Monday, September 30, 2019

English movie : ಆಲ್ಫಾ

ಆಲ್ಫಾ....ALPHA (2018)

ಇಂಗ್ಲೀಷ್ ಭಾಷೆಯ ಚಿತ್ರ ಅಂತಲೇ ಹೇಳುತ್ತದಾದರೂ ಇದರಲ್ಲಿ ಮಾತನಾಡುವುದೆಲ್ಲ ಒಂದು ಬುಡಕಟ್ಟು ಜನಾಂಗದ ಭಾಷೆ. ಇದನ್ನು ಅರ್ಥ ಮಾಡಿಕೊಳ್ಳಲು ಸಬ್-ಟೈಟಲ್'ನ ಸಹಾಯ ಪಡೆಯಲೇಬೇಕು.


ಸಾವಿರಾರು ವರ್ಷಗಳ ಹಿಂದೆ ಬುಡಕಟ್ಟು ಜನಾಂಗದ ಗುಂಪೊಂದು ತಾನು ವಾಸವಿದ್ದ ಜಾಗದಿಂದ ಬಹಳ ದೂರಕ್ಕೆ ಬೇಟೆಗೆಂದು ಪ್ರಯಾಣ ಶುರು ಮಾಡುತ್ತದೆ. ಮುಂದೆ ಬರುವ ಚಳಿಗಾಲದಲ್ಲಿ ಅಲ್ಲಿ ಒಂದು ಹೆಜ್ಜೆ ಎತ್ತಿಡಲೂ ಸಹ ಸಾಧ್ಯವಿಲ್ಲ. ಹಾಗಾಗಿ ಪ್ರತೀ ವರ್ಷ ಆ ಚಳಿಗಾಲ ಶುರುವಾಗುವ ಮೊದಲೇ ಬಹಳ ದೂರಕ್ಕೆ ಹೋಗಿ ಕಾಡುಕೋಣಗಳನ್ನು ಬೇಟೆಯಾಡಿ, ಆಹಾರವನ್ನು ಶೇಖರಿಸಿಡುವುದನ್ನು ಆ ಜನಾಂಗ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದೆ.


ಆ ಗುಂಪಿಗೆ ನಾಯಕ ತಾವ್. ಈ ಬಾರಿ ಹೊರಡುವಾಗ ತನ್ನ ಮಗ ಕೆಡಾನನ್ನು ಕೂಡ ಜೊತೆ ಬರಲು ಹೇಳುತ್ತಾನೆ. ಅವನ ಹೆಂಡತಿ ಮಗನಿಗೆ ಇನ್ನೂ ಧೈರ್ಯವಿಲ್ಲವೆಂದು, ಇನ್ನೂ ಬೇಟೆಯಾಡುವ ಸಾಮರ್ಥ್ಯ ಹೊಂದಿಲ್ಲವೆಂದು ಅವನನ್ನು ಕರೆದುಕೊಂಡು ಹೋಗದಿರಲು ಬೇಡಿಕೊಳ್ಳುತ್ತಾಳೆ. ಆದರೆ ಅವಳಿಗೆ ಧೈರ್ಯ ತುಂಬುವ ತಾವ್ ಈಗಿನಿಂದಲೇ ಮಗನಿಗೆ ನಾಯಕತ್ವವನ್ನು ಕಲಿಸಬೇಕು. ಅದಕ್ಕೆ ಇದೇ ಸೂಕ್ತ ಸಮಯ ಎಂದು ಹೊರಡುತ್ತಾನೆ.


