Monday, November 26, 2012

ಎಲೆ ಮರೆ ಕಾಯಿಗಳ ಜೊತೆ ಮಾತುಕತೆ, ಎಲೆ ಮರೆ ಕಾಯಿ ೫೬

ಗೆಳೆಯ ನಟ್ಟು, ನನ್ನ ಬರಹಗಳನ್ನು ನೋಡಿ ಇತರರಿಗೆ ಪರಿಚಯಿಸಿದ ರೀತಿ ನಿಜಕ್ಕೂ ನನಗೆ ಬಹಳ ರೋಮಾಂಚನವನ್ನುಂಟು ಮಾಡಿತು.
ಅವರ ಬ್ಲಾಗಿನಿಂದ ಇಡೀ ಲೇಖನವನ್ನು ಕದ್ದು ತಂದು ನನ್ನ ಬ್ಲಾಗಿನಲ್ಲಿ ಮರುಪ್ರಕಟಿಸುತ್ತಿದ್ದೇನೆ.
ಇದು ಕೇವಲ ನನ್ನ ನೆನಪಿಗಾಗಿ ಮತ್ತು ಸಂಗ್ರಹಕ್ಕಾಗಿ ಮಾತ್ರ.
 

 ಈ ಲೇಖನದ ಮೂಲ ಆವೃತ್ತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

http://smnattu.blogspot.cz/2012/09/blog-post_14.html#links


ಆಕೆ ಮುನಿಸಿಕೊಂಡಾಗ 
ಪಾತ್ರೆಗಳೂ ಮಾತನಾಡುತ್ತವೆ.

ಅಕ್ಕಿ ಮುಗಿದಾಗಲೇ ಯಾಕೋ 
ಹಸಿವು ಹೆಚ್ಚಾಗುತ್ತದೆ.

ಕುಡಿದು ಓಡಿಸುವವನ ಗಾಡಿಯೂ
ತೂರಾಡುತ್ತಲೇ ಬರುತ್ತದೆ!!

ಕೆಲವು ಭಾವಗಳೇ ಹಾಗೆ ತಮ್ಮೊಳಗೆ ಮತ್ತೊಂದು ಭಾವವನ್ನು ನಮಗೆ ಕಂಡೂ ಕಾಣದಂತೆ ಅಡಗಿಸಿಕೊಂಡಿರುತ್ತವೆ. ಉದಾಹರಣೆಗೆ ಹುಸಿ ಕೋಪದೊಳಗಿನ ಪ್ರೀತಿ, ಹಸಿದವನ ಒಳಗಿರುವ ಜೀವನ ಮುಖಿ, ಮುಗುಳ್ನಗುವಿನ ಹಿಂದಿರುವ ಕುಹಕ, ಹೀಗೆ ಹುಡುಕುತ್ತಾ ಹೋದರೆ ಒಂದು ಭಾವದೊಳಗಿನ ಮತ್ತೊಂದು ಒಳ ಭಾವ ಅಥವಾ ಒಳಾರ್ಥ ನಮಗೆ ಗೋಚರಿಸುತ್ತಾ ಹೋಗುತ್ತದೆ. ಹೆಚ್ಚು ಸಲ ಹೊರ ಭಾವವನ್ನು ಮಾತ್ರ ಅರ್ಥೈಸಿಕೊಂಡು ಆ ಭಾವದ ಒಳಾರ್ಥವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗುತ್ತೇವೆ. ಆ ವಿಫಲತೆಯನ್ನು ಜನ ಮೂರ್ಖತನ ಎಂದು ಕರೆದುಬಿಡುತ್ತಾರೆ. ಗೆಳೆಯನೊಬ್ಬನ ಬ್ಲಾಗಿನಲ್ಲಿ ಮೇಲಿನ ಚಂದದ ಎರಡು ಸಾಲುಗಳ ಚುಟುಕಗಳ ಓದುತ್ತಲೇ ಯಾಕೋ ಹೀಗೊಂದು ಭಾವಗಳ ಕುರಿತ ಭಾವನಾ ಲಹರಿ ನನ್ನಲ್ಲಿ ಮೂಡುತ್ತಾ ಹೋಯಿತು. ಅಂದ ಹಾಗೆ ಈ ಗೆಳೆಯನ ಬ್ಲಾಗಿನ ಹೆಸರು "ಫ್ರೊಮ್ ಮೈ ಹಾರ್ಟ್"

