Friday, January 15, 2021

Master (Tamil, 2021)

 


Master (Tamil, 2021)

ಇಬ್ಬರು ಸಾಧಾರಣ ನಟರನ್ನು ಇಟ್ಟುಕೊಂಡು ಸಿನಿಮಾ ಮಾಡುವುದೆಂದರೆ ಅಷ್ಟೊಂದೇನೂ ಒತ್ತಡವಿರುವುದಿಲ್ಲ. ಕಥೆಗಾರ ಬರೀ ತನ್ನ ಸ್ಕ್ರಿಪ್ಟ್ ಮೇಲೆ ಗಮನ ಹರಿಸಿದರೆ ಸಾಕು! ಅಪ್ಪಿತಪ್ಪಿ ಆ ಇಬ್ಬರೂ ನಟರು ವೈಯಕ್ತಿಕವಾಗಿ ಒಬ್ಬೊಬ್ಬರೇ ಒಂದು ಸಿನಿಮಾವನ್ನು ಹಿಟ್ ಕೊಡಬಲ್ಲಷ್ಟು ಶಕ್ತರಾಗಿದ್ದರಂತೂ ಅವರಿಬ್ಬರನ್ನು ಹಾಕಿಕೊಂಡು ಸಿನಿಮಾ ತೆಗೆಯುವ ನಿರ್ದೇಶಕನಿಗೆ ಅದು ಖಂಡಿತವಾಗಿ "ಬಾಯಲ್ಲಿನ ಬಿಸಿತುಪ್ಪವೇ"!! ಅಭಿಮಾನಿಗಳಿಗೇನೋ ತಮ್ಮ ನೆಚ್ಚಿನ ನಟರನ್ನು ಒಟ್ಟೊಟ್ಟಿಗೆ ನೋಡಲು ಹಿಗ್ಗು. ಆದರೆ ಕಥೆ ಹೆಣೆಯುವವ ಮಾತ್ರ ತನ್ನೆಲ್ಲ ಬುದ್ಧಿಯನ್ನು ಓರೆಗೆ ಹಚ್ಚಬೇಕು. ಅದೊಂಥರ ಏನಾದರೂ ಮಾಡು, ಒಟ್ನಲ್ಲಿ ಒಂದು ಅದ್ಭುತ ಸಿನಿಮಾ ಕೊಡು ಅನ್ನೋ ಥರದ ಸವಾಲು. ಏಕೆಂದರೆ ಮೇಲ್ನೋಟಕ್ಕೆ ಸುಲಭದಂತೆ ಕಾಣುವ ಕೆಲಸ ಒಳಗೆ ಅತ್ಯಂತ ಕ್ಲಿಷ್ಟಕರವಾಗಿರುತ್ತೆ.

ಇಬ್ಬರ ಪರಿಚಯವೂ ಚೆನ್ನಾಗಿ ಮೂಡಿಬರಬೇಕು. ಇಬ್ಬರಿಗೂ ಪರದೆಯ ಮೇಲೆ ಸಮಯ ಕೊಡಬೇಕು. ಪ್ರೇಕ್ಷಕನಿಗೆ ಯಾರೊಬ್ಬರ ಗೈರು ತಟ್ಟದಂತೆ ಹೆಚ್ಚು ಅಂತರವಿಲ್ಲದೆ ಆ ಹೀರೋ ಆಗಾಗ ಕಾಣಿಸಿಕೊಳ್ಳುತ್ತಿರಬೇಕು. ಎಲ್ಲಕಿಂತ ಹೆಚ್ಚಾಗಿ ಇಬ್ಬರಲ್ಲಿ ಯಾರೂ ಕೂಡ ತಮ್ಮ ಪ್ರಾಮುಖ್ಯತೆ ಕಡಿಮೆಯಯ್ತು ಅನ್ನುವ ಹಾಗೆ ಭಾವಿಸದಂತೆ ಜಾಗರೂಕತೆ ವಹಿಸಬೇಕು! ನಟರು ಕೊಂಚ ಅಡ್ಜಸ್ಟ್ ಮಾಡಿಕೊಂಡರೂ ನಿರ್ದೇಶಕನಿಗೆ ಆ ನಟರ ಅಭಿಮಾನಿಗಳ ಭಯವಂತೂ ಇದ್ದೇ ಇರುತ್ತದೆ!

