Friday, January 3, 2020

One Cut Of The Dead (2017)...Japanese movie








One Cut Of The Dead (2017)

2017ರಲ್ಲಿ ಬಿಡುಗಡೆಯಾದ ಜಪಾನೀ ಭಾಷೆಯ ಚಿತ್ರ. ಬಹುಶಃ ಈ ಸಿನಿಮಾ ಮಾಡುವಾಗ ಸ್ವತಃ ಅದರ ನಿರ್ಮಾತೃಗಳಿಗೂ ಅದು ಇಷ್ಟು ಜನಪ್ರಿಯವಾಗುತ್ತದೆ ಅಂತ ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲವೆಂದು ಕಾಣುತ್ತದೆ. ಏಕೆಂದರೆ ಈ ಸಿನಿಮಾ ಬಿಡುಗಡೆ ಮಾಡಿದ್ದೇ ಒಂದು ಥಿಯೇಟರಿನಲ್ಲಿ. ಅದೂ ಆರು ದಿನಗಳ ಪ್ರದರ್ಶನದ ಒಪ್ಪಂದದ ಮೇರೆಗೆ!

ನೋಡಿ. ಹೊಸ ಆಲೋಚನೆ, ಕೆಲಸದ ಗುಣಮಟ್ಟವಷ್ಟೇ ಅನೇಕ ಸಲ ಮುಖ್ಯವಾಗುತ್ತದೆ. ಅದಕ್ಕೆ ಹಾಕಿದ ಹಣವಲ್ಲ. ಇಪ್ಪತ್ತು ಲಕ್ಷ ರೂಪಾಯಿಗಿಂತಲೂ ಕಡಿಮೆ ಬಜೆಟ್ಟಿನ ಚಿತ್ರವೊಂದು ಜಪಾನೊಂದರಲ್ಲೇ ಇನ್ನೂರು ಕೋಟಿ ದುಡ್ಡು ಮಾಡಿತು. ಅದರ ಮೌಲ್ಯ ತಿಳಿದ ಪ್ರಸಿದ್ಧ ಹಂಚಿಕೆದಾರರೊಬ್ಬರು ವಿದೇಶಗಳಲ್ಲೂ ಬಿಡುಗಡೆ ಮಾಡಿದ್ದರಿಂದ ಅಲ್ಲೂ ಇನ್ನೂರು ಕೋಟಿಗಿಂತಲೂ ಹೆಚ್ಚು ಸಂಪಾದಿಸಿತು.

ಇಪ್ಪತ್ತು ಲಕ್ಷವೆಲ್ಲಿ? ನಾಲ್ಕುನೂರು ಕೋಟಿಯೆಲ್ಲಿ?! ಇದಕ್ಕೆ ಕಾರಣ ಸಿನಿಮಾದ ಹೊಸತು ಎನಿಸುವ ಕಥೆಯೊಂದನ್ನು ಕೊಟ್ಟಿದ್ದು ಅಷ್ಟೇ!!

ಇದೊಂದು Zombie Horror ಚಿತ್ರ...."ಅಂತ ಅಂದುಕೊಳ್ಳಿ" ಅಂತಲೇ ಇಲ್ಲಿ ಹೇಳುತ್ತೇನೆ. ಏಕೆಂದರೆ ಸಿನಿಮಾದೊಳಗೆ ನಾವೇ ನಂಬಲಾಗದ ಅನೇಕ ಆಶ್ಚರ್ಯಕರ ಸಂಗತಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಎಲ್ಲವನ್ನು ನೋಡುವ ಮುನ್ನವೇ ಹೇಳಿದರೆ ಇಲ್ಲಿ ನಿಮ್ಮ ಕುತೂಹಲವನ್ನು ಕೊಂದಂತಾಗಬಹುದು.

