಬರಹ ಓದಿ.

ಆ ಘಟನೆಯಾದ ನಂತರ ಅಲ್ಲಿಗೆ ಭೇಟಿ ನೀಡಿದ ಪೊಲೀಸ್ ಮಹಾನಿರ್ದೇಶಕರಾದ ವಿ.ವೈಕುಂಠ ಅನ್ನುವವರೊಡನೆ ನಡೆದ ಸಂದರ್ಶನದಲ್ಲಿ ಅವರು ಹೇಳಿದ ಮಾತುಗಳು ಇಂತಿವೆ:

"ಅಂದು ಕೊಡಿಯಾಂಗುಲಂ ಗ್ರಾಮಕ್ಕೆ ಭೇಟಿ ನೀಡಿದಾಗ ನಾ ನೋಡಿದ್ದು ಹೃದಯ ವಿದ್ರಾವಕವಾಗಿತ್ತು. ಯಾರೋ ಗ್ರಾಮಸ್ಥರು ತಮ್ಮ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತಿದಾಳಿ ನಡೆಸಲು ಎಂಬ ನೆಪದಲ್ಲಿ ಪೊಲೀಸರು ಅಲ್ಲಿಗೆ ಹೋಗಿದ್ದರು. ವರದಿಯ ಪ್ರಕಾರ ಆ ವಲಯದ ಮೇಲ್ಜಾತಿಯೊಬ್ಬನ ಕೊಲೆಯ ವಿಷಯದಲ್ಲಿ ಆರೋಪಿಯನ್ನು ಬಂಧಿಸಲು ಅಲ್ಲಿಗೆ ಹೋಗಲಾಗಿತ್ತು. ಬುದ್ಧಿಹೀನರಾಗಿ ಹಿಂಸೆಗಿಳಿದ ಪೊಲೀಸರು ಹೆಂಗಸರು, ವೃದ್ಧರು, ಮಕ್ಕಳೆನ್ನದೆ ಅವರ ಮೇಲೆರಗಿದ್ದರು. ಮನೆಗಳೊಳಗೆ ನುಗ್ಗಿ ದಾಂಧಲೆ ಮಾಡಿದರು. ಇಟ್ಟಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದರು. ಟಿವಿಗಳನ್ನು ಒಡೆದು ಹಾಕಿದರು. ಅಕ್ಕಿ ಚೀಲಗಳನ್ನು ಹರಿದು ಹಾಕಿ ರಸ್ತೆಗೆ ಸುರಿದರು. ಇನ್ನೂ ಅಮಾನವೀಯ ಅಂದರೆ ಜನರು ಕುಡಿಯುವ ನೀರಿಗಾಗಿ ಅವಲಂಬಿಸಿದ್ದ ಬಾವಿಗೆ ಡೀಸೆಲ್ ಸುರಿದರು. ಬೀರುಗಳಲ್ಲಿದ್ದ ಬಟ್ಟೆಗಳನ್ನು ಹೊರ ಚೆಲ್ಲಿದರು. ಕೈಗೆ ಸಿಕ್ಕ ವಿದ್ಯಾರ್ಥಿಗಳ ಯೂನಿವರ್ಸಿಟಿ ಡಿಗ್ರೀ ಸರ್ಟಿಫಿಕೇಟುಗಳನ್ನು ಅವರ ಕಣ್ಣೆದುರೇ ಹರಿದು ಬಿಸಾಡಿದರು. ನಾ ಅಲ್ಲಿಗೆ ಹೋದಾಗ ಅಲ್ಲಿನ ಜನರು ಅತ್ತು ಗೋಳಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡಾಗ ನಾ ನಡುಗಿ ಹೋದೆ. ನನ್ನ ಮೂವತ್ತು ವರ್ಷಗಳ ಪೊಲೀಸ್ ಜೀವನದಲ್ಲಿ ನನ್ನ ಇಲ್ಲಾಖೆಯ ಪೊಲೀಸರಿಂದಲೇ ನಡೆದ ಇಂಥ ಅಮಾನವೀಯ ಕೃತ್ಯವನ್ನು ಎಂದೂ ಕಂಡಿರಲಿಲ್ಲ. ಪ್ರತಿ ಗ್ರಾಮಸ್ಥನೂ ತಾನಾಗಿಯೇ ನಿಂತು ಅಲ್ಲಿ ನಡೆದ ಪೊಲೀಸ್ ದೌರ್ಜನ್ಯವನ್ನು ಹೇಳಿದಾಗ ನನಗೆ ನಂಬದೇ ವಿಧಿಯಿರಲಿಲ್ಲ. ಆದರೂ ನಾನು ನಡೆದ ಸತ್ಯವನ್ನು ಮನವರಿಕೆ ಮಾಡಿಕೊಳ್ಳಬೇಕಿತ್ತು. ಹಾಗಾಗಿ ಸಂಬಂಧಪಟ್ಟ ಪೊಲೀಸ್ ಅಧೀಕ್ಷಕರನ್ನು (superintendent of police) ಪಕ್ಕಕ್ಕೆ ಕರೆದುಕೊಂಡು ಹೋಗಿ ಅದೇ ಗ್ರಾಮದ ಮರವೊಂದರ ನೆರಳಲ್ಲಿ ನಿಜವಾಗಿ ನಡೆದ ವಿಷಯವೇನೆಂದು ಕೇಳಿದೆ. ಪೊಲೀಸ್ ಉಪನಿರ್ದೇಶಕರ ಸಮ್ಮುಖದಲ್ಲಿಯೇ S.P. ಯವರು ಹಾಗೆ ನಡೆದದ್ದು ಸತ್ಯ ಎಂದು ಎಲ್ಲವನ್ನೂ ಒಪ್ಪಿಕೊಂಡರು"

-------------------------------

ಅಸುರನ್, ಪರಿಯೇರುಮ್ ಪೆರುಮಾಳ್ ಸಿನಿಮಾಗಳನ್ನು ಈ ಸಿನಿಮಾದೊಂದಿಗೆ ಹೋಲಿಸುವ ಅಗತ್ಯವಿಲ್ಲ. ಏಕೆಂದರೆ ಈ ಎರಡೂ ಸಿನಿಮಾಗಳನ್ನು ನೋಡುವಾಗಿನ ಮನಸ್ಥಿತಿ ಸಂಪೂರ್ಣ ಭಿನ್ನವಾಗಿರುತ್ತದೆ. ಒಂದಷ್ಟು ಕಥೆ ಹೇಳುವ ಬಗೆಗಿನ ಋಣಾತ್ಮಕ ವಿಷಯಗಳನ್ನು ಇಲ್ಲಿ ಚರ್ಚಿಸಬಹುದು. ಆದರೆ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಿಸಿದ ಸಿನಿಮಾವಾದ್ದರಿಂದ ಅವೆಲ್ಲವೂ ಗೌಣವಾಗುತ್ತವೆ.

ಈ ಸಿನಿಮಾದಲ್ಲಿ ತೋರಿಸುವ ಸಮಸ್ಯೆ ಈಗಿಲ್ಲ ಅಂತ ಒಬ್ಬರ ವಿಮರ್ಶೆ ನೋಡಿ ನಗು ಬಂತು. ಇವತ್ತಿಗೂ ನಮ್ಮ ರಾಜ್ಯದ ಕೆಲವು ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನುವಂತೆ ಅಲ್ಲಿನ ಜನ ಇನ್ನಷ್ಟು ಸಮಸ್ಯೆಗಳ ನಡುವೆ ಬದುಕಿದ್ದಾರೆ. ಸಮಸ್ಯೆಯ ಆಳ ಅರ್ಥವಾಗುವುದು ಅದರೊಳಗಿದ್ದವರಿಗೆ ಅಥವ ಅದನ್ನು ಕಣ್ಣಾರೆ ಕಂಡವರಿಗಷ್ಟೇ.

ಬೇರೆ ಸಿನಿಮಾಗಳಂತೆ ಇಲ್ಲಿ ದೃಶ್ಯಗಳು ರಪ್ಪನೆ ಬಂದು ಮುಗಿದು ಹೋಗುವುದಿಲ್ಲ. ಮಾರಿ ಸೆಲ್ವರಾಜ್ ಸಿನಿಮಾ ಮಾದರಿಯೇ ಇದು ಅನ್ನುವಷ್ಟರ ಮಟ್ಟಿಗೆ ವಿವರವಾಗಿ, ಸಾವಧಾನವಾಗಿ ಕಥೆ ಹೇಳುವ ಶೈಲಿಯನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಬಹುಶಃ ಗೌತಮ್ ಮೆನನ್, ಸೆಲ್ವರಾಘವನ್, ವೆಟ್ರಿಮಾರನ್, ಪ ರಂಜಿತ್, ಮಿಸ್ಕಿನ್, ಮಣಿರತ್ನಂ ಇತ್ಯಾದಿ ನಿರ್ದೇಶಕರಂತೆಯೇ ಇನ್ನೊಂದೆರಡು ಸಿನಿಮಾಗಳ ಬಳಿಕ ಅವರ ಹೆಸರಿಲ್ಲದಿದ್ದರೂ ಸಿನಿಮಾದ ನಿರ್ದೇಶಕ ಇವರೇ ಅಂತ ಗುರುತಿಸುವಷ್ಟರ ಮಟ್ಟಿಗೆ ಅವರ ಶೈಲಿ ನಮಗೆ ಕರಗತವಾಗುತ್ತಿದೆ. ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಪಾತ್ರಧಾರಿಗಳ ನಟನೆ ಎಲ್ಲವೂ ಹೊಂದಿಕೊಂಡಿವೆ. ವಿಭಿನ್ನ ಸಿನಿಮಾಗಳನ್ನು ಇಷ್ಟಪಡುವವರು ಮಿಸ್ ಮಾಡದೇ ನೋಡಬೇಕಾದ ಸಿನಿಮಾ ಇದು. ನೋಡಿದ ಮೇಲೂ ಅದರ ಬಗ್ಗೆ ಯೋಚಿಸುವಂತೆ ಮಾಡುತ್ತದೆ.

-ಸಂತೋಷ್ ಕುಮಾರ್ ಎಲ್.ಎಂ.

#santhuLm
11-Apr-2021

Wednesday, April 7, 2021

ಮಂಡೇಲಾ (ತಮಿಳು, ೨೦೨೧)



ಮಂಡೇಲಾ (ತಮಿಳು, ೨೦೨೧)





ಸಿನಿಮಾ ಅನ್ನೋದು ಸಂದೇಶವೊಂದನ್ನು ಕೊಡಲೇಬೇಕಾ? ಕೊಡುತ್ತೇವೆ ಅಂದುಕೊಂಡು ಬರುವ ಸಿನಿಮಾಗಳು ಬಹುತೇಕ ಅದರತ್ತ ಮಾತ್ರ ಗಮನ ಹರಿಸಿ ಮಾಮೂಲಿ ಸಿನಿಮಾ ಕೊಡಬಹುದಾದ ಅನುಭವದಿಂದ ನಮ್ಮನ್ನು ವಂಚಿತರನ್ನಾಗಿ ಮಾಡುತ್ತವೆ. ಸಿನಿಮಾ ಸಿನಿಮಾವಾಗಿಯೂ ಗೆಲ್ಲಬೇಕು. ಜೊತೆಗೆ ಅದು ಕೊಡಮಾಡುವ ಸಂದೇಶವೂ ಪರಿಣಾಮಕಾರಿಯಾಗಿರಬೇಕು.


ಇಷ್ಟೆಲ್ಲ ಹೇಳಿದ ಮೇಲೆ ನಾನೊಂದು ಗಂಭೀರ ಸಿನಿಮಾದ ಬಗ್ಗೆ ಮಾತನಾಡುತ್ತೇನೆ ಅಂದುಕೊಂಡರೆ ಅದು ತಪ್ಪು. 2016ರಲ್ಲಿ ಜೋಕರ್ ಅನ್ನುವ ಸಾಮಾಜಿಕ ಸಂದೇಶವನ್ನು ಸಾರುವ ತಮಿಳು ಸಿನಿಮಾವೊಂದು ಬಿಡುಗಡೆಯಾಗಿ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ "ಮಂಡೇಲಾ" ಅನ್ನುವ ಇನ್ನೊಂದು ಚಿತ್ರ ಅದಕ್ಕಿಂತಲೂ ಚೆನ್ನಾಗಿ ಮೂಡಿ ಬಂದಿದೆ.


ಇಡೀ ಚಿತ್ರದ ಹೈಲೈಟ್ ಅದರ ಕಥೆಯಷ್ಟೇ. ಒಂದು ಗ್ರಾಮಪಂಚಾಯಿತಿ ಚುನಾವಣೆಯ ಪುಟ್ಟ ಎಳೆಯೊಂದನ್ನು ಇಟ್ಟುಕೊಂಡೇ ಇಡೀ ಸಿನಿಮಾದ ಎಲ್ಲ ದೃಶ್ಯಗಳನ್ನು ಹೆಣೆಯಲಾಗಿದೆ. ಎಲ್ಲಿಯೂ ಯಾವುದೇ ವಿಷಯ ಹೆಚ್ಚು-ಕಡಿಮೆ ಅನ್ನಿಸುವುದಿಲ್ಲ. ಸಿನಿಮಾದ ಕಥಾನಾಯಕ ಒಬ್ಬ ಕ್ಷೌರಿಕ. ಆ ಪಾತ್ರದಲ್ಲಿ 'ಯೋಗಿ ಬಾಬು" ಅನ್ನುವ ಹಾಸ್ಯ ನಟ ಎಲ್ಲರೂ ನಾಚುವಂತೆ ಅಭಿನಯಿಸಿದ್ದಾರೆ.


ಒಂದೇ ಚಿತ್ರದಲ್ಲಿ ವೋಟು ರಾಜಕಾರಣ, ಮತದಾನದ ಬಗೆಗಿನ ಅರಿವು, ಒಂದು ಮತದ ಮೌಲ್ಯ, ಪಕ್ಷಗಳ ಓಲೈಸುವಿಕೆ, ಭ್ರಷ್ಟಾಚಾರ, ಜಾತೀಯತೆ, ದೇಶದ ನಾಗರಿಕನೊಬ್ಬನಿಗಿರುವ ಅಧಿಕಾರ ಇತ್ಯಾದಿ ವಿಷಯಗಳನ್ನು ಕೊಂಚವೂ ಬೇಸರವಾಗದಂತೆ ಮನಮುಟ್ಟುವ ಹಾಗೆ ಹೇಳಿದ್ದಾರೆ. ಆದರೆ ಇವೆಲ್ಲ ವಿಷಯಗಳನ್ನು ನಮಗೆ ಬೋಧಿಸಿದಂತೆ ಎಲ್ಲಿಯೂ ಅನ್ನಿಸುವುದಿಲ್ಲ. ಏಕೆಂದರೆ ಕಥೆಯಲ್ಲಿಯೂ ಈ ವಿಷಯಗಳನ್ನು ನೇರವಾಗಿ ಚರ್ಚಿಸುವುದಿಲ್ಲ. ಆದರೆ ನೋಡುಗನ ಮನಸ್ಸಿನಲ್ಲಿ ಮಾತ್ರ ಈ ವಿಷಯಗಳು ಮನದಟ್ಟಾಗುತ್ತ ಸಾಗುತ್ತದೆ.


ಒಂದು ದೃಶ್ಯದಲ್ಲಿ ಅಂಚೆ ಕಛೇರಿಯಲ್ಲಿ ಖಾತೆಯೊಂದನ್ನು ತೆರೆಯೋಣ ಅಂತ ಹೋಗುವ ನಾಯಕನಿಗೆ ಅದಕ್ಕೆ ಆಧಾರ್ ಕಾರ್ಡ್ ಕಡ್ಡಾಯ ಅಂತ ಅರಿವಾಗುತ್ತದೆ. ನಾಯಕನ ಜೊತೆಗಿದ್ದ ಹುಡುಗ ಕೇಳುತ್ತಾನೆ. "ಆಧಾರ್ ಯಾಕೆ ಬೇಕು" ಅಂತ. ಅದಕ್ಕೆ "ಇಲ್ಲದಿದ್ದರೆ ಇವನು ನಮ್ಮ ದೇಶದವನೇ ಅಂತ ಹೇಳೋದು ಹೇಗೆ?" ಅಂತ ಪ್ರತಿಕ್ರಿಯೆ ಬರುತ್ತೆ. ತಕ್ಷಣವೇ ಆ ಹುಡುಗ "ನೋಡಿದ್ರೆ ಗೊತ್ತಾಗಲ್ವಾ ಮೇಡಂ. ಈ ನನ್ಮಗನ ಮೂತಿ ಇನ್ನೇನು ಫಾರಿನ್ನೋನ ಥರಾ ಕಾಣುತ್ತಾ?" ಅಂತ. ಈ ಸಂಭಾಷಣೆಯನ್ನು ಸಿನಿಮಾದೊಳಗೆ ಹಾಸ್ಯದ ರೀತಿ ಹೇಳುವುದಿಲ್ಲ. ಗಂಭೀರವಾಗಿಯೇ ಇರುತ್ತದೆ. ಆದರೆ ನೋಡುವ ನಮಗೆ ಮಾತ್ರ ಫಕ್ಕನೆ ನಗು ತರಿಸುತ್ತದೆ. ಸಿನಿಮಾ ಮುಂದುವರಿಯುತ್ತದೆ. ಇದೇ ರೀತಿ ಸಿನಿಮಾ ಪೂರ್ತಿ ನಗಿಸುವ, ಕಣ್ಣೊದ್ದೆ ಮಾಡುವ, ಚಿಂತನೆಗೆ ದೂಡುವ ಅನೇಕ ದೃಶ್ಯಗಳಿವೆ. ಕೊಂಚವೂ ವಿಷಯಗಳು ಮೂಲ ಎಳೆಯನ್ನು ಬಿಟ್ಟು ಅತ್ತಿತ್ತ ಕದಲುವುದಿಲ್ಲ.


ನಾಯಕ ಯೋಗಿ ಬಾಬು ಮೂಲತಃ ಪುಟ್ಟ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಒಬ್ಬ ಹಾಸ್ಯ ನಟ. ಅವರೇನು ಸಿಕ್ಸ್ ಪ್ಯಾಕ್ ಮಾಡಿಲ್ಲ. ನೋಡಲು ಇತರ ಹೀರೋಗಳಂತಿಲ್ಲ. ಅಂಥ ನಟನನ್ನು ಸಿನಿಮಾ ಮುಗಿಯುವ ಹೊತ್ತಿಗೆ ಮನಸ್ಸು ಹೀರೋ ಅಂತ ಒಪ್ಪಿಕೊಳ್ಳುವ ಹಾಗೆ ಮಾಡುತ್ತದಲ್ಲ. ಅದು ನಿಜವಾದ ಸಿನಿಮಾ ಕಥೆಯ ತಾಕತ್ತು. ಅವರನ್ನು ಈ ಸಿನಿಮಾ ಮತ್ತೊಂದು ಮಜಲಿಗೆ ಕರೆದೊಯ್ಯುತ್ತದೆ ಅನ್ನುವುದರಲ್ಲಿ ಸಂದೇಹವಿಲ್ಲ. ಯೋಗಿಬಾಬು ಇರುವ ಹಾಗೆಯೇ ಅವರನ್ನು ಸಿನಿಮಾಗೆ ಸೂಕ್ತವಾಗಿ ಬಳಸಿಕೊಳ್ಳಲಾಗಿದೆ. ಸಿನಿಮಾದಲ್ಲಿರುವ ಮುಕ್ಕಾಲು ಭಾಗ ಪಾತ್ರಧಾರಿಗಳ ಅರಿಚಯವಿಲ್ಲ. ಆದರೆ ಸಿನಿಮಾ ನೋಡುವಾಗ ಎಲ್ಲೂ ಯಾರೂ ಅಪರಿಚಿತವೆನಿಸುವುದೇ ಇಲ್ಲ.


ಬಹುಶಃ ನಾಯಕರಿಗಾಗಿ ಕಥೆ ಬರೆಯುವ ಬದಲು ಕಥೆ ಬರೆದು ಸೂಕ್ತವಾದ ನಟರನ್ನು ಆಯ್ದುಕೊಂಡರೆ ಈ ಬಗೆಯ ಸಿನಿಮಾಗಳು ಹೊರಮೂಡುತ್ತವೆ ಅಂತ ಖಡಾಖಂಡಿತವಾಗಿ ಹೇಳಬಹುದು. ಸಿನಿಮಾ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುವವರು ಈ ಬಗೆಯ ಸಿನಿಮಾಗಳನ್ನು ಹೆಚ್ಚು ಹೆಚ್ಚು ನೋಡಬೇಕು. ಕಾಕತಾಳಿಯವೇನೋ ಎಂಬಂತೆ ತಮಿಳುನಾಡಿನ ವಿಧಾನಸಭಾ ಚುನಾವಣೆ ನಡೆಯುವ ಸಮಯದಲ್ಲೇ ಈ ಸಿನಿಮಾ ಬಿಡುಗಡೆಯಾಗಿದೆ. ನೆಟ್'ಫ್ಲಿಕ್ಸ್ ನಲ್ಲಿದೆ. ಮರೆಯದೆ ನೋಡಿ.


