Saturday, December 17, 2011

ಗೋಜಲು



ಕಣ್ಣು ಮುಚ್ಚಿ ಗಾಢಾಂಧಕಾರದಲಿ,
ನಡೆಯುತಲಿರಲು ದೂರ ದೂರ.
ಮನದಲೇಕೋ ನಡುಕ,
ಸುತ್ತಮುತ್ತಲು ಗೋಜಲು, ಹೃದಯ ಭಾರ ಭಾರ.

ಅರಿವೆಗಳ ಅರಿವಿಲ್ಲ, ನಕಾಶೆಗಳ ಸುಳಿವಿಲ್ಲ,
ಗುರಿಯಂತೂ ಮೊದಲೇ ಇಲ್ಲ.
ಸವೆಯುತಲಿರುವ ಪಾದಗಳಿಗೆ ರಕ್ಷೆಗಳ ಹಂಗಿಲ್ಲ,
ಎದೆಯಲೇನೋ ವೇದನೆ,
ಹೇಳಲು ಪದಗಳಿಲ್ಲ.

ಕಷ್ಟಸುಖಗಳೇನೋ, ಬಂಧಗಳ ಬಂಧನವೇನೋ,
ಮಡಚಿಟ್ಟ ಹೊತ್ತಿಗೆಯಲ್ಲಿ ಬರೆದಿರುವುದೇನೋ.
ಎಲ್ಲಾಗುವುದು ಉದಯ, ಅಸ್ತವಾಗುವ ಸಮಯ,
ಕೇಳುವವರಾರಿಲ್ಲ, ಗಳಿಸಿಡುವುದೇನೋ.

ಕಂಡ ಕಣ್ಣುಗಳಿಲ್ಲ, ಹಿಂತಿರುಗಿ ಬಂದವರಿಲ್ಲ,
ಸ್ಪಷ್ಟ ಚಿತ್ರಗಳಂತೂ ಕಲ್ಪನೆಯಂತೆ.
ಹೊತ್ತು ಹೋದವರಿಲ್ಲ, ಗಳಿಸಿ ಬಂದವರಿಲ್ಲ,
ಕನಸು ನನಸುಗಳ ಬರೀ ಜಾತ್ರೆಯಂತೆ.

ಊಹಾ ಚಿತ್ರಗಳ ಕಂತೆಗಳೆದುರಲ್ಲಿ ,
ಹೆಗಲ ಮೇಲೇನೋ ಹೆಣಭಾರ.
ಚೈತನ್ಯವಿಲ್ಲ , ಅರೆಗಣ್ಣುಗಳಲ್ಲಿ,
ನೆತ್ತರುಕ್ಕುತಲಿದೆ ಧಾರಾಕಾರ.

ಅಳುನಗು ಕಷ್ಟಸುಖ, ನೋಡಿಯೂ ಇಲ್ಲ ನನ್ನ ಮುಖ,
ಮರೆತು ನಿಂತರೆ ಏಕೋ ದ್ವಂದ್ವವೆನಿಸಲಿಲ್ಲ.
ಶೂನ್ಯಲೋಕದ ಕಡೆಗೆ ತಾತ್ಸಾರ ದೃಷ್ಟಿಯನಿಟ್ಟೆ,
ಅಲ್ಲಿ ಯಾಕೋ......ಹುಟ್ಟಬೇಕೆನಿಸಲಿಲ್ಲ!!


-ಸಂತು





















 
















Saturday, September 17, 2011

ಕಲಕುವ ಚಿತ್ರಗಳು

ಓದುವ ಮುನ್ನ..

ಇಲ್ಲಿ ಬರೆದಿರುವ ಯಾವುದೇ ಘಟನೆಗಳು ನಿಜವಾಗಿಯೂ ಎಲ್ಲಿಯೂ ನಡೆದಂಥವಲ್ಲ. ಆದರೆ ಇಲ್ಲಿನ ಪ್ರತಿಯೊಂದು ಘಟನೆಗಳು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ನಡೆಯುವಂಥವು. ಅಥವಾ ನಮ್ಮ ಸುತ್ತಮುತ್ತಲ ಬಂಧು ಮಿತ್ರರ ಬಳಗದಲ್ಲಿ ನಡೆಯುವುದನ್ನು ನಾವು ನೋದಿರುವಂತಹವು.
ಇಲ್ಲನ ಎಲ್ಲ ಘಟನೆಗಳಲ್ಲೂ ಒಂದಕ್ಕೊಂದಕ್ಕೆ ಏನೂ ಸಂಬಂಧವಿಲ್ಲ. ಆದರೆ ಪ್ರತೀ ಘಟನೆಯ ಕೊನೆಯ ಸಾಲು ಮುಗಿದ ನಂತರ ಇನ್ನೇನೋ ಹೇಳಬೇಕೆನಿಸುತ್ತದೆ. ಆದರೆ ಆ ಪ್ರಯತ್ನವನ್ನು ಅಲ್ಲಿಗೆ ನಿಲ್ಲಿಸಿ ಉಳಿದದ್ದನ್ನು ಅಥವಾ ಉಂಟಾಗುವ ಅನುಭವವನ್ನು ಕೇವಲ ಓದುಗನ ಸುಪರ್ದಿಗೆ ವಹಿಸಿರುತ್ತೇನೆ.
ನಿಮ್ಮವನು,
ಸಂತು.

