Sunday, December 30, 2012

ಸಜೆ

                                                                                                                           (ಚಿತ್ರಕೃಪೆ:Google)

ಚಿನ್ನದ ಸರ ಕಳುವಾಯಿತು,
ಪೊಲೀಸರು ಹಿಡಿದರು,
ಸರ ಮರಳಿ ಬಂತು.
ಅಪರಾಧಿಗೆ
ಒಂದು ವರ್ಷದ ಸಜೆ!!

ಅಲ್ಯಾರೋ ಶೀಲ ಕಳೆದುಕೊಂಡರು,
ಪೊಲೀಸರು ಹಿಡಿದರು,
ಕೋಟಿ ಜನ ಮಾತಾಡಿದರು.
ಸಂತ್ರಸ್ತೆಗೆ
ಜೀವನ ಪೂರ್ತಿ ಸಜೆ!!

("ಅವಧಿ"ಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಸಂಚಿಕೆಗೆ ನಾ ಕಳಿಸಿದ ಪುಟ್ಟ ಕವನ:
http://avadhimag.com/?p=72633)

Monday, December 24, 2012

ಚೀಟ …..



ಚೀಟ .....
ಆಕೆಗೆ ಅರ್ಥವಾಗಲಿಲ್ಲ!!
ನನ್ನ ಸಹಪಾಠಿಯೊಬ್ಬ ಮತ್ತೊಮ್ಮೆ "ಚೀಟ" ಅಂತ ಸಂಬೋಧಿಸಿ ಕರೆದಾಗ ಹೊಸದಾಗಿ ಬಂದಿದ್ದ ಆ ಉಪಾಧ್ಯಾಯಿನಿಯೊಬ್ಬರು ಅಕ್ಷರಶಃ ಏನೆಂದು ತಿಳಿಯದೆ ದಂಗಾಗಿ ಹೋಗಿದ್ದರು!!
ಕೊನೆಗೆ ಬೇರೆ ಮಾಸ್ತರರೊಬ್ಬರು ಆತ ಕರೆದಿದ್ದು "ಟೀಚರ್" ಅಂತ ತಿಳಿಹೇಳಿದಾಗಲೇ ಆಕೆಗೆ ಅರ್ಥವಾಗಿದ್ದು!!

"ಟೀಚರ್" ಬರುಬರುತ್ತಾ "ಟೀಚ" ಆಗಿ, ಕೊನೆಗೆ "ಚೀಟ" ಅಂತ ಮಾರ್ಪಾಡಾಗಿತ್ತು!!
ಕೊನೆಗೂ ಆತ "ಟೀಚರ್"ನ್ನು ಕಲಿಯಲೇ ಇಲ್ಲ, ಅವರು ಕಲಿಸಿದ್ದನ್ನು ಕೂಡ!! ಅದು ಬೇರೆ ವಿಷಯ.
ನಾ ಕಲಿತ ನಮ್ಮೂರ ಶಾಲೆಯ ಹುಡುಗರ ಮುಗ್ಧತೆಗೆ ಇದೊಂದು ಉದಾಹರಣೆಯಷ್ಟೇ.

ವರ್ಷಕ್ಕೊಮ್ಮೆ ಉಚಿತ ಪುಸ್ತಕಗಳನ್ನು ಸರ್ಕಾರ ಕೊಡುತ್ತಿತ್ತು. ಅದು ಬರೇ ಒಂದನೇ ಮತ್ತು ಎರಡನೇ ತರಗತಿಗೆ ಮಾತ್ರ.
ಮುಂದಿನ ವಾರ ಹೊಸ ಪುಸ್ತಕ ಬರುತ್ತಿದೆಯೆಂದರೆ ಈಗಿಂದೀಗಲೇ ಮನಸ್ಸು ಬಕ ಪಕ್ಷಿಯಂತೆ ಕಾಯುತ್ತಿರುತ್ತಿತ್ತು!! ಉಚಿತ ಪುಸ್ತಕ ವಿತರಿಸಿದ ದಿನ ಊಟ, ನಿದ್ರೆ ಏನೂ ಬೇಡ. ಅಪ್ಪನಿಂದ ದುಡ್ಡು ತೆಗೆದುಕೊಂಡು ಶೆಟ್ಟರಂಗಡಿಯ ರಟ್ಟು ತಂದು ಜೋಪಾನವಾಗಿ ಆ ಪುಸ್ತಕಕ್ಕೆ ಹೊರಕವಚ ಹಾಕಿ, ಓದಲು ಕುಳಿತುಬಿಡುತ್ತಿದ್ದೆವು. ಇಡೀ ಪುಸ್ತಕದಲ್ಲಿಯ ಚಿತ್ರಗಳನ್ನು ನೋಡಿ, ನಂತರ ಎಲ್ಲ ಪಾಠ ಓದಿ ಮುಗಿಸಿದ ನಂತರವಷ್ಟೇ ಉಳಿದ ಪ್ರಪಂಚ ಅರಿವಿಗೆ ಬರುತ್ತಿದ್ದುದು!!

ನಿಮಗೆ ಗೊತ್ತಾ?
ಐದನೇ ಕ್ಲಾಸಿಂದ ಆರನೇ ಕ್ಲಾಸಿಗೆ ಹೋಗಬೇಕಾದರೆ ನಮ್ಮೂರ ಶಾಲೆಯಲ್ಲಂತೂ ಬಹಳ ಸುಲಭವಿತ್ತು. ಬರೀ ಹಿಂದೆ ತಿರುಗಿ ಕುಳಿತರೆ ಸಾಕು!! ಗಾಬರಿಯಾಗಬೇಡಿ. ಕೇವಲ ಒಂದೇ ಕೊಠಡಿಯಲ್ಲಿ ಐದನೇ ಮತ್ತು ಆರನೇ ತರಗತಿಗಳು ನಡೆಯುತ್ತಿದ್ದವು. ಗುಡುಗು ಮಳೆ ಸುರಿದು ಹೆಂಚುಗಳು ಹಾರಿಹೋಗಿ ಮಳೆ ಬಂದ ದಿನ ಐದನೇ ತರಗತಿಯ ಕೊಠಡಿಯೆಲ್ಲ ಜಲಾವೃತಗೊಂಡಿತ್ತು. ಸುತ್ತ ಹಸಿರು ಬೆಟ್ಟಗಳಿಂದ ಕೂಡಿದ್ದ ನಮ್ಮೂರಿನಲ್ಲಿ ಅದ್ಯಾವುದೋ ಕಾಲದಲ್ಲಿ ಗಾಳಿ ಬೀಸಲು ಶುರು ಮಾಡಿದರೆ ಮುಗಿಯಿತು, ಕೊಠಡಿಗಳ ಹೆಂಚುಗಳು ನಿಲ್ಲುವುದಿಲ್ಲ. ಹೆಂಚುಗಳೇನಾದರೂ ಅಪ್ಪಿತಪ್ಪಿ ಪುಟ್ಟ ಮಕ್ಕಳ ತಲೆಮೇಲೆ ಬಿದ್ದರೇನು ಗತಿ!!  ಆದ್ದರಿಂದ ಒಂದಷ್ಟು ತಿಂಗಳುಗಳ ಮಟ್ಟಿಗೆ ಐದನೇ ತರಗತಿಯ ಮಕ್ಕಳನ್ನು ಆರನೇ ತರಗತಿಯ ಕೊಠಡಿಯೊಳಗೇ ಕೂರಿಸಿ ಪಾಠ ಮಾಡಲು ವ್ಯವಸ್ಥೆ ಮಾಡಲಾಗಿತ್ತು.

ಪೂರ್ವಕ್ಕೊಂದು ಬ್ಲಾಕ್ ಬೋರ್ಡು. ಪಶ್ಚಿಮಕ್ಕೊಂದು ಬ್ಲಾಕ್ ಬೋರ್ಡು!!
ಐದನೇ ತರಗತಿಯ ಮಕ್ಕಳು ಕೊಠಡಿಯ ಅರ್ಧಭಾಗಕ್ಕೆ ಕುಳಿತು ಪಶ್ಚಿಮಕ್ಕೆ ಮುಖ ಹಾಕಿ ಕೂರಬೇಕು. ಹಾಗೆಯೇ ಆರನೆಯ ತರಗತಿಯ ಮಕ್ಕಳು ಕೊಠಡಿಯ ಇನ್ನರ್ಧಭಾಗಕ್ಕೆ ಕುಳಿತು ಪೂರ್ವಕ್ಕೆ ಮುಖ ಹಾಕಿ ಕೂರಬೇಕು.ಕೂರಲಿಕ್ಕೆ ಹಲಗೆಗಳೇ ಆಧಾರ. ಏಕಾಗ್ರತೆ ಅಂದರೆ ಅದು!!  ಬೇರೆ ಮಾಸ್ತರರು ಆರನೇ ಕ್ಲಾಸಿಗೆ ಯಾವ ಪಾಠ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಕಿವಿಯಲ್ಲಿ ಕೇಳಿಸಿಕೊಳ್ಳದೆ, ಬರೀ ನಮ್ಮ ಐದನೇ ಕ್ಲಾಸಿನ ಮಾಸ್ತರರ ದನಿಯನ್ನು ಮಾತ್ರ ಆಲಿಸಬೇಕು. ಏಳನೇ ತರಗತಿಗೆ ಹೋಗುವುದೆಂದರೆ ಬಡ್ತಿ ಪಡೆದಂತೆ! ಏಕೆಂದರೆ ಕುಳಿತುಕೊಳ್ಳುವುದಕ್ಕೆ ಮುಂಚಿನಂತೆ ಹಲಗೆಗಳಿರಲಿಲ್ಲ, ಹೊಸ ಬೆಂಚುಗಳನ್ನು ಹಾಕಲಾಗಿತ್ತು!!

ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಆರು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು.ತರಗತಿಯ ಬಾಗಿಲ ಹಿಂದೆ ಆ ಗುಂಪುಗಳ ಪಟ್ಟಿಯೊಂದನ್ನು ತಯಾರಿಸಿ ಅಂಟಿಸಲಾಗಿತ್ತು. ವಾರದ ಆರು ದಿನಗಳಲ್ಲಿ ದಿನಕ್ಕೊಂದು ಗುಂಪಿನಂತೆ ಪ್ರತಿ ಗುಂಪಿನ ಸದಸ್ಯರು ತರಗತಿಯ ಕೋಣೆಯ ಶುಚಿತ್ವ ಕಾಪಾಡಬೇಕು!! ಇಬ್ಬರು ಸದಸ್ಯರು ಹಲಗೆಗಳನ್ನು ಎತ್ತಿ ನಿಲ್ಲಿಸುವುದು, ನಂತರ ಮುಂಚಿನಂತೆ ಮಲಗಿಸುವುದನ್ನು ಮಾಡಿದರೆ,ಉಳಿದ ಸದಸ್ಯರು ಕಸ ಗುಡಿಸುತ್ತಿದ್ದರು. ಇನ್ನಷ್ಟು ಜನ ಪಕ್ಕದ ಬೋರ್ವೆಲ್ ನಿಂದ ಕೊಡಗಳಲ್ಲಿ ನೀರು ತಂದರೆ, ಉಳಿದವರು ಆ ನೀರನ್ನು ಶಾಲೆಯ ಮುಂದಿನ ಆವರಣದಲ್ಲಿ ನೀರು ಸಿಂಪಡಿಸಿ ಧೂಳು ಏಳದ ಹಾಗೆ ಮಾಡಬೇಕಿತ್ತು. ಇವೆಲ್ಲವೂ ಬೆಳಗಿನ 10 ಘಂಟೆಯ ಬೆಲ್ ಹೊಡೆಯುವುದರೊಳಗೆ ಮುಗಿಯಬೇಕು.

ದಿನಗಳೆದಂತೆ ಮಾಸ್ತರರು ಬರೆಯಲು ಬಳಸುತ್ತಿದ್ದ ಕಪ್ಪು ಹಲಗೆ ತನ್ನ ಬಣ್ಣ ಕಳೆದುಕೊಂಡು ಅವರೇನು ಬರೆಯುತ್ತಾರೋ ಅರ್ಥವಾಗುತ್ತಿರಲಿಲ್ಲ. ತಿಂಗಳಿಗೊಂದು ಬಾರಿ ಶಾಲೆಯ ಪಕ್ಕದ ಪೊದೆಗಳಲ್ಲಿ ಬೆಳೆದ ಯಾವುದೋ ಸೊಪ್ಪು ಕಿತ್ತು  ತಂದು, ಅದಕ್ಕೆ ಕೊಂಚ ಇದ್ದಲು, ನೀರು ಹಾಕಿ ಚೆನ್ನಾಗಿ ಅರೆದು ಅದನ್ನು ಆ ಕಪ್ಪು ಹಲಗೆಗೆ ಚೆನ್ನಾಗಿ ಉಜ್ಜಿ ಕೊಂಚ ಒಣಗಲು ಬಿಟ್ಟರೆ....ವ್ಹಾವ್, ಕಪ್ಪು ಹಲಗೆ ಆಗ ತನ್ನ ನಿಜವಾದ ಹೊಳಪು ತೋರಿಸುತ್ತಿತ್ತು.ಈ ಕೆಲಸದ ಜವಾಬ್ದಾರಿಯನ್ನು ಆ ತರಗತಿಯ ಲೀಡರ್ ವಹಿಸಿಕೊಳ್ಳಬೇಕಿತ್ತು. ಇವತ್ತಿನ ಟೀಮ್ ಬಿಲ್ಡಿಂಗ್, ಕೋ-ಆರ್ಡಿನೇಷನ್ ಎಂದು ನೂರಾರು ಮೈಲಿ ನಮ್ಮನು ಕರೆದುಕೊಂಡು ಹೋಗಿ ಕಲಿಸುವ ಪಾಠಗಳನ್ನು, ಅವತ್ತಿಗೆ ಕೇವಲ ತರಗತಿಗಳನ್ನು ಶುಚಿ ಮಾಡುವ ಚಟುವಟಿಕೆಯಲ್ಲಿಯೇ ನಮ್ಮ ಮಾಸ್ತರುಗಳು ಕಲಿಸಿಬಿಟ್ಟರು ಅನಿಸುತ್ತದೆ.

ಈಗ ಬಹಳಷ್ಟು ವರ್ಷಗಳು ಕಳೆದು ಹೋಗಿವೆ. ಇಂದು ಅದೇ ಶಾಲೆ ವರ್ಣರಂಜಿತವಾಗಿ ಬದಲಾಗಿದೆ. ಸುತ್ತ ಬೆಳೆದಿದ್ದ ಮುಳ್ಳು ಪೊದೆಗಲೆಲ್ಲ ಮಾಯವಾಗಿ ಈಗ ಕಾಂಪೌಂಡು ತಲೆಯೆತ್ತಿದೆ. ಮುಂಚಿದ್ದ ಹಲಗೆಗಳೆಲ್ಲ ಹೋಗಿ ಬೆಂಚುಗಳು ಬಂದಾಗಿವೆ.ಸರಕಾರ ಮಕ್ಕಳನ್ನು ಶಾಲೆಗೆಳೆದು ತರಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮುಂಚಿನಂತೆ ಸೂರ್ಯ ಇಣುಕಲು ಶಾಲಾ ಕೊಠಡಿಯೊಳಗೆ ಒಡೆದ ಹೆಂಚುಗಳಿಲ್ಲ. ಸರಕಾರವೇ ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಲು ಕೆಲಸಗಾರರನ್ನು ನೇಮಿಸಿದೆ. ಆಟಪಾಠಗಳ ಕಡೆಗೆ ಮಕ್ಕಳ ಗಮನವನ್ನು ಸೆಳೆಯಲು ನಾನಾ ಕಸರತ್ತುಗಳು ನಡೆಯುತ್ತಿವೆ. ಬಿಸಿಯೂಟ, ಉಚಿತ ಮೊಟ್ಟೆ, ಹಾಲು, ಅಕ್ಕಿ, ಪುಸ್ತಕ, ಸಮವಸ್ತ್ರ, ಬೈಸಿಕಲ್ಲು ಎಲ್ಲ ಯೋಜನೆಗಳನ್ನೂ ನೋಡಿಯಾಗಿದೆ. ನಮಗೆ ವಿದ್ಯಾರ್ಜನೆ ಮಾಡಿದ ಆ ಶಾಲೆಯನ್ನು ಈಗ ನೋಡಿದರೆ ಯಾವುದೋ ಆ ಬಿಡಿಸಲಾಗದ ನಂಟಿನ ನೆನಪಾಗುತ್ತದೆ. ಯಾವುದೇ ಸ್ಥಿತಿಯಲ್ಲಿದ್ದರೂ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ ಇಂದು ತಾನೇನು ಮಾಡಿಲ್ಲವೆಂಬಂತೆ ಮೌನವಾಗಿ ಕುಳಿತು ತನ್ನ ಸೇವೆಯನ್ನು ಇತರ ಕಂದಮ್ಮಗಳಿಗೂ ಮುಂದುವರೆಸಿರುವ ಆ ಶಾಲೆಯ ಬಗ್ಗೆ ಮನದೊಳಗೇ ಅಪಾರ ಗೌರವ ಮೂಡುತ್ತದೆ.

ಮೊನ್ನೆ ಊರಿಗೆ ಹೋಗಿದ್ದಾಗ ಅದರ ಹೊಸರೂಪವನ್ನು ನೋಡಿದ ನನಗೆ ಫೋಟೋ ಕ್ಲಿಕ್ಕಿಸದೆ ಇರಲು ಮನಸ್ಸಾಗಲಿಲ್ಲ.

ನಿಮ್ಮವನು,
-ಸಂತು

Friday, December 21, 2012

ನನ್ನವ್ವ!!

                                                                                                                                (ಚಿತ್ರಕೃಪೆ :Google)


ಬರೀ ಮಾಯನ್ನರಿಗಷ್ಟೇ
ತನ್ನ ಮನದ ದುಗುಡ
ಹೇಳಿಕೊಳ್ಳುವವಳಲ್ಲ ನನ್ನವ್ವ!!
ಜ್ಯೋತಿಷಿಗಳು ಕಿವಿಯೂದಲಿ,
ಸಾವಿರ ಜನ ಕೋಟಿ ಮಾತಾಡಲಿ!!
ತನ್ನ ಮನೆಗೆ ಬೆಂಕಿಯಿಟ್ಟು
ಮಕ್ಕಳನ್ನೆಲ್ಲ ಕೊಲ್ಲುವಷ್ಟು
ಕಟುಕಳಲ್ಲ ಆಕೆ!!
ಮುನಿಸಿದ್ದರೆ ಆಗಾಗ
ಮೈಯೊದರುತ್ತಾಳೆ!!
ನಿಜಕ್ಕೂ ಕೋಪ ಬಂದರೆ
ಕೋಳಿ ಕೇಳಿ ಕಾರ ಅರೆಯುವುದಿಲ್ಲ,
ನನ್ನ ಹಡೆದವ್ವ!!

                                                                 -ಸಂತು

Monday, December 17, 2012

ಕಣ್ಣೀರು (ಚುಟುಕಗಳು-2)




ಮಗಳ ಹೆರಿಗೆಯಲ್ಲಿ,
ಸುಮ್ಮನಿದ್ದ
ಅಪ್ಪ,
ಪುಟ್ಟ ಮೊಮ್ಮಗಳ
ಕಿವಿ
ಚುಚ್ಚುವಾಗ
ಹಾಕಿದ
ಕಣ್ಣೀರು!!
----------------------------------

ಅದೇಕೋ,
ಮೌನದಲ್ಲಿಯ
ನಿಶ್ಚಲ
ಜಡ ವಸ್ತುಗಳೂ,
ಅಂತರಂಗದಲ್ಲಿ
ಹುಚ್ಚೆದ್ದು
ಕುಣಿಯುತ್ತವೆ!!
----------------------------------

ಸಾವ ಮನೆಗೆ,
ಹೊರಟ ನೆಂಟನೊಬ್ಬನ  ಹೆಂಡತಿ
ತಡೆದು ಹೇಳಿದಳು,
ಉಂಡು ಹೋಗಿ,
ಬರುವುದು
ಹೊತ್ತಾಗಬಹುದು!!
----------------------------------

                                                                                  --ಸಂತು

Saturday, December 15, 2012

ಚಿಗುರ ಚಿವುಟಬೇಕೆ??!!




                                                                                                           
                                                                                                                                                               (ಚಿತ್ರಕೃಪೆ: Google)
2001ನೇ ಇಸವಿ. ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೆನಾದ್ದರಿಂದ ಎಲ್ಲವೂ ಹೊಸತು.
ಹೊಸ ಸ್ಥಳ, ಹೊಸ ಕೋರ್ಸು, ಹೊಸ ಮನೆ, ಹೊಸ ರುಚಿ, ಹೊಸ ಜನಗಳ ಒಡನಾಟ, ಒಟ್ಟಿನಲ್ಲಿ ಹೊಸ ಜೀವನ ಶುರುವಾಗಿತ್ತು.

