Friday, July 24, 2020

French Biriyani (kannada, 2020)






ಇದು ನನ್ನ ಅನಿಸಿಕೆ. ಹಾಸ್ಯ Genreನ ಸಿನಿಮಾಗಳನ್ನು ಎರಡು ಬಗೆಯಲ್ಲಿ ವಿಂಗಡಿಸಬಹುದು. ಒಂದು ಸಿನಿಮಾದ ಕಥೆಯೊಳಗೆ ಬೆರೆತು ಹೋದ ಹಾಸ್ಯ. ಇನ್ನೊಂದು ಕಥೆಯ ಎಳೆ ಮಾಮೂಲಿಯಾಗಿದ್ದು ಸಂಭಾಷಣೆಯಲ್ಲಿ ತರುವ ಹಾಸ್ಯ. ಮೊದಲ ಬಗೆಯಲ್ಲಿ ನಮಗರಿವಿಲ್ಲದೆ ನಾವು ನಕ್ಕರೆ, ಎರಡನೆಯ ಬಗೆಯಲ್ಲಿ ಸಂಭಾಷಣೆಗಳು ನಗು ಉಕ್ಕಿಸುತ್ತವೆ. ಮೊದಲನೆಯದರ ಸಮಸ್ಯೆಯೆಂದರೆ ಸಿನಿಮಾ ನಮ್ಮನ್ನು ಸೆಳೆದುಕೊಳ್ಳದಿದ್ದರೆ ಹಾಸ್ಯ ದೊಡ್ಡ ಮಟ್ಟದಲ್ಲಿ ಸೋಲುತ್ತದೆ. ಗೆದ್ದರೆ ಸಿನಿಮಾ ಸೂಪರ್ ಹಿಟ್. ಯಾವುದೇ ಅಶ್ಲೀಲ ಸಂಭಾಷಣೆಯಿಲ್ಲದ ಕಥೆಯೊಂದಿಗೆ ಹಾಸ್ಯ ಬೆರೆತ, ಕಡೆಗೆ ಅನಿರೀಕ್ಷಿತ ತಿರುವಿನೊಂದಿಗೆ ಅದ್ಭುತ ಸಂದೇಶವೊಂದನ್ನು ಕೊಟ್ಟ "ಒಂದು ಮೊಟ್ಟೆಯ ಕಥೆ" ಇದಕ್ಕೊಂದು ಉದಾಹರಣೆ.

ಎರಡನೆಯ ಬಗೆಯ ಹಾಸ್ಯದ ಸಿನಿಮಾಗಳಲ್ಲಿ ರಿಸ್ಕ್ ಕಡಿಮೆ. ಏಕೆಂದರೆ ಸಂದರ್ಭವನ್ನು ಸೃಷ್ಟಿಸಿ ನಮಗೆ ಬೇಕಾದ ಹಾಸ್ಯದ ಸಂಭಾಷಣೆಯನ್ನು ತುರುಕಿದರೆ ಅರ್ಧಕ್ಕರ್ಧ ಗೆದ್ದಂತೆ. ನನ್ನ ಪ್ರಕಾರ "ಫ್ರೆಂಚ್ ಬಿರಿಯಾನಿ" ಎರಡನೆಯ ವರ್ಗಕ್ಕೆ ಸೇರಿದ ಸಿನಿಮಾ. ಸಿನಿಮಾ ಪೂರ್ತಿ ಡೈಲಾಗುಗಳಲ್ಲಿ ಹಾಸ್ಯವನ್ನು ಬೆರೆಸಲು ನಿರ್ದೇಶಕ ಶ್ರಮ ಹಾಕಿದ್ದಾರೆ.

