Friday, February 7, 2020

ತೇಜೋ-ತುಂಗಭದ್ರಾ By Vasudhendra



ಇದು ಇತಿಹಾಸದ ಪುಸ್ತಕವಲ್ಲ. ಎಲ್ಲಿಯೂ ಯಾವ ಇಸವಿಯಲ್ಲಿ ಏನಾಯಿತು ಅನ್ನುವ ಪಠ್ಯವನ್ನು ಎಲ್ಲೂ ಹೇಳಿಲ್ಲ. ಆ ಬಗೆಯ ಪುಸ್ತಕವನ್ನು ನೀವು ಎದುರು ನೋಡುತ್ತಿದ್ದರೆ ದಯವಿಟ್ಟು ಈ ಪುಸ್ತಕ ನಿಮಗೆ ಸರಿಯಾದ ಆಯ್ಕೆಯಲ್ಲ. ಆದರೆ ಒಂದು ಕಾಲಮಾನವನ್ನು ತನ್ನ ಕೃತಿಗೆ ಆಯ್ದುಕೊಂಡು, ಆ ಕಾಲಮಾನದಲ್ಲಿ ಬರುವ ಇತಿಹಾಸದ ಘಟನೆಗಳಿಗೆ ಲೇಖಕ ತನ್ನ ಕಾಲ್ಪನಿಕ ಕಥೆಯನ್ನು ಹೆಣೆದಿರುವಂತಹ ರೋಚಕ ಕಥೆ ಇದರೊಳಗಿದೆ.



ಈ ಕಾದಂಬರಿಯಲ್ಲಿ ಒಂದೇ ಸಮುದ್ರದ ಎರಡು ದಡಗಳಿವೆ. ಒಂದು ಪೋರ್ಚುಗಲ್ ದೇಶದ ಲಿಸ್ಬನ್'ನತ್ತ ಚಾಚಿಕೊಂಡಿದ್ದರೆ ಇನ್ನೊಂದು ಭಾರತದ ಗೋವಾದಲ್ಲಿದೆ. ಕಥೆಯ ಪಾತ್ರಗಳು ಆ ದಡದಿಂದ ಈ ದಡಕ್ಕೆ ಪ್ರಯಾಣಿಸಬೇಕು. ಅದಕ್ಕೆ ಇತಿಹಾಸದ ಮಹತ್ತರವಾದ ಪ್ರಯಾಣವೊಂದರ ಸಾಕ್ಷಿಯಿದೆ. ಆ ಪ್ರಯಾಣದ ಮುಂಚಿನ ಕೆಲವರ್ಷಗಳಲ್ಲಿ ಲಿಸ್ಬನ್ ನಲ್ಲಿ ಅನೇಕ ಘಟನೆಗಳಾಗಿವೆ. ಅದೇ ರೀತಿ ಪ್ರಯಾಣ ನಡೆಯುವಾಗಲೂ ಮತ್ತು ಪ್ರಯಾಣ ಮುಗಿದ ತರುವಾಯವೂ ಇತ್ತ ಭಾರತದಲ್ಲೂ ಅನೇಕ ಗುರುತಿಟ್ಟುಕೊಳ್ಳಬೇಕಾದ ಘಟನೆಗಳಿವೆ. ಇವೆಲ್ಲವನ್ನೂ ಬಳಸಿಕೊಂಡು ಆ ಸಮಯದಲ್ಲಿ ಎರಡೂ ದೇಶಗಳಲ್ಲಿ ನಡೆದ ಸಾಮಾಜಿಕ ಜೀವನದ ಅನೇಕ ವಿಷಯಗಳನ್ನು ಬಳಸಿಕೊಂಡು ಈ ಕಥೆಯನ್ನು ಹೆಣೆಯಲಾಗಿದೆ. ಇದೇ ಈ ಕಾದಂಬರಿಯ ಕಥೆ ಹೆಣೆದ ತಂತ್ರ.



ಬಹುಶಃ ಈ ಕಾದಂಬರಿಯಲ್ಲಿ ಹೇಳುವ ಹಾಗೆ ಸಾಮಾಜಿಕ ವಿಷಯಗಳನ್ನು ನನ್ನ ಹೈಸ್ಕೂಲಿನ ಸಮಾಜ ಪಠ್ಯದಲ್ಲಿ ಹೇಳಿದ್ದರೆ ನನಗೆ ಆ ಪುಸ್ತಕ ಇನ್ನೂ ಹೆಚ್ಚು ಅರ್ಥವಾಗುತ್ತಿತ್ತೇನೋ! ಉಪ್ಪಿಟ್ಟು ಇಷ್ಟವಿಲ್ಲ ಅಂದಾಗ ಅಮ್ಮ ಅದಕ್ಕೆ ಘಮ್ಮೆನ್ನುವ ಅವರೇಕಾಳು ಹಾಕಿ "ಈಗ ನೋಡು" ಅನ್ನುವಂತಿದೆ ಈ ಕಥಾತಂತ್ರ. ಒಂದೊಂದೇ ಅವರೇಕಾಳನ್ನು ಉಪ್ಪಿಟ್ಟಿನ ಜೊತೆ ತಿನ್ನುತ್ತ ಕಡೆಗೆ ನೋಡಿದರೆ ತಟ್ಟೆ ಖಾಲಿ. ಬಹುಶಃ ಅನೇಕ ಕಡೆ ಈ ಕಾದಂಬರಿ ರೋಚಕವೆನಿಸುವ ಕಥೆ ಹೇಳಿರುವುದರಿಂದಲೇ ಏನೋ 450 ಪುಟಗಳಿದ್ದರೂ ನನಗೆ ತನ್ನಷ್ಟಕ್ಕೆ ತಾನೇ ಓದಿಸಿಕೊಂಡು ಹೋಯಿತು. ಇಲ್ಲೇ ಒಂದು ಕೃತಿಯಾಗಿ ಇದರ ಗೆಲುವಿದೆ. ನಮಗೆ ಗೊತ್ತೇ ಇರದ ಅನೇಕ ಬೆಚ್ಚಿಬೀಳಿಸುವ ವಿಷಯಗಳನ್ನು ಕಥನದ ಭಾಗವಾಗಿಯೇ ಲೇಖಕರು ನಮಗೆ ಪರಿಚಯ ಮಾಡಿಕೊಡುತ್ತಾರೆ.