ಅದೇಕೋ ಕೊಂಚ ಸಂಕೋಚ ಮತ್ತು ಆತ್ಮ ವಿಶ್ವಾಸದ ಕೊರತೆ.
ಎಲ್ಲಿ ನನ್ನನ್ನು ಹಳ್ಳಿಯವನು ಅಥವಾ ಮಾತನಾಡೋಕೆ ಇಂಗ್ಲಿಷ್ ಬರುವುದಿಲ್ಲ ಅಂತ ಹೀಯಾಳಿಸಿಬಿಡುತ್ತಾರೇನೋ ಅನ್ನುವ ಆತಂಕ. ಕಾಲೇಜಿಗೆ ಸೇರಿದ ಬಹಳಷ್ಟು ತಿಂಗಳುಗಳ ಕಾಲ ನಮ್ಮ ಗುಂಪಿನ ಹತ್ತಿರದ ಹುಡುಗರೊಡನೆ ಮಾತನಾಡುತ್ತಿದ್ದೆ ಹೊರತು ಬೇರಾರ ಜೊತೆಯಲ್ಲೂ ಮಾತನಾಡುತ್ತಿರಲಿಲ್ಲ. ಇಂಗ್ಲಿಷ್ ಭಾಷೆ ಹಳ್ಳಿಯ ಹುಡುಗರನ್ನು ಅದೆಷ್ಟು ಪೇಚಾಟಕ್ಕೆ ಸಿಕ್ಕಿಸಿಬಿಡುತ್ತದೆ ಅನ್ನುವುದು ಆ ಹುಡುಗರಿಗೆ ಮಾತ್ರ ಗೊತ್ತು.
ಅದರ ಬಗ್ಗೆ ಬೇರೊಂದು ಸಲ ಮಾತನಾಡೋಣ.

ಚಿಕ್ಕಂದಿನಿಂದಲೂ ನಾನು ಆಟಗಳಲ್ಲಿ ಕೊಂಚ ಕಮ್ಮಿ ಆಸಕ್ತಿ ತೋರಿದವನು.
ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ (ಅಂದರೆ ಎಲ್ಲಿ ದೈಹಿಕ ಶ್ರಮ ಇಲ್ಲವೋ ಅಂತಹ ಚಟುವಟಿಕೆಗಳಲ್ಲಿ !! )ಬಹಳ ಹುರುಪಿನಿಂದ ಪಾಲ್ಗೊಳ್ಳುತ್ತಿದ್ದೆ. ನನಗೆ ಬಹಳ ಸಂತೋಷ ಕೊಡುವ ಕಾರ್ಯಕ್ರಮಗಳೆಂದರೆ- ಹಾಡುವುದು, ಅಭಿನಯ ಮತ್ತು ಮಿಮಿಕ್ರಿ!! ಬಹಳಷ್ಟು ಬಾರಿ ವಾರ್ಷಿಕೋತ್ಸವಗಳಲ್ಲಿ ಭಾಗವಹಿಸಿ ಇವುಗಳನ್ನೆಲ್ಲ ಮಾಡಿದ್ದೆನಾದರೂ ಹತ್ತನೇ ತರಗತಿಯ ನಂತರದ ನಗರ ಜೀವನ ಇವಕ್ಕೆಲ್ಲ ಕೊಂಚ ಬ್ರೇಕ್ ಹಾಕಿತ್ತು.

ಬಹಳ ಅಂತರ್ಮುಖಿಯಾಗಿದ್ದ ನಾನು ಇಂಜಿನಿಯರಿಂಗ್ ನ 2ನೇ ವರ್ಷದ ನಂತರ ಕೊಂಚ ಹೊಸ ವಾತಾವರಣಕ್ಕೆ ಹೊಂದಿಕೊಳ್ಳತೊಡಗಿದೆ. ಎಲ್ಲರೂ ಗೆಳೆಯರಾಗತೊಡಗಿದರು. ನಮಗೆ ಪಾಠ ಮಾಡುತ್ತಿದ್ದ ಕನಕವಳ್ಳಿ ಎನ್ನುವ ಟೀಚರ್ ಒಬ್ಬರು ತಮ್ಮ ತರಗತಿಗಳಲ್ಲಿ, ಬಹಳಷ್ಟು ಸಮಯ ಪಾಠಕ್ಕಿಂತ ಟೈಮ್ ಪಾಸ್ ಮಾಡುತ್ತಿದ್ದುದೇ ಹೆಚ್ಚು!! :) ಯಾರಿಂದಲೋ ನಾನು ಮಿಮಿಕ್ರಿ ಮಾಡುತ್ತೇನೆ ಅನ್ನುವ ವಿಷಯ ನಮ್ಮ ಕ್ಲಾಸಿನಲ್ಲಿ ಗೊತ್ತಾಗಿ ಹೋಯಿತು. ದಿನವೂ ನಾನು ಮಿಮಿಕ್ರಿ ಮಾಡಬೇಕೆಂದು ಒತ್ತಡ ಶುರುವಾಯಿತು.

ಕನ್ನಡವೇ ಮಾತನಾಡದಿದ್ದ ಹುಡುಗಿಯರು ಅದೆಲ್ಲಿ ನನ್ನ ಮಿಮಿಕ್ರಿ ಇಷ್ಟಪಡುತ್ತಾರೆ ಅಂತ ಸುಮ್ಮನಿದ್ದೆ.
ದಿನದಿನವೂ ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ.ಇನ್ನೇನು ಇಂಟರ್ನಲ್ ಪರೀಕ್ಷೆಗಳು ಶುರುವಾಗಬೇಕೆಂದಿದ್ದಾಗ ಅದೇ ಟೀಚರ್ ತಾವು 3 ತಿಂಗಳು ರಜದಲ್ಲಿ ಹೋಗುತ್ತಿರುವುದಾಗಿ ಹೇಳಿದರು. ಕೊನೆಯ ದಿನ ರಜಕ್ಕೆ ಹೋಗುವ ಮುನ್ನ ನಾನು ಮಿಮಿಕ್ರಿ ಮಾಡಲೇಬೇಕೆಂದು ಪೂರ್ತಿ ಒತ್ತಡ ಹಾಕಿಬಿಟ್ಟರು.ಸರಿ, ಮಾಡದೆ ಬೇರೆ ವಿಧಿಯಿಲ್ಲ.

ಎದ್ದು ನಿಂತು ಧೈರ್ಯವಹಿಸಿ ಕೊನೆಗೂ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರರ ಎರಡು ಡೈಲಾಗ್ ಗಳನ್ನು ಸಂದರ್ಭ ಸಹಿತ ಅನುಕರಣೆ ಮಾಡಿದೆ.ಅದ್ಯಾವ ಪರಿ ಕ್ಲಾಸಿನಲ್ಲಿ ಕೂತಿದ್ದವರೆಲ್ಲ ಚಪ್ಪಾಳೆ ಹೊಡೆದು ಎಂಜಾಯ್ ಮಾಡಿದರೆಂದರೆ ನಾನು ಅಂತಹದ್ದೊಂದು ಪ್ರತಿಕ್ರಿಯೆಯನ್ನು ಎದುರು ನೋಡಿರಲಿಲ್ಲ.ನಂತರ ಬಹಳಷ್ಟು ಜನ ನನ್ನ ಬಳಿಗೆ ಬಂದು ಅಭಿನಂದಿಸಿದರು.

ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ.ಇಂಜಿನಿಯರಿಂಗ್ ನ ಕೊನೆಯ ವರ್ಷ. ಕಾಲೇಜಿನ ವಾರ್ಷಿಕೋತ್ಸವದ ಸಿದ್ಧತೆ ಭರದಿಂದ ಸಾಗಿತ್ತು.ನಮ್ಮ ಕ್ಲಾಸಿನವರ ಒತ್ತಾಯದ ಮೇರೆಗೆ ನನ್ನ ಹೆಸರನ್ನು ಮಿಮಿಕ್ರಿಗೆ ಕೊಡಲಾಯಿತು. ಆಡಿಷನ್ ಶುರುವಾಯಿತು. ಅದೇಕೋ ನನ್ನ ಮನಸ್ಸಿನಲ್ಲಿ ಏನನ್ನಿಸಿತೋ ನಮ್ಮ ಆಡಿಷನ್ ಮಾಡುತ್ತಿದ್ದ ನಮ್ಮ ಕಾಲೇಜಿನ ಆಡಳಿತ ಮಂಡಳಿಯಲ್ಲೊಬ್ಬರಿಗೆ ವಿನಂತಿಸಿಕೊಂಡೆ.ಮಿಮಿಕ್ರಿಯನ್ನು ಎಲ್ಲರೆದುರು ಈಗ ಆಡಿಷನ್ ಕೊಟ್ಟರೆ ನಂತರ ಅದನ್ನು ನೋಡಲು ಅಂತಹ ಉತ್ಸಾಹವಿರುವುದಿಲ್ಲ. ಆದ್ದರಿಂದ ಕ್ಲಾಸಿನ ಒಳಗೆ ಆಡಿಷನ್ ಕೊಡುವೆ ಎಂದು ಹೇಳಿ ಕ್ಲಾಸಿನ ಒಳಗೆ ಕರೆತಂದೆ. ಬರೋಬ್ಬರಿ 10 ನಿಮಿಷ ನಾನು ಬಹಳ ಇಷ್ಟಪಟ್ಟ ನಟರುಗಳೆಲ್ಲರ ಮಿಮಿಕ್ರಿಗಳನ್ನೆಲ್ಲ ಮಾಡಿ ತೋರಿಸಿದೆ.

ಅವುಗಳನ್ನೆಲ್ಲ ನೋಡಿದ ಆ ಮನುಷ್ಯ ಹೇಳಿದ ಮಾತೆಂದರೆ ..
ಯಾವ ಸಂಭಾಷಣೆಯೂ ಸಭ್ಯವಾಗಿಲ್ಲ, ಮಿಮಿಕ್ರಿ ಬಹಳ ಚೆನ್ನಾಗಿದೆಯಾದರೂ ಯಾವುದರಲ್ಲೂ ಪೌರಾಣಿಕ ಸಂಭಾಷಣೆಗಳಿಲ್ಲ.
ನಂತರ ನನಗೆ ಅರ್ಥವಾಗಿದ್ದು ಆ ಪುಣ್ಯಾತ್ಮನಿಗೆ ಬೇಕಾಗಿದ್ದುದು ಬರೀ ಪೌರಾಣಿಕವಷ್ಟೇ.
ನಂಗೆ ಉದಾಹರಣೆ ಕೊಟ್ಟದ್ದು ತೆಲುಗಿನ ಬಹಳ ಹಳೆ ನಟರ ಸಂಭಾಷಣೆಗಳನ್ನು.
"ಇನ್ನೂ ಮೂರ್ನಾಲ್ಕು ದಿನಗಳ ಸಮಯವಿದೆ, ಯಾವುದಾದರೂ ಪೌರಾಣಿಕ ಚಿತ್ರದ ಸಂಭಾಷಣೆ ಕಲಿತು ಬಾ" ಅಂದ.
ಅಹಂ ಅನ್ನುವುದು ಕೆಲವು ಬಾರಿ ಅದೆಷ್ಟು ನಮ್ಮನ್ನು ನಿಷ್ಠುರ ಮಾಡುತ್ತದೆಂದರೆ, "ನಂಗೆ ಬರೋದೆ ಇಷ್ಟು, ಬೇಕಿದ್ದರೆ ಮಾಡುತ್ತೇನೆ, ಇಲ್ಲ ಅಂದ್ರೆ ಬೇಡ ಬಿಡಿ" ಅಂತ ಖಡಾಖಂಡಿತವಾಗಿ ಹೇಳಿ ಹೊರ ಬಂದುಬಿಟ್ಟೆ.

ಇಂಜಿನಿಯರಿಂಗ್ ಮುಗಿದು ಜೀವನ ಕೆಲಸಕ್ಕೆ ನನ್ನನ್ನು ಶುರುಹಚ್ಚಿತು. ನಾನು ಕೆಲಸ ಮಾಡಿದ ಮೊದಲ ಕಂಪನಿಯಲ್ಲಿ ಮತ್ತು ಎರಡನೆಯ ಕಂಪನಿಯಲ್ಲಿ ಮತ್ತದೇ ಮಿಮಿಕ್ರಿಗಳ ಪ್ರದರ್ಶನ. ತರಬೇತಿಯ ಸಮಯದಲ್ಲಿ ಕೊಟ್ಟ ಕಾರ್ಯಕ್ರಮಕ್ಕೆ ಎಲ್ಲರಿಂದಲೂ ಬಹಳಷ್ಟು ಅಭಿನಂದನೆ ಸಿಕ್ಕಿತು. ಕನ್ನಡ ಬರದಿದ್ದ ಬೇರೆ ರಾಜ್ಯದವರೆಲ್ಲ ಅದೆಷ್ಟು ಖುಷಿಪಟ್ಟರೆಂದರೆ, "ನಿನ್ನ ಮಿಮಿಕ್ರಿ ನೋಡಿದ ಮೇಲೆ ನಿಮ್ಮ ಉಪೇಂದ್ರನ ಚಿತ್ರ ನೋಡಬೇಕು ಅಂತ ಆಸೆಯಾಗಿದೆ" ಅಂತ ಹೇಳಿ ಹೋದರು!!
ಕೆಲವರಂತೂ ನನ್ನನ್ನು ಕೆಲ ದಿನಗಳ ಕಾಲ ಉಪ್ಪಿ ಅಂತಲೇ ಕರೆಯುತ್ತಿದ್ದರು.

ಅದಿರಲಿ. ನನ್ನ ಮಿಮಿಕ್ರಿ ಕತೆಯ ಬಗ್ಗೆ ಅಲ್ಲ ನಾನು ನಿಮಗೆ ಹೇಳಹೊರಟಿದ್ದು!!
ನನ್ನ ಕ್ಲಾಸಿನವರಿಗೆ ಕಾಣದ, ನನ್ನ ಕಂಪನಿಯವರು ನೋಡದ ಅ ಮಿಮಿಕ್ರಿ ಸಂಭಾಷಣೆಯಲ್ಲಿನ ಅಸಭ್ಯತೆ ಆತನಿಗೆ ಕಂಡಿದ್ದಾದರೂ ಎಲ್ಲಿ?! ಅದೇಕೋ ಕೆಲವರು ಕೆಲಸಮಯ ಸುಮ್ಮನೆ ಏನಾದರೊಂದು ಹೇಳಿ ಇನ್ನೊಬ್ಬರ ನೆನಪಿನ ಪುಟಗಳಲ್ಲಿ ಉಳಿದುಬಿಡುತ್ತಾರೆ. ಅವರಿಗೆ ತಮ್ಮ ಆದರ್ಶವೇ ಇತರರಿಗೂ ಮಾದರಿಯಾಗಬೇಕೆಂಬ ಹುಚ್ಚು ತಲೆಯಲ್ಲಿ ಮನೆಮಾಡಿರುತ್ತದೆ. ಅದನ್ನು ಇಡೀ ಪ್ರಪಂಚವೇ ಪರಿಪಾಲಿಸಬೇಕು ಅನ್ನುವ ಭ್ರಮೆಯಲ್ಲಿ ಓಡಾಡುತ್ತಿರುತ್ತಾರೆ.
ಅಂತಹವರು ಹೊಸ ಪ್ರಪಂಚಕ್ಕೆ ಎಂದಿಗೂ ಹೊಂದಿಕೊಳ್ಳುವುದಿಲ್ಲ, ನನ್ನ ಮಿಮಿಕ್ರಿಯನ್ನು ಅಸಭ್ಯವೆಂದ ಆ ಪುಣ್ಯಾತ್ಮನ ಹಾಗೆ.
ಆತ ಭಾಷಣಕ್ಕೆ ಬಂದರೆ ಎಂತಹ ರಸವತ್ತಾದ ವಿಷಯವನ್ನು ಘಂಟೆಗಳ ಕಾಲ ಮಾತನಾಡಿ ಬೋರು ಹೊಡೆಸುತ್ತಿದ್ದನೆಂದರೆ,ಆತ ಭಾಷಣಕ್ಕೆ ನಿಂತರೆ ಸಾಕು ಎಲ್ಲರೂ ಅವನಿಗೆ ಹಿಡಿಶಾಪ ಹಾಕುತ್ತಿದ್ದರು. ಪಾಪ ಅವನಿಗೆ ಅದು ಗೊತ್ತಿರಲಿಲ್ಲ !!

ಅದಾಗಿ ವರ್ಷಗಳೇ ಕಳೆದಿವೆ.
ಈಗಲೂ ಯಾರಾದರೂ ಹೊಸದಾಗಿ ಏನಾದರೊಂದು ಪ್ರಯತ್ನ ಮಾಡಿದರೆ ನಾನು ಯಾವಾಗಲೂ ಅವರನ್ನು ಹುರಿದುಂಬಿಸುತ್ತೇನೆ. ಒಂದು ಕವನ ಬರೆದು ತೋರಿಸಿದರೆ ಅವರ ಸಾಹಿತ್ಯ ಪ್ರೇಮಕ್ಕೆ ಶಹಬ್ಬಾಷ್ ಹೇಳಬೇಕೇ ಹೊರತು, ಅದರಲ್ಲಿಯ ಒಂದು ದೋಷ ಹುಡುಕಿ "ಮೊದಲು ಕನ್ನಡ ಕಲಿ" ಅಂತ ಹೇಳುವುದಲ್ಲ.
ಯಾರಿಗೆ ಗೊತ್ತು, ನಾಳೆ ಆತನೇ ಆ ಕ್ಷೇತ್ರದಲ್ಲಿ ಬಹಳಷ್ಟು ಬೆಳೆದು ಹೆಮ್ಮರವಾಗಿ ನಿಲ್ಲಬಹುದು.

ಆದರೆ ಬೆಳೆಯುವ ಮುನ್ನವೇ ಚಿಗುರನ್ನು ಚಿವುಟುವ ಕಾರ್ಯಕ್ಕೆ ನಾವು ಮುಂದಾಗಬಾರದು ಅಲ್ಲವೇ? ಏನಂತೀರಿ?

                                                                                                                          ನಿಮ್ಮವನು,
                                                                                                                          -ಸಂತು



Saturday, December 8, 2012

ಚಳಿಯಿದೆ!!



(ಚಿತ್ರಕೃಪೆ:Google)
 
[ czech republic ನ ರೂಮೊಂದರಲ್ಲಿ -10° temperature ನಲ್ಲಿ ಚಳಿ ತಡೆಯದಾದಾಗ ಉಕ್ಕಿ ಬಂದ ಸಾಲುಗಳು:-) ]

ಬಹಳ ಚಳಿಯಿದೆ,
ಪಕ್ಕದಲ್ಲಿ ಅವಳಿಲ್ಲ!!

ತುಂಬಿದ ಬಾಟಲಿಯಿದೆ,
ಹಂಚಿಕೊಳ್ಳಲು ಗ್ಲಾಸಿಲ್ಲ!!

ನಮ್ಮೂರ ಬಜ್ಜಿಯ ನೆನಪಿದೆ,
ಇಲ್ಲಿ ಮಾಡಲು ಮಿರ್ಚಿಯಿಲ್ಲ!!

ಸಾವಿರ ಮಾತು ಕಾಯುತಲಿವೆ,
ಯಾವ ಕಿವಿಗಳಿಗೂ ಬಿಡುವಿಲ್ಲ!!

ಮನಸ್ಸೇಕೋ ಕುಣಿಯುತ್ತಿದೆ,
ಜೊತೆ ಹೆಜ್ಜೆಹಾಕಲು ಪಾದ ತಯಾರಿಲ್ಲ.

ಅಶ್ವತ್ಥರ ಗಾನವಿದೆ,
ನಿಲ್ಲಿಸಲು ಮನಸ್ಸಾಗುತ್ತಿಲ್ಲ!!

ಎಲ್ಲಕ್ಕೂ ಮುನ್ನ, ನನ್ನ-ಅವಳ ಕತೆಯಿದೆ,
ಎಷ್ಟು ಸಲ ಓದಿದರೂ ಬೇಸರವಿಲ್ಲ!!

                                                    -ಸಂತು

Tuesday, December 4, 2012

ಹೊರಗಿನವರದ್ದು ಮಾತ್ರ ಉಪಕಾರವೇ?