ಅಗಾಧ ಜನಪ್ರಿಯತೆ ಹೊಂದಿದ, ತಮ್ಮದೇ ಆದ ದೊಡ್ಡ ಅಭಿಮಾನಿವರ್ಗವನ್ನು ಹೊಂದಿರುವ ವಿಜಯ್ & ವಿಜಯ್ ಸೇತುಪತಿ ಅವರನ್ನು ಹಾಕಿಕೊಂಡು ತೆಗೆದ ಆ ಬಗೆಯ ಸಿನಿಮಾ "ಮಾಸ್ಟರ್" ಒಂದು ಮಾಸ್ಟರ್-ಪೀಸ್ ಆಗಬೇಕಿತ್ತು! ಅದು ಕಡೆಗೂ ಆಯ್ತಾ ಅನ್ನುವುದೇ ಪ್ರಶ್ನೆ! ಇಲ್ಲಿ ವಿಜಯ್ ನಾಯಕನಾದರೆ, ವಿಜಯ್ ಸೇತುಪತಿ ಖಳನಾಗಿ ಪಾತ್ರ ನಿರ್ವಹಿಸಿದ್ದಾರೆ. ಇವರೊಟ್ಟಿಗೆ ನಟ-ನಟಿಯರ ದಂಡೇ ಈ ಚಿತ್ರದಲ್ಲಿದೆ. ಆದರೆ ಅವರಲ್ಲಿ ಯಾರು ಪ್ರಮುಖರು ಅನ್ನಿಸುವಷ್ಟು ಎಲ್ಲೋ ಬರುತ್ತಾರೆ, ಎಲ್ಲೋ ಹೋಗಿಬಿಡುತ್ತಾರೆ. ಅದು ಈ ಚಿತ್ರದ ಒಂದು ಋಣಾತ್ಮಕ ಅಂಶ.

ವಿಜಯ್ ಸೇತುಪತಿ ಖಳನಾದರೂ ಆತ ಪ್ರತಿ ದೃಶ್ಯದಲ್ಲೂ ನಮ್ಮನ್ನು ನಗಿಸುತ್ತಲೇ ತನ್ನ ಕೆಲಸ ಮಾಡುತ್ತಿರುತ್ತಾನೆ. ಗಮನಿಸಿದರೆ, ನಮಗೆ ಗೊತ್ತಿಲ್ಲದೆಯೇ ನಾವು ಆತ ಮಾಡುವುದನ್ನು ಎಂಜಾಯ್ ಮಾಡುತ್ತೇವೆ! ಡಾನ್ ಚಿತ್ರಗಳಲ್ಲಿ ತನ್ನ ಮಣಿಸಲು ಬರುವ ಎಲ್ಲರನ್ನು ಕ್ಷಣಾರ್ಧದಲ್ಲಿ ಹಣ್ಣುಗಾಯಿ ಮಾಡುತ್ತ ತನ್ನ ಪ್ರಭುತ್ವ ಸಾಧಿಸಲು ತನ್ನದೇ ದಾರಿ ಹಿಡಿಯುವ ನಾಯಕರ ವರ್ತನೆಯನ್ನು ನಾವು ಖುಶಿಯಿಂದ ನೋಡಿದಂತೆಯೇ ಇಲ್ಲೂ ಸಹ ಎಂಜಾಯ್ ಮಾಡುತ್ತೇವೆ. ಈ ಕಾರಣದಿಂದಲೇ ನಮಗೆ ಆತ ಮಾಡುವುದು ತಪ್ಪು ಅನ್ನಿಸುವುದೇ ಇಲ್ಲ. ಈ ಸಂದರ್ಭದಲ್ಲಿಯೇ ಅತ್ತಲಿನ ನಾಯಕನ ಪರಿಚಯವೂ ನಮಗಾಗುತ್ತದೆ. ಇವರಿಬ್ಬರೂ ಸಂಧಿಸುವುದೇ ಇಲ್ಲವೇನೋ ಅನ್ನಿಸುವಷ್ಟರಲ್ಲಿ ನಿರ್ದೇಶಕ ಅಲ್ಲೊಂದು ತಿರುವು ನೀಡುತ್ತಾನೆ. ಆ ದೃಶ್ಯದಲ್ಲಿ ಭವಾನಿ (ವಿಜಯ್ ಸೇತುಪತಿ) ಮಾಡುವುದನ್ನು ನಾವೇ ಅಕ್ಷರಶಃ ದ್ವೇಷಿಸುತ್ತೇವೆ. ಅದೇ ಮೊದಲ ಬಾರಿಗೆ ಖಳನಾಯಕನ ಮೇಲೆ ನಮಗೆ ಬೇಸರ ಮೂಡುತ್ತದೆ. ಅಂದುಕೊಂಡಂತೆಯೇ ಅವನ ಅಂತ್ಯಕ್ಕೆ ನಾಯಕ ಭಾಷ್ಯ ಬರೆಯುತ್ತಾನೆ.