ಒಂದು Zombie ಚಿತ್ರವನ್ನು ಚಿತ್ರೀಕರಿಸಲು ಹಳತಾದ ಬಂಗಲೆಯೊಳಕ್ಕೆ ತಂಡವೊಂದು ಬರುತ್ತದೆ. ಆ ಬಂಗಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯಾವುದೋ ಪ್ರಯೋಗಗಳಿಗೆ ಬಳಸಿಕೊಳ್ಳಲಾಗಿತ್ತು ಅನ್ನುವುದು ಗೊತ್ತಾಗುತ್ತದೆ. ಚಿತ್ರೀಕರಣ ಶುರುವಾಗುತ್ತದೆ. Zombie ಪಾತ್ರಧಾರಿ ಎದುರಿಗೆ ಬಂದಾಗ ಭಯಪಡುವ ದೃಶ್ಯ ನಿರ್ದೇಶಕನಿಗೆ ತೃಪ್ತಿ ಕೊಡುವುದಿಲ್ಲ. ಕೋಪಿಸಿಕೊಂಡವನೇ ಎಲ್ಲರ ಮೇಲೆ ಕೂಗಾಡಿ ಹೊರಗೆ ಹೋಗುತ್ತಾನೆ. ನಟಿ ಬೇಸರದಲ್ಲಿದ್ದರೆ ಎಲ್ಲರೂ ನಿರ್ದೇಶಕ ಮರಳಿ ಬರಲಿ ಎಂದು ಕಾಯುತ್ತಿರುತ್ತಾರೆ. ಇದ್ದಕ್ಕಿದ್ದ ಹಾಗೆ ರಕ್ತಸಿಕ್ತವಾದ ನಿಜವಾದ Zombieಯೇ ಅಲ್ಲಿ ಪ್ರತ್ಯಕ್ಷವಾಗುತ್ತದೆ. ಅಲ್ಲಿ ಕುಳಿತಿದ್ದವರೆಲ್ಲ ಓಡಲು ಶುರುವಿಟ್ಟುಕೊಂಡರೆ ಅದು ಹಿಂಬಾಲಿಸುತ್ತದೆ. ಅದನ್ನು ಎದುರಿಸುವಾಗ ಮತ್ತೊಂದು....!! ಎದೆ ಢವಢವ ಶುರುವಿಟ್ಟುಕೊಂಡರೆ......

ಹೀಗೆ ಆರಂಭವಾಗುವ ಸಿನಿಮಾ ಎಲ್ಲೆಲ್ಲೋ ಸಾಗುತ್ತದೆ. ಇದ್ದಕ್ಕಿದ್ದಂತೆ ಮಧ್ಯದಲ್ಲಿಯೇ ಸಿನಿಮಾ ಮುಗಿದ ಫೀಲ್.... ಎಂಡ್ ಕ್ರೆಡಿಟ್ಸ್ ಶುರುವಾಗುತ್ತದೆ.

ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಅಲ್ಲೇ ಇನ್ನೊಂದು ಕಥೆ! ಎಲ್ಲವೂ ಅಯೋಮಯ. ಪ್ರೇಕ್ಷಕ ತಲೆಕೆಡಿಸಿಕೊಳ್ಳುತ್ತಾನೆ ಅನ್ನುವಷ್ಟರಲ್ಲಿ ನಿರಾಳ!

ಅದರ ಬಗ್ಗೆ ಹೆಚ್ಚಿಗೆ ಇಲ್ಲಿ ಹೇಳಬಾರದು. ಸಿನಿಮಾ ನೋಡಿ.

Zombie ಸಿನಿಮಾಗಳನ್ನು ನೋಡುವವರಿಗೆ ಎಲ್ಲ ಸಿನಿಮಾಗಳಂತೆ ಇದು ಸಾಮಾನ್ಯ ಅನ್ನಿಸಿದರೂ ಒಂದು ಘಟ್ಟ ಮುಗಿದ ನಂತರ ಬೇರೆಯದೆ ಅನ್ನಿಸಿಕೊಂಡು ಮನರಂಜನೆ ನೀಡುವುದು ಖಂಡಿತ. ನೋಡಿರದಿದ್ದರೆ ನೋಡಿ. ಮೊದಲ ನಲವತ್ತೈದು ನಿಮಿಷಗಳನ್ನು ಒಂದೇ ಶಾಟ್'ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ! ಸಿನಿಮಾ ಮುಗಿದ ಮೇಲೆ ಅದರ ಚಿತ್ರೀಕರಣದ ಬಗ್ಗೆಯೂ ಖಂಡಿತ ತಲೆಕೆಡಿಸಿಕೊಳ್ಳುತ್ತೀರಿ!