ಊಟ ಮಾಡುತ್ತಿರುವಾಗ ಏನಾದರೂ ಕೆಮ್ಮಿದರೆ,
ಏನಾದರೂ ನಮ್ಮ ಗೆಳೆಯರೋ ಅಥವಾ ಸಹೋದ್ಯೋಗಿಗಳೋ ಒಂದು ಲೋಟ ನೀರು ತಂದು ಕೊಟ್ಟರೆ ಸಾಕು.
 "ಥ್ಯಾಂಕ್ಸ್ ರೀ, ತುಂಬಾ ಥ್ಯಾಂಕ್ಸ್" ಅಂತ ಹಲವು ಬಾರಿ ಹೇಳಿರುತ್ತೇವೆ.
ಅದೇ ನಮ್ಮ ಮನೆಯಲ್ಲಿ ಅಂತಹ ಸಾವಿರಾರು ಉಪಕಾರಗಳು ನಡೆದಿರುತ್ತವೆ.

ಉದಾಹರಣೆಗೆ, ಕಛೇರಿ ಮುಗಿಸಿ ಮನೆಗೆ ಬರುವವರೆಗೆ ಹಸಿವಿದ್ದರೂ ಊಟಕ್ಕಾಗಿ ಕಾಯುವ ಮಡದಿ.
ಮಗನ ಫೀಸು ಕಟ್ಟಬೇಕೆಂದು ಹಬ್ಬಗಳಿಗೂ ಯಾವುದೇ ಹೊಸಬಟ್ಟೆ ಕೊಳ್ಳದ ಅಪ್ಪ.
ಮಗ ಊಟ ಮಾಡಲಿ ಅಂತ ಮೊಸರು, ತುಪ್ಪ ತಿನ್ನದೇ ಎತ್ತಿಡುವ ಅಮ್ಮ!!
ಕೊಂಚ ತಲೆನೋವಿದೆ ಎಂದ ಮಾತ್ರಕ್ಕೆ ಅದೆಷ್ಟೇ ದೂರವಿದ್ದರೂ ನಡೆದು ಹೋಗಿ ಮಾತ್ರೆ ತರುವ ತಮ್ಮ.
ಊರಿಗೆ ಹೊರಡುತ್ತಾರೆಂದು ಬೆಳಗಾಗುವ ಮೊದಲೇ ಕಾರು ತೊಳೆದು ಅಚ್ಚರಿ ತೋರುವ ಬಾವ!!
ವಿದೇಶಕ್ಕೆ ಹೋಗುತ್ತಾರೆಂದು ನಾವು ಕೇಳದಿದ್ದರೂ ಚಿತ್ರಾನ್ನದ ಗೊಜ್ಜು ಮಾಡಿ ಕೊಡುವ ಅತ್ತೆ.
ಹೀಗೆ ಹೇಳುತ್ತಾ ಹೋದರೆ ನಮ್ಮ ಮನೆಯವರ ಬಗ್ಗೆ ಪುಟಗಟ್ಟಲೆ ಬರೆದುಬಿಡಬಹುದು.

ಹೀಗೆ ಎಷ್ಟೋ ಸಲ ಇಂತಹ ಅನೇಕ ತ್ಯಾಗಗಳು, ಉಪಕಾರಗಳು ನಮ್ಮ ಕಣ್ಣ ಮುಂದೆ ನಡೆದಿದ್ದರೂ ಕುರುಡರಂತೆ ಸುಮ್ಮನಿದ್ದುಬಿಡುತ್ತೇವೆ.
ಮಧ್ಯಾಹ್ನದ ಊಟದ ಡಬ್ಬಿ ಮರೆತಿದ್ದಾನೆಂದು, ಕಾಲೇಜಿನವರೆಗೆ ಬಂದು ಕೆಲಸದ ಮದ್ಯದಲ್ಲೂ ಅಪ್ಪ ಡಬ್ಬಿ ಕೊಟ್ಟು ಹೋದರೆ,
ಯಾಕೆ ಬಂದೆ ಅಂತ ಪ್ರಶ್ನೆ ಹಾಕುತ್ತೇವೆಯೇ ಹೊರತು ಅವರ ಶ್ರಮಕ್ಕೆ ಮನಸ್ಸಿನಲ್ಲಿ ಒಂದು ಕೃತಜ್ಞತಾ ಭಾವ ಮೂಡಿರುವುದಿಲ್ಲ.

ನಾನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ಒಬ್ಬನೇ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ.
ಒಂದು ದಿನ ಅದೆಂತಹ ಜ್ವರ ಬಂದಿತ್ತೆಂದರೆ 24 ಘಂಟೆಗಳ ಕಾಲ ಊಟ,ತಿಂಡಿ ಇಲ್ಲದೇ ಪ್ರಜ್ಞೆಯೇ ಇಲ್ಲದವನಂತೆ ಬಿದ್ದುಕೊಂಡಿದ್ದೆ.
ಅಂದೇನೋ ಜಮೀನಿನ ಕೆಲಸದಲ್ಲಿ ಮಗ್ನರಾಗಿದ್ದ ಅಪ್ಪ ಅಮ್ಮ ಫೋನು ಮಾಡಿರಲಿಲ್ಲ.
ಅವತ್ತು ನನಗರ್ಥವಾಗಿದ್ದು, ಬಂಧು-ಬಳಗವೆನ್ನುವವರು ನಮ್ಮ ಯೋಗಕ್ಷೇಮ ವಿಚಾರಿಸಿಕೊಳ್ಳಲು ಇಲ್ಲದಿದ್ದರೆ ನಮ್ಮ ಪಾಡು ಹೇಗಿರುತ್ತದೆಂದು!!

ಏನಾಯಿತು ಬಿಡು, ಏನು ಸುಮ್ಮನೆ ಮಾಡುತ್ತಾರೆಯೇ? ಮನೆಯವರಲ್ಲವೇ? ಅಂತ ನಮ್ಮ ಮನಸ್ಸಿಗೆ ಯಾವತ್ತಾದರೂ ಅನ್ನಿಸುತ್ತಾ?
ಹಾಗಿದ್ದರೆ ಬಹುಶಃ, ಆ ರೀತಿಯ ಪ್ರೀತಿ ತೋರಿಸುವವರನ್ನು,ನಮ್ಮ ಖುಷಿಗೋಸ್ಕರ ಕಷ್ಟಪದುವವರನ್ನು ನಾವು ಕಳೆದುಕೊಂಡಾಗಲೇ ಅದರ ಬೆಲೆ ಗೊತ್ತಾಗುವುದು.
ಕೊಂಚ ನಮ್ಮ ಬಗ್ಗೆ ನಾವೇ ಈ ರೀತಿಯ ಪ್ರಶ್ನೆ ಕೇಳಿಕೊಂಡಾಗ ಅದರ ಅರಿವು ನಮಗಾಗುತ್ತದೆ.

ಟೈಮಿಗೆ ಸರಿಯಾಗಿ ರುಚಿರುಚಿಯಾಗಿ ಊಟ ಮಾಡಿಕೊಡುವ ಹೆಂಡತಿಯ ಮೇಲೆ ಖಾರ ಇಲ್ಲ,ಉಪ್ಪಿಲ್ಲ, ಹುಳಿ ಜಾಸ್ತಿಯಾಯ್ತು ಅಂತ ಸುಳ್ಳೇ ದರ್ಪ ತೋರುತ್ತೇವೆ!!
ಬೇರೆ ಯಾವುದೋ ಊರಿಗೆ ಒಬ್ಬಂಟಿಯಾಗಿ ಹೋಗಿ, ಅಲ್ಲಿಯ ಊಟಕ್ಕೆ ನಾಲಿಗೆ ಹೊಂದಿಕೊಳ್ಳದೆ,
ಎಂಟ್ಹತ್ತು ಬಾರಿ ಪುಳಿಯೋಗರೆ ತಿನ್ನುವಷ್ಟರ ಹೊತ್ತಿಗೆ ಹೆಂಡತಿಯ ಮೇಲೆ ತೋರುತ್ತಿದ್ದ ದರ್ಪ ಮುಕ್ಕಾಲು ಇಳಿದು ಹೋಗಿರುತ್ತದೆ:)

ಸರಿನಪ್ಪ, ಈಗೇನು ಮಾಡೋಣ? ಏನೂ ಬೇಡ.
ಅವರು ನಿಮಗಾಗಿ ಮಾಡುತ್ತಿರುವ ಈ ರೀತಿಯ ಸಹಾಯಗಳನ್ನು ಮನಸ್ಸಿನಲ್ಲೇ ಯೋಚಿಸಿ.
ಯಾವತ್ತಾದರೊಂದು ದಿನ ಅದರ ಬಗ್ಗೆ ಮಾತನಾಡಿ, ಅವರ ಸೇವೆಗಳಿಗೆ, ಪ್ರೀತಿಗೆ ಒಂದು ಥ್ಯಾಂಕ್ಸ್ ಹೇಳಿ.
ಯಾವತ್ತೋ ಒಂದು ದಿನ ಅಚಾನಕ್ಕಾಗಿ ಅವರುಗಳಿಗೆ ಚಿಕ್ಕದೊಂದು surprise ಕೊಡಿ.
ಅವರು ನಿರೀಕ್ಷಿಸಿರದ ಹಬ್ಬದಲ್ಲಿ ಅವರಿಗಾಗಿ ಒಂದು ಚಿಕ್ಕ ಉಡುಗೊರೆ ತಂದುಕೊಡಿ.
ಉಡುಗೊರೆ ದುಬಾರಿಯದ್ದೇ ಆಗಿರಬೇಕಿಲ್ಲ, ಅದರಲ್ಲಿ ನಿಮ್ಮ ದುಬಾರಿ ಪ್ರೀತಿಯಿರಬೇಕು ಅಷ್ಟೇ:)

ಇದು ಕೇವಲ ಉಡುಗೊರೆ ಪಡೆದವರಿಗಷ್ಟೇ ಸಂತೋಷ ಕೊಡುವುದಿಲ್ಲ.
ಉಡುಗೊರೆ ಕೊಟ್ಟ ನಿಮ್ಮ ಮನಸ್ಸೂ ನಿಮಗೊಂದು ಥ್ಯಾಂಕ್ಸ್ ಹೇಳುತ್ತದೆ, ಇವತ್ತು ಸರಿಯಾದ ಕೆಲಸ ಮಾಡಿದ್ದೀಯ ಅಂತ ಹೇಳುತ್ತಾ..!!

                                                                                                                            -ಸಂತು

Monday, November 26, 2012

ಎಲೆ ಮರೆ ಕಾಯಿಗಳ ಜೊತೆ ಮಾತುಕತೆ, ಎಲೆ ಮರೆ ಕಾಯಿ ೫೬

ಗೆಳೆಯ ನಟ್ಟು, ನನ್ನ ಬರಹಗಳನ್ನು ನೋಡಿ ಇತರರಿಗೆ ಪರಿಚಯಿಸಿದ ರೀತಿ ನಿಜಕ್ಕೂ ನನಗೆ ಬಹಳ ರೋಮಾಂಚನವನ್ನುಂಟು ಮಾಡಿತು.
ಅವರ ಬ್ಲಾಗಿನಿಂದ ಇಡೀ ಲೇಖನವನ್ನು ಕದ್ದು ತಂದು ನನ್ನ ಬ್ಲಾಗಿನಲ್ಲಿ ಮರುಪ್ರಕಟಿಸುತ್ತಿದ್ದೇನೆ.
ಇದು ಕೇವಲ ನನ್ನ ನೆನಪಿಗಾಗಿ ಮತ್ತು ಸಂಗ್ರಹಕ್ಕಾಗಿ ಮಾತ್ರ.
 

 ಈ ಲೇಖನದ ಮೂಲ ಆವೃತ್ತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

http://smnattu.blogspot.cz/2012/09/blog-post_14.html#links


ಆಕೆ ಮುನಿಸಿಕೊಂಡಾಗ 
ಪಾತ್ರೆಗಳೂ ಮಾತನಾಡುತ್ತವೆ.

ಅಕ್ಕಿ ಮುಗಿದಾಗಲೇ ಯಾಕೋ 
ಹಸಿವು ಹೆಚ್ಚಾಗುತ್ತದೆ.

ಕುಡಿದು ಓಡಿಸುವವನ ಗಾಡಿಯೂ
ತೂರಾಡುತ್ತಲೇ ಬರುತ್ತದೆ!!

ಕೆಲವು ಭಾವಗಳೇ ಹಾಗೆ ತಮ್ಮೊಳಗೆ ಮತ್ತೊಂದು ಭಾವವನ್ನು ನಮಗೆ ಕಂಡೂ ಕಾಣದಂತೆ ಅಡಗಿಸಿಕೊಂಡಿರುತ್ತವೆ. ಉದಾಹರಣೆಗೆ ಹುಸಿ ಕೋಪದೊಳಗಿನ ಪ್ರೀತಿ, ಹಸಿದವನ ಒಳಗಿರುವ ಜೀವನ ಮುಖಿ, ಮುಗುಳ್ನಗುವಿನ ಹಿಂದಿರುವ ಕುಹಕ, ಹೀಗೆ ಹುಡುಕುತ್ತಾ ಹೋದರೆ ಒಂದು ಭಾವದೊಳಗಿನ ಮತ್ತೊಂದು ಒಳ ಭಾವ ಅಥವಾ ಒಳಾರ್ಥ ನಮಗೆ ಗೋಚರಿಸುತ್ತಾ ಹೋಗುತ್ತದೆ. ಹೆಚ್ಚು ಸಲ ಹೊರ ಭಾವವನ್ನು ಮಾತ್ರ ಅರ್ಥೈಸಿಕೊಂಡು ಆ ಭಾವದ ಒಳಾರ್ಥವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗುತ್ತೇವೆ. ಆ ವಿಫಲತೆಯನ್ನು ಜನ ಮೂರ್ಖತನ ಎಂದು ಕರೆದುಬಿಡುತ್ತಾರೆ. ಗೆಳೆಯನೊಬ್ಬನ ಬ್ಲಾಗಿನಲ್ಲಿ ಮೇಲಿನ ಚಂದದ ಎರಡು ಸಾಲುಗಳ ಚುಟುಕಗಳ ಓದುತ್ತಲೇ ಯಾಕೋ ಹೀಗೊಂದು ಭಾವಗಳ ಕುರಿತ ಭಾವನಾ ಲಹರಿ ನನ್ನಲ್ಲಿ ಮೂಡುತ್ತಾ ಹೋಯಿತು. ಅಂದ ಹಾಗೆ ಈ ಗೆಳೆಯನ ಬ್ಲಾಗಿನ ಹೆಸರು "ಫ್ರೊಮ್ ಮೈ ಹಾರ್ಟ್"

"ಮದುವೆಗೆ ಮುಂಚೆ ಅಷ್ಟೇ ಇದೆಲ್ಲ, ಆಮೇಲೆ ..... ಏನಿಲ್ಲ. ಬರೀ ಬೊಗಳೆ ಪ್ರಪಂಚ. ಈ ಕರ್ಮಕ್ಕೆ ಲವ್ ಮ್ಯಾರೇಜ್ ಬೇರೆ ಯಾಕೆ ಬೇಕಿತ್ತೋ? ಪರಿಚಯವಾದ ದಿನಗಳಲ್ಲಿ ಅಟ್ ಲೀಸ್ಟ್ 10 ಗಂಟೆ ಫೋನಿನಲ್ಲೇ ಪ್ರಪಂಚ. ಕೂತಿದ್ದರೂ ನಿಂತಿದ್ದರೂ smsಗಳ ಮೇಲೆ sms. ಆ ಪ್ರೀತಿ ಮಾತು, ಆಗ ನೋಡುತ್ತಾ ಇದ್ದ ಮೂವೀಸ್, ಆಡ್ತಾ ಇದ್ದ ಹರಟೆ, ಭೇಟಿ ಆಗ್ತಾ ಇದ್ದ ದೇವಸ್ಥಾನ, ಬರೀತಾ ಇದ್ದ ಲೆಟರ್, ಕಳಿಸ್ತಾ ಇದ್ದ ಇ ಮೇಲ್, ಗ್ರೀಟಿಂಗ್ಸ್, ಆಗಾಗ ಕೊಡ್ತಾ ಇದ್ದ ಗಿಫ್ಟ್ಸ್.... ಪ್ರತಿಯೊಂದು ಹೇಗೆ ಮದುವೆ ಆದ ತಕ್ಷಣ ಮಾಯ ಆಗೋಯ್ತು ನೋಡು. ಎಲ್ಲಾ ಗಂಡಸರದ್ದು ಇದೇ ರಾಮಾಯಣ ಅಂತ ಕಾಣ್ಸುತ್ತೆ , ಬರೀ ಹುಡುಗಿರನ್ನ ಪಟಾಯಿಸೋಕೆ ಅಷ್ಟೆಲ್ಲಾ ಮಾಡ್ತಾರೆ ಅಂತ ಅನ್ಸುತ್ತೆ . ಹಿಂಗೆ ಇದ್ದಿದ್ರೆ ಮದುವೆ ಆಗದೇನೆ ಇರ್ಬೋದಿತ್ತು. ಈಗ ಸಾಲದ್ದಕ್ಕೆ ಮಗು ಬೇರೆ ಕೇಡು."

ಹೀಗೆ ತನ್ನ ನಲ್ಮೆಯ ಸಂಗಾತಿಯ ಕೋಪವನ್ನು ಕುರಿತು ಬರೆಯುತ್ತಾ ಹೋಗುವ ಬರಹಗಾರ ಯಾಕೋ ಗೊತ್ತಿಲ್ಲ ಅವನ ಸರಳ ಬರಹದ ಶೈಲಿಯಿಂದ ನಮಗೆ ಹೆಚ್ಚು ಹೆಚ್ಚು ಹತ್ತಿರವಾಗಿಬಿಡುತ್ತಾನೆ. ಈ ಗೆಳೆಯನ ಬರಹಗಳನ್ನು ಓದಿದಾಗ ಹಸಿದು ಬೆಳೆದವನಿಗಷ್ಟೇ ಅನ್ನದ ಮತ್ತು ಪ್ರೀತಿಯ ಮಹತ್ವ ತಿಳಿದಿರುತ್ತದೆ ಎಂದೆನಿಸಿತ್ತದೆ.

ಕುಡಿಯಲೋದ ಕರುವನೆಳೆದು,
ಕಂಬದಲ್ಲಿ ಕಟ್ಟಿಹಾಕಿ,
ತಾಯಮೊಲೆಯ ಹಿಂಡಿ ಕರೆದು,
ಹಾಲು ತಂದು ಮೊಸರ ಮಾಡಿ,
ಮೊಸರ ಗಡಿಗೆ ಕೆಳಗೆ ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ಈ ಗೆಳೆಯನ ಮೇಲಿನ ಕವಿತೆಯ ಸಾಲುಗಳ ಓದಿದಾಗ ಆ ಸಾಲುಗಳಲ್ಲಿ ಒಂದು ಚಂದದ ಲಯ ತುಂಬಿದೆ ಎಂದೆನಿಸುತ್ತೆ ಅಲ್ಲವೇ ಗೆಳೆಯರೇ? ಬರೀ ಕವಿತೆಗಳಲ್ಲಿ ಅಷ್ಟೇ ಅಲ್ಲ ಬದುಕಿನಲ್ಲೂ ಸಹ ಲಯ ತಂದುಕೊಂಡು ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ ಎಂಬ ಪುಟ್ಟ ಹಳ್ಳಿಯಿಂದ ಝೆಕ್ ರಿಪಬ್ಲಿಕ್ ನ ಪ್ರಾಗ್ ಎಂಬ ಸುಂದರ ನಗರ ತಲುಪಿ ಅಲ್ಲಿಂದಲೇ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಈ ಗೆಳೆಯನ ಬದುಕು ನಿಜಕ್ಕೂ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. "ಹಾಯ್ ನಟ್ಟು, ನಮಸ್ಕಾರ, ಎಲೆಮರೆ ಕಾಯಿಗಾ!! ಮೈ ಗಾಡ್, ನಂಗೆ ಬಹಳ ಮುಜುಗರವಾಗ್ತಾ ಇದೆ. ನಾನು ಅಂತ ದೊಡ್ಡ ಬರಹಗಾರ ಏನಲ್ಲ, ನೀವು ಪರಿಚಯ ಮಾಡ್ತಾ ಇರೋ ವ್ಯಕ್ತಿಗಳಿಗೆ ಹೋಲಿಸಿದರೆ ನಂದೇನೂ ಇಲ್ಲ." ಎಂದು ಮುಜುಗರಪಡುತ್ತಲೇ ಇಂತಹುದೊಂದು ಚಂದದ ಪರಿಚಯವನ್ನು ಗೆಳೆಯ ಸಂತೋಷ್ ಕುಮಾರ್ ಎಲ್ ಎಮ್ ಅವರು ನಮ್ಮೊಡನೆ ಹಂಚಿಕೊಂಡಿದ್ದಾರೆ. ಸಹೃದಯಿಗಳೇ, ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯಲ್ಲಿ ಗೆಳೆಯ ಸಂತೋಷನ ಪರಿಚಯ ಇಗೋ ನಿಮಗಾಗಿ....