Thursday, February 24, 2011

ನೆನಪುಗಳ ಮೆಲುಕು

ಸುಮಾರು ವರ್ಷಗಳ ಹಿಂದಿನ ಮಾತು. ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮದೊಂದು ಸರ್ಕಾರಿ ಶಾಲೆ. ಇಡೀ ನನ್ನಶಾಲಾ ಜೀವನದಲ್ಲಿ ನಾನು ಪಠ್ಯಪುಸ್ತಕಗಳನ್ನು ಹೊಸದಾಗಿ ಕೊಂಡು ಓದಲೇ ಇಲ್ಲ. ನನ್ನ ಹಿರಿಯ ಮಿತ್ರರೆಲ್ಲ ತಮ್ಮ ಪುಸ್ತಕಗಳನ್ನೆಲ್ಲನನಗೆ ಕೊಟ್ಟುಬಿಡುತ್ತಿದ್ದರು.
ಹಳೆಯ ಪುಸ್ತಕ, ಹೊಸ ವಿದ್ಯಾರ್ಥಿ!!!
ಊಟಕ್ಕೆ ತೊಂದರೆಯಿಲ್ಲದಿದ್ದರೂ ಮನೆಯಲ್ಲಿ ಹಣಕಾಸಿನ ವ್ಯವಹಾರ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದಾಯವೇನಿದ್ದರೂ ವ್ಯವಸಾಯದಲ್ಲಿ. ಅದೂ ವರ್ಷಕೊಮ್ಮೆ. ವ್ಯವಸಾಯವೆಂಬುದಂತೂ ಹಳ್ಳಿಗರಿಗೆ ಲಾಟರಿಯಿದ್ದ ಹಾಗೆ. ಮಳೆ ಚೆನ್ನಾಗಿ ಕಾಲಕಾಲಕ್ಕೆ ಬಂದರೆ ಆ ವರ್ಷ ಬಂಪರ್. ಇಲ್ಲದಿದ್ದರೆ ಭಾರಿ ನಷ್ಟ. ಜತೆಗೆ ತಲೆ ಮೇಲೆ ಮತ್ತಷ್ಟು ಸಾಲ. ಮನೆಯಲ್ಲಿ ಸಂಪಾದನೆ ಮಾಡುವ ಬೇರೆ ಯಾವುದೇ ದಾರಿಯಿರಲಿಲ್ಲ. ಕಡೇಪಕ್ಷ ತರಕಾರಿ ತರಲೂ ಕೈಯಲ್ಲಿ ಕಾಸಿಲ್ಲದಂತಾಗಿ ಹೋಯಿತು. ಕಷ್ಟ ನುಂಗದೆ ಬೇರೆ ವಿಧಿಯಿರಲಿಲ್ಲ.

ನಮ್ಮ ಮನೆಯ ಹಿತ್ತಿಲಿನಲ್ಲಿ ಒಂದು ಸೀಬೇಕಾಯಿ ಮರವಿತ್ತು. ನೋಡಲು ಬಹಳ ಪುಟ್ಟದಾಗಿದ್ದರೂ ಸಮಯ ಬಂದಾಗ ಭಾರವಾಗುವಷ್ಟು ಸೀಬೆಹಣ್ಣು ಬಿಡುತ್ತಿತ್ತು. ಹಿತ್ತಿಲಿಗೆ ಯಾವಾಗಲೊಮ್ಮೆ ಹೋದರಂತೂ ಸೀಬೆಹಣ್ಣಿನ ಘಮ ತಲೆಗೆ ಹತ್ತುವಷ್ಟು ಬರುತ್ತಿತ್ತು. ಹಣ್ಣಿನ ಗೊಂಚಲುಗಳನ್ನು ನೋಡಿದರೇ ಸಾಕು, ಬಾಯಿ ತುಂಬ ನೀರು...

ಒಂದು ದಿನ ಹೀಗೆ.. ಏನೋ ಆಲೋಚನೆ ಬಂದಿದ್ದೇ ತಡ ಬೆಳಿಗ್ಗೆ ಬೇಗನೆ 6 ಗಂಟೆಗೆ ಎದ್ದು ಹಿತ್ತಲಿಗೆ ಹೋಗಿ ಮರಹತ್ತಿದೆ. ಹಣ್ಣಾಗಿ ಇನ್ನೇನು ಬೀಳುತ್ತವೇನೂ ಅನ್ನುವಂತಿದ್ದ ಹಣ್ಣುಗಳನ್ನೆಲ್ಲ ಕೊಯ್ದು ಪ್ಲಾಸ್ಟಿಕ್ ಕವರ್ ಗೆ ಹಾಕಿಕೊಂಡೆ. ಕವರ್ ಪೂರ ಭರ್ತಿ.
ಶಾಲೆ ಆರಂಭವಾಗೋದು 10 ಗಂಟೆಗೆ. 8 ಗಂಟೆಗೆಲ್ಲ ಶಾಲೆಯ ಆಟದ ಮೈದಾನದಲ್ಲಿ ಹಾಜರು. ಆಗಾಗಲೇ ಬಹಳಷ್ಟು ಶಾಲೆಯ ಹುಡುಗರು ಬಂದಿರುತ್ತಿದ್ದರು. ಅವರೆಲ್ಲರಿಗೂ ಸೀಬೆಹಣ್ಣುಗಳನ್ನು ಮಾರಲು ಶುರು ಮಾಡಿದೆ. ಬರೀ ಐವತ್ತು ಪೈಸೆ, 1 ರುಪಾಯಿಗೆಲ್ಲ. ಶಾಲೆ ಶುರುವಾಗುವುದರೊಳಗೆ ಕೊಯ್ದು ತಂದಿದ್ದ ಸೀಬೆಹಣ್ಣುಗಳೆಲ್ಲ ಖಾಲಿ. ನನ್ನ ಜೇಬು ಭರ್ತಿ. ಮನಸು ಬಹಳ ಹಗುರ.