ಭಾಷೆ ಯಾವುದಾದರೂ ಸರಿ ಅನ್ನುವ, ಹೊಸತನ್ನು ಬಯಸುವ ಸಿನಿಪ್ರಿಯರು ಈ ಸಿನಿಮಾ ನೋಡಬಹುದು. ಸಿನಿರಂಗದಲ್ಲೇ ಕೆಲಸ ಮಾಡುವವರು ಈ ಸಿನಿಮಾ ನೋಡಿದರೆ ಹೊಸಪ್ರಯತ್ನಗಳ ಬಗ್ಗೆ ನಂಬಿಕೆಯನ್ನು ಜೀವಂತವಾಗಿರಿಸಿಕೊಳ್ಳಬಹುದು.

-Santhosh Kumar LM

03-Jan-2020

ಅವನೇ ಶ್ರೀಮನ್ನಾರಾಯಣ (2019)







ಅವನೇ ಶ್ರೀಮನ್ನಾರಾಯಣ (2019)

ಈ ಸಿನಿಮಾವನ್ನು ನೀವಿನ್ನೂ ನೋಡಿರದಿದ್ದರೆ ಈ ಬರಹವನ್ನು ಮುಂದೆ ಓದಬೇಡಿ. ಸಿನಿಮಾ ನೋಡಿ ಬನ್ನಿ. ಖಂಡಿತವಾಗಿಯೂ ಇದು ಒಮ್ಮೆ ನೋಡಲೇಬಹುದಾದ ಸಿನಿಮಾ.

ಸಿನಿಮಾ ನೀವೀಗಾಗಲೇ ನೋಡಿದ್ದು ನಿಮಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರೆ ನಾನು ಬರೆದಿರುವ ‌ಕೆಲವು ವಿಷಯಗಳು ನಿಮಗೆ ಅಸಮಾಧಾನ ತರಬಹುದು. ಕ್ಷಮೆಯಿರಲಿ.

The proof of the pudding is in the eating ಅನ್ನುವ ಮಾತೊಂದಿದೆ. ಅದರರ್ಥ ಯಾವುದೇ ವಿಚಾರ ಅರ್ಥವಾಗಬೇಕೆಂದರೆ ಅದನ್ನು ಸ್ವತಃ ಅನುಭವಿಸಿದಾಗಲಷ್ಟೇ ಅಂತ. ಹೀಗಾಗಿ ಗೆಳೆಯರು ಬಗೆಬಗೆಯ ಅಭಿಪ್ರಾಯ ಹೇಳಿದರೂ "ಅವನೇ ಶ್ರೀಮನ್ನಾರಾಯಣ" ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡುವ ನಿರ್ಧಾರ ಮಾಡಿದೆ. ಏಕೆಂದರೆ ಈ ಸಿನಿಮಾವನ್ನು ಈಗ ನೋಡದೇ ನಂತರ ಅಮೇಜಾನ್ ಪ್ರೈಮ್‌ನಲ್ಲೋ ಅಥವಾ ನೆಟ್‌ಫ್ಲಿಕ್ಸ್‌ನಲ್ಲೋ ನೋಡುವ ಸಿನಿಮಾವಲ್ಲ. ಕೋಟಿ ಕೋಟಿ ಸುರಿದು, ಹಗಲು ರಾತ್ರಿಯೆನ್ನದೇ ವರ್ಷಾನುಗಟ್ಟಲೆ ಸಮಯ-ಬುದ್ಧಿ ವ್ಯಯಿಸಿದ ಸಿನಿಮಾವನ್ನು ನೋಡುವ ರೀತಿಯೂ ಅದಲ್ಲ. ಅದಿರಲಿ. ನನಗನ್ನಿಸಿದಂತೆ ಇದು great ಸಿನಿಮಾ ಅಲ್ಲ. ಹಾಗಂದ ಕ್ಷಣ ಇದು ಕೆಟ್ಟ ಸಿನಿಮಾ ಅಂತ ಧ್ವನಿಸುವ ಅಪಾಯವಿದೆ. ಹಾಗಾಗಿ ಕೊಂಚ ವಿವರವಾಗಿ ಬರೆಯುವ ಪ್ರಯತ್ನ ಮಾಡಿದ್ದೇನೆ‌. ಕೆಲ ವಿಷಯಗಳಲ್ಲಿ ಹೆಚ್ಚು ಆಸ್ಥೆ ವಹಿಸಿದ್ದರೆ KGFರೀತಿಯೇ ಇನ್ನೂ ಹೆಚ್ಚು ಸದ್ದು ಮಾಡುವ ಎಲ್ಲ ಸಾಧ್ಯತೆಯಿತ್ತು.