ಕೆಡಾಗೆ ಭಯ, ಮೃದು ಸ್ವಭಾವದ ಹುಡುಗ. ಹಿಂಸೆ ಅನ್ನುವುದೆಲ್ಲ ಆಗದು. ಅವನ ಅಪ್ಪ ಒಂದು ಕಾಡುಹಂದಿಯನ್ನು ಗಾಯಗೊಳಿಸಿ ಅದನ್ನು ಕೊಲ್ಲು ಎಂದಾಗಲೂ ಹಿಂದೆ ಮುಂದೆ ನೋಡುತ್ತಾನೆ. ಒಳಗೊಳಗೆ ಮಗನಿಗೆ ಧೈರ್ಯ ತುಂಬುತ್ತಿರುತ್ತಾನೆ. ಅದೊಂದು ರಾತ್ರಿ ಬಿಡಾರ ಹೂಡಿ ಎಲ್ಲರೂ ಒಟ್ಟಿಗೆ ಕುಳಿತಾಗಲೇ ಮಿಂಚಿನವೇಗದಲ್ಲಿ ಇವರ ಮೇಲೆರಗುವ ಸಿಂಹವೊಂದು ಇವನ ಜೊತೆಯಲ್ಲಿದ್ದ ಇನ್ನೊಬ್ಬ ಹುಡುಗನನ್ನು ಹೊತ್ತೊಯ್ಯುತ್ತದೆ. ಅಸಹಾಯಕರಾಗಿ ನೋಡುವ ಎಲ್ಲರ ಮಧ್ಯೆ ಕೆಡಾಗೆ ಇನ್ನೂ ಭಯ ಹೆಚ್ಚಾಗುತ್ತದೆ.


ಇದೀಗ ನೂರಾರು ಮೈಲಿ ದೂರ ಕ್ರಮಿಸಿದ ಮೇಲೆ ಕಾಡೆಮ್ಮೆಗಳ ಹಿಂಡು ಮೇಯುವ ಜಾಗ ತಲುಪುತ್ತಾರೆ. ಅಲ್ಲಿ ಮುಂದೆ ನಡೆಯುವುದು ಮೈನವಿರೇಳಿಸುವ ಕಾಡೆಮ್ಮೆಗಳ ಬೇಟೆಯ ದೃಶ್ಯ. ಇನ್ನೇನು ಎಲ್ಲ ಸುಸೂತ್ರ ಅನಿಸಿಕೊಳ್ಳುವಾಗ ಕಾಡುಕೋಣವೊಂದು ಮರಳಿ ಬಂದು ಕೆಡಾನನ್ನು ಎಲ್ಲರೆದುರೇ ಪ್ರಪಾತಕ್ಕೆ ಒಗೆಯುತ್ತದೆ. ತಾವ್ ಹಿಂದೆಯೇ ನೆಗೆಯಲು ನಿಲ್ಲುತ್ತಾನಾದರೂ ಎಲ್ಲರೂ ಅವನನ್ನು ನಿಯಂತ್ರಿಸಿ ನಿನ್ನ ಮಗ ತೀರಿಕೊಂಡ ಎಂದು ಮನದಟ್ಟು ಮಾಡುತ್ತಾರೆ. ನಂತರ ಅಲ್ಲೇ ಕಲ್ಲುಗಳ ಗುಡ್ಡೆಯನ್ನು ನಿರ್ಮಿಸಿ ಮಗನ ಆತ್ಮಕ್ಕೆ ಶಾಂತಿಕೋರಿ, ನಂತರ ಆಹಾರವನ್ನು ಸಂಗ್ರಹಿಸಿ ಒಲ್ಲದ ಮನಸ್ಸಿನಿಂದಲೇ ಮನೆಯತ್ತ ಹೆಜ್ಜೆ ಹಾಕುತ್ತಾರೆ.


