Saturday, April 25, 2020

ಪುನ್ನಗೈ ವಾಂಗಿನಾಲ್ ಕಣ್ಣೀರ್ ಇಳವಸಂ...Tamil ShotFilm

ಪುನ್ನಗೈ ವಾಂಗಿನಾಲ್ ಕಣ್ಣೀರ್ ಇಳವಸಂ ( ನಗುವ ಕೊಂಡರೆ ಕಣ್ಣೀರು ಉಚಿತ )


Punnagai Vaanginaal Kanneer Elavasam Tamil Short Film | Friends ...


ಈ ಕಿರುಚಿತ್ರದ ಬಗೆ ಬರೆಯಲೇಬೇಕು. ಬರೀ ನೋಡಿ ಅಂತ ಬರೆದುಬಿಡುತ್ತಿದ್ದೆ. ಆದರೆ ಬೇಸರವೆಂದರೆ ಈ ಚಿತ್ರಕ್ಕೆ ಸಬ್'ಟೈಟಲ್ ಇಲ್ಲ. ತಮಿಳು ಬರದವರಿಗೆ ಸನ್ನಿವೇಶ ಅರ್ಥವಾಗದಿರಬಹುದು..ಆದ್ದರಿಂದಲೇ ಕೊಂಚ ಕಥೆ ಹೇಳುತ್ತೇನೆ. ಎಲ್ಲ ಭಾಷೆಯ ಸಿನಿಮಾಪ್ರೇಮಿಗಳು ಇದನ್ನು ನೋಡಬೇಕೆಂಬುದು ನನ್ನ ಆಶಯ.

ಈ ಕಿರುಚಿತ್ರ ಮಾಡಿದ್ದೇ "ನಾಳಯ ಇಯಕ್ಕುನರ್" (ಭವಿಷ್ಯದ ನಿರ್ದೇಶಕ) ಅನ್ನುವ ಸ್ಪರ್ಧೆಯೊಂದಕ್ಕೆ. ಕಲೈನ್ನರ್ ತಮಿಳು ಚಾನೆಲ್ ನಡೆಸುವ ಈ ಸ್ಪರ್ಧೆಯಲ್ಲಿ ಈ ಕಿರುಚಿತ್ರ ಮೊದಲ ಬಹುಮಾನವನ್ನು ಗಿಟ್ಟಿಸಿತು. ಸ್ವತಃ ಹಿರಿಯ ನಟ ಕಮಲ್ ಹಾಸನ್ ಈ ಸಿನಿಮಾವನ್ನು ಮತ್ತು ನಿರ್ದೇಶಕನನ್ನು ಮುಕ್ತಕಂಠದಿಂದ ಹೊಗಳಿದರು.

ಚಿತ್ರದ ಪರಿಕಲ್ಪನೆಯೇ ಎಷ್ಟು ವಿಚಿತ್ರ-ವಿಭಿನ್ನ-ಸೂಕ್ಷ್ಮವಾಗಿದೆಯೆಂದರೆ ಹೇಳುವಾಗಲೇ ಎದೆ ಝಲ್ ಅನ್ನುತ್ತದೆ. ಇಂಥದ್ದೊಂದು ಕಥೆಯನ್ನು ಕಿರುಚಿತ್ರಕ್ಕೆ ಬಳಸಿಕೊಳ್ಳಬೇಕಿತ್ತಾ ಅನ್ನುವ ಪ್ರಶ್ನೆ ನಿಮಗೆ ಮೂಡದಿದ್ದರೆ ಕೇಳಿ.

ಈ ಕಿರುಚಿತ್ರವಿರುವುದೇ ಹನ್ನೆರಡು ನಿಮಿಷ. ಚಿತ್ರ ನೋಡಿ ಮುಗಿದ ಮೇಲೆ, ಪ್ರತೀ ಪಾತ್ರದ ಬಗ್ಗೆ ಅದಿರುವ ಸನ್ನಿವೇಶವನ್ನು ಊಹಿಸಿಕೊಂಡು ಯೋಚಿಸಿ. ನಿಮಗೆ ಯಾವುದು ಸರಿ ತಪ್ಪು ಅಂತ ಕಂಡುಹಿಡಿಯಬಹುದಾ? ಗೊತ್ತಿಲ್ಲ.

ಆ ಮನೆಯಲ್ಲಿ ವಯಸ್ಸಾದ ಅಜ್ಜಿಯಿದೆ. ಆಕೆಗೆ ಇಬ್ಬರು ಗಂಡುಮಕ್ಕಳು. ಒಬ್ಬ ಹೆಂಡತಿಯೊಂದಿಗೆ ಬೇರೆ ಮನೆಯಲ್ಲಿದ್ದಾನೆ. ಈ ಮನೆಯಲ್ಲಿ ಆ ಅಜ್ಜಿ ಇನ್ನೊಬ್ಬ ಮಗನ ಕುಟುಂಬದ ಜೊತೆಯಲ್ಲಿದೆ. ಆ ಮಗನೋ ಕುಟುಂಬವನ್ನು ಹೇಗೆ ನಿಭಾಯಿಸಬೇಕು ಅಂತ ಭಾಷಣ ಮಾಡುವಷ್ಟು, ಕಾರ್ಯಕ್ರಮಗಳನ್ನು ಕೊಡುವಷ್ಟು ಪ್ರಸಿದ್ಧಿ ಹೊಂದಿದಾತ. ಅವನಿಗೂ ಇಬ್ಬರು ಮಕ್ಕಳು. ಆ ಮಕ್ಕಳಲ್ಲಿ ಒಬ್ಬ ಮಗಳಿಗೆ ಈಗಾಗಲೇ ಒಂದು ಮಗುವಿದೆ. ಈಗ ಮತ್ತೆ ಆಕೆ ಗರ್ಭಿಣಿ. ಅಂದರೆ ಅಜ್ಜಿಗೆ ಈಗಾಗಲೇ ಮರಿಮಕ್ಕಳು ಇದ್ದಾರೆ.

ಇದೀಗ ಅಲ್ಲೊಂದು ಧರ್ಮಸಂಕಟವಿದೆ. ಆ ಅಜ್ಜಿಯ ಗಂಡ ಒಂದು ತಿಂಗಳ ಹಿಂದಷ್ಟೇ ತೀರಿಕೊಂಡಿದ್ದಾರೆ. ಆ ಅಜ್ಜಿಗೆ ಏನೋ ಆರಾಮಿಲ್ಲ ಎಂದೆನ್ನಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಡಾಕ್ಟರ್ "ಆಕೆ ಮೂರು ತಿಂಗಳ ಗರ್ಭಿಣಿ" ಎಂದು ಹೇಳಿದ್ದಾರೆ!! ಮಗನಿಗೆ ಅದನ್ನು ಸಮಾಜದೆದುರು ಹೇಗೆ ತಾನೆ ಹೇಳಿಕೊಂಡಾನು? ಹೇಳಿಕೊಂಡರೆ ಅವಮಾನ. ತೆಗೆಸಿಬಿಡೋಣವೆಂದರೆ ಅದು ಆಕೆಯ ಜೀವಕ್ಕೆ ಕುತ್ತು ತರಬಹುದೆಂದು ವೈದ್ಯರು ಗರ್ಭಪಾತವನ್ನು ನಿರಾಕರಿಸಿದ್ದಾರೆ. ಜೊತೆಗೆ "ನಿಮ್ಮ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳಬೇಕು" ಅಂತ ಮಗನಿಗೆ ಹೇಳಿದ್ದಾರೆ.