ನಿಂಬೆಹಣ್ಣನ್ನು ಡೆಲ್ಲಿಯಿಂದ ತರಿಸಿದೆ. ಕಡ್ಲೆಕಾಯಿ ಉತ್ತರಪ್ರದೇಶದ್ದು. ಎಣ್ಣೆ ಮಧ್ಯಪ್ರದೇಶದ್ದು. ಉಪ್ಪು ಕನ್ಯಾಕುಮಾರಿದು. ಕಡ್ಲೆಬೇಳೆ ತಿರುವನಂತಪುರದ್ದು. ಹಸಿಮೆಣಸಿನಕಾಯಿ ಕಾಶ್ಮೀರದ್ದು. ಸಾಸಿವೆ ಬಂಗಾಳದ್ದು.......ಇತ್ಯಾದಿ

ಹೀಗೆ ಯಾವ ಯಾವ ಪದಾರ್ಥಗಳನ್ನು ಎಲ್ಲೆಲ್ಲಿಂದ ಎಷ್ಟೆಷ್ಟು ಕಷ್ಟಪಟ್ಟು ತರಿಸಿದೆವು ಅಂತ ಯಾರಾದರೂ ಹೇಳುತ್ತಾರೆ ಅಂದುಕೊಳ್ಳೋಣ. ಅವೆಲ್ಲವೂ ಮುಖ್ಯವಾಗುತ್ತವಾ? ಇಲ್ಲ. ಚಿತ್ರಾನ್ನ ಮಾಡಿ ತಟ್ಟೆಯಲ್ಲಿ ಕೊಟ್ಟಾಗ ಅದರ ಮೊದಲ ತುತ್ತನ್ನು ತೆಗೆದು ಬಾಯಿಗಿಟ್ಟು ಆಸ್ವಾದಿಸುತ್ತೇವಲ್ಲ. ಆ ಕ್ಷಣದಲ್ಲಿ ಅದನ್ನು ತಿನ್ನುತ್ತಿರುವವನಿಗೆ ಅದರ ರುಚಿ ಹೇಗಿತ್ತು ಅನ್ನುವುದಷ್ಟೇ ಅಲ್ಲಿ ಮುಖ್ಯವಾಗುತ್ತದೆ.