-Santhosh Kumar LM
07-Apr-2021

Friday, January 15, 2021

Master (Tamil, 2021)

 


Master (Tamil, 2021)

ಇಬ್ಬರು ಸಾಧಾರಣ ನಟರನ್ನು ಇಟ್ಟುಕೊಂಡು ಸಿನಿಮಾ ಮಾಡುವುದೆಂದರೆ ಅಷ್ಟೊಂದೇನೂ ಒತ್ತಡವಿರುವುದಿಲ್ಲ. ಕಥೆಗಾರ ಬರೀ ತನ್ನ ಸ್ಕ್ರಿಪ್ಟ್ ಮೇಲೆ ಗಮನ ಹರಿಸಿದರೆ ಸಾಕು! ಅಪ್ಪಿತಪ್ಪಿ ಆ ಇಬ್ಬರೂ ನಟರು ವೈಯಕ್ತಿಕವಾಗಿ ಒಬ್ಬೊಬ್ಬರೇ ಒಂದು ಸಿನಿಮಾವನ್ನು ಹಿಟ್ ಕೊಡಬಲ್ಲಷ್ಟು ಶಕ್ತರಾಗಿದ್ದರಂತೂ ಅವರಿಬ್ಬರನ್ನು ಹಾಕಿಕೊಂಡು ಸಿನಿಮಾ ತೆಗೆಯುವ ನಿರ್ದೇಶಕನಿಗೆ ಅದು ಖಂಡಿತವಾಗಿ "ಬಾಯಲ್ಲಿನ ಬಿಸಿತುಪ್ಪವೇ"!! ಅಭಿಮಾನಿಗಳಿಗೇನೋ ತಮ್ಮ ನೆಚ್ಚಿನ ನಟರನ್ನು ಒಟ್ಟೊಟ್ಟಿಗೆ ನೋಡಲು ಹಿಗ್ಗು. ಆದರೆ ಕಥೆ ಹೆಣೆಯುವವ ಮಾತ್ರ ತನ್ನೆಲ್ಲ ಬುದ್ಧಿಯನ್ನು ಓರೆಗೆ ಹಚ್ಚಬೇಕು. ಅದೊಂಥರ ಏನಾದರೂ ಮಾಡು, ಒಟ್ನಲ್ಲಿ ಒಂದು ಅದ್ಭುತ ಸಿನಿಮಾ ಕೊಡು ಅನ್ನೋ ಥರದ ಸವಾಲು. ಏಕೆಂದರೆ ಮೇಲ್ನೋಟಕ್ಕೆ ಸುಲಭದಂತೆ ಕಾಣುವ ಕೆಲಸ ಒಳಗೆ ಅತ್ಯಂತ ಕ್ಲಿಷ್ಟಕರವಾಗಿರುತ್ತೆ.

ಇಬ್ಬರ ಪರಿಚಯವೂ ಚೆನ್ನಾಗಿ ಮೂಡಿಬರಬೇಕು. ಇಬ್ಬರಿಗೂ ಪರದೆಯ ಮೇಲೆ ಸಮಯ ಕೊಡಬೇಕು. ಪ್ರೇಕ್ಷಕನಿಗೆ ಯಾರೊಬ್ಬರ ಗೈರು ತಟ್ಟದಂತೆ ಹೆಚ್ಚು ಅಂತರವಿಲ್ಲದೆ ಆ ಹೀರೋ ಆಗಾಗ ಕಾಣಿಸಿಕೊಳ್ಳುತ್ತಿರಬೇಕು. ಎಲ್ಲಕಿಂತ ಹೆಚ್ಚಾಗಿ ಇಬ್ಬರಲ್ಲಿ ಯಾರೂ ಕೂಡ ತಮ್ಮ ಪ್ರಾಮುಖ್ಯತೆ ಕಡಿಮೆಯಯ್ತು ಅನ್ನುವ ಹಾಗೆ ಭಾವಿಸದಂತೆ ಜಾಗರೂಕತೆ ವಹಿಸಬೇಕು! ನಟರು ಕೊಂಚ ಅಡ್ಜಸ್ಟ್ ಮಾಡಿಕೊಂಡರೂ ನಿರ್ದೇಶಕನಿಗೆ ಆ ನಟರ ಅಭಿಮಾನಿಗಳ ಭಯವಂತೂ ಇದ್ದೇ ಇರುತ್ತದೆ!

ಅಗಾಧ ಜನಪ್ರಿಯತೆ ಹೊಂದಿದ, ತಮ್ಮದೇ ಆದ ದೊಡ್ಡ ಅಭಿಮಾನಿವರ್ಗವನ್ನು ಹೊಂದಿರುವ ವಿಜಯ್ & ವಿಜಯ್ ಸೇತುಪತಿ ಅವರನ್ನು ಹಾಕಿಕೊಂಡು ತೆಗೆದ ಆ ಬಗೆಯ ಸಿನಿಮಾ "ಮಾಸ್ಟರ್" ಒಂದು ಮಾಸ್ಟರ್-ಪೀಸ್ ಆಗಬೇಕಿತ್ತು! ಅದು ಕಡೆಗೂ ಆಯ್ತಾ ಅನ್ನುವುದೇ ಪ್ರಶ್ನೆ! ಇಲ್ಲಿ ವಿಜಯ್ ನಾಯಕನಾದರೆ, ವಿಜಯ್ ಸೇತುಪತಿ ಖಳನಾಗಿ ಪಾತ್ರ ನಿರ್ವಹಿಸಿದ್ದಾರೆ. ಇವರೊಟ್ಟಿಗೆ ನಟ-ನಟಿಯರ ದಂಡೇ ಈ ಚಿತ್ರದಲ್ಲಿದೆ. ಆದರೆ ಅವರಲ್ಲಿ ಯಾರು ಪ್ರಮುಖರು ಅನ್ನಿಸುವಷ್ಟು ಎಲ್ಲೋ ಬರುತ್ತಾರೆ, ಎಲ್ಲೋ ಹೋಗಿಬಿಡುತ್ತಾರೆ. ಅದು ಈ ಚಿತ್ರದ ಒಂದು ಋಣಾತ್ಮಕ ಅಂಶ.

ವಿಜಯ್ ಸೇತುಪತಿ ಖಳನಾದರೂ ಆತ ಪ್ರತಿ ದೃಶ್ಯದಲ್ಲೂ ನಮ್ಮನ್ನು ನಗಿಸುತ್ತಲೇ ತನ್ನ ಕೆಲಸ ಮಾಡುತ್ತಿರುತ್ತಾನೆ. ಗಮನಿಸಿದರೆ, ನಮಗೆ ಗೊತ್ತಿಲ್ಲದೆಯೇ ನಾವು ಆತ ಮಾಡುವುದನ್ನು ಎಂಜಾಯ್ ಮಾಡುತ್ತೇವೆ! ಡಾನ್ ಚಿತ್ರಗಳಲ್ಲಿ ತನ್ನ ಮಣಿಸಲು ಬರುವ ಎಲ್ಲರನ್ನು ಕ್ಷಣಾರ್ಧದಲ್ಲಿ ಹಣ್ಣುಗಾಯಿ ಮಾಡುತ್ತ ತನ್ನ ಪ್ರಭುತ್ವ ಸಾಧಿಸಲು ತನ್ನದೇ ದಾರಿ ಹಿಡಿಯುವ ನಾಯಕರ ವರ್ತನೆಯನ್ನು ನಾವು ಖುಶಿಯಿಂದ ನೋಡಿದಂತೆಯೇ ಇಲ್ಲೂ ಸಹ ಎಂಜಾಯ್ ಮಾಡುತ್ತೇವೆ. ಈ ಕಾರಣದಿಂದಲೇ ನಮಗೆ ಆತ ಮಾಡುವುದು ತಪ್ಪು ಅನ್ನಿಸುವುದೇ ಇಲ್ಲ. ಈ ಸಂದರ್ಭದಲ್ಲಿಯೇ ಅತ್ತಲಿನ ನಾಯಕನ ಪರಿಚಯವೂ ನಮಗಾಗುತ್ತದೆ. ಇವರಿಬ್ಬರೂ ಸಂಧಿಸುವುದೇ ಇಲ್ಲವೇನೋ ಅನ್ನಿಸುವಷ್ಟರಲ್ಲಿ ನಿರ್ದೇಶಕ ಅಲ್ಲೊಂದು ತಿರುವು ನೀಡುತ್ತಾನೆ. ಆ ದೃಶ್ಯದಲ್ಲಿ ಭವಾನಿ (ವಿಜಯ್ ಸೇತುಪತಿ) ಮಾಡುವುದನ್ನು ನಾವೇ ಅಕ್ಷರಶಃ ದ್ವೇಷಿಸುತ್ತೇವೆ. ಅದೇ ಮೊದಲ ಬಾರಿಗೆ ಖಳನಾಯಕನ ಮೇಲೆ ನಮಗೆ ಬೇಸರ ಮೂಡುತ್ತದೆ. ಅಂದುಕೊಂಡಂತೆಯೇ ಅವನ ಅಂತ್ಯಕ್ಕೆ ನಾಯಕ ಭಾಷ್ಯ ಬರೆಯುತ್ತಾನೆ.

ದ್ವಿತೀಯಾರ್ಧ ಇನ್ನೇನೋ ಇರಬೇಕು ಅನ್ನಿಸುವಂತೆ ಕುತೂಹಲ ಹುಟ್ಟಿಸುತ್ತದಾದರೂ ಅಲ್ಲಿ ನಾಯಕನ ಸೇಡನ್ನು, ಕೋಪವನ್ನು ಸಂಭಾಳಿಸುವಲ್ಲಿ ನಿರ್ದೇಶಕ ಸೋತಿದ್ದಾರೆ. ಮತ್ತೊಮ್ಮೆ ಹೇಳುವುದಾದರೆ ಹಾವು-ಮುಂಗುಸಿಯಾಟದ ಹೊರತಾಗಿ ನಾಯಕನ ನಗುತ್ತಲೇ ಎಲ್ಲವನ್ನು ಎದುರಿಸುವ ಗುಣವನ್ನು ತೋರಿಸುತ್ತ ಮಧ್ಯೆ ಕಥೆಯನ್ನು ಸುಖಾಸುಮ್ಮನೆ ಎಳೆಯುತ್ತಾರೆ. ಎರಡೂ ಪಾತ್ರಗಳು ಒಟ್ಟಿಗೆ ಮುಖಾಮುಖಿಯಾದಾಗ ದೊಡ್ಡದೊಂದೇನೋ ಘಟಿಸಬೇಕಿತ್ತು. ಆದರೆ ಅಂಥದ್ದೇನೂ ನಡೆಯದೇ ಸಾಧಾರಣವಾಗಿಯೇ ಅಂತ್ಯವಾಗುತ್ತದೆ. ಇಲ್ಲಿಯೇ ಸಿನಿಮಾದ Duration ಜಾಸ್ತಿಯಾಗುತ್ತ ಸಾಗುತ್ತದೆ. ಅಂತ್ಯದಲ್ಲಿ ಖಳನಾಯಕನ ಅಂತ್ಯವಾದ ಮೇಲೂ ನಾಯಕನ ಕಥೆ ಹೇಳುವಿಕೆ ಮುಗಿಯುವುದಿಲ್ಲ! ಲಾರಿಗಳನ್ನು ಅಡ್ಡ ಹಾಕಿ ಹೊಡೆದಾಡುವ ನೀಳ ದೃಶ್ಯವೊಂದು ನಮ್ಮ ತಾಳ್ಮೆ ಪರೀಕ್ಷಿಸುತ್ತದೆ. ಬಹುಶಃ ಎರಡೂವರೆ ಗಂಟೆಯ ಗಡುವೊಂದನ್ನು ನಿರ್ದೇಶಕ ಹಾಕಿಕೊಂಡಿದ್ದರೆ ಕಥೆಯನ್ನು ಇನ್ನಷ್ಟು ಬಿಗಿಯಾಗಿಸಬಹುದಿತ್ತು.

ಒಂದೆಡೆ ಎಂಥ ದೃಶ್ಯವೇ ಆಗಲಿ, ಅದನ್ನು ತನ್ನದಾಗಿಸಿಕೊಳ್ಳುವ ವಿಜಯ್ ಸೇತುಪತಿ ಇದ್ದರೂ ತಾನಷ್ಟೇ ನಾಯಕನಲ್ಲ ಎಂಬಂತೆ ಎಲ್ಲರೊಂದಿಗೂ ತೆರೆಯನ್ನು ಹಂಚಿಕೊಳ್ಳುವ ವಿಜಯ್ ಇಷ್ಟವಾಗುತ್ತಾರೆ. ವಿಜಯ್ ಪಾತ್ರದ ಸೋಮಾರಿತನವನ್ನು, ಏಕೆ ಅವರನ್ನು ಕಂಡರೆ ವಿದ್ಯಾರ್ಥಿಗಳಿಗಿಷ್ಟ ಅನ್ನುವುದನ್ನು ತೋರಿಸಲೇ ಮೊದಲರ್ಧ ಭಾಗದ ಅರ್ಧದಷ್ಟು ಸಮಯ ವ್ಯಯಿಸಿದ್ದಾರೆ. ಆದರೆ ಅದು ಮನರಂಜನೆಯ ದೃಷ್ಟಿಯಿಂದ ವಿಜಯ್ ಅಭಿಮಾನಿಗಳಿಗೆ ಹಬ್ಬ. ಇದಷ್ಟೇ ಅಲ್ಲ. ಮೈ ನವಿರೇಳಿಸುವ ಹೊಡೆದಾಟದ ದೃಶ್ಯಗಳೊಂದಿಗೆ ವಿಜಯ್ ಅಭಿಮಾನಿಗಳಿಗಾಗಿಯೇ ಮೀಸಲೆಂಬಂತೆ ಅಲ್ಲಲ್ಲಿ ಬಗೆಬಗೆಯ ರುಚಿಕಟ್ಟಾದ ಅಂಶಗಳನ್ನು ಕಥೆಯಲ್ಲಿ ಮೀಸಲಿಟ್ಟಿದ್ದಾರೆ. ಇನ್ನೂ ವಿಜಯ್ ಚಿಕ್ಕ ಹುಡುಗರ ಹಾಗೆಯೇ ತೆರೆಯಲ್ಲಕಾಣಿಸಿಕೊಳ್ಳುವುದು ಮಾತ್ರ ಅಚ್ಚರಿಯ ಸಂಗತಿ.

ಸಿನಿಮಾ ಮುಗಿದಾಗ ಒಂದೊಳ್ಳೆಯ ಮನರಂಜನೆಯ ಸಿನಿಮಾವನ್ನು ನೋಡಿದೆ ಅನ್ನಿಸಿದರೂ ಕೆಲವೆಡೆ ಇನ್ನಷ್ಟು ಮುತುವರ್ಜಿವಹಿಸಿದ್ದರೆ ಈ ಸಿನಿಮಾ ಮತ್ತಷ್ಟು ಚೆನ್ನಾಗಿ ಮೂಡಿ ಬರುತ್ತಿತ್ತು ಅನ್ನುವುದಂತೂ ಸತ್ಯ.

ಕೊರೋನಾ ನಿರ್ಬಂಧನೆ ಸಡಿಲಿಸಿದ ತರುವಾಯ ದೊಡ್ಡ ತಾರಾಗಣದ ಸಿನಿಮಾಗಳು ಶುರುವಾಗದೆ ಜನರನ್ನು ಸೆಳೆಯಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ನೋಡಿದಾಗ "ಮಾಸ್ಟರ್" ಸಿನಿಮಾ ಒಳ್ಳೆಯ ಆರಂಭವನ್ನೇ ಸಿನಿರಂಗಕ್ಕೆ ನೀಡಿದೆ. ಅದು ಮುಂದುವರಿಯಲಿ.

-Santhosh Kumar LM
15-Jan-2021

Thursday, December 31, 2020

ಪಾವ ಕದೈಗಳ್ (ತಮಿಳು, 2020)








ಪಾವ ಕದೈಗಳ್ (ತಮಿಳು, 2020)

ನಾಲ್ಕು ಪುಟ್ಟ ಕಥೆಗಳನ್ನು ಹೊಂದಿರುವ ಈ ಸಿನಿಮಾ ನೆಟ್‍ಫ್ಲಿಕ್ಸ್'ನಲ್ಲಿದೆ. ಸೂಕ್ಷ್ಮ ವಿಷಯಗಳನ್ನು ಮನೋಜ್ಞವಾಗಿ ಹೇಳಲಾಗಿದೆ. ಎರಡನೆಯ ಕಥೆಯನ್ನು ಬಿಟ್ಟರೆ ಉಳಿದ ಮೂರೂ ಕಥೆಗಳು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ. ಒಂದು ಕಥೆ ಮುಗಿದ ಕೂಡಲೆ ಒಂದು ವಿರಾಮ ತೆಗೆದುಕೊಂಡು ಆ ಕಥೆಯ ಬಗ್ಗೆ ಯೋಚಿಸುವಂತೆ ಮಾಡುತ್ತವೆ. ಪ್ರತೀ ಕಥೆಯು ಮೂವತ್ತೈದು ನಿಮಿಷಗಳ ಆಸುಪಾಸಿನಲ್ಲಿವೆಯದರೂ ಬಹುಬೇಗನೆ ನಮಗೆ connect ಆಗುತ್ತವೆ. ಮತ್ತು ಮುಗಿಯುವುದರೊಳಗೆ ತಮ್ಮ ಕೆಲಸವನ್ನು ಮುಗಿಸಿರುತ್ತವೆ.

ಗೌತಮ್ ಮೆನನ್ ನಿರ್ದೇಶನದ ಜೊತೆಗೆ ಅವರ ಅಭಿನಯವೂ ಇಲ್ಲಿದೆ. ಮೂರು ಮಕ್ಕಳ ತಂದೆಯ ಪಾತ್ರವೊಂದರಲ್ಲಿ ತುಂಬಾ ಸಹಜವಾಗಿ ಕಾಣಿಸುತ್ತಾರೆ. ಅವರ ಎಂದಿನ ಸಿನಿಮಾಗಳಂತೆ ಇಲ್ಲೂ ಬಹುಮುಖ್ಯ ವಿಷಯವೊಂದನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ. ನಿಜಕ್ಕೂ ದೃಶ್ಯ ಮಾಧ್ಯಮದಲ್ಲೂ ಈ ಬಗೆಯ ವಿಚಾರಗಳನ್ನು ಸಶಕ್ತವಾಗಿ ಮಾತನಾಡಬಹುದೇ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಸಿಕ್ಕಿತು. ಬಹುಶಃ ದೌರ್ಜನ್ಯದ ಕಥೆಗಳಲ್ಲಿ ತಂದೆಯ ಮಗ್ಗುಲಿಂದ ಘಟನೆಯನ್ನು ನೋಡಿದ್ದು ಇದೇ ಮೊದಲು ಅನ್ನಿಸುತ್ತದೆ. ಕಥೆ ಹೇಳಿಬಿಡಲೇ ಎನಿಸುತ್ತದೆ. ಚಿಕ್ಕ ಕಥೆಯ ಎಳೆಯನ್ನೂ ಹೇಳಿ ನಿಮ್ಮ ರಸಾನುಭೂತಿ ಹಾಳುಗೆಡವಲು ನಾ ಸಿದ್ಧನಿಲ್ಲ. ಸಿನಿಮಾ ನೋಡಿ.

ಸುಧಾ ಕೊಂಗರ ಕೂಡ ಈಗಾಗಲೇ ಹೆಸರು ಮಾಡಿದ ನಿರ್ದೇಶಕರಿಗಿಂತ ತಾನೇನು ಕಡಿಮೆಯಿಲ್ಲ ಅನ್ನುವ ಮಟ್ಟಿಗೆ ಜಿದ್ದಿಗೆ ಬಿದ್ದು ಮೊದಲ ಕಥೆಯಲ್ಲೇ ಚಪ್ಪಾಳೆ ಗಿಟ್ಟಿಸುತ್ತಾರೆ. ಕಾಳಿದಾಸ್ ಜಯರಾಮ್ ಅನ್ನುವ ನಟನೊಬ್ಬ ನಿಮಿಷದಲ್ಲೇ ಕಣ್ಣೀರು ತರಿಸುತ್ತಾನೆ. ಒಂದೇ ಪುಟ್ಟ ಕಥೆಯೊಳಗೆ ಜಾತಿ, ಧರ್ಮ, ಪ್ರೀತಿ, ಸಲಿಂಗ ಪ್ರೇಮ, ಅದನ್ನು ಕೆಟ್ಟದಾಗಿ ಕಾಣುವ ಪ್ರಪಂಚ, ನಿರಾಕರಣೆ ಎಲ್ಲವನ್ನೂ ತೋರಿಸಿ ಅಲ್ಲಿಯೂ ನಮ್ಮನ್ನು ಯೋಚನೆಗೆ ಹಚ್ಚಿದ್ದು ನನಗೆ ಸಿಕ್ಕಾಪಟ್ಟೆ ಇಷ್ಟವಾಯಿತು. ಕಡೆಯ ಕಥೆಯಲ್ಲಿ ಮನುಷ್ಯನೊಳಗಿನ ಜಾತಿ ಪ್ರೇಮದಿಂದಾಗಿ ಹುಟ್ಟುವ ತಣ್ಣಗಿನ ಕ್ರೌರ್ಯವನ್ನು ಎಂದಿನಂತೆ ಚಿತ್ರಿಸಿರುವುದು ನಿರ್ದೇಶಕ ವೆಟ್ರಿಮಾರನ್.