"ಮದುವೆಗೆ ಮುಂಚೆ ಅಷ್ಟೇ ಇದೆಲ್ಲ, ಆಮೇಲೆ ..... ಏನಿಲ್ಲ. ಬರೀ ಬೊಗಳೆ ಪ್ರಪಂಚ. ಈ ಕರ್ಮಕ್ಕೆ ಲವ್ ಮ್ಯಾರೇಜ್ ಬೇರೆ ಯಾಕೆ ಬೇಕಿತ್ತೋ? ಪರಿಚಯವಾದ ದಿನಗಳಲ್ಲಿ ಅಟ್ ಲೀಸ್ಟ್ 10 ಗಂಟೆ ಫೋನಿನಲ್ಲೇ ಪ್ರಪಂಚ. ಕೂತಿದ್ದರೂ ನಿಂತಿದ್ದರೂ smsಗಳ ಮೇಲೆ sms. ಆ ಪ್ರೀತಿ ಮಾತು, ಆಗ ನೋಡುತ್ತಾ ಇದ್ದ ಮೂವೀಸ್, ಆಡ್ತಾ ಇದ್ದ ಹರಟೆ, ಭೇಟಿ ಆಗ್ತಾ ಇದ್ದ ದೇವಸ್ಥಾನ, ಬರೀತಾ ಇದ್ದ ಲೆಟರ್, ಕಳಿಸ್ತಾ ಇದ್ದ ಇ ಮೇಲ್, ಗ್ರೀಟಿಂಗ್ಸ್, ಆಗಾಗ ಕೊಡ್ತಾ ಇದ್ದ ಗಿಫ್ಟ್ಸ್.... ಪ್ರತಿಯೊಂದು ಹೇಗೆ ಮದುವೆ ಆದ ತಕ್ಷಣ ಮಾಯ ಆಗೋಯ್ತು ನೋಡು. ಎಲ್ಲಾ ಗಂಡಸರದ್ದು ಇದೇ ರಾಮಾಯಣ ಅಂತ ಕಾಣ್ಸುತ್ತೆ , ಬರೀ ಹುಡುಗಿರನ್ನ ಪಟಾಯಿಸೋಕೆ ಅಷ್ಟೆಲ್ಲಾ ಮಾಡ್ತಾರೆ ಅಂತ ಅನ್ಸುತ್ತೆ . ಹಿಂಗೆ ಇದ್ದಿದ್ರೆ ಮದುವೆ ಆಗದೇನೆ ಇರ್ಬೋದಿತ್ತು. ಈಗ ಸಾಲದ್ದಕ್ಕೆ ಮಗು ಬೇರೆ ಕೇಡು."

ಹೀಗೆ ತನ್ನ ನಲ್ಮೆಯ ಸಂಗಾತಿಯ ಕೋಪವನ್ನು ಕುರಿತು ಬರೆಯುತ್ತಾ ಹೋಗುವ ಬರಹಗಾರ ಯಾಕೋ ಗೊತ್ತಿಲ್ಲ ಅವನ ಸರಳ ಬರಹದ ಶೈಲಿಯಿಂದ ನಮಗೆ ಹೆಚ್ಚು ಹೆಚ್ಚು ಹತ್ತಿರವಾಗಿಬಿಡುತ್ತಾನೆ. ಈ ಗೆಳೆಯನ ಬರಹಗಳನ್ನು ಓದಿದಾಗ ಹಸಿದು ಬೆಳೆದವನಿಗಷ್ಟೇ ಅನ್ನದ ಮತ್ತು ಪ್ರೀತಿಯ ಮಹತ್ವ ತಿಳಿದಿರುತ್ತದೆ ಎಂದೆನಿಸಿತ್ತದೆ.