ನೆನಪಿಡಿ. ಇತಿಹಾಸವೆಂದರೆ ನಮಗೆ ಕಣ್ಮುಂದೆ ಬರುವುದೇ ರಾಜ, ಅವನಿಗಿದ್ದ ರಾಣಿಯರು, ಅವನ ಸಾಮ್ರಾಜ್ಯದ ವಿಸ್ತಾರ, ಯಾವ ಇಸವಿಯಲ್ಲಿ ಯಾವ ಯುದ್ಧ ಗೆದ್ದ, ಎಷ್ಟು ಸಂಪತ್ತು ಗಳಿಸಿದ. ಮತ್ತು ಬಹುತೇಕ ವಿವರಗಳಲ್ಲಿ ಆತನ ಸಾಮ್ರಾಜ್ಯ ಸುಭಿಕ್ಷವಾಗಿತ್ತು ಅನ್ನುವ ಸಾಲಿನೊಂದಿಗೆ ಕೊನೆಗೊಳ್ಳುತ್ತದೆ. ಈ ಕಾದಂಬರಿಯಲ್ಲಿ ರಾಜರ ಬಗ್ಗೆ ಗುಣಗಾನವಿಲ್ಲ. ರಾಜರು ಪಾತ್ರಗಳಾಗಿ ಬರುತ್ತಾರಾದರೂ ಕಥೆಯ ಯಾವುದೋ ಒಂದು ಭಾಗದಲ್ಲಿ ಮೂಲಕಥೆಗೆ ತಿರುವು ಕೊಟ್ಟು ಹೋಗುತ್ತಾರೆ. ಆದರೆ ಅವರ ಆಳ್ವಿಕೆಯ ಸಮಯದ ಸಾಮಾಜಿಕ ನಂಬಿಕೆಗಳು, ಆಚರಣೆಗಳು, ವಿವಿಧ ಮಹತ್ತರ ಘಟನೆಗಳು ಹೇಗೆ ಜನಸಾಮಾನ್ಯರ ಜೀವನದಲ್ಲಿ ಪರಿಣಾಮ ಬೀರಿದವು ಅನ್ನುವುದನ್ನು ಕಥೆ ಓದುತ್ತಲೇ ತಿಳಿಯಬಹುದು. ಮತ್ತೊಮ್ಮೆ ಹೇಳುವುದಾದರೆ ಇವೆಲ್ಲ ಘಟನೆಗಳನ್ನು ಪಾಠ ಹೇಳುವಂತೆ ಎಲ್ಲೂ ಹೇಳಿಲ್ಲ. ಕಥೆಯ ಭಾಗವಾಗಿಯೇ ಅವು ಚಿತ್ರಿತವಾಗಿವೆ. ಪುಸ್ತಕದ ಪ್ರತೀ ಪುಟದಲ್ಲು ಗುರುತಿಟ್ಟುಕೊಳ್ಳಬಲ್ಲ ಅನೇಕ ಸಾಲುಗಳಿವೆ. ಅಲ್ಲಿ ಪಾತ್ರಗಳ ನಡುವೆ ವಿಚಾರವೊಂದರ ಬಗ್ಗೆ ತರ್ಕ ನಡೆಯುತ್ತದೆ. ಆ ಸಾಲುಗಳು ಕಥೆಗೂ ಚಂದ ಕಾಣುತ್ತದೆ. ಕಥೆಯ ಹೊರಗೂ ಓದಲು ಅರ್ಥ ಕೊಡುವಂತಿವೆ.


ಈ ಕಾದಂಬರಿಯಲ್ಲಿ ಬರುವ ಅನೇಕ ವಿಷಯಗಳನ್ನು ಪ್ರಸ್ತುತ ಪ್ರಪಂಚಕ್ಕೂ ತಳುಕು ಹಾಕಿಕೊಳ್ಳಬಹುದು.