ಒಟ್ಟಿನಲ್ಲಿ ಮೂರು ಕಥೆಗಳ ತೂಕದಿಂದಾಗಿ ಇಡೀ ಸಿನಿಮಾ ಇಷ್ಟವಾಯಿತು. ನೋಡಿರದಿದ್ದರೆ ನೋಡಿ. ನಿಮ್ಮೊಳಗೆ ಮೂಡುವ ಪ್ರಶ್ನೆಗಳನ್ನು ಪರಾಮರ್ಶಿಸಿ!

-Santhoshkumar LM
31-Dec-2020


Saturday, December 19, 2020

ಒಂದು ಶಿಕಾರಿಯ ಕಥೆ....(Kannada, 2020)

 



ಒಂದು ಶಿಕಾರಿಯ ಕಥೆ

Brilliant storyline! ಈ ಸಿನಿಮಾಗೆ "ಅರಿಷಡ್ವರ್ಗ" ಅಂತಲೂ ಹೆಸರಿಡಬಹುದಿತ್ತು. ಅಷ್ಟು ಮನುಷ್ಯನ ಅಂತರಂಗದ ತೊಳಲಾಟದ ಅನೇಕ ವಿಷಯಗಳನ್ನು ಸಮರ್ಥವಾಗಿ ಕಥೆಯನ್ನಾಗಿಸಿದ ಸಿನಿಮಾ. ಕೆಲವು ತಿರುವುಗಳನ್ನು ಊಹಿಸಬಹುದಾದರೂ ಒಂದು ಒಳ್ಳೆಯ ಸಿನಿಮಾಗೆ ಬೇಕಾಗುವಷ್ಟು ತಿರುವುಗಳನ್ನು ನಿರ್ದಿಷ್ಟ ಅಂತರದಲ್ಲಿ ಇಡಲಾಗಿದೆ. ಯಕ್ಷಗಾನವನ್ನು ಕಥೆಯ ಪ್ರಮುಖ ಭಾಗಕ್ಕೆ ಅಳವಡಿಸಿಕೊಂಡಿರುವುದು ಮೆಚ್ಚಬೇಕಾದ ವಿಷಯ. ನಮ್ಮ ನೆಲದ ಸಂಸ್ಕೃತಿಯ ವಿಷಯಗಳನ್ನು ಹೀಗೆ ಸಿನಿಮಾಗಳಲ್ಲಿ ಬಳಸಿಕೊಳ್ಳುವುದಕ್ಕಿಂದ ಹೆಚ್ಚಿನ ಖುಶಿ ಇನ್ನೇನಿದೆ? ಹಿಂಸೆ, ಅಹಿಂಸೆ, ಕೋಪ, ವೈಮನಸ್ಸು, ದುರಾಸೆ, ಮೋಹ, ನ್ಯಾಯ, ಅನ್ಯಾಯ, ನಂಬಿಕೆ, ಮೋಸ, ಪ್ರೀತಿ ಹೀಗೆ ಅದೆಷ್ಟು ವಿಷಯಗಳನ್ನು ವಿಭಿನ್ನ ಪಾತ್ರಗಳ ಮನಸ್ಥಿತಿಯಿಂದ ಹೇಳಲಾಗಿದೆ ಅನ್ನುವುದು ಈ ಸಿನಿಮಾದಲ್ಲಿ ಇಷ್ಟವಾದ ಅಂಶ. ಹಿನ್ನೆಲೆ ಸಂಗೀತವಂತೂ ಬೇರೆ ಬೇರೆ ಸಂದರ್ಭಕ್ಕೆ ಅನುಗುಣವಾಗಿ ಸಿನಿಮಾದುದ್ದಕ್ಕೂ ಖುಶಿ ಕೊಡುತ್ತದೆ. ಶಿಕಾರಿಯ ದೃಶ್ಯಗಳು, ಹರ್ಷನ ಒಂಟಿತನದ ದೃಶ್ಯಗಳು ಛಾಯಾಗ್ರಾಹಕನಿಗೆ ಸವಾಲೊಡ್ಡಿ ಒಳ್ಳೆಯ ಕೆಲಸ ತೆಗೆಸಿವೆ. ಉದಾಹರಣೆಗೆ ಉಮಾ ಒಲೆಯ ಮುಂದೆ ಕುಳಿತ ದೃಶ್ಯ, ಹರ್ಷ ಒಂಟಿಯಾಗಿ ಮಲಗಿದ್ದಾಗ ನೆರಳಲ್ಲಿ ತೋರಿಸುವ ಯಕ್ಷಗಾನದ ದೃಶ್ಯ, ಹುಲಿವೇಷಧಾರಿ ತೆಪ್ಪವನ್ನು ನಡೆಸುವ ದೃಶ್ಯ, ಹರ್ಷ ಚಿತ್ರಗಳನ್ನು ಗೋಡೆಯಲ್ಲಿ ಮೂಡಿಸುವಾಗಿನ ದೃಶ್ಯ ಎಲ್ಲವೂ ಮನಸ್ಸಿಗೆ ಮುದ ಕೊಡುತ್ತವೆ. ಪಾತ್ರಧಾರಿಗಳು ಸಹ ಉತ್ತಮ ಅಭಿನಯದಿಂದ ನಮ್ಮ ಮನಸ್ಸೆಳೆಯುತ್ತಾರೆ. ಒಬ್ಬರಿಗಿಂತ ಇನ್ನೊಬ್ಬರು ಅನ್ನುವಂತೆ ಎಲ್ಲ ಪಾತ್ರಗಳಿಗೂ ಇಲ್ಲಿ ತೂಕವಿದೆ. ಒಟ್ಟಾರೆ ಸಿನಿಮಾ ಒಂದು ಕಾದಂಬರಿ ಓದಿದಂತೆ ಭಾಸವಾಗುತ್ತದೆ.

ಸಿನಿಮಾದ ನಿರೂಪಣೆಯಲ್ಲಿ ಕೊಂಚ ವೇಗವಿರಬೇಕಿತ್ತು. ಕೆಲವು ಸನ್ನಿವೇಶಗಳನ್ನು Cinematic Libertyಯನ್ನು ಬಳಸಿಕೊಂಡೇ ಇನ್ನಷ್ಟು ಬಿಗಿಯಾಗಿ, ಮನಮುಟ್ಟುವಂತೆ ಹೇಳಬಹುದಿತ್ತು. ಸಂಭಾಷಣೆಯಲ್ಲಿ ಎಲ್ಲ ಪಾತ್ರಗಳ ಮಾತುಗಳಿಗೆ ಆ ಭಾಗದ ಸೊಗಡಿದೆಯಾದರೂ ಮೋಹನನ ಪಾತ್ರಕ್ಕೆ ಮಾತ್ರ ಅದರಿಂದ ಹೊರತಾಗಿದ್ದುದು ಕೊಂಚ ಇರಿಸು-ಮುರಿಸಾಗಲು ಕಾರಣವಾಯಿತು. ಹಾಡುಗಳಿವೆಯಾದರೂ ಮನಸ್ಸಿಗೆ ಅಷ್ಟು ನಾಟುವುದಿಲ್ಲ. ಸಚಿನ್ ಸಾಹಿತ್ಯದ ಜವಾಬ್ದಾರಿಯನ್ನು ಬೇರೆಯವರಿಗೆ ಒಪ್ಪಿಸಬೇಕಿತ್ತು. ಹಾಡುಗಳಿಗೆ ಇನ್ನಷ್ಟು ಒತ್ತು ನೀಡಿ ಅವೇ ಸಿನಿಮಾಗೆ ಇನ್ನಷ್ಟು ತೂಕ ನೀಡಿದ್ದರೆ, ಈ ಸಿನಿಮಾ ಇನ್ನೊಂದು ಅತ್ಯುತ್ತಮ ಚಿತ್ರ ಆಗುತ್ತಿದ್ದುದರಲ್ಲಿ ಅನುಮಾನವಿಲ್ಲ ಅನ್ನಿಸಿತು. ಅದಿರಲಿ.

ಕನ್ನಡಕ್ಕೆ ಒಳ್ಳೆಯ ಸಿನಿಮಾ ನೀಡಬಲ್ಲ ಹೆಸರಾಂತ ನಿರ್ದೇಶಕರಾಗುವ ಎಲ್ಲ ಲಕ್ಷಣಗಳೂ, ಪ್ರತಿಭೆಯೂ ಸಚಿನ್ ಶೆಟ್ಟಿ ಅವರಲ್ಲಿವೆ. ಆ ನಂಬಿಕೆ ಈ ಸಿನಿಮಾ ನೋಡುವಾಗ ಪ್ರೇಕ್ಷಕನಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಶುಭವಾಗಲಿ!

ಇನ್ನೂ ನೋಡಿರದಿದ್ದರೆ ಅಮೇಝಾನ್ ಪ್ರೈಮ್'ನಲ್ಲಿದೆ. ನೋಡಿ!

-Santhoshkumar LM

Tuesday, September 29, 2020

Vadachennai (2018, Tamil)




ವೆಟ್ರಿಮಾರನ್‍ರವರ "ಅಸುರನ್" ನೋಡಿದಾಗಿನಿಂದ "ವಡಚೆನ್ನೈ" ಹೇಗಿರಬಹುದೆಂಬ ಕುತೂಹಲವಿತ್ತು. ಸಮಯದ ಅಭಾವದಿಂದ ನೋಡಲಾಗಿರಲಿಲ್ಲ. ಕಡೆಗೂ ನೋಡಿದೆ. ಒಂದು ಆಟ, ಜನಜೀವನ, ಸಮಸ್ಯೆ, ಅವಕಾಶವಾದಿತನ, ರೌಡಿಯಿಸಂ, ಗ್ಯಾಂಗ್‍ಸ್ಟರ್ ಕಥೆ, ಸೇಡು, ಕೊಲೆ, ಪಿತೂರಿ, ಪ್ರೀತಿ....ಇತ್ಯಾದಿತ್ಯಾದಿ ಅದೆಷ್ಟು ವಿಷಯಗಳನ್ನು With Detail ಹೇಳೋಕೆ ಪ್ರಯತ್ನಿಸುವ ವೆಟ್ರಿಮಾರನ್ ನಿರ್ದೇಶನ ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು. ಸಿನಿಮಾ ನೋಡುವಾಗಲೇ ಅವರು ಕಟ್ಟಿಕೊಡುವ ಆ ಜನಜೀವನದ ಚಿತ್ರಣ ನಮ್ಮನ್ನು ಸಂಪೂರ್ಣವಾಗಿ ತನ್ನತ್ತ ಸೆಳೆದುಕೊಳ್ಳುತ್ತದೆ. ಈ ಸಿನಿಮಾದಲ್ಲಿ ಬಳಸಿರುವ Non-Linear ಕಥೆ ಹೇಳುವ ರೀತಿಯೇ ಸಿನಿಮಾದ Highlight. ಇವೆಲ್ಲದರ ಮಧ್ಯೆ ಸಿನಿಮಾವನ್ನು ಎಲ್ಲೂ ಬೇಸರ ಹುಟ್ಟದಂತೆ ರೋಚಕವಾಗಿ ಕೊಂಡೊಯ್ಯುತ್ತಾರೆ ಅನ್ನುವುದೇ ನನಗೆ ಇಷ್ಟವಾಗುವುದು.




ಧನುಷ್ ವೆಟ್ರಿಮಾರನ್ ಸಿನಿಮಾಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತಾರೋ, ಅಥವ ಧನುಷ್‍ರನ್ನು ವೆಟ್ರಿಮಾರನ್ ಮಾತ್ರವೇ ಬೇರೆಯದೇ ರೀತಿಯಲ್ಲಿ ತೋರಿಸುವುದೋ ಅರ್ಥವಾಗುವುದಿಲ್ಲ. ಅಷ್ಟು ಚೆನ್ನಾಗಿ ಸಿನಿಮಾದಲ್ಲಿ ಯಾವುದೇ Build-up ಇಲ್ಲದೆ ಕೇವಲ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಮಧ್ಯೆ ಮಧ್ಯೆ ಅಲ್ಲಲ್ಲಿ ಕೊಡುವ ಟ್ವಿಸ್ಟುಗಳು ಬೆಚ್ಚಿಬೀಳಿಸುತ್ತವೆ. ಯಾವ ಪಾತ್ರ ತೆಗೆದುಕೊಂಡರೂ ಯಾರೂ ತಮ್ಮ ಪಾತ್ರಕ್ಕೆ ಅಷ್ಟು ಮಹತ್ವವಿಲ್ಲ ಅಂತ ದೂರುವ ಅಗತ್ಯವೇ ಇಲ್ಲ. ಅಷ್ಟು ಪ್ರಾಮುಖ್ಯತೆ ಎಲ್ಲ ಪಾತ್ರಗಳಿಗಿದೆ. ಇದನ್ನು ನೋಡಿದ ಮೇಲೆ ಮುಂದಿನ ಭಾಗ ಯಾವಾಗ ಬರುತ್ತದೋ ಅಂತ ಕಾಯುವಂತಾಗಿದೆ.




ರಕ್ತಪಾತವನ್ನು ಹಾಗೆಯೇ ಹಸಿಹಸಿಯಾಗಿ ತೋರಿಸುವುದರಿಂದ ಸಿನಿಮಾಗೆ ಎ ಸರ್ಟಿಫಿಕೇಟ್ ಕೊಡಲಾಗಿದೆ. ಆದರೆ ಸಿನಿಮಾವನ್ನು ಬರೀ ಮನರಂಜನೆಯ ದೃಷ್ಟಿಯಿಂದಲಷ್ಟೇ ಅಲ್ಲದೆ ಬೇರೆ ಬೇರೆ ಉದ್ದೇಶಗಳಿಗೆ ನೋಡುವ ವಿದ್ಯಾರ್ಥಿಗಳಿಗೆ ವೆಟ್ರಿಮಾರನ್ ಸಿನಿಮಾಗಳು ಖಂಡಿತ ಅಭ್ಯಾಸ ಮಾಡಲೇಬೇಕಾದ ಸರಕುಗಳು. ಸಮಸ್ಯೆಯೆಂದರೆ ಈ ಸಿನಿಮಾಗಳು ನೋಡಿ ಮರೆಯುವಂಥ ಸಿನಿಮಾಗಳಲ್ಲ. ನೋಡಿದ ಮೇಲೆ ಒಂದಷ್ಟು ದಿನಗಳಾದರೂ ನಮ್ಮೊಳಗೆ ಅವುಗಳ ಕಿಕ್ ಉಳಿಯುವಂಥವು. ನಮ್ಮ ಕನ್ನಡದ ನಟ ಕಿಶೋರ್ ಅವರನ್ನು ತಮಿಳು ಚಿತ್ರರಂಗ ಎಷ್ಟು ವಿಭಿನ್ನ ಪಾತ್ರಗಳಿಗೆ ಬಳಸಿಕೊಳ್ಳುತ್ತಾರೆ ಅಂತ ಖುಶಿ-ಹೊಟ್ಟೆಕಿಚ್ಚು ಒಟ್ಟೊಟ್ಟಿಗೆ ಉಂಟಾಗುತ್ತದೆ.



-Santhosh Kumar LM
29-Sep-2020




Friday, July 24, 2020

French Biriyani (kannada, 2020)






ಇದು ನನ್ನ ಅನಿಸಿಕೆ. ಹಾಸ್ಯ Genreನ ಸಿನಿಮಾಗಳನ್ನು ಎರಡು ಬಗೆಯಲ್ಲಿ ವಿಂಗಡಿಸಬಹುದು. ಒಂದು ಸಿನಿಮಾದ ಕಥೆಯೊಳಗೆ ಬೆರೆತು ಹೋದ ಹಾಸ್ಯ. ಇನ್ನೊಂದು ಕಥೆಯ ಎಳೆ ಮಾಮೂಲಿಯಾಗಿದ್ದು ಸಂಭಾಷಣೆಯಲ್ಲಿ ತರುವ ಹಾಸ್ಯ. ಮೊದಲ ಬಗೆಯಲ್ಲಿ ನಮಗರಿವಿಲ್ಲದೆ ನಾವು ನಕ್ಕರೆ, ಎರಡನೆಯ ಬಗೆಯಲ್ಲಿ ಸಂಭಾಷಣೆಗಳು ನಗು ಉಕ್ಕಿಸುತ್ತವೆ. ಮೊದಲನೆಯದರ ಸಮಸ್ಯೆಯೆಂದರೆ ಸಿನಿಮಾ ನಮ್ಮನ್ನು ಸೆಳೆದುಕೊಳ್ಳದಿದ್ದರೆ ಹಾಸ್ಯ ದೊಡ್ಡ ಮಟ್ಟದಲ್ಲಿ ಸೋಲುತ್ತದೆ. ಗೆದ್ದರೆ ಸಿನಿಮಾ ಸೂಪರ್ ಹಿಟ್. ಯಾವುದೇ ಅಶ್ಲೀಲ ಸಂಭಾಷಣೆಯಿಲ್ಲದ ಕಥೆಯೊಂದಿಗೆ ಹಾಸ್ಯ ಬೆರೆತ, ಕಡೆಗೆ ಅನಿರೀಕ್ಷಿತ ತಿರುವಿನೊಂದಿಗೆ ಅದ್ಭುತ ಸಂದೇಶವೊಂದನ್ನು ಕೊಟ್ಟ "ಒಂದು ಮೊಟ್ಟೆಯ ಕಥೆ" ಇದಕ್ಕೊಂದು ಉದಾಹರಣೆ.

ಎರಡನೆಯ ಬಗೆಯ ಹಾಸ್ಯದ ಸಿನಿಮಾಗಳಲ್ಲಿ ರಿಸ್ಕ್ ಕಡಿಮೆ. ಏಕೆಂದರೆ ಸಂದರ್ಭವನ್ನು ಸೃಷ್ಟಿಸಿ ನಮಗೆ ಬೇಕಾದ ಹಾಸ್ಯದ ಸಂಭಾಷಣೆಯನ್ನು ತುರುಕಿದರೆ ಅರ್ಧಕ್ಕರ್ಧ ಗೆದ್ದಂತೆ. ನನ್ನ ಪ್ರಕಾರ "ಫ್ರೆಂಚ್ ಬಿರಿಯಾನಿ" ಎರಡನೆಯ ವರ್ಗಕ್ಕೆ ಸೇರಿದ ಸಿನಿಮಾ. ಸಿನಿಮಾ ಪೂರ್ತಿ ಡೈಲಾಗುಗಳಲ್ಲಿ ಹಾಸ್ಯವನ್ನು ಬೆರೆಸಲು ನಿರ್ದೇಶಕ ಶ್ರಮ ಹಾಕಿದ್ದಾರೆ.

ಅನೇಕ ಪಾತ್ರಗಳು ಸ್ವತಂತ್ರವಾಗಿಯೇ ಹಾಸ್ಯವುಕಿಸುತ್ತವೆ. ಅರ್ಧಂಬರ್ಧ ಇಂಗ್ಲೀಷ್ ಅರ್ಥವಾಗುವ ರಂಗಾಯಣ ರಘು "ರೇಸಿಸ್ಟ್" ಅನ್ನೋ ಪದವನ್ನು "ರನ್ನಿಂಗ್ ರೇಸ್ನಲ್ಲಿ ಭಾಗವಹಿಸುವವ" ಎಂದು ಭಾವಿಸಿ ನಮ್ಮ ಮನೆಯವರೆಲ್ಲ "ರೇಸಿಸ್ಟ್-ಗಳು" ಅಂತ ಅನ್ನುವುದು. ಆ ವಿದೇಶಿಗ ತನಗೆ ಇಂಡಿಯಾ ಅನ್ನುವುದು "ಫಾರಿನ್ ಕಂಟ್ರಿ" ಅಂದಾಗ "ಇಂಡಿಯಾ ಮಾತ್ರ ಲೋಕಲ್, ಉಳಿದದ್ದೆಲ್ಲ ಫಾರಿನ್" ಅಂತ ವಾದಿಸುವುದು ಇಂಥವೆಲ್ಲ ನಗು ತರಿಸುತ್ತವೆ. ಅದರಲ್ಲೂ ಮಕ್ಕಳಾಗಲಿಲ್ಲ ಅಂತ ವೈದ್ಯರ ಬಳಿ ಬರುವ ಗಂಡ-ಹೆಂಡತಿ ಜೋಡಿಯ ಹಾಸ್ಯ ಇಷ್ಟವಾಯಿತು. ಆ ಪಾತ್ರಗಳಲ್ಲಿ ನಟಿಸಿದ ನಾಗಭೂಷಣ ಮತ್ತು ಹರಳು ಹುರಿದಂತೆ ಮಾತನಾಡುವ (ರಹೀಲಾ ಪಾತ್ರದ) ಸಿಂಧು ಮೂರ್ತಿ ಜೋಡಿ ಇಷ್ಟವಾದರು. ವಾಟರ್ ಪ್ಯೂರಿಫೈಯರ್ ಮಾರಲೆಂದು ಬಂದು ಡಾನ್ ಕೈಯಲ್ಲಿ ಸಿಕ್ಕಿಕೊಂಡು ಕೊನೆಯವರೆಗೂ ಮೂಲೆಯೊಂದರಲ್ಲಿ ನೇತಾಡುವ ಪಾತ್ರದಲ್ಲಿ ಹಂಪಕುಮಾರ್ ಅಂಗಡಿ ನಕ್ಕುನಗಿಸುತ್ತಾರೆ.

