Thursday, May 17, 2012

ನೀ ಅತ್ತಾಗ.








ಕಣ್ಣಲ್ಲಿ ನೀರು, ಕಿವಿತಮಟೆಯೊಡೆಯುವಷ್ಟು ಅಳು,
ಅದರೂ ಯಾರೊಬ್ಬರೂ ಅಳಲಿಲ್ಲ.
ಮುಖಗಳಲ್ಲಿ ಮಂದಹಾಸ, ಎದೆ ಬಿರಿಯುವಷ್ಟು ಸಂತೋಷ.
ಅವರಾರನ್ನೂ ಅಲ್ಲಿ ತಡೆವರಾರಿಲ್ಲ.

ಮೈಯ ಕಣಕಣದಲ್ಲಿ ಪುಷ್ಪಗಂಧವು ಸೂಸಿ,
ಚುಂಬಿಸಿದ ತುಟಿಗಳಿಗೂ ಲೇಪನವಾಯ್ತು.
ಕಂಪಿಸಿಹ ಕೈಗಳಿಗು, ಕಂದ ನಗುವುದ ನೋಡಿ,
ಜಗವನೆತ್ತುವ ಶಕುತಿ ಬಂದಾಯ್ತು.

ಮುನಿಸಿಕೊಂಡವರೆಲ್ಲ ಅಲ್ಲಲ್ಲಿ ಮುಗುಳ್ನಕ್ಕು,
ನಡುವಿನಂತರವೆಲ್ಲ ಮಾಯವಾಯ್ತು.
ಕಂದ ನೋಡಿದ ಒಡನೆ, ಕಳೆದ ದಿನಗಳ ಮರೆತು,
ಮನದ ಬೆಂಕಿಗೆ ಪೂರ ನೀರು ಬಿತ್ತು.

ಕೋಟಿ ಕಂಡವರೆಷ್ಟೋ, ಜಗವ ಗೆದ್ದವರೆಷ್ಟೋ,
ಇಂತಿಪ್ಪ ಸಂತಸವ ಕಂಡಿರುವರೇನು?
ಕಂದ ಬಿಡಿಸಿದ ಗೋಡೆಚಿತ್ರವಿಲ್ಲದಿರೆ,
ಮಹಲುಗಳ ಕಟ್ಟಿಯೂ ಔಚಿತ್ಯವೇನು?

ಸಾಕಬೇಕೆಂದವರಾರು, ಬೆಳೆಯಬೇಕೊಟ್ಟಿಗೆ,
ಕ್ಷಣಕ್ಷಣವೂ ಕರಗುತಿರೆ ಕರ್ಪೂರದಂತೆ.
ಸಿರಿತನವೋ ಬಡತನವೋ ,ಹೊನ್ನು ಬಾಧಿಸಲೇಕೆ,
ಕಂದನೇ ಮನೆಯ ಭಾಗ್ಯವಂತೆ!!

ಮುಗಿಲೊಳಗೆ ಮನೆಯೊಳಗೆ ಮಡಿಲೊಳಗೆ ಮಗುವಾಗಿ,
ಬೆಳಗುತಿರು ಈ ಮನವ ಚಂದ್ರನಂತೆ.
ಬಂಧುಬಳಗಕ್ಕೆಲ್ಲ ನೀನೇ ಸೇತುವೆಯಾಗು,
ಸಂತಸವ ಹರಿಸುತಿರು ಕರಗದಂತೆ.
                                                    ರಚನೆ,
-ಸಂತು 


4 comments:

  1. ಸುಲಲಿತ ರಚನೆ. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಸಂತು. ಭಾವ ಮಗು ಮನಸಿನಂತೆ! ಉತ್ತಮ ರಚನೆ. ಮುಂದುವರೆಯಲಿ ಬರಹ ಪಯಣ.

    ReplyDelete
  2. ಧನ್ಯವಾದಗಳು ಪುಷ್ಪರಾಜ್:)

    ReplyDelete
  3. Beautiful words jodane bahala chenagide santhu keep them coming

    ReplyDelete

Please post your comments here.