*******************************************************************************************


ಗ್ಯಾಬ್ರಿಯಲ್ ಈ ಕಥೆಯಲ್ಲಿರುವ ಅನೇಕ ನಾಯಕರುಗಳಲ್ಲಿ ಒಬ್ಬ ನಾಯಕ. ಆತ ಚಿಕ್ಕವನಾಗಿದ್ದಾಗ ಮೊದಲೇ ಕ್ರಿಶ್ಚಿಯನ್ನರು ಯಹೂದಿಗಳನ್ನು ಅಧರ್ಮೀಯರು ಎಂದು ಶತ್ರುಗಳು ಎಂಬಂತೆ ನೋಡುತ್ತಿದ್ದ ಹೊತ್ತು. ಅದೊಮ್ಮೆ "ತಾನು ಯಹೂದಿಯರನ್ನು ಕಣ್ಣಾರೆ ನೋಡಬೇಕು" ಎಂದು ಆಸೆಪಟ್ಟು ತನ್ನ ಚಿಕ್ಕಪ್ಪನೊಡನೆ ಆ ಜನರು ವಲಸೆ ಬರುತ್ತಿದ್ದ ಶಿಬಿರಗಳತ್ತ ಹೋಗುತ್ತಾನೆ. ಆಗ ಆತನಿಗೆ ಗೊತ್ತಾಗುತ್ತದೆ ಅವರೆಲ್ಲರೂ ತಮ್ಮಂತೆಯೇ ಕಾಣುವ ಮನುಷ್ಯರು ಅಂತ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಭಾರತೀಯ ಮಸಾಲೆ ಪದಾರ್ಥಗಳಿಗೆ ಪೋರ್ಚುಗಲ್ ದೇಶದಲ್ಲಿ ಚಿನ್ನದ ಬೆಲೆಯಿರುತ್ತದೆ. ಇಡೀ ಪ್ರಪಂಚವೇ ಸಂಪದ್ಭರಿತ ಭಾರತದ ಮೇಲೆ ಕಣ್ಣಿಟ್ಟಿರುತ್ತದೆ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಯಹೂದಿಗಳನ್ನು ಎಲ್ಲರೂ ದ್ವೇಷಿಸಿದರೂ ಪೋರ್ಚುಗಲ್ ರಾಜ ತನ್ನ ದೇಶದೊಳ್ಳಕ್ಕೆ ಬಿಟ್ಟುಕೊಳ್ಳುತ್ತಾನೆ. ಅದು ಅವರ ಮೇಲಿನ ಪ್ರೀತಿಯಿಂದಲ್ಲ. ಆದರೆ ಬುದ್ಧಿವಂತರಾದ ಯಹೂದಿಗಳು ವ್ಯಾಪಾರಸ್ಥರು. ಅವರು ಬಂದರೆ ದೇಶದ ಆದಾಯ ಹೆಚ್ಚಿ ಉದ್ಧಾರವಾಗುತ್ತದೆ ಎಂಬ ಸ್ವಾರ್ಥದ ಕಾರಣಕ್ಕೆ!

-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦

ಅದಾಗ ತಾನೇ ಮುದ್ರಣದ ತಂತ್ರಜ್ಞಾನ ದೇಶದೊಳಗೆ ಕಾಲಿಟ್ಟು ಕೈಬರಹದಿಂದಲೇ ಜೀವನ ಮಾಡುತ್ತಿದ್ದ ಅನೇಕರು ಅದನ್ನು ದ್ವೇಷಿಸುತ್ತಾರೆ. ತಮ್ಮ ಕೆಲಸ ಕಳೆದುಕೊಳ್ಳುವ ಭಯದಿಂದ!

-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಯಹೂದಿಗಳು ಬುದ್ಧಿವಂತರು ಹೌದು. ಆದರೆ ಮುದ್ರಣಕ್ಕೆ ಸಂಬಂಧಿಸಿದ ಶ್ರಮದ ಕೆಲಸಗಳನ್ನು ಮಾಡಲು ಆಫ್ರಿಕಾದ ಗುಲಾಮರನ್ನು ಬಳಸಿಕೊಳ್ಳುತ್ತಾರೆ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಯಹೂದಿಗಳಲ್ಲೂ ಗಂಡು ಮಗು ಹುಟ್ಟಿದರಷ್ಟೇ ಸಂಭ್ರಮ. ಮನೆಯಲ್ಲಿ ಸಡಗರ, ಹಬ್ಬದ ವಾತಾವರಣ. ಹೆಣ್ಣು ಮಗು ಹುಟ್ಟಿದರೆ ತಮ್ಮ ವ್ಯವಹಾರಕ್ಕೆ ಉಪಯೋಗವಾಗಲಾರಳು ಅನ್ನುವ ಲೆಕ್ಕಾಚಾರ.