ಶಾಲೆ ಮುಗಿಸಿ ಮನೆ ತಲುಪಿ ಅಮ್ಮನ ಕೈಗೆ ಸಂಪಾದಿಸಿದ ಚಿಲ್ಲರೆ ಹಣವನ್ನೆಲ್ಲ ಕೊಟ್ಟಾಗ ಏನೋ ಪ್ರಪಂಚವನ್ನೇ ಗೆದ್ದಷ್ಟೇ ಸಂಭ್ರಮ.... ಅಮ್ಮನ ಕಣ್ಣಲ್ಲಿ ನೀರು.
ಆ ಸಮಯದಲ್ಲಿ ಹಣಕ್ಕೆ ಬಹಳ ಬೆಲೆಯಿತ್ತು ಕೂಡ. ನನ್ನ ಅಲ್ಪ ಸಂಪಾದನೆಯೇ ಮನೆಯ ದಿನನಿತ್ಯದ ಖರ್ಚಿಗೆ ಬಳಕೆಯಾಗತೊಡಗಿತು. ಆವತ್ತೇ ನಾನು ಹಣದ ಬೆಲೆಯನ್ನು ಅರಿತಿದ್ದೂ ಕೂಡಾ..

ದಿನಗಳು, ತಿಂಗಳುಗಳು, ವರ್ಷಗಳು ಕಳೆದವು.

ಜೀವನ ಸೀಬೇಕಾಯಿ ಮಾರುತ್ತಿದ್ದ ಸರಕಾರೀ ಶಾಲೆಯ ಹುಡುಗನೊಬ್ಬನನ್ನು ಹಳ್ಳಿಯಿಂದ ಮೈಸೂರೆಂಬ ಪಟ್ಟಣಕ್ಕೆ,
ನಂತರ ಬೆಂಗಳೂರೆಂಬ ಮಹಾನಗರಿಯ ಇಂಜಿನಿಯರಿಂಗ್ ಕಾಲೇಜಿಗೆ ತಂದುಬಿಟ್ಟಿತು.

ಕೊನೆಗೆ ಸತತ ಪ್ರಯತ್ನದ ಸಲುವಾಗಿ ಇಂಜಿನಿಯರ್ ಆದೆ ಕೂಡಾ...
ಜೀವನ ಬಹಳ ಬದಲಾಯಿತು. ದೇವರು ನನ್ನನ್ನು, ನಮ್ಮ ಮನೆಯವರೆಲ್ಲರನ್ನು ಉತ್ತಮ ಸ್ಥಿತಿಗೆ ತಂದಿಟ್ಟ.

ಮೊನ್ನೆ ಮೊನ್ನೆ ಊರಿಗೆ ಹೋಗಿದ್ದೆ.
ಒಂದು ಕಾಲದಲ್ಲಿ ನಮ್ಮೆಲ್ಲರನ್ನೂ ಸಾಕಿದ್ದ ಅದೇ ಸೀಬೆಮರ ಇಂದು ಬಡಕಲಾಗಿ ಹೋಗಿತ್ತು.
ಎಲೆಗಳೆಲ್ಲ ಒಣಗಿದ್ದವು. ರೆಂಬೆಕೊಂಬೆಗಳಂತೂ ಕಳೆಗುಂದಿ ಕಡೆಗಾಲ ಸಮೀಪಿಸಿದ ವೃದ್ಧರಂತಾಗಿ ಹೋಗಿದ್ದವು.
ಎಲ್ಲ ಬರೀ ಖಾಲಿ ಖಾಲಿ..

ಹಿತ್ತಲಿನ ಮುಳ್ಳುಗಳನ್ನು ಸ್ವಚ್ಛ ಮಾಡಲು ಬಂದಿದ್ದ ನಮ್ಮ ಮನೆಯ ಕೆಲಸಗಾರನೊಬ್ಬ ನಮ್ಮನ್ನು ಕೇಳಿದ.

"ಸರ್, ಈ ಬಡಕಲು ಮರವನ್ನು ಯಾಕೆ ಇಟ್ಟುಕೊಂಡಿದ್ದಿರಾ,
ಹೇಳಿ, ಕಡಿದು ಹಾಕಿಬಿಡುತ್ತೀನಿ" ಅಂತ.

ಎಲ್ಲರೂ ಒಂದೇ ಉಸಿರಲ್ಲಿ "ಬೇಡ, ಬೇಡ " ಎಂದಷ್ಟೇ ಹೇಳಿದರು.
ಆತನಿಗೆ ತಲೆಬುಡ ಅರ್ಥವಾಗಲಿಲ್ಲ.

ಪಾಪ, ಅವನಿಗೇನು ಗೊತ್ತು,
"ಸಲಹಿದವರನ್ನು ಕಡಿಯುವುದು ಎಷ್ಟೊಂದು ಕ್ರೌರ್ಯದ ಕೆಲಸ" ಅಂತ........

ನಿಮ್ಮವನು,
ಸಂತು

Saturday, August 14, 2010

ಸ್ವಾತಂತ್ರ್ಯೋತ್ಸವವೂ ಹಬ್ಬವಾಗಬಾರದೇಕೆ ?



ಸುಮಾರು ೧೫ ವರ್ಷಗಳ ಹಿಂದಿನ ಮಾತು.