-------------


ಇತ್ತ ಪ್ರಪಾತಕ್ಕೆ ಬಿದ್ದ ಕೆಡಾ ಪೂರ್ತಿ ಕೆಳಗೆ ಬೀಳದೆ ಮಧ್ಯದಲ್ಲಿಯೇ ಕಾಲು ಮುರಿದುಕೊಂಡು ಬಿದ್ದು ಪ್ರಜ್ಞೆ ತಪ್ಪಿರುತ್ತಾನೆ. ರಣಹದ್ದೊಂದು ಶವವೆಂದು ತಿಳಿದು ಕುಕ್ಕಲು ಬಂದಾಗಲೇ ಈತನಿಗೆ ಎಚ್ಚರವಾಗಿ ಅದನ್ನು ಓಡಿಸುವುದು. ಮುಂದೆ ಭೀಕರ ಮಳೆ ಶುರುವಾಗಿ ಪ್ರವಾಹ ಶುರುವಾಗುತ್ತದೆ. ಇಳಿಯುವ ಪ್ರಯತ್ನ ಮಾಡುತ್ತಾನಾದರೂ ಕೈಜಾರಿ ಪ್ರವಾಹದೊಳಕ್ಕೆ ಬೀಳುತ್ತಾನೆ. ಎಚ್ಚರವಾದಾಗ ಇನ್ನೆಲ್ಲೋ ಬಂದು ಸೇರಿರುತ್ತಾನೆ.


ಒಮ್ಮೆಲೇ ಭಯವಾಗುವ ಕೆಡಾಗೆ ಮೇಲೆ ಬಂದು ನೋಡಿದರೆ ಅಪ್ಪ ಮತ್ತು ತನ್ನ ಬಳಗ, ತನ್ನನ್ನು ಸತ್ತನೆಂದು ತಿಳಿದು ವಾಪಸ್ಸಾಗಿರುವುದು ತಿಳಿಯುತ್ತದೆ. ಆಗಲೇ ತೋಳಗಳ ಹಿಂಡೊಂದು ಈತನ ಬೆನ್ನಟ್ಟುತ್ತದೆ. ಈತ ಹತ್ತಿರದಲ್ಲೇ ಇದ್ದ ಮರವೊಂದರ ಆಶ್ರಯ ಪಡೆಯುತ್ತಾನೆ. ಆ ಕಾದಾಟದಲ್ಲಿ ಒಂದು ತೋಳವನ್ನು ಗಾಯಗೊಳಿಸಿ ಕೆಳಗೆ ಬೀಳಿಸುತ್ತಾನೆ. ಬೆಳಗಿನ ಹೊತ್ತಿಗೆ ಎಲ್ಲ ತೋಳಗಳೂ ಹೊರಟು ಹೋಗಿರುತ್ತವೆ.......ಗಾಯಗೊಂಡ ತೋಳವನ್ನು ಬಿಟ್ಟು!


ಕೆಳಗಿಳಿದು ಅದನ್ನು ಸಾಯಿಸುವ ಮನಸ್ಸು ಮಾಡುತ್ತಾನಾದರೂ ಕಡೆಗೆ ಅದರ ಗಾಯ ನೋಡಿ, ಭಯದಿಂದಲೇ ಅದಕ್ಕೆ ಮದ್ದು ಹಚ್ಚಿ ಸುಶ್ರೂಷೆ ಮಾಡುತ್ತಾನೆ. ಜೊತೆಗೆ ಅಲ್ಲಿ ಸಿಕ್ಕ ನೀರು ಮತ್ತು ಆಹಾರವನ್ನು ಅದಕ್ಕೂ ನೀಡಿ ಉಪಚರಿಸುತ್ತಾನೆ. ಸದ್ಯ ಇಬ್ಬರೂ ಅವರ ಅಪ್ಪ-ಅಮ್ಮನಿಂದ ದೂರವಿದ್ದಾರೆ. ಈ ಅಂಶದಿಂದಲೇ ಈ ಸಂದರ್ಭದಲ್ಲಿ ಗೊತ್ತಿಲ್ಲದ ಹಾಗೆ ಆ ತೋಳಕ್ಕೂ ಕೆಡಾಗೂ ಗೊತ್ತಿಲ್ಲದ ಸ್ನೇಹವೇರ್ಪಡುತ್ತದೆ.