ಅನೇಕ ಪಾತ್ರಗಳು ಸ್ವತಂತ್ರವಾಗಿಯೇ ಹಾಸ್ಯವುಕಿಸುತ್ತವೆ. ಅರ್ಧಂಬರ್ಧ ಇಂಗ್ಲೀಷ್ ಅರ್ಥವಾಗುವ ರಂಗಾಯಣ ರಘು "ರೇಸಿಸ್ಟ್" ಅನ್ನೋ ಪದವನ್ನು "ರನ್ನಿಂಗ್ ರೇಸ್ನಲ್ಲಿ ಭಾಗವಹಿಸುವವ" ಎಂದು ಭಾವಿಸಿ ನಮ್ಮ ಮನೆಯವರೆಲ್ಲ "ರೇಸಿಸ್ಟ್-ಗಳು" ಅಂತ ಅನ್ನುವುದು. ಆ ವಿದೇಶಿಗ ತನಗೆ ಇಂಡಿಯಾ ಅನ್ನುವುದು "ಫಾರಿನ್ ಕಂಟ್ರಿ" ಅಂದಾಗ "ಇಂಡಿಯಾ ಮಾತ್ರ ಲೋಕಲ್, ಉಳಿದದ್ದೆಲ್ಲ ಫಾರಿನ್" ಅಂತ ವಾದಿಸುವುದು ಇಂಥವೆಲ್ಲ ನಗು ತರಿಸುತ್ತವೆ. ಅದರಲ್ಲೂ ಮಕ್ಕಳಾಗಲಿಲ್ಲ ಅಂತ ವೈದ್ಯರ ಬಳಿ ಬರುವ ಗಂಡ-ಹೆಂಡತಿ ಜೋಡಿಯ ಹಾಸ್ಯ ಇಷ್ಟವಾಯಿತು. ಆ ಪಾತ್ರಗಳಲ್ಲಿ ನಟಿಸಿದ ನಾಗಭೂಷಣ ಮತ್ತು ಹರಳು ಹುರಿದಂತೆ ಮಾತನಾಡುವ (ರಹೀಲಾ ಪಾತ್ರದ) ಸಿಂಧು ಮೂರ್ತಿ ಜೋಡಿ ಇಷ್ಟವಾದರು. ವಾಟರ್ ಪ್ಯೂರಿಫೈಯರ್ ಮಾರಲೆಂದು ಬಂದು ಡಾನ್ ಕೈಯಲ್ಲಿ ಸಿಕ್ಕಿಕೊಂಡು ಕೊನೆಯವರೆಗೂ ಮೂಲೆಯೊಂದರಲ್ಲಿ ನೇತಾಡುವ ಪಾತ್ರದಲ್ಲಿ ಹಂಪಕುಮಾರ್ ಅಂಗಡಿ ನಕ್ಕುನಗಿಸುತ್ತಾರೆ.

ಆದರೆ ಸಿನಿಮಾದಲ್ಲಿ ಹೀರೋ ರೇಂಜಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು "ಮಝಲ್ ಮಣಿ" ಪಾತ್ರದಲ್ಲಿ ಬರುವ ಮಹಂತೇಶ್ ಹೀರೇಮಠ್. ಒಂದು ಕ್ಷಣ ಥೇಟ್ ತಮಿಳಿನ ಯೋಗಿ ಬಾಬು ಕನ್ನಡದಲ್ಲಿ ನಟಿಸಿದರೇನೋ ಅಂದುಕೊಂಡೆ. ಆ ಸನ್ನಿವೇಶ, ವಾತಾವರಣಕ್ಕೂ ತಮಿಳಿನ ಕೆಲ ಸಿನಿಮಾಗಳ ಛಾಯೆ ಇದೆ. ಆದರೆ ಯಾವ ಕ್ಷಣದಲ್ಲೂ ಆತನ ನಟನೆ ಅತಿರೇಕ ಅನಿಸಿಕೊಳ್ಳಲಿಲ್ಲ. ಗಂಭೀರವಾಗಿದ್ದುಕೊಂಡೇ ನಕ್ಕುನಗಿಸುತ್ತಾರೆ. ಗ್ಯಾರಂಟಿ ಆತನಿಗೆ ಅವಕಾಶಗಳು ಸಿಗಲಿವೆ. ಬಹುತೇಕ ಪಾತ್ರಗಳಿಗೆ ಹಾಸ್ಯದ ಲೇಪವಿರುವುದರಿಂದ, ಇಡೀ ಸಿನಿಮಾವನ್ನು ಹೊತ್ತು ಹೋಗುವ ಜವಾಬ್ದಾರಿ ದಾನಿಶ್ ಸೇಠ್'ಗೆ ಸಿಗಲಿಲ್ಲ ಅನ್ನಿಸಿತು.