ನಮ್ಮದೊಂದು ಸರ್ಕಾರಿ ಶಾಲೆ. ಸ್ವಾತಂತ್ರ ದಿನಾಚರಣೆ ಬಂತೆಂದರೆ ನಮಗೆ ಎಲ್ಲಿಲ್ಲದ ಸಡಗರ.
ಪಟ್ಟಣದ ಶಾಲೆಗಳ ಹಾಗೆ ಎಲ್ಲರೂ ಎಲ್ಲ ದಿನವೂ uniform ಧರಿಸಿ ಹೋಗುವುದೂ ಇಲ್ಲ, uniform ಹಾಕಲೇಬೇಕೆಂಬ ಕಡ್ಡಾಯವೂ ಇಲ್ಲ . ಹಾಗೊಂದು ನಿಯಮವಿದ್ದರೂ ಧರಿಸಲು ಎಲ್ಲರ ಬಳಿಯೂ uniform ಇರುವುದಿಲ್ಲ !!! :)

ಆದರೆ ಆ ದಿನದಂದು ಮಾತ್ರ ಪ್ರತಿಯುಬ್ಬರೂ ತಪ್ಪದೇ uniform ಹಾಕುತ್ತಾರೆ . ಒಗೆದು ಇಸ್ತ್ರಿ ಮಾಡಿದ ಬಿಳಿ uniform ತೊಟ್ಟು ಕೈಯಲ್ಲಿ ಪುಟ್ಟ ತ್ರಿವರ್ಣ ಧ್ವಜ ಹಿಡಿದು ಶಾಲೆಗೆ ಗಾಂಭೀರ್ಯದಿಂದ ಹೊರಟರೆ ಅದು ಒಂದು ರೀತಿಯ ಸಂತೋಷವೇ ಸರಿ.ಹಾಗೆಯೇ ನಗರಗಳ ಹಾಗೆ ಶಾಲೆಯನ್ನು ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸಲು ಅಂತ ವಿಶೇಷವಾಗಿ ಸಿಬ್ಬಂದಿಯೇನು ಇರುವುದಿಲ್ಲ. ಹಿಂದಿನ ದಿನವೇ ಪ್ರತಿಯೊಂದು ಕೆಲಸವನ್ನು ಶಾಲೆಯ ಹುಡುಗರೇ ಮಾಡಿ ಮುಗಿಸಿರುತ್ತಾರೆ.
ಒಂದು ವಾರದ ಮುಂಚೆಯಿಂದಲೇ ಕವಾಯತು (march fast) ಮಾಡುವುದನ್ನು ಅಭ್ಯಾಸ ಮಾಡಿಸಲಾಗಿರುತ್ತದೆ. ಪ್ರತೀ , ಮಾಸ್ತರರೂ ವಿಧ್ಯಾರ್ಥಿಗಳ ಮುನ್ನವೇ ಬೇರೆಯೂರುಗಳಿಂದ ಬಂದಿಳಿದಿರುತ್ತಾರೆ.

ಮೊದಲು ಕವಾಯತು ,ನಂತರ ಧ್ವಜಾರೋಹಣ , ಜತೆಜತೆಗೆ ಜನಗಣಮನ , ಧ್ವಜಗೀತೆ , ಹಾಡಿ ಮುಗಿಸುವ ಹೊತ್ತಿಗೆ ಪ್ರತಿ ಪುಟ್ಟ ಹೃದಯದಲ್ಲಿ ದೇಶಪ್ರೇಮ ಉಕ್ಕಿ ಹರಿದಿರುತ್ತದೆ.

ಕೊನೆಗೆ ಎಲ್ಲರ ಬಾಯಿಗೂ ಸಿಹಿ, ಅತಿಥಿಗಳಿಂದ ದೇಶಾಭಿಮಾನದ ಭಾಷಣ , ನಡುನಡುವೆ ಸಾಂಸ್ಕೃತಿಕ ಕಾರ್ಯಕ್ರಮ, ನೆರೆದ ಹಳ್ಳಿ ಜನರಿಂದ ಹರ್ಷೋದ್ಗಾರ , ಕರತಾಡನ.

ಕೊನೆಗೆ ಒಟ್ಟೊಟ್ಟಿಗೆ ಊರ ತುಂಬ ಮೆರವಣಿಗೆ , ಕೈ ಕೈ ಹಿಡಿದು ಹೋರಾಟ ಮಕ್ಕಳ ಬಾಯಿಂದ ದೇಶದ ಬಗ್ಗೆ ಘೋಷಣೆ ....

ಭಾರತ್ ಮಾತ ಕೀ ಜೈ.........ಮಹಾತ್ಮ ಗಾಂಧೀ ಕೀ ಜೈ........

ಮನೆಯಿಂದ ಹೊರಬಂದು ತಮ್ಮ ಮಕ್ಕಳ ನೋಡುವ ಜನರ ತುಟಿಯಲ್ಲಿ ಕಿರುನಗೆ , ತಡವಾಗಿ ಎದ್ದು ದಾರಿಬದಿಯ ಅಂಗಡಿಯಲ್ಲಿ ಟೀ ಕುಡಿಯುತ್ತ ನಿಂತ ಜನರ ಮನದಲ್ಲಿ ಏನೋ ಅಳುಕು , ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ತಾವು ಪಾಲ್ಗೊಳ್ಳಲಿಲ್ಲವೆಂದು ಅನಿಸಿದಾಗ ನಾಚಿಕೆ....

ಮಕ್ಕಳ ಮನಸ್ಸಿನಲ್ಲಂತೂ ಸ್ವಾತಂತ್ರ್ಯ ದಿನಾಚರಣೆ ಹಬ್ಬವೋ ಹಬ್ಬ. ........