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಯಹೂದಿಗಳನ್ನು ಪೋರ್ಚುಗಲ್ಲಿನ ಜನಸಾಮಾನ್ಯರು ದ್ವೇಷಿಸುವುದಿಲ್ಲ. ಆದರೆ ಸ್ವತಃ ಅಧಿಕಾರದಲ್ಲಿದ್ದ ರಾಣಿಯೇ ಯಹೂದಿಗಳನ್ನು ಕೊಲ್ಲಿ ಅಂದರೆ ಈಗಾಗಲೇ ಯಹೂದಿಗಳ ವ್ಯವಹಾರ-ಸಂಪತ್ತನ್ನು ನೋಡಿ ಹೊಟ್ಟೆಕಿಚ್ಚುಪಡುವ ಜನಸಾಮಾನ್ಯರು ಸುಮ್ಮನೆ ಬಿಟ್ಟಾರೆಯೇ?



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಯಹೂದಿಗಳು ಬದುಕುಳಿಯಬೇಕೆಂದರೆ ಮತಾಂತರ ಹೊಂದಬೇಕಾದ, ಅಥವಾ ಸಾಧ್ಯವಿಲ್ಲವೆಂದರೆ ತಮ್ಮೆಲ್ಲ ಸಂಪತ್ತನ್ನು ಅಲ್ಲೇ ಬಿಟ್ಟು ದೇಶಾಂತರ ಹೋಗಬೇಕಾದ ಸಂದರ್ಭ. ಈ ಇಕ್ಕಟ್ಟಿನ ಸಂದರ್ಭದಲ್ಲಿ ಪ್ರಶ್ನೆಯೊಂದು ಎದುರಾಗುತ್ತದೆ "ಧರ್ಮ ಮುಖ್ಯವೇ? ಅಥವ ಬದುಕೇ". ಯಹೂದಿಗಳು ಆಯ್ಕೆ ಮಾಡಿಕೊಂಡದ್ದು ಏನು? ಈ ಸಂದರ್ಭ ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುತ್ತದೆ.


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಮತಾಂತರ ಒಂದೇ ಅಂತಿಮವಲ್ಲ. ಏಕೆಂದರೆ ಮೂಲ ಧರ್ಮದಲ್ಲೇ ಇದ್ದವರು ನೇರವಾಗಿ ಮತಾಂತರ ಹೊಂದಿದವರನ್ನು ತಮ್ಮವರೆಂದು ಎಷ್ಟು ಮನಃಪೂರ್ವಕವಾಗಿ ಒಪ್ಪಿಕೊಳ್ಳಬಹುದು?



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಭಾರತದ ಅತೀ ದುಬಾರಿ ಸುವಾಸನೆಭರಿತ ಮಸಾಲೆ ಪದಾರ್ಥಗಳ ಮೇಲೆ ಪ್ರಪಂಚದ ಕಣ್ಣಿರುವಾಗ ಜೀವ ಕೊಟ್ಟಾದರೂ ಸರಿ. ಭಾರತಕ್ಕೆ ಅಪಾಯಕಾರಿ ನೌಕೆಯಲ್ಲಿ ಪ್ರಯಾಣಿಸಿ ಹೋಗಿಬರುತ್ತೇವೆನ್ನುವ ಎಲ್ಲ ರಾಷ್ಟ್ರಗಳ ಜನಗಳು. ಭಾರತದ ಈ ಆಕರ್ಷಣೆಯಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಳ್ಳುತ್ತೇವೆ ಎಂದು ಅಲ್ಲಿನ ಜನಗಳು ಭಾರತವನ್ನೇ ದ್ವೇಷಿಸುವ ಪರಿ.

ಗಮನಿಸಿ. ಕೆಲ ವರ್ಷಗಳ ಹಿಂದೆ ಭಾರತೀಯ ಸಾಫ್ಟ್ವೇರ್ ಜಗತ್ತಿನಲ್ಲೂ ಅಮೇರಿಕಾ ಕೈತುಂಬಾ ಹಣವನ್ನು ಕೊಟ್ಟು ಭಾರತೀಯ ನೌಕರರನ್ನು ತನ್ನತ್ತ ಸೆಳೆಯುತ್ತಿದ್ದಾಗ ಅದೆಷ್ಟು ಜನ ಅಮೇರಿಕಾವನ್ನು ದ್ವೇಷಿಸುತ್ತಿದ್ದರು?


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಪೋರ್ಚುಗೀಸ್ ದೇಶದಲ್ಲಿ ರಾಜ ಒಂದು ಹಿಡಿ ಮೆಣಸು ಎಸೆದರೆ ಇಡೀ ಜನಸಮೂಹ ಅದರ ಒಂದೇ ಕಾಳನ್ನು ಕಸಿಯುವ ಭರದಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗುತ್ತದೆ. ಅದು ಆ ದೇಶದಲ್ಲಿ ಆಗ ಮೆಣಸಿಗಿದ್ದ ಬೆಲೆ.