ಇದೀಗ ಈತನಿಗೆ ಹೆಂಡತಿಯಿಂದಲೂ ಒತ್ತಡವಿದೆ. ಕಾರಣ ಗರ್ಭಿಣಿಯಾದ ಮಗಳೂ ಮನೆಸೇರಿದ್ದಾಳೆ. ಅವಳನ್ನು ನೋಡಲು ಅಳಿಯ ಯಾವುದೇ ಸಂದರ್ಭದಲ್ಲಿ ತನ್ನ ಮನೆಗೆ ಬರಬಹುದು. ಬಂದರೆ ಈ ವಿಷಯ ತಿಳಿದರೆ ಅವಮಾನ. ಹಾಗಾಗಿ "ನಿಮ್ಮ ತಾಯಿಯನ್ನು ನಿಮ್ಮ ತಮ್ಮನ ಬಳಿ ಬಿಟ್ಟು ಬನ್ನಿ" ಅಂತ ಒಂದೇ ಸಮನೆ ಗಲಾಟೆ ಮಾಡುತ್ತಿದ್ದಾಳೆ. ತಮ್ಮನ ಮನೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಏನಾದರೂ ಸುಳ್ಳುಹೇಳಿ ವೃದ್ಧಾಶ್ರಮದಲ್ಲಿ ಬಿಡೋಣವೆಂದರೆ ಅಲ್ಲೂ ಈ ವಿಷಯ ತಿಳಿದ ಮೇಲೆ ನೋಡಿಕೊಳ್ಳಲು ಅಸಾಧ್ಯವೆಂದು ಸೇರಿಸಿಕೊಳ್ಳುತ್ತಿಲ್ಲ. ಮಗ ಏನು ತಾನೇ ಮಾಡಿಯಾನು?

ಮುಂದೇನು?

ಈ ಚಿತ್ರ ನೋಡಿ. ಸೂಕ್ಷ್ಮ ಸಂಗತಿಗಳನ್ನು ಹೇಳಿರುವ ರೀತಿ ನಿಜಕ್ಕೂ ಯುವ ಸಿನಿಮಾ ನಿರ್ದೇಶಕರುಗಳಿಗೆ ಸಹಾಯವಾಗಬಲ್ಲದು. ದಿನಪತ್ರಿಕೆಯಲ್ಲಿ ವೃದ್ಧೆಯೊಬ್ಬರು ಗರ್ಭಿಣಿಯಾದ ಸುದ್ದಿಯೊಂದನ್ನು ನೋಡಿದ ನಿರ್ದೇಶಕ ನಿಥಿಲನ್'ಗೆ ಈ ಸಿನಿಮಾದ ಎಳೆ ಸಿಕ್ಕಿದ್ದು. ಏಳೆಂಟು ವರ್ಷಗಳ ಹಿಂದೆ ಈ ಸಿನಿಮಾ ನೋಡಿದ್ದಾಗ ಎಲ್ಲರಿಗೂ ಇದರ ಬಗ್ಗೆ ಹೇಳುತ್ತಿದ್ದೆ. ಮೊನ್ನೆ "ಕುರಂಗು ಬೊಮ್ಮೈ" ನೋಡಿದಾಗ ತಿಳಿದ ವಿಷಯವೆಂದರೆ ಆ ಸಿನಿಮಾದ ನಿರ್ದೇಶಕ ಕೂಡ ಇದೇ ನಿಥಿಲನ್.

ನೋಡಿರದಿದ್ದರೆ ನೋಡಿ. ಖಂಡಿತ ನಿಮ್ಮ ಅಮೂಲ್ಯ ಹನ್ನೆರಡು ನಿಮಿಷಗಳಿಗೆ ನಾ ಗ್ಯಾರಂಟಿ ಕೊಡಬಲ್ಲೆ.

(ಯೂಟ್ಯೂಬ್ ಲಿಂಕ್ ಕಮೆಂಟಿನಲ್ಲಿದೆ.)

-Santhosh Kumar LM
25-Apr-2020




Saturday, April 18, 2020

ಕೆರಂಡಿರು..... (2003) Brazil movie

Carandiru (2003) - IMDb






ಮೊನ್ನೆ ರವೀಂದ್ರ ವೆಂಶಿಯವರು "ಕೆರಂಡಿರು" (2003) ಅನ್ನುವ ಬ್ರೆಜಿಲ್ ಸಿನಿಮಾ ಬಗ್ಗೆ ಹೇಳಿದರು. ಪೋರ್ಚುಗೀಸ್ ಭಾಷೆಯಲ್ಲಿರುವ ಸಿನಿಮಾ. ಬ್ರೆಜಿಲ್‍ನ ಸೆಂಟ್ರಲ್ ಜೈಲಿನಲ್ಲಿರುವ ಖೈದಿಗಳನ್ನು HIV ಪರೀಕ್ಷೆಗೊಳಪಡಿಸಲು ಬರುವ ವೈದ್ಯನೊಬ್ಬ ರಕ್ತದ ಮಾದರಿಯನ್ನು ಸಂಗ್ರಹಿಸುವಾಗ ಅವರನ್ನು ಮಾತಿಗೆಳೆದು ಅವರ ಹಿನ್ನೆಲೆಯನ್ನು ಕೇಳುತ್ತಾನೆ. ಮೊದಲೇ ಖೈದಿಗಳು. ಅವರಿಗೆ ಅವರ ಕೃತ್ಯದ ಬಗೆಗಿನ ಯಾವುದೇ ಅಪರಾಧಿ ಪ್ರಜ್ಞೆಯಿಲ್ಲ. ಹಾಗಾಗಿ ತಾವು ಜೈಲಿಗೆ ಬಂದ ಕಥೆಯನ್ನು ತಮ್ಮದೇ ರೀತಿಯಲ್ಲಿ ಹೇಳಿಕೊಳ್ಳುತ್ತಾರೆ. ಆ ಡಾಕ್ಟರ್ ಕೂಡ ಸರಿ-ತಪ್ಪು ಎಂಬಂತೆ ನೋಡದೆ ಅವರ ಮಾತುಗಳಿಗೆ ಕಿವಿಯಾಗುತ್ತಾನೆ. ಕೊನೆಯ ದೃಶ್ಯದಲ್ಲಿ 1992ರಲ್ಲಿ ಬ್ರೆಜಿಲ್‍ನ ಜೈಲೊಂದರಲ್ಲಿ ವಾಸ್ತವದಲ್ಲಿ ನಡೆದ ಮಾರಣಹೋಮ ತಳುಕುಹಾಕಿ ಸಿನಿಮಾ ಮುಗಿಯುತ್ತದೆ.

ಸಿನಿಮಾ ನೋಡುವಾಗ ಸಾಧಾರಣ ಅನ್ನಿಸಿತು. ಜೈಲು ಹೀಗೂ ಇರುತ್ತದಾ ಅನ್ನುವುದು ಆ ಅಭಿಪ್ರಾಯಕ್ಕೆ ಕಾರಣ. ಆದರೆ ನೋಡಿಯಾದ ಮೇಲೆ ಬ್ರೆಜಿಲ್ ದೇಶದ ಕಿಕ್ಕಿರಿದು ತುಂಬಿದ ಜೈಲುಗಳ ಬಗ್ಗೆ ಪುಟ್ಟ ವೀಡಿಯೋವೊಂದನ್ನು ನೋಡಿದ ಮೇಲೆ ಸಿನಿಮಾ ಯಾವ ವಿಷಯಗಳನ್ನು ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡಿದೆ ಅಂತ ಅರ್ಥವಾಯಿತು. ಎರಡು ಸಾವಿರ ಖೈದಿಗಳನ್ನು ಇಡಬಹುದಾದ ಜೈಲುಗಳಲ್ಲಿ ನಾಲ್ಕೂವರೆ ಸಾವಿರ ಖೈದಿಗಳನ್ನು ಕೂಡಿಡುವುದು. ಅಂದರೆ 1950ರಲ್ಲಿ ನಿರ್ಮಾಣವಾದ ಆ ಜೈಲಿನ ಕೆಲಕೋಣೆಗಳು ಇರುವುದೇ ಇಬ್ಬರನ್ನು ಕೂಡಿಹಾಕಲು. ಆದರೆ ಅಲ್ಲಿ ಸ್ಥಳದ ಅಭಾವ ಶುರುವಾದ ಮೇಲೆ ಎಂಟೊಂಭತ್ತು ಜನರನ್ನು ಕೂಡಿಹಾಕುವುದು. ಸರಿಯಾಗಿ ಗಾಳಿಯೂ ಬರದ ಕೋಣೆಗಳು. ಅಲ್ಲೇ ಗುಂಪುಘರ್ಷಣೆ ನಡೆಯುವುದು. ಖೈದಿಗಳಿಗೆ ಮಾದಕವಸ್ತುಗಳು ಸರಬರಾಜಾಗುವುದು. ನೀರಿಲ್ಲದೇ ಖೈದಿಗಳು ಕಷ್ಟಪಡುವುದು. ಸಲಿಂಗಿಗಳಿಗಾಗಿಯೇ ಬೇರೆ ಕೋಣೆಗಳು. ಶುಚಿತ್ವವಿಲ್ಲದೇ ಅನೇಕರಿಗೆ ಕ್ಷಯರೋಗ ಬರುವುದು. ಹೀಗೆ ಅಸಮರ್ಪಕ ನಿರ್ವಹಣೆಯಿಂದ ಒದ್ದಾಡುವ ಅನೇಕ ವಿಷಯಗಳಿವೆ. ಇವೆಲ್ಲವನ್ನು ಸಿನಿಮಾದಲ್ಲಿ ಸೂಚ್ಯವಾಗಿಯೇ ಹೇಳಲಾಗಿದೆ.