ಕುಡಿಯಲೋದ ಕರುವನೆಳೆದು,
ಕಂಬದಲ್ಲಿ ಕಟ್ಟಿಹಾಕಿ,
ತಾಯಮೊಲೆಯ ಹಿಂಡಿ ಕರೆದು,
ಹಾಲು ತಂದು ಮೊಸರ ಮಾಡಿ,
ಮೊಸರ ಗಡಿಗೆ ಕೆಳಗೆ ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ಈ ಗೆಳೆಯನ ಮೇಲಿನ ಕವಿತೆಯ ಸಾಲುಗಳ ಓದಿದಾಗ ಆ ಸಾಲುಗಳಲ್ಲಿ ಒಂದು ಚಂದದ ಲಯ ತುಂಬಿದೆ ಎಂದೆನಿಸುತ್ತೆ ಅಲ್ಲವೇ ಗೆಳೆಯರೇ? ಬರೀ ಕವಿತೆಗಳಲ್ಲಿ ಅಷ್ಟೇ ಅಲ್ಲ ಬದುಕಿನಲ್ಲೂ ಸಹ ಲಯ ತಂದುಕೊಂಡು ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ ಎಂಬ ಪುಟ್ಟ ಹಳ್ಳಿಯಿಂದ ಝೆಕ್ ರಿಪಬ್ಲಿಕ್ ನ ಪ್ರಾಗ್ ಎಂಬ ಸುಂದರ ನಗರ ತಲುಪಿ ಅಲ್ಲಿಂದಲೇ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಈ ಗೆಳೆಯನ ಬದುಕು ನಿಜಕ್ಕೂ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. "ಹಾಯ್ ನಟ್ಟು, ನಮಸ್ಕಾರ, ಎಲೆಮರೆ ಕಾಯಿಗಾ!! ಮೈ ಗಾಡ್, ನಂಗೆ ಬಹಳ ಮುಜುಗರವಾಗ್ತಾ ಇದೆ. ನಾನು ಅಂತ ದೊಡ್ಡ ಬರಹಗಾರ ಏನಲ್ಲ, ನೀವು ಪರಿಚಯ ಮಾಡ್ತಾ ಇರೋ ವ್ಯಕ್ತಿಗಳಿಗೆ ಹೋಲಿಸಿದರೆ ನಂದೇನೂ ಇಲ್ಲ." ಎಂದು ಮುಜುಗರಪಡುತ್ತಲೇ ಇಂತಹುದೊಂದು ಚಂದದ ಪರಿಚಯವನ್ನು ಗೆಳೆಯ ಸಂತೋಷ್ ಕುಮಾರ್ ಎಲ್ ಎಮ್ ಅವರು ನಮ್ಮೊಡನೆ ಹಂಚಿಕೊಂಡಿದ್ದಾರೆ. ಸಹೃದಯಿಗಳೇ, ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯಲ್ಲಿ ಗೆಳೆಯ ಸಂತೋಷನ ಪರಿಚಯ ಇಗೋ ನಿಮಗಾಗಿ....



"ನಮಸ್ಕಾರ ಗೆಳೆಯರೇ, ಹೇಳೋಕೆ ಹೇಳಿಕೊಳ್ಳುವಂಥ ಸಾಧನೆಯೇನೂ ಮಾಡಿಲ್ಲ. ಗೆಳೆಯ ನಟ್ಟುವಿನ ಒತ್ತಾಯದ ಮೇರೆಗೆ ಇದನ್ನು ಬರೆಯುತ್ತಿದ್ದೇನೆ ಅತೀ ಸಾಮಾನ್ಯ ಮಾಹಿತಿ ಬೇಕೆಂದರೆ ಈ ಕೆಳಗಿನವುಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಹುಟ್ಟಿದ್ದು ಅಮ್ಮನೂರು ಹಾಸನ ಜಿಲ್ಲೆಯ ಆರಕಲಗೂಡಿನ ಬಬಗಳಲೆ ಗ್ರಾಮ. ಬೆಳೆದಿದ್ದು ಪೂರ್ತಿ ಈಗಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ. ಓದಿದ್ದು ಸರಕಾರಿ ಶಾಲೆ. ಹತ್ತರ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ವಲಸೆ. ಮತ್ತೆ ತಿರುಗಿ ನೋಡಲಾಗಿಲ್ಲ. ಈಗ ಸದ್ಯಕ್ಕೆ ನನ್ನ ಇಂಜಿನಿಯರಿಂಗ್ ಪದವಿ ನೋಡಿ ಬಹುರಾಷ್ಟ್ರೀಯ ಕಂಪನಿಯೊಂದು ಕೆಲಸ ಕೊಟ್ಟಿದೆ. ಪ್ರೀತಿಸಿದವಳೊಟ್ಟಿಗೆ ಮದುವೆಯಾಗಿ ಸದ್ಯ ಮುದ್ದು ಬಂಗಾರಿಯೊಬ್ಬಳಿಗೆ ನಾನು ಪ್ರೀತಿಯ ತಂದೆಯಾಗಿದ್ದೇನೆ:)

ನನ್ನ ಹವ್ಯಾಸ: ಸಂಗೀತ, ಚಲನಚಿತ್ರ, ಮಿಮಿಕ್ರೀ, ಹಾಡುವುದು, ಪ್ರವಾಸ ಹಾಗೂ ಸಾಹಿತ್ಯ.