ಆದರೆ ಸಿನಿಮಾದಲ್ಲಿ ಹೀರೋ ರೇಂಜಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು "ಮಝಲ್ ಮಣಿ" ಪಾತ್ರದಲ್ಲಿ ಬರುವ ಮಹಂತೇಶ್ ಹೀರೇಮಠ್. ಒಂದು ಕ್ಷಣ ಥೇಟ್ ತಮಿಳಿನ ಯೋಗಿ ಬಾಬು ಕನ್ನಡದಲ್ಲಿ ನಟಿಸಿದರೇನೋ ಅಂದುಕೊಂಡೆ. ಆ ಸನ್ನಿವೇಶ, ವಾತಾವರಣಕ್ಕೂ ತಮಿಳಿನ ಕೆಲ ಸಿನಿಮಾಗಳ ಛಾಯೆ ಇದೆ. ಆದರೆ ಯಾವ ಕ್ಷಣದಲ್ಲೂ ಆತನ ನಟನೆ ಅತಿರೇಕ ಅನಿಸಿಕೊಳ್ಳಲಿಲ್ಲ. ಗಂಭೀರವಾಗಿದ್ದುಕೊಂಡೇ ನಕ್ಕುನಗಿಸುತ್ತಾರೆ. ಗ್ಯಾರಂಟಿ ಆತನಿಗೆ ಅವಕಾಶಗಳು ಸಿಗಲಿವೆ. ಬಹುತೇಕ ಪಾತ್ರಗಳಿಗೆ ಹಾಸ್ಯದ ಲೇಪವಿರುವುದರಿಂದ, ಇಡೀ ಸಿನಿಮಾವನ್ನು ಹೊತ್ತು ಹೋಗುವ ಜವಾಬ್ದಾರಿ ದಾನಿಶ್ ಸೇಠ್'ಗೆ ಸಿಗಲಿಲ್ಲ ಅನ್ನಿಸಿತು.

ಇಷ್ಟೆಲ್ಲ ಹೇಳಿದ್ದು ಸಂಭಾಷಣೆ ಮತ್ತು ಎಲ್ಲ ಪಾತ್ರಗಳನ್ನು ಬಿಡಿಬಿಡಿಯಾಗಿ ನೋಡಿದಾಗ. ಆದರೆ ಇಡೀ ಕತೆಯನ್ನು ಒಟ್ಟಾಗಿ ನೋಡಿದರೆ ಸಿನಿಮಾಗೆ ಅನ್ನಿಸಿಕೊಳ್ಳುವಷ್ಟು ಕಥೆ ಸಶಕ್ತವಾಗಿಲ್ಲ ಅನ್ನಿಸಿತು. ಕಥೆಯೇ ಹೀಗಿರುವಾಗ ಕ್ಲೈಮ್ಯಾಕ್ಸ್ ಹೇಗಿದೆ, ಓಪನಿಂಗ್ ಹೇಗಿದೆ ಅಂತ ಕೇಳುವುದು ಅಸಮಂಜಸ. ಕೆಲವು ಕಡೆ ಹಾಸ್ಯಕ್ಕೆಂದೇ ಬಳಕೆಯಾಗುವ ಪದಗಳು ಎಲ್ಲರಿಗೂ ಇಷ್ಟವಾಗುವುದಿಲ್ಲವೇನೋ ಆಪೇಕ್ಷಾರ್ಹ ಪದಗಳನ್ನು ಬಳಸದೆ Rap Songಗಳನ್ನು ಬರೆಯುವಂತಿಲ್ಲವೇ ಎಂದು ನನಗೆ ಒಂದು ಹಾಡನ್ನು ಕೇಳಿದಾಗ ಅನ್ನಿಸಿತು. ಪುನೀತ್ ಹಾಡಿರುವ ಹಾಡೊಂದಕ್ಕೆ ಹೆಜ್ಜೆ ಹಾಕುವ ಧೈರ್ಯವನ್ನು ಸ್ವತಃ ನಿರ್ದೇಶಕರೇ ಏಕೆ ಮಾಡಿದರೋ ನಾ ಕಾಣೆ! ಪುನೀತ್ ಅವರೇ ಆ ಹಾಡಿಗೆ ಡ್ಯಾನ್ಸ್ ಮಾಡಿದ್ದರೆ ಸಿನಿಮಾಗೆ ಇನ್ನೊಂದು ತೂಕ ಬಂದಿರುತ್ತಿತ್ತು.

ಕೆಲವು ಕಡೆ ಗೊಂದಲ ಮೂಡಿಸುವ ವಿಷಯವೆಂದರೆ ಫ್ರೆಂಚ್ ವ್ಯಕ್ತಿಗೆ ಇಲ್ಲಿಯವರು ಕನ್ನಡದಲ್ಲಿ ಹೇಳಿದಾಗ ಅರ್ಥವಾಗಲಿಲ್ಲ ಅಂತ ಅಡ್ಡಡ್ಡ ತಲೆಯಾಡಿಸುತ್ತಾನೆ. ಮಧ್ಯೆ ಪ್ರವೇಶಿಸುವ ದಾನಿಶ್ ಸೇಠ್ ಉರ್ದು/ಹಿಂದಿಯಲ್ಲಿ ಅದನ್ನು ಹೇಳಿದಾಗ ಅರ್ಥವಾಯಿತು ಎಂಬಂತೆ ಪ್ರತಿಕ್ರಿಯಿಸುತ್ತಾನೆ.

ಒಟ್ಟಾರೆ ಏನನ್ನಿಸಿತು ಅಂದರೆ "ಲಾ" ಸಿನಿಮಾ ನೋಡಿದಾಗಿನ ಕಿರಿಕಿರಿ ಇಲ್ಲಿ ಕಾಣಲಿಲ್ಲ. ಪನ್ನಗಭರಣ ಕಥೆಯ ಬಗ್ಗೆ ಇನ್ನೊಂದಷ್ಟು ಹೋಂವರ್ಕ್ ಮಾಡಲಿ. ಇದೇ ಹಾಸ್ಯವನ್ನು ಸಶಕ್ತ ಕಥೆಯೊಂದಿಗೆ ಕೊಟ್ಟಿದ್ದರೆ ಇದು ಬೇರೆಯದೇ ಥರ ಇರುತ್ತಿತ್ತು ಅನ್ನುವುದರಲ್ಲಿ ಸಂಶಯವಿಲ್ಲ. PRK Productions ಆಯ್ಕೆ ತಪ್ಪುತ್ತಿದ್ದಾರೆ ಅಂತ ಮತ್ತೊಮ್ಮೆ ಅನಿಸುತ್ತಿರುವುದು ಬೇಸರದ ವಿಷಯ. ಏಕೆಂದರೆ ನಾವು ಅಂಥ ಬ್ಯಾನರ್'ನಿಂದ ಬಯಸುತ್ತಿರುವುದು average ಸಿನಿಮಾಗಳನ್ನಲ್ಲ

-Santhosh Kumar LM
24-Jul-2020

Friday, July 17, 2020

ಲಾ (LAW)...... ( Kannada Movie, 2020)

ಲಾ (LAW) ( Kannada Movie, 2020, courtroom drama, Amazon Prime)

Law 2020 Kannada Movie Review -Silly Execution Burries A Decent ...

ಸರ್. ಗ್ಯಾಂಗ್‍ರೇಪ್ ಆಗಿದೆ...
ಹೌದಾ....ಯಾರು ಯಾರು ಗ್ಯಾಂಗ್‍ರೇಪ್ ಮಾಡಿದ್ದು?
ಗ್ಯಾಂಗ್‍ರೇಪ್ ಎಲ್ಲಾಯ್ತು?
ಗ್ಯಾಂಗ್‍ರೇಪ್ ಆಗೋಕಿಂತ ಮುಂಚೆ ಆ ಹುಡುಗಿ ಅಲ್ಲೇನ್ ಮಾಡ್ತಿದ್ಲು?
ನಿಂದೇ ಏನಮ್ಮ....ಗ್ಯಾಂಗ್‍ರೇಪ್ ಕೇಸು?
ಗ್ಯಾಂಗ್‍ರೇಪ್ ಆದ ಹುಡುಗಿ ಆ ದಿನ ಮೆಡಿಕಲ್ ಟೆಸ್ಟಿಗೆ ಬರದೆ ಮರುದಿನ ಬರುತ್ತಾಳೆ....
ಈ ಥರದ ಗ್ಯಾಂಗ್‍ರೇಪ್‍ಗಳಿಗೆ ಅಂತ್ಯ ಹಾಡಬೇಕು

--------------------------------
ಅಲ್...ಲಾ!
ನಾ ಯಾವ್ ಸಿನಿಮಾ ನೋಡಿದೆ ಈಗ?
ಕಾಮಿಡಿ ಸಿನಿಮಾನ? ಗಂಭೀರವಾದ ಮೆಸೇಜ್ ಕೊಡುವ ಸಿನಿಮಾನ?

ಯಾರಾದರೂ ನನಗೆ "ಈ ಸಿನಿಮಾ ಹೆಂಗೈತ್ ಲಾ?" ಅಂತ ಕೇಳಿದರೆ
ನಾ ಹೇಳೋದೊಂದೇ "ಚೆನ್ನಾಗಿಲ್..ಲಾ"
-------------------------------

ಈ ಥರ ಹೇಳಿದರೆ ಆ ಸಿನಿಮಾ ಮಾಡಿದವರಿಗೆ ಬೇಸರವಾಗಬಹುದು. ಆದರೆ ಹೀಗೆ ಬರೆಯಲೇಬೇಕು. ನಿಜವಾಗಿ ಮೆಸೇಜು ಕೊಡುವ ಸಿನಿಮಾವನ್ನು ಮಾಡುವ ಮೊದಲು ಚೆನ್ನಾಗಿ ಹೋಮ್‍ವರ್ಕ್ ಮಾಡಿ ನಂತರ ಬನ್ನಿ. ಇಲ್ಲದಿದ್ದರೆ ಈ ಥರದ ಸೂಕ್ಷ್ಮಗಳನ್ನೇ ಅರಿಯದೆ ಬಂದು ಪ್ರೇಕ್ಷಕರಿಗ್ಯಾಕೆ ತೊಂದರೆ ಕೊಡುತ್ತೀರಿ?

ಯಾವ ಕಾಲದಲ್ಲಿದ್ದೀವಿ ನಾವು ಅನ್ನುವ ಹಾಗಿದೆ ಈ ಸಿನಿಮಾದ ಕಥೆಯನ್ನು ಹೇಳಿರುವ ರೀತಿ. ಸಾಮೂಹಿಕ ಅತ್ಯಾಚಾರದ ಕರಾಳ ಮುಖವನ್ನು ನಮಗೆ ದರ್ಶನ ಮಾಡಿಸಿ ಅದರ ಬಗ್ಗೆ ಕೋಪವೊಂದನ್ನು ಸೃಷ್ಟಿಸಿ, ಅದಕ್ಕೆ ಕಾರಣರಾದವರ ಮೇಲೆ ಮರಣದಂಡನೆಯಾಗುವಂತೆ ಮಾಡಿ ಪ್ರೇಕ್ಷಕನಿಗೆ ನಿಟ್ಟುಸಿರೊಂದಿಗೆ ಸಿನಿಮಾ ಕೊನೆಯಾಗಬೇಕಿತ್ತು.

ಆದರೆ ಶುರುವಿನಿಂದಲೇ "ಬುಟ್ಬುಡ್ರೋ" ಅಂತ ಪ್ರೇಕ್ಷಕನೇ ಸಿನಿಮಾದ ನಿರ್ದೇಶಕನಿಗೆ ಹೇಳಬೇಕೆನಿಸುತ್ತದೆ.
--------------------
ಅಲ್ಲಾ ಗುರೂ... ಮಂಡ್ಯ ರಮೇಶ್ ಅವರನ್ನು ಹಾಕಿಕೊಂಡ ತಕ್ಷಣ ಅವರಿಗೆ ಹಾಸ್ಯದ ದೃಶ್ಯವನ್ನೇ ಕೊಡಬೇಕಾ? ರಂಗಕಲಾವಿದರಾದ ಮಂಡ್ಯ ರಮೇಶ್‍ಗೆ ಗಂಭೀರ ಪಾತ್ರವನ್ನು ಕೊಟ್ಟರೂ ಅದನ್ನು ಅಚ್ಚುಕಟ್ಟಾಗಿ ಮಾಡಬಲ್ಲರು. ಅಂಥ ಸನ್ನಿವೇಶದಲ್ಲಿ ಹಾಸ್ಯ ಬೇಕಿತ್ತಾ ಅನ್ನುವುದು ಮೊದಲನೆಯ ಅಸಹನೆಗೆ ಸಾಕ್ಷಿ. ಅದು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯೊಬ್ಬಳಿಗೆ ಪೊಲೀಸ್ ಇಲಾಖೆ ತೋರುವ ಉಡಾಫೆಯ ರೀತಿ ಅಂತ ಸಮಜಾಯಿಷಿ ನೀಡಬಹುದು. ಆದರೆ ಅದನ್ನು ಹೇಳಲು ಹತ್ತಾರು ಮಾರ್ಗಗಳಿವೆ. ಅಲ್ಲಿ ಹಾಸ್ಯದ ಥರದ ಡೈಲಾಗುಗಳು ಬೇಕಿತ್ತಾ? ಅಲ್ಲಿಗೇ ಅದು ಕೊನೆಗೊಳ್ಳುವುದಿಲ್ಲ. ಮಾತಿಗೊಮ್ಮೆ ರೇಪ್, ಗ್ಯಾಂಗ್‍ರೇಪ್ ಅನ್ನುವ ಪದಗಳನ್ನು ಸಂಭಾಷಣೆ ಬರೆದವರೇ ಅತ್ಯಾಚಾರಗೊಳಿಸಿದ್ದಾರೆ ಅನ್ನಬಹುದು. ಅಷ್ಟರಮಟ್ಟಿಗೆ ಆ ಪದಗಳನ್ನು ವಿವೇಕವಿಲ್ಲದೆ ಬಳಸಲಾಗಿದೆ.

ಬಹುತೇಕ ದೃಶ್ಯಗಳಲ್ಲಿ ನಾಯಕಿಯ ನೋವು ನಮಗರ್ಥವಾಗುವುದೇ ಇಲ್ಲ. ಯಾಕೆಂದರೆ ಅಲ್ಲಿ ಆ ಭಾವ ವ್ಯಕ್ತವಾಗುವುದೇ ಇಲ್ಲ. ಅವಿನಾಶ್ ಒಬ್ಬ ಅಪ್ಪನಾಗಿ ಈ ಥರ ನಡೆದುಕೊಳ್ಳುತ್ತಾರಾ?ಅಂತ ಅನ್ನಿಸದೆ ಇರದು. ಅದಕ್ಕೆ ಕಾರಣವನ್ನು ನಂತರ ಕೊಟ್ಟರೂ ಅದು convince ಮಾಡುವುದಿಲ್ಲ.

ಕಥೆ ಹೇಳಿರುವ ರೀತಿಯೂ ಅಷ್ಟೇ... ಮೊದಲಿಂದಲೇ ಅಚ್ಯುತ್‍ಕುಮಾರ್ ದೃಶ್ಯಗಳನ್ನು ಇದ್ದಕ್ಕಿದ್ದಂತೆ ತೋರಿಸುವುದರಿಂದ ಇಲ್ಲೇನೋ ಬೇರೆಯದೇ ಇದೆ ಅನ್ನುವುದು ಗೊತ್ತಾಗುವುದಕ್ಕೆ ಹೆಚ್ಚು ಸಮಯ ಹಿಡಿಸುವುದಿಲ್ಲ. ಹಾಗಾಗಿ ಕಥಾಹಂದರವನ್ನು ಹೆಚ್ಚುಕಡಿಮೆ ಮೊದಲ ಅರ್ಧಘಂಟೆಯಲ್ಲೇ ಊಹಿಸಬಹುದು. ಕಥೆಯಲ್ಲಿ ಹೊಸದೇನೂ ಇಲ್ಲ. ಹಳೆಯದನ್ನು ಹೊಸದಾಗಿಯೂ ಹೇಳಿಲ್ಲ. ಇತ್ತೀಚೆಗೆ ಅಮೇಜಾನ್ ಪ್ರೈಮ್‍ನಲ್ಲೇ ಪ್ರೀಮಿಯರ್ ಆದ "ಪೊನ್‍ಮಗಳ್ ವಂದಾಳ್" ಸಿನಿಮಾದಲ್ಲೂ ನಾಯಕಿಯೇ ತನಗೆ ಅನ್ಯಾಯವಾಗಿದೆ ಅಂತ ನ್ಯಾಯಾಲಯದಲ್ಲಿ ವಾದ ಮಾಡುವುದು ಈ ಸಿನಿಮಾದಲ್ಲೂ ಪುನರಾವರ್ತನೆಯಾಗಿದೆ. ಇವೆರಡೂ ಸಿನಿಮಾಗಳನ್ನು ಒಂದಾದ ಮೇಲೆೊಂದರಂತೆ ಇದೇ platform ನಲ್ಲಿ ನೋಡಿದ್ದು ಇನ್ನಷ್ಟು ಅಸಹನೆಗೆ ಕಾರಣವಾಯಿತು. ಕೃಷ್ಣ ಹೆಬ್ಬಾಳೆ, ರಾಜೇಶ್ ನಟರಂಗ ಇವರಿಬ್ಬರ ಪಾತ್ರ ಪೋಷಣೆಯಷ್ಟೇ ಸಿನಿಮಾದಲ್ಲಿ ಚೆನ್ನಾಗಿದೆ.

ತನ್ನ ಮಗ ಅತ್ಯಾಚಾರದ ಕೇಸ್'ನಲ್ಲಿ ಸಿಕ್ಕಿಹಾಕಿಕೊಂಡಿರುವಾಗ ಅವನನ್ನು ಹೇಗೆ ಬಿಡಿಸುವುದು ಅಂತ "ಆಕೆ" ವಕೀಲರೊಂದಿಗೆ ಚರ್ಚಿಸುವಾಗಲೂ ಅವಳು ಬಾಳೆಹಣ್ಣು ಸಿಪ್ಪೆ ಸುಲಿದು ತಿನ್ನುತ್ತಿರುತ್ತಾಳೆ. ಇನ್ನೊಂದು ದೃಶ್ಯದಲ್ಲಿ ಚಿಪ್ಸ್ ತಿನ್ನುತ್ತ ತನ್ನ ಕೋಪ ಹೊರಹಾಕುತ್ತಾಳೆ. ಈ ವಿಷಯ ಚಿಕ್ಕದಿರಬಹುದು. ಆದರೆ ಸಿನಿಮಾ ಇಷ್ಟವಾಗದಿರಲು ಸಹ ಬಗೆಯ ಚಿಕ್ಕ ವಿಷಯಗಳೂ ಕಾರಣವಾಗುತ್ತವೆ. ತೆಲುಗು ಸಿನಿಮಾಗಳಲ್ಲಿ ತೋರಿಸುವ ಖಳನಾಯಕಿಯರನ್ನು ನೋಡಿ ಈ ಥರ ಮಾಡಿದ್ರಾ? ಗೊತ್ತಿಲ್ಲ.

ಆ ನ್ಯಾಯಾಲಯದಲ್ಲಾದರೂ ಕೊಂಚ ಗಂಭೀರತೆಯಿದೆಯೇ? ಒಂದು ಕಡೆ ಸಂತ್ರಸ್ತೆ ತನ್ನ ದುಃಖವನ್ನು ಅದುಮಿಟ್ಟಿಕೊಂಡು ವಾದ ಮಾಡುವಾಡುತ್ತಿರುತ್ತಾಳೆ. ಇದರ ಮಧ್ಯೆ ಮುಖ್ಯಮಂತ್ರಿ ಚಂದ್ರು ನ್ಯಾಯಾಧೀಶರಾಗಿಯೂ ಅವರಿಂದಲೂ ಗಂಭೀರ ದೃಶ್ಯದ ಮಧ್ಯೆ ಸಿಲ್ಲಿ ಜೋಕ್ ಹೇಳಿಸುವ ಪ್ರಯತ್ನ ಮಾಡುತ್ತಾರೆ. ಸ್ವತಃ ವಕೀಲರೇ ಘನವೆತ್ತ ನ್ಯಾಯಾಧೀಶರ ಮೇಲೆ "ಹುಡುಗೀರನ್ನ ನೋಡಿದ್ರೆ ನೀವು ಕರಗಿಹೋಗಿ ಅವರು ಹೇಳುವ ಕಥೆಗಳನ್ನು ನಂಬಿಬಿಡ್ತೀರ" ಅನ್ನುವ ಥರದ ಆರೋಪ ಮಾಡ್ತಾರೆ. ಇವೆಲ್ಲ ನಡೆಯುತ್ತವಾ? ಯಾರಾದರೂ ಕೋರ್ಟು-ಕಾನೂನು ತಿಳಿದವರು ಇದನ್ನು ನೋಡಿದರೆ "ಖಂಡಿತ ಕೋರ್ಟ್‍ರೂಮು ಹಿಂಗಿರಲ್...ಲಾ" ಅನ್ನುವುದು ಗ್ಯಾರಂಟಿ.