"ನಮಸ್ಕಾರ ಗೆಳೆಯರೇ, ಹೇಳೋಕೆ ಹೇಳಿಕೊಳ್ಳುವಂಥ ಸಾಧನೆಯೇನೂ ಮಾಡಿಲ್ಲ. ಗೆಳೆಯ ನಟ್ಟುವಿನ ಒತ್ತಾಯದ ಮೇರೆಗೆ ಇದನ್ನು ಬರೆಯುತ್ತಿದ್ದೇನೆ ಅತೀ ಸಾಮಾನ್ಯ ಮಾಹಿತಿ ಬೇಕೆಂದರೆ ಈ ಕೆಳಗಿನವುಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಹುಟ್ಟಿದ್ದು ಅಮ್ಮನೂರು ಹಾಸನ ಜಿಲ್ಲೆಯ ಆರಕಲಗೂಡಿನ ಬಬಗಳಲೆ ಗ್ರಾಮ. ಬೆಳೆದಿದ್ದು ಪೂರ್ತಿ ಈಗಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ. ಓದಿದ್ದು ಸರಕಾರಿ ಶಾಲೆ. ಹತ್ತರ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ವಲಸೆ. ಮತ್ತೆ ತಿರುಗಿ ನೋಡಲಾಗಿಲ್ಲ. ಈಗ ಸದ್ಯಕ್ಕೆ ನನ್ನ ಇಂಜಿನಿಯರಿಂಗ್ ಪದವಿ ನೋಡಿ ಬಹುರಾಷ್ಟ್ರೀಯ ಕಂಪನಿಯೊಂದು ಕೆಲಸ ಕೊಟ್ಟಿದೆ. ಪ್ರೀತಿಸಿದವಳೊಟ್ಟಿಗೆ ಮದುವೆಯಾಗಿ ಸದ್ಯ ಮುದ್ದು ಬಂಗಾರಿಯೊಬ್ಬಳಿಗೆ ನಾನು ಪ್ರೀತಿಯ ತಂದೆಯಾಗಿದ್ದೇನೆ:)

ನನ್ನ ಹವ್ಯಾಸ: ಸಂಗೀತ, ಚಲನಚಿತ್ರ, ಮಿಮಿಕ್ರೀ, ಹಾಡುವುದು, ಪ್ರವಾಸ ಹಾಗೂ ಸಾಹಿತ್ಯ.

ಭೈರಪ್ಪ, ತೇಜಸ್ವಿ, ಕಾರಂತ, ದಿನಕರ ದೇಸಾಯಿ ಮುಂತಾದ ಕವಿಗಳ ಸಾಹಿತ್ಯದಲ್ಲಿ ಕಣ್ಣಾಡಿಸಿದ್ದೇನೆ, ಭಾರತೀಯ ಲೇಖಕ ಚೇತನ್ ಭಗತ್ ರವರ ಆಂಗ್ಲ ಸಾಹಿತ್ಯವನ್ನೂ ಓದಿದ್ದೇನೆ. ರವಿ ಬೆಳಗೆರೆಯವರ ಬರೆಯುವ ಶೈಲಿ ನನಗಿಷ್ಟ. ಸಾಹಿತ್ಯವೆಂಬುದು ಸಾಧ್ಯವಾದಷ್ಟು ಜನಗಳ ಮುಟ್ಟುವಂತಿರಬೇಕು ಎಂಬುದು ನನ್ನ ಅಭಿಪ್ರಾಯ. ಅದಕ್ಕಾಗಿಯೇ ಸರಳ ಭಾಷೆಯ, ಆದರೆ ಪರಿಣಾಮಕಾರಿ ಶಕ್ತಿಯುಳ್ಳ ಸಾಹಿತ್ಯವನ್ನು ಹೆಚ್ಚು ಇಷ್ಟಪಡುತ್ತೇನೆ. ಜೊತೆಗೆ ಬರೆಯುವಾಗಲೂ ಸರಳ ಭಾಷೆಯಲ್ಲೇ ಬರೆಯಲು ಪ್ರಯತ್ನ ಮಾಡುತ್ತೇನೆ. ಕನ್ನಡದ ಮೇಲಿನ ಪ್ರೀತಿ ನನ್ನನ್ನು ಬರೆಯಲು ಶುರು ಮಾಡಿದೆ.

ಮೈಸೂರಿನಲ್ಲಿ ಪ್ರಥಮ ವರ್ಷದ ಪಿಯುಸಿಯಲ್ಲಿ ನಾ ಓದುತ್ತಿದ್ದಾಗ ಹಾಗೆ ಸುಮ್ಮನೆ ಕುಳಿತಿರಲಾರದೇ (ಜೀವನದ ಪ್ರಪ್ರಥಮ) ಒಂದು ಚುಟುಕ ಬರೆದೆ.

ನಾನಂದುಕೊಂಡಂತೆಯೇ,
ಅಂದು,
ನನ್ನ ಪ್ರಿಯೆ,
ಪ್ರೇಮಪತ್ರವ ಕೊಟ್ಟಳು
ನನಗೊಂದು..!!
ಅಗ್ರಹಾರದಲ್ಲಿಯ,
ಆಕೆಯ,
ಪ್ರಿಯಕರನಿಗೆ,
ಕೊಟ್ಟು ಬರಲೆಂದು!!  

ಈ ಚುಟುಕ ನೋಡಿ ನಕ್ಕು, ಅಂದು ನನ್ನ ಗೆಳೆಯರು ಕೊಟ್ಟ ಷಹಬ್ಬಾಷ್ ಗಿರಿ ಎಷ್ಟೊಂದು ಉತ್ಸಾಹ ಕೊಟ್ಟಿತೆಂದರೆ, ಕೇವಲ ಒಂದಷ್ಟು ತಿಂಗಳುಗಳಲ್ಲೇ ಡೈರಿಯೊಂದರಲ್ಲಿ ಸುಮಾರು ಮುನ್ನೂರು ಕವನಗಳನ್ನು ಬರೆದೆ! ಮತ್ತೆ ವಿದ್ಯಾಭ್ಯಾಸದ ಗುಂಗಿನಲ್ಲಿ ನನ್ನ ಈ ಹವ್ಯಾಸವನ್ನು ಪಕ್ಕಕ್ಕಿರಿಸಬೇಕಾಯಿತು.ಈಗ ಮತ್ತೊಮ್ಮೆ ಬರೋಬ್ಬರಿ ಹನ್ನೆರಡು ವರ್ಷಗಳ ನಂತರ, ಅರಿವಿಲ್ಲದೇ ಆರಂಭಿಸಿದ ನನ್ನದೇ ಬ್ಲಾಗಿನ ಮುಖಾಂತರ ಮತ್ತೊಮ್ಮೆ ಸಾಹಿತ್ಯ ಪಯಣ ಶುರುವಾಗಿದೆ. ಫೇಸ್ ಬುಕ್ ನ "ಕನ್ನಡ ಬ್ಲಾಗ್" ಗೆಳೆಯರ ಒಡನಾಟದೊಂದಿಗೆ ಮತ್ತೊಮ್ಮೆ ಕಳೆದು ಹೋದ ಅಮೂಲ್ಯ ವಸ್ತು ಮತ್ತೊಮ್ಮೆ ಸಿಕ್ಕಂತಾಗಿದೆ. ಸಾಹಿತ್ಯಕ್ಕೆ ಹೆಚ್ಚು ಸಮಯ ಮೀಸಲಿಡಲಾಗದಿದ್ದರೂ ಸಮಯ ಸಿಕ್ಕಾಗಲೆಲ್ಲ ಹೊಸ ಪುಸ್ತಕಗಳ ಮೊರೆ ಹೋಗುತ್ತೇನೆ. ಓದುವ ಅಥವಾ ಬರೆಯುವ ಸಾಹಿತ್ಯದಲ್ಲಿ ನನ್ನನ್ನು ಬಹಳ ಕಾಡುವ ವಿಷಯಗಳೆಂದರೆ ಹಸಿವು,ಸಾವು,ಸಂಬಂಧ ಹಾಗೂ ಜೀವನ. ನಾ ಏನೇ ಬರೆದರೂ ಅವುಗಳು ನನ್ನ ಮನಸ್ಸಿನಲ್ಲಿ ಸ್ವಲ್ಪ ಸಮಯ ಬೀಡು ಬಿಡಲು ಅವಕಾಶ ಮಾಡಿ, ಕೊಂಚ ಗಿರಕಿ ಹೊಡೆಯಬಿಟ್ಟು ನಂತರವೇ ಹಾಳೆಗೆ ಗೀಚುತ್ತೇನೆ.

ಹೀಗೆಯೇ ಇನ್ನೊಂದಷ್ಟು ಬರೆಯುವ ಶಕ್ತಿ ತಾಯಿ ಕನ್ನಡಾಂಬೆ ಕೊಡಲಿ.

ಅರಿಯದಿಹ ಅಂತ್ಯದತನಕ
ಹುಟ್ಟಿನಿಂದ ಪರಿಪೂರ್ಣತೆಯೆಡೆಗೆ
ನಡೆಯುತಿಹ ಪಯಣವೇ ಜೀವನ

ಕನ್ನಡ ಬ್ಲಾಗ್ ಅತ್ಯಂತ ಆರೋಗ್ಯಕಾರಿ ಕನ್ನಡ ಸಾಹಿತ್ಯ ತಾಣ. ಇಲ್ಲಿ ಪ್ರತೀ ಕನ್ನಡ ಸಾಹಿತ್ಯಪ್ರಿಯರಿಗೆ ತುಂಬು ಹೃದಯದ ಸ್ವಾಗತ ಸಿಗುತ್ತದೆ. ಪ್ರತೀ ಸದಸ್ಯರು ಮುಕ್ತ ಮನಸ್ಸಿನಿಂದ ತಮ್ಮ ಸಾಹಿತ್ಯವನ್ನು ಪ್ರಕಟಿಸುವುದಾಗಲಿ ಮತ್ತು ಇನ್ನೊಬ್ಬರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದಾಗಲಿ ಮಾಡುತ್ತಾರೆ. ಈಗಾಗಲೇ ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ಕಬ್ಲಾ, ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿಯ ಎಲ್ಲ ಕನ್ನಡಿಗರನ್ನು ಸೆಳೆಯುತ್ತದೆ ಅನ್ನುವುದು ನನ್ನ ಆಶಯ:) --ಸಂತು"

ಎಂದು ಮಾತು ಮುಗಿಸಿದ ಗೆಳೆಯ ಸಂತುವಿನ ಚಂದದ ಮಾತುಕತೆ ನಿಮಗೆ ಇಷ್ಟವಾಗಿದೆ ಎಂದುಕೊಳ್ಳುವೆ ಗೆಳೆಯರೇ.. ಸಂತೋಷ್ ಅವರ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ.. ಪೋಸ್ಟ್ ಗಳು ಕಡಿಮೆ ಇವೆ ಎನಿಸಿದರೂ ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..

http://frommyheartsanthu.blogspot.in/
ಅವರ ಇಂಗ್ಲೀಷ್ ಬ್ಲಾಗ್ ಸಹ ಇದೆ ನೀವಲ್ಲಿ ಅವರಿರುವ ದೇಶದ ಫೋಟೋಗಳನ್ನು ನೋಡಬಹುದು :))
http://santhu-world.blogspot.in/

ಗೆಳೆಯರೇ, ಗೆಳೆಯ ಸಂತುವಿನ ಕವಿತೆಗಳ ಕೆಲವು ಆಯ್ದ ಸಾಲುಗಳು ನಿಮಗಾಗಿ..

ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ. 
ಟೊಳ್ಳು ಪೊಳ್ಳು ಸುಳ್ಳು ನುಡಿದು,
ನನ್ನ ಕಳ್ಳನನ್ನಾಗಿಸುವ,
ನಾಲಗೆಯ ಮೇಲೆ ನನಗನುಮಾನ.
*****
ಇನ್ನೂ ನೆನಪಿದೆ ಅಮ್ಮ,
ನಿನ್ನುದರ ಸೀಳಿ ನಾ ಹೊರಬಂದಾಗ,
ಸಿಕ್ಕ ಮರುಹುಟ್ಟಿನಲೂ,
ನನ್ನ ನೋಡುವ ನಿನ್ನ ಕಾತರ.
*****
ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))

Saturday, November 10, 2012

ಕಳೆದ ಉಂಗುರ!!


(ಚಿತ್ರಕೃಪೆ:Google)
ಕಳೆದ ಉಂಗುರಕ್ಕೀಗ ಮೂರೇ ವಯಸ್ಸು,
ಬಂಗಾರದ ಬೆಲೆಯೀಗ ಬಾನೆತ್ತರಕ್ಕೆ,
ಖಾಲಿ ಕೈಬೆರಳ ನಡುವಿನಿಂದ ಇಣುಕಿ ನಕ್ಕ ನೆನಪು.
ಇನ್ಯಾರದೋ ಕೈಗಳಲ್ಲಿ ಬರುತಲಿದೆ ಹೊಳಪು.

ಹುಣ್ಣಿಮೆಯ ಹಾದಿಯಲಿ ನಾ ಕಾಲಿಟ್ಟ
 ಹೆಜ್ಜೆಗಳಧೂಳನ್ನೆತ್ತಿ ಹಣೆಗಿಟ್ಟು
 ಮುಂಗೈಗೆ ಮುತ್ತಿಟ್ಟ ಸವಿನೆನಪು.
ಇಂದು ಆಗಸದಲ್ಲಿ ಚಂದ್ರ ಗೈರು ಹಾಜರಿ,
ಜತೆಗೆ ಅವಳೂ!!

ಅಂದು ಅವಳಪ್ಪುಗೆಯಲ್ಲಿ
ನನಗಿತ್ತ ಉಂಗುರ, ಇದ್ದಕ್ಕಿದ್ದಂತೆ ಮಾಯ.
ಕಣ್ಣು ಕುರುಡೋ, ಹೃದಯ ಕುರುಡೋ.
ನನಗಿನಿತು ಸುಳಿವಿಲ್ಲ.

ಜೋಕಾಲಿಯಲ್ಲಿ ಕೈಗಳ ಬೆಸೆದು
ಮುಂಬರುವ ಕನಸುಗಳೊಡನೆ ಜೀಕುವಾಗ
ತೇಲುತ್ತಿದ್ದ ಜಗತ್ತು.
ಬರುಬರುತ್ತಲೇಕೋ ತಲೆಕೆಳಗೆ.
ಮೇಲೆಬಿದ್ದ ಆಕಾಶ.
ಮಂಜಾದ ಕಂಗಳಲಿ ಬರೀ ನಕ್ಷತ್ರ.

ಪ್ರೀತಿ ಜನನಕ್ಕಿರಲಿಲ್ಲ ಒಂದೂ ನೆಪ,
ಅಂತ್ಯದ ಬುಡಕ್ಕೀಗ ನೂರು ಕಾರಣಗಳ ಬುತ್ತಿ.
ಕವಿದ ಕತ್ತಲೆಯೆಲ್ಲ ಕಾಲನ ಕೈಚಳಕವಷ್ಟೇ.
ಮತ್ತೆ ಮತ್ತೆ ಹುಡುಕುತ್ತಿರುವೆ, ಕಳೆದ ಉಂಗೂರಕ್ಕೀಗ.
ಕಾಣಲಾರೆನೆಂಬುದಿದ್ದರೂ ಬಲು ಖಚಿತ.
                                                                       --ಸಂತು

Saturday, August 25, 2012

ನೆನಪಿದೆ ಅಮ್ಮ!!

                                                                                                                                                                         (ಚಿತ್ರಕೃಪೆ:Google)
ಇನ್ನೂ ನೆನಪಿದೆ ಅಮ್ಮ,
ನಿನ್ನುದರ ಸೀಳಿ ನಾ ಹೊರಬಂದಾಗ,
ಸಿಕ್ಕ ಮರುಹುಟ್ಟಿನಲೂ,
ನನ್ನ ನೋಡುವ ನಿನ್ನ ಕಾತರ.

ಇನ್ನೂ ನೆನಪಿದೆ ಅಮ್ಮ,
ನಿನ್ನೆದೆಯ ನಾ ಚೀಪುವಾಗ,
ನಾನೊದ್ದ ಕಾಲಿನ ನೋವಿಗೆ,
ನಿನ್ನ ತುಟಿಯಲ್ಲಿ ಮಿನುಗಿದ ನಗು.

ಇನ್ನೂ ನೆನಪಿದೆ ಅಮ್ಮ,
ಮೊಸರನ್ನವನಿಕ್ಕುತ ನೀ ತೋರಿದ,
ಮಾಳಿಗೆಯ ಅಚ್ಚರಿಯ ಚಂದಿರ,
ಎಣಿಸಿದ ನಕ್ಷತ್ರ.

ಇನ್ನೂ ನೆನಪಿದೆ ಅಮ್ಮ,
ನಾ ನಿನ್ನ ತೊದಲು ಕರೆದಾಗ,
ಬಳಿ ಓಡಿ ಬಂದು,
ನೀನಪ್ಪಿದ ಬಿಸಿ ಸ್ಪರ್ಶ.

ಇನ್ನೂ ನೆನಪಿದೆ ಅಮ್ಮ,
ಅಪ್ಪ ಬರೆದ ಬೆನ್ನ ಬಾಸುಂಡೆಗಳ,
ಮೇಲೆ ನೀ ಹಚ್ಚಿದ,
ಕಣ್ಣೀರ ಲೇಪನ.

ಇನ್ನೂ ನೆನಪಿದೆ ಅಮ್ಮ,
ಯಶಸ್ಸಿನುತ್ತುಂಗವನೇರಲು,
ನೀ ಗುಂಡಿಗೆಯಲ್ಲಿ ಬಿತ್ತಿದ,
ಉತ್ಸಾಹದ ಚಿಲುಮೆ.

ಇನ್ನೂ ನೆನಪಿದೆ ಅಮ್ಮ,
ನಾನವಳ ಕೈ ಹಿಡಿದಾಗ,
ನಿನ್ನ ಕಣ್ಣಂಚಿನಲಿ,
ಜಿನುಗಿದ ಆ ಮುತ್ತು ಹನಿ.

ಇನ್ನೂ ನೆನಪಿದೆ ಅಮ್ಮ,
ಇದ್ದಕಿದ್ದಂತೆ ನೀನೆದ್ದು,
ಹೊರಟು ನಿಂತಾಗ,
ಬೆಂಬಿಡದೆ ಕಾಡಿದ ಅಸಾಧ್ಯ ಯಾತನೆ.

Thursday, August 23, 2012

ಹಸಿವಿನ ಅಂತರಾಳದಲ್ಲಿ..

ಏನಪ್ಪಾ ಇದು, ಒಂದೇ ಸಮನೆ ಹಸಿವಾಗುತ್ತಿದೆ.
ಮಧ್ಯಾಹ್ನ ಊಟ ಮಾಡಿ ಇನ್ನೂ ಮೂರು ಘಂಟೆಗಳೂ ಕಳೆದಿಲ್ಲ.
ಈ ಕಂಪ್ಯೂಟರಿನ ಮುಂದೆ ಕೂತು ಕೀಲಿಮಣೆ ಒತ್ತೋಕೆ ಶುರು ಮಾಡಿದ್ರೆ, ಅಂತಹ ಊಟ ಕರಗುವಷ್ಟು ಮೈ ಬಗ್ಗೋ ಕೆಲಸಾನ
ಯಾವ ಸಾಫ್ಟ್‌ವೇರ್ ಇಂಜಿನಿಯರ್ ಮಾಡಲ್ಲ ಅನ್ನೋದು ನನ್ನ ವಾದ.
ಆದ್ರೂ ಈ ಹೊಟ್ಟೆ ಮಾತ್ರ ತಾಳ ಬಾರಿಸೋದು ನಿಲ್ಲಿಸ್ತಾ ಇಲ್ಲ.