ಹಾಗೆಯೇ ಇಡೀ ಜೈಲಿಗೆ ಇದ್ದದ್ದು ಹದಿನೈದು ಸೆಕ್ಯೂರಿಟಿ ಗಾರ್ಡುಗಳು. ಕ್ಷುಲ್ಲಕ ಕಾರಣಕ್ಕೆ ಜೈಲಿನೊಳಗೆ ಶುರುವಾದ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಮಿಲಿಟರಿಯ ಸಹಾಯ ಕೋರಿದಾಗ ತಕ್ಷಣವೇ ಬರುವ ಮಿಲಿಟರಿ ಪಡೆ ಹಿಂದೆಮುಂದೆ ನೋಡದೆ 111 ಖೈದಿಗಳನ್ನು ಹತ್ಯೆಗೈದಿದ್ದು 1992ರಲ್ಲಿ. ಆ ಘಟನೆಯನ್ನು ಸಿನಿಮಾದ ಅಂತ್ಯಕ್ಕೆ ಬಳಸಿಕೊಳ್ಳಲಾಗಿದೆ. ಈ ಸಿನಿಮಾ ಚಿತ್ರೀಕರಣವಾಗಿದ್ದೂ ಅದೇ ಜೈಲಿನಲ್ಲಿ. 2002ರಲ್ಲಿ ಜೈಲು ಕಟ್ಟಡವನ್ನು ನೆಲಸಮ ಮಾಡಲಾಯಿತು.

ಅರ್ಥವಾಗಿದ್ದಿಷ್ಟು. ಕೆಲವು ಸಿನಿಮಾಗಳು ನೇರವಾಗಿ ನಮಗೆ ಮನರಂಜನೆ ಅಂತ ಕೆಲವೇ ವಿಷಯಗಳನ್ನು ಹೇಳಿದರೂ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಬೇರೆ ಬೇರೆ ವಿಷಯಗಳು ಅರ್ಥವಾಗುತ್ತವೆ.


-Santhosh Kumar LM
18-Apr-2020

Thursday, April 16, 2020

ದಿ ಬೆಸ್ಟ್ ಆ್ಯಕ್ಟರ್...Kannada (2019) Micro movie



ಕೆಲವೊಮ್ಮೆ ಎರಡೂವರೆ ಗಂಟೆಯ ಸಿನಿಮಾ ಹೇಳದ ವಿಷಯವೊಂದನ್ನು ಕಿರುಚಿತ್ರವೊಂದು ಸಮರ್ಥವಾಗಿ ಹೇಳಿಬಿಡುತ್ತದೆ. ಅಥವ ಕಿರುಚಿತ್ರವೊಂದರಲ್ಲಿ ಹೇಳಬಹುದಾದ ಕಥೆಯನ್ನು ಎರಡೂವರೆ ಗಂಟೆ ಸಿನಿಮಾದೊಳಗೆ ಹಾಕಿ ರಬ್ಬರಿನಂತೆ ಎಳೆದು ಪ್ರೇಕ್ಷಕನ ತಾಳ್ಮೆ ಪರೀಕ್ಷಿಸಲಾಗುತ್ತದೆ.


ಸಿನಿಮಾ ನಿರ್ದೇಶಕನೊಬ್ಬನಿಗೆ ತಾನು ಹೇಳುವ ಕಥಾವಸ್ತುವನ್ನು ಎಷ್ಟು ಅವಧಿಯೊಳಗೆ ಸಮರ್ಥವಾಗಿ ಹೇಳಬಲ್ಲೆ ಎಂಬ ಸ್ಪಷ್ಟತೆ ಇದ್ದರೆ ಅದೇ ಆತನ ಮೊದಲ ಯಶಸ್ಸು. "ದಿ ಬೆಸ್ಟ್ ಆ್ಯಕ್ಟರ್" ಸಿನಿಮಾ ಇದಕ್ಕೊಂದು ಉತ್ತಮ ಉದಾಹರಣೆ.


ಈ ಹಿಂದೆಯೇ ಈ ಸಿನಿಮಾ ನೋಡಿ ಬರೆದಿದ್ದೆ. ಇದೀಗ ಯೂಟ್ಯೂಬ್'ನಲ್ಲಿ ಮತ್ತೊಮ್ಮೆ ಬಿಡುಗಡೆಯಾದ್ದರಿಂದ ಇನ್ನೊಮ್ಮೆ ನೋಡುವ ಮನಸ್ಸಾಯಿತು. ಹಾಗಾಗಿ ಇದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೇನೆ. ಇದೊಂದು ಕನ್ನಡದ ಮೈಕ್ರೋ ಮೂವಿ. ಇದರ ಅವಧಿಯೇ ಕೇವಲ 44 ನಿಮಿಷಗಳು. ಆದರೆ ಎರಡೂವರೆ ಗಂಟೆಯ ಸಿನಿಮಾ ನೋಡಿದಾಗ ಸಿಗುವಾಗಿನ ತೃಪ್ತಿ ಈ ಮೈಕ್ರೋಮೂವಿ ನೋಡಿದಾಗ ಸಿಗುತ್ತದೆ.


ಎಲ್ಲರಿಗೂ ಕಲಾವಿದರಾಗಬೇಕೆಂಬ ಆಸೆಯಿರುತ್ತದೆ. ಅದರೆ ಒಳಗೆ ಪ್ರತಿಭೆಯಿದ್ದೂ ಎದೆಯೊಳಗೆ ಸಾಧಿಸಬೇಕೆಂಬ ಛಲವಿದ್ದೂ, ಹೊರಗಿನ ಪ್ರಪಂಚ ಆ ಆಸೆಗೆ ತಣ್ಣೀರೆರಚುವ, ತನಗೆ ತಾನು ಧೈರ್ಯ ಹೇಳಿಕೊಂಡು ಮುಂದೆ ಸಾಗಿದರೂ ಮತ್ತೆ ಹೊರಗಿನ ಪ್ರಪಂಚ "ನೀ ಬಣ್ಣ ಹಚ್ತೀನಿ ಅಂದ್ರೆ ಧರ್ಮಕ್ಕೂ ಸೇರಿಸಿಕೊಳ್ಳೋರು ಯಾರು ಇಲ್ಲ! " ಎಂದು ಹೀಯಾಳಿಸಿ, ಚಿಗುರುತ್ತಿರುವ ಆಕಾಂಕ್ಷೆಗೆ ಕೊಡಲಿಯೇಟು ಕೊಡುವ ವಸ್ತುವನ್ನಾಧರಿಸಿದ ಸಿನಿಮಾ. ಈ ಸಿನಿಮಾದಲ್ಲಿ ಗಿಡಗಳ ಮುಂದೆ ಕೂತು ತನ್ನ ಕಲೆಯನ್ನು ಅವುಗಳಿಗೆ ಪ್ರದರ್ಶಿಸುವ ಮಾಬ್ಲಣ್ಣನ ದೃಶ್ಯ ಪ್ರೋತ್ಸಾಹ ಕೊಡದ ಇಡೀ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ.