ಅದೇ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ತೆಂಬಕೇಶ್ವರನ ತೇರಿಗೆ ಕೈಮುಗಿಯುತ್ತ ಜನ ರಾಶಿ ರಾಶಿ ಮೆಣಸನ್ನು ಎರಚುತ್ತಾರೆ. ಇಡೀ ಬೀದಿಗಳಲ್ಲೆಲ್ಲ ಮೆಣಸು. ಮರುದಿನ ಕಸಗುಡಿಸುವವರು ಅವನ್ನೆಲ್ಲ ತಿಪ್ಪೆಗೆ ಸುರಿದು ಹಾದಿಬೀದಿಗಳನ್ನು ಸ್ವಚ್ಚಗೊಳಿಸುತ್ತಾರೆ. ವಿಪರ್ಯಾಸ ಅನ್ನಿಸುವ ಎರಡೂ ದೇಶದ ಪರಿಸ್ಥಿತಿಗಳನ್ನು ಗಮನಿಸಿ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಪ್ರಪಂಚದ ಯಾವುದೇ ದೇಶದ ಯಾವುದೇ ಕಾಲಮಾನವಿರಲಿ. ಯುದ್ಧ ಎನ್ನುವುದು ಬಂದಾಕ್ಷಣ ವ್ಯಾಪಾರಿಗಳಿಗೆ ಅದು ವ್ಯಾಪಾರದ ಸಂಗತಿಯೇ. ಯುದ್ಧ ಹೆಚ್ಚಾದಷ್ಟು ಅವರಿಗೆ ಲಾಭವೇ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಅತ್ತ ಲಿಸ್ಬನ್ ನಲ್ಲಿರಲಿ, ಇತ್ತ ವಿಜಯನಗರ ಸಾಮ್ರಾಜ್ಯದಲ್ಲಿರಲಿ. ಎರಡೂ ಕಡೆ ಕೇವಲ ಗಂಡು ಸಂತಾನಕ್ಕೆ ಮಾತ್ರ ಹಾತೊರೆಯುತ್ತಿದ್ದ ಜನ. ಲಿಂಗ ತಾರತಮ್ಯತೆಗೆ ದೇಶದ ಹಂಗಿಲ್ಲ!



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ವಿಜಯನಗರ ಸಾಮ್ರಾಜ್ಯದ ತೆಂಬಕಸ್ವಾಮಿಗೆ ಪ್ರಾಣಿಗಳನ್ನು ಬಲಿ ಕೊಡುವ ರೀತಿ ಮತ್ತು ಅಚಾನಕ್ಕಾಗಿ ಭಕ್ತಳೊಬ್ಬಳು ತನ್ನ ಕಿರುಬೆರಳನ್ನು ಬಲಿ ಕೊಡುವ ಭಯಾನಕ ದೃಶ್ಯ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಯಾವುದೇ ದೇಶದ ಯಾವುದೇ ರಾಜನಾದರೂ ಅವನ ನಂಬಿಕೆಯ ಮೇಲಷ್ಟೇ ಅಲ್ಲಿನ ನಿರ್ಣಯಗಳು ನಡೆಯುತ್ತವೆ.
ಉದಾ:ಕೃಷ್ಣದೇವರಾಯನೂ ತಾನು ವಿಷ್ಣುವನ್ನು ಪೂಜಿಸುತ್ತಿದ್ದರಿಂದ ಶೈವ ಹೆಸರಾದ ತೆಂಬಕಪುರಕ್ಕೆ ವೈಷ್ಣವಪುರ ಎಂದು ನಾಮಕರಣ ಮಾಡುವ ನಿರ್ಧಾರ ತೆಗೆದುಕೊಳ್ಳುವಿಕೆ.
ಈ ಘಟನೆಗಳು ಈಗ ನಡೆಯುತ್ತಿಲ್ಲವೇ?


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಮಲ ಹೊರುವ ಪದ್ಧತಿ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಅಲ್ಲೆಲ್ಲೋ ಉತ್ತರ ಭಾರತದಲ್ಲಿಯಷ್ಟೇ ಸತೀಸಹಗಮನ ಪದ್ಧತಿಯನ್ನು ಕೇಳಿದ್ದ ನಮಗೆ ಬೆಚ್ಚಿಬೀಳಿಸುವುದು ವಿಜಯನಗರ ಸಾಮ್ರಾಜ್ಯದಲ್ಲೇ ಈ ಪದ್ಧತಿ ಜಾರಿಯಲ್ಲಿತ್ತು ಅನ್ನುವುದು. ಇದರ ಬಗ್ಗೆ ಬೇರೇನೂ ಹೇಳಲಾರೆ. ಕಾದಂಬರಿಯಲ್ಲಿಯೇ ನೀವು ಓದಬೇಕು. ಬರೀ ಹೆಂಡತಿಯೊಬ್ಬಳು ಗಂಡನೊಡನೆ ಚಿತೆಗೆ ಹಾರುವುದನ್ನು ಮಾತ್ರ ಅರಿತಿದ್ದ ನಮಗೆ ಅದರ ಬಗೆಗಿನ ವಿವರಗಳು, ವಾತಾವರಣ, ಮಕ್ಕಳ ಮೇಲೆ ಅದು ಸೃಷ್ಟಿಸುವ ಪರಿಣಾಮ ಭಯಾನಕ!