ಮುಂದೆ ಮನೆಯ ದುರ್ಗಮ ದಾರಿ ಹಿಡಿದು ಹೊರಡುವ ಕೆಡಾಗೆ ಆ ತೋಳವೇ ಜೊತೆಯಾಗುತ್ತದೆ. ಆತ ಮತ್ತೆ ಮನೆ ಸೇರುತ್ತಾನೆಯೇ? ಆ ಮುಂದಿನ ಪಯಣವೇ "Apha" ಸಿನಿಮಾದ ಕಥೆ.


--------------


ಅನಿವಾರ್ಯ ಪರಿಸ್ಥಿತಿಯಲ್ಲಿ ಮನುಷ್ಯನ-ಮೃಗದ ಮಧ್ಯದಲ್ಲೊಂದು ಸಂಬಂಧವೇರ್ಪಡುವ ಇದೇ ಬಗೆಯ ಕಥೆಯುಳ್ಳ "Life Of Pi" ಸಿನಿಮಾ ನೋಡಿದವರಿಗೆ ಇದು ಅದೇ ಬಗೆಯದು ಅನ್ನಿಸಬಹುದು. ಆದರೆ ಎಲ್ಲೂ ಬೋರ್ ಹೊಡೆಸದೆ ನೋಡಿಸಿಕೊಳ್ಳುವ ಸಿನಿಮಾ. ಅಮೇಜಾನ್ ಪ್ರೈಮ್'ನಲ್ಲಿದೆ ಒಮ್ಮೆ ನೋಡಿ.


ಸಂತೋಷ್ ಕುಮಾರ್ ಎಲ್. ಎಂ.
30-Sep-2019

Wednesday, September 25, 2019

Tamil movie : ಮನುಸಂಗಡ

ಮನುಸಂಗಡ (Manusangada)
(ಮನುಷ್ಯರೇ ಕಣ್ರೋ...(ನಾವೂ))....
ತಮಿಳು ಸಿನಿಮಾ (2018)
------------------------------

ಕೊಳಪ್ಪನ್ ಇದೀಗ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಅದೊಂದು ಮಧ್ಯರಾತ್ರಿ ಊರಿನಿಂದ ತಂದೆ ತೀರಿಕೊಂಡ ಸುದ್ದಿ ಬರುತ್ತದೆ. ತಕ್ಷಣವೇ ಬಸ್ಸಿನಲ್ಲಿ ಹೊರಟು ತನ್ನ ಹಳ್ಳಿಗೆ ಬರುತ್ತಾನೆ.

ಒಂದೆಡೆ ಅಪ್ಪನನ್ನು ಕಳೆದುಕೊಂಡ ದುಃಖ ಮನಸ್ಸನ್ನು ಆವರಿಸಿದ್ದರೆ ಇನ್ನೊಂದು ಕಡೆ ಆತಂಕ. ಅದಕ್ಕೆ ಕಾರಣ, ಆ ಹಳ್ಳಿಯಲ್ಲಿ ಕಾಲಾನುಕಾಲದಿಂದ ಜಾತಿ ಕಲಹವಿದೆ. ಕೊಳಪ್ಪನ್ ದಲಿತ ಸಮುದಾಯಕ್ಕೆ ಸೇರಿದವನು.
ಆ ಹಳ್ಳಿಯಲ್ಲಿ ಶವವನ್ನು ಹೊತ್ತು ಹೋಗಲು ಇರುವುದೊಂದೇ ಸಾಮಾನ್ಯ ದಾರಿ. ಅಲ್ಲಿ ಮೇಲ್ಜಾತಿಯವರ ಮನೆಗಳಿವೆ. ಇನ್ನೊಂದು ದಾರಿಯನ್ನು ದಾರಿ ಅಂತ ಕರೆಯಲೇ ಸಾಧ್ಯವಿಲ್ಲ. ಕಲ್ಲು ಮುಳ್ಳುಗಳೇ ತುಂಬಿವೆ. ಸಾಮಾನ್ಯ ದಾರಿಯಲ್ಲಿ ಶವ ಹೊತ್ತು ಹೋಗಲು ಮೇಲ್ಜಾತಿಯವರು ಬಿಡುವುದಿಲ್ಲ. ಹಿಂದೆಯೂ ಅನೇಕ ಬಾರಿ ಇದೇ ವಿಷಯಗಳಿಗೆ ಹೊಡೆದಾಟವಾಗಿ ಆ ಕ್ಷೇತ್ರದ ಶಾಸಕರೆಲ್ಲ ಬರುತ್ತಾರಾದರೂ ಅವರ ಸಂಧಾನವೆಲ್ಲ "ಇದೊಂದು ಬಾರಿ ಆ ಇನ್ನೊಂದು ದಾರಿಯಲ್ಲಿಯೇ ಹೋಗಿಬಿಡಿ" ಅನ್ನುವ ಹೇಳಿಕೆಗಳಲ್ಲೇ ಮುಗಿಯುತ್ತವೆ.