"ನಿರ್ಮಾಪಕನಿಗೆ ಸಿನಿಮಾದ ವ್ಯಾಕರಣ, ಅಭಿರುಚಿ ಚೆನ್ನಾಗಿದ್ದರೆ ಒಂದು ಕೆಟ್ಟ ಸ್ಕ್ರಿಪ್ಟ್ ಸಿನಿಮಾ ಆಗೋದು ತಪ್ಪುತ್ತೆ, ಒಂದು ಒಳ್ಳೆ ಸ್ಕ್ರಿಪ್ಟ್ ಕಸದ ಬುಟ್ಟಿ ಸೇರೋದು ತಪ್ಪುತ್ತೆ" ಅನ್ನುವ ಪಂಚಿಂಗ್ ಡೈಲಾಗೊಂದು ಈ ಸಿನಿಮಾದಲ್ಲಿದೆ. ಈ ಸಿನಿಮಾದ ನಿರ್ಮಾತೃಗಳಿಗೆ ಒಳ್ಳೆಯ ಅಭಿರುಚಿಯಿದ್ದುದರಿಂದಲೇ ಇಂಥ ಒಳ್ಲೆಯ ಸ್ಕ್ರಿಪ್ಟ್ ಸಿನಿಮಾ ಆಯಿತು ಎಂದು ಧೈರ್ಯವಾಗಿ ಹೇಳಬಹುದು.


"ಹಣ ಏನು ಬೇಕಾದರೂ ಸೃಷ್ಟಿ ಮಾಡುತ್ತೆ, ಸೃಜನಶೀಲತೆಯೊಂದನ್ನು ಬಿಟ್ಟು!"
"ಒಂದು ಹೆಣ್ಣು ತನ್ನ ಮಗುವಿಗೆ ಜನ್ಮ ಕೊಡುವಾಗ ಅನುಭವಿಸೋ ನೋವನ್ನು ನಟಿಸೋದು ಕಷ್ಟ"


ಇದಿಷ್ಟೇ ಅಲ್ಲ. ಸಂಭಾಷಣೆ ಕಡಿಮೆ ಇದ್ದರೂ ಸನ್ನಿವೇಶಕ್ಕೆ ತಕ್ಕ ಹಾಗೆ ಬರೆದ ಭಾಸ್ಕರ್ ಬಂಗೇರ (Bhaskar Bangera) ಅವರ ಇದೇ ಥರದ ಅನೇಕ ತೂಕದ ಸಾಲುಗಳಿವೆ. ಖುಶಿಯೆಂದರೆ ಕಥೆ ಯಾವ ಪರಿಸರದ ಹಿನ್ನೆಲೆಯಲ್ಲಿ ನಡೆಯುತ್ತದೋ ಅದೇ ಪರಿಸರದ ಕುಂದಾಪ್ರ ಕನ್ನಡವನ್ನು ಸಂಭಾಷಣೆಯಲ್ಲಿ ಬಳಸಿಕೊಂಡಿರುವುದು. ಈ ಕಾರಣದಿಂದಲೇ ಒಂದು ಕಥೆ ನಮ್ಮದಾಗುವುದು!


ಸಿನಿಮಾದ ನಿಜವಾದ ಹೀರೋ ಛಾಯಾಗ್ರಹಣ! ನದಿ, ಬಲೆ ಬೀಸುವ ಮೀನುಗಾರರು, ಹಸಿರು, ತುಳಿಯುವ ಸೈಕಲ್ಲಿಗೆ ಜಾಗ ಬಿಡುವ ಭೂಮಿ, ಬಿಸಿನೀರೊಲೆಯ ಹೊಗೆ, ಬೀಡಿ ಸೇದುವ ವೇಷತೊಟ್ಟ ಯಕ್ಷಗಾನ ಕಲಾವಿದ, ಹೀಗೆ ಪ್ರತೀ ದೃಶ್ಯವೂ ಕಟ್ಟನ್ನು ಹಾಕಿ ಗೋಡೆಗೆ ನೇತುಹಾಕುವಷ್ಟು ಸುಂದರವಾಗಿಯೂ ಹೊಸದಾಗಿಯೂ ಇವೆ. ಹಾಗಾಗಿಯೇ ಇದೇ ವಿಭಾಗಕ್ಕೆ ಪ್ರಶಸ್ತಿಗಳು ಬಂದಿರುವುದರಲ್ಲಿ ಅಚ್ಚರಿಯೇನಿಲ್ಲ. ಎರಡು ಮೂರು ದೃಶ್ಯಗಳಲ್ಲಿ ಬಳಸುವ ಟ್ರಾನ್ಸಿಷನ್ ಎಫೆಕ್ಟ್ ಕ್ಯಾಮೆರಾದ್ದೋ ಅಥವಾ ಸಂಕಲನಕಾರನದ್ದೋ ಅನ್ನುವಷ್ಟು ವಿಭಿನ್ನವಾಗಿದ್ದು ಅಚ್ಚರಿಯುಂಟು ಮಾಡುತ್ತವೆ.

ಸಂಚಾರಿ ವಿಜಯ್ ನಟನೆಯಲ್ಲಿ ಲವಲವಿಕೆಯಿದೆ. ಬಾಲಕಲಾವಿದರ ದಂಡೇ ಸಿನಿಮಾದ ಅನೇಕ ದೃಶ್ಯಗಳಲ್ಲಿದೆ.


ಆದರೆ ಸಿನಿಮಾ ಮುಗಿಯುವಾಗ ನಮ್ಮ ಮನಸ್ಸನ್ನು ಗೆಲ್ಲುವುದು ಮಾಬ್ಲಣ್ಣನ ಪಾತ್ರದ ಮಾಧವ ಕಾರ್ಕಡರವರು.


"ನಂಗೂ ಬಣ್ಣ ಅಂದರೆ ಇಷ್ಟ" ಅಂತ ಮಗನೊಂದಿಗೆ ಮಗುವಾಗುವ,
ಬಣ್ಣ ಹುಡುಕುತ್ತ ಚಿಕ್ಕಮಗುವಿನ ಕಾತುರ ತೋರುವ,
ಬೆರ್ಚಪ್ಪನ ಮುಖದ ಮೇಲಿನ ಬಣ್ಣವನ್ನೂ ನೋಡಿ ಅಸೂಯೆಪಡುವ,
ಅದೇ ಮರುಕ್ಷಣ ಬಣ್ಣ ಹಚ್ಚೇ ತೀರುವೆನೆಂದು ಬೆರ್ಚಪ್ಪನಿಗೆ ಸವಾಲು ಹಾಕುವ,
" ಕತ್ತಲಿಂದ ಬೆಳಕಿಗೆ ಬರ್ತಾರೆ ಅಂದ್ರೆ ಹೆಚ್ಚಿನ ಜನರು ದೀಪ ನಂದಿಸೋಕೆ ಯೋಚನೆ ಮಾಡ್ತಾರೆ... ಆದರೆ ನಮ್ಮೊಳಗೊಂದು ಕಿಚ್ಚಿದ್ದರೆ ಯಾರೇನೂ ಮಾಡೋಕೆ ಸಾಧ್ಯವಿಲ್ಲ" ಅಂತ ಒಳಗಿನ ಕಿಚ್ಚು ತೋರುವ,
"ನನಗೆ ಬಣ್ಣ ಯಾರೂ ಕೊಡುವವರಿಲ್ಲ...ನನಗೆ ನಾನೇ" ಅಂತ ಮರುಕಪಡುವ
ಬಣ್ಣ ಸಿಕ್ಕಾಗಿನ ಅದೇ ಮಗುವಿನ ಮೊಗದ ಹೊಳಪ ತೋರುವ ಅಭಿನಯದಲ್ಲಿ ಅವರು ನಮ್ಮನ್ನು ಮಂತ್ರಮುಗ್ಧನನ್ನಾಗಿ ಮಾಡುತ್ತಾರೆ.