ಈ ಸಿನಿಮಾದಲ್ಲಿ ಆಗಿದ್ದು ಅದೇ‌. ಸಿನಿಮಾ ಮುಗಿದು ಹೊರಬರುವಾಗ ಏನೋ ಮಿಸ್ ಆಯ್ತಲ್ಲ ಅಂತ ಅನ್ನಿಸುವುದು ಸಹಜ. ಆ ನಿಟ್ಟಿನಲ್ಲಿ ಅದಕ್ಕೆ ಕಾರಣಗಳೇನಿರಬಹುದು ಅನ್ನುವುದನ್ನು ಯೋಚಿಸಲು ಪ್ರಯತ್ನಪಟ್ಟಿದ್ದೇನೆ ಅಷ್ಟೇ. ಇದು "ಅವನೇ ಶ್ರೀಮನ್ನಾರಾಯಣ" ಸಿನಿಮಾದ ವಿಮರ್ಶೆಯಲ್ಲ. ಇದು ನನ್ನ ಅಭಿಪ್ರಾಯ ಅಷ್ಟೇ. ಹತ್ತನೇ ತರಗತಿಯಲ್ಲಿ ಫೇಲಾದವನನ್ನು, ಡಿಗ್ರಿಯಲ್ಲಿ ಫೇಲಾದವನನ್ನು, ಎಂಬಿಎ ಮಾಡಲು ಪರೀಕ್ಷೆ ಬರೆದು ಕಮ್ಮಿ ಮಾರ್ಕ್ಸ್ ತೆಗೆದುಕೊಂಡವರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರೂ ಒಂದೇ ಎಂದು ಹೇಳಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ "ಅವನೇ,,,ಶ್ರೀ" ಸಿನಿಮಾವನ್ನು ಕೂಡ ಉಳಿದ ಸಿನಿಮಾಗಳಿಗೆ ಹೇಳುವಂತೆ ಒಂದೇ ವಾಕ್ಯದಲ್ಲಿ ಹೇಗಿದೆ ಎಂದು ಹೇಳಲು ಅಸಾಧ್ಯ. ಮೊನ್ನೆ ಈ ಸಿನಿಮಾದ ಪ್ರೀಮಿಯರ್ ಶೋ ನೋಡಿ ಬಂದ ಅನೇಕರಿಗೆ ಹೇಗಿದೆ ಎಂದು ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರವೂ ಹೀಗೆಯೇ ಇತ್ತು. ಆಗಲೇ ಹೀಗಿರಬಹುದಾ ಅನಿಸಿತ್ತು.

ಕಾರಣ ನಮಗೆಲ್ಲರಿಗೂ ಗೊತ್ತಿದೆ. "ಅವನೇ ಶ್ರೀ.." ಎರಡು ತಿಂಗಳಲ್ಲಿ ಸ್ಕ್ರಿಪ್ಟ್ ಮುಗಿಸಿ, ನಲವತ್ತು ದಿನಗಳಲ್ಲಿ ಚಿತ್ರೀಕರಣ ಮಾಡಿ, ಒಂದು ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ, ತರಾತುರಿಯಲ್ಲಿ ಬಂದ ಸಿನಿಮಾವಲ್ಲ. ಸಿನಿಮಾ ತಂಡದ ಮೂರುವರ್ಷಗಳ ಕಠಿಣ ಶ್ರಮ ನಮಗೆ ತೆರೆಯಲ್ಲಿ ಎದ್ದು ಕಾಣುತ್ತದೆ. ಅಮರಾವತಿಯೆಂಬ ಕಾಲ್ಪನಿಕ ನಗರ, ಅಲ್ಲಿ ನಡೆಯುವ ಕಥೆ, ಪಾತ್ರಧಾರಿಗಳ ನಟನೆ, ಉಡುಗೆ ಎಲ್ಲಕ್ಕೂ ಹಾಕಿದ ಶ್ರಮ ನಿಜಕ್ಕೂ ಎದ್ದು ಕಾಣುತ್ತದೆ. Presentation ವಿಚಾರಕ್ಕೆ ಬಂದರೆ ಈ ಸಿನಿಮಾ ಖಂಡಿತವಾಗಿಯೂ ಎತ್ತರದಲ್ಲಿ ನಿಲ್ಲುತ್ತದೆ.