ದ್ವಿತೀಯಾರ್ಧ ಇನ್ನೇನೋ ಇರಬೇಕು ಅನ್ನಿಸುವಂತೆ ಕುತೂಹಲ ಹುಟ್ಟಿಸುತ್ತದಾದರೂ ಅಲ್ಲಿ ನಾಯಕನ ಸೇಡನ್ನು, ಕೋಪವನ್ನು ಸಂಭಾಳಿಸುವಲ್ಲಿ ನಿರ್ದೇಶಕ ಸೋತಿದ್ದಾರೆ. ಮತ್ತೊಮ್ಮೆ ಹೇಳುವುದಾದರೆ ಹಾವು-ಮುಂಗುಸಿಯಾಟದ ಹೊರತಾಗಿ ನಾಯಕನ ನಗುತ್ತಲೇ ಎಲ್ಲವನ್ನು ಎದುರಿಸುವ ಗುಣವನ್ನು ತೋರಿಸುತ್ತ ಮಧ್ಯೆ ಕಥೆಯನ್ನು ಸುಖಾಸುಮ್ಮನೆ ಎಳೆಯುತ್ತಾರೆ. ಎರಡೂ ಪಾತ್ರಗಳು ಒಟ್ಟಿಗೆ ಮುಖಾಮುಖಿಯಾದಾಗ ದೊಡ್ಡದೊಂದೇನೋ ಘಟಿಸಬೇಕಿತ್ತು. ಆದರೆ ಅಂಥದ್ದೇನೂ ನಡೆಯದೇ ಸಾಧಾರಣವಾಗಿಯೇ ಅಂತ್ಯವಾಗುತ್ತದೆ. ಇಲ್ಲಿಯೇ ಸಿನಿಮಾದ Duration ಜಾಸ್ತಿಯಾಗುತ್ತ ಸಾಗುತ್ತದೆ. ಅಂತ್ಯದಲ್ಲಿ ಖಳನಾಯಕನ ಅಂತ್ಯವಾದ ಮೇಲೂ ನಾಯಕನ ಕಥೆ ಹೇಳುವಿಕೆ ಮುಗಿಯುವುದಿಲ್ಲ! ಲಾರಿಗಳನ್ನು ಅಡ್ಡ ಹಾಕಿ ಹೊಡೆದಾಡುವ ನೀಳ ದೃಶ್ಯವೊಂದು ನಮ್ಮ ತಾಳ್ಮೆ ಪರೀಕ್ಷಿಸುತ್ತದೆ. ಬಹುಶಃ ಎರಡೂವರೆ ಗಂಟೆಯ ಗಡುವೊಂದನ್ನು ನಿರ್ದೇಶಕ ಹಾಕಿಕೊಂಡಿದ್ದರೆ ಕಥೆಯನ್ನು ಇನ್ನಷ್ಟು ಬಿಗಿಯಾಗಿಸಬಹುದಿತ್ತು.