......................ಮತ್ತೆ ವಾಸ್ತವಕ್ಕೆ ಬನ್ನಿ ,

ಏಕಾದರೂ ಈ Independence day, weekend ನಲ್ಲಿ ಬಂತು ಎನ್ನುವ ಬೇಸರ , ಇಲ್ಲದಿದ್ದರೆ ಒಂದು extra Holiday ನಾದ್ರೂ ಸಿಗ್ತಿತ್ತು ಅನ್ನೋ ಮನೋಭಾವ...

ಸ್ವಾತಂತ್ರ್ಯ ದಿನಾಚರಣೆಯಂತು ಶಾಲೆಯ ದಿನಗಳಲ್ಲಿ ಮಾತ್ರ ಬರುವ ಒಂದು ದಿನ ಎಂಬ ಅನಿಸಿಕೆ . ಅದರ ಆಚರಣೆಯಂತು ಕನಸು, ಅಥವಾ ಕಳೆದ ದಿನಗಳ ನೆನಪು.

ಈಗ Aug-15 ರ ದಿನ ಏಳುವಾಗಲೇ ಮಧ್ಯಾಹ್ನ ದಾಟಿರುತ್ತದೆ. ಎದ್ದ ಕೂಡಲೇ ಕೈಗೆ tv remote ಬಂದಿರುತ್ತದೆ. TV channelಗಳಲ್ಲಿ ಸ್ವಾತಂತ್ರ್ಯದ ಬಗ್ಗೆ ಹಿರಿಯರು,ರಾಜಕಾರಣಿಗಳು , ಸಿನಿಮಾ ತಾರೆಯರು ಏನು ಹೇಳುತ್ತಾರೆ ಎಂದು ನೋಡುನೋಡುತ್ತಲೇ ಆ ದಿನ ಮುಗಿದು ಹೋಗಿರುತ್ತದೆ.

ಎಂತಹ ವಿಪರ್ಯಾಸವಲ್ಲವೇ?

ಇದೆe ಬೆಂಗಳೂರಿನಲ್ಲಿ ನಮ್ಮ ಬೀದಿಯಲ್ಲಿರುವ ಮನೆಯಾತನೊಬ್ಬ Aug -15 ಬಂತೆಂದರೆ ಅಕ್ಕಪಕ್ಕದ ಮನೆಯ ಹಿರಿಯ ಕಿರಿಯರೆನ್ನೆಲ್ಲ ಸೇರಿಸಿ ತನ್ನ ಮನೆಯ ಮಹಡಿಯ ಮೇಲೆ ಬೆಳ್ಳಂಬೆಳಗ್ಗೆ ಧ್ವಜ ಹಾರಿಸಿ, ಪ್ರತಿಯೊಬ್ಬರ ಕೈಯಲ್ಲೂ ಧ್ವಜಕ್ಕೆ salute ಮಾಡಿಸಿ ,ಜನಗಣಮನ ಹಾಡಿಸಿ ಪ್ರತಿಯೊಬ್ಬರಿಗೂ ಸಿಹಿ ಹಂಚುತ್ತಾನೆ!!!!

"ಬರೀ aug-15 ರಂದೇ ಏಕೆ ನಾವು ದೇಶಪ್ರೇಮ ತೋರಿಸಬೇಕು, ವರ್ಷದ ಎಲ್ಲ ದಿನವೂ ನಾವು Independence Day ಆಚರಿಸುತ್ತೇವೆ" ಅಂತ ಉಡಾಫೆಯ ಮಾತು ಹೇಳುವ ಅನೇಕರು atleast ಒಂದು ಬಾರಿಯಾದರೂ ತಮ್ಮ lifeನಲ್ಲಿ ಜನಗಣಮನ ಹಾಡಿರುವುದಿಲ್ಲ.

ಇಂಥವರ ಮಧ್ಯದಲ್ಲೂ ಮನೆಯಲ್ಲೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಿಹಿಹಂಚಿ, ಹಬ್ಬದಂತೆ ಆಚರಿಸುವ "ಆ" ವ್ಯಕ್ತಿ ನನಗೆ ನಿಜವಾದ "ಹೀರೋ"ನಂತೆ ಕಾಣಿಸುತ್ತಾನೆ.

ನೀವೇನಂತೀರಿ,
Jai Hind,Jai Bharath matha....





ನಿಮ್ಮವನು
Santhu

Sunday, February 28, 2010

ಅದೊಂದು ದಿನ...



