Monday, December 2, 2019

ಕಾಳಿದಾಸ ಕನ್ನಡ ಮೇಷ್ಟ್ರು (2019)

ಬಿಡುಗಡೆಯಾದ ವಾರದ ನಂತರವೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕನ್ನಡ ಚಿತ್ರ. ನಿನ್ನೆ GT world mallನಲ್ಲಿ ಸಂಜೆಯ ಪ್ರದರ್ಶನ ಹೆಚ್ಚು-ಕಡಿಮೆ houseful ಆಗಿತ್ತು.

ಸಂದೇಶವೊಂದನ್ನು ಸಮಾಜಕ್ಕೆ ದಾಟಿಸಲೆಂದೇ ಮಾಡಿರುವ ಚೆಂದದ ಚಿತ್ರ. ಹಾಗಂತ ಇದಕ್ಕೆ ಜಗ್ಗೇಶ್ ಏಕೆ ಅನ್ನಿಸಬಹುದು. ಮೊದಲರ್ಧದಲ್ಲಿ ಕಥೆಯ ಭಾಗವಾಗಿಯೇ ಹಾಸ್ಯ ಬಳಕೆಯಾಗಿದೆ. ಆದ್ದರಿಂದ ಸಿನಿಮಾ ಅರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ. ಹಾಸ್ಯವೂ ಅಷ್ಟೇ, ಎಲ್ಲೂ ತುರುಕಲಾಗಿದೆ ಅನ್ನಿಸುವುದಿಲ್ಲ. ಜಗ್ಗೇಶ್‌ನ ಮ್ಯಾನರಿಸಂ ಸಿಕ್ಕಾಪಟ್ಟೆ ನಗು ತರಿಸುತ್ತದೆ.

ದ್ವಿತೀಯಾರ್ಧದಲ್ಲಿ ಕಥೆ ಬೇರೊಂದು ತಿರುವು ಪಡೆದು ಇದ್ದಕ್ಕಿದ್ದಂತೆ ಗಂಭೀರವಾಗುತ್ತದೆ. ಇಲ್ಲಿ ನನಗಿಷ್ಟವಾದದ್ದು ನಿರ್ದೇಶಕನ ಸಂದೇಶ ಹೇಳುತ್ತಿರುವ clarityಯ ಬಗ್ಗೆ. ಎಷ್ಟೋ ಸಲ ಖಾಸಗಿ ಶಾಲೆಗಳನ್ನು ವಿರೋಧಿಸುವುದೇ ಅನೇಕ ಸಿನಿಮಾಗಳ ಉದ್ದೇಶವಾಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ಸಮಾನ ಶಿಕ್ಷಣ, ಉಚಿತ ಶಿಕ್ಷಣ, ಖಾಸಗಿ ಶಾಲೆಗಳ ಕಡಿವಾಣ, ಸರ್ಕಾರಿ ಶಾಲೆಗಳ ಪುನರುಜ್ಜೀವನಗೊಳಿಸುವಿಕೆ, ಮಾತೃಭಾಷಾ ಶಿಕ್ಷಣ, ಮುಂದಿನ ಜೀವನಕ್ಕೆ ಬೇಕಾದ ಕೌಶಲ್ಯ ನೀಡುವ ಶಿಕ್ಷಣ, ಮಕ್ಕಳಿಗೆ ಶಾಲೆಯೆನ್ನುವುದು ಹೊರೆಯಾಗದಂತೆ ಮಾಡುವಿಕೆ, ಡೊನೇಶನ್ ಹಾವಳಿಗೆ ಕಡಿವಾಣ,.... ಅನೇಕ ವಿಷಯಗಳ ಬಗ್ಗೆ ಹೇಳುತ್ತಾರೆ. ಹೇಳುವ ರೀತಿಯಲ್ಲಿ ಯಶಸ್ವಿಯಾಗುತ್ತಾರೆ ಕೂಡ. ಮಕ್ಕಳನ್ನು ಮಾರ್ಕ್ಸ್ ತರುವ ಯಂತ್ರಗಳಂತೆ ಕಾಣುವ ತಂದೆ ತಾಯಿಗಳಿಗಂತೂ ಈ ಸಿನಿಮಾ‌ ನೋಡುವಾಗ ತಮ್ಮನ್ನು ತಾವು ಅವಲೋಕಿಸಿಕೊಳ್ಳುವಂತೆ ಮಾಡುತ್ತದೆ.

ಜಗ್ಗೇಶ್ ಕೈಯಲ್ಲಿ ಡಬ್ಬಲ್ ಮೀನಿಂಗ್ ಡೈಲಾಗುಗಳನ್ನು ಹೇಳಿಸದೇ ಹೊಟ್ಟೆ ಹುಣ್ಣಾಗುವಂತೆ ನಕ್ಕುನಗಿಸುವುದು ನಿಜಕ್ಕೂ ಸವಾಲು. ಆ ಸವಾಲಿನಲ್ಲಿ ನಿರ್ದೇಶಕ ಗೆದ್ದಿದ್ದಾರೆ.

ದ್ವಿತೀಯಾರ್ಧದಲ್ಲಿ ಹಾಸ್ಯ ಕಡಿಮೆಯಾಯಿತು ಅನ್ನುವ ದೃಷ್ಟಿಯಿಂದ ಕೆಲವು ಹಾಸ್ಯ ದೃಶ್ಯಗಳನ್ನು ಕಥೆಯ ಮಧ್ಯೆ ತುರುಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನನಗೆ ಕಿರಿಕಿರಿಯಾಗಿದ್ದು ಗಂಭೀರವಾದ ಸನ್ನಿವೇಶದಲ್ಲಿ ಬರುವ ತಬಲ ನಾಣಿಯ ಹಾಸ್ಯದ ದೃಶ್ಯಗಳು. ಅವಿಲ್ಲದಿದ್ದರೂ ಸಿನಿಮಾಗೆ ಕೊರತೆಯಾಗುತ್ತಿರಲಿಲ್ಲ.

ಸಿನಿಮಾ logical solution ಅಂತ ಏನನ್ನೂ ಇಲ್ಲಿ ಕೊಡುವುದಿಲ್ಲ. ಆದರೆ ಸದ್ಯದ ಸಮಸ್ಯೆ ಹೇಳುತ್ತ, ಮುಂದೆ ಹೀಗಾದರೆ ಎಷ್ಟು ಚೆಂದ ಅನ್ನುವ ಕಲ್ಪನೆ ಕೊಟ್ಟು ಮುಕ್ತಾಯವಾಗುತ್ತದೆ. ಅದನ್ನು ಹೇಗೆ ಸಾಧಿಸಬೇಕೆನ್ನುವುದು ನಮ್ಮ ಆಲೋಚನೆಗೆ ಬಿಟ್ಟಿದ್ದು.

ಏನೇ ಇರಲಿ. ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಥೆಯನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನವೇ ಬೆನ್ನು ತಟ್ಟುವಂಥದ್ದು. ನಟ ಜಗ್ಗೇಶ್, ನಿರ್ದೇಶಕ ಕವಿರಾಜ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು.

ಖಂಡಿತವಾಗಿ ಬೋರ್ ಹೊಡೆಸದ ಸಿನಿಮಾ. ನೋಡಿರದಿದ್ದರೆ ಒಮ್ಮೆ ನೋಡಿ.

-Santhoshkumar LM
02-Dec-2019