ಅದಕ್ಕೆ ಹೇಳಿದ್ದು. ಸಿನಿಮಾ ನಿರ್ದೇಶಕನಿಗೆ ತಾನು ಮಾಡುತ್ತಿರುವ ಸಿನಿಮಾದ Genre ಯಾವುದು ಅನ್ನುವ ಸ್ಪಷ್ಟತೆ ಇಲ್ಲ ಅಂತ. ಎಲ್ಲವೂ ಇರಲಿ ಅಂತ ಹಾಸ್ಯವನ್ನು ಎಲ್ಲೆಂದರಲ್ಲಿ ತುರುಕುವ ಬದಲು,ಕೊಂಚ ರಿಸ್ಕ್ ಅನ್ನಿಸಿದರೂ ಸರಿಯೇ. ಗಂಭೀರ ಕಥೆಯುಳ್ಳ ಸಿನಿಮಾಗಳನ್ನು ಗಂಭೀರವಾಗಿಯೇ ಮಾಡಿ ಒಂದು ವರ್ಗದ ಪ್ರೇಕ್ಷಕರನ್ನಾದರೂ ತೃಪ್ತಿಪಡಿಸುವ ನಿರ್ದೇಶಕರು ಬೇಕು. ಯುವ ಸಿನಿಮಾ ನಿರ್ದೇಶಕರುಗಳು ಈ ಸಿನಿಮಾವನ್ನು ನೋಡಿ ತಾವು ಯಾವ ಬಗೆಯ ತಪ್ಪುಗಳನ್ನು ಮಾಡಬಾರದೆಂದು ಅರ್ಥೈಸಿಕೊಳ್ಳುವುದು ಒಳ್ಳೆಯದು.

ಇಂಥ ಸಿನಿಮಾಗೆ ಇಷ್ಟೆಲ್ಲ ಬರೆಯುವುದು ಬೇಕಿರಲಿಲ್ಲ. ಆದರೆ ಇದು ದೊಡ್ಡ ಬ್ಯಾನರಿನ ಸಿನಿಮಾ. ನಮ್ಮ ನಿರೀಕ್ಷೆ ಸಹಜವಾಗಿ ಹೆಚ್ಚಿರುತ್ತದೆ. ಕೃಷ್ಣ ಹೆಬ್ಬಾಳೆ, ಅಚ್ಯುತ್‍ಕುಮಾರ್, ರಾಜೇಶ್ ನಟರಂಗ, ಅವಿನಾಶ್, ಸುಧಾರಾಣಿ, ಮುಖ್ಯಮಂತ್ರಿ ಚಂದ್ರು ಎಷ್ಟು ಒಳ್ಳೊಳ್ಳೆಯ ಕಲಾವಿದರನ್ನು ಒಳಗೊಂಡೂ ಅಚ್ಚುಕಟ್ಟಾದ ಸಿನಿಮಾವನ್ನು ನಮಗೆ ಕೊಡಲು ಸಾಧ್ಯವಾಗದೆ ಹೋದರೆ ಅದಕ್ಕೆ ನಿರ್ದೇಶಕರು ಜವಾಬ್ದಾರಿ ಹೊರಲೇಬೇಕು.

ಪುನೀತ್ ರಾಜ್‍ಕುಮಾರ್ ಅವರ ಬ್ಯಾನರಿನಿಂದ ಒಳ್ಳೆಯ ಸಿನಿಮಾಗಳು ಬರಲಿ. ಕಥೆಯ ಬಗ್ಗೆ, ಚಿತ್ರಕರ್ಮಿಗಳ ಬಗ್ಗೆ ಹೆಚ್ಚು ನಿಗಾವಹಿಸಿ ಒಳ್ಳೆಯ ಚಿತ್ರಗಳನ್ನು ಪ್ರೇಕ್ಷಕರಿಗೆ ಕೊಡಲಿ ಅನ್ನುವುದಷ್ಟೇ ಆಶಯ.

Santhosh Kumar LM
17-Jul-2020

Tuesday, May 12, 2020

ಮದ ಯಾನೈ ಕೂಟ್ಟಂ ....(2013, Tamil)




Madha Yaanai Koottam (2013)


ಮದ ಯಾನೈ ಕೂಟ್ಟಂ (ಮದದಾನೆಗಳ ಕೂಟ) (2013, Family Drama, Thriller) 

ಅಲ್ಲೊಂದು ಮದುವೆ ನಡೆಯುತ್ತದೆ. ಆಡಂಬರವಿಲ್ಲ. ಆದರೆ ಆ ಸ್ಥಿತಿಗತಿಯ ಮನೆಯಲ್ಲಿ ಚೆಂದ ನಡೆಯಬಹುದಾದ ಮದುವೆ. ಅಲ್ಲಿ ಅತಿಥಿಗಳು ಯಾವುದೇ ಥಿಯೇಟರಿನಲ್ಲಿ ಕೂತಂತೆ ಒಬ್ಬರ ಪಕ್ಕ ಓರಣವಾಗಿ ಕೂತಿರುವುದಿಲ್ಲ. ಅಲ್ಲಿ ಜನರ ಓಡಾಟವಿದೆ. ಒಬ್ಬೊಬ್ಬರಲ್ಲೂ ಸಂಭ್ರಮವಿದೆ. ಆ ಮದುಮಗನೂ ನೋಡಲು ಹೀರೋ ಥರವಿಲ್ಲ. ಆದರೆ ಲಕ್ಷಣವಾಗಿದ್ದಾನೆ. ಮದುವೆ ಜೋಡಿಯನ್ನು ಕರೆದುಕೊಂಡು ಹೋಗುವ ಬೀದಿಯಲ್ಲಿ ಜನರ ಕುಣಿದಾಟ.

ಆ ಮನೆಯಲ್ಲೊಂದು ಸಾವಾಗಿದೆ. ತೀರಿಕೊಂಡವನ ಜೊತೆ ನೋಡಲು ಬಂದವರೆಲ್ಲರ ಒಡನಾಟ ಬೇರೆಬೇರೆಯಿದೆ. ಅಲ್ಲೊಂದು ಶಾಮಿಯಾನ, ಬಂದವರ ಮೌನ, ಆತ್ಮೀಯರ ಗೋಳಾಟ, ಅಲ್ಲಲ್ಲೇ ಆಗದವರ ಮನಸ್ತಾಪಗಳು, ಆ ಭಾಗದಲ್ಲಿನ ಸಾವಿನ ಸಂದರ್ಭದ ವಿಧಿವಿಧಾನಗಳು....ಇಂಥ ಅನೇಕ ದೃಶ್ಯಗಳಲ್ಲಿ ಎಲ್ಲೂ ಅತಿಶಯೋಕ್ತಿಗಳಿಲ್ಲ. ಆದರೆ ಇದು ಖಂಡಿತ ಆರ್ಟ್ ಸಿನಿಮಾ ಅಲ್ಲ. ಭಯ ಹುಟ್ಟಿಸುವ ರೋಚಕ ದೃಶ್ಯಗಳಿವೆ. ಕದಿರ್ ಅನ್ನುವ ನಟನೊಬ್ಬನನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಇದು.

ಸಿನಿಮಾದ ಹೆಸರು "ಮದ ಯಾನೈ ಕೂಟ್ಟಂ". ಬಿಡುಗಡೆಯಾಗಿದ್ದು 2013 ರಲ್ಲಿ. ಖ್ಯಾತ ನಿರ್ದೇಶಕ ಬಾಲು ಮಹೇಂದರ್ ಶಿಷ್ಯ ವಿಕ್ರಮ್ ಸುಗುಮಾರನ್ ನಿರ್ದೇಶನದಲ್ಲಿ ಮೂಡಿಬಂದ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರ.

ಅದು ತಮಿಳುನಾಡಿನ ಕಂಬಂ-ತೇಣಿ ಬಳಿಯ ಊರು. ಆತನ ಹೆಸರು ಜಯಕ್ಕೋಡಿ. ಅವನಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಯಿಂದ ಒಂದು ಗಂಡು, ಒಂದು ಹೆಣ್ಣು. ಎರಡನೇ ಹೆಂಡತಿಯಿಂದ ಒಂದು ಗಂಡು, ಒಂದು ಹೆಣ್ಣು. ತನ್ನ ಗಂಡನ ಎರಡನೆ ಸಂಬಂಧದ ಬಗ್ಗೆ ತಿಳಿದಾಕ್ಷಣ ಮೊದಲ ಹೆಂಡತಿ ತನ್ನಣ್ಣನ ಮನೆಯಲ್ಲಿ ಬಂದು ನೆಲೆಸಿದ್ದಾಳೆ. ಸಹಜವಾಗಿ ಆಕೆಗೆ ತನ್ನ ಗಂಡನ ಬಗ್ಗೆ ಮತ್ತು ಆತನನ್ನು ಮರುಳು ಮಾಡಿದವಳ ಬಗ್ಗೆ ಆಕ್ರೋಶವಿದೆ. ಅವಳ ಅಣ್ಣನಿಗೂ ತನ್ನ ತಂಗಿಯ ಬಾಳನ್ನು ಹಾಳು ಮಾಡಿದ ಆಕೆಯ ಗಂಡನ ಬಗ್ಗೆ ದ್ವೇಷವಿದೆ. ಆ ಊರಿನ ಒಂದಷ್ಟು ಜನ ಹುಡುಗರೆಲ್ಲ ಈ ಅಣ್ಣ-ತಂಗಿಯ ಸುಪರ್ದಿನಲ್ಲೇ ಅವರು ಹೇಳಿದ ಎಂತಹ ಕೆಲಸ ಬೇಕಾದರೂ ಮಾಡುತ್ತಾರೆ.

ಇವರ ಸಹವಾಸವೇ ಬೇಡ ಅಂತ ಜಯಕ್ಕೋಡಿ ತನ್ನ ಎರಡನೆಯ ಹೆಂಡತಿಯ ಮತ್ತು ಮಕ್ಕಳ ಜೊತೆ ನೆಲೆಸಿದ್ದಾನೆ. ಈ ಎರಡೂ ಕುಟುಂಬದ ಒಬ್ಬರಿಗೊಬ್ಬರಿಗೆ ಆಗುವುದಿಲ್ಲ. ಅದರೆ ಮೊದಲ ಹೆಂಡತಿಯ ಮಗನಿಗೆ, ಎರಡನೆಯ ಹೆಂಡತಿಯ ಮಗ ಅಂದರೆ ತಮ್ಮನನ್ನು ಕಂಡರೆ ಏನೋ ಪ್ರೀತಿ. ಅದರೆ ಅಮ್ಮ-ಮಾವನ ಬಿಗಿಯಿಂದ ಆತನೊಂದಿಗೆ ಮಾತನಾಡುತ್ತಿಲ್ಲ.

ಜಯಕ್ಕೋಡಿ ತನ್ನ ಮಗಳನ್ನು ಮದುವೆ ಮಾಡಿದ ಮರುದಿನವೇ ತೀವ್ರ ಹೃದಯಾಘಾತದಿಂದ ಅಸುನೀಗುತ್ತಾನೆ. ಇದೀಗ ಅವನ ಶವಸಂಸ್ಕಾರವನ್ನು ಮೊದಲ ಹೆಂಡತಿಯ ಮನೆಯಲ್ಲೇ ನಡೆಯಬೇಕೆಂದು ಪಟ್ಟು ಹಿಡಿಯುತ್ತಾರೆ. ಅಲ್ಲಿಂದ ಕಥೆ ಅನೇಕ ನಾಟಕೀಯ ತಿರುವುಗಳೊಂದಿಗೆ ಸಾಗುತ್ತದೆ. ಅಲ್ಲಿ ಸುರಿಯುವ ರಕ್ತದ ಚಿತ್ರಣ ಬಿಟ್ಟರೆ ಉಳಿದ ಜಗಳಗಳೆಲ್ಲ ಸಾಮಾನ್ಯವಾಗಿ ನಾವು ನೋಡಿರುವಂಥವೇ. ಸಿನಿಮಾ ನೋಡುವಾಗ ನಾವೇ ಒಂದು ಸಾವಿನ ಮನೆಯಲ್ಲಿ ಕೂತಂತೆ ಭಾಸವಾಗುತ್ತದೆ.

ಫ್ಯಾಮಿಲಿ ಡ್ರಾಮಾ ಕಥೆಯಾದರೂ ಕೊನೆಯ ದೃಶ್ಯದವರೆಗಿನ ನಿರೂಪಣೆ ಒಂದೇ ಕ್ಷಣವೂ ಬೇಸರ ಹುಟ್ಟಿಸುವುದಿಲ್ಲ. ಇಡೀ ಸಿನಿಮಾ ಮೊದಲ ದೃಶ್ಯದ ಫೀಲ್ ಹೇಗಿದೆಯೋ, ಮುಗಿಯುವಾಗಲೂ ಅದೇ ರೀತಿ ಮುಕ್ತಾಯವಾಗುತ್ತದೆ. ಮೊದಲ ನಿರ್ದೇಶನದಲ್ಲೇ ಸುಗುಮಾರನ್'ಗೆ ತನ್ನ ಸಿನಿಮಾ ಬಗ್ಗೆ ಇರುವ ಸ್ಪಷ್ಟತೆ ಮೆಚ್ಚುವಂಥದ್ದು.

  • ತನ್ನ ತಂದೆಯ ಇನ್ನೊಬ್ಬಳು ಹೆಂಡತಿಯ ಮಗ ಶತ್ರುಗಳಿಗೆ ಹಿಗ್ಗಾಮುಗ್ಗಾ ಚಚ್ಚಿದ್ದನ್ನು ಕೇಳುವ ಮೊದಲ ಹೆಂಡತಿಯ ಮಗ "ಎಷ್ಟಾದರೂ ಅವನು ನನ್ನ ತಮ್ಮ" ಅಂತ ಮೀಸೆ ತಿರುವುತ್ತಾನೆ.
  • ಜಾತ್ರೆಯಲ್ಲಿ ಮೊದಲ ಹೆಂಡತಿ ದುಡ್ಡು ಕೊಟ್ಟಾಗ ಸ್ಪೀಕರಿನಲ್ಲಿ ಅದನ್ನು ಅನೌನ್ಸ್ ಮಾಡುವಾತ ಆಕೆಯ ಹೆಸರನ್ನು ಮಾತ್ರ ಕರೆಯುತ್ತಾನೆ. ಆಗ ಆಕೆ ಅವನಿಗೆ ದಬಾಯಿಸಿ "ನನ್ನ ಗಂಡನ ಹೆಸರು ಸೇರಿಸಿ ಹೇಳು" ಅಂತಾಳೆ. ಆತ "ಅವನ ಹೆಸರ್ಯಾಕೆ?" ಅಂದಾಗ "ನಾನು ಕಟ್ಟಿಕೊಂಡ ಹೆಂಡತಿ. ಅವನನ್ನು ಹೇಗೆ ಬೇಕಾದರೂ ಬೈತೀನಿ. ಬೇರೆಯವರು ಯಾರಾದರೂ ಅವನು-ಇವನು ಅಂತ ಮಾತಾಡಿದ್ರೆ ಚಮ್ಡಾ ಸುಲೀತೀನಿ" ಅಂತ ರೇಗುತ್ತಾಳೆ.
  • ಶವವನ್ನು ಮೊದಲ ಹೆಂಡತಿಯ ಮನೆಗೆ ತಂದ ದೃಶ್ಯ...... ಇಷ್ಟು ದಿನ ಅವನನ್ನು ಕಂಡೊಡನೆ ಉರಿದು ಬೀಳುತ್ತಿದ್ದ ಹೆಂಡತಿ ಕಣ್ಣೀರಾಗುತ್ತಾಳೆ.
  • "ಎಂದಾದರೂ ನಾವೆಲ್ಲ ಒಂದಾಗುತ್ತೇವೆ, ನೀ ವಾಪಸ್ಸು ಬರುವೆ ಅಂತ ಕಾಯ್ತಿದ್ದೆ ಅಪ್ಪ" ಅಂತ ಎದೆ ಬಡಿದುಕೊಂಡು ಅಳುವ ಮೊದಲ ಹೆಂಡತಿಯ ಮಗ.
  • ತನ್ನ ಗಂಡನ ಎರಡನೇ ಹೆಂಡತಿಯನ್ನು ಕೊಲೆ ಮಾಡುತ್ತಾರೆ ಎಂದು ತಿಳಿದ ಮೊದಲನೆ ಹೆಂಡತಿ ತಾನೇ ಹೋಗಿ ಆಕೆಯನ್ನು ರಕ್ಷಿಸುತ್ತಾಳೆ

ಈ ಥರ ಪುಟ್ಟ ಪುಟ್ಟ ಅನೇಕ ಸೂಕ್ಷ್ಮ ದೃಶ್ಯಗಳಿವೆ. "ಲೇಯ್ ತಮ್ಮಯ್ಯ. ಆಗಲೇ ಅದೆಲ್ಗ್ ಒಂಟೆ. ಇಟ್ಟುಣ್ಕೊಂಡೋಗು" ಅಂತ ಗದರಿಸಿ ಹೇಳಿದರೂ ಅಲ್ಲೊಂದು ಪ್ರೀತಿ ಇರುತ್ತಲ್ಲ. ಅದೇ ರೀತಿ ಆ ಭಾಗದ ಜನರು ಮಾತನಾಡುವುದು ನಮಗೆ ಒರಟಾಗಿ ಧ್ವನಿಸಬಹುದು. ಆದರೆ ಅಲ್ಲಿ ಪ್ರೀತಿಯಿರುತ್ತದೆ. ಅದೇ ಬಗೆಯ ಸಂಭಾಷಣೆಯನ್ನು ಇಲ್ಲಿ ಸಿನಿಮಾದುದ್ದಕ್ಕೂ ಬಳಸಿಕೊಂಡಿದ್ದಾರೆ. ನಾವು ಅಲ್ಲೇ ಇದ್ದೀವೇನೋ ಅನ್ನುವ ಭಾವ ಕೊನೆಯವರೆಗೂ ಇರುತ್ತದೆ. ಹಿನ್ನೆಲೆ ಸಂಗೀತ, ಹಾಡುಗಳೂ ಅಷ್ಟೇ, ಹೊಸತೆನಿಸುತ್ತದೆ. ಯಾವುದೇ ಹಾಡನ್ನು ಸ್ಕಿಪ್ ಮಾಡದೇ ಸಿನಿಮಾ ನೋಡಿದೆ. "ಉನ್ನೈ ವಳಂಗಾದ" ಅನ್ನುವ ಮೊದಲ ಹಾಡನ್ನು ನೀವು ಅರಗಿಸಿಕೊಳ್ಳದಿದ್ದರೆ ಸಿನಿಮಾದ ಅರ್ಥವನ್ನೇ ಅರ್ಧ ಕಳೆದುಕೊಂಡಂತೆ.

ಪ್ರೇಮಕಥೆಯೊಂದು ಮಧ್ಯೆ ಹಾದು ಹೋದರೂ ಅದು ಕೂಡ ಸಿನಿಮಾದ ರೋಚಕತೆಯನ್ನು ಹಾಳು ಮಾಡುವುದಿಲ್ಲ. ಈ ಸಿನಿಮಾದಲ್ಲಿ ಯಾವ ಪಾತ್ರ ಸರಿ, ಯಾವ ಪಾತ್ರ ತಪ್ಪು ಅನ್ನುವ ನೀತಿಯನ್ನು ಹೇಳುವುದಿಲ್ಲ. ಏಕೆಂದರೆ ಆ ಕ್ಷಣಕ್ಕೆ ತಕ್ಕಂತೆ ಪಾತ್ರಗಳು ಪ್ರತಿಕ್ರಿಯಿಸುವುದನ್ನೇ ಇಲ್ಲಿ ಕಥೆಯಾಗಿ ಹೇಳಲಾಗಿದೆ.

"ಯು" ಸರ್ಟಿಫಿಕೇಟ್ ಇದ್ದರೂ ರಕ್ತ ಧಾರಾಳವಾಗಿ ಎಲ್ಲೆಲ್ಲೂ ಕಾಣುವ ಸಿನಿಮಾ. ಚಿಕ್ಕಮಕ್ಕಳು ನೋಡದಿದ್ದರೆ ಒಳ್ಳೆಯದು. ನೆಟ್'ಪ್ಲಿಕ್ಸ್ ಅಥವಾ ಪ್ರೈಮ್'ನಲ್ಲಿ ಇರಲೇಬೇಕಾದಂಥ ಸಿನಿಮಾ. ಏಕಿಲ್ಲವೋ ಗೊತ್ತಿಲ್ಲ. ಸದ್ಯಕ್ಕೆ ಯೂಟ್ಯೂಬಿನಲ್ಲಿದೆ. ಸಬ್'ಟೈಟಲ್ ಇಲ್ಲ. ತಮಿಳು ಬಲ್ಲವರು, ಅರ್ಥೈಸಿಕೊಳ್ಳುವವರು ನೋಡಿ. ಚಿತ್ರರಂಗದ ಗೆಳೆಯರು ಮಿಸ್ ಮಾಡಬಾರದ ಸಿನಿಮಾ.

ಎ.ಎಸ್.ಜಿ ಅಪ್ಪು, ಈ ಥರದ ಸಿನಿಮಾವೊಂದನ್ನು ನೋಡಲು ಹೇಳಿದ್ದಕ್ಕೆ ಧನ್ಯವಾದಗಳು. :-) ಇಂಥ ಸಿನಿಮಾ ನೋಡಿದಾಗ ಹೇಳುತ್ತಿರಿ.