ಈ ಸಿನಿಮಾದ ಕಥೆಗೆ ಸೂಕ್ತ ಕಲಾವಿದರಾದ ಮಾಧವ ಕಾರ್ಕಡ ಅವರನ್ನು ನಿರ್ದೇಶಕರು ಆಯ್ದುಕೊಂಡಿದ್ದಾರೆ.


ಗೆಳೆಯ, ಸಹೋದರ ನಾಗರಾಜ್ ಸೋಮಯಾಜಿ (Nagaraj Somayaji) ಅತ್ಮೀಯರೆಂದು ಇದೆಲ್ಲವನ್ನೂ ಹೇಳುತ್ತಿಲ್ಲ. ಯಾವುದೇ ಕೆಲಸವನ್ನು ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ನಾಟಕವಿರಬಹುದು, ಸಿನಿಮಾವಿರಬಹುದು, ಅವರ ಫೋಟೋಗ್ರಫಿಯ ವೃತ್ತಿಜೀವನದಲ್ಲೇ ಇರಬಹುದು. ಮೊದಲ ಪ್ರಯತ್ನವಾದರೂ ಪ್ರತಿಯೊಂದರಲ್ಲೂ ಅವರ ಶ್ರದ್ಧೆ, ಶಿಸ್ತು ಎದ್ದು ಕಾಣುತ್ತದೆ. ಬಹುತೇಕರು ಮಾಡುವಂತೆ ಚೊಚ್ಚಲ ಕಿರುಚಿತ್ರಕ್ಕಾಗಿ ಯಾವುದೋ ಅದೇ ಹಳೆಯ ಪ್ರೇಮಕಥೆಗಳನ್ನು ತೆಗೆದುಕೊಳ್ಳದೆ ಶ್ರೀಧರ ಬನವಾಸಿಯವರ ಕಥೆಯನ್ನು ಆಧರಿಸಿ ಸಿನಿಮಾವಾಗಿಸಿದ್ದಾರೆ. ಮುಂದೆಯೂ ಸಾಹಿತ್ಯವನ್ನಾಧರಿಸಿದ ಸಿನಿಮಾಗಳು ಅವರಿಂದ ಮೂಡಿ ಬರಲಿ ಎಂದು ಆಶಿಸುತ್ತ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಕೋರೋಣ.


ಕೊರೋನಾ ಟೈಮಿನಲ್ಲಿ ಮನೆಯಲ್ಲೇ ಕುಳಿತು ಏನು ಮಾಡಬೇಕೆಂದು ತೋಚದಿರುವ ಪರಿಸ್ಥಿತಿಯಲ್ಲಿ ಈ ಸಿನಿಮಾ ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ.


ನೋಡದಿದ್ದವರು ಒಮ್ಮೆ ನೋಡಿ. ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತದೆ. ನೋಡಿ, ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಚೊಚ್ಚಲ ಪ್ರಯತ್ನಕ್ಕೆ ಬೆನ್ನು ತಟ್ಟಿ.


-Santhosh Kumar LM
16-Apr-2020

Monday, April 13, 2020

ಕುರಂಗು ಬೊಮ್ಮೈ ....2017 Tamil Movie

Kurangu Bommai Movie Poster (#3 of 3) - IMP Awards

ಯುವನಿರ್ದೇಶಕರುಗಳಿಗೆ ಆಧಾರವಾಗಿ ದೊಡ್ಡ ಬಜೆಟ್'ನ ಪ್ರಾಜೆಕ್ಟುಗಳು ಸಿಗುವುದು ಕಷ್ಟ. ಹಾಗಾಗಿಯೇ ಅನೇಕ ಪ್ರತಿಭಾವಂತರು ತಮಗೆ ಸಿಗುವ ಕಡಿಮೆ ಬಜೆಟ್ಟಿನಲ್ಲೇ ಒಳ್ಳೆಯ ಸಿನಿಮಾ ಮಾಡುವ ಒತ್ತಡಕ್ಕೆ ಸಿಲುಕುತ್ತಾರೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಈ ಬಗೆಯ ಅನೇಕ ಸಿನಿಮಾಗಳು ತಮಿಳಿನಲ್ಲಿ ಬಂದಿವೆ. ಖುಶಿಯ ವಿಚಾರವೆಂದರೆ ಒಳ್ಳೆಯ ಪ್ರಯತ್ನಗಳಿಗೆ ತಮಿಳು ಚಿತ್ರರಂಗ ಒಳ್ಳೆಯ ಬೆಂಬಲ ಕೊಡುತ್ತದೆ.


ಕಡಿಮೆ ಬಜೆಟ್ ಅಂತ ಅನ್ನಿಸಿದರೂ ಸಿನಿಮಾ ಹೇಳುವ ಕಥೆ ಕುತೂಹಲ ಹುಟ್ಟಿಸುವಲ್ಲಿ ಎಲ್ಲಿಯೂ ನಿರಾಶೆ ಮಾಡುವುದಿಲ್ಲ. ಅಂತ ಸಿನಿಮಾಗಳ ಪೈಕಿ 2017ರಲ್ಲಿ ಬಿಡುಗಡೆಯಾದ ನಿಥಿಲನ್ ಚೊಚ್ಚಲ ನಿರ್ದೇಶನದ ಸಿನಿಮಾ "ಕುರಂಗು ಬೊಮ್ಮೈ" ಕೂಡ ಒಂದು. ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾದ ಕಥೆ ನಮಗೆ ಸಾಧಾರಣ ಅನ್ನಿಸಬಹುದು. ಆದರೆ ಆ ಕಥೆಯನ್ನು ಹೇಳುವ ರೀತಿ ಮುದ ಕೊಡುತ್ತದೆ. ಇಲ್ಲೂ ಸಹ non-linear ಶೈಲಿಯನ್ನೇ ಅಳವಡಿಸಿಕೊಂಡಿದ್ದರೂ ಪ್ರೇಕ್ಷಕನಿಗೆ ಗೊಂದಲವಾಗುವುದಿಲ್ಲ. ಅದರ ಬದಲಾಗಿ ಆ ಶೈಲಿಯೇ ಕಥೆಯನ್ನು ಸಿನಿಮಾಂತ್ಯದವರೆಗೆ ಕೊಂಚ ಕೊಂಚವೇ ಅನಾವರಣಗೊಳಿಸುತ್ತ ಸಾಗುತ್ತದೆ.