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ವಿಜಯನಗರ ಸಾಮ್ರಾಜ್ಯಾಧಿಪತಿಯಾಗಿದ್ದ ಕೃಷ್ಣದೇವರಾಯ ಸಾಮಾನ್ಯ ಮಹಿಳೆಯಾಗಿದ್ದ ಗುಣಸುಂದರಿಯೊಂದಿಗೆ ಸಾಹಿತ್ಯಿಕ ಚರ್ಚೆಯಲ್ಲಿ ತೊಡಗುವುದು. ಮತ್ತು ತಾನು ಆಕೆಯ ಟೀಕೆಯನ್ನು ಮನಸಾ ಸ್ವೀಕರಿಸುವುದು



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಭಾರತಕ್ಕೆ ವಿದೇಶೀಯರಿಂದ ಕಾಗದ ಬಳಕೆಯ ಪರಿಚಯ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಅಟ್ಟಹಾಸಗೈಯುವ ಪ್ಲೇಗ್ ರೋಗ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಜಾತಿಪದ್ಧತಿಯ ಆಚರಣೆ, ಮತ್ತು ಈ ವ್ಯವಸ್ಥೆಯನ್ನು ಅರಿಯದ ವಿದೇಶೀಯರು



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಕಾಲ-ದೇಶಗಳ ಗಡಿಯಿಲ್ಲದೆ ಎಲ್ಲ ಸ್ಥಳಗಳಲ್ಲೂ ಕಸಿಯಲಾಗುತ್ತಿದ್ದ ಸ್ತ್ರೀಯರ ಹಕ್ಕು. ಪೋರ್ಚುಗೀಸರ ನೌಕೆಗಳಲ್ಲಿ ಸ್ತ್ರೀಯರ ಪ್ರಯಾಣವನ್ನು ನಿಷೇಧಿಸುವಿಕೆ!



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಕ್ರಿಶ್ಚಿಯನ್ ಧರ್ಮಾಧಿಕಾರಿಯೆ ಆದೇಶ ಕೊಟ್ಟಾಗ ಅಲ್ಲಿ ನಡೆಯುವ ಯಹೂದಿಗಳ ಮಾರಣಹೋಮ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ನಾವೆಗಳಲ್ಲಿ ಕಾಮವನ್ನು ಹತ್ತಿಕ್ಕಲು ಅಲ್ಲಿ ನಡೆಯುತ್ತಿದ್ದ ಸಲಿಂಗಕಾಮ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ತೆಂಬಕೇಶ್ವರನಿಗೆ ನಡೆಯುವ ಸಿಡಿಯಾಟದ ಸೇವೆ! ಇವತ್ತಿಗೂ ಇದು ತಮಿಳುನಾಡಿನಲ್ಲಿ ನಡೆಯುತ್ತಿಲ್ಲವೇ?


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಸಿಕ್ಕಿಬೀಳುವ ಗೂಢಾಚಾರರಿಗೆ ವಿಜಯನಗರದಲ್ಲಿ ಸಿಗುತ್ತಿದ್ದ ಆನೆಯಿಂದ ತುಳಿಸಿ ಕೊಲ್ಲುವ ಶಿಕ್ಷೆ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಆಗ ತಾನೇ ಮೆಣಸಿಗೆ ಪರ್ಯಾಯವಾಗಿ ಮೆಣಸಿನಕಾಯಿ ಪರಿಚಯವಾಗುವ ಸಂದರ್ಭ



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ವಿಜಯನಗರ ಸಾಮ್ರಾಜ್ಯದಲ್ಲಿ ರಾಜರ ಒಳಿತಿಗಾಗಿ ವಿವಿಧ ಸಂದರ್ಭಗಳಲ್ಲಿ ನಡೆಯುತ್ತಿದ್ದ ಲೆಂಕಸೇವೆ. ಇದೇ ಕಾದಂಬರಿಯ ಹೈಲೈಟು. ಓದುವಾಗ ಮೈನಡುಗುವುದು ಖಾತ್ರಿ!

-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಸಮುದ್ರದ ಮೇಲೆ ಆಹಾರ ಸೇವಿಸಬಾರದೆನ್ನುವ ನಂಬಿಕೆಯ ಕಾರಣಕ್ಕೆ ನೌಕಾದಳವನ್ನು ಹೆಚ್ಚು ಬಲಪಡಿಸದ ಅಂದಿನ ರಾಜರ ಮನಸ್ಥಿತಿ. ಇದೇ ಕಾರಣದಿಂದಾಗಿ ವಿದೇಶೀ ವ್ಯಾಪಾರಿಗಳು ದೇಶದೊಳಕ್ಕೆ ಕಾಲಿಟ್ಟಿದ್ದು


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಅನಿರೀಕ್ಷಿತವಾಗಿ ಕಥೆಯೊಳಕ್ಕೆ ಭೇಟಿಕೊಡುವ, ಮತ್ತು ಇಡೀ ಕಥೆಯ ಸಾರಾಂಶವನ್ನು ತನ್ನ "ಲೊಳಲೊಟ್ಟೆ" ಎಂಬ ಕೀರ್ತನೆಯೊಳಗೆ ಹೇಳಿ ಹೊರಡುವ ಪುರಂದರದಾಸರು