ಭೈರಪ್ಪ, ತೇಜಸ್ವಿ, ಕಾರಂತ, ದಿನಕರ ದೇಸಾಯಿ ಮುಂತಾದ ಕವಿಗಳ ಸಾಹಿತ್ಯದಲ್ಲಿ ಕಣ್ಣಾಡಿಸಿದ್ದೇನೆ, ಭಾರತೀಯ ಲೇಖಕ ಚೇತನ್ ಭಗತ್ ರವರ ಆಂಗ್ಲ ಸಾಹಿತ್ಯವನ್ನೂ ಓದಿದ್ದೇನೆ. ರವಿ ಬೆಳಗೆರೆಯವರ ಬರೆಯುವ ಶೈಲಿ ನನಗಿಷ್ಟ. ಸಾಹಿತ್ಯವೆಂಬುದು ಸಾಧ್ಯವಾದಷ್ಟು ಜನಗಳ ಮುಟ್ಟುವಂತಿರಬೇಕು ಎಂಬುದು ನನ್ನ ಅಭಿಪ್ರಾಯ. ಅದಕ್ಕಾಗಿಯೇ ಸರಳ ಭಾಷೆಯ, ಆದರೆ ಪರಿಣಾಮಕಾರಿ ಶಕ್ತಿಯುಳ್ಳ ಸಾಹಿತ್ಯವನ್ನು ಹೆಚ್ಚು ಇಷ್ಟಪಡುತ್ತೇನೆ. ಜೊತೆಗೆ ಬರೆಯುವಾಗಲೂ ಸರಳ ಭಾಷೆಯಲ್ಲೇ ಬರೆಯಲು ಪ್ರಯತ್ನ ಮಾಡುತ್ತೇನೆ. ಕನ್ನಡದ ಮೇಲಿನ ಪ್ರೀತಿ ನನ್ನನ್ನು ಬರೆಯಲು ಶುರು ಮಾಡಿದೆ.

ಮೈಸೂರಿನಲ್ಲಿ ಪ್ರಥಮ ವರ್ಷದ ಪಿಯುಸಿಯಲ್ಲಿ ನಾ ಓದುತ್ತಿದ್ದಾಗ ಹಾಗೆ ಸುಮ್ಮನೆ ಕುಳಿತಿರಲಾರದೇ (ಜೀವನದ ಪ್ರಪ್ರಥಮ) ಒಂದು ಚುಟುಕ ಬರೆದೆ.

ನಾನಂದುಕೊಂಡಂತೆಯೇ,
ಅಂದು,
ನನ್ನ ಪ್ರಿಯೆ,
ಪ್ರೇಮಪತ್ರವ ಕೊಟ್ಟಳು
ನನಗೊಂದು..!!
ಅಗ್ರಹಾರದಲ್ಲಿಯ,
ಆಕೆಯ,
ಪ್ರಿಯಕರನಿಗೆ,
ಕೊಟ್ಟು ಬರಲೆಂದು!!  