ಹಾಗಂತ ಸಿನಿಮಾ ಒಂದು ಪ್ರಾಡಕ್ಟ್ ಆಗಿ ಇಷ್ಟವಾಗಲೇಬೇಕೇ? ಇಲ್ಲದೆಯೂ ಇರಬಹುದು. ಅದಕ್ಕೆ ಕಾರಣವೂ ಇರುತ್ತದೆ. ನಮಗೆ ಬೆಸ್ಟ್ ಅನ್ನಿಸುವ ಕಥೆ ಇನ್ನೊಬ್ಬನಿಗೆ ಸಾಧಾರಣ ಅನ್ನಿಸಬಹುದು. ಮೇಕಿಂಗ್ ಎಷ್ಟು ಚಂದವೇ ಇದ್ದರೂ ಕಥೆಯೂ ಅದಕ್ಕೆ ಜೀವಾಳವೇ. ಅದನ್ನು ಎಲ್ಲಿಯೂ ಅಲ್ಲಗೆಳೆಯುವಂತಿಲ್ಲ. ವೈಯಕ್ತಿಕವಾಗಿ ನನಗೆ ಕೊರತೆ ಅನ್ನಿಸಿದ್ದು ಕಥೆಯೇ. "ಅವನೇ ಶ್ರೀ.." ಸಿದ್ಧ ಮಾಡಿಕೊಂಡ ದೊಡ್ಡ ವೇದಿಕೆಗೆ ಅಯ್ದುಕೊಂಡ ಕಥೆ ತಕ್ಕುದಾಗಲಿಲ್ಲ. ಪರಿಪೂರ್ಣ ಅನಿಸಿಕೊಳ್ಳಲು ಮತ್ತು ಸಿನಿಮೀಯ ಅನುಭವ ನೀಡಲು ಆಯ್ದುಕೊಂಡ ಮತ್ತು ನಿರ್ಲಕ್ಷಿಸಿದ ವಿಷಯಗಳೇ ಕಥೆಯ ಪ್ರಮುಖ ಹಂತಗಳಲ್ಲಿ ಪ್ರೇಕ್ಷಕನಿಗೆ ರೋಮಾಂಚಕ ಅನುಭವಗಳನ್ನು ನೀಡಲು ವಿಫಲವಾದವು. ಯಾವುದೇ Genreನ ಕಮರ್ಷಿಯಲ್ ಸಿನಿಮಾಗಳಾಗಲಿ, ಅಲ್ಲಲ್ಲಿ ಆ ಬಗೆಯ ಅಂಶಗಳು ಇರಲೇಬೇಕು. ಅದು ನಾಯಕನ ಎಂಟ್ರಿ ದೃಶ್ಯದ ಮುನ್ನ ನಾವು ಪ್ರೇಕ್ಷಕನಿಗೆ ಕಟ್ಟಿಕೊಡುವ ಹಿನ್ನೆಲೆಯಿರಬಹುದು. ಅಥವಾ ನಿಧಿ ಸಿಕ್ಕಾಗಿನ ದೃಶ್ಯವಿರಬಹುದು, ಅಥವ ಅನಿರೀಕ್ಷಿತ ಸಂದರ್ಭದಲ್ಲಿ ದಿಢೀರ್ ಸಂಭವಿಸುವ ಘಟನೆಯಾಗಬಹುದು. "ಉಳಿದವರು ಕಂಡಂತೆ" ಸಿನಿಮಾದ (ರಿಶಬ್ ಶೆಟ್ಟಿ-ತಾರ) ಅಮ್ಮ-ಮಗ ಅನೇಕ ವರ್ಷಗಳ ನಂತರ ಮುಖಾಮುಖಿಯಾಗುವ ದೃಶ್ಯ, KGFನ ಮಣ್ಣಲ್ಲಿ ಬಿದ್ದ ಬ್ರೆಡ್‌ಅನ್ನು ನಾಯಕ ಕಾರು ನಿಲ್ಲಿಸಿ ಆ ತಾಯಿಗೆ ಎತ್ತಿಕೊಡುವ ಈ ಬಗೆಯ ದೃಶ್ಯಗಳನ್ನು ಮರೆಯಲು ಸಾಧ್ಯವೇ?