-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦



ಗೋವಾದೊಳಗೆ ನಡೆಯುವ ಸಾಮೂಹಿಕ ಮತಾಂತರ


-೦-೦-೦-೦-೦-೦-೦-೦-೦-೦-೦-೦-೦೦-೦-೦-೦-೦


ಮತ್ತೊಮ್ಮೆ ಕಥೆಯ ಕೊನೆಯಲ್ಲಿ ಬರುವ "ಜೀವ(ನ) ಮುಖ್ಯವೋ, ಧರ್ಮ ಮುಖ್ಯವೋ" ಪ್ರಶ್ನೆ


*******************************************************************************************


ಗೆಳೆಯರೇ ಇಲ್ಲೆಲ್ಲೂ ನಾ ಮೂಲ ಕಥೆಯನ್ನು ಹೇಳೇ ಇಲ್ಲ. ಈ ಮೇಲಿನ ಅಂಶಗಳೆಲ್ಲ ಮೂಲ ಕಥೆಯೊಳಗೆ ಬರುವ ನೂರಾರು ವಿಷಯಗಳು. ಬರೀ ಈ ರಾಜ ಸತ್ತ, ಆ ರಾಜ ಯುದ್ಧ ಗೆದ್ದ ಅನ್ನುವ ಕಥೆಗಳನ್ನು ಓದಿದ್ದ ನಮಗೆ ರಾಜಾಧಿಪತ್ಯ ನಡೆಯುವಾಗ ಜನಸಾಮಾನ್ಯರ ಜೀವನ ಹೇಗಿತ್ತು ಅನ್ನುವ ವಿಷಯಗಳನ್ನು ಕುತೂಹಲಕಾರಿ ಕಥೆಯೊಂದಿಗೆ ನಮಗೆ ಉಣಬಡಿಸುವ "ತೇಜೋ ತುಂಗಭದ್ರಾ" ಕಾದಂಬರಿಯನ್ನು ನೀವು ಓದಲೇಬೇಕು.


ಕೃತಿಯ ಬಗ್ಗೆ ಎಲ್ಲೂ ಪ್ರಶ್ನೆಯೇ ಇಲ್ಲವೇ? ಅಂತ ಕೇಳಿದರೆ. ಒಂದೆರಡು ವಿಷಯಗಳ ಬಗ್ಗೆ ತಕರಾರಿದೆ.


1. ಮಾಪಳನಾಯಕ ಹಂಪಮ್ಮಳಿಗಾಗಿ ಕುಸ್ತಿ ಮಾಡುತ್ತಾನೆ. ಅದು ಭೀಮಕುಸ್ತಿ ಅಂದರೆ ಒಬ್ಬ ಪಟು ಇನ್ನೊಬ್ಬನ ಜೀವ ತೆಗೆಯಬಹುದು. ಇದು ತಿಳಿದಿದ್ದರೂ ಮಾಪಳನಾಯಕನ ಹೆಂಡತಿಯಾದ ತೆಂಕಮ್ಮನಿಗೆ ತನ್ನ ಗಂಡ ಕುಸ್ತಿಯಲ್ಲಿ ಭಾಗವಹಿಸುವುದರ ಬಗ್ಗೆ ಯಾವ ನಿಲುವಿತ್ತು ಅನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ.


2. ಕೇಶವನ ಅಪರಾಧಿಪ್ರಜ್ಞೆಯ ಬಗ್ಗೆ ಉಲ್ಲೇಖವಿದೆ. ಆದರೆ ಆತ ಪುಟ್ಟ ಮಗು ಈಶ್ವರಿಯ ಮೇಲೆ ಕೈ ಮಾಡುವುದು ಹಂಪಮ್ಮನಿಗೆ ತಿಳಿಯುವುದೇ ಇಲ್ಲ. ಹೀಗಾಗಿ ಲೆಂಕಸೇವೆಯ ನಂತರದ ಪುಟ್ಟ ಮಗು ಈಶ್ವರಿಯ ಪ್ರತಿಕ್ರಿಯೆಯನ್ನೇ ತಪ್ಪೆನ್ನುವಂತೆ ಚಿತ್ರಿತವಾಗುತ್ತದೆ. ಸರಿಯೇ?



ಎಲ್ಲ ವಿವರಗಳಿಗಿಂತ ಮುಂಚೆ, ಓದಿಸಿಕೊಳ್ಳುವ ಕೃತಿಯಾಗಿ ಪುಸ್ತಕವೊಂದು ಗೆಲ್ಲಬೇಕು. ಆ ವಿಷಯದಲ್ಲಿ ಈ ಕಾದಂಬರಿಯ ಕರ್ತೃ ವಸುಧೇಂದ್ರರವರು ಈಗಾಗಲೇ ಗೆದ್ದಿದ್ದಾರೆ. ಈ ಪುಸ್ತಕ ಓದಿದ ಮೇಲೆ ಪ್ರತಿಯೊಬ್ಬರಿಗೂ ಅನ್ನಿಸುವ ಪ್ರಶ್ನೆ. ಈ ವಿವರಗಳನ್ನು ಕಲೆಹಾಕಲು ಲೇಖಕರು ಅದೆಷ್ಟು ಸಂಬಂಧಪಟ್ಟ ಕೃತಿಗಳ ಅಧ್ಯಯನ ಮಾಡಿರಬೇಕು ಎಂಬುದು.