"ಸಾಯುವವರೆಗೂ ಅವರ ಮನೆಗಳಲ್ಲೇ ಜೀತ ಮಾಡಿದ ನಮ್ಮಪ್ಪ, ಆತ ತೀರಿಕೊಂಡ ತಕ್ಷಣ ಅವನ ಶವವೂ ಸಾಗಬಾರದ ಹಾಗೆ ಹೇಗೆ ಅನಿಷ್ಟವಾಗಿ ಹೋದ" ಅಂತ ಕೊಳಪ್ಪ ತನಗೇ ಪ್ರಶ್ನೆ ಹಾಕಿಕೊಳ್ಳುತ್ತಾನೆ. ಹೀಗಾಗಿ ಈ ಬಾರಿ ಕೊಳಪ್ಪನ್ ಮತ್ತು ಅವನ ಗೆಳೆಯರು ಶವಯಾತ್ರೆ ಸಾಮಾನ್ಯ ದಾರಿಯಲ್ಲಿಯೇ ಸಾಗಬೇಕು ಅನ್ನುವ ಮನಸ್ಸು ಮಾಡುತ್ತಾರೆ. ಪೊಲೀಸರು ಮತ್ತು ಆ ಊರಿನ RDO ಸಹಾಯ ಕೇಳುತ್ತಾರಾದರೂ ಯಾವುದೇ ಸಹಾಯವಾಗುವುದಿಲ್ಲ.  ಹೀಗಾಗಿ ಅದೇ ಊರಿನ ದಲಿತ ನಾಯಕನೊಬ್ಬ ಸೂಕ್ತ ಕಾನೂನಿನ ಸಹಾಯ ಪಡೆಯಲು ಸಹಕಾರ ನೀಡುತ್ತಾನೆ.

ಅತ್ತ ಮನೆಯ ಮುಂದೆ ಶವವಿಟ್ಟಿದ್ದರೂ ಇತ್ತ ಉಚ್ಛ ನ್ಯಾಯಾಲಯದಲ್ಲಿ writ ಅರ್ಜಿ ಸಲ್ಲಿಸಿ ತಕ್ಷಣವೇ ಆದೇಶ ಪಡೆಯುತ್ತಾರೆ. ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರುಗಳಿಗೂ, RDO ಗಳಿಗೂ, ಸ್ವತಃ ತಾವೇ ನಿಂತು ಕೊಳಪ್ಪನ್ ತಂದೆಯ ಶವಯಾತ್ರೆ ಸಾಮಾನ್ಯ ದಾರಿಯಲ್ಲಿಯೇ ನಡೆದು,  ಸಂಸ್ಕಾರವಾಗುವಂತೆ ಸೂಕ್ತ ರಕ್ಷಣೆ ಕೊಟ್ಟು ನೋಡಿಕೊಳ್ಳಬೇಕು ಅಂತ ಹೇಳಿರುತ್ತದೆ. ಕೊಳಪ್ಪನ್ ಮುಖದಲ್ಲಿ ಸಂತೋಷ ಕಾಣುತ್ತದೆ.