ಈ ಚುಟುಕ ನೋಡಿ ನಕ್ಕು, ಅಂದು ನನ್ನ ಗೆಳೆಯರು ಕೊಟ್ಟ ಷಹಬ್ಬಾಷ್ ಗಿರಿ ಎಷ್ಟೊಂದು ಉತ್ಸಾಹ ಕೊಟ್ಟಿತೆಂದರೆ, ಕೇವಲ ಒಂದಷ್ಟು ತಿಂಗಳುಗಳಲ್ಲೇ ಡೈರಿಯೊಂದರಲ್ಲಿ ಸುಮಾರು ಮುನ್ನೂರು ಕವನಗಳನ್ನು ಬರೆದೆ! ಮತ್ತೆ ವಿದ್ಯಾಭ್ಯಾಸದ ಗುಂಗಿನಲ್ಲಿ ನನ್ನ ಈ ಹವ್ಯಾಸವನ್ನು ಪಕ್ಕಕ್ಕಿರಿಸಬೇಕಾಯಿತು.ಈಗ ಮತ್ತೊಮ್ಮೆ ಬರೋಬ್ಬರಿ ಹನ್ನೆರಡು ವರ್ಷಗಳ ನಂತರ, ಅರಿವಿಲ್ಲದೇ ಆರಂಭಿಸಿದ ನನ್ನದೇ ಬ್ಲಾಗಿನ ಮುಖಾಂತರ ಮತ್ತೊಮ್ಮೆ ಸಾಹಿತ್ಯ ಪಯಣ ಶುರುವಾಗಿದೆ. ಫೇಸ್ ಬುಕ್ ನ "ಕನ್ನಡ ಬ್ಲಾಗ್" ಗೆಳೆಯರ ಒಡನಾಟದೊಂದಿಗೆ ಮತ್ತೊಮ್ಮೆ ಕಳೆದು ಹೋದ ಅಮೂಲ್ಯ ವಸ್ತು ಮತ್ತೊಮ್ಮೆ ಸಿಕ್ಕಂತಾಗಿದೆ. ಸಾಹಿತ್ಯಕ್ಕೆ ಹೆಚ್ಚು ಸಮಯ ಮೀಸಲಿಡಲಾಗದಿದ್ದರೂ ಸಮಯ ಸಿಕ್ಕಾಗಲೆಲ್ಲ ಹೊಸ ಪುಸ್ತಕಗಳ ಮೊರೆ ಹೋಗುತ್ತೇನೆ. ಓದುವ ಅಥವಾ ಬರೆಯುವ ಸಾಹಿತ್ಯದಲ್ಲಿ ನನ್ನನ್ನು ಬಹಳ ಕಾಡುವ ವಿಷಯಗಳೆಂದರೆ ಹಸಿವು,ಸಾವು,ಸಂಬಂಧ ಹಾಗೂ ಜೀವನ. ನಾ ಏನೇ ಬರೆದರೂ ಅವುಗಳು ನನ್ನ ಮನಸ್ಸಿನಲ್ಲಿ ಸ್ವಲ್ಪ ಸಮಯ ಬೀಡು ಬಿಡಲು ಅವಕಾಶ ಮಾಡಿ, ಕೊಂಚ ಗಿರಕಿ ಹೊಡೆಯಬಿಟ್ಟು ನಂತರವೇ ಹಾಳೆಗೆ ಗೀಚುತ್ತೇನೆ.

ಹೀಗೆಯೇ ಇನ್ನೊಂದಷ್ಟು ಬರೆಯುವ ಶಕ್ತಿ ತಾಯಿ ಕನ್ನಡಾಂಬೆ ಕೊಡಲಿ.

ಅರಿಯದಿಹ ಅಂತ್ಯದತನಕ
ಹುಟ್ಟಿನಿಂದ ಪರಿಪೂರ್ಣತೆಯೆಡೆಗೆ
ನಡೆಯುತಿಹ ಪಯಣವೇ ಜೀವನ

ಕನ್ನಡ ಬ್ಲಾಗ್ ಅತ್ಯಂತ ಆರೋಗ್ಯಕಾರಿ ಕನ್ನಡ ಸಾಹಿತ್ಯ ತಾಣ. ಇಲ್ಲಿ ಪ್ರತೀ ಕನ್ನಡ ಸಾಹಿತ್ಯಪ್ರಿಯರಿಗೆ ತುಂಬು ಹೃದಯದ ಸ್ವಾಗತ ಸಿಗುತ್ತದೆ. ಪ್ರತೀ ಸದಸ್ಯರು ಮುಕ್ತ ಮನಸ್ಸಿನಿಂದ ತಮ್ಮ ಸಾಹಿತ್ಯವನ್ನು ಪ್ರಕಟಿಸುವುದಾಗಲಿ ಮತ್ತು ಇನ್ನೊಬ್ಬರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದಾಗಲಿ ಮಾಡುತ್ತಾರೆ. ಈಗಾಗಲೇ ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ಕಬ್ಲಾ, ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿಯ ಎಲ್ಲ ಕನ್ನಡಿಗರನ್ನು ಸೆಳೆಯುತ್ತದೆ ಅನ್ನುವುದು ನನ್ನ ಆಶಯ:) --ಸಂತು"

ಎಂದು ಮಾತು ಮುಗಿಸಿದ ಗೆಳೆಯ ಸಂತುವಿನ ಚಂದದ ಮಾತುಕತೆ ನಿಮಗೆ ಇಷ್ಟವಾಗಿದೆ ಎಂದುಕೊಳ್ಳುವೆ ಗೆಳೆಯರೇ.. ಸಂತೋಷ್ ಅವರ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ.. ಪೋಸ್ಟ್ ಗಳು ಕಡಿಮೆ ಇವೆ ಎನಿಸಿದರೂ ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..

http://frommyheartsanthu.blogspot.in/
ಅವರ ಇಂಗ್ಲೀಷ್ ಬ್ಲಾಗ್ ಸಹ ಇದೆ ನೀವಲ್ಲಿ ಅವರಿರುವ ದೇಶದ ಫೋಟೋಗಳನ್ನು ನೋಡಬಹುದು :))
http://santhu-world.blogspot.in/

ಗೆಳೆಯರೇ, ಗೆಳೆಯ ಸಂತುವಿನ ಕವಿತೆಗಳ ಕೆಲವು ಆಯ್ದ ಸಾಲುಗಳು ನಿಮಗಾಗಿ..

ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ. 
ಟೊಳ್ಳು ಪೊಳ್ಳು ಸುಳ್ಳು ನುಡಿದು,
ನನ್ನ ಕಳ್ಳನನ್ನಾಗಿಸುವ,
ನಾಲಗೆಯ ಮೇಲೆ ನನಗನುಮಾನ.
*****
ಇನ್ನೂ ನೆನಪಿದೆ ಅಮ್ಮ,
ನಿನ್ನುದರ ಸೀಳಿ ನಾ ಹೊರಬಂದಾಗ,
ಸಿಕ್ಕ ಮರುಹುಟ್ಟಿನಲೂ,
ನನ್ನ ನೋಡುವ ನಿನ್ನ ಕಾತರ.
*****
ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))

Saturday, November 10, 2012

ಕಳೆದ ಉಂಗುರ!!


(ಚಿತ್ರಕೃಪೆ:Google)
ಕಳೆದ ಉಂಗುರಕ್ಕೀಗ ಮೂರೇ ವಯಸ್ಸು,
ಬಂಗಾರದ ಬೆಲೆಯೀಗ ಬಾನೆತ್ತರಕ್ಕೆ,
ಖಾಲಿ ಕೈಬೆರಳ ನಡುವಿನಿಂದ ಇಣುಕಿ ನಕ್ಕ ನೆನಪು.
ಇನ್ಯಾರದೋ ಕೈಗಳಲ್ಲಿ ಬರುತಲಿದೆ ಹೊಳಪು.

ಹುಣ್ಣಿಮೆಯ ಹಾದಿಯಲಿ ನಾ ಕಾಲಿಟ್ಟ
 ಹೆಜ್ಜೆಗಳಧೂಳನ್ನೆತ್ತಿ ಹಣೆಗಿಟ್ಟು
 ಮುಂಗೈಗೆ ಮುತ್ತಿಟ್ಟ ಸವಿನೆನಪು.
ಇಂದು ಆಗಸದಲ್ಲಿ ಚಂದ್ರ ಗೈರು ಹಾಜರಿ,
ಜತೆಗೆ ಅವಳೂ!!

ಅಂದು ಅವಳಪ್ಪುಗೆಯಲ್ಲಿ
ನನಗಿತ್ತ ಉಂಗುರ, ಇದ್ದಕ್ಕಿದ್ದಂತೆ ಮಾಯ.
ಕಣ್ಣು ಕುರುಡೋ, ಹೃದಯ ಕುರುಡೋ.
ನನಗಿನಿತು ಸುಳಿವಿಲ್ಲ.

ಜೋಕಾಲಿಯಲ್ಲಿ ಕೈಗಳ ಬೆಸೆದು
ಮುಂಬರುವ ಕನಸುಗಳೊಡನೆ ಜೀಕುವಾಗ
ತೇಲುತ್ತಿದ್ದ ಜಗತ್ತು.
ಬರುಬರುತ್ತಲೇಕೋ ತಲೆಕೆಳಗೆ.
ಮೇಲೆಬಿದ್ದ ಆಕಾಶ.
ಮಂಜಾದ ಕಂಗಳಲಿ ಬರೀ ನಕ್ಷತ್ರ.

ಪ್ರೀತಿ ಜನನಕ್ಕಿರಲಿಲ್ಲ ಒಂದೂ ನೆಪ,
ಅಂತ್ಯದ ಬುಡಕ್ಕೀಗ ನೂರು ಕಾರಣಗಳ ಬುತ್ತಿ.
ಕವಿದ ಕತ್ತಲೆಯೆಲ್ಲ ಕಾಲನ ಕೈಚಳಕವಷ್ಟೇ.
ಮತ್ತೆ ಮತ್ತೆ ಹುಡುಕುತ್ತಿರುವೆ, ಕಳೆದ ಉಂಗೂರಕ್ಕೀಗ.
ಕಾಣಲಾರೆನೆಂಬುದಿದ್ದರೂ ಬಲು ಖಚಿತ.
                                                                       --ಸಂತು