-Santhosh Kumar LM
12-May-2020

Friday, May 8, 2020

ಅಸ್ತು ( ಮರಾಠಿ, 2013)


ಅಸ್ತು ( ಮರಾಠಿ, 2013)










ಆ ಅಜ್ಜನನ್ನು ಒಬ್ಬ ಪರಿಚಯಸ್ಥ ಹುಡುಗ ಇನ್ನೊಂದು ಮನೆಯಲ್ಲಿ ನೋಡಿಕೊಳ್ಳುತ್ತಿರುತ್ತಾನೆ. ಅಜ್ಜನಿಗೆ alzheimer's ಖಾಯಿಲೆ. ಎಲ್ಲ ಮರೆತುಹೋಗಿರುತ್ತದೆ. ಅದೊಂದು ದಿನ ಆ ಹುಡುಗನಿಗೆ ಪರೀಕ್ಷೆ. ಹಾಗಾಗಿ ಅದೇ ಊರಿನಲ್ಲಿರುವ ಆ ಅಜ್ಜನ ಹಿರೀಮಗಳನ್ನು ಕರೆದು ಆ ಅಜ್ಜನನ್ನು ಕಳಿಸಿ ಕಾಲೇಜಿಗೆ ಹೊರಡುತ್ತಾನೆ.

ಇತ್ತ ಅಜ್ಜನನ್ನು ಕರೆದುಕೊಂಡು ಕಾರಿನಲ್ಲಿ ಹೊರಡುವ ಮಗಳಿಗೆ ಮಧ್ಯದಲ್ಲೊಂದು ಅಂಗಡಿಯಲ್ಲಿ ಏನೋ ತುರ್ತಾಗಿ ಖರೀದಿ ಮಾಡಬೇಕಿರುತ್ತದೆ. ಅಜ್ಜನನ್ನು ಕಾರಿನೊಳಗೆ ಕೂರಿಸಿ ಲಾಕ್ ಮಾಡಿ ಅಂಗಡಿಗೆ ಹೋಗುತ್ತಾಳೆ.

ಆ ರಸ್ತೆಯ ಅತ್ತ ಬದಿಯಲ್ಲಿ ಮಾವುತ ಆನೆಯೊಂದಿಗೆ ಭಿಕ್ಷೆ ಬೇಡುತ್ತಿರುತ್ತಾನೆ. ಅಜ್ಜನಿಗೆ ಆ ಆನೆಯ ಮೇಲೆ ಕೂರುವ ಆಸೆ. ಇತ್ತ ಅಂಗಡಿಯಲ್ಲಿ ಆತನ ಮಗಳು ಬೇಕಾದ್ದನ್ನು ಖರೀದಿಸಿ ವಾಪಸ್ಸು ಬರುವಷ್ಟರ ಹೊತ್ತಿಗೆ ಅಜ್ಜ ಕಾಣೆಯಾಗಿರುತ್ತಾನೆ.

ಒಂದೆಡೆ ತನ್ನ ಬೇಜವಾಬ್ದಾರಿತನವನ್ನು ಶಪಿಸಿಕೊಳ್ಳುತ್ತ ಗಂಡನೊಂದಿಗೆ ಅಪ್ಪನನ್ನು ಹುಡುಕುವ ಕಥೆಯೇ "ಅಸ್ತು".  ಅಪ್ಪನನ್ನು ಹುಡುಕುವ ಹಾದಿಯಲ್ಲಿ ಆಕೆಯ ಮನಸ್ಸಿನಲ್ಲಿ ಉಂಟಾಗುವ ತೊಳಲಾಟಗಳು ಇಲ್ಲಿಯ ಮುಖ್ಯ ಕಥಾಹಂದರ.

2013ರಲ್ಲಿ ಮೊದಲಿಗೆ ಜರ್ಮನ್ ಚಿತ್ರೋತ್ಸವದಲ್ಲಿ ಭಾಗವಹಿಸಿದರೂ, ವಿತರಕರು ಸಿಗದ ಕಾರಣ ತಡವಾಗಿ ಅಂದರೆ 2016ರಲ್ಲಿ ಕ್ರೌಡ್‌ಫಂಡಿಂಗ್ ನೆರವಿನೊಂದಿಗೆ ಬಿಡುಗಡೆಯಾಯಿತು. ಅಷ್ಟರಲ್ಲೇ ಬೇರೆ ಬೇರೆ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು  ಅದು ಬಾಚಿದ್ದು ಅನೇಕ ಪ್ರಶಸ್ತಿಗಳನ್ನು. 

ಈ ಸಿನಿಮಾದ ನಿರ್ದೇಶಕರು ಸುಮಿತ್ರಾ ಭಾವೆ ಮತ್ತು  ಸುನಿಲ್ ಸುಕ್ಥಂಕರ್. ನಿರೂಪಣಾ ಶೈಲಿಯೇ ಮಂದಗತಿಯಲ್ಲಿದ್ದು ಕಳೆದುಹೋದ ಅಪ್ಪನ ಹುಡುಕುವಾಗಿನ ಭಾವವನ್ನು ಕಟ್ಟಿಕೊಡುತ್ತದೆ. ಸಿನಿಮಾದಲ್ಲಿ ಯಾರ ನಟನೆ ಚೆನ್ನಾಗಿದೆ ಎಂದರೆ ಹೇಳುವುದು ಕಷ್ಟ. ಅಷ್ಟರಮಟ್ಟಿಗೆ ಎಲ್ಲರ ಅಭಿನಯ ಚೆನ್ನಾಗಿದೆ. 

Alzheimer's ಖಾಯಿಲೆಯಿಂದ ಮರೆತುಹೋಗುವ ಪಾತ್ರದಲ್ಲಿ ಮೋಹನ್ ಅಗಶೆ ಮಗುವಿನಂತೆ ಅನಿಸುತ್ತಾರೆ. ಅವರ ಮಗಳ ಪಾತ್ರದಲ್ಲಿರುವುದು ಇರಾವತಿ ಹರ್ಷೆ. ನಟಿ ಅಮೃತಾ ಸುಭಾಷ್ ಮಾವುತನ ಹೆಂಡತಿಯಾಗಿ ಮಾಡಿದ ಪೋಷಕ ಪಾತ್ರಕ್ಕಾಗಿ 2014ರಲ್ಲಿ ರಾಷ್ಟ್ರಪ್ರಶಸ್ತಿ ಸಿಕ್ಕಿತು. 

ಮಾವುತನ ಹೆಂಡತಿಯ ಮತ್ತು ಅಜ್ಜನ ಪಾತ್ರದ ನಡುವೆ ನಡೆಯುವ ಒಂದೆರಡು ದೃಶ್ಯಗಳಲ್ಲಂತೂ ಕಣ್ಣಂಚಿನಲ್ಲಿ ಹನಿಜಾರುವುದನ್ನು ತಡೆಯಲು ಸಾಧ್ಯವಿಲ್ಲ. ಆ ದೃಶ್ಯಗಳ ಬಗ್ಗೆ ಇಲ್ಲಿ ಹೇಳಬಾರದು. ಸಿನಿಮಾ ನೋಡಿ.

ಹಾಂ...ಹೇಳಲು ಮರೆತೆ......ಇದರಲ್ಲೊಂದು ಕನ್ನಡದ ಹಾಡಿದೆ!!

ಈ ಸಿನಿಮಾ ನೋಡಿ ಅಂತ ಹೇಳಿದ್ದು: 

-Santhosh Kumar LM
08-May-2020

Saturday, April 25, 2020

ಪುನ್ನಗೈ ವಾಂಗಿನಾಲ್ ಕಣ್ಣೀರ್ ಇಳವಸಂ...Tamil ShotFilm

ಪುನ್ನಗೈ ವಾಂಗಿನಾಲ್ ಕಣ್ಣೀರ್ ಇಳವಸಂ ( ನಗುವ ಕೊಂಡರೆ ಕಣ್ಣೀರು ಉಚಿತ )


Punnagai Vaanginaal Kanneer Elavasam Tamil Short Film | Friends ...


ಈ ಕಿರುಚಿತ್ರದ ಬಗೆ ಬರೆಯಲೇಬೇಕು. ಬರೀ ನೋಡಿ ಅಂತ ಬರೆದುಬಿಡುತ್ತಿದ್ದೆ. ಆದರೆ ಬೇಸರವೆಂದರೆ ಈ ಚಿತ್ರಕ್ಕೆ ಸಬ್'ಟೈಟಲ್ ಇಲ್ಲ. ತಮಿಳು ಬರದವರಿಗೆ ಸನ್ನಿವೇಶ ಅರ್ಥವಾಗದಿರಬಹುದು..ಆದ್ದರಿಂದಲೇ ಕೊಂಚ ಕಥೆ ಹೇಳುತ್ತೇನೆ. ಎಲ್ಲ ಭಾಷೆಯ ಸಿನಿಮಾಪ್ರೇಮಿಗಳು ಇದನ್ನು ನೋಡಬೇಕೆಂಬುದು ನನ್ನ ಆಶಯ.

ಈ ಕಿರುಚಿತ್ರ ಮಾಡಿದ್ದೇ "ನಾಳಯ ಇಯಕ್ಕುನರ್" (ಭವಿಷ್ಯದ ನಿರ್ದೇಶಕ) ಅನ್ನುವ ಸ್ಪರ್ಧೆಯೊಂದಕ್ಕೆ. ಕಲೈನ್ನರ್ ತಮಿಳು ಚಾನೆಲ್ ನಡೆಸುವ ಈ ಸ್ಪರ್ಧೆಯಲ್ಲಿ ಈ ಕಿರುಚಿತ್ರ ಮೊದಲ ಬಹುಮಾನವನ್ನು ಗಿಟ್ಟಿಸಿತು. ಸ್ವತಃ ಹಿರಿಯ ನಟ ಕಮಲ್ ಹಾಸನ್ ಈ ಸಿನಿಮಾವನ್ನು ಮತ್ತು ನಿರ್ದೇಶಕನನ್ನು ಮುಕ್ತಕಂಠದಿಂದ ಹೊಗಳಿದರು.

ಚಿತ್ರದ ಪರಿಕಲ್ಪನೆಯೇ ಎಷ್ಟು ವಿಚಿತ್ರ-ವಿಭಿನ್ನ-ಸೂಕ್ಷ್ಮವಾಗಿದೆಯೆಂದರೆ ಹೇಳುವಾಗಲೇ ಎದೆ ಝಲ್ ಅನ್ನುತ್ತದೆ. ಇಂಥದ್ದೊಂದು ಕಥೆಯನ್ನು ಕಿರುಚಿತ್ರಕ್ಕೆ ಬಳಸಿಕೊಳ್ಳಬೇಕಿತ್ತಾ ಅನ್ನುವ ಪ್ರಶ್ನೆ ನಿಮಗೆ ಮೂಡದಿದ್ದರೆ ಕೇಳಿ.

ಈ ಕಿರುಚಿತ್ರವಿರುವುದೇ ಹನ್ನೆರಡು ನಿಮಿಷ. ಚಿತ್ರ ನೋಡಿ ಮುಗಿದ ಮೇಲೆ, ಪ್ರತೀ ಪಾತ್ರದ ಬಗ್ಗೆ ಅದಿರುವ ಸನ್ನಿವೇಶವನ್ನು ಊಹಿಸಿಕೊಂಡು ಯೋಚಿಸಿ. ನಿಮಗೆ ಯಾವುದು ಸರಿ ತಪ್ಪು ಅಂತ ಕಂಡುಹಿಡಿಯಬಹುದಾ? ಗೊತ್ತಿಲ್ಲ.

ಆ ಮನೆಯಲ್ಲಿ ವಯಸ್ಸಾದ ಅಜ್ಜಿಯಿದೆ. ಆಕೆಗೆ ಇಬ್ಬರು ಗಂಡುಮಕ್ಕಳು. ಒಬ್ಬ ಹೆಂಡತಿಯೊಂದಿಗೆ ಬೇರೆ ಮನೆಯಲ್ಲಿದ್ದಾನೆ. ಈ ಮನೆಯಲ್ಲಿ ಆ ಅಜ್ಜಿ ಇನ್ನೊಬ್ಬ ಮಗನ ಕುಟುಂಬದ ಜೊತೆಯಲ್ಲಿದೆ. ಆ ಮಗನೋ ಕುಟುಂಬವನ್ನು ಹೇಗೆ ನಿಭಾಯಿಸಬೇಕು ಅಂತ ಭಾಷಣ ಮಾಡುವಷ್ಟು, ಕಾರ್ಯಕ್ರಮಗಳನ್ನು ಕೊಡುವಷ್ಟು ಪ್ರಸಿದ್ಧಿ ಹೊಂದಿದಾತ. ಅವನಿಗೂ ಇಬ್ಬರು ಮಕ್ಕಳು. ಆ ಮಕ್ಕಳಲ್ಲಿ ಒಬ್ಬ ಮಗಳಿಗೆ ಈಗಾಗಲೇ ಒಂದು ಮಗುವಿದೆ. ಈಗ ಮತ್ತೆ ಆಕೆ ಗರ್ಭಿಣಿ. ಅಂದರೆ ಅಜ್ಜಿಗೆ ಈಗಾಗಲೇ ಮರಿಮಕ್ಕಳು ಇದ್ದಾರೆ.

ಇದೀಗ ಅಲ್ಲೊಂದು ಧರ್ಮಸಂಕಟವಿದೆ. ಆ ಅಜ್ಜಿಯ ಗಂಡ ಒಂದು ತಿಂಗಳ ಹಿಂದಷ್ಟೇ ತೀರಿಕೊಂಡಿದ್ದಾರೆ. ಆ ಅಜ್ಜಿಗೆ ಏನೋ ಆರಾಮಿಲ್ಲ ಎಂದೆನ್ನಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಡಾಕ್ಟರ್ "ಆಕೆ ಮೂರು ತಿಂಗಳ ಗರ್ಭಿಣಿ" ಎಂದು ಹೇಳಿದ್ದಾರೆ!! ಮಗನಿಗೆ ಅದನ್ನು ಸಮಾಜದೆದುರು ಹೇಗೆ ತಾನೆ ಹೇಳಿಕೊಂಡಾನು? ಹೇಳಿಕೊಂಡರೆ ಅವಮಾನ. ತೆಗೆಸಿಬಿಡೋಣವೆಂದರೆ ಅದು ಆಕೆಯ ಜೀವಕ್ಕೆ ಕುತ್ತು ತರಬಹುದೆಂದು ವೈದ್ಯರು ಗರ್ಭಪಾತವನ್ನು ನಿರಾಕರಿಸಿದ್ದಾರೆ. ಜೊತೆಗೆ "ನಿಮ್ಮ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕು" ಅಂತ ಮಗನಿಗೆ ಹೇಳಿದ್ದಾರೆ.

ಇದೀಗ ಈತನಿಗೆ ಹೆಂಡತಿಯಿಂದಲೂ ಒತ್ತಡವಿದೆ. ಕಾರಣ ಗರ್ಭಿಣಿಯಾದ ಮಗಳೂ ಮನೆಸೇರಿದ್ದಾಳೆ. ಅವಳನ್ನು ನೋಡಲು ಅಳಿಯ ಯಾವುದೇ ಸಂದರ್ಭದಲ್ಲಿ ತನ್ನ ಮನೆಗೆ ಬರಬಹುದು. ಬಂದರೆ ಈ ವಿಷಯ ತಿಳಿದರೆ ಅವಮಾನ. ಹಾಗಾಗಿ "ನಿಮ್ಮ ತಾಯಿಯನ್ನು ನಿಮ್ಮ ತಮ್ಮನ ಬಳಿ ಬಿಟ್ಟು ಬನ್ನಿ" ಅಂತ ಒಂದೇ ಸಮನೆ ಗಲಾಟೆ ಮಾಡುತ್ತಿದ್ದಾಳೆ. ತಮ್ಮನ ಮನೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಏನಾದರೂ ಸುಳ್ಳುಹೇಳಿ ವೃದ್ಧಾಶ್ರಮದಲ್ಲಿ ಬಿಡೋಣವೆಂದರೆ ಅಲ್ಲೂ ಈ ವಿಷಯ ತಿಳಿದ ಮೇಲೆ ನೋಡಿಕೊಳ್ಳಲು ಅಸಾಧ್ಯವೆಂದು ಸೇರಿಸಿಕೊಳ್ಳುತ್ತಿಲ್ಲ. ಮಗ ಏನು ತಾನೇ ಮಾಡಿಯಾನು?

ಮುಂದೇನು?

ಈ ಚಿತ್ರ ನೋಡಿ. ಸೂಕ್ಷ್ಮ ಸಂಗತಿಗಳನ್ನು ಹೇಳಿರುವ ರೀತಿ ನಿಜಕ್ಕೂ ಯುವ ಸಿನಿಮಾ ನಿರ್ದೇಶಕರುಗಳಿಗೆ ಸಹಾಯವಾಗಬಲ್ಲದು. ದಿನಪತ್ರಿಕೆಯಲ್ಲಿ ವೃದ್ಧೆಯೊಬ್ಬರು ಗರ್ಭಿಣಿಯಾದ ಸುದ್ದಿಯೊಂದನ್ನು ನೋಡಿದ ನಿರ್ದೇಶಕ ನಿಥಿಲನ್'ಗೆ ಈ ಸಿನಿಮಾದ ಎಳೆ ಸಿಕ್ಕಿದ್ದು. ಏಳೆಂಟು ವರ್ಷಗಳ ಹಿಂದೆ ಈ ಸಿನಿಮಾ ನೋಡಿದ್ದಾಗ ಎಲ್ಲರಿಗೂ ಇದರ ಬಗ್ಗೆ ಹೇಳುತ್ತಿದ್ದೆ. ಮೊನ್ನೆ "ಕುರಂಗು ಬೊಮ್ಮೈ" ನೋಡಿದಾಗ ತಿಳಿದ ವಿಷಯವೆಂದರೆ ಆ ಸಿನಿಮಾದ ನಿರ್ದೇಶಕ ಕೂಡ ಇದೇ ನಿಥಿಲನ್.

ನೋಡಿರದಿದ್ದರೆ ನೋಡಿ. ಖಂಡಿತ ನಿಮ್ಮ ಅಮೂಲ್ಯ ಹನ್ನೆರಡು ನಿಮಿಷಗಳಿಗೆ ನಾ ಗ್ಯಾರಂಟಿ ಕೊಡಬಲ್ಲೆ.

(ಯೂಟ್ಯೂಬ್ ಲಿಂಕ್ ಕಮೆಂಟಿನಲ್ಲಿದೆ.)

-Santhosh Kumar LM
25-Apr-2020




Saturday, April 18, 2020

ಕೆರಂಡಿರು..... (2003) Brazil movie

Carandiru (2003) - IMDb






ಮೊನ್ನೆ ರವೀಂದ್ರ ವೆಂಶಿಯವರು "ಕೆರಂಡಿರು" (2003) ಅನ್ನುವ ಬ್ರೆಜಿಲ್ ಸಿನಿಮಾ ಬಗ್ಗೆ ಹೇಳಿದರು. ಪೋರ್ಚುಗೀಸ್ ಭಾಷೆಯಲ್ಲಿರುವ ಸಿನಿಮಾ. ಬ್ರೆಜಿಲ್‍ನ ಸೆಂಟ್ರಲ್ ಜೈಲಿನಲ್ಲಿರುವ ಖೈದಿಗಳನ್ನು HIV ಪರೀಕ್ಷೆಗೊಳಪಡಿಸಲು ಬರುವ ವೈದ್ಯನೊಬ್ಬ ರಕ್ತದ ಮಾದರಿಯನ್ನು ಸಂಗ್ರಹಿಸುವಾಗ ಅವರನ್ನು ಮಾತಿಗೆಳೆದು ಅವರ ಹಿನ್ನೆಲೆಯನ್ನು ಕೇಳುತ್ತಾನೆ. ಮೊದಲೇ ಖೈದಿಗಳು. ಅವರಿಗೆ ಅವರ ಕೃತ್ಯದ ಬಗೆಗಿನ ಯಾವುದೇ ಅಪರಾಧಿ ಪ್ರಜ್ಞೆಯಿಲ್ಲ. ಹಾಗಾಗಿ ತಾವು ಜೈಲಿಗೆ ಬಂದ ಕಥೆಯನ್ನು ತಮ್ಮದೇ ರೀತಿಯಲ್ಲಿ ಹೇಳಿಕೊಳ್ಳುತ್ತಾರೆ. ಆ ಡಾಕ್ಟರ್ ಕೂಡ ಸರಿ-ತಪ್ಪು ಎಂಬಂತೆ ನೋಡದೆ ಅವರ ಮಾತುಗಳಿಗೆ ಕಿವಿಯಾಗುತ್ತಾನೆ. ಕೊನೆಯ ದೃಶ್ಯದಲ್ಲಿ 1992ರಲ್ಲಿ ಬ್ರೆಜಿಲ್‍ನ ಜೈಲೊಂದರಲ್ಲಿ ವಾಸ್ತವದಲ್ಲಿ ನಡೆದ ಮಾರಣಹೋಮ ತಳುಕುಹಾಕಿ ಸಿನಿಮಾ ಮುಗಿಯುತ್ತದೆ.

ಸಿನಿಮಾ ನೋಡುವಾಗ ಸಾಧಾರಣ ಅನ್ನಿಸಿತು. ಜೈಲು ಹೀಗೂ ಇರುತ್ತದಾ ಅನ್ನುವುದು ಆ ಅಭಿಪ್ರಾಯಕ್ಕೆ ಕಾರಣ. ಆದರೆ ನೋಡಿಯಾದ ಮೇಲೆ ಬ್ರೆಜಿಲ್ ದೇಶದ ಕಿಕ್ಕಿರಿದು ತುಂಬಿದ ಜೈಲುಗಳ ಬಗ್ಗೆ ಪುಟ್ಟ ವೀಡಿಯೋವೊಂದನ್ನು ನೋಡಿದ ಮೇಲೆ ಸಿನಿಮಾ ಯಾವ ವಿಷಯಗಳನ್ನು ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡಿದೆ ಅಂತ ಅರ್ಥವಾಯಿತು. ಎರಡು ಸಾವಿರ ಖೈದಿಗಳನ್ನು ಇಡಬಹುದಾದ ಜೈಲುಗಳಲ್ಲಿ ನಾಲ್ಕೂವರೆ ಸಾವಿರ ಖೈದಿಗಳನ್ನು ಕೂಡಿಡುವುದು. ಅಂದರೆ 1950ರಲ್ಲಿ ನಿರ್ಮಾಣವಾದ ಆ ಜೈಲಿನ ಕೆಲಕೋಣೆಗಳು ಇರುವುದೇ ಇಬ್ಬರನ್ನು ಕೂಡಿಹಾಕಲು. ಆದರೆ ಅಲ್ಲಿ ಸ್ಥಳದ ಅಭಾವ ಶುರುವಾದ ಮೇಲೆ ಎಂಟೊಂಭತ್ತು ಜನರನ್ನು ಕೂಡಿಹಾಕುವುದು. ಸರಿಯಾಗಿ ಗಾಳಿಯೂ ಬರದ ಕೋಣೆಗಳು. ಅಲ್ಲೇ ಗುಂಪುಘರ್ಷಣೆ ನಡೆಯುವುದು. ಖೈದಿಗಳಿಗೆ ಮಾದಕವಸ್ತುಗಳು ಸರಬರಾಜಾಗುವುದು. ನೀರಿಲ್ಲದೇ ಖೈದಿಗಳು ಕಷ್ಟಪಡುವುದು. ಸಲಿಂಗಿಗಳಿಗಾಗಿಯೇ ಬೇರೆ ಕೋಣೆಗಳು. ಶುಚಿತ್ವವಿಲ್ಲದೇ ಅನೇಕರಿಗೆ ಕ್ಷಯರೋಗ ಬರುವುದು. ಹೀಗೆ ಅಸಮರ್ಪಕ ನಿರ್ವಹಣೆಯಿಂದ ಒದ್ದಾಡುವ ಅನೇಕ ವಿಷಯಗಳಿವೆ. ಇವೆಲ್ಲವನ್ನು ಸಿನಿಮಾದಲ್ಲಿ ಸೂಚ್ಯವಾಗಿಯೇ ಹೇಳಲಾಗಿದೆ.

ಹಾಗೆಯೇ ಇಡೀ ಜೈಲಿಗೆ ಇದ್ದದ್ದು ಹದಿನೈದು ಸೆಕ್ಯೂರಿಟಿ ಗಾರ್ಡುಗಳು. ಕ್ಷುಲ್ಲಕ ಕಾರಣಕ್ಕೆ ಜೈಲಿನೊಳಗೆ ಶುರುವಾದ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಮಿಲಿಟರಿಯ ಸಹಾಯ ಕೋರಿದಾಗ ತಕ್ಷಣವೇ ಬರುವ ಮಿಲಿಟರಿ ಪಡೆ ಹಿಂದೆಮುಂದೆ ನೋಡದೆ 111 ಖೈದಿಗಳನ್ನು ಹತ್ಯೆಗೈದಿದ್ದು 1992ರಲ್ಲಿ. ಆ ಘಟನೆಯನ್ನು ಸಿನಿಮಾದ ಅಂತ್ಯಕ್ಕೆ ಬಳಸಿಕೊಳ್ಳಲಾಗಿದೆ. ಈ ಸಿನಿಮಾ ಚಿತ್ರೀಕರಣವಾಗಿದ್ದೂ ಅದೇ ಜೈಲಿನಲ್ಲಿ. 2002ರಲ್ಲಿ ಜೈಲು ಕಟ್ಟಡವನ್ನು ನೆಲಸಮ ಮಾಡಲಾಯಿತು.

ಅರ್ಥವಾಗಿದ್ದಿಷ್ಟು. ಕೆಲವು ಸಿನಿಮಾಗಳು ನೇರವಾಗಿ ನಮಗೆ ಮನರಂಜನೆ ಅಂತ ಕೆಲವೇ ವಿಷಯಗಳನ್ನು ಹೇಳಿದರೂ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಬೇರೆ ಬೇರೆ ವಿಷಯಗಳು ಅರ್ಥವಾಗುತ್ತವೆ.


-Santhosh Kumar LM
18-Apr-2020

Thursday, April 16, 2020

ದಿ ಬೆಸ್ಟ್ ಆ್ಯಕ್ಟರ್...Kannada (2019) Micro movie



ಕೆಲವೊಮ್ಮೆ ಎರಡೂವರೆ ಗಂಟೆಯ ಸಿನಿಮಾ ಹೇಳದ ವಿಷಯವೊಂದನ್ನು ಕಿರುಚಿತ್ರವೊಂದು ಸಮರ್ಥವಾಗಿ ಹೇಳಿಬಿಡುತ್ತದೆ. ಅಥವ ಕಿರುಚಿತ್ರವೊಂದರಲ್ಲಿ ಹೇಳಬಹುದಾದ ಕಥೆಯನ್ನು ಎರಡೂವರೆ ಗಂಟೆ ಸಿನಿಮಾದೊಳಗೆ ಹಾಕಿ ರಬ್ಬರಿನಂತೆ ಎಳೆದು ಪ್ರೇಕ್ಷಕನ ತಾಳ್ಮೆ ಪರೀಕ್ಷಿಸಲಾಗುತ್ತದೆ.


ಸಿನಿಮಾ ನಿರ್ದೇಶಕನೊಬ್ಬನಿಗೆ ತಾನು ಹೇಳುವ ಕಥಾವಸ್ತುವನ್ನು ಎಷ್ಟು ಅವಧಿಯೊಳಗೆ ಸಮರ್ಥವಾಗಿ ಹೇಳಬಲ್ಲೆ ಎಂಬ ಸ್ಪಷ್ಟತೆ ಇದ್ದರೆ ಅದೇ ಆತನ ಮೊದಲ ಯಶಸ್ಸು. "ದಿ ಬೆಸ್ಟ್ ಆ್ಯಕ್ಟರ್" ಸಿನಿಮಾ ಇದಕ್ಕೊಂದು ಉತ್ತಮ ಉದಾಹರಣೆ.


ಈ ಹಿಂದೆಯೇ ಈ ಸಿನಿಮಾ ನೋಡಿ ಬರೆದಿದ್ದೆ. ಇದೀಗ ಯೂಟ್ಯೂಬ್'ನಲ್ಲಿ ಮತ್ತೊಮ್ಮೆ ಬಿಡುಗಡೆಯಾದ್ದರಿಂದ ಇನ್ನೊಮ್ಮೆ ನೋಡುವ ಮನಸ್ಸಾಯಿತು. ಹಾಗಾಗಿ ಇದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೇನೆ. ಇದೊಂದು ಕನ್ನಡದ ಮೈಕ್ರೋ ಮೂವಿ. ಇದರ ಅವಧಿಯೇ ಕೇವಲ 44 ನಿಮಿಷಗಳು. ಆದರೆ ಎರಡೂವರೆ ಗಂಟೆಯ ಸಿನಿಮಾ ನೋಡಿದಾಗ ಸಿಗುವಾಗಿನ ತೃಪ್ತಿ ಈ ಮೈಕ್ರೋಮೂವಿ ನೋಡಿದಾಗ ಸಿಗುತ್ತದೆ.


ಎಲ್ಲರಿಗೂ ಕಲಾವಿದರಾಗಬೇಕೆಂಬ ಆಸೆಯಿರುತ್ತದೆ. ಅದರೆ ಒಳಗೆ ಪ್ರತಿಭೆಯಿದ್ದೂ ಎದೆಯೊಳಗೆ ಸಾಧಿಸಬೇಕೆಂಬ ಛಲವಿದ್ದೂ, ಹೊರಗಿನ ಪ್ರಪಂಚ ಆ ಆಸೆಗೆ ತಣ್ಣೀರೆರಚುವ, ತನಗೆ ತಾನು ಧೈರ್ಯ ಹೇಳಿಕೊಂಡು ಮುಂದೆ ಸಾಗಿದರೂ ಮತ್ತೆ ಹೊರಗಿನ ಪ್ರಪಂಚ "ನೀ ಬಣ್ಣ ಹಚ್ತೀನಿ ಅಂದ್ರೆ ಧರ್ಮಕ್ಕೂ ಸೇರಿಸಿಕೊಳ್ಳೋರು ಯಾರು ಇಲ್ಲ! " ಎಂದು ಹೀಯಾಳಿಸಿ, ಚಿಗುರುತ್ತಿರುವ ಆಕಾಂಕ್ಷೆಗೆ ಕೊಡಲಿಯೇಟು ಕೊಡುವ ವಸ್ತುವನ್ನಾಧರಿಸಿದ ಸಿನಿಮಾ. ಈ ಸಿನಿಮಾದಲ್ಲಿ ಗಿಡಗಳ ಮುಂದೆ ಕೂತು ತನ್ನ ಕಲೆಯನ್ನು ಅವುಗಳಿಗೆ ಪ್ರದರ್ಶಿಸುವ ಮಾಬ್ಲಣ್ಣನ ದೃಶ್ಯ ಪ್ರೋತ್ಸಾಹ ಕೊಡದ ಇಡೀ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ.


"ನಿರ್ಮಾಪಕನಿಗೆ ಸಿನಿಮಾದ ವ್ಯಾಕರಣ, ಅಭಿರುಚಿ ಚೆನ್ನಾಗಿದ್ದರೆ ಒಂದು ಕೆಟ್ಟ ಸ್ಕ್ರಿಪ್ಟ್ ಸಿನಿಮಾ ಆಗೋದು ತಪ್ಪುತ್ತೆ, ಒಂದು ಒಳ್ಳೆ ಸ್ಕ್ರಿಪ್ಟ್ ಕಸದ ಬುಟ್ಟಿ ಸೇರೋದು ತಪ್ಪುತ್ತೆ" ಅನ್ನುವ ಪಂಚಿಂಗ್ ಡೈಲಾಗೊಂದು ಈ ಸಿನಿಮಾದಲ್ಲಿದೆ. ಈ ಸಿನಿಮಾದ ನಿರ್ಮಾತೃಗಳಿಗೆ ಒಳ್ಳೆಯ ಅಭಿರುಚಿಯಿದ್ದುದರಿಂದಲೇ ಇಂಥ ಒಳ್ಲೆಯ ಸ್ಕ್ರಿಪ್ಟ್ ಸಿನಿಮಾ ಆಯಿತು ಎಂದು ಧೈರ್ಯವಾಗಿ ಹೇಳಬಹುದು.


"ಹಣ ಏನು ಬೇಕಾದರೂ ಸೃಷ್ಟಿ ಮಾಡುತ್ತೆ, ಸೃಜನಶೀಲತೆಯೊಂದನ್ನು ಬಿಟ್ಟು!"
"ಒಂದು ಹೆಣ್ಣು ತನ್ನ ಮಗುವಿಗೆ ಜನ್ಮ ಕೊಡುವಾಗ ಅನುಭವಿಸೋ ನೋವನ್ನು ನಟಿಸೋದು ಕಷ್ಟ"


ಇದಿಷ್ಟೇ ಅಲ್ಲ. ಸಂಭಾಷಣೆ ಕಡಿಮೆ ಇದ್ದರೂ ಸನ್ನಿವೇಶಕ್ಕೆ ತಕ್ಕ ಹಾಗೆ ಬರೆದ ಭಾಸ್ಕರ್ ಬಂಗೇರ (Bhaskar Bangera) ಅವರ ಇದೇ ಥರದ ಅನೇಕ ತೂಕದ ಸಾಲುಗಳಿವೆ. ಖುಶಿಯೆಂದರೆ ಕಥೆ ಯಾವ ಪರಿಸರದ ಹಿನ್ನೆಲೆಯಲ್ಲಿ ನಡೆಯುತ್ತದೋ ಅದೇ ಪರಿಸರದ ಕುಂದಾಪ್ರ ಕನ್ನಡವನ್ನು ಸಂಭಾಷಣೆಯಲ್ಲಿ ಬಳಸಿಕೊಂಡಿರುವುದು. ಈ ಕಾರಣದಿಂದಲೇ ಒಂದು ಕಥೆ ನಮ್ಮದಾಗುವುದು!


ಸಿನಿಮಾದ ನಿಜವಾದ ಹೀರೋ ಛಾಯಾಗ್ರಹಣ! ನದಿ, ಬಲೆ ಬೀಸುವ ಮೀನುಗಾರರು, ಹಸಿರು, ತುಳಿಯುವ ಸೈಕಲ್ಲಿಗೆ ಜಾಗ ಬಿಡುವ ಭೂಮಿ, ಬಿಸಿನೀರೊಲೆಯ ಹೊಗೆ, ಬೀಡಿ ಸೇದುವ ವೇಷತೊಟ್ಟ ಯಕ್ಷಗಾನ ಕಲಾವಿದ, ಹೀಗೆ ಪ್ರತೀ ದೃಶ್ಯವೂ ಕಟ್ಟನ್ನು ಹಾಕಿ ಗೋಡೆಗೆ ನೇತುಹಾಕುವಷ್ಟು ಸುಂದರವಾಗಿಯೂ ಹೊಸದಾಗಿಯೂ ಇವೆ. ಹಾಗಾಗಿಯೇ ಇದೇ ವಿಭಾಗಕ್ಕೆ ಪ್ರಶಸ್ತಿಗಳು ಬಂದಿರುವುದರಲ್ಲಿ ಅಚ್ಚರಿಯೇನಿಲ್ಲ. ಎರಡು ಮೂರು ದೃಶ್ಯಗಳಲ್ಲಿ ಬಳಸುವ ಟ್ರಾನ್ಸಿಷನ್ ಎಫೆಕ್ಟ್ ಕ್ಯಾಮೆರಾದ್ದೋ ಅಥವಾ ಸಂಕಲನಕಾರನದ್ದೋ ಅನ್ನುವಷ್ಟು ವಿಭಿನ್ನವಾಗಿದ್ದು ಅಚ್ಚರಿಯುಂಟು ಮಾಡುತ್ತವೆ.

ಸಂಚಾರಿ ವಿಜಯ್ ನಟನೆಯಲ್ಲಿ ಲವಲವಿಕೆಯಿದೆ. ಬಾಲಕಲಾವಿದರ ದಂಡೇ ಸಿನಿಮಾದ ಅನೇಕ ದೃಶ್ಯಗಳಲ್ಲಿದೆ.


ಆದರೆ ಸಿನಿಮಾ ಮುಗಿಯುವಾಗ ನಮ್ಮ ಮನಸ್ಸನ್ನು ಗೆಲ್ಲುವುದು ಮಾಬ್ಲಣ್ಣನ ಪಾತ್ರದ ಮಾಧವ ಕಾರ್ಕಡರವರು.


"ನಂಗೂ ಬಣ್ಣ ಅಂದರೆ ಇಷ್ಟ" ಅಂತ ಮಗನೊಂದಿಗೆ ಮಗುವಾಗುವ,
ಬಣ್ಣ ಹುಡುಕುತ್ತ ಚಿಕ್ಕಮಗುವಿನ ಕಾತುರ ತೋರುವ,
ಬೆರ್ಚಪ್ಪನ ಮುಖದ ಮೇಲಿನ ಬಣ್ಣವನ್ನೂ ನೋಡಿ ಅಸೂಯೆಪಡುವ,
ಅದೇ ಮರುಕ್ಷಣ ಬಣ್ಣ ಹಚ್ಚೇ ತೀರುವೆನೆಂದು ಬೆರ್ಚಪ್ಪನಿಗೆ ಸವಾಲು ಹಾಕುವ,
" ಕತ್ತಲಿಂದ ಬೆಳಕಿಗೆ ಬರ್ತಾರೆ ಅಂದ್ರೆ ಹೆಚ್ಚಿನ ಜನರು ದೀಪ ನಂದಿಸೋಕೆ ಯೋಚನೆ ಮಾಡ್ತಾರೆ... ಆದರೆ ನಮ್ಮೊಳಗೊಂದು ಕಿಚ್ಚಿದ್ದರೆ ಯಾರೇನೂ ಮಾಡೋಕೆ ಸಾಧ್ಯವಿಲ್ಲ" ಅಂತ ಒಳಗಿನ ಕಿಚ್ಚು ತೋರುವ,
"ನನಗೆ ಬಣ್ಣ ಯಾರೂ ಕೊಡುವವರಿಲ್ಲ...ನನಗೆ ನಾನೇ" ಅಂತ ಮರುಕಪಡುವ
ಬಣ್ಣ ಸಿಕ್ಕಾಗಿನ ಅದೇ ಮಗುವಿನ ಮೊಗದ ಹೊಳಪ ತೋರುವ ಅಭಿನಯದಲ್ಲಿ ಅವರು ನಮ್ಮನ್ನು ಮಂತ್ರಮುಗ್ಧನನ್ನಾಗಿ ಮಾಡುತ್ತಾರೆ.


ಈ ಸಿನಿಮಾದ ಕಥೆಗೆ ಸೂಕ್ತ ಕಲಾವಿದರಾದ ಮಾಧವ ಕಾರ್ಕಡ ಅವರನ್ನು ನಿರ್ದೇಶಕರು ಆಯ್ದುಕೊಂಡಿದ್ದಾರೆ.


ಗೆಳೆಯ, ಸಹೋದರ ನಾಗರಾಜ್ ಸೋಮಯಾಜಿ (Nagaraj Somayaji) ಅತ್ಮೀಯರೆಂದು ಇದೆಲ್ಲವನ್ನೂ ಹೇಳುತ್ತಿಲ್ಲ. ಯಾವುದೇ ಕೆಲಸವನ್ನು ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ನಾಟಕವಿರಬಹುದು, ಸಿನಿಮಾವಿರಬಹುದು, ಅವರ ಫೋಟೋಗ್ರಫಿಯ ವೃತ್ತಿಜೀವನದಲ್ಲೇ ಇರಬಹುದು. ಮೊದಲ ಪ್ರಯತ್ನವಾದರೂ ಪ್ರತಿಯೊಂದರಲ್ಲೂ ಅವರ ಶ್ರದ್ಧೆ, ಶಿಸ್ತು ಎದ್ದು ಕಾಣುತ್ತದೆ. ಬಹುತೇಕರು ಮಾಡುವಂತೆ ಚೊಚ್ಚಲ ಕಿರುಚಿತ್ರಕ್ಕಾಗಿ ಯಾವುದೋ ಅದೇ ಹಳೆಯ ಪ್ರೇಮಕಥೆಗಳನ್ನು ತೆಗೆದುಕೊಳ್ಳದೆ ಶ್ರೀಧರ ಬನವಾಸಿಯವರ ಕಥೆಯನ್ನು ಆಧರಿಸಿ ಸಿನಿಮಾವಾಗಿಸಿದ್ದಾರೆ. ಮುಂದೆಯೂ ಸಾಹಿತ್ಯವನ್ನಾಧರಿಸಿದ ಸಿನಿಮಾಗಳು ಅವರಿಂದ ಮೂಡಿ ಬರಲಿ ಎಂದು ಆಶಿಸುತ್ತ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಕೋರೋಣ.


ಕೊರೋನಾ ಟೈಮಿನಲ್ಲಿ ಮನೆಯಲ್ಲೇ ಕುಳಿತು ಏನು ಮಾಡಬೇಕೆಂದು ತೋಚದಿರುವ ಪರಿಸ್ಥಿತಿಯಲ್ಲಿ ಈ ಸಿನಿಮಾ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ.


ನೋಡದಿದ್ದವರು ಒಮ್ಮೆ ನೋಡಿ. ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತದೆ. ನೋಡಿ, ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಚೊಚ್ಚಲ ಪ್ರಯತ್ನಕ್ಕೆ ಬೆನ್ನು ತಟ್ಟಿ.


-Santhosh Kumar LM
16-Apr-2020

Monday, April 13, 2020

ಕುರಂಗು ಬೊಮ್ಮೈ ....2017 Tamil Movie

Kurangu Bommai Movie Poster (#3 of 3) - IMP Awards

ಯುವನಿರ್ದೇಶಕರುಗಳಿಗೆ ಆಧಾರವಾಗಿ ದೊಡ್ಡ ಬಜೆಟ್'ನ ಪ್ರಾಜೆಕ್ಟುಗಳು ಸಿಗುವುದು ಕಷ್ಟ. ಹಾಗಾಗಿಯೇ ಅನೇಕ ಪ್ರತಿಭಾವಂತರು ತಮಗೆ ಸಿಗುವ ಕಡಿಮೆ ಬಜೆಟ್ಟಿನಲ್ಲೇ ಒಳ್ಳೆಯ ಸಿನಿಮಾ ಮಾಡುವ ಒತ್ತಡಕ್ಕೆ ಸಿಲುಕುತ್ತಾರೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಈ ಬಗೆಯ ಅನೇಕ ಸಿನಿಮಾಗಳು ತಮಿಳಿನಲ್ಲಿ ಬಂದಿವೆ. ಖುಶಿಯ ವಿಚಾರವೆಂದರೆ ಒಳ್ಳೆಯ ಪ್ರಯತ್ನಗಳಿಗೆ ತಮಿಳು ಚಿತ್ರರಂಗ ಒಳ್ಳೆಯ ಬೆಂಬಲ ಕೊಡುತ್ತದೆ.