ಬರೋಬ್ಬರಿ 8 ತಾಸು ಕಂಪ್ಯೂಟರಿನ ಮುಂದೆ ಕೂತು ದಣಿದಿದ್ದ ದೇಹ ಮತ್ತು ಮನಸ್ಸು ಮನೆಗೆ ತಲುಪಿಸುವ ಕ್ಯಾಬಿನಲ್ಲಿ ಕುಳಿತ ತಕ್ಷಣ ಕಣ್ಣು ಮುಚ್ಚುವಂತೆ ಮಾಡಿತ್ತು. ಮಧ್ಯಾಹ್ನ ಫೋನಾಯಿಸಿದಾಗ ನನ್ನಾಕೆಯಾಡಿದ ಮಾತುಗಳು ಒಂದೊಂದಾಗಿ ಮನಸ್ಸಿನಲ್ಲಿ ಬರಲಾರಂಭಿಸಿದವು.
------*---------*---------*---------*-------*-------*--------*--------*-----*
ಮದುವೆಗೆ ಮುಂಚೆ ಅಷ್ಟೇ ಇದೆಲ್ಲ, ಆಮೇಲೆ ..... ಏನಿಲ್ಲ. ಬರೀ ಬೊಗಳೆ ಪ್ರಪಂಚ. ಕರ್ಮಕ್ಕೆ love marriage ಬೇರೆ ಯಾಕೆ ಬೇಕಿತ್ತೋ? ಪರಿಚಯವಾದ ದಿನಗಳಲ್ಲಿ atleast 10 ಗಂಟೆ ಫೋನಿನಲ್ಲೇ ಪ್ರಪಂಚ.
ಕೂತಿದ್ದರೂ ನಿಂತಿದ್ದರೂ ಮೇಲೆ smsಗಳ ಮೇಲೆ sms.
ಪ್ರೀತಿ ಮಾತು, ಆಗ ನೋಡುತ್ತಾ ಇದ್ದ movies , ಆಡ್ತಾ ಇದ್ದ ಹರಟೆ , ಭೇಟಿ ಆಗ್ತಾ ಇದ್ದ ದೇವಸ್ಥಾನ, ಬರೀತಾ ಇದ್ದ letter , ಕಳಿಸ್ತಾ ಇದ್ದ e -mails , greetings , ಆಗಾಗ ಕೊಡ್ತಾ ಇದ್ದ gifts .... ಪ್ರತಿಯೊಂದು ಅದು ಹೇಗೆ ಮದುವೆ ಆದ ತಕ್ಷಣ ಮಾಯ ಆಗೋಯ್ತು ನೋಡು. ಎಲ್ಲಾ ಗಂಡಸರದ್ದು ಇದೇ ರಾಮಾಯಣ ಅಂತ ಕಾಣ್ಸುತ್ತೆ , ಬರೀ ಹುಡುಗಿರನ್ನ ಪಟಾಯಿಸೋಕೆ ಅಷ್ಟೆಲ್ಲಾ ಮಾಡ್ತಾರೆ ಅಂತ ಅನ್ಸುತ್ತೆ . ಹಿಂಗೆ ಇದ್ದಿದ್ರೆ ಮದುವೆ ಆಗದೇನೆ ಇರ್ಬೋದಿತ್ತು. ಈಗ ಸಾಲದ್ದಕ್ಕೆ ಮಗು ಬೇರೆ ಕೇಡು.
ಈಗಂತೂ ನಿಂಗೆ ಆಫೀಸೇ ಪ್ರಪಂಚ , ಅಪ್ಪ, ಅಮ್ಮ , ಹೆಂಡತಿ, ಮಕ್ಕಳು ಎಲ್ಲ.
ಆಫೀಸಿನಲ್ಲೇ ಒಂದು ರೂಮು ಕೊಟ್ರೆ ಅಲ್ಲೇ ಮಲಗಿಬಿಡು, ನಿನಗ್ಯಾಕೆ ಸಂಸಾರ ಎಲ್ಲ?!!
Atleast ಊಟ ಮಾಡಿದ್ಯ ಅಂತ ಕೇಳಲಿಕ್ಕಾದರು ಒಂದು ಫೋನ್ ಬೇಡ್ವ? ಅಷ್ಟಕ್ಕೂ ನೀನೋಬ್ಬನೇನ ಕೆಲಸ ಮಾಡೋದು. ನಿಮ್ಮ ಮ್ಯಾನೇಜರ್ ಗಳಿಗೇನು ಮದ್ವೇನೆ ಆಗಿಲ್ವಾ? .............

ಅಮ್ಮಾ.... ಬೈಗುಳದ ಮೇಲೆ ಬೈಗುಳ , ಇವಳ ಬಾಯಿಗೆ ಯಾರಾದ್ರೂ ಬೆರಳು ಹಾಕ್ಕಿದ್ರೋ ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಾ ಕೇಳಿಸಿಕೊಳ್ಳುತ್ತಾ ಇದ್ದೆ.
ನಂಗೊತ್ತು ಮದ್ಯದಲ್ಲಿ ಏನಾದ್ರು ಹೇಳಿದ್ರೆ ಬೈಗುಳದ ಪಟ್ಟಿ ಇನ್ನೂ ಜಾಸ್ತಿ ಆಗುತ್ತೆ ಅಂತ.
ಇಂಥ timeನಲ್ಲಿನೇ ಗಾಂಧೀ ತಾತಂಗೆ thanks ಹೇಳ್ಬೇಕು ಅನ್ಸೋದು. ಕೆಟ್ಟದ್ದನ್ನ ಕೇಳಬಾರದು ಅಂತ ಹೇಳಿ ಕೊಟ್ಟಿದ್ದಾರಲ್ಲ ಅದಕ್ಕೆ!!!
ಬರೋಬ್ಬರಿ 10 ನಿಮಿಷ ಆದ ಮೇಲೆ ಅತ್ತ ಕಡೆಯಿಂದ "ಲಕ್ " ಅಂತ phone ನೆಲಕ್ಕೆ ಕುಕ್ಕಿದ ಸದ್ದು........ಬದುಕಿದೆಯಾ ಬಡಜೀವವೇ..!!! :)
ಮತ್ತೆ ಚೇರಿನಲ್ಲಿ ಕೂತೆನಾದರೂ ಮನಸ್ಸು ಮಾತ್ರ ಗಿರಾಕಿ ಹೊಡಿತಾನೆ ಇತ್ತು. ಎಷ್ಟೇ ಆದರೂ MNCಗಳ ಕತೆ ನೋಡಿ, ನೀವು ಸಾಯೋ ಒಂದು ಕ್ಷಣದ ಮುಂಚೆ ಅಲ್ಲಿದ್ರೂ ಕೆಲಸ ಮಾಡುತ್ತಾನೆ ಇರಬೇಕು.