ಸಿನಿಮಾದ ನಾಯಕನಟ "ಕುಟ್ರಮೇ ದಂಡನೈ" ಸಿನಿಮಾದಲ್ಲೂ ನಟಿಸಿದ್ದ ವಿದಾರ್ಥ್, ಎಂದಿನಂತೆ ಯಾವುದೇ ಹೀರೋಯಿಸಂ ತೋರಿಸದ ನಟನೆ. ಆದರೆ ಈ ಸಿನಿಮಾದಲ್ಲಿ ಗಮನ ಸೆಳೆಯುವುದು ಸ್ಲಗ್ಗರ್ ಪಾತ್ರದಲ್ಲಿ ನಟಿಸಿರುವ ಇದೇ ಸಿನಿಮಾದ ನಿರ್ಮಾಪಕ ತೇನಪ್ಪನ್. ಅದಕ್ಕಿಂತ ಮುಖ್ಯವಾಗಿ ನಾಯಕನ ಅಪ್ಪನ ಪಾತ್ರದಲ್ಲಿ ನಟಿಸಿರುವ ಹಿರಿಯ ನಿರ್ದೇಶಕ ಬಿ.ಭಾರತಿರಾಜಾ. ಕಳ್ಳನ ಜೊತೆ ಸೇರುವ ಅವಶ್ಯಕತೆಯೇನಿತ್ತು ಅನ್ನುವ ಪ್ರಶ್ನೆಗೆ ಭಾರತಿರಾಜಾ ಹೇಳುವ ಪ್ರತಿಕ್ರಿಯೆಯಲ್ಲಿ ಒಂದು ಪುಟ್ಟ ಕಥೆಯಿದೆ. ನಿಮಗೆ ತಮಿಳು ಬರುವುದಾದರೆ ಆ ಕಥೆ ಕೇಳುವಾಗಲೇ ಆ ಪಾತ್ರದ ಬಗ್ಗೆ ಮನಸ್ಸಿನಲ್ಲೊಂದು ಅನುಕಂಪ ಮೂಡಿ ಸಿನಿಮಾದ ಬಗೆಗಿನ ಮೂಡ್ ಬದಲಾಗುತ್ತದೆ. ಈ ಸಂಭಾಷಣೆಯಿರದಿದ್ದರೆ ಆ ಸಿನಿಮಾ ತೂಕ ಕಡಿಮೆಯಾಗಿರುತ್ತಿತ್ತು.


ಸಿನಿಮಾದ ಕಥೆಯಲ್ಲೂ ಎಲ್ಲೂ ಇದು ಒಳ್ಳೆಯದು, ಇದು ಕೆಟ್ಟದ್ದು ಅಂತ ಕಪ್ಪು-ಬಿಳುಪಾಗಿ ಏನನ್ನೂ ತೋರಿಸಿಲ್ಲ. ಆದರೆ ಹಣಕ್ಕಾಗಿ ದುರಾಸೆಪಡುವ ಸಮಾಜದ ಮುಖವನ್ನು ಇಡೀ ಸಿನಿಮಾದಲ್ಲಿ ಕೋತಿಗೆ ದೃಷ್ಟಾಂತವಾಗಿ ತೋರಿಸಲಾಗಿದೆ. ವಿಶೇಷವೆಂದರೆ ನಮ್ಮ ಕನ್ನಡದ ಅಜನೀಶ್ ಲೋಕನಾಥ್ ಅವರು ಈ ಸಿನಿಮಾದ ಮೂಲಕ ತಮಿಳಿಗೂ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ಶುಭ ಹಾರೈಸೋಣ.


ನೋಡಿರದಿದ್ದರೆ ಏನೂ expectation ಇಲ್ಲದೆ ನೋಡಿ, ಇಷ್ಟವಾಗಬಹುದು. ಒಮ್ಮೆಯಂತೂ ನೋಡಲಡ್ಡಿಯಿಲ್ಲ.


Cinema Recommended by: ಎ ಎಸ್ ಜಿ.
Thank you 🙂


-Santhosh Kumar LM
13-Apr-2020

Tuesday, April 7, 2020

HIT.....2020 (Telugu)

Hit : The First Case (2020) - Review, Star Cast, News, Photos ...


HIT: The First Case (2020, Telugu, Suspense thriller)

ದುರುವಂಗಳ್ ಪದಿನಾರು ಸಿನಿಮಾದ ನಂತರ ಅದರಷ್ಟೇ ಕಿಕ್ ಕೊಟ್ಟ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಕಥೆಯೊಂದು ಚೆನ್ನಾಗಿದ್ದರೆ ಬೇರೇನೂ ಅಷ್ಟೊಂದು ಸಮಸ್ಯೆಯೇ ಆಗುವುದಿಲ್ಲ ಅನ್ನುವುದಕ್ಕೆ ಈ ಸಿನಿಮಾ ಒಳ್ಳೆಯ ಉದಾಹರಣೆ.

ಅಪಹರಣ, ರಹಸ್ಯ, ಕುತೂಹಲ ಕಡೆಯವರೆಗೂ ಕಾಯ್ದುಕೊಳ್ಳುವಿಕೆ. ನಾಯಕನಂತೆಯೇ ನಮಗೂ ಏನಾಗಿದೆಯೆಂದು ಅರ್ಥವಾಗದ ಗೊಂದಲ, ಕ್ಲೂ ಸಿಕ್ಕರೂ ಅದರಿಂದ ಏನೂ ಅರ್ಥವಾಗದ ಕ್ಲಿಷ್ಟ ಪ್ರಕರಣ, ಸಮಸ್ಯೆಯಾಗಿ ಕಾಡುವ ನಾಯಕನ ಹಿನ್ನೆಲೆ ಹೀಗೆ ಸಸ್ಪೆನ್ಸ್ ಥ್ರಿಲ್ಲರ್'ಗೆ ಬೇಕಾಗುವ ಎಲ್ಲ ಅಂಶಗಳೂ ಕಥೆಯಲ್ಲಿವೆ. ಒಂದೆರಡು ಕಡೆಗಳಲ್ಲಿ ಕೊಡುವ ಸಮಜಾಯಿಷಿ ನಮ್ಮನ್ನು ಸಮಾಧಾನಪಡಿಸದಿದ್ದರೂ ಕಥೆಯ ದೃಷ್ಟಿಯಿಂದ ಎಲ್ಲೂ ಲೋಪವೆನಿಸಿಕೊಂಡಿಲ್ಲ. ಸಿನಿಮಾದ ಆರಂಭದಲ್ಲಿ ಕಥಾನಾಯಕನ ಬುದ್ಧಿಮತ್ತೆಯನ್ನು ಪ್ರೇಕ್ಷಕನಿಗೆ ಪರಿಚಯಿಸಲು ತೋರಿಸುವ ಎರಡು ಪ್ರಸಂಗಗಳೂ ಸಹ ರಸವತ್ತಾಗಿವೆ.

ತನ್ನ ಹಿನ್ನೆಲೆಯೇ ತನ್ನ ಕೆಲಸದ ಮಧ್ಯೆ ಕಾಡಿಸುವ, ಅದರಿಂದ ವಿಚಲಿತನಾದರೂ ಕೆಲಸದ ವಿಷಯದಲ್ಲಿ ಯಾವುದೇ ರಾಜಿ ತೋರದ ನಾಯಕನ ಪಾತ್ರದಲ್ಲಿ ವಿಶ್ವಾಕ್ ಸೇನ್ ಸಹಜವಾಗಿ ಅಭಿನಯಿಸಿದ್ದಾರೆ. ಸಿನಿಮಾದ ಸಸ್ಪೆನ್ಸ್ ಬಯಲಾದ ಮೇಲೆ ಮತ್ತೊಮ್ಮೆ ಮೊದಲಿನಿಂದ ಯೋಚಿಸಿದರೆ ಸಿನಿಮಾದ ಕಥೆಯನ್ನು ಹೆಣೆಯಲು ಎಷ್ಟು ಶ್ರಮ-ಶ್ರದ್ಧೆವಹಿಸಿದ್ದಾರೆ ಅಂತ ಅರ್ಥವಾಗುತ್ತದೆ. ಪ್ರೇಕ್ಷಕನ ಆಲೋಚನೆಯನ್ನು ಬೇರೆ ಬೇರೆ ವಿಷಯಗಳತ್ತ ಹರಿಸಿ ಗೊಂದಲವನ್ನುಂಟು ಮಾಡಲು ಇಲ್ಲಿ ಆಯ್ದುಕೊಂಡಿರುವ ಮಾರ್ಗವೂ ಮೆಚ್ಚುಗೆ ತರುವಂಥದ್ದು. ಇದರಿಂದಲೇ ಕಥೆಯುದ್ದಕ್ಕೂ ಪ್ರೇಕ್ಷಕ ಅಪರಾಧಿ ಇವನಿರಬಹುದೇ ಎಂದು ಪ್ರತೀ ಪಾತ್ರದ ಬಗ್ಗೆ ಯೋಚಿಸುತ್ತಲೇ ಇರುತ್ತಾನೆ.

