Saturday, December 17, 2011

ಗೋಜಲು



ಕಣ್ಣು ಮುಚ್ಚಿ ಗಾಢಾಂಧಕಾರದಲಿ,
ನಡೆಯುತಲಿರಲು ದೂರ ದೂರ.
ಮನದಲೇಕೋ ನಡುಕ,
ಸುತ್ತಮುತ್ತಲು ಗೋಜಲು, ಹೃದಯ ಭಾರ ಭಾರ.

ಅರಿವೆಗಳ ಅರಿವಿಲ್ಲ, ನಕಾಶೆಗಳ ಸುಳಿವಿಲ್ಲ,
ಗುರಿಯಂತೂ ಮೊದಲೇ ಇಲ್ಲ.
ಸವೆಯುತಲಿರುವ ಪಾದಗಳಿಗೆ ರಕ್ಷೆಗಳ ಹಂಗಿಲ್ಲ,
ಎದೆಯಲೇನೋ ವೇದನೆ,
ಹೇಳಲು ಪದಗಳಿಲ್ಲ.

ಕಷ್ಟಸುಖಗಳೇನೋ, ಬಂಧಗಳ ಬಂಧನವೇನೋ,
ಮಡಚಿಟ್ಟ ಹೊತ್ತಿಗೆಯಲ್ಲಿ ಬರೆದಿರುವುದೇನೋ.
ಎಲ್ಲಾಗುವುದು ಉದಯ, ಅಸ್ತವಾಗುವ ಸಮಯ,
ಕೇಳುವವರಾರಿಲ್ಲ, ಗಳಿಸಿಡುವುದೇನೋ.

ಕಂಡ ಕಣ್ಣುಗಳಿಲ್ಲ, ಹಿಂತಿರುಗಿ ಬಂದವರಿಲ್ಲ,
ಸ್ಪಷ್ಟ ಚಿತ್ರಗಳಂತೂ ಕಲ್ಪನೆಯಂತೆ.
ಹೊತ್ತು ಹೋದವರಿಲ್ಲ, ಗಳಿಸಿ ಬಂದವರಿಲ್ಲ,
ಕನಸು ನನಸುಗಳ ಬರೀ ಜಾತ್ರೆಯಂತೆ.

ಊಹಾ ಚಿತ್ರಗಳ ಕಂತೆಗಳೆದುರಲ್ಲಿ ,
ಹೆಗಲ ಮೇಲೇನೋ ಹೆಣಭಾರ.
ಚೈತನ್ಯವಿಲ್ಲ , ಅರೆಗಣ್ಣುಗಳಲ್ಲಿ,
ನೆತ್ತರುಕ್ಕುತಲಿದೆ ಧಾರಾಕಾರ.

ಅಳುನಗು ಕಷ್ಟಸುಖ, ನೋಡಿಯೂ ಇಲ್ಲ ನನ್ನ ಮುಖ,
ಮರೆತು ನಿಂತರೆ ಏಕೋ ದ್ವಂದ್ವವೆನಿಸಲಿಲ್ಲ.
ಶೂನ್ಯಲೋಕದ ಕಡೆಗೆ ತಾತ್ಸಾರ ದೃಷ್ಟಿಯನಿಟ್ಟೆ,
ಅಲ್ಲಿ ಯಾಕೋ......ಹುಟ್ಟಬೇಕೆನಿಸಲಿಲ್ಲ!!


-ಸಂತು