"ಏನ್ ಗುರೂ, ಪಿಜ್ಜಾ ಆರ್ಡರ್ ಮಾಡ್ತಿಯಂತೆ" ಪಕ್ಕದಲ್ಲಿದ್ದ ನಿಖಿಲ್ ಧ್ವನಿ.
"ಅಯ್ಯೋ ಸುಮ್ನಿರಪ್ಪ, ಯಾವ್ ಖುಷಿಗೆ", ನನ್ನ ಪ್ರಶ್ನೆ.
"ಅದೇ ಕಣೋ ಮದುವೆಯಾದೆಯಲ್ಲ, ಐದು ವರ್ಷದ ಹಿಂದೆ, ಅದಕ್ಕೆ ಅನ್ಕೋ!!"
ನಾನೂ ಬಿಡಲಿಲ್ಲ "ಯಾಕಪ್ಪಾ, ಆಮೇಲೂ ಏನೇನೋ ಮಾಡಿದೆ, ಅದಕ್ಕೆಲ್ಲಾ ಬೇಡವೇ?"
ನಿಖಿಲ್,"ನಾನೇನು ಬೇಡ ಅಂತ ಹೇಳಿದೆನಾ? ನಾಳೆ ಪಿಜ್ಜಾ ಅದಕ್ಕೋಸ್ಕರ ಕೊಡಿಸು"

ಅಪ್ಪ, ಈ ಜನಗಳು ಬೇಕಾದ್ರೆ ಬೆಳಿಗ್ಗೆ ಆಗಿದ್ದಕ್ಕೆ, ಸಂಜೆ ಆಗಿದ್ದಕ್ಕೆ, ಕೋಳಿ ಕೂಗಿದ್ದಕ್ಕೆ, ಕ್ಷೌರ ಮಾಡಿಸಿದ್ದಕ್ಕೆ,....
ಯಪ್ಪಾ,ಯಾವುದಕ್ಕೆ ಬೇಕಾದ್ರೂ ಟ್ರೀಟ್ ಕೇಳ್ತಾರೆ.
ಅದ್ಯಾವ ಪುಣ್ಯಾತ್ಮ ಶುರು ಮಾಡಿದ್ನೋ ಈ ಪಾರ್ಟೀ ಅನ್ನೋ ಪದವನ್ನ.

"ಅದೇನಪ್ಪ ಒಂದು ಪಿಜ್ಜಾ ಕೊಡಿಸೋದಕ್ಕೆ ಅದೇನು ಗೊಣಗುತ್ತೀಯೋ?
ನಾನೇನು ಇಡೀ ಕಂಪನಿಗೆ ಕೊಡಿಸೋಕೆ ಹೇಳಿದೆನಾ?, ಬರೀ ನಮ್ 26 ಜನಗಳ ಟೀಮಿಗೆ ಅಷ್ಟೇ!!"
ನಿಖಿಲ್ ನಿಂದ ಮತ್ತೊಂದು ಶಾಕ್.

"ದೇವ್ರು, ನಾನೇನು ಕುಬೇರನ ವಂಶದವನಲ್ಲಪ್ಪ,
ಇಲ್ಲಿ ನಾನು ಯೋಚನೆ ಮಾಡುತ್ತಾ ಇರೋದು ಬರೀ 26 ಜನಗಳ ಚಿಕ್ಕ(!) ಟೀಮಿನ ವಿಷಯವಲ್ಲ,
ಆ 26 ಜನಗಳಲ್ಲಿ ಪ್ರತಿಯೊಬ್ಬರ ತಿನ್ನುವ ಕೆಪಾಸಿಟಿಯ ಬಗ್ಗೆ,
ನಂಗೂ ಮನೆ ಅಂತ ಒಂದಿದೆ, ಸ್ವಲ್ಪ ಸಂಬಳ ಮನೆಗೂ ಕೊಡ್ಬೇಕಪ್ಪ"

"ಈಗೇನು?, ಕಳೆದ ಐದಾರು ತಿಂಗಳಿನಿಂದ ನೀನೇನೂ ಟ್ರೀಟ್ ಕೊಡಿಸಿಲ್ಲ,
ಈಗ ಒಂದು ಪಿಜ್ಜಾ ಕೊಡಿಸೋಕೆ ಆಗೋಲ್ವೇ,ಸರಿ ಬಿಡು"
ಈತ ಅಷ್ಟೊಂದು ಸಲೀಸಾಗಿ ಬಿಡೋ ಆಸಾಮಿಯಲ್ಲ ಎನಿಸಿತು.

ನನಗೆ ಪಿಜ್ಜಾ ತಿನ್ನಬೇಕೆಂಬ ಆಸೆಯಾಗಿತ್ತೇನೋ ನಿಜ,
ಆದರೆ ಜತೆಗೆ ಇಡೀ ಟೀಮಿಗೆ ಪಿಜ್ಜಾ ತಿನ್ನಿಸಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳಬೇಕೆಂಬ ಮಹಾದಾಶೆಯಂತೂ ಇರಲಿಲ್ಲ.

"ಓಕೆ ದೇವ್ರು, ನಿಮ್ಮ ಕುದುರೇನೇ ಮುಂದೆ ಹೋಗ್ಲಿ, ಅದೇನು ಬೇಕೋ ಹೇಳಿ ಆರ್ಡರ್ ಮಾಡ್ತೀನಿ" ಕೊನೆಗೂ ನನ್ನೊಳಗಿಂದ ಸೋಲೊಪ್ಪಿಕೊಂಡ ಸ್ವರ.

"ಹೂಓಹೂಊಹೂಊ" ಇಡೀ ಟೀಮ್ ತಾವೇನೋ ಪ್ರಪಂಚವನ್ನೇ ಗೆದ್ದೆವೋ ಅನ್ನಿಸುವಷ್ಟು ಜೋರಾಗಿ ಕೂಗಿದರು.
"ಆಹಾಹ ನೋಡಿ, ಇನ್ನೊಬ್ರ ದುಡ್ಡಲ್ಲಿ ತಿನ್ನೋದು ಅಂದ್ರೆ ಮೃಷ್ಟಾನ್ನ ತಿಂದ ಹಾಗಾಗುತ್ತೇನೋ" ನಾನೊಮ್ಮೆ ಪೆಚ್ಚುಮೋರೆಯಲ್ಲಿ ಹೇಳಿದೆ.
ಯಾರೊಬ್ಬರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ!!

ಸರಿ,ಒಬ್ಬೊಬ್ಬರೂ ಬಂದು ತಮತಮ್ಮ ಪಿಜ್ಜಾ ಆಯ್ಕೆಗಳನ್ನು ಹೇಳಿದ್ದಾಯ್ತು.
ಪಿಜ್ಜಾ ಸೆಂಟರಿಗೆ ಫೋನ್ ಮಾಡಿ ಆರ್ಡರ್ ಕೊಟ್ಟಿದ್ದಾಯ್ತು.
ಪಿಜ್ಜಾ ಎಲ್ಲಿಗೆ ತರಬೇಕು ಅಂತ ವಿಳಾಸ ಕೂಡ ಕೊಟ್ಟೆವು.
ಪಿಜ್ಜಾ ಸೆಂಟರಿನ ಅಂಗಡಿಯಾತ "ಆರ್ಡರ್ ಬರೋಕೆ ಗರಿಷ್ಟ ಅರ್ಧ ಘಂಟೆಯಾಗುತ್ತದೆ.
ದಯವಿಟ್ಟು ಕಾಯಿರಿ ಸಾರ್" ಅಂದು ಹೇಳಿ ಫೋನಿಟ್ಟ.

ಅಯ್ಯೋ ಈಗ ನೋಡಿ, ಮತ್ತೊಮ್ಮೆ ಮರೆತಿದ್ದ ಹಸಿವು ಮತ್ತೊಮ್ಮೆ ಬಾಯಿಬಡಿಯುತ್ತಿದೆ.

ಆ ಪಿಜ್ಜಾ ಅಂಗಡಿಯವನಿಗೇನು ಗೊತ್ತು,
ಅರ್ಧ ಘಂಟೆಯೆಂದರೆ 30 ನಿಮಿಷಗಳು,
ಅರ್ಥಾತ್ 30x60=1800 ಸೆಕೆಂಡುಗಳು.

ಅದರಲ್ಲೂ ಆರ್ಡರ್ ಕೊಟ್ಟ ಮೇಲೆ ಪಿಜ್ಜಾ ಬರೋ ತನಕ ಕಾಯೋದಿದೆಯಲ್ಲ ಅದು ಬಹಳ ಸಂಕಟದ ಸಮಯ.
ಅಲ್ಲ ಸ್ವಾಮಿ, ಕೊಡೋ ದುಡ್ಡು ಕೊಟ್ಟು ಮತ್ತೆ ಊಟಕ್ಕೆ ಕಾಯಬೇಕು ಅನ್ನೋದೆಲ್ಲ ಈಗಿನ ಕಾಲದಲ್ಲಿ ಶುರುವಾಗಿದೆಯಲ್ಲ.
ಊಟಕ್ಕೆ ಅಂತಹ ಬರ ಬಂದಿದೆಯಾ...

ಅಯ್ಯೋ ಬಿಡಿ, ಈಗ ಮತ್ತೆ ಪಿಜ್ಜಾ ವಿಷಯಕ್ಕೆ ಬರೋಣ.
ಅದೂ ಇದೂ ಮಾತನಾಡುತ್ತಾ ಹೇಗಾದರೂ ಸಮಯ ತಳ್ಳೋಣವೆಂದರೆ ಯಾವುದೂ ನೆನಪಿಗೆ ಬರುತ್ತಿಲ್ಲ.

ಮತ್ತೊಮ್ಮೆ ನಿಖಿಲ್ ನ ಆಗಮನ.
"ಗುರೂ, ನಿನ್ನ ಮದುವೆ ಸ್ಟೋರಿ ಹೇಳು. ಅಲ್ಲಿತನಕ ಟೈಮ್ ಪಾಸ್ ಮಾಡೋಣ"
"ಈ ಟೈಮಲ್ಲಿ ಅವೆಲ್ಲ ಬೇಕಾ, ಮೊದ್ಲು ಪಿಜ್ಜಾ ತಿನ್ನೋಣ"
"ಪಿಜ್ಜಾ ಬರಬೇಕಲ್ಲ"
"ಹೌದಲ್ವೇ, ಪಿಜ್ಜಾನೇನು ಈ ಪುಣ್ಯಾತ್ಮರು ಗಿಡದಲ್ಲಿ ಬೆಳಿತಾರ, ಅರ್ಧ ಘಂಟೆ ಬೇಕಂತೆ
ನೀನೇನೇ ಹೇಳು,ಈ ಪಿಜ್ಜಾ ಸೆಂಟರಿನವರಿಗಿರುವಷ್ಟು ದುರಹಂಕಾರ ಯಾರಿಗೂ ಇಲ್ಲ,
ಯಾರಿಗೆ ಇಷ್ಟವಾಗಲೀ ಬಿಡಲಿ, ವ್ಯಾಪಾರ ಜೋರಾಗಿ ಆಗುತ್ತಲ್ಲ ಅನ್ನೋ ಅಸಡ್ಡೆ,
ಅದಕ್ಕೆ ಹೊಟ್ಟೆ ತುಂಬಿದವನ ಮನೆಗೆ ಊಟಕ್ಕೆ ಹೋಗಬೇಡ ಅನ್ನೋದು"

"ಹೌದು ಗುರು, ಸರಿಯಾಗಿ ಹೇಳಿದೆ. ಇವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು.
ಏನಾದರೊಂದು ಮಾಡೋಣ"
"ಏನು ಮಾಡಬೇಕು, ನೀವೆಲ್ಲರೂ ಸೇರಿ ಒಂದು ಐಡಿಯಾ ಕೊಡಿ, ಅದನ್ನೇ ಮಾಡೋಣ"
ಅಷ್ಟೊತ್ತಿಗಾಗಲೇ ಪಿಜ್ಜಾ ಬರುವಿಕೆಯನ್ನು ಎದುರು ನೋಡುತ್ತಿದ್ದ ಎಲ್ಲರ ಪಿತ್ತ ನೆತ್ತಿಗೇರಿತ್ತು.

ಓಕೇ, ಈಗಾಗಲೇ 40 ನಿಮಿಷವಾಗಿದೆ.
ಇನ್ನು ಅವನು ಪಿಜ್ಜಾ ತಂದರೂ ತೆಗೆದುಕೊಳ್ಳೋದು ಬೇಡ!
ನಿರ್ಧಾರವಾಯಿತು.

ಇದರ ಮಧ್ಯೆ ಮತ್ತೊಂದು ಕ್ರಿಮಿನಲ್ ಐಡಿಯಾ.
ಈ ಪಿಜ್ಜಾ ಸೆಂಟರಿನವರನ್ನು ಹಾಗೆಯೇ ಬಿಟ್ಟು ಬಿಡಬಾರದು.
ಅವರಿಂದ ಒಂದಾದರೂ ಕ್ಷಮಾಪತ್ರ ಪಡೆಯಬೇಕು.
ಜೊತೆಗೆ ಇವರಿಗೆ ಸ್ವಲ್ಪ ದಿನ ನಮ್ಮನ್ನು ಮರೆಯೋಕೆ ಆಗಬಾರದು, ಆ ರೀತಿ ಪಾಠ ಕಲಿಸಬೇಕು.
ಏನು ಮಾಡೋದು?

ತಕ್ಷಣ ಅಲ್ಲಿಯವರೆಗೆ ಸುಮ್ಮನೇ ಕುಳಿತಿದ್ದ ಆಮೀರ ಎದ್ದು ಬಂದು ಒಂದು ಸೂಪರ್ ಐಡಿಯಾ ಕೊಟ್ಟ.

"ಗುರೂ, ನೋಡು, ಈ ಐಡಿಯಾ ಉಪಯೋಗಿಸಿದ್ರೆ ನೀ ಹೇಳಿದ್ದನ್ನೆಲ್ಲಾ ಮಾಡಬಹುದು,
ಪ್ರತೀ ಪಿಜ್ಜಾ ಸೆಂಟರಿನವರಿಂದಲೂ ಗ್ರಾಹಕರಿಗಾಗಿ ಒಂದು ಪಾಲಿಸಿ ಇದೆ.
ಯಾವುದೇ ವ್ಯಕ್ತಿ ಪಿಜ್ಜಾ ಆರ್ಡರ್ ಕೊಟ್ಟ ಮೇಲೆ, ಅದ್ಯಾವುದೇ ಸ್ಥಳದಲ್ಲಿದ್ದರೂ ಮುಂದಿನ 30 ನಿಮಿಷದೊಳಗೆ ಆರ್ಡರ್ ಡೆಲಿವೆರಿ ಕೊಡಬೇಕು.
ಕೇವಲ 10 ನಿಮಿಷ ತಡವಾದರೂ ಆತ ತಂದ ಪಿಜ್ಜಾಗೆ ಇಂತಿಷ್ಟು ಅಂತ ರಿಯಾಯಿತಿ ಅಥವಾ ಪೂರ್ತಿ ಪಿಜ್ಜಾ ಉಚಿತವಾಗಿ ಕೊಡಬೇಕು.
ಇದರಿಂದ ಗ್ರಾಹಕನಿಗೂ ಆ ಪಿಜ್ಜಾ ಕಂಪನಿಯ ಮೇಲೆ ನಂಬಿಕೆ ಹೋಗೋದಿಲ್ಲ, ಆ ಕಂಪನಿಗೂ ಆ ಗ್ರಾಹಕನನ್ನು ಕಳೆದುಕೊಳ್ಳೋ ಭೀತಿ ಇರೋದಿಲ್ಲ,
ಈಗಾಗಲೇ ಆರ್ಡರ್ ಕೊಟ್ಟು 40 ನಿಮಿಷವಾಗಿದೆ, ಈ ಅವಕಾಶವನ್ನು ಮಿಸ್ ಮಾಡ್ಕೋಬಾರದು, ಏನಂತೀಯ"

ನಿಖಿಲ್ ಓಡಿ ಬಂದವನೇ "ಸೂಪರ್ ಐಡಿಯಾ ಆಮೀರ್" ಎಂದು ಕೈಕೊಟ್ಟ.
"ಗುರೂ ಬಿಡಬೇಡ, ನಿನ್ನ ಮಾತಿನ ಶೈಲಿನ ಇಲ್ಲಿ ಉಪಯೋಗಿಸು" ಎಂದು ನನಗೆ ಹೇಳಿದ.

ನಂಗಂತೂ ಒಂದೇ ಸಲ ಹುಮ್ಮಸ್ಸು ಬಂತು.
"ಎಲ್ಲರಿಗೂ ಪುಕ್ಸಟ್ಟೆ ಪಿಜ್ಜಾ, ಟ್ರೀಟ್ ಮಾತ್ರ ನಂ ಹೆಸರಲ್ಲಿ" ಮನಸ್ಸು ಒಂದು ಬಾರಿ ಕುಣಿಯಿತು.

ಇದೀಗ ಮನದಲ್ಲೇ ಏನು ಮಾತನಾಡಬೇಕು ಅಂತ ತೀರ್ಮಾನಿಸಿ ಪಿಜ್ಜಾ ಹುಡುಗನ ಬರುವಿಕೆಗಾಗಿ ಕಾಯತೊಡಗಿದೆ.
ಕೊನೆಗೂ ಪಿಜ್ಜಾಸೆಂಟರಿನ ಸ್ಕೂಟರ್ ನಮ್ಮ ಗೇಟಿನ ಹೊರಗೆ 45 ನಿಮಿಷಗಳ ನಂತರ ಬಂತು.
ಅದ್ಯಾಕೋ ಪೆಚ್ಚುಮೋರೆ ಹಾಕಿಕೊಂಡು ಆ ಹುಡುಗ ನಿಂತಿದ್ದ.
ನಾ ಅವನ ಬಳಿಗೆ ಹೋದವನೇ ಒಂದೇ ಸಮನೆ ಬೈಯೋಕೆ ಶುರು ಮಾಡಿದೆ.

"ಸ್ವಲ್ಪನಾದ್ರೂ ಟೈಮ್ ಸೆನ್ಸ್ ಇಲ್ವಾ ನಿಮ್ಮ ಪಿಜ್ಜಾ ಸೆಂಟರಿನವರಿಗೆ,
ದುಡ್ಡೂ ಕೊಟ್ಟು ತಲೇನೂ ಬೋಳಿಸ್‌ಕೊಂಡ್ರಂತೆ ಅದೆಲ್ಲೋ,ಹಾಗಾಗಿದೆ ನಮ್ ಕತೆ.
ಇಲ್ಲೇನೂ ಧರ್ಮಕ್ಕೆ ಪಿಜ್ಜಾ ತರ್ತಿಯ, ದುಡ್ಡು ಕೊಡಲ್ವಾ?
ನಂಗೆ ಬೇಡ.
ವಾಪಸ್ ತೆಗೆದುಕೊಂಡು ಹೋಗು,
ನಿಮ್ ಮ್ಯಾನೇಜರ್ ಗೆ ನಂಗೆ ಒಂದು ಮೇಲ್ ಕಳ್ಸೋಕೆ ಹೇಳು.
ನಂಗೆ ಗೊತ್ತು ನಿಮ್ಮನ್ನ ಎಲ್ಲಿ ವಿಚಾರಿಸ್ಕೋಬೇಕು ಅಂತ.
ಬರೋಬ್ಬರಿ ಮುಕ್ಕಾಲು ಘಂಟೆ ಆದ ಮೇಲೆ ತಂದಿದ್ದಿಯಾ"

ಪಿಜ್ಜಾ ಸೆಂಟರಿನ ಹುಡುಗ ತಡಬಡಾಯಿಸಿದ.
"ಸರ್ ಅದು ಹಾಗಲ್ಲ,
ಇಲ್ಲಿಗೆ ಡೆಲಿವರಿ ಮಾಡಬೇಕಿದ್ದ ಹುಡುಗ ನಾನಲ್ಲ, ಅದು.."

ನಾನು ಬಿಡಲಿಲ್ಲ, "ಏನ್ ಅದು ಇದು, ಅವನೇನು ಕತ್ತೆ ಮೇಯಿಸೋಕೆ ಹೋಗಿದ್ದಾನ,
ನಿಮ್ಗೆ ಬಿಸ್ನೆಸ್ ಮಿತಿಮೀರಿ ಬೆಳೆದಿದೆ ಅಂತ ಸೊಕ್ಕು, ಅದಕ್ಕೆ ಅಸಡ್ಡೆ"

ಕೊನೆಗೂ ನನ್ನ ಕೋಪದ ಮಾತಿನ ಪರಿ ಅವನಿಗೆ ತಟ್ಟಿತು ಅನ್ನಿಸುತ್ತೆ.
"ಸರ್ ಒಂದು ನಿಮಿಷ, ನಮ್ ಮ್ಯಾನೇಜರ್ ಗೆ ಒಂದು ಫೋನ್ ಮಾಡ್ತೀನಿ ಇರಿ" ಎಂದವನೇ ಆತನ ಮ್ಯಾನೇಜರ್ ಗೆ ಫೋನ್ ಮಾಡಿ,
ಅದೇನೋ ಒಂದು ನಿಮಿಷ ಮಾತಾಡಿದ.
ನಂತರ "ಸರ್, ನೀವೀಗ ಈ ಪಿಜ್ಜಾಗೇ ಏನು ದುಡ್ಡು ಕೊಡಬೇಕಿಲ್ಲ, ದಯವಿಟ್ಟು ತೆಗೆದುಕೊಳ್ಳಿ,
ತಡವಾದದ್ದಕ್ಕೆ ಕ್ಷಮೆಯಿರಲಿ" ಎಂದು ಹೇಳಿ ಪಿಜ್ಜಾಗಳ ಪೊಟ್ಟಣಗಳನ್ನು ನನ್ನ ಕೈಗಿತ್ತ.