ಕೊಳಪ್ಪನ್ ಅಂದುಕೊಂಡಂತೆಯೇ ಶವಯಾತ್ರೆ, ಶವಸಂಸ್ಕಾರ ನಡೆಯುತ್ತದೆಯೇ? ನ್ಯಾಯಾಲಯದ ಆದೇಶ ಏನಾಯಿತು? ಅನ್ನುವುದೇ ಮುಂದಿನ ಕಥೆ.

2016ರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿಯೇ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಇಡೀ ಸಿನಿಮಾ ನಮ್ಮನ್ನು ವಿಷಾದದಲ್ಲಿಯೇ ಕರೆದೊಯ್ಯುತ್ತದೆ. ಮನೆಯ ಮುಂದೆಯೇ ಮೂರು ದಿನ ಇಟ್ಟ ಶವ, ಅಲ್ಲಿಯ ವಾತಾವರಣ ಎಲ್ಲವನ್ನು ಎಷ್ಟು ನೈಜವಾಗಿ ಚಿತ್ರಿಸಲಾಗಿದೆಯೆಂದರೆ ನಮ್ಮ ಮುಂದೆಯೇ ನಡೆಯುತ್ತಿದೆಯೇನೋ ಅನ್ನುವ ಭಾವ ಮೂಡುತ್ತದೆ. ಉದ್ದೇಶಪೂರ್ವಕವಾಗಿ ಸಿನಿಮಾದ ಗತಿಯನ್ನು ನಿಧಾನ ಮಾಡಿರುವುದು ಆ ಮೂರ್ನಾಲ್ಕು ದಿನ ಶವವಿಟ್ಟು ಕಾಯುವ ಸನ್ನಿವೇಶಗಳ ಕರಾಳತೆಯನ್ನು ಹಾಗೆಯೇ ಪ್ರೇಕ್ಷಕನಿಗೆ ತೋರಿಸಲು ಅನ್ನಿಸುತ್ತದೆ. ಕಡೆಯ ದೃಶ್ಯವಂತೂ ನಿಮ್ಮ ಕರುಳು ಹಿಂಡುವುದು ಗ್ಯಾರಂಟಿ.

90 ನಿಮಿಷಗಳ ಈ ಸಿನಿಮಾ ಯಾವುದೇ ಪರಿಹಾರವನ್ನು ಹೇಳುವುದಿಲ್ಲ. ಆದರೆ ಮನಸ್ಸಿನಲ್ಲಿ ಪ್ರಶ್ನೆಯನ್ನಂತೂ ಹುಟ್ಟುಹಾಕುತ್ತದೆ. ಕಾನೂನು ತುಳಿತಕ್ಕೊಳಗಾದವರ ಪರವಾಗಿದ್ದರೂ ಅದನ್ನು ಕಾರ್ಯಗತಗೊಳಿಸುವವರು ಮೇಲ್ವರ್ಗದವರ ಪರವಾಗಿದ್ದಾಗ ಏನಾಗಬಹುದು ಎಂಬುದರ ಚಿತ್ರಣವೇ "ಮನಸಂಗಡ".

ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದು ಮೆಚ್ಚುಗೆ ಗಳಿಸಿದ ಈ ಚಿತ್ರದ ನಿರ್ದೇಶಕ ಅಮ್ಷನ್ ಕುಮಾರ್.

ನೋಡಬೇಕೆನ್ನುವವರು... Netflix ನಲ್ಲಿದೆ ನೋಡಿ.

ಸಂತೋಷ್ ಕುಮಾರ್ ಎಲ್.ಎಂ
25-Sep-2019