ಸಿನಿಮಾದ ಕಾಲಾವಧಿ ಮೂರು ಗಂಟೆಗೂ ಹೆಚ್ಚು, ಇದು ಖಂಡಿತವಾಗಿಯೂ ಜಾಸ್ತಿಯೇ. ಆದರೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ ಅನ್ನುವಷ್ಟರ ಮಟ್ಟಿಗೆ ಸಿನಿಮಾದ ನಿರೂಪಣೆಯ ಬಗ್ಗೆ ನನ್ನ ಮೆಚ್ಚುಗೆಯಿದೆ. ರಕ್ಷಿತ್ ಶೆಟ್ಟಿಯವರಿಗೆ ತನ್ನ Strength & Weakness ಬಗ್ಗೆ ಅರಿವಿದೆ. ಮತ್ತು ತನ್ನ ಯಾವ ಮ್ಯಾನರಿಸಂ ಪ್ರೇಕ್ಷಕನಿಗೆ ಇಷ್ಟವಾಗಬಹುದೆಂದು ಗೊತ್ತಿದೆ. ಹಾಗಾಗಿ ಅದನ್ನೇ ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ. ಅದು ಸರಿಯಾಗಿ ಕೆಲಸಮಾಡಿದೆ ಕೂಡಾ. "Hands-up" ಹಾಡು ಬಿಟ್ಟರೆ ಉಳಿದವು ಮನಸ್ಸಿಗೆ ನಾಟಲಿಲ್ಲ. ಆದರೆ ಸಿನಿಮಾ ಪೂರ್ತಿ ಅಮರಾವತಿಯ ಕಾಲ್ಪನಿಕ ಲೋಕದಲ್ಲಿ ತೇಲಿಸಿದ್ದು ಮಾತ್ರ ಚಿತ್ರದುದ್ದಕ್ಕೂ ತೇಲಿ ಬರುವ ಹಿನ್ನೆಲೆ ಸಂಗೀತ. ಪ್ರತೀ ಚಿತ್ರದಲ್ಲಿ ಉತ್ತಮ್ಮ ಹಿನ್ನೆಲೆ ಸಂಗೀತವನ್ನು ಆಸ್ವಾದಿಸುತ್ತ ಇದೀಗ ನಮ್ಮ expectation ಕೂಡ ಹಾಗೆಯೇ ಬೆಳೆಯುತ್ತಿದೆ ಅನ್ನುವುದಕ್ಕೆ ಈಗ ನಮಗೆ ಸಿಗುತ್ತಿರುವ ಹಿನ್ನೆಲೆ ಸಂಗೀತದ ಗುಣಮಟ್ಟವೇ ಸಾಕ್ಷಿ.

ಅಮರಾವತಿಯ ಕೋಟೆಯನ್ನು, ಕೋಟೆಯೊಳಗಿನ ನಾಯಕನನ್ನು, ಹೊಡೆದಾಟದ ದೃಶ್ಯಗಳನ್ನು ಅದ್ಭುತವಾಗಿ ತೋರಿಸಿರುವ ಕ್ಯಾಮೆರಾ ಕೆಲಸ ಶ್ಲಾಘನೀಯ. ಅಮರಾವತಿಯ ಪ್ರಪಂಚವನ್ನೇ ಕಟ್ಟಿಕೊಟ್ಟ ಕಲಾನಿರ್ದೇಶನದ ವಿಭಾಗಕ್ಕೂ ಕ್ರೆಡಿಟ್ ಸಲ್ಲಬೇಕು. ಕಡೆಯ ಹೊಡೆದಾಟದ ದೃಶ್ಯದಲ್ಲಿ ಸಿಗುವ ನೈಜತೆ, ಥ್ರಿಲ್ ಮೊದಲ ಬಾರ್'ನೊಳಗಿನ ಹೊಡೆದಾಟದ ದೃಶ್ಯದಲ್ಲಿ ಸಿಗಲಿಲ್ಲ. ಇಂಥ ದೃಶ್ಯಗಳಲ್ಲಿ ಲೋಪವನ್ನೆಲ್ಲ ಮುಚ್ಚಿಹಾಕಿದ್ದು ಮಾತ್ರ ರಕ್ಷಿತ್-ಅಚ್ಯುತ್ ಜೋಡಿಯ ನಕ್ಕುನಗಿಸುವ ತಿಳಿಹಾಸ್ಯ.