ಆದರೂ ನಾನೇನೋ ಸಮಾಧಾನವಾಗದವನಂತೆ ನಟಿಸುತ್ತಾ,
"ಹೋಗಲಿ, ಆದರೆ ಅಷ್ಟಕ್ಕೇ ಸುಮ್ಮನಾಗುವವನಲ್ಲ ನಾನು,
ನಿಮ್ಮ ಮ್ಯಾನೇಜರ್ ನಿಂದ ಅಥವಾ ಅದ್ಯಾವನೋ ಡೆಲಿವೆರಿ ಮಾಡ್‌ಬೇಕಿತ್ತು ಅಂದೆಯಲ್ಲ ಅವನಿಂದ ಇನ್ನೆರಡು ದಿನಗಳಲ್ಲಿ ನನಗೊಂದು
ಕ್ಷಮೆ ಕೋರಿರೋ ಮೇಲ್ ಬೇಕು" ಎಂದೆ.

"ಆಯ್ತು ಸರ್ " ಎಂದ ಹುಡುಗ ಸ್ಕೂಟರ್ ಏರಿ ಮರೆಯಾದ.

ಅಷ್ಟು ಹೊತ್ತಿನವರೆಗೆ ಸುಮ್ಮನೇ ನನ್ನ ಹಿಂದೆ ನಿಂತಿದ್ದವರೆಲ್ಲ "ಹೋ" ಎಂದು ಖುಷಿಯಲ್ಲಿ ಕೂಗಿದರು.
"ಅದೇನು ಮಾತಾಡ್ತೀಯಾ ಗುರೂ,
ಹುಟ್ಟಿದಾಗ್ಲೇ ಆ ದೇವ್ರು ಮಾತಾಡೋ ಕಲೆ ನಿಂಗೆ ಕೊಟ್ಟವನೆ,
ನೋಡು ಬರೀ ಮಾತಲ್ಲೇ 5-6 ಸಾವಿರದ ಪಿಜ್ಜಾ ಫ್ರೀಯಾಗಿ ಕೊಡಿಸಿಬಿಟ್ಟೆಯಲ್ಲ, ಸೂಪರ್"

ನಂಗೆ ಗೆದ್ಡೆ ಎನ್ನುವ ಉತ್ಸಾಹದ ಜೊತೆಗೆ,
ನನ್ನ ಬುದ್ಧಿವಂತಿಕೆಯ ಬಗ್ಗೆ ನನಗೇ ಅಭಿಮಾನ ಹುಟ್ಟಿತ್ತು.
ಎಲ್ಲರೂ ಹೊಟ್ಟೆ ಬಿರಿಯುವಂತೆ, ತಂದ ಪಿಜ್ಜಾವನ್ನು ತಿಂದು ತೇಗಿದರು.
ತಿನ್ನುವಾಗ ಬರೀ ಉಚಿತ ಪಿಜ್ಜಾದ ಬಗ್ಗೆಯೇ ಮಾತು.

---------------------------------------------------------------------------------------------

ಈ ಘಟನೆ ನಡೆದು 4 ದಿನಗಳಾಗಿವೆ.ಪಿಜ್ಜಾ ವಿಷಯವಂತೂ ಮರೆತೇ ಹೋಗಿದೆ.
ಆಗ ನನ್ನ ಮೇಲ್‌ಬಾಕ್ಸ್ ಗೆ "ಪಿಜ್ಜಾ ಸೆಂಟರಿನಿಂದ ಕ್ಷಮಾಪಣೆ" ಎಂದು ಒಕ್ಕಣೆಯಿರುವ ಮೇಲೊಂದು ಬಂತು.

ಅದನ್ನು ತೆರೆದು ಓಡತೊಡಗಿದೆ.
"ಪ್ರಿಯ ಗ್ರಾಹಕ ಗುರೂಗೆ,
ಪಿಜ್ಜಾ ಸೆಂಟರಿನ ಡೆಲಿವರಿ ಹುಡುಗ ವೆಂಕಟೇಶ ಮಾಡುವ ವಂದನೆಗಳು.
ನನ್ನ ಸಹೋದ್ಯೋಗಿ ತಿಳಿಸಿದಂತೆ ತಾವೇ ಕೇಳಿದ ಕ್ಷಮಾಪಣಾ ಪತ್ರವನ್ನು ನಾನೀಗ ಬರೆದು ತಮ್ಮ ಮುಂದಿಡುತ್ತಿದ್ದೇನೆ.

ಇದೇ ಕಳೆದ ಸೋಮವಾರ ತಾವು ನೀಡಿದ ಪಿಜ್ಜಾ ಆರ್ಡರ್ ಡೆಲಿವರಿಯನ್ನು ನಾನು ಮಾಡಬೇಕಿತ್ತು.
ರೆಡಿಯಾಗಿದ್ದ ಪಿಜ್ಜಾವನ್ನು ನನ್ನ ಸ್ಕೂಟರಿನಲ್ಲಿಟ್ಟು ತಮ್ಮ ಆಫೀಸಿನ ಬಳಿ ಬರುತ್ತಿದ್ದೆ.
ದುರ್ವಿಧಿ ಯಾವ ಸಮಯದಲ್ಲಿ ಬೇಕಾದರೂ ನಮಗೆ ಅಘಾತ ನೀಡುತ್ತದೆ.
ನನಗೊಬ್ಬ ಎರಡೂವರೆ ವರ್ಷದ ಒಬ್ಬ ಮಗ.
ಆತ ಹುಟ್ಟಿದ ಒಂದೇ ವರ್ಷದಲ್ಲಿ ಮಾರುಕಟ್ಟೆಗೆ ತರಕಾರಿ ತರಲೆಂದು ಹೋದ ಆತನ ಅಮ್ಮ,
ಅರ್ಥಾತ್ ನನ್ನ ಮುದ್ದಿನ ಮಡದಿ ತಿರುಗಿ ಮನೆಗೆ ಬರಲಿಲ್ಲ.
ಬರುವ ದಾರಿಯಲ್ಲಿ ಆದ ಅಪಘಾತದಲ್ಲಿ ವಿಧಿ ಅವಳನ್ನು ನನ್ನಿಂದ ದೂರ ಮಾಡಿತು.
ನಂತರ ನನ್ನ ಮಗುವನ್ನು ನನ್ನ ತಾಯಿಯೇ ನೋಡಿಕೊಳ್ಳುತ್ತಿದ್ದರು.
ವಾರದ ಹಿಂದೆ ನನ್ನಮ್ಮ ಊಟ ಮಾಡಿಸುವಾಗ ಆಟವಾಡುತ್ತಿದ್ದ ನನ್ನ ಮುದ್ದು ಕಂದ, ಮಹಡಿಯಿಂದ ಬಿದ್ದು ತಲೆಗೆ ಗಂಭೀರ ಗಾಯ ಮಾಡಿಕೊಂಡಿತ್ತು.
ತುರ್ತು ನಿಗಾ ಘಟಕದಲ್ಲಿ ಆತನನ್ನು ಸೇರಿಸಲಾಗಿತ್ತು.
ಚಿಕಿತ್ಸೆಗೆ ದುಡ್ಡಿಲ್ಲದೇ ಅಂದು ಸಂಬಳದ ದಿನವಾದ್ದರಿಂದ ಕೆಲಸಕ್ಕೆ ಹಾಜರಾಗಿದ್ದೆ.

ನಿಮ್ಮ ಪಿಜ್ಜಾ ಡೆಲಿವೆರಿ ಮಾಡಬೇಕಾಗಿ ನಾನು ಹೊರಡಬೇಕಿತ್ತು.
ಆಗ ಆಸ್ಪತ್ರೆಯಿಂದ ನನ್ನ ತಾಯಿ ಕರೆ ಮಾಡಿ ಸಿಡಿಲ ವಾರ್ತೆಯನ್ನು ನನಗೆ ತಿಳಿಸಿದರು.
ನನ್ನ ಮುದ್ದು ಕಂದಮ್ಮನೂ ನನ್ನನ್ನು ಬಿಟ್ಟು ದೂರ ಆಗಲಿದ್ದ.
ಹೋಗುವ ಅವಸರದಲ್ಲಿ ನಾನು ನನ್ನ ಕೆಲಸವನ್ನು ಬೇರೆಯವರಿಗೆ ವಹಿಸಿ ತೆರಳಿದ್ದೆ.
ಅದಕ್ಕಾಗಿ ನಿಮಗೆ ಬರಬೇಕಿದ್ದ ಪಿಜ್ಜಾ ತಡವಾಯಿತು.

ತಡವಾಗಿದ್ದಕ್ಕೆ ನನ್ನ ಕಂಪನಿ ನಿಮಗೆ ತಲುಪಬೇಕಿದ್ದ ಪಿಜ್ಜಾವನ್ನು ನಿಮಗೆ ಉಚಿತವಾಗಿ ಕೊಟ್ಟಿದೆ.
ತಾವು ಪಿಜ್ಜಾವನ್ನು ತಿಂದು ಆನಂದಿಸಿದರೆಂದು ನಾವು ಭಾವಿಸುತ್ತೇವೆ.
ನಷ್ಟ ಭರಿಸಲಿಕ್ಕಾಗಿ ನನ್ನ ಸಂಬಳದಿಂದ ಆ ಹಣವನ್ನು ಹಿಡಿದುಕೊಳ್ಳಲಾಗಿದೆ.
ಇನ್ನು ಮುಂದೆ ತಮ್ಮ ಪಿಜ್ಜಾ ತಡವಾಗದಂತೆ ನಮ್ಮ ಕಂಪನಿ ಎಚ್ಚರ ವಹಿಸುತ್ತದೆ ಎಂಬುದನ್ನು ತಮಗೆ ತಿಳಿಸಲು ಇಚ್ಛಿಸುತ್ತೇನೆ.

ಇಂತಿ ವಂದನೆಗಳೊಂದಿಗೆ,
ವೆಂಕಟೇಶ,
ಡೆಲಿವೆರಿ ಬಾಯ್,
ಪಿಜ್ಜಾ ಸೆಂಟರ್"

ಎಲ್ಲರಿಗೂ ಅದರ ಬಗ್ಗೆ ಹೇಗೆ ಹೇಳುವುದು, ಅರ್ಥವಾಗಲಿಲ್ಲ.
ಹೊಟ್ಟೆಯೊಳಗೆ ಏನೋ ಕಲಕಿದಂತಾಯ್ತು.
ಜೊತೆಗೆ ಕಣ್ಣಂಚಿನಲ್ಲಿ ನೀರ ಹನಿಯೊಂದು ತೊಟ್ಟಿಕ್ಕಿತು.
---------------------------------------------

--ಪರಿಕಲ್ಪನೆ
ಸಂತು

(ಗೆಳೆಯರೇ,
ಇಲ್ಲಿ ಉಲ್ಲೇಖಿಸಿದ ಪಿಜ್ಜಾ ಸೆಂಟರ್ ಮತ್ತು ಪಾತ್ರಧಾರಿಗಳೆಲ್ಲ ಬರೀ ಕಲ್ಪನೆ ಮಾತ್ರ.
ಇಲ್ಲಿ ಕಾರ್ಪೊರೇಟ್ ವಾತಾವರಣದ ಪರಿಚಯ ಮಾಡಿಸಲಿಕ್ಕಾಗಿ ಕೆಲವು ಸಂಭಾಷಣೆಗಳಲ್ಲಿ ಆಂಗ್ಲ ಭಾಷೆಯನ್ನು
ಉದ್ದೇಶಪೂರ್ವಕವಾಗಿ ಬಳಸಲಾಗಿದೆ.
ವ್ಯಂಗ್ಯವಾಗಿಯೇ ಕತೆಯ ಹೇಳುತ್ತಾ ಕೊನೆಗೆ ಹೇಳಲೇಬೇಕಾದ ಗಂಭೀರ ವಿಷಯವನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ.
ಜೊತೆಗೆ ನೀತಿಯೊಂದು ಅಪ್ರಸ್ತುತವಾಗಿ ನಮ್ಮ ತಲೆಯಲ್ಲಿ ಈ ಕತೆ ಮುಗಿಯುವಾಗ ಬಂದು ಹೋಗುತ್ತದೆ.
ತಮಗೆ ಇಷ್ಟವಾಗುತ್ತದೆಂಬ ನಂಬಿಕೆಯೊಂದಿಗೆ, -ಸಂತು )

Sunday, August 19, 2012

ವ್ಯರ್ಥ

(ಚಿತ್ರಕೃಪೆ: google)
ಕುಡಿಯಲೋದ ಕರುವನೆಳೆದು,
ಕಂಬದಲ್ಲಿ ಕಟ್ಟಿಹಾಕಿ,
ತಾಯಮೊಲೆಯ ಹಿಂಡಿ ಕರೆದು,
ಹಾಲು ತಂದು ಮೊಸರ ಮಾಡಿ,
ಮೊಸರ ಗಡಿಗೆ ಕೆಳಗೆ ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ನೆರೆಯ ಹೊರೆಯ ಹೊಟ್ಟೆಯುರಿಸಿ,
ಒಡವೆ ಕಾಸು ಗೂಡಲಿರಿಸಿ
ಪರರ ವ್ಯಥೆಗೆ ಕುರುಡನಾಗಿ,
ತನಗೆ ತಾನೇ ಮಿತ್ರನಾಗಿ,
ಕೊನೆಗೆ ಎದೆಗೆ ತೂತು ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ಪೈಸೆ ದುಡಿದು ಗಂಜಿ ಕುಡಿದು,
ಒಡೆದ ಮನಗಳೆಲ್ಲ ಬೆಸೆದು,
ಕಷ್ಟಸುಖದಿ ಭಾಗಿಯಾಗಿ,
ಎಲ್ಲ ಜನಗಳಣ್ಣನಾಗಿ,
ದೇಹವಳಿದು ಹೆಸರು ಉಳಿಯೇ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

Thursday, August 9, 2012

ಓಹ್ ಒಲಿಂಪಿಕ್!!

(ಚಿತ್ರಕೃಪೆ: google)
ಕೈಯಲ್ಲೊಂದು ಹಾಳೆ ಜತೆಗೆ ಪೆನ್ನು. ಏಕೋ ಏನೋ ಗೀಚಬೇಕೆನಿಸಿತು.
ಇದೇ ವಿಷಯ ಕಳೆದ ತಿಂಗಳಿನಿಂದ ತಲೆ ಕೊರೆಯುತ್ತಿದೆ.

"ಇಂಗ್ಲೆಂಡ್ ನಲ್ಲಿ ೨೦೧೨ರ ಒಲಿಂಪಿಕ್ ನಡೆಯುತ್ತಿದೆ.
ಕ್ಯೂಬ,ಉಕ್ರೇನ್, ಹಂಗೇರಿ,ಕಝಕ್ ಸ್ತಾನ್ ಈ ರಾಷ್ಟ್ರಗಳೆಲ್ಲ ಎಷ್ಟು ದೊಡ್ಡದಿವೆ?
ನಮ್ಮ ಭಾರತದ ಅರ್ಧದಷ್ಟಿವೆಯಾ?
ಕೊನೆಯ ಪಕ್ಷ ನಮ್ಮ ದೇಶದ ಯಾವುದಾದರೊಂದು ರಾಜ್ಯದಷ್ಟಿದೆಯಾ?
ಅವುಗಳ ಜನಸಂಖ್ಯೆಯಾದರೂ ಎಷ್ಟು?
ಇಡೀ ರಾಷ್ಟ್ರದ ಒಟ್ಟು ಜನಸಂಖ್ಯೆ ನಮ್ಮ ದೇಶದ ಯಾವುದಾದರೊಂದು ಮಹಾನಗರದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿರಲಾರದು!!

ಆದರೂ ಆ ರಾಷ್ಟ್ರಗಳ ಕ್ರೀಡಾಪಟುಗಳ ಹುರುಪು ನೋಡಿ.
ಈಗಾಗಲೇ ಆ ದೇಶಗಳು ಒಂದಷ್ಟು ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಗೆದ್ದಾಗಿವೆ.
ಇನ್ನೂ ಗೆಲ್ಲುತ್ತಲೂ ಇವೆ.

ಇನ್ನು ಅಮೇರಿಕ ಹಾಗೂ ಚೀನಾ ದೇಶಗಳ ಜೊತೆ ಚಿನ್ನದ ಪದಕಗಳ ಹೋಲಿಕೆಯಂತೂ ಮಾಡ ಹೊರಟವ ಮೂರ್ಖನೇ ಸರಿ.
ಏನಾಗಿದೆ ನಮ್ಮ ಕ್ರೀಡಾಪಟುಗಳಿಗೆ?
ಒಂದೆರಡು ಬೆಳ್ಳಿ, ಒಂದೆರಡು ಕಂಚು!!
ಒಂದೊಂದು ರಾಜ್ಯದ ಜನಗಳು ಒಂದೊಂದು ಕ್ರೀಡೆಯಲ್ಲಿ ಪಳಗಿ ಒಲಿಂಪಿಕ್ ನಲ್ಲಿ   ಭಾಗವಹಿಸಿದರೂ ಯಾವ ಕ್ರೀಡೆಯಲ್ಲೂ ನಮ್ಮ ಭಾರತದವರು ಇಲ್ಲದೇ ಹೋಗುವುದಿಲ್ಲ. ಅಲ್ಲವೇ?
ಹೇಗಿದ್ದರೂ ಒಂದಷ್ಟು ಪದಕಗಳಂತೂ ಗ್ಯಾರಂಟಿ.

ಛೇ.
ಏನು ಮಾಡುತ್ತಿದ್ದಾರೆ ನಮ್ಮ ದೇಶದವರೆಲ್ಲ.ಎಲ್ಲ ಸೋಮಾರಿಗಳು.
ಏನಾಗಿದೆ ಇವರಿಗೆ ಧಾಡಿ?"

ಇನ್ನೇನು ನನ್ನ ಲೇಖನ ಮುಗಿಯಬೇಕಿತ್ತು.

"ಅಲ್ಲಪ್ಪಾ ಮಹಾರಾಯ, ಇನ್ನೊಂದು ಸಲ ನೀನೇನು ಬರೆದಿದ್ದೀಯಾ ಯೋಚಿಸಿ ಹೇಳು"
ಇದ್ಯಾರ ಧ್ವನಿ?
ಓಹ್ ನನ್ನ ಮನಸ್ಸು ಮಾತನಾಡುತ್ತಿದೆ!!