ನೋಡಿರದಿದ್ದರೇ ಇಂದೇ ನೋಡಿ..... ಅಮೇಜಾನ್ ಪ್ರೈಮ್'ನಲ್ಲಿದೆ.

-Santhosh Kumar LM
07-Apr-2020

Saturday, April 4, 2020

Don't Breathe...... (2016) English Movie





Don't Breathe (2016) Horror, Thriller

ಅವರು ಮೂವರು ಚಿಕ್ಕ ಪುಟ್ಟ ಕಳ್ಳತನ ಮಾಡಿಕೊಂಡು ಬದುಕು ನಡೆಸುತ್ತಿರುವವರು. ಈಗ ಅವರಿಗೆ ಆ ಬಗೆಯ ಜೀವನ ಶೈಲಿ ಬೇಸರವಾಗಿದೆ. ಈಗೀಗ ಅವರು ಕಳ್ಳತನ ಮಾಡುವ ವಸ್ತುಗಳಿಗೂ ಮಧ್ಯವರ್ತಿಯಿಂದ ಸರಿಯಾದ ಬೆಲೆ ಸಿಗುತ್ತಿಲ್ಲ. ಹಾಗಾಗಿ ಕೊಂಚ ದೊಡ್ಡದೇ ಆದರೂ ಹೆಚ್ಚು ಹಣ ಸಿಗುವ ದರೋಡೆಯೊಂದನ್ನು ಮಾಡಿ ಬೇರೆ ಸ್ಥಳಕ್ಕೆ ಹೋಗಿ ನೆಲೆಸಬೇಕೆಂಬ ನಿರ್ಧಾರ ಮಾಡುತ್ತಾರೆ.

ಹೆಚ್ಚು ಜನ ಓಡಾಡದ ಪ್ರದೇಶದಲ್ಲಿ ಒಂದು ಮನೆಯಿದೆ. ಅಲ್ಲಿ ಒಬ್ಬ ನಿವೃತ್ತ ಸೇನಾಧಿಕಾರಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾನೆ. ಸೇನೆಯಲ್ಲಿದ್ದಾಗ ನಡೆದ ಬಾಂಬ್ ದಾಳಿಯಲ್ಲಿ ಆತನ ಕಣ್ಣು ಹೋಗಿ ಆತ ಕುರುಡನಾಗಿದ್ದಾನೆ. ಅವನ ಮಗಳು ಅಪಘಾತವೊಂದರಲ್ಲಿ ತೀರಿಹೋಗಿದ್ದರಿಂದ ಪರಿಹಾರದ ಹಣವಾಗಿ ದೊಡ್ಡ ಮೊತ್ತ ಅವನ ಕೈಸೇರಿದ ಮಾಹಿತಿ ಇವರಿಗೆ ಸಿಗುತ್ತದೆ.

ಈ ಮೂವರೂ ಅವನ ಮನೆಗೆ ಕನ್ನ ಹಾಕುತ್ತಾರೆ. ಅಲ್ಲಿಂದ ನಿಜವಾದ ಪರದಾಟ ಶುರುವಾಗುತ್ತದೆ. ಆ ಜಟಾಪಟಿಯಲ್ಲಿ ಯಾರು ಗೆಲ್ಲುತ್ತಾರೆ ಅನ್ನುವುದೇ ಕಥೆ.

2016 ರಲ್ಲಿ ಬಿಡುಗಡೆಯಾದ ಈ ಸಿನಿಮಾದ ಹೆಸರು "Dont Breathe". ಇರುವುದೇ ಒಂದೂವರೆ ಗಂಟೆಗೂ ಕಡಿಮೆ ಅವಧಿಯ ಸಿನಿಮಾ. ಆದರೆ ನಾವೇ ಆ ಮನೆಯೊಳಗೆ ಕನ್ನ ಹಾಕಹೋಗಿ ಸಿಕ್ಕಿಕೊಂಡ ಉಸಿರುಗಟ್ಟಿದ ಫೀಲಾಗುತ್ತದೆ. ಹಾರರ್ ಅನ್ನಿಸುವಂತೆ ಚಿತ್ರೀಕರಿಸಲಾಗಿದೆಯಾದರೂ ಸಂಪೂರ್ಣ ಥ್ರಿಲ್ಲರ್ ಸಿನಿಮಾ. ಜಾಸ್ತಿ ಅರ್ಥ ಮಾಡಿಕೊಳ್ಳಲು ಏನೂ ಇರಬಾರದು. ಆದರೆ ಥ್ರಿಲ್ ಸಿಗುವ ಸಿನಿಮಾ ನೋಡಬೇಕು ಅಂತ ಬಯಸುವ ಸಿನಿಮಾ-ಪ್ರೇಮಿಗಳಿಗೆ ಹೇಳಿ ಮಾಡಿಸಿದ ಸಿನಿಮಾ. ಇಡೀ ಸಿನಿಮಾದಲ್ಲಿ ನಿಶ್ಯಬ್ದವೇ ಹಿನ್ನೆಲೆ ಸಂಗೀತ. ಉಸಿರಾಡಿದರೂ ಇನ್ನೊಬ್ಬರಿಗೆ ಕೇಳಿಸಿಬಿಡುತ್ತದೇನೋ ಅನ್ನಿಸುವಿಕೆ. ಹಾಗಾಗಿ ಸಿನಿಮಾದ ಹೆಸರೂ ಕೂಡ ಸರಿಯಾಗಿಯೇ ಸಮಂಜಸವಾಗಿದೆ.

ಮಜಾ ಅಂದರೆ ಈ ಸಿನಿಮಾದ ಕಥೆಯನ್ನು ಆ ಕಳ್ಳತನ ಮಾಡುವವರ ದೃಷ್ಟಿಕೋನದಿಂದ ತೆಗೆಯಲಾಗಿದೆ. ಸಿನಿಮಾ ನೋಡುವಾಗ ಯಾವ ಅಂಶ ನಮಗೆ ಭಯ ಹುಟ್ಟಿಸುತ್ತಿದೆ ಅಂತಲೇ ಕೆಲಕಾಲ ತಬ್ಬಿಬ್ಬಾಗುತ್ತೇವೆ. ಏಕೆಂದರೆ ವೀಕ್ಷಕನ ಮನಸ್ಸು ಆ ಕಳ್ಳತನ ಮಾಡುತ್ತಿರುವವರ ಪರವಾಗಲಿ ಅಥವ ತನ್ನ ಮನೆಗೆ ನುಗ್ಗಿದವರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪರದಾಡುವ ಕುರುಡ ಸೇನಾಧಿಕಾರಿಯ ಪರವಾಗಲಿ ಇರುವುದಿಲ್ಲ. ಈ ವಿಭಿನ್ನತೆಯೇ ಈ ಸಿನಿಮಾದಲ್ಲಿ ಇಷ್ಟವಾಯಿತು.

ಈ ಸಿನಿಮಾದ ಎರಡನೇ ಭಾಗಕ್ಕೆ ಈಗಾಗಲೇ ಸಿದ್ಧತೆ ನಡೆದಿದ್ದು, ಆ ಚಿತ್ರತಂಡ ಮುಂದಿನ ವರ್ಷಕ್ಕೆ ಬಿಡುಗಡೆ ಮಾಡುವ ಆಶಯ ಹೊಂದಿದೆಯಂತೆ.