ಈಗಾಗಲೇ ಖ್ಯಾತ ವಿಮರ್ಶಕರು ಇದನ್ನು ಶ್ರೇಷ್ಠ ಕೃತಿ ಎಂದು ಹೇಳಿದ್ದಾರೆ. ನಾನು ಹೇಳುವುದೇನಿದೆ. ಅದನ್ನೇ ಮತ್ತೊಮ್ಮೆ ಹೇಳಬಲ್ಲೆ. ವಿನಂತಿಯೊಂದನ್ನು ಲೇಖಕರಿಗೆ ಮಾಡಬಲ್ಲೆ. ಈ ಬಗೆಯ ಕೃತಿಗಳ ಸೃಷ್ಟಿ ಎಲ್ಲರಿಂದಲೂ ಸಾಧ್ಯವಲ್ಲ. ಆ ಶ್ರಮ, ಬದ್ಧತೆ ಎಲ್ಲರಿಗೂ ಸಾಧ್ಯವಿಲ್ಲ. ನೀವೀಗಾಗಲೇ ಅದಕ್ಕೆ ಕೈಹಾಕಿದ್ದೀರ. ಇದೊಂದರೊಂದಿಗೆ ನಿಲ್ಲಿಸಬೇಡಿ. ಇನ್ನಷ್ಟು ಬರಲಿ. ಚರಿತ್ರೆಯನ್ನು ಸಾಮಾನ್ಯರ ದೃಷ್ಟಿಯಿಂದಲೂ ನೋಡುವಂತಾಗಲಿ ಅನ್ನುವುದಷ್ಟೇ ಆಶಯ.

-------------------
ಈ ಕಾದಂಬರಿಯ ಆಯ್ದ ಸಾಲುಗಳು::

1. ಧರ್ಮಗಳ ವಿಷಯ ಗೇಬ್ರಿಯಲ್'ಗೆ ಯಾವತ್ತೂ ಸಂಕೀರ್ಣವೆನಿಸುತ್ತೆ. ಇಡೀ ಜಗತ್ತಿಗೆ ಒಂದೇ ಧರ್ಮವಿದ್ದರೆ ಚೆನ್ನಾಗಿತ್ತು. ಹೀಗೆ ಒಬ್ಬರನ್ನೊಬ್ಬರು ಅಧರ್ಮಿಗಳೆಂದು ಜರಿದು ಬಡಿದಾಡುವ ಸಂದರ್ಭ ಇರುತ್ತಿರಲಿಲ್ಲ ಎಂದು ಕೆಲವೊಮ್ಮೆ ಅನ್ನಿಸುತ್ತದೆ ಆದರೆ ಹಿಂದೆಯೇ ಧರ್ಮವಲ್ಲದಿದ್ದರೆ ಜನರು ಬೇರೆಯದಕ್ಕೆ ಜಗಳವಾಡುತ್ತಿದ್ದರಲ್ಲವೆ ಎಂದು ಹೊಳೆಯುತ್ತದೆ. ಈ ಮಾನವ ದ್ವೇಷದಲ್ಲಿ ಧರ್ಮದ ಪಾತ್ರವೆಷ್ಟು. ಮನುಷ್ಯರ ಪಾತ್ರವೆಷ್ಟು? ಬಹುಶಃ ಜಗಳವಾಡುವುದು ಮನುಷ್ಯರ ಹುಟ್ಟುಗುಣವೆ? ಹಸಿವೆ, ನಿದ್ದೆ, ನೀರಡಿಕೆಗಳಿಗೆ ದೇಹವನ್ನು ತೃಪ್ತಿಪಡಿಸಿದಂತೆ ಜಗಳವಾಡಿಯೂ ಅದನ್ನು ತೃಪ್ತಿಪಡಿಸಬೇಕೇ?


2. ಪಾಪಪ್ರಜ್ಞೆಯೆನ್ನುವುದು ಹೊರಗಿನಿಂದ ಬಲವಂತವಾಗಿ ತುಂಬುವಂತಹದ್ದಲ್ಲ. ಯಾವುದೋ ಪಾದ್ರಿಯೋ, ಧಾರ್ಮಿಕ ಗ್ರಂಥವೋ, ಕಾನೂನೋ ಜೀವಿಯೊಂದರಲ್ಲಿ ನೀತಿ-ಅನೀತಿಗಳ ವಿವರಗಳನ್ನು ಕಟ್ಟಿಕೊಡಬೇಕಾಗಿಲ್ಲ. ಸೂಕ್ಷ್ಮನಾದ ವ್ಯಕ್ತಿಗೆ ಆಂತರಿಕವಾಗಿಯೇ ಅದರ ಅರಿವಾಗುತ್ತದೆ. ಸರಿ-ತಪ್ಪುಗಳು ಸ್ಪಷ್ಟವಾಗಿ ಗೋಚರಿಸತೊಡಗುತ್ತವೆ.

3. ತನ್ನದಲ್ಲದ ನೆಲದಲ್ಲಿ ಮನುಷ್ಯ ಬದುಕಿಯಾನೆ ಹೊರತು, ಸಸ್ಯಗಳು ಹೇಗೆ ಬದುಕಿಯಾವು?

------------------.


-Santhosh Kumar LM
06-Feb-2020