ಇಷ್ಟೆಲ್ಲ ಹೇಳಿದ್ದು ಸಂಭಾಷಣೆ ಮತ್ತು ಎಲ್ಲ ಪಾತ್ರಗಳನ್ನು ಬಿಡಿಬಿಡಿಯಾಗಿ ನೋಡಿದಾಗ. ಆದರೆ ಇಡೀ ಕತೆಯನ್ನು ಒಟ್ಟಾಗಿ ನೋಡಿದರೆ ಸಿನಿಮಾಗೆ ಅನ್ನಿಸಿಕೊಳ್ಳುವಷ್ಟು ಕಥೆ ಸಶಕ್ತವಾಗಿಲ್ಲ ಅನ್ನಿಸಿತು. ಕಥೆಯೇ ಹೀಗಿರುವಾಗ ಕ್ಲೈಮ್ಯಾಕ್ಸ್ ಹೇಗಿದೆ, ಓಪನಿಂಗ್ ಹೇಗಿದೆ ಅಂತ ಕೇಳುವುದು ಅಸಮಂಜಸ. ಕೆಲವು ಕಡೆ ಹಾಸ್ಯಕ್ಕೆಂದೇ ಬಳಕೆಯಾಗುವ ಪದಗಳು ಎಲ್ಲರಿಗೂ ಇಷ್ಟವಾಗುವುದಿಲ್ಲವೇನೋ ಆಪೇಕ್ಷಾರ್ಹ ಪದಗಳನ್ನು ಬಳಸದೆ Rap Songಗಳನ್ನು ಬರೆಯುವಂತಿಲ್ಲವೇ ಎಂದು ನನಗೆ ಒಂದು ಹಾಡನ್ನು ಕೇಳಿದಾಗ ಅನ್ನಿಸಿತು. ಪುನೀತ್ ಹಾಡಿರುವ ಹಾಡೊಂದಕ್ಕೆ ಹೆಜ್ಜೆ ಹಾಕುವ ಧೈರ್ಯವನ್ನು ಸ್ವತಃ ನಿರ್ದೇಶಕರೇ ಏಕೆ ಮಾಡಿದರೋ ನಾ ಕಾಣೆ! ಪುನೀತ್ ಅವರೇ ಆ ಹಾಡಿಗೆ ಡ್ಯಾನ್ಸ್ ಮಾಡಿದ್ದರೆ ಸಿನಿಮಾಗೆ ಇನ್ನೊಂದು ತೂಕ ಬಂದಿರುತ್ತಿತ್ತು.

ಕೆಲವು ಕಡೆ ಗೊಂದಲ ಮೂಡಿಸುವ ವಿಷಯವೆಂದರೆ ಫ್ರೆಂಚ್ ವ್ಯಕ್ತಿಗೆ ಇಲ್ಲಿಯವರು ಕನ್ನಡದಲ್ಲಿ ಹೇಳಿದಾಗ ಅರ್ಥವಾಗಲಿಲ್ಲ ಅಂತ ಅಡ್ಡಡ್ಡ ತಲೆಯಾಡಿಸುತ್ತಾನೆ. ಮಧ್ಯೆ ಪ್ರವೇಶಿಸುವ ದಾನಿಶ್ ಸೇಠ್ ಉರ್ದು/ಹಿಂದಿಯಲ್ಲಿ ಅದನ್ನು ಹೇಳಿದಾಗ ಅರ್ಥವಾಯಿತು ಎಂಬಂತೆ ಪ್ರತಿಕ್ರಿಯಿಸುತ್ತಾನೆ.

ಒಟ್ಟಾರೆ ಏನನ್ನಿಸಿತು ಅಂದರೆ "ಲಾ" ಸಿನಿಮಾ ನೋಡಿದಾಗಿನ ಕಿರಿಕಿರಿ ಇಲ್ಲಿ ಕಾಣಲಿಲ್ಲ. ಪನ್ನಗಭರಣ ಕಥೆಯ ಬಗ್ಗೆ ಇನ್ನೊಂದಷ್ಟು ಹೋಂವರ್ಕ್ ಮಾಡಲಿ. ಇದೇ ಹಾಸ್ಯವನ್ನು ಸಶಕ್ತ ಕಥೆಯೊಂದಿಗೆ ಕೊಟ್ಟಿದ್ದರೆ ಇದು ಬೇರೆಯದೇ ಥರ ಇರುತ್ತಿತ್ತು ಅನ್ನುವುದರಲ್ಲಿ ಸಂಶಯವಿಲ್ಲ. PRK Productions ಆಯ್ಕೆ ತಪ್ಪುತ್ತಿದ್ದಾರೆ ಅಂತ ಮತ್ತೊಮ್ಮೆ ಅನಿಸುತ್ತಿರುವುದು ಬೇಸರದ ವಿಷಯ. ಏಕೆಂದರೆ ನಾವು ಅಂಥ ಬ್ಯಾನರ್'ನಿಂದ ಬಯಸುತ್ತಿರುವುದು average ಸಿನಿಮಾಗಳನ್ನಲ್ಲ

-Santhosh Kumar LM
24-Jul-2020