ಮತ್ತದೇ ಬರವಣಿಗೆಯ ವಿಭಾಗಕ್ಕೆ ಬಂದರೆ ನಾಟಕ ತಂಡ, ಅವರ ಹಿನ್ನೆಲೆ, ನಿಧಿಯ ರಹಸ್ಯ, ಸಮುದ್ರಮಂಥನದ ನಾಟಕ, ನಿಧಿಯನ್ನು ಪತ್ತೆ ಹಚ್ಚುವಿಕೆ ಇವೆಲ್ಲವೂ ಒಗಟಿನ ರೀತಿಯಲ್ಲೇ ಇದ್ದರೂ ಅವನ್ನು ಬಿಡಿಸಿದಾಗಲೂ ಏನೋ ಹೊಸದು ಅನ್ನಿಸಿಕೊಳ್ಳಲಿಲ್ಲ. ಆ ಭಾಗವೂ ರಸಾನುಭವ ಕೊಡುವಲ್ಲಿ ವಿಫಲವಾಯಿತು.

ಇವೆಲ್ಲದರ ಮಧ್ಯೆ ನಾವೂ ಸಿನಿಮಾದ ಹೀರೋಗಳೇ ಅನಿಸಿಕೊಂಡವರು ಮಾತ್ರ ಖಳನಟರಾದ ಬಾಲಾಜಿ ಮನೋಹರ್ ಮತ್ತು ಪ್ರಮೋದ್ ಶೆಟ್ಟಿ. ಕನ್ನಡ ಚಿತ್ರರಂಗ ಇವರನ್ನು ಹೀಗೆಯೇ ಹೆಚ್ಚು ಅವಕಾಶ ನೀಡಿ ಬಳಸಿಕೊಳ್ಳುವಂತಾಗಲಿ.

ಯಾವುದೇ ಕನ್ನಡ ಸಿನಿಮಾದ ಬಗ್ಗೆ ಕನ್ನಡ ಪ್ರೇಕ್ಷಕರಾಗಿ ದ್ವೇಷ ನಮಗೇಕಿರಬೇಕು? ನಮ್ಮ ಕನ್ನಡ ಸಿನಿಮಾ...ಅದರ ಬಗ್ಗೆ ನಮ್ಮ expectation ಹೆಚ್ಚಿರಬೇಕು. ಅದಕ್ಕೆ ತಕ್ಕುದಾದ ಸಿನಿಮಾಗಳನ್ನು ಚಿತ್ರರಂಗದವರು ಮಾಡಬೇಕು. ಮತ್ತು ಆ ಸಿನಿಮಾಗಳು ಜಗತ್ತನ್ನು ಮುಟ್ಟಬೇಕು. ಎಲ್ಲ ಕಡೆ ನಮ್ಮ ಎದೆತಟ್ಟಿಕೊಳ್ಳುತ್ತ "ನಮ್ಮ ಸಿನಿಮಾ ನೋಡಿ" ಅಂತ ಹೇಳಬೇಕೆನ್ನುವುದು ದೂರದಾಸೆ. ಆ ಬಗೆಯ ಅನಿಸಿಕೆಯನ್ನು ಅತ್ತ ಕಡೆ ಗುರಿಯಿಟ್ಟವರಿಗಷ್ಟೇ ಹೇಳಲು ಸಾಧ್ಯವಲ್ಲವೇ? ಹಾಗಾಗಿಯೇ ಈ ಅಭಿಪ್ರಾಯ "ಅವನೇ ಶ್ರೀ.." ತಂಡಕ್ಕೆ.

ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಸಂಪಾದಿಸಲಿ. ಮತ್ತೆ ಇದೇ ಚಿತ್ರತಂಡ ಇನ್ನೂ ದೊಡ್ಡ ಸಾಹಸಗಳಿಗೆ ಕೈಹಾಕಲಿ ಎಂಬ ಹಾರೈಕೆಯೊಂದಿಗೆ.....

-Santhosh Kumar LM
30-Dec-2019