ಥ್ರಿಲ್ಲರ್ ಪ್ರಿಯರಿಗೆ ಒಂದೂವರೆ ಗಂಟೆ ಭರಪೂರ ಮನರಂಜನೆ ಕೊಡುವ ಸಿನಿಮಾ....ನೆಟ್‍ಫ್ಲಿಕ್ಸ್'ನಲ್ಲಿದೆ. ತಪ್ಪದೇ ನೋಡಿ!

-Santhosh Kumar LM
04-Apr-2020

Thursday, April 2, 2020

ರಾಮಾ ರಾಮಾ ರೇ....2016 (Kannada Cinema)

Satya Prakash's Rama Rama Re is out on YouTube- Cinema express ಈ ಚಿತ್ರ ಬಿಡುಗಡೆಯಾಗಿದ್ದಾಗ ಮಲೇಷ್ಯಾದಲ್ಲಿದ್ದೆ. ನೋಡಲು ಸಾಧ್ಯವಾಗಿರಲಿಲ್ಲ.


ಕಡೆಗೂ ಇಂದು ಈ ಚಿತ್ರವನ್ನು ನೋಡಿದೆ. ನೆಟ್‍ಫ್ಲಿಕ್ಸ್'ನಲ್ಲಿದ್ದ ಸಿನಿಮಾವನ್ನು ನೋಡದೆ ಕಡೆಗೊಂದು ದಿನ ಹುಡುಕಿದಾಗ ತೆಗೆದು ಹಾಕಿದ್ದರು. ಇದೀಗ ಯೂಟ್ಯೂಬ್'ನಲ್ಲಿ ಬಿಡುಗಡೆಯಾಗಿದೆ.


ವಿಶೇಷವೆಂದರೆ ಇಂದು ರಾಮನವಮಿಯ ದಿನವೇ "ರಾಮಾ ರಾಮಾ ರೇ" ಸಿನಿಮಾ ನೋಡುವಂತಾಯಿತು.


ಅದ್ಭುತ ಸಿನಿಮಾ...ನಾಲ್ಕು ವರ್ಷದ ಹಿಂದಿನದ್ದು......ನೀವಾಗಲೇ ನೋಡಿರುತ್ತೀರಿ. ಹೇಳಲೇನೂ ಉಳಿದಿಲ್ಲ. ಕಾನ್ಸೆಪ್ಟ್, ಕಲಾವಿದರು, ಹಿನ್ನೆಲೆ ಸಂಗೀತ, "ಕೇಳು ಕೃಷ್ಣ, ಹೇಳು ಪಾರ್ಥ" ಹಾಡು, ಜೀಪು, ಹಸಿರೇ ಇಲ್ಲದ ನೀರು ಕಾಣದ ಒಣ ಭೂಮಿ, ಬಿಸಿಲು, ಜನರು, ಅವರದೇ ಆದ ಆದ್ಯತೆಗಳು, ಆಸೆ, ಮಾನವೀಯತೆ, ಭಗವದ್ಗೀತೆಯ ಸಾರ, ಅತ್ಯುತ್ತಮ ಅಂತ್ಯ .....ಇತ್ಯಾದಿತ್ಯಾದಿ


ಕೆಲವು ಕಡೆಯಂತೂ ಗಂಟಲುಬ್ಬಿ ಬರುವ ನಿರೂಪಣೆ.


ನೀವಿನ್ನೂ ನೋಡಿರದಿದ್ದರೆ ನೋಡಲೇಬೇಕಾದ ಕನ್ನಡದ ಸಿನಿಮಾ...ನೋಡಿ.


-Santhosh kumar LM
02-Apr-2020

Wednesday, April 1, 2020

ಗಾಡ್ ಫಾದರ್ 2020 (Tamil, Thriller)


ಗಾಡ್ ಫಾದರ್ 2020 (ತಮಿಳು, ಥ್ರಿಲ್ಲರ್)

ಅಲ್ಲೊಬ್ಬ ಡಾನ್ ಇದ್ದಾನೆ. ಅವನಿಗೊಬ್ಬ ಮಗ. ಆ ಮಗನಿಗೆ ಹೃದಯಸಂಬಂಧಿ ಖಾಯಿಲೆ. ಹಾಗಾಗಿ ಬೇರೊಂದು ಹೃದಯವನ್ನು ಕಸಿ ಮಾಡದ ಹೊರತು ಬದುಕುಳಿಯಲಾರ

ಇತ್ತ ನಮ್ಮ ಮುಗ್ಧ ಸಿನಿಮಾ ನಾಯಕ. ಹೆಂಡತಿ ಮತ್ತು ಮಗನೊಂದಿಗೆ ಸಂತೋಷದ ಜೀವನ ಸಾಗಿಸುತ್ತಿದ್ದಾನೆ.

ಡಾನ್'ಗೆ ಬೇರೆಯವರ ಜೀವದ ಬಗ್ಗೆ ಚಿಂತೆಯಲ್ಲ. ಅವನಿಗೆ ಸದ್ಯದ ಆದ್ಯತೆ ತನ್ನ ಮಗನನ್ನು ಉಳಿಸಿಕೊಳ್ಳುವುದು. ಅದಕ್ಕೆ ಇರುವುದೊಂದೇ ದಾರಿ. ತನ್ನ ಮಗನ ರಕ್ತದ ಗುಂಪು ಹೊಂದಿಕೆಯಾಗುವ ಮಗುವೊಂದನ್ನು ಹುಡುಕಿ, ಬಲಿಕೊಟ್ಟು ಆ ಮಗುವಿನ ಹೃದಯವನ್ನು ಕಸಿ ಮಾಡಿಸಿ ತನ್ನ ಮಗುವನ್ನು ಉಳಿಸಿಕೊಳ್ಳುವುದು.

ರಕ್ತ ಪರೀಕ್ಷಾಕೇಂದ್ರಕ್ಕೆ ನುಗ್ಗಿ ಅಲ್ಲಿ ಸಿಕ್ಕ ದಾಖಲೆಗಳನ್ನು ಹುಡುಕಿದಾಗ ಆ ರೌಡಿಗಳಿಗೆ ಸಿಗುವ ಮಗುವಿನ ವಿವರವೆಂದರೆ ನಮ್ಮ ಕಥಾನಾಯಕನ ಮಗು. ಆ ವಿಳಾಸವನ್ನು ಹುಡುಕಿಕೊಂಡು ಬರುವ ಡಾನ್ ಮತ್ತು ಅವನ ಸಹಚರರಿಂದ ನಮ್ಮ ನಾಯಕ ತನ್ನ ಮಗುವನ್ನು ಕಾಪಾಡಲು ಸಾಧ್ಯವೇ ಅನ್ನುವುದೇ ಈ ವರ್ಷ ಬಿಡುಗಡೆಯಾದ "ಗಾಡ್ ಫಾದರ್" ತಮಿಳು ಚಿತ್ರದ ಕಥೆ.

ನಾಯಕ ನಟರಾಜನ್ ಸುಬ್ರಮಣ್ಯಂ ಎಂದಿನಂತೆ ಸಹಜ ಅಭಿನಯ. ಡಾನ್ ಪಾತ್ರದಲ್ಲಿ ಮಲಯಾಳಂ ನಟ ಲಾಲ್ ಮ್ಯಾನರಿಸಂ ತುಂಬಾ ಇಷ್ಟವಾಯಿತು. ಸೂಪರ್ ಡಿಲಕ್ಸ್ ಚಿತ್ರದಲ್ಲಿ ನಟಿಸಿರುವ ಪುಟಾಣಿ ಅಶ್ವಂತ್ ಇಲ್ಲೂ ಸಹ ನಟಿಸಿದ್ದಾನೆ. ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಒಮ್ಮೆ ನೋಡಬಹುದಾದ ಚಿತ್ರ. ನೋಡಿ.

-Santhosh Kumar LM
01-Apr-2020