------*---------*---------*---------*-------*-------*--------*--------*-----*








"ಯಾಕ್ ಸರ್ ಸೈಲೆಂಟ್ ಆಗಿ ಕೂತಿದ್ದೀರಾ ಇವತ್ತು? ನಿಮ್ಮ ಮ್ಯಾನೇಜರ್ ಏನಾದ್ರೂ ಬೈದ್ರಾ ? " ನನ್ನ cabmate ಪ್ರಶ್ನೆ. "ನನ್ನ ಹೆಂಡತಿನೇ ಕಣಪ್ಪ ನಂಗೆ ಮ್ಯಾನೇಜರ್, ಅವ್ಳು ಬೈದೆ ಇನ್ಯಾವ ನನ್ ಮಗ ಬೈತಾನೆ ನಂಗೆ?" ಹಾಗೆಂದು ಹೇಳಬೇಕೆಂದುಕೊಂಡವನು ಕೊನೆ ಕ್ಷಣದಲ್ಲಿ ಕಷ್ಟಪಟ್ಟು ತಡೆದುಕೊಂಡೆ.

ದಿನ ಪೂರ್ತಿ ನನ್ನ ಮೂಡ್ ಹಾಳು ಮಾಡಿದ ಆಕೇನ ಸರಿಯಾಗಿ ತರಾಟೆಗೆ ತಗೋಬೇಕು ಅಂತ ಯೋಚಿಸೋಕೆ ಶುರು ಮಾಡಿದೆ.

ಅಮ್ಮಣ್ಣಿ, ಕಾಲೇಜಿನಲ್ಲಿ ನಿಂಗೆ ಫೋನ್ ಮಾಡ್ತಾ ನಿನ್ ಹಿಂದೆ ಅಲಿತಿದ್ದಾಗ ದುಡ್ಡು ಕೊಡ್ತಾ ಇದ್ದೋರು ನಮ್ಮಪ್ಪ. ಆದ್ರೆ ಈಗ ಕಂಪನೀಲಿ ಸುಮ್ನೆ ಕೂರಿಸಿ ದುಡ್ಡು ಕೊಟ್ಟು ಕಳಿಸೋಕೆ ಅದೇನು ನಮ್ಮ ಮಾವನ ಮನೆ ಅಲ್ವಲ್ಲ .

ನೀನೆ ಸ್ವಲ್ಪ ಯೋಚನೆ ಮಾಡು. ಯಾವಾಗ್ಲೂ ನಿನ್ನ ಹಿಂದೆ ಫೋನ್ ಮಾಡ್ತಾ ಕೂತಿದ್ರೆ ನನ್ನ ಆಫೀಸ್ ಕೆಲಸ ಯಾರು ಮಾಡ್ತಾರೆ. ಮುಂಚೆನೇ ಅಲ್ಲಿ ನಮ್ಮ ಕೆಲಸದ ಪಾಡು ನಾಯಿಪಾಡು.
ಅದನ್ನ ಮುಗಿಸೋಕೆ ಬ್ರಹ್ಮ ಇನ್ಮೇಲೆ ದಿನಕ್ಕೆ 48 ಗಂಟೆ ಅಂತ ಮಾಡ್ಬೇಕು. ನಾನು ಸೇರಿದ ಮೇಲೆ ಬಂದು ಕೆಲಸಕ್ಕೆ ಸೇರಿದ juniors ಎಲ್ಲ ಕೆಲಸದಲ್ಲಿ ಒಳ್ಳೆ ಹೆಸರು ತಗೊಂಡು ವಿದೇಶಕ್ಕೆಲ್ಲ ಹೋಗಿ ಬಂದಿದ್ದಾರೆ.
ನಾನು family ಅಂತ ಯಾವಾಗಲು ನಿನ್ನ ಬಗ್ಗೆನೇ ಯೋಚನೆ ಮಾಡ್ತಾ ಕೂತಿದ್ರೆ ಯಾರು ಕೊಡ್ತಾರೆ ತಿನ್ನೋಕೆ ಅನ್ನ. ಇಷ್ಟು ದಿನ ಕೆಲಸ ಮಾಡಿದ್ರು ಸಾಲ ಅಂತ ಒಂಚೂರು ಕಮ್ಮಿ ಆಗಿಲ್ಲ . ಅಂಥದ್ದರಲ್ಲಿ ಕೆಲಸ ಏನಾದ್ರು ಹೋದ್ರೆ ಇನ್ಯಾರು ಕೈ ಹಿಡಿತಾರೆ. ನೀವಾದ್ರು ಹೆಂಗಸರು. ಕೆಲಸಕ್ಕೆ ಹೋಗಿ ಅಥವಾ ಬಿಡಿ ,ಯಾರು ಕೇಳಲ್ಲ. ನಮ್ಮ ಗಂಡು ಜನ್ಮ, ಕುಂತರೂ ಬೈತಾರೆ, ನಿಂತರೂ ಬೈತಾರೆ.