ನಾನೂ ಬಿಡಲಿಲ್ಲ, ಕೇಳಿದೆ "ಯಾಕಪ್ಪಾ, ನಾನೇನು ತಪ್ಪು ಬರೆದಿದ್ದೀನಿ"
ಮನಸು, "ಈ ದೇಶದ ಜನಗಳು ಸೋಮಾರಿ ಎಂದೆಯಾ? ಅದು ಸರೀನಾ?"
ನಾನು, "ಮತ್ತಿನ್ನೇನು ಏನಾಗುತ್ತೆ ಇವರ ಕೈಲಿ, ಕಷ್ಟದ ಕೆಲಸ ಯಾವುದೂ ಆಗಬಾರದು.
 ಏನೂ ಮಾಡದೇ ಚಿನ್ನದ ಪದಕ ಬಾ ಅಂದ್ರೆ ಬರುತ್ಯೆ?,
ನಾನೇನು ತಪ್ಪು ಹೇಳಿದೆ?
ನಂಗೂ ದೇಶದ ಮೇಲೆ ಭಕ್ತಿ ಇದೆ, ಪ್ರೀತಿ ಇದೆ.
ನಮ್ಮ ದೇಶದ ಹೆಸರು ಒಲಿಂಪಿಕ್ ಪದಕಗಳ ಪಟ್ಟಿಯಲ್ಲಿ ಚೀನಾ ಅಮೇರಿಕಗಳ ತರಹ ಅಗ್ರಸ್ತಾನದಲ್ಲಿ ಇರಬೇಕು ಅನ್ನೋ ಆಸೆ ಇದ್ದರೆ ಅದು ತಪ್ಪೇ"

ಮನಸು  ಯೋಚಿಸಿ ಹೇಳಿತು,"ಪುಣ್ಯಾತ್ಮ, ನಿಂದೆಲ್ಲ ವಾದವನ್ನು ಒಪ್ಪುತ್ತೀನಿ.
ನಂಗೂ ನಮ್ಮ ದೇಶದ ಹೆಸರು ಪದಕಗಳ ಪಟ್ಟಿಯಲ್ಲಿ ರಾರಾಜಿಸಬೇಕು ಅನ್ನೋ ಆಸೆ ಇದೆ.
ನಾನೂ ಈ ದೇಶದ ಅಪ್ಪಟ ಪ್ರೇಮಿ. ನಾನು ಕೂಡ ನಿನ್ನ ತರಹ ಯೋಚನೆ ಮಾಡುತ್ತೇನೆ.
ಇಷ್ಟೆಲ್ಲಾ  ರಾಜಕೀಯ ಪುಡಾರಿಗಳ ತರಹ ಭಾಷಣ ಬಿಗಿಯೋ ನೀನು,
ನೀನೇ ಯಾಕೆ ಆ ಕೆಲ್ಸ ಮಾಡಬಾರದು?
ನೀನೇ ಯಾಕೆ ಯಾವುದಾದರೊಂದು ಕ್ರೀಡೆಯಲ್ಲಿ ಪಳಗಿ ಒಲಿಂಪಿಕ್ ನಲ್ಲಿ ಸ್ಪರ್ಧಿಸಬಾರದು?
ಎಂಟು ಗಂಟೆಗೆ ಹೋಗಬೇಕಾದ ಆಫೀಸಿಗೆ, ಎಂಟೂವರೆಗೆ ಎದ್ದು ತಡಬಡಾಯಿಸಿಕೊಂಡು ಹೋಗುವ ಜಾಯಮಾನದವನು ನೀನು.
ಕೊನೆಯ ಪಕ್ಷ ಯಾವುದಾದರೊಂದು ಸ್ಪರ್ಧೆಯಲ್ಲಿ ಭಾಗವಹಿಸುತ್ತೇನೆಂದು ಎದೆ ತಟ್ಟಿ ಹೇಳಿನೋಡು.
ಕೊನೆಯ ಪಕ್ಷ ಒಲಿಂಪಿಕ್ ಬೇಡ, ನಿನ್ನದೇ ಏರಿಯಾದ ಆಟಗಾರರೊಂದಿಗೆ ಜಯಿಸಿ ನೋಡು.
ಆಗ ಗೊತ್ತಾಗುತ್ತದೆ, ನಿನಗೆ ಅದಕ್ಕೆ ಬೇಕಾದ ಶ್ರಮ!!
ಆ ಆಟಗಾರರೋ, ಕೊನೆಯ ಪಕ್ಷ ಬೆಳ್ಳಿ,ಕಂಚು ಪದಕಗಳನ್ನಾದರೂ ಪಡೆದಿದ್ದಾರೆ.
ನೀನೇನು ಮಾಡಿದ್ದೀಯಾ?
ಈಗ ಯೋಚಿಸು, ಬರೀ ತಪ್ಪು ಹುಡುಕುವುದರಲ್ಲಿ ಕಾಲ ಕಳೆಯುತ್ತೀಯೋ?
ಅಥವಾ ಇನ್ನೇನಾದರೂ ಸರಿಯಾದ ಕೆಲಸ ಮಾಡುತ್ತೀಯೋ.
ಯೋಚಿಸಿ ನೋಡು!!"

ಹೀಯಾಳಿಸಿ ಬರೆದಿದ್ದ ಹಾಳೆಯನ್ನು ಪರ್ರನೆ ಹರಿದು ಹಾಕಿ,
ಮತ್ತೊಂದು ಹೊಸ ಹಾಳೆಯ ಮೇಲೆ ಬರೆಯತೊಡಗಿದೆ....

"ಪದಕ ಗೆದ್ದ ಭಾರತಾಂಬೆಯ ಪುತ್ರರಿಗೆ ಅಭಿನಂದನೆಗಳು!!
ಅಮ್ಮನ ಕೀರ್ತಿ ಎತ್ತಿ ಹಿಡಿಯುವ ನಿಮ್ಮ ಈ ಕಾರ್ಯ ಹೀಗೆಯೇ ಸಾಗುತಿರಲಿ,
ಜೈ ಭಾರತ ಮಾತೆ".

ಮನಸ್ಸು ಮುಗುಳ್ನಗುತ್ತಿತ್ತು:)

                                                                                                              --ಪರಿಕಲ್ಪನೆ
                                                                                                             ಸಂತು.

Wednesday, August 8, 2012

ಅನುಮಾನ!


ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ.
ಟೊಳ್ಳು ಪೊಳ್ಳು ಸುಳ್ಳು ನುಡಿದು,
ನನ್ನ ಕಳ್ಳನನ್ನಾಗಿಸುವ,
ನಾಲಗೆಯ ಮೇಲೆ ನನಗನುಮಾನ.

ಕಳ್ಳ ದೃಷ್ಟಿಯನಾಕುವ ಕಣ್ಣುಗಳ ಮೇಲೇಕೋ ನನಗನುಮಾನ.
ಕಂಡ ಕಂಡದ್ದರ ಮೇಲೆ ಕಣ್ಣು ಹಾಕಿ,
ಮುಖಕ್ಕೆ ಮಸಿ ಬಳಿಸುವ ,
ಕಣ್ಣುಗಳ ಮೇಲೆ ನನಗನುಮಾನ.

ಮುಗ್ಧ ಮಗುವಿನಂತೆ ಮುಗುಳ್ನಗುವ ಮನಸ ಮೇಲೇಕೋ ನನಗನುಮಾನ.
ಮತ್ತೆ ಮತ್ತೆ ಮೇಲಕ್ಕೆದ್ದು ಮೊಂಡಾಟ ತೋರಿಸಿ,
ಬುದ್ಧಿಯ ಮೇಲೆ ಮಂಕು ಕವಿಸುವ,
ಮನಸ ಮೇಲೇಕೋ ನನಗನುಮಾನ.
                      --ಸಂತು

Thursday, August 2, 2012

ಚುಟುಕ-ರಕ್ಷಾಬಂಧನ




ದಿನ ಬೆಳಗಾದರೆ ಬೀದಿ ಸುತ್ತುತ್ತಿದ್ದ,
ರೋಡು ರೋಮಿಯೋಗಳಿಗೆಲ್ಲ,
ಇಂದು ಮನೆಯೇ ವಾಸಸ್ಥಾನ.
ಓಹ್, ಇಂದು ರಕ್ಷಾಬಂಧನ!!

Wednesday, August 1, 2012

ಮರೆವು

ಹೊಡೆಯುವುದ ಕಲಿತೆ, ಬಡಿಯುವುದ ಕಲಿತೆ.
ರಕ್ಕಸದೇಣಿಯನತ್ತುವ ತವಕದಲಿ,
ದಕ್ಕುವಾ ಚಿತ್ರಗಳನೇ ನಾ ಮರೆತೆ.

ಸಹಿಸುವುದ ಕಲಿತೆ, ದಹಿಸುವುದ ಕಲಿತೆ.
ಇರುಳ ಮಬ್ಬಿನಲಿ ನೆಮ್ಮದಿಯನುಡುಕುತ್ತಾ,
ಕಳೆದ ಕ್ಷಣಗಳನೇ ನಾ ಮರೆತೆ.

ಗಳಿಸುವುದ ಕಲಿತೆ, ಉಳಿಸುವುದ ಕಲಿತೆ.
ಮೊಮ್ಮಕ್ಕಳಿಗೋಸುಗ ಎತ್ತಿಕ್ಕುವ ದಿಟ್ಟಿನಲಿ,
ನನ್ನ ತುತ್ತ ತಿನ್ನುವದ ನಾ ಮರೆತೆ.

ಇತಿಹಾಸ ಕಲಿತೆ, ಮುಂಬರುವುದನರಿತೆ.
ನಿನ್ನೆ ನಾಳೆಗಳ ಕಲಹಗಳ ನಡುವೆ,
ಇಂದು ಬಾಳುವುದ ನಾ ಮರೆತೆ.

ಉತ್ತುವುದ ಕಲಿತೆ, ಬಿತ್ತುವುದ ಕಲಿತೆ.
ಬೆಳೆದ ಭತ್ತವನುಣ್ಣುವ ಭರದಲಿ,
ಭೂತಾಯವ್ವನ ಋಣವ ನಾ ಮರೆತೆ.

ಬಾಳ ಬಂಡಿಯಲಿ ಕುಳಿತೆ, ನೊಗವನಿಕ್ಕುವುದನೂ ಕಲಿತೆ.
ಸವಾರಿಯ ಮಾಡುವ ಅಹಮ್ಮಿನ ಹಂಗಿನಲಿ
ಕಡಾಣಿ ಇಲ್ಲದ್ದನ್ನೇ ನಾ ಮರೆತೆ.
 -ನಿಮ್ಮವನು,
ಸಂತು.

Saturday, July 21, 2012

ಅನುಕರಣೆ- ನಮ್ಮ ಕಾಡುವ ಪೆಡಂಭೂತ


ಆತನೊಬ್ಬ ವೇದಿಕೆಯ ಮೇಲೆ ನಿಂತು ಕನ್ನಡದ ಮೇರು ನಟರ ಜನಪ್ರಿಯ ಸಂಭಾಷಣೆಗಳನ್ನು ಹೇಳುತ್ತಿದ್ದಾನೆ.
ಅದೊಂದು ದೊಡ್ಡ ಸಭೆ. ಸಾವಿರಾರು ಜನರಿದ್ದಾರೆ. ಈತನ ಮಿಮಿಕ್ರಿಗೆ ಯಾವೊಬ್ಬನ ಪ್ರತಿಕ್ರಿಯೆಯೂ ಇಲ್ಲ.
ಮೇರು ನಟರ ಹೆಸರನ್ನು ಹೇಳುವಾಗ ಚಪ್ಪಾಳೆ ಹೊಡೆದ ಜನ ಅವರ ಡೈಲಾಗ್ ಹೇಳಿದಾಗ ಮಾತ್ರ ಸುಮ್ಮನಿದ್ದಾರೆ.

ಹೌದು. ಇದೇ.. ನಾನು ಸರಿ.
ನೆನಪಾಗುತ್ತಿದೆ. ಇದೇ ಡೈಲಾಗ್-ಗಳನ್ನು ಮೊನ್ನೆಯೆಲ್ಲೋ ಬೇರೊಂದು ಕಾರ್ಯಕ್ರಮದಲ್ಲಿ ನೋಡಿದ್ದೆ.
ಮಿಮಿಕ್ರಿ ದಯಾನಂದ್ ಅವರು ಇದೇ ಸಂದರ್ಭವನ್ನು ಹೇಳುತ್ತಾ ನಟರ ಅನುಕರಣೆ ಮಾಡುವಾಗ ಜನರ ಕರತಾಡನ ಮುಗಿಲು ಮುಟ್ಟುವಂತಿತ್ತು.
ಅವರು ಡೈಲಾಗ್ ಹೇಳುತ್ತಿದ್ದರೆ ಶಂಕರ್ ನಾಗ್, ರಾಜಣ್ಣ, ವಿಷ್ಣು ಎಲ್ಲರೂ ನಮ್ಮ ಮುಂದೆಯೇ ಇದ್ದಾರೇನೋ ಅನ್ನುವಂತೆ ಜನ ಹುಚ್ಚೆದ್ದು ಕುಣಿಯುತ್ತಿದ್ದರು.
ಅವರ ಹಾವ ಭಾವ ದಿವಂಗತ ನಟರನ್ನು ಸಭೆಗೆ ಎಳೆದು ತರುತ್ತ ಜನಗಳನ್ನು ಮೋಡಿ ಮಾಡಿ, ಜನಗಳು "ಒನ್ಸ್ ಮೊರ್". ಎಂದು ಕೂಗುತ್ತಿದ್ದರು.

ಇಲ್ಲೇಕೆ ಹೀಗಾಯ್ತು?
ಈ ಆಸಾಮಿ ಮಿಮಿಕ್ರಿ ದಯಾನಂದ್ ಗಿಟ್ಟಿಸಿದ ಚಪ್ಪಾಳೆಯನ್ನೇ ತನ್ನ ತಲೆಯಲ್ಲಿಟ್ಟುಕೊಂಡು ಅವರ ಕಾನ್ಸೆಪ್ಟ್ ಕದ್ದುಬಿಟ್ಟನಾ?
ನಾನು ಇಲ್ಲಿ ಹೇಳುತ್ತಿರುವುದು ಮಿಮಿಕ್ರಿ ದಯಾನಂದ್ ರ ಅನುಕರಣೆಯನ್ನಲ್ಲ.
ಅವರ ಜನಪ್ರಿಯತೆಯನ್ನು ತಲೆಯಲ್ಲಿ ತುಂಬಿಕೊಂಡು ನಾನೇ ದಯಾನಂದ್ ಎನ್ನುವಂತೆ ದಯಾನಂದ್ ರ ಅನುಕರಣೆ ಮಾಡಹೊರಟಿದ್ದು.

ಏಕೆಂದರೆ ಮಿಮಿಕ್ರಿ ಮಾಡುವವನು ಆ ನಟರ ದೃಷ್ಟಿ, ಹಾವ ಭಾವ, ಧ್ವನಿ ಪ್ರತಿಯೊಂದನ್ನು ನೂರಾರು ಬಾರಿ ಅಭ್ಯಾಸ ಮಾಡಬೇಕಾಗುತ್ತದೆ.
ಅಷ್ಟೇ ಅಲ್ಲ ಆ ನಟನ ಡೈಲಾಗ್ ಬಾಯಿಪಾಠ ಮಾಡಬೇಕು.
ಆ ಸಿನಿಮಾದಲ್ಲಿ ಆತ ಹೇಳಿದ ಪರಿಯಲ್ಲೇ ಈತನೂ ಹೇಳಬೇಕು.
ಅಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ಸಭಿಕರೆದುರು ಮಿಮಿಕ್ರಿಯನ್ನು ಮಾಡಿ ತೋರಿಸುವಾಗ ಸ್ವಲ್ಪ ಸಮಯದಲ್ಲೇ ಮೂರ್ನಾಲ್ಕು ನಟರ ಮಿಮಿಕ್ ಮಾಡಬೇಕಾಗಿರುತ್ತದೆ.
ಹಾಗಾಗಿ ತಕ್ಷಣದಲ್ಲಿ ಒಬ್ಬೊಬ್ಬ ನಟರ ಧ್ವನಿಯಿಂದ ಇನ್ನೊಬ್ಬ ನಟರ ಧ್ವನಿಗೆ ಜಿಗಿಯಬೇಕು.
ಈ ಮೇಲಿನ ಯಾವುದೇ ವಿಷಯದಲ್ಲಿ ಕೊಂಚ ಎಡವಟ್ಟಾದರೂ ಮಿಮಿಕ್ರಿ ದೊಡ್ಡ ಕಾಮೆಡಿಯಾಗಿಬಿಡುತ್ತದೆ.

ಹೌದು.ಪ್ರತಿ ಮನುಷ್ಯನ ಜೀವನದಲ್ಲಿ ಈ ವಿಷಯ ಪ್ರತೀ ಹಂತದಲ್ಲಿ ಕಾಡುತ್ತಿರುತ್ತದೆ.

ಸಚಿನ್ ಶತಕ ಬಾರಿಸಿದ ಮರುಕ್ಷಣ ತನ್ನ ಬ್ಯಾಟನ್ನು ಗಾಳಿಯಲ್ಲಿ ಆಡಿಸುತ್ತಾನೆ.
ಕಿಕ್ಕಿರಿದು ತುಂಬಿದ ಸ್ಟೇಡಿಯಮ್ ನಲ್ಲಿನ ಜನಗಳ ಕೂಗು ಇಡೀ ದೇಶಕ್ಕೆ ಕೇಳಿಸುತ್ತಿರುತ್ತದೆ.
ಮರುದಿನ ಈತ ಬ್ಯಾಟೊಂದನ್ನು ಹಿಡಿದು ಮೈದಾನಕ್ಕೆ ಕ್ರಿಕೆಟ್ ಕಲಿಯಲೆಂದು ಹೊರಡುತ್ತಾನೆ, ಸಚಿನ್ ರೀತಿಯೇ!!
ನಾಲ್ಕು ದಿನಗಳ ನಂತರ ಬ್ಯಾಟು ಮೂಲೆ ಸೇರಿರುತ್ತದೆ.
ಮತ್ತೊಮ್ಮೆ ಅದರ ನೆನಪಾಗುವುದು ಸಚಿನ್ ಇನ್ನೊಮ್ಮೆ ಶತಕ ಬಾರಿಸಿದಾಗಲೇ!

ಅಶ್ವಥ್ ಮೈಕ್ ಹಿಡಿದು ನಿಂತರೆ ಎದುರಿರುವವನು ತನ್ನ ಮೈಮರೆಯಬೇಕು.
ಒಮ್ಮೆ ಅದ ನೋಡಿ ಈತನೂ ರೇರ್ರೆರೆರೆರೇರಾ ಎಂದು ಹಾಡಲು ತೊಡಗುತ್ತಾನೆ.
ಯಾರೋ ಒಬ್ಬರು ಬರೆದ ಅರ್ಥಗರ್ಭಿತ ಕವನಕ್ಕೆ ಮರುಳಾಗಿ ಈತನೂ ಕವನ ಬರೆಯುತ್ತೇನೆಂದು ಹೊರಡುತ್ತಾನೆ.
ಕನ್ನಡದ ಪದಗಳ ಬಗ್ಗೆ ಒಲವು ಮತ್ತು ಅರಿವೇ ಇಲ್ಲದ ವ್ಯಕ್ತಿಯೊಬ್ಬ ಎದ್ದು ನಿಂತು ನಾ ಕನ್ನಡದಲ್ಲಿ ಕವಿತೆಯ ಬರೆಯುತ್ತೇನೆ ಎಂದು ಹೇಳಿದರೆ,
ಎದುರಿಗಿರುವವನ ಸ್ಥಿತಿ ಹೇಗಿರಬೇಡ ನೀವೇ ಯೋಚಿಸಿ.
ಈ ರೀತಿಯ ಸಾವಿರಾರು ಉದಾಹರಣೆಗಳನ್ನು ನಾವು ಕೊಡಬಹುದು.

ಪ್ರಸಿದ್ಧ ವ್ಯಕ್ತಿಗಳ ಅನುಕರಣೆ ವಿಷಯ ಹಾಗಿರಲಿ.
ಪಕ್ಕದ ಮನೆಯವರ ಮಗ ಡಾಕ್ಟರ್ ಅದನೆಂದು ತಿಳಿದು, ತಮ್ಮ ಮಗನಿಗೆ ಇಷ್ಟವಿಲ್ಲದ ಸೈನ್ಸ್ ಕೊಡಿಸಿಬಿಟ್ಟಿರುತ್ತಾರೆ.
ಮೊದಲ ವರ್ಷದ PUC ನಲ್ಲೇ ಮಗ 5-6 ಸಬ್ಜೆಕ್ಟುಗಳಲ್ಲಿ ಫೇಲಾಗಿರುತ್ತಾನೆ.
ಇದು ಬೇಕಿತ್ತಾ?

ಆಮೀರ್ ಖಾನ್ ನ ಎಯ್ಟ್ ಪ್ಯಾಕ್ ದೇಹ ನೋಡಿ ಈತನೂ ಜಿಮ್ ಕಡೆಗೆ ಧಾವಿಸುತ್ತಾನೆ.
ರಘುಧೀಕ್ಷಿತ್ ಗಿಟಾರ್ ಹಿಡಿದು ಹಾಡುವ ಭಂಗಿಗೆ ಬೆರಗಾಗಿ, ಇವನೂ ಗಿಟಾರ್ ಕಲಿಯಲೆಂದು ಅಪ್ಪನಿಗೆ ಜೋತುಬಿದ್ದು ದುಬಾರಿಯ ಗಿಟಾರ್ಒಂದನ್ನು ಕೊಡಿಸಿಕೊಂಡು, ಕಲಿಯಲೆಂದು ಸಂಗೀತ ಶಾಲೆಗೆ ಹೊರಡುತ್ತಾನೆ.
ನಾಲ್ಕೂ ದಿನವೂ ಆಗಿಲ್ಲ ಆಗಲೇ ಎಲ್ಲರೆದುರು ಹಾಡೋಕೆ ಶುರು ಮಾಡುತ್ತಾನೆ.
ಯಾತನೆಯಾದರೂ ನೆರೆಯವರು ಅದ್ಭುತ ಎಂದು ಸುಳ್ಳು ಹೊಗಳಿಕೆ ನೀಡುತ್ತಾರೆ.

ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೊಂದಿದೆ.
ಯೂರೋಪಿನ ದೇಶವೊಂದರ ಪ್ರಾಹ ನಗರದಲ್ಲಿ ಐತಿಹಾಸಿಕ ಸೇತುವೆಯೊಂದಿದೆ.
ನಾನು ಹೀಗೆಯೇ ಅಲ್ಲಿ ವಾಕಿಂಗ್ ಹೋಗುವಾಗ ದಾರಿಯಲ್ಲಿ ಕೆಲವು ಭಿಕ್ಷುಕರಿರುತ್ತಾರೆ.
ಕೈಯಲ್ಲೊಂದು ವೈಯೊಲಿನ್ ಹಿಡಿದು ಇಬ್ಬಿಬ್ಬರು ಒಟ್ಟೊಟ್ಟಿಗೆ ಬಾರಿಸತೊಡಗುತ್ತಾರೆ.
ಅವರೆಷ್ಟು ಚೆನ್ನಾಗಿ ಬಾರಿಸುತ್ತಿರುತ್ತಾರೆಂದರೆ ಇವರೇನಾದರೂ ನಮ್ಮ ದೇಶದಲ್ಲಿದ್ದರೆ ಇಷ್ಟು ಹೊತ್ತಿಗೆ ದೊಡ್ಡ ಸಂಗೀತ ನಿರ್ದೇಶಕರಾಗುತ್ತಿದ್ದರೇನೋ ಎನಿಸುತ್ತದೆ. ಸ್ವಲ್ಪ ಹೊತ್ತಿಗಾಗಲೇ ಅವರ ಮುಂದೆ ಇಟ್ಟ ಟೋಪಿಗಳು ಜನಗಳು ಹಾಕುವ ಚಿಲ್ಲರೆಗಳಿಂದ ತುಂಬಿ ಹೋಗುತ್ತವೆ.

ನಾನು ಇಲ್ಲಿ ಹೇಳುತ್ತಿರುವ ವಿಷಯವೊಂದನ್ನು ತಾವು ಸೂಕ್ಷ್ಮವಾಗಿ ಗಮನಿಸಬೇಕು.
ಇನ್ನೊಬ್ಬರ ಕೌಶಲ್ಯವನ್ನು ನೋಡಿ ಪ್ರೇರಿತರಾಗುವುದು ಬೇರೆ.
ಆದರೆ ಆ ಕೌಶಲ್ಯವನ್ನು ಹೊಂದಿರುವವರ ಜನಪ್ರಿಯತೆಯನ್ನು ನೋಡಿ ಅತಿ ಸ್ವಲ್ಪ ಸಮಯದಲ್ಲಿ ಅವರಂತೆ ಆಗಬೇಕೆಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಅವರನ್ನೇ ಅನುಕರಿಸತೊಡಗುವುದು.

ಇದು ದೊಡ್ಡ ಅಪಾಯ.
ಯಾಕೆಂದರೆ ಈ ರೀತಿ ಬರೇ ಅನುಕರಣೆ ಮಾಡುತ್ತಾ ಹೊರಟ ಪ್ರತಿಶತ 99 ಜನ ಬೇಗನೆ ಈ ಕಾರ್ಯಕ್ಕೆ ತಿಲಾಂಜಲಿ ಹಾಡುತ್ತಾರೆ.
ಕಾರಣ ಯಾವುದೇ ಕಲಿಕೆಯ ಆರಂಭಕ್ಕೂ ಮತ್ತು ಆ ಕೌಶಲ್ಯವನ್ನು ಪಡೆದು ಜನಪ್ರಿಯತೆ ಗಳಿಸುವ ಹಂತಕ್ಕೂ ನಡುವೆ ಬಹಳ ದೊಡ್ಡ ಅಂತರವಿರುತ್ತದೆ.
ಅದರ ಅರಿವು ನಮಗೆ ಆರಂಭದಲ್ಲಾಗಿರುವುದಿಲ್ಲ.
ಬ್ಯಾಟ್ ಹಿಡಿದು ಬಿಸಿಲಿನಲ್ಲಿ ಮೂರ್ನಾಲ್ಕು ದಿನ ಬೆವರಿಲಿಸಿದಾಗಲೇ ಇಳಿದುಹೋಗಿರುತ್ತದೆ.

ಇತ್ತೀಚೆಗೆ ನಾ ಓದಿದ ಪತ್ರಿಕೆಯೊಂದರಲ್ಲಿ ಯಶಸ್ಸಿನ ಸೂತ್ರಗಳ ಬಗ್ಗೆ ಕೊಡಲಾಗಿತ್ತು.
ಯಾವುದೇ ವ್ಯಕ್ತಿ ಯಾವುದೇ ವಿಷಯದಲ್ಲಿ ಅತ್ಯುನ್ನತ ಪರಿಣಿತನಾಗಬೇಕೆಂದರೆ ಕನಿಷ್ಟ ಪಕ್ಷ ಹತ್ತು ಸಾವಿರ ಘಂಟೆಗಳ ಶ್ರಮವನ್ನು ಮನಸಾರೆ ಹಾಕಬೇಕು ಎಂಬುದು. ದಿನಕ್ಕೊಮ್ಮೆ 4 ಘಂಟೆಗಳ ಲೆಕ್ಕಾಚಾರದಲ್ಲಿ ಅದೆಷ್ಟು ವರ್ಷ ಕಾಯಬೇಕು ಎನ್ನುವ ಲೆಕ್ಕಾಚಾರ ಪಕ್ಕಕ್ಕಿರಲಿ. ಕೊನೇಪಕ್ಷ ಅದಕ್ಕೆ ಬೇಕಾಗುವ ಶ್ರದ್ಧೆಯ ಅವಶ್ಯಕತೆಯ ಅರಿವು ನಮಗಾಗಬೇಕು.

ಪ್ರತಿ ವ್ಯಕ್ತಿಗೂ ತನ್ನದೇ ಆದ ವಿಶಿಷ್ಟ ಪ್ರತಿಭೆಯನ್ನು ದೇವರು ನಮಗೆ ಕೊಟ್ಟಿರುತ್ತಾನೆ.
ಅದರ ಅರಿವು ನಮಗಾದಾಗ ಅದಕ್ಕೆ ಜೋಪಾನವಾಗಿ ನೀರುಣಿಸಿ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಬೆಳೆಸುವ ಕಾರ್ಯ ನಮ್ಮದಾಗಬೇಕು.
ಆಗ ಯಶಸ್ಸು, ಜನಗಳ ಕರತಾಡನ, ತನ್ನಂತಾನೆ ಹಿಂದೆ ಓಡಿ ಬರುತ್ತದೆ.

ಪ್ರತಿಯೊಂದನ್ನು ನಮ್ಮ ಸ್ವಂತದ್ದಾಗಿಯೇ ಪಡೆಯೋಣ.
ಅಲ್ಲಿಯವರೆಗೂ ಸಚಿನ್ ನ ಬ್ಯಾಟು, ರಘುಧೀಕ್ಷಿತ್ ರ ಗಿಟಾರ್, ಅಶ್ವಥ್ ರ ತೆರೆರೇರಾ, ಆಮೀರ್ ನ ದಷ್ಟಪುಷ್ಟ ದೇಹ ಅವರ ಬಳಿಯೇ ಇರಲಿ.
ನೀವೇನಂತೀರಿ??


ನಿಮ್ಮ ಗೆಳೆಯ,
ಸಂತು

Friday, July 13, 2012

ಸಿಹಿ!!

ಆ ಮೊದಲ ರಾತ್ರಿಯಲ್ಲಿ,
ಬಹಳ ಸಿಹಿಯಾಗಿತ್ತು.
ಗೊತ್ತಿಲ್ಲ.
ಆ ನಿನ್ನ ತುಟಿಯೋ,
ಅಥವಾ
ನೀ ತಂದ ಹಾಲೋ!!


ಅಂದು ನಾ ಬರೆದ ಪ್ರೇಮಪತ್ರವನ್ನೇಕೋ,
ಇಂದು ಗೆದ್ದಲು ತಿನ್ನುತ್ತಿದೆ.
ಪಾಪ ಅದಕ್ಕೆ ಗೊತ್ತಿಲ್ಲ,
ಆ ಅಕ್ಷರಗಳಿಂದ,
ದೊಡ್ಡ ಪ್ರೇಮವೃಕ್ಷವೊಂದಾಗಲೇ ಬೆಳೆದು ನಿಂತಿದೆಯೆಂದು!!


ಯುಗಾದಿಯಂದು ನಾ ಬೇವು ಬೆಲ್ಲ
ತಿನ್ನುವುದಿಲ್ಲ.
ಮನೆಯಲ್ಲಿಯೇ ನಡೆಯುತ್ತದೆ,
ನಿತ್ಯ ಯುಗಾದಿ.
ಏನಾದರೊಂದು ಅವಳಿಗೆ ತಂದರೆ,
ಅಥವಾ ಮರೆತು ಬಂದರೆ!!


--ಸಂತು 

Saturday, June 30, 2012

ನನ್ನ ಕ್ಯಾಮೆರಾ ಕಣ್ಣಲ್ಲಿ-1

Place :Prague, czech Republic
 Date:29 June 2012

ಮರದ ಹಿಂದೆ ಬಚ್ಚಿ ಕುಳಿತು ಸೂರ್ಯನೊಂದಿಗೆ ಗಡಿಯಾರದ ಕಣ್ಣಾಮುಚ್ಚಾಲೆಯಾಟ..

Saturday, June 2, 2012

ಹೀಗೂ ಉಂಟು!!


ಕಣ್ಣಾಮುಚ್ಚಾಲೆಯಾಡುತ್ತಾನೆ
ಮೋಡದೊಳಗೆ ಸೇರಿ ರವಿಯೂ,
ನಾ ಕ್ಯಾಮೆರಾವನೆತ್ತಿಕೊಂಡಾಗ..

ಆಕೆ ಮುನಿಸಿಕೊಂಡಾಗ
ಪಾತ್ರೆಗಳೂ ಮಾತನಾಡುತ್ತವೆ.

ಅಕ್ಕಿ ಮುಗಿದಾಗಲೇ ಯಾಕೋ
ಹಸಿವು ಹೆಚ್ಚಾಗುತ್ತದೆ.

ಹಾವೂ ವಿಷವುಗುಳುತ್ತದೆ
ಬಾಯಿಗೇಕೋ ರುಚಿಯೆನಿಸದೇ.

ಪಕ್ಕದ ಛತ್ರದ ಮಂಗಳವಾದ್ಯಗಳೂ
ನಿದ್ರೆ ಹಾಳು ಮಾಡುತ್ತವೆ
ಬೆಳಗಿನ ನಿದ್ರೆ ಅಮಂಗಳವೆಂದು ಹೇಳುತ್ತಾ.

ಸಮುದ್ರವೇಕೋ ನೀರು ಕುಡಿಯುತ್ತಲೇ ಇದೆ,
ತನ್ನೊಡಲೊಳಗಿರುವ ನೀರು
ದಾಹವ ತೀರಿಸುತ್ತಿಲ್ಲವೆಂಬಂತೆ.

ಹಸಿದ ಹೊಟ್ಟೆಯವನ ಬಾಯಲ್ಲಿ
ಎಂಜಲೆಲೆಯ ಮೇಲಿನ ಮೈಸೂರು ಪಾಕೂ ನೀರೂರಿಸುತ್ತದೆ.

ತಲೆನೋವು ಮಾಯವಾಗುತ್ತದೆ
ಬರೀ ಅವಳ ಸ್ಪರ್ಶದಿಂದ, ಅಮೃತಾಂಜನವಿಲ್ಲದೆಯೇ.

ಅವ ಆ ನಿಷೇಧವಿರುವ ಜಾಗದಲ್ಲೇ ಉಗುಳುತ್ತಾನೆ,
ಆ ಫಲಕವ ಬರೆದವನ ನೆನೆಸಿಕೊಳ್ಳುತ್ತ.

ಮುಟ್ಟಿದೊಡನೆ ನೀರಲ್ಲಿದ್ದ ಚಂದಿರ
ಕಣ್ಮರೆಯಾಗಿ ಸೇರುತ್ತಾನೆ ನೀಲಾಕಾಶ.

ಕುಡಿದು ಓಡಿಸುವವನ ಗಾಡಿಯೂ
ತೂರಾಡುತ್ತಲೇ ಬರುತ್ತದೆ!!
 -ಸಂತು                
                                                

                                                                          
ಸ್ನೇಹಿತರೆ,
ನಮ್ಮ ಸುತ್ತಮುತ್ತಲ ಕ್ರಿಯೆಗಳನ್ನು ಇದ್ದಂತೆಯೇ ನೋಡದೇ ಬೇರೆಯದೇ ದೃಷ್ಟಿಕೋನದಿಂದ ನೋಡುವ ಚಿಕ್ಕಪ್ರಯತ್ನ.
ಪ್ರತಿ ಸಾಲುಗಳನ್ನು ಎರಡೆರಡು ಬಾರಿ ಓದಿದರೆ ಸೂಕ್ಷ್ಮ ಅರಿವಿಗೆ ಬರುತ್ತದೆ.ಧನ್ಯವಾದಗಳು.





Thursday, May 17, 2012

ನೀ ಅತ್ತಾಗ.








ಕಣ್ಣಲ್ಲಿ ನೀರು, ಕಿವಿತಮಟೆಯೊಡೆಯುವಷ್ಟು ಅಳು,
ಅದರೂ ಯಾರೊಬ್ಬರೂ ಅಳಲಿಲ್ಲ.
ಮುಖಗಳಲ್ಲಿ ಮಂದಹಾಸ, ಎದೆ ಬಿರಿಯುವಷ್ಟು ಸಂತೋಷ.
ಅವರಾರನ್ನೂ ಅಲ್ಲಿ ತಡೆವರಾರಿಲ್ಲ.

ಮೈಯ ಕಣಕಣದಲ್ಲಿ ಪುಷ್ಪಗಂಧವು ಸೂಸಿ,
ಚುಂಬಿಸಿದ ತುಟಿಗಳಿಗೂ ಲೇಪನವಾಯ್ತು.
ಕಂಪಿಸಿಹ ಕೈಗಳಿಗು, ಕಂದ ನಗುವುದ ನೋಡಿ,
ಜಗವನೆತ್ತುವ ಶಕುತಿ ಬಂದಾಯ್ತು.

ಮುನಿಸಿಕೊಂಡವರೆಲ್ಲ ಅಲ್ಲಲ್ಲಿ ಮುಗುಳ್ನಕ್ಕು,
ನಡುವಿನಂತರವೆಲ್ಲ ಮಾಯವಾಯ್ತು.
ಕಂದ ನೋಡಿದ ಒಡನೆ, ಕಳೆದ ದಿನಗಳ ಮರೆತು,
ಮನದ ಬೆಂಕಿಗೆ ಪೂರ ನೀರು ಬಿತ್ತು.

ಕೋಟಿ ಕಂಡವರೆಷ್ಟೋ, ಜಗವ ಗೆದ್ದವರೆಷ್ಟೋ,
ಇಂತಿಪ್ಪ ಸಂತಸವ ಕಂಡಿರುವರೇನು?
ಕಂದ ಬಿಡಿಸಿದ ಗೋಡೆಚಿತ್ರವಿಲ್ಲದಿರೆ,
ಮಹಲುಗಳ ಕಟ್ಟಿಯೂ ಔಚಿತ್ಯವೇನು?

ಸಾಕಬೇಕೆಂದವರಾರು, ಬೆಳೆಯಬೇಕೊಟ್ಟಿಗೆ,
ಕ್ಷಣಕ್ಷಣವೂ ಕರಗುತಿರೆ ಕರ್ಪೂರದಂತೆ.
ಸಿರಿತನವೋ ಬಡತನವೋ ,ಹೊನ್ನು ಬಾಧಿಸಲೇಕೆ,
ಕಂದನೇ ಮನೆಯ ಭಾಗ್ಯವಂತೆ!!

ಮುಗಿಲೊಳಗೆ ಮನೆಯೊಳಗೆ ಮಡಿಲೊಳಗೆ ಮಗುವಾಗಿ,
ಬೆಳಗುತಿರು ಈ ಮನವ ಚಂದ್ರನಂತೆ.
ಬಂಧುಬಳಗಕ್ಕೆಲ್ಲ ನೀನೇ ಸೇತುವೆಯಾಗು,
ಸಂತಸವ ಹರಿಸುತಿರು ಕರಗದಂತೆ.
                                                    ರಚನೆ,
-ಸಂತು 


Saturday, May 12, 2012

Why to Learn from Others’ Life, when we have our own??!!



After introspecting for a long time, I came to a conclusion that I should write this here.
After all, only some people will make their mind to speak out the mistakes committed in their life. Very few people learn from their past experiences.

Almost this has happened 1 year ago.
I have come from a small village where finishing an Engineering degree is a big achievement!!
So in this condition getting an opportunity to fly abroad is a "big Dream Come True" kind of situation for me.

This message has passed all over from my relatives to all my friends.
Everyone started calling me to say best wishes.
My wife started preparing Chutney powder, Sambar powder, Puliyogare masala, Pickles which would help me preparing the food easily in the other country. I also started getting the bag ready with shirts Ironed, getting the camera, browsing the web to get more information about that country.

However the guys who had travelled earlier to this country had given every information right from shampoo, soap to what is easily available and what is not available.

Meanwhile all the documents and other formalities were happening in parallel. I was excited and waiting to see the new office, new country, new people and all new things which may come in my way!! :)

I got a call from my office to attend a VISA interview.

UFFFF!! One more air trip within India before going to other country. OK, let me experience that as well..

------------*------------*------------*------------*------------*
The day came. Kingfisher Airlines threw me from Bangalore to Bombay.

There near the embassy we did not have a chair also.

“Come on buddy, this is my country. Your embassy building is in my country.
You need to respect me for at least that matter”.

 After waiting for 3 hours we were allowed to enter inside.
The room was silent, there were number of people.
After waiting for another 30 minutes I got my turn to attend the interview.
That was the first time in my life I got to attend a VISA interview.
It just looks like a Prison Cell, two foreign guys are sitting in other side of the Grills and I am this side.
Even a small insect can’t enter inside. Communication happens with the help of mike and a Laud speaker installed in that room.
I felt just like, I am standing in a court and some strict lawyers are there to ask me some serious questions.

Question came on my way: Saaantoosh (my name was pronounced in that way) why do you need VISA.
I wanted to say- What are you sitting here for??!!
 But I could not!!

For No Reason, My legs started trembling.
I just recalled what to say............without my control words came out of my mind.

"I Need VISA for Business Interviews!!!!"

OH................I couldn’t believe myself, what I am saying.
The only word, which that guy did not want to hear, has come out from me involuntarily.
At least for 50 times I had by-hearted what I wanted to say. But as usual, it was a flop show.

His eyes gone bigger!!, Asked me again "Business INTERVIEWS"??!!

I tried correcting myself "No sir, I wanted to say...I need VISA for Business Meetings..."

Again that question series continued,” What kind of Business Meetings"

He is very much sure that I am not confident. Even I too!!

That Interview was supposed to be finished in 5 minutes, but prolonged for another 20 minutes. He asked same questions 4-5 times.
Finally he sighed, "OK, You can go now, we will get back to you"

I knew 100%, what will be the fate of my VISA.

------------*------------*------------*------------*------------*
I could not say anything to anyone.

After 2 days I got a mail that my VISA application has been rejected.
Though it was not a surprise for me, I started saying everyone “Don’t know Y".
People who are unaware of this result started annoying me by asking "When are you flying"!!
For 2-3 days I just thought what and all happened.

I realized my mistake.
Very often we will forget our responsibilities when the opportunity comes our way.
We just go with the celebration and forget the actions that we need to do.
I simply wasted all my precious time by preparing for unwanted things.
But I did not think about the crucial things that can go wrong at an important stage.

If we look at great personalities we will see them only in action, but in case of celebrations they will sit quite, and leave the rest to the world.
But we will do the exact opposite of it.

This taught me a good lesson in my life.
------------*------------*------------*------------*------------*
My close friend and my manger told me just one sentence.
"Be sure that you will not make the same mistakes this time".

No, Never.

The same situation did not come to me later. I was well prepared.
I got my VISA.

I was just getting ready to take my flight.
My daughter came and hugged me, giving me a sweet kiss.

“Yes, it is time to look at India from outside world!!"

I told myself "Thanks a lot my dear life, for teaching me such a good lesson".

Yours,  
Santhu