ಒಂದೆಡೆ ಎಂಥ ದೃಶ್ಯವೇ ಆಗಲಿ, ಅದನ್ನು ತನ್ನದಾಗಿಸಿಕೊಳ್ಳುವ ವಿಜಯ್ ಸೇತುಪತಿ ಇದ್ದರೂ ತಾನಷ್ಟೇ ನಾಯಕನಲ್ಲ ಎಂಬಂತೆ ಎಲ್ಲರೊಂದಿಗೂ ತೆರೆಯನ್ನು ಹಂಚಿಕೊಳ್ಳುವ ವಿಜಯ್ ಇಷ್ಟವಾಗುತ್ತಾರೆ. ವಿಜಯ್ ಪಾತ್ರದ ಸೋಮಾರಿತನವನ್ನು, ಏಕೆ ಅವರನ್ನು ಕಂಡರೆ ವಿದ್ಯಾರ್ಥಿಗಳಿಗಿಷ್ಟ ಅನ್ನುವುದನ್ನು ತೋರಿಸಲೇ ಮೊದಲರ್ಧ ಭಾಗದ ಅರ್ಧದಷ್ಟು ಸಮಯ ವ್ಯಯಿಸಿದ್ದಾರೆ. ಆದರೆ ಅದು ಮನರಂಜನೆಯ ದೃಷ್ಟಿಯಿಂದ ವಿಜಯ್ ಅಭಿಮಾನಿಗಳಿಗೆ ಹಬ್ಬ. ಇದಷ್ಟೇ ಅಲ್ಲ. ಮೈ ನವಿರೇಳಿಸುವ ಹೊಡೆದಾಟದ ದೃಶ್ಯಗಳೊಂದಿಗೆ ವಿಜಯ್ ಅಭಿಮಾನಿಗಳಿಗಾಗಿಯೇ ಮೀಸಲೆಂಬಂತೆ ಅಲ್ಲಲ್ಲಿ ಬಗೆಬಗೆಯ ರುಚಿಕಟ್ಟಾದ ಅಂಶಗಳನ್ನು ಕಥೆಯಲ್ಲಿ ಮೀಸಲಿಟ್ಟಿದ್ದಾರೆ. ಇನ್ನೂ ವಿಜಯ್ ಚಿಕ್ಕ ಹುಡುಗರ ಹಾಗೆಯೇ ತೆರೆಯಲ್ಲಕಾಣಿಸಿಕೊಳ್ಳುವುದು ಮಾತ್ರ ಅಚ್ಚರಿಯ ಸಂಗತಿ.

ಸಿನಿಮಾ ಮುಗಿದಾಗ ಒಂದೊಳ್ಳೆಯ ಮನರಂಜನೆಯ ಸಿನಿಮಾವನ್ನು ನೋಡಿದೆ ಅನ್ನಿಸಿದರೂ ಕೆಲವೆಡೆ ಇನ್ನಷ್ಟು ಮುತುವರ್ಜಿವಹಿಸಿದ್ದರೆ ಈ ಸಿನಿಮಾ ಮತ್ತಷ್ಟು ಚೆನ್ನಾಗಿ ಮೂಡಿ ಬರುತ್ತಿತ್ತು ಅನ್ನುವುದಂತೂ ಸತ್ಯ.

ಕೊರೋನಾ ನಿರ್ಬಂಧನೆ ಸಡಿಲಿಸಿದ ತರುವಾಯ ದೊಡ್ಡ ತಾರಾಗಣದ ಸಿನಿಮಾಗಳು ಶುರುವಾಗದೆ ಜನರನ್ನು ಸೆಳೆಯಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ನೋಡಿದಾಗ "ಮಾಸ್ಟರ್" ಸಿನಿಮಾ ಒಳ್ಳೆಯ ಆರಂಭವನ್ನೇ ಸಿನಿರಂಗಕ್ಕೆ ನೀಡಿದೆ. ಅದು ಮುಂದುವರಿಯಲಿ.

-Santhosh Kumar LM
15-Jan-2021

No comments:

Post a Comment

Please post your comments here.