ಕಡಿಮೆ ಬಜೆಟ್ ಅಂತ ಅನ್ನಿಸಿದರೂ ಸಿನಿಮಾ ಹೇಳುವ ಕಥೆ ಕುತೂಹಲ ಹುಟ್ಟಿಸುವಲ್ಲಿ ಎಲ್ಲಿಯೂ ನಿರಾಶೆ ಮಾಡುವುದಿಲ್ಲ. ಅಂತ ಸಿನಿಮಾಗಳ ಪೈಕಿ 2017ರಲ್ಲಿ ಬಿಡುಗಡೆಯಾದ ನಿಥಿಲನ್ ಚೊಚ್ಚಲ ನಿರ್ದೇಶನದ ಸಿನಿಮಾ "ಕುರಂಗು ಬೊಮ್ಮೈ" ಕೂಡ ಒಂದು. ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾದ ಕಥೆ ನಮಗೆ ಸಾಧಾರಣ ಅನ್ನಿಸಬಹುದು. ಆದರೆ ಆ ಕಥೆಯನ್ನು ಹೇಳುವ ರೀತಿ ಮುದ ಕೊಡುತ್ತದೆ. ಇಲ್ಲೂ ಸಹ non-linear ಶೈಲಿಯನ್ನೇ ಅಳವಡಿಸಿಕೊಂಡಿದ್ದರೂ ಪ್ರೇಕ್ಷಕನಿಗೆ ಗೊಂದಲವಾಗುವುದಿಲ್ಲ. ಅದರ ಬದಲಾಗಿ ಆ ಶೈಲಿಯೇ ಕಥೆಯನ್ನು ಸಿನಿಮಾಂತ್ಯದವರೆಗೆ ಕೊಂಚ ಕೊಂಚವೇ ಅನಾವರಣಗೊಳಿಸುತ್ತ ಸಾಗುತ್ತದೆ.


ಸಿನಿಮಾದ ನಾಯಕನಟ "ಕುಟ್ರಮೇ ದಂಡನೈ" ಸಿನಿಮಾದಲ್ಲೂ ನಟಿಸಿದ್ದ ವಿದಾರ್ಥ್, ಎಂದಿನಂತೆ ಯಾವುದೇ ಹೀರೋಯಿಸಂ ತೋರಿಸದ ನಟನೆ. ಆದರೆ ಈ ಸಿನಿಮಾದಲ್ಲಿ ಗಮನ ಸೆಳೆಯುವುದು ಸ್ಲಗ್ಗರ್ ಪಾತ್ರದಲ್ಲಿ ನಟಿಸಿರುವ ಇದೇ ಸಿನಿಮಾದ ನಿರ್ಮಾಪಕ ತೇನಪ್ಪನ್. ಅದಕ್ಕಿಂತ ಮುಖ್ಯವಾಗಿ ನಾಯಕನ ಅಪ್ಪನ ಪಾತ್ರದಲ್ಲಿ ನಟಿಸಿರುವ ಹಿರಿಯ ನಿರ್ದೇಶಕ ಬಿ.ಭಾರತಿರಾಜಾ. ಕಳ್ಳನ ಜೊತೆ ಸೇರುವ ಅವಶ್ಯಕತೆಯೇನಿತ್ತು ಅನ್ನುವ ಪ್ರಶ್ನೆಗೆ ಭಾರತಿರಾಜಾ ಹೇಳುವ ಪ್ರತಿಕ್ರಿಯೆಯಲ್ಲಿ ಒಂದು ಪುಟ್ಟ ಕಥೆಯಿದೆ. ನಿಮಗೆ ತಮಿಳು ಬರುವುದಾದರೆ ಆ ಕಥೆ ಕೇಳುವಾಗಲೇ ಆ ಪಾತ್ರದ ಬಗ್ಗೆ ಮನಸ್ಸಿನಲ್ಲೊಂದು ಅನುಕಂಪ ಮೂಡಿ ಸಿನಿಮಾದ ಬಗೆಗಿನ ಮೂಡ್ ಬದಲಾಗುತ್ತದೆ. ಈ ಸಂಭಾಷಣೆಯಿರದಿದ್ದರೆ ಆ ಸಿನಿಮಾ ತೂಕ ಕಡಿಮೆಯಾಗಿರುತ್ತಿತ್ತು.


ಸಿನಿಮಾದ ಕಥೆಯಲ್ಲೂ ಎಲ್ಲೂ ಇದು ಒಳ್ಳೆಯದು, ಇದು ಕೆಟ್ಟದ್ದು ಅಂತ ಕಪ್ಪು-ಬಿಳುಪಾಗಿ ಏನನ್ನೂ ತೋರಿಸಿಲ್ಲ. ಆದರೆ ಹಣಕ್ಕಾಗಿ ದುರಾಸೆಪಡುವ ಸಮಾಜದ ಮುಖವನ್ನು ಇಡೀ ಸಿನಿಮಾದಲ್ಲಿ ಕೋತಿಗೆ ದೃಷ್ಟಾಂತವಾಗಿ ತೋರಿಸಲಾಗಿದೆ. ವಿಶೇಷವೆಂದರೆ ನಮ್ಮ ಕನ್ನಡದ ಅಜನೀಶ್ ಲೋಕನಾಥ್ ಅವರು ಈ ಸಿನಿಮಾದ ಮೂಲಕ ತಮಿಳಿಗೂ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ಶುಭ ಹಾರೈಸೋಣ.


ನೋಡಿರದಿದ್ದರೆ ಏನೂ expectation ಇಲ್ಲದೆ ನೋಡಿ, ಇಷ್ಟವಾಗಬಹುದು. ಒಮ್ಮೆಯಂತೂ ನೋಡಲಡ್ಡಿಯಿಲ್ಲ.


Cinema Recommended by: ಎ ಎಸ್ ಜಿ.
Thank you 🙂


-Santhosh Kumar LM
13-Apr-2020

Tuesday, April 7, 2020

HIT.....2020 (Telugu)

Hit : The First Case (2020) - Review, Star Cast, News, Photos ...


HIT: The First Case (2020, Telugu, Suspense thriller)

ದುರುವಂಗಳ್ ಪದಿನಾರು ಸಿನಿಮಾದ ನಂತರ ಅದರಷ್ಟೇ ಕಿಕ್ ಕೊಟ್ಟ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಕಥೆಯೊಂದು ಚೆನ್ನಾಗಿದ್ದರೆ ಬೇರೇನೂ ಅಷ್ಟೊಂದು ಸಮಸ್ಯೆಯೇ ಆಗುವುದಿಲ್ಲ ಅನ್ನುವುದಕ್ಕೆ ಈ ಸಿನಿಮಾ ಒಳ್ಳೆಯ ಉದಾಹರಣೆ.

ಅಪಹರಣ, ರಹಸ್ಯ, ಕುತೂಹಲ ಕಡೆಯವರೆಗೂ ಕಾಯ್ದುಕೊಳ್ಳುವಿಕೆ. ನಾಯಕನಂತೆಯೇ ನಮಗೂ ಏನಾಗಿದೆಯೆಂದು ಅರ್ಥವಾಗದ ಗೊಂದಲ, ಕ್ಲೂ ಸಿಕ್ಕರೂ ಅದರಿಂದ ಏನೂ ಅರ್ಥವಾಗದ ಕ್ಲಿಷ್ಟ ಪ್ರಕರಣ, ಸಮಸ್ಯೆಯಾಗಿ ಕಾಡುವ ನಾಯಕನ ಹಿನ್ನೆಲೆ ಹೀಗೆ ಸಸ್ಪೆನ್ಸ್ ಥ್ರಿಲ್ಲರ್'ಗೆ ಬೇಕಾಗುವ ಎಲ್ಲ ಅಂಶಗಳೂ ಕಥೆಯಲ್ಲಿವೆ. ಒಂದೆರಡು ಕಡೆಗಳಲ್ಲಿ ಕೊಡುವ ಸಮಜಾಯಿಷಿ ನಮ್ಮನ್ನು ಸಮಾಧಾನಪಡಿಸದಿದ್ದರೂ ಕಥೆಯ ದೃಷ್ಟಿಯಿಂದ ಎಲ್ಲೂ ಲೋಪವೆನಿಸಿಕೊಂಡಿಲ್ಲ. ಸಿನಿಮಾದ ಆರಂಭದಲ್ಲಿ ಕಥಾನಾಯಕನ ಬುದ್ಧಿಮತ್ತೆಯನ್ನು ಪ್ರೇಕ್ಷಕನಿಗೆ ಪರಿಚಯಿಸಲು ತೋರಿಸುವ ಎರಡು ಪ್ರಸಂಗಗಳೂ ಸಹ ರಸವತ್ತಾಗಿವೆ.

ತನ್ನ ಹಿನ್ನೆಲೆಯೇ ತನ್ನ ಕೆಲಸದ ಮಧ್ಯೆ ಕಾಡಿಸುವ, ಅದರಿಂದ ವಿಚಲಿತನಾದರೂ ಕೆಲಸದ ವಿಷಯದಲ್ಲಿ ಯಾವುದೇ ರಾಜಿ ತೋರದ ನಾಯಕನ ಪಾತ್ರದಲ್ಲಿ ವಿಶ್ವಾಕ್ ಸೇನ್ ಸಹಜವಾಗಿ ಅಭಿನಯಿಸಿದ್ದಾರೆ. ಸಿನಿಮಾದ ಸಸ್ಪೆನ್ಸ್ ಬಯಲಾದ ಮೇಲೆ ಮತ್ತೊಮ್ಮೆ ಮೊದಲಿನಿಂದ ಯೋಚಿಸಿದರೆ ಸಿನಿಮಾದ ಕಥೆಯನ್ನು ಹೆಣೆಯಲು ಎಷ್ಟು ಶ್ರಮ-ಶ್ರದ್ಧೆವಹಿಸಿದ್ದಾರೆ ಅಂತ ಅರ್ಥವಾಗುತ್ತದೆ. ಪ್ರೇಕ್ಷಕನ ಆಲೋಚನೆಯನ್ನು ಬೇರೆ ಬೇರೆ ವಿಷಯಗಳತ್ತ ಹರಿಸಿ ಗೊಂದಲವನ್ನುಂಟು ಮಾಡಲು ಇಲ್ಲಿ ಆಯ್ದುಕೊಂಡಿರುವ ಮಾರ್ಗವೂ ಮೆಚ್ಚುಗೆ ತರುವಂಥದ್ದು. ಇದರಿಂದಲೇ ಕಥೆಯುದ್ದಕ್ಕೂ ಪ್ರೇಕ್ಷಕ ಅಪರಾಧಿ ಇವನಿರಬಹುದೇ ಎಂದು ಪ್ರತೀ ಪಾತ್ರದ ಬಗ್ಗೆ ಯೋಚಿಸುತ್ತಲೇ ಇರುತ್ತಾನೆ.

ನೋಡಿರದಿದ್ದರೇ ಇಂದೇ ನೋಡಿ..... ಅಮೇಜಾನ್ ಪ್ರೈಮ್'ನಲ್ಲಿದೆ.

-Santhosh Kumar LM
07-Apr-2020

Saturday, April 4, 2020

Don't Breathe...... (2016) English Movie





Don't Breathe (2016) Horror, Thriller

ಅವರು ಮೂವರು ಚಿಕ್ಕ ಪುಟ್ಟ ಕಳ್ಳತನ ಮಾಡಿಕೊಂಡು ಬದುಕು ನಡೆಸುತ್ತಿರುವವರು. ಈಗ ಅವರಿಗೆ ಆ ಬಗೆಯ ಜೀವನ ಶೈಲಿ ಬೇಸರವಾಗಿದೆ. ಈಗೀಗ ಅವರು ಕಳ್ಳತನ ಮಾಡುವ ವಸ್ತುಗಳಿಗೂ ಮಧ್ಯವರ್ತಿಯಿಂದ ಸರಿಯಾದ ಬೆಲೆ ಸಿಗುತ್ತಿಲ್ಲ. ಹಾಗಾಗಿ ಕೊಂಚ ದೊಡ್ಡದೇ ಆದರೂ ಹೆಚ್ಚು ಹಣ ಸಿಗುವ ದರೋಡೆಯೊಂದನ್ನು ಮಾಡಿ ಬೇರೆ ಸ್ಥಳಕ್ಕೆ ಹೋಗಿ ನೆಲೆಸಬೇಕೆಂಬ ನಿರ್ಧಾರ ಮಾಡುತ್ತಾರೆ.

ಹೆಚ್ಚು ಜನ ಓಡಾಡದ ಪ್ರದೇಶದಲ್ಲಿ ಒಂದು ಮನೆಯಿದೆ. ಅಲ್ಲಿ ಒಬ್ಬ ನಿವೃತ್ತ ಸೇನಾಧಿಕಾರಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾನೆ. ಸೇನೆಯಲ್ಲಿದ್ದಾಗ ನಡೆದ ಬಾಂಬ್ ದಾಳಿಯಲ್ಲಿ ಆತನ ಕಣ್ಣು ಹೋಗಿ ಆತ ಕುರುಡನಾಗಿದ್ದಾನೆ. ಅವನ ಮಗಳು ಅಪಘಾತವೊಂದರಲ್ಲಿ ತೀರಿಹೋಗಿದ್ದರಿಂದ ಪರಿಹಾರದ ಹಣವಾಗಿ ದೊಡ್ಡ ಮೊತ್ತ ಅವನ ಕೈಸೇರಿದ ಮಾಹಿತಿ ಇವರಿಗೆ ಸಿಗುತ್ತದೆ.

ಈ ಮೂವರೂ ಅವನ ಮನೆಗೆ ಕನ್ನ ಹಾಕುತ್ತಾರೆ. ಅಲ್ಲಿಂದ ನಿಜವಾದ ಪರದಾಟ ಶುರುವಾಗುತ್ತದೆ. ಆ ಜಟಾಪಟಿಯಲ್ಲಿ ಯಾರು ಗೆಲ್ಲುತ್ತಾರೆ ಅನ್ನುವುದೇ ಕಥೆ.

2016 ರಲ್ಲಿ ಬಿಡುಗಡೆಯಾದ ಈ ಸಿನಿಮಾದ ಹೆಸರು "Dont Breathe". ಇರುವುದೇ ಒಂದೂವರೆ ಗಂಟೆಗೂ ಕಡಿಮೆ ಅವಧಿಯ ಸಿನಿಮಾ. ಆದರೆ ನಾವೇ ಆ ಮನೆಯೊಳಗೆ ಕನ್ನ ಹಾಕಹೋಗಿ ಸಿಕ್ಕಿಕೊಂಡ ಉಸಿರುಗಟ್ಟಿದ ಫೀಲಾಗುತ್ತದೆ. ಹಾರರ್ ಅನ್ನಿಸುವಂತೆ ಚಿತ್ರೀಕರಿಸಲಾಗಿದೆಯಾದರೂ ಸಂಪೂರ್ಣ ಥ್ರಿಲ್ಲರ್ ಸಿನಿಮಾ. ಜಾಸ್ತಿ ಅರ್ಥ ಮಾಡಿಕೊಳ್ಳಲು ಏನೂ ಇರಬಾರದು. ಆದರೆ ಥ್ರಿಲ್ ಸಿಗುವ ಸಿನಿಮಾ ನೋಡಬೇಕು ಅಂತ ಬಯಸುವ ಸಿನಿಮಾ-ಪ್ರೇಮಿಗಳಿಗೆ ಹೇಳಿ ಮಾಡಿಸಿದ ಸಿನಿಮಾ. ಇಡೀ ಸಿನಿಮಾದಲ್ಲಿ ನಿಶ್ಯಬ್ದವೇ ಹಿನ್ನೆಲೆ ಸಂಗೀತ. ಉಸಿರಾಡಿದರೂ ಇನ್ನೊಬ್ಬರಿಗೆ ಕೇಳಿಸಿಬಿಡುತ್ತದೇನೋ ಅನ್ನಿಸುವಿಕೆ. ಹಾಗಾಗಿ ಸಿನಿಮಾದ ಹೆಸರೂ ಕೂಡ ಸರಿಯಾಗಿಯೇ ಸಮಂಜಸವಾಗಿದೆ.

ಮಜಾ ಅಂದರೆ ಈ ಸಿನಿಮಾದ ಕಥೆಯನ್ನು ಆ ಕಳ್ಳತನ ಮಾಡುವವರ ದೃಷ್ಟಿಕೋನದಿಂದ ತೆಗೆಯಲಾಗಿದೆ. ಸಿನಿಮಾ ನೋಡುವಾಗ ಯಾವ ಅಂಶ ನಮಗೆ ಭಯ ಹುಟ್ಟಿಸುತ್ತಿದೆ ಅಂತಲೇ ಕೆಲಕಾಲ ತಬ್ಬಿಬ್ಬಾಗುತ್ತೇವೆ. ಏಕೆಂದರೆ ವೀಕ್ಷಕನ ಮನಸ್ಸು ಆ ಕಳ್ಳತನ ಮಾಡುತ್ತಿರುವವರ ಪರವಾಗಲಿ ಅಥವ ತನ್ನ ಮನೆಗೆ ನುಗ್ಗಿದವರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪರದಾಡುವ ಕುರುಡ ಸೇನಾಧಿಕಾರಿಯ ಪರವಾಗಲಿ ಇರುವುದಿಲ್ಲ. ಈ ವಿಭಿನ್ನತೆಯೇ ಈ ಸಿನಿಮಾದಲ್ಲಿ ಇಷ್ಟವಾಯಿತು.

ಈ ಸಿನಿಮಾದ ಎರಡನೇ ಭಾಗಕ್ಕೆ ಈಗಾಗಲೇ ಸಿದ್ಧತೆ ನಡೆದಿದ್ದು, ಆ ಚಿತ್ರತಂಡ ಮುಂದಿನ ವರ್ಷಕ್ಕೆ ಬಿಡುಗಡೆ ಮಾಡುವ ಆಶಯ ಹೊಂದಿದೆಯಂತೆ.

ಥ್ರಿಲ್ಲರ್ ಪ್ರಿಯರಿಗೆ ಒಂದೂವರೆ ಗಂಟೆ ಭರಪೂರ ಮನರಂಜನೆ ಕೊಡುವ ಸಿನಿಮಾ....ನೆಟ್‍ಫ್ಲಿಕ್ಸ್'ನಲ್ಲಿದೆ. ತಪ್ಪದೇ ನೋಡಿ!

-Santhosh Kumar LM
04-Apr-2020

Thursday, April 2, 2020

ರಾಮಾ ರಾಮಾ ರೇ....2016 (Kannada Cinema)

Satya Prakash's Rama Rama Re is out on YouTube- Cinema express ಈ ಚಿತ್ರ ಬಿಡುಗಡೆಯಾಗಿದ್ದಾಗ ಮಲೇಷ್ಯಾದಲ್ಲಿದ್ದೆ. ನೋಡಲು ಸಾಧ್ಯವಾಗಿರಲಿಲ್ಲ.


ಕಡೆಗೂ ಇಂದು ಈ ಚಿತ್ರವನ್ನು ನೋಡಿದೆ. ನೆಟ್‍ಫ್ಲಿಕ್ಸ್'ನಲ್ಲಿದ್ದ ಸಿನಿಮಾವನ್ನು ನೋಡದೆ ಕಡೆಗೊಂದು ದಿನ ಹುಡುಕಿದಾಗ ತೆಗೆದು ಹಾಕಿದ್ದರು. ಇದೀಗ ಯೂಟ್ಯೂಬ್'ನಲ್ಲಿ ಬಿಡುಗಡೆಯಾಗಿದೆ.


ವಿಶೇಷವೆಂದರೆ ಇಂದು ರಾಮನವಮಿಯ ದಿನವೇ "ರಾಮಾ ರಾಮಾ ರೇ" ಸಿನಿಮಾ ನೋಡುವಂತಾಯಿತು.


ಅದ್ಭುತ ಸಿನಿಮಾ...ನಾಲ್ಕು ವರ್ಷದ ಹಿಂದಿನದ್ದು......ನೀವಾಗಲೇ ನೋಡಿರುತ್ತೀರಿ. ಹೇಳಲೇನೂ ಉಳಿದಿಲ್ಲ. ಕಾನ್ಸೆಪ್ಟ್, ಕಲಾವಿದರು, ಹಿನ್ನೆಲೆ ಸಂಗೀತ, "ಕೇಳು ಕೃಷ್ಣ, ಹೇಳು ಪಾರ್ಥ" ಹಾಡು, ಜೀಪು, ಹಸಿರೇ ಇಲ್ಲದ ನೀರು ಕಾಣದ ಒಣ ಭೂಮಿ, ಬಿಸಿಲು, ಜನರು, ಅವರದೇ ಆದ ಆದ್ಯತೆಗಳು, ಆಸೆ, ಮಾನವೀಯತೆ, ಭಗವದ್ಗೀತೆಯ ಸಾರ, ಅತ್ಯುತ್ತಮ ಅಂತ್ಯ .....ಇತ್ಯಾದಿತ್ಯಾದಿ


ಕೆಲವು ಕಡೆಯಂತೂ ಗಂಟಲುಬ್ಬಿ ಬರುವ ನಿರೂಪಣೆ.


ನೀವಿನ್ನೂ ನೋಡಿರದಿದ್ದರೆ ನೋಡಲೇಬೇಕಾದ ಕನ್ನಡದ ಸಿನಿಮಾ...ನೋಡಿ.


-Santhosh kumar LM
02-Apr-2020