ನೋಡು ನನ್ನ life ನಲ್ಲಿ ನಂಗೆ priority, ಗುರಿ ಅಂತ ಏನೇನೋ ಇದೆ. ಅದನ್ನ ಸಾಧಿಸೋವರೆಗೂ ನೀನೆ ಅಲ್ಲ ನಿಮ್ಮಪ್ಪ, ನಿಮ್ಮಪ್ಪ, ಯಾರು ಹೇಳಿದ್ರು ಯಾರ ಮಾತೂ ಕೇಳೋನಲ್ಲ ನಾನು. ನನ್ ಗುರಿ ತಲುಪೋವರೆಗೂ ನನ್ ಪಾಡಿಗೆ ನನ್ ಕೆಲಸ ಮಾಡುತ್ತಾನೆ ಇರ್ತೀನಿ. ಮನಸ್ಸಿಗೆ phone ಮಾಡಬೇಕು ಅಂತ ಅನ್ಸಿದ್ರೆ ಮಾಡ್ತೀನಿ. ಅದು ಬಿಟ್ಟು ನೀನು ಇಷ್ಟು ಹೊತ್ತಿಗೇ phone ಮಾಡ್ಬೇಕು, ಇಷ್ಟು ಸಲ ದಿನಕ್ಕೆ phone ಮಾಡಲೇಬೇಕು ಅಂತ ನೀನು ಧಮಕಿ ಹಾಕಿದ್ರೆ ಕೇಳೋ ಮನುಷ್ಯಾನೇ ಅಲ್ಲ ನಾನು.

ಅಷ್ಟಕ್ಕೂನಿನ್ನ ಮದ್ವೆ ಅದ ಮೇಲೆ ನನ್ನ ಗೆಳೆಯರನ್ನ ಭೇಟಿ ಮಾಡೋದೇ ಬಿಟ್ಟುಬಿಟ್ಟಿದ್ದೀನಿ. ಅದನ್ನೆಲ್ಲ ಎಲ್ಲಿ ನೀನು ತಲೆಗೆ ಹಾಕೊಳ್ತಿಯೋ ದೇವರಿಗೆ ಗೊತ್ತು. ನಿನ್ ಬುದ್ದಿ ಎಲ್ಲ ಏನಿದ್ರು ಬಾವಿಯೊಳಗಿನ ಕಪ್ಪೆ ಹಾಗೆ ಅಷ್ಟೇ, ಪ್ರಪಂಚದ ಜ್ಞಾನನೇ ನಿನಗೆ ಇಲ್ಲ....

ನೀನು ಹೀಗೆ ಆಡ್ತಾ ಇರೋದ್ರಿಂದ office ನಲ್ಲಿ ಮಾಡೋ ಕೆಲಸಾನು ಮಾಡೋಕೆ ನಂಗೆ ಅಗ್ತಾ ಇಲ್ಲ. ಹಿಂಗೆ ಜಗಳ ಆಡ್ತಾ ಇರು, ಮಾಡೋ ಫೋನ್ ಅನ್ನು ಮಾಡಲ್ಲ ಅಷ್ಟೇನೇ..
------*---------*---------*---------*-------*-------*--------*--------*-----*




"ಸರ್ ಮನೆ ಬಂತು ಇಳ್ಕೋಳಿ ಸರ್" ಕ್ಯಾಬ್ ಡ್ರೈವರ್ ಅಂದ.
ತಟ್ಟನೆ ಯೋಚನಾ ಲಹರಿಯಿಂದ ಎದ್ದು, ಕ್ಯಾಬ್ ಇಳಿದೆ.

ಮನೆಯೊಳಗೇ ಕಾಲಿಟ್ಟವನಿಗೆ "ಮುಖ ತೊಳೆದುಕೊಂಡು ಬನ್ನಿ ಕಾಫಿ ಕೊಡುತ್ತೇನೆ " ಎಂದವಳ ಧ್ವನಿ ಕೇಳಿಸಿತು. ಅದೇ ಕಗ್ಗಂಟು ಮುಖ.
ಕಾಫಿ ಹೀರುತ್ತಾ ಕೂತವನು ಅಲ್ಲೇ ಇದ್ದ ತೊಟ್ಟಿಲ ಒಳಗೆ ಕಣ್ಣಾಯಿಸಿದೆ.

ದುಂಡು ಕಂಗಳ ಪುಟ್ಟಿಯ ಮುಗುಳ್ನಗು ನನ್ನನ್ನ ಅಯಸ್ಕಾಂತದಂತೆ ಬರಸೆಳೆಯಿತು.

ಎತ್ತಿ ಎದೆಗಾನಿಸಿಕೊಂಡವನ ಮುಖದ ಮೇಲೆಲ್ಲಾ ಪುಟ್ಟಿಯ ಪುಟ್ಟ ಕೈಯಾಟ.

"ಓಹೋ ನೋಡು, ಅವರಪ್ಪನ ಮಗಳೇ ಅವಳು, ಅವರು ಬರೋ ಸಮಯ ಅದ ತಕ್ಷಣ ಹೇಗೆ ಅಳೋದನ್ನೆಲ್ಲ ನಿಲ್ಲಿಸಿ ಕುಣಿಯೋಕೆ ಶುರು ಮಾಡಿದಾಳೆ,, " ಮತ್ತೆ ಅವಳಮ್ಮನ ಮೂದಲಿಕೆ.
ಕಿಲಕಿಲ ನಕ್ಕವಳ ಮೊಗದಲ್ಲಿ ಬಂಗಾರದ ಮಿಂಚು..
ಅವಳೊಟ್ಟಿಗೆ ಆಡುತ್ತ , ಮಾತನಾಡುತ್ತ ಮೂಕಭಾಷೆಗೆ ಪ್ರತಿಕ್ರಿಯಿಸುತ್ತಾ ಕುಳಿತೆ.





ಎಷ್ಟೇ ನೆನೆಸಿಕೊಂಡರೂ ಏನೋ ಮರೆತಿದ್ದು ನೆನಪಾಗಲೇ ಇಲ್ಲ ...............!!!!!??????!!!!!!!

ನಿಮ್